“ಗಾಂಧಿ ಕೊಲೆಗೆ ಆರ್ಎಸ್ಎಸ್ ಕಾರಣ” ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಹೇಳಿಕೆ ನೀಡಿದ್ದರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದ ಆರ್ಎಸ್ಎಸ್ ಮುಖಂಡನಿಗೆ ಕೋರ್ಟ್ ದಂಡ ವಿಧಿಸಿದೆ.
ರಾಹುಲ್ ಗಾಂಧಿ ವಿರುದ್ಧ ಹೂಡಿರುವ ಮಾನಹಾನಿ ಪ್ರಕರಣದ ವಿಚಾರಣೆಯನ್ನು ಮುಂದೂಡುವಂತೆ ಆರ್ಎಸ್ಸ್ ಮುಖಂಡ ರಾಜೇಶ್ ಕುಂಟೆ ಮನವಿ ಸಲ್ಲಿಸಿದ್ದನ್ನು ಕೋರ್ಟ್ ಆಕ್ಷೇಪಿಸಿದೆ.
ಮಹಾರಾಷ್ಟ್ರದ ಭಿವಂಡಿ ನ್ಯಾಯಾಲಯವು ₹1,000 ದಂಡ ವಿಧಿಸಿದ್ದು, ಈ ಮೊತ್ತವನ್ನು ರಾಹುಲ್ಗಾಂಧಿಯವರಿಗೆ ಪಾವತಿಸಬೇಕೆಂದು ಸೂಚಿಸಿರುವುದಾಗಿ ಕಾನೂನು ವಿಚಾರಗಳ ವೆಬ್ಸೈಟ್ ‘ಬಾರ್ ಅಂಡ್ ಬೆಂಚ್’ ವರದಿ ಮಾಡಿದೆ.
“ಮ್ಯಾಜಿಸ್ಟ್ರೇಟ್ ಆದೇಶವನ್ನು ಪ್ರಶ್ನಿಸಿ ಬಾಂಬೆ ಹೈಕೋರ್ಟ್ನಲ್ಲಿ ಮನವಿ ಸಲ್ಲಿಸಲಾಗಿರುವುದರಿಂದ ಪ್ರಕರಣ ಮುಂದೂಡುವಂತೆ ಕುಂಟೆ ಕೋರಿದ್ದಕ್ಕೆ ಮ್ಯಾಜಿಸ್ಟ್ರೇಟ್ ಅವರು ಕುಂಟೆಗೆ ದಂಡ ಹಾಕಿದ್ದಾರೆ” ಎಂದು ವರದಿ ತಿಳಿಸಿದೆ.
ಮಾನಹಾನಿ ಪ್ರಕರಣಗಳಲ್ಲಿ ದೂರುದಾರರು ಮೊದಲಿಗೆ ಸಾಕ್ಷಿಯಾಗಿ ವಿವರಣೆ ನೀಡುತ್ತಾರೆ. ಆದರೆ, ಸಾಕ್ಷಿಯಾಗಿ ಪರಿಶೀಲಿಸಲು ನೋಟರಿ ವಕೀಲರಿಗೆ ಸಮನ್ಸ್ ಜಾರಿ ಮಾಡುವಂತೆ ಕೋರಿದ್ದ ಕುಂಟೆ ಮನವಿಯನ್ನು ಮ್ಯಾಜಿಸ್ಟ್ರೇಟ್ ತಿರಸ್ಕರಿಸಿದ್ದರು. ಇದನ್ನು ಬಾಂಬೆ ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದು, ವಿಚಾರಣೆ ಮುಂದೂಡುವಂತೆ ಮನವಿ ಮಾಡಲಾಗಿತ್ತು.
ಮ್ಯಾಜಿಸ್ಟ್ರೇಟ್ ನಿರ್ದೇಶನದಂತೆ ಸಿಆರ್ಪಿಸಿ ಸೆಕ್ಷನ್ 202ರ ಅಡಿ ಮಾನಹಾನಿ ದೂರಿನ ತನಿಖೆ ನಡೆಸಿದ ಪೊಲೀಸ್ ಅಧಿಕಾರಿಗೂ ಸಮನ್ಸ್ ಜಾರಿ ಮಾಡಬೇಕು ಎಂದು ಕುಂಟೆ ಮನವಿ ಮಾಡಿರುವುದನ್ನು ರಾಹುಲ್ ಗಾಂಧಿಯವರ ವಕೀಲ ಎನ್.ವಿ.ಐಯ್ಯರ್ ವಿರೋಧಿಸಿದ್ದಾರೆ.
ಮತ್ತೊಂದು ಸಾಕ್ಷಿಯನ್ನು ಆಲಿಸುವುದಕ್ಕೂ ಮುನ್ನ ತಮ್ಮ ವಾದವನ್ನು ಸಾಬೀತುಪಡಿಸಬೇಕು ಎಂದು ಹೇಳಿರುವ ಮ್ಯಾಜಿಸ್ಟ್ರೇಟ್ ಡಾ. ಜೆ ವಿ ಪಾಲಿವಾಲ್ ಅವರು ಕುಂಟೆ ಸಮನ್ಸ್ ಜಾರಿ ಮಾಡಲು ಕೋರಿರುವ ಎರಡನೇ ಮನವಿಗೆ ನಿರಾಕರಿಸಿದ್ದಾರೆ. ಮುಂದಿನ ವಿಚಾರಣೆಯಲ್ಲಿ ತಪ್ಪದೇ ಸಾಕ್ಷಿ ನುಡಿಯುವಂತೆ ಕುಂಟೆಗೆ ಕೋರ್ಟ್ ಸೂಚನೆ ನೀಡಿದೆ ಎಂದು ‘ಬಾರ್ ಅಂಡ್ ಬೆಂಚ್’ ವರದಿ ತಿಳಿಸಿದೆ.
ಏನಿದು ಪ್ರಕರಣ?
ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಹತ್ಯೆಗೆ ಆರ್ಎಸ್ಎಸ್ ಕಾರಣ ಎಂದು ಭಾಷಣವೊಂದರಲ್ಲಿ ರಾಹುಲ್ ಗಾಂಧಿ ಹೇಳಿದ್ದರು. ಇದನ್ನು ವಿರೋಧಿಸಿ ಆರ್ಎಸ್ಎಸ್ ನಾಯಕ ಕುಂಟೆ ಅವರು ರಾಹುಲ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. 2014ರಿಂದಲೂ ಮಹಾರಾಷ್ಟ್ರದ ಭಿವಂಡಿ ನ್ಯಾಯಾಲಯದ ಮುಂದೆ ಪ್ರಕರಣವಿದೆ.
ಇದನ್ನೂ ಓದಿರಿ: ‘gandhi’s assassin’: ಇತಿಹಾಸದ ತಾಯಿ ಸತ್ಯದ ಶೋಧನೆಯಲ್ಲಿ