Homeಮುಖಪುಟಸಿನಿಮಾ ವಿಮರ್ಶೆ: ಅತಿ ಭಾವುಕತೆ ಮತ್ತು ಲಾಜಿಕ್ ಕೊರತೆಯ ಅದ್ದೂರಿತನದಲ್ಲಿ ‘RRR...’

ಸಿನಿಮಾ ವಿಮರ್ಶೆ: ಅತಿ ಭಾವುಕತೆ ಮತ್ತು ಲಾಜಿಕ್ ಕೊರತೆಯ ಅದ್ದೂರಿತನದಲ್ಲಿ ‘RRR…’

RRR ಮನರಂಜನೆಯ ಗಡಿಯನ್ನೂ ಬಿಟ್ಟು ಪ್ರೇಕ್ಷಕರಿಗೆ ಬೇರೆಯದೇ ಆದ ರೀತಿಯಲ್ಲಿ ಅಪೀಲ್ ಆಗುವ ಅಪಾಯವನ್ನು ಹೊಂದಿದೆ...

- Advertisement -
- Advertisement -

ವೈವಿಧ್ಯಮಯ ಪ್ರೇಕ್ಷಕರನ್ನು ವ್ಯಾಪಕವಾಗಿ ತಲುಪುವ ಸಲುವಾಗಿ ಮತ್ತು ಆ ಮೂಲಕ ಸಾಮೂಹಿಕ ಭಾಗವಹಿಸುವಿಕೆಯಂದ ಯಶಸ್ಸು ಕಾಣಲು ‘ಕಮರ್ಶಿಯಲ್’, ‘ಜನಪ್ರಿಯ’ ಎಂಬಿತ್ಯಾದಿ ಹೆಸರುಗಳಲ್ಲಿ ಕರೆಸಿಕೊಳ್ಳುವ ಚಲನಚಿತ್ರಗಳನ್ನು ತೆಗೆಯಲು ಹೆಚ್ಚು ನಿರ್ದೇಶಕರು ಮುಂದಾಗುವುದು ಸಾಮಾನ್ಯವಾದದ್ದೆ. ಇಂಥ ಚಲನಚಿತ್ರಗಳು ವಿವಿಧ ಅಭಿರುಚಿಯ ಪ್ರೇಕ್ಷಕರನ್ನು ಸೆಳೆಯಲು ಹಾಸ್ಯ, ನೃತ್ಯ, ಹಾಡುಗಳು ಮತ್ತು ಭವ್ಯವಾದ ಸೆಟ್ಟಿಂಗ್‌ಗಳನ್ನು ಒಳಗೊಂಡಿರುತ್ತವೆ ಮತ್ತು ಅವುಗಳನ್ನು ವಿವಿಧ ರೀತಿಯ ಲೊಕೇಶನ್‌ಗಳಲ್ಲಿ ಚಿತ್ರೀಕರಿಸಲಾಗಿರುತ್ತದೆ. ಈ ಚಲನಚಿತ್ರಗಳಲ್ಲಿ ಸಾಮಾನ್ಯವಾಗಿ ಜನಪ್ರಿಯ ನಟರು ಮತ್ತು ನಟಿಯರು ಮುಖ್ಯ ಪಾತ್ರಗಳನ್ನು ನಿರ್ವಹಿಸಿರುತ್ತಾರೆ. ಕಥೆಯ ಹರವನ್ನು ಅವಲಂಬಿಸಿ ಚಿತ್ರದಲ್ಲಿ ಅನೇಕ ಪ್ರಮುಖ ಕಲಾವಿದರನ್ನೊಳಗೊಂಡಂತೆ ಜನಪ್ರಿಯ ತಾರಾಗಣ ಕೂಡ ಇರುತ್ತದೆ. ನಿರ್ಮಾಣ ತಂಡವು ಗಾಯಕರು, ನೃತ್ಯ ಸಂಯೋಜಕರು, ಸಂಗೀತಗಾರರು ಇತ್ಯಾದಿಯಾಗಿ ಒಳಗೊಂಡು, ಸಿನಿಮಾವನ್ನು ಬೃಹತ್ ಬಜೆಟ್‌ನಲ್ಲಿ ನಿರ್ಮಿಸಲಾಗುತ್ತದೆ. ಅಷ್ಟೇ ಅಲ್ಲದೆ, ಬೃಹತ್ ಪ್ರಚಾರಗಳು, ಜಾಹೀರಾತುಗಳು ಮತ್ತು ಸ್ಟಾರ್ ಶಿಫಾರಸ್ಸುಗಳು ಬಿಡುಗಡೆಗಾಗಿ ಮುಂಚೆ ಸಾಮಾನ್ಯ. ಅತ್ಯಂತ ಸಂಕೀರ್ಣವಾದ ಮಾಹಿತಿಗಳನ್ನು ಸಹ ಆಕರ್ಷಕವಾಗಿ ಮತ್ತು ಸರಳವಾಗಿ ಗ್ರಹಿಸಲು ಸಾಧ್ಯವಾಗುವ ರೀತಿಯಲ್ಲಿ ಜನರಿಗೆ ತಲುಪಿಸಬಹುದಾದ ಮಾರ್ಗ ಇದಾಗಿರುವುದರಿಂದ ಎಲ್ಲ ಭಾಷೆಯ ಚಿತ್ರರಂಗದಲ್ಲಿ ಜನಪ್ರಿಯ ಮಾದರಿಯ ಸಿನಿಮಾಗಳು ಸರ್ವೇಸಾಮಾನ್ಯ.

ರಾಜಮೌಳಿಯಂತ ನಿರ್ದೇಶಕರು ಸಿನಿ ಜಗತ್ತಿಗೆ ಕಾಲಿಟ್ಟಿರುವುದೇ ಇಂತಹ ಸಿನಿಮಾಗಳ ಮೂಲಕ. ಇವರ ಹಳೆಯ ಸಿನಿಮಾಗಳನ್ನು ಗಮನಿಸಿದಾಗ ಈ ಮೇಲಿನ ಎಲ್ಲಾ ಅಂಶಗಳೂ ದಟ್ಟವಾಗಿ ಗೋಚರಿಸುತ್ತವೆ.

‘ಈಗ ‘ ಚಿತ್ರದ ನಂತರ ಮಾರುಕಟ್ಟೆಯ ಆಳಗಲವನ್ನು ಹಿಗ್ಗಿಸಿಕೊಂಡ ಈ ನಿರ್ದೇಶಕ ತನ್ನ ಸಿನಿಮಾಗಳನ್ನು ಭಾರತದ ಉದ್ದಗಲಕ್ಕೆ ಮಾರ್ಕೆಟ್ ಮಾಡುವ ಮೂಲಕ ಇತರ ಭಾಷೆಗಳಿಗೂ ಹತ್ತಿರವಾಗಿದ್ದಾರೆ; ಅರ್ಥಾತ್ ಬಹುತೇಕ ಭಾರತೀಯ ಸಿನಿಪ್ರೇಮಿಗಳಿಗೆ ಈ ನಿರ್ದೇಶಕನ ಹೆಸರು ಪರಿಚಯವಾಗಿದೆ.

ಇಂತಹ ನಿರ್ದೇಶಕರ ಹೊಸ ಸಿನಿಮಾ ಬಂದಾಗ, ಆ ಸಿನಿಮಾದಲ್ಲಿ ಸಾರ್ವಜನಿಕರಿಗೆ ಅಪೀಲ್ ಆಗುವಂತಹುದ್ದು ಏನಿರಬಹುದು ಎಂಬ ಕುತೂಹಲ ಹೆಚ್ಚಿನ ಜನಕ್ಕೆ ಮೂಡುವುದು ಸಹಜ. ಇಂತಹ ಕುತೂಹಲವನ್ನೇ ಬಂಡವಾಳ ಮಾಡಿಕೊಂಡಿರುವ ರಾಜಮೌಳಿ ಈಗ ‘RRR…’ ಎನ್ನುವ ಗಾಳಿಗೋಪುರವನ್ನು ಸಿನಿಮಾದ ಹೆಸರಿನಲ್ಲಿ ಪ್ರೇಕ್ಷಕರ ಮುಂದಿಟ್ಟಿದ್ದಾರೆ.

ಕಮರ್ಶಿಯಲ್ ಕಾರ್ಡ್‌ಅನ್ನು ಸಹಿಸಿಕೊಂಡು ಸಿನಿಮಾ ವೀಕ್ಷಣೆಗೆ ಕುಳಿತರೂ ಸಹ ಮೊದಲಾರ್ಧ ಮುಗಿಯುವವರೆಗೂ ಕಥೆ ಶುರುವಾಗುವ ಯಾವ ಲಕ್ಷಣಗಳೂ ಕಾಣಿಸುವುದಿಲ್ಲ. ಟೊಳ್ಳು ಚಿತ್ರಕತೆಯಿಂದ ಮಂದಗತಿಯಲ್ಲಿ ಸಾಗುವ ಸಿನಿಮಾ, ಇಡೀ ಅವಧಿಯಲ್ಲಿ ರಾಮ್ ಚರಣ್ ಮತ್ತು ಎನ್.ಟಿ.ಆರ್ ರ ಅಭಿಮಾನಿಗಳಿಗೆ ಅವರನ್ನು ಎಸ್ಟಾಬ್ಲಿಷ್ ಮಾಡುವುದರಲ್ಲಿಯೇ ಕಾಲಹರಣ ಮಾಡುತ್ತದೆ.

ನಿರ್ಮಾಪಕರು ಧಾರಾಳವಾಗಿ ಸುರಿದಿರುವ ದುಡ್ಡು, ದೊಡ್ಡ ಪರದೆಯ ತುಂಬ ಜನಗಳನ್ನು ಸೇರಿಸುವುದರಲ್ಲಿ ಮಾತ್ರ ಯಶಸ್ವಿಯಾಗಿದೆ. ಅವಶ್ಯಕತೆಯಿಲ್ಲದ ದೃಶ್ಯ ಸಂಯೋಜನೆ, ಅತಿಯಾದ ಭಾವನೆಗಳ (ಇವ್ಯಾವುದೂ ನೈಜವಾಗಿ ಪ್ರೇಕ್ಷಕನನ್ನು ಕಾಡುವುದಿಲ್ಲ) ಜತೆಗಿನ ಗುದ್ದಾಟ, ಕೊಂಚವೂ ಲಾಜಿಕ್ ಇಲ್ಲದಂತೆ ಜರುಗುವ ಸನ್ನಿವೇಶಗಳನ್ನೇ ಹೊತ್ತು ಮೆರೆದಿರುವ RRR… ಮನರಂಜನೆಯ ಗಡಿಯನ್ನೂ ಬಿಟ್ಟು ಪ್ರೇಕ್ಷಕರಿಗೆ ಬೇರೆಯದೇ ಆದ ರೀತಿಯಲ್ಲಿ ಅಪೀಲ್ ಆಗುವ ಅಪಾಯವನ್ನು ಹೊಂದಿದೆ…

ಜಾತಿ, ಧರ್ಮ ಮತ್ತು ಅಧಿಕಾರದಿಂದ ಮನುಷ್ಯ ಘನತೆಯನ್ನು ಅಳೆಯುವ/ನಿರಾಕಸಿರುವ ಸದ್ಯದ ವಾತಾವರಣದಲ್ಲಿ, ಮಿತಿಮೀರಿದ ಅಸಹನೆ ನಮ್ಮುಗಳ ಮಧ್ಯೆ ಬೆಳೆದು ಉಸಿರುಗಟ್ಟಿಸುತ್ತಿವೆ. ಸುತ್ತಮುತ್ತಲ ಘಟನೆಗಳನ್ನು ಸಮಾಜವು ನೋಡುವ ಮತ್ತು ಸ್ವೀಕರಿಸುವ ಶೈಲಿ ವಿಷಮಗೊಳ್ಳುತ್ತಿರುವ ಸಂದರ್ಭದಲ್ಲಿ, ಕಲೆ ಅಂತಹ ಸೂಕ್ಷ್ಮಗಳನ್ನು ಅರಿತು ಹೊಸ ದಿಕ್ಕಿನ ಆಲೋಚನೆಗಳ ಕಡೆಗೆ ನಮ್ಮನ್ನು ಕರೆದೊಯ್ಯುವುದು ಅತ್ಯವಶ್ಯಕ. ಇದು ಸಿನಿಮಾ ನಿರ್ದೇಶಕನಿಗೆ ಇರಬೇಕಾದ ಬಹುಮುಖ್ಯ ಅರ್ಹತೆ ಎಂದರೆ ತಪ್ಪಾಗಲಾರದು. ಆದರೆ ಈ ನಡುವೆ ಬರುತ್ತಿರುವ ಕಮರ್ಷಿಯಲ್ ಸಿನಿಮಾಗಳು ಅಂತಹ ಅಪೇಕ್ಷೆಗೆ ವಿರುದ್ಧವಾಗಿ ನಡೆಯುತ್ತಿರುವುದು ದುರಂತ. ಅಂತಹ ಸಿನಿಮಾಗಳು ಸಮಾಜದಲ್ಲಿ ಪ್ರಭಾವಿಸಬಹುದಾದ ಆತಂಕಕಾರಿ ಬದಲಾವಣೆಗಳನ್ನು ಗಮನಿಸಿದರೆ, ಊಹಿಸಿಕೊಂಡರೆ ಕಲೆಯ ಮೂಲ ಉದ್ದೇಶ ಎಲ್ಲಿಗೆ ಬಂದು ನಿಂತಿದೆ ಎಂಬುದು ಆತಂಕದ ವಿಷಯ. ಅದಕ್ಕೆ ಹೊಸ ಸೇರ್ಪಡೆ ರಾಜಮೌಳಿ ಯ RRR…

ಸಿನಿಮಾದ ಕಥಾನಾಯಕರಿಬ್ಬರಿಗೂ ಇರುವ ಹಿನ್ನೆಲೆಯನ್ನು ಗಮನಿಸಿದರೆ ಒಬ್ಬ ಕಾಡಿನ ಮಧ್ಯೆ ವಾಸಿಸುವ ಬುಡಕಟ್ಟು ಜನಾಂಗದವನು, ವಿದ್ಯಾರ್ಹತೆ ಇಲ್ಲದವನು, ನಗರದ ರೀತಿ ರಿವಾಜುಗಳನ್ನು ತಿಳಿಯದವನು, ಇಂತವನಿಗೆ ಬ್ರಿಟಿಷ್ ಆಡಳಿತದ ಮುಖ್ಯಸ್ಥನ ಮನೆಯ ಹುಡುಗಿಯೊಬ್ಬಳೊಂದಿಗೆ ಸ್ನೇಹವಾಗಿ ಪ್ರೇಮವೂ ಆಗುತ್ತದೆ. ಅದಕ್ಕೆ ಸಂಪರ್ಕ ಕೊಂಡಿಯಾಗಿ ಮೊದಲು ಬರುವ ಕಥೆಯ ಎಳೆಯಲ್ಲಿ ಮಾರುವೇಶದಲ್ಲಿ ಬರುವ ಈ ಕಥಾನಾಯಕ ಮುಸ್ಲಿಂ ಆಗಿ ಪ್ರೇಕ್ಷಕರೆದುರಿಗೆ ಕಾಣಿಸುತ್ತಾನೆ.

ಮತ್ತೊಬ್ಬ, ಜನಿವಾರಧಾರಿ, ಇಂಗ್ಲೀಷ್ ಭಾಷೆಯಲ್ಲಿ ಸುಲಲಿತವಾಗಿ ಮಾತನಾಡುವವನು, ಬ್ರಿಟೀಷರ ಸರ್ಕಾರದಲ್ಲಿ ಉನ್ನತ ಹುದ್ದೆ ಪಡೆಯುವುದಕ್ಕಾಗಿ ಅವರಿಗೆ ಬಹಳ ನಿಷ್ಠವಂತವನಾಗಿ ಇರುವಂತೆ ನಟಿಸಿ ಗುರುತಿಸಿಕೊಳ್ಳುವವನು. ತನ್ನ ಕಾರ್ಯದಲ್ಲಿ ಯಶಸ್ವಿಯಾದಮೇಲೆ ತನ್ನ ಜನರಿಗಾಗಿ ಕೆಲಸ ಮಾಡುವ ಯೋಜನೆ ಹಾಕಿರುವವನು. ಆ ಪಾತ್ರದ ಹೆಸರು ರಾಮನಾಗಿದ್ದು, ಆತನ ಪ್ರೇಯಸಿಯನ್ನು ಸೀತೆಯಾಗಿ ನಿರ್ದೇಶಕರು ನಮ್ಮ ಮುಂದೆ ನಿಲ್ಲಿಸುತ್ತಾರೆ.
ರಾಮನ ಈ ಅಜ್ಞಾತವಾಸಕ್ಕೆ, ನಿಷ್ಠಾವಂತತೆಗೆ ಬಲವಾದ ಕಾರಣ ಕೊಡುವ ನಿರ್ದೇಶಕರು, ಬುಡಕಟ್ಟು ಜನಾಂಗದ ಮತ್ತು ಹಿಂದುಳಿದ ಜನರ ನಾಯಕನ ಪಾತ್ರ ಕಟ್ಟುವಾಗ, ಆತನ ಮೇಲೆ ತಪ್ಪು ತಿಳುವಳಿಕೆ ಮೂಡುವಂತೆ ಮಾಡಿ ಯಾವ ಸೀಮೆ ಕಥೆ ಹೇಳಲು ಹೊರಟಿದ್ದಾರೋ ತಿಳಿಯದು. ಇಲ್ಲಿ ಜನಿವಾರಧಾರಿ ಪಾತ್ರದ ಬಗ್ಗೆ ಇರುವ ತಪ್ಪು ತಿಳಿವಳಿಕೆಯನ್ನು ಬಿಟ್ಟುಬಿಡಿ ಎಂದು ಕೂಗಿಕೂಗಿ ಹೇಳುತ್ತಿರುವಂತೆ ಭಾಸವಾಗುತ್ತದೆ, ಸಾಲದ್ದಕ್ಕೆ ಸಿನಿಮಾ ಶುರುವಿನಲ್ಲಿ ಯಾವುದೋ ಕಾರಣಕ್ಕೆ ಹೋರಾಟನಿರತ ಜನರಿಂದ ಅವನಿಗೆ ಜನವಿರೋಧಿ ಎನ್ನುವಂತೆ ಬೈಯಿಸಿ ನಂತರದಲ್ಲಿ ಆ ಪಾತ್ರವನ್ನ ಬಹಳ ನಾಜೂಕಿನಿಂದ ಭಾವತೀವ್ರತೆಗೆ ತಳ್ಳುತ್ತಾರೆ.
ಇತ್ತ ಸಾಮಾಜಿಕ ಜಾಲತಾಣಗಳಲ್ಲಿ ನಾವು ವಿನಾಯಕ ದಾಮೋದರ್ ಸಾವರ್ಕರ್ (ವೀರ ಸಾವರ್ಕರ್ ರಸ್ತೆ ಎಂಬುದಾಗಿ ಬೆಂಗಳೂರಿನ ಮೇಲುಸೇತುವೆಗೆ ಆತನ ಹೆಸರಿದೆ) ಕುರಿತಾಗಿ ಒಂದು ಉತ್ಪ್ರೇಕ್ಷಿತ ಕತೆಯನ್ನು ಓದಿರುತ್ತಿರುತ್ತೇವೆ, ಇತಿಹಾಸದಲ್ಲಿ ತಪ್ಪಾಗಿ ಬಿತ್ತರಿಸಿರುವ ಸಾವರ್ಕರ್ ನಿಜವಾಗಿ ಒಬ್ಬ ಹೋರಾಟಗಾರ, ಆತ ಬ್ರಿಟಿಷರ ಎದುರು ಕ್ಷಮೆ ಕೇಳಿದ್ದು, ಅಲ್ಲಿಂದ ಪಾರಾಗಿ ಬಂದು ಪುನಃ ದೇಶ ಸೇವೆ ಮಾಡಲು ಮಾತ್ರ, ಬ್ರಿಟಿಷರೊಂದಿಗೆ ರಾಜಿಯಾಗಲು ಅಲ್ಲ, ಇತ್ಯಾದಿ ಇತ್ಯಾದಿ… ಎಂದು.

RRR ಸಿನಿಮಾದ ರಾಮ್ ಪಾತ್ರವೂ ಬಹಳವಾಗಿ ಇಂಥದ್ದೆ ಕಥೆಗೆ ಪರ್ಯಾಯವಾಗಿ ನಿಲ್ಲುತ್ತದೆ.
ಬುಡಕಟ್ಟು ಜನಾಂಗದ ಹಿನ್ನೆಲೆಯಿಂದ ಬಂದ ಅಕ್ತರ್/ಭೀಮ್ ಪಾತ್ರವನ್ನು ರಾಮ್ ಪಾತ್ರದ ಎದುರುಗಡೆ ನಿಲ್ಲಿಸಿ, ಅವನಿಗಿಂತ ಕೆಳಸ್ಥರಕ್ಕೆ ತಳ್ಳಿ, ನನಗೆ ವಿದ್ಯೆ ಇಲ್ಲ, ರಾಮ ಮತ್ತು ಸೀತೆಯನ್ನು ಒಂದು ಮಾಡುವುದೇ ನನ್ನ ಧ್ಯೇಯ ಎಂದು ಒತ್ತಿ ಹೇಳುವಂತೆ ಮಾಡುವುದನ್ನು ನಿರ್ದೇಶಕ ನಾಜೂಕಾಗಿ ಚಿತ್ರಿಸಲು ಪ್ರಯತ್ನಿಸಿದ್ದಾರೆ.

ಆ ಕೆಲಸ ಮಾಡಿಸಿದ ಮೇಲೆ ನನಗೆ ಶಿಕ್ಷಣವನ್ನು ಕೊಡು ಎಂದು ರಾಮನ ಬಳಿ ವರ ಕೇಳುವಂತೆ ಮಾಡುವುದು, ಸದ್ಯದ ರಾಜಕೀಯ ವಾತಾವರಣಕ್ಕೆ ಸಂಕೇತವಾಗಿಲ್ಲ ಎಂಬುದನ್ನು ಖಂಡಿತವಾಗಿ ನಿರ್ದೇಶಕ ಸಾಬೀತು ಮಾಡಲಾರ. ಅಥವಾ ಈ ಸನ್ನಿವೇಶಗಳನ್ನ ಬರಿಯ ಮನರಂಜನೆಯೆಂದೇ ತೆಗೆದುಕೊಂಡರೂ ರಾಮ್ ಚರಣ್ ಪಾತ್ರವನ್ನ ಸಿನಿಮಾದ ಕೊನೆಯಲ್ಲಿ ರಾಮಾಯಣ ಕಥೆಯ ರಾಮನ ಅವತಾರದಲ್ಲೇ ನಿಲ್ಲಿಸಿ ಅನವಶ್ಯಕ ಹೊಳಹುಗಳನ್ನು ನೀಡುವ ಮರ್ಮವನ್ನಾದರೂ ಆತ ತಿಳಿಸಿಕೊಡಬೇಕಾಗುತ್ತದೆ.

ಇನ್ನು ಈ ಪುರುಷ ಪ್ರಧಾನ ಸಿನೆಮಾದಲ್ಲಿ ಮಹಿಳಾ ಪಾತ್ರಗಳ ಬಗ್ಗೆ ಹೇಳುವುದಕ್ಕೆ ಏನೂ ಉಳಿಸಿಲ್ಲ, ಮೇಕಪ್ ಹಾಕಿ ಮುಖ ತೋರಿಸಿ ಹೋಗಿ ಎನ್ನುವಂತಿದೆ ಅವರಿಗೆ ಕೊಟ್ಟಿರುವ ಅವಕಾಶ. ಕನಿಷ್ಠ ಚಿತ್ರಕತೆಯ ವೇಗಕ್ಕಾದರೂ ಅವರನ್ನು ಹೆಸರಿಸಿದ್ದರೆ ಸಮಾಧಾನವಾಗಿರುತ್ತಿತ್ತು.

ರಾಜಮೌಳಿಯ ಈ ಹಿಂದಿನ ಸಿನಿಮಾಗಳಲ್ಲಿ ಇದ್ದ ಅಲ್ಪಸ್ವಲ್ಪ ಕಥೆ ಹೆಣೆಯುವ ಕೆಲಸವೂ ಇಲ್ಲಿ ಕಾಣೆಯಾಗಿದೆ. ಈ ಸಿನಿಮಾದಲ್ಲಿ ಸಂಗೀತ, ಅಂತಹ ಕಿಕ್ ಕೊಡುವುದಿಲ್ಲ. ಪಾತ್ರಗಳ ನಟನೆ, ಸಂಕಲನದ ಕೆಲಸವಂತೂ ಅವರಿಗೇ ಪ್ರೀತಿ. ಅದ್ದೂರಿತನವೇ, ಮಾರ್ಕೆಟಿಂಗ್ ಗಿಮಿಕ್ಕೇ ಒಂದು ಸಿನಿಮಾವನ್ನು ಗೆಲ್ಲಿಸಬಹುದು ಎಂಬ ಹಂತಕ್ಕೆ ಇಂದು ಚಿತ್ರೋದ್ಯಮ ಬಂದು ನಿಂತಿರುವುದು ವಿಷಾದನೀಯ ಬೆಳವಣಿಗೆ.

ನಾನ್ನೂರೋ ಆರುನೂರೋ ಕೋಟಿ ವೆಚ್ಚದ ಸಿನಿಮಾ ಸಹಜವಾಗಿ ಎಲ್ಲಾ ಬಾಷೆಯ ಚಿತ್ರ ಮಾರುಕಟ್ಟೆಗೂ ಲಗ್ಗೆಯಿಟ್ಟಿರುವುದರಲ್ಲಿ ಅನುಮಾನವಿಲ್ಲ, ಭಾರತೀಯ ಸಿನಿ ಇತಿಹಾಸದಲ್ಲಿ, ಪುರಾಣ ಇತಿಹಾಸಗಳನ್ನು ಕಲಸುಮೇಲೋಗರ ಮಾಡೊ ಕಟ್ಟಿರುವ ಕಪೋಲಕಲ್ಪಿತ ಹಲವು ಸಿನಿಮಾಗಳು ಬಂದಿರಬಹುದು ಮತ್ತು ಮುಂದೆ ಬರಲೂಬಹುದು. ಮನರಂಜನೆ ಜತೆಗೆ ಒಂದು ಮೆಸೇಜ್ ಎಂದು ಹೇಳಿಕೊಂಡು ಬರುವ ಇಂತಹ ಜಡ್ಡು ಸಿನಿಮಾಗಳನ್ನು ಪ್ರೇಕ್ಷಕರು ಯಾವ ಕಾರಣಕ್ಕಾಗಿಯಾದರೂ ನೋಡಬೇಕು ಎಂಬುದೇ ಸದ್ಯದ ಪ್ರಶ್ನೆ.

ಎನ್. ಧನಂಜಯ್ 

ಸೇಲ್ಸ್ ವಲಯದ ಕೆಲಸದಲ್ಲಿ ತೊಡಗಿಸಿಕೊಂಡಿರುವ ಧನಂಜಯ್ ಅವರಿಗೆ ನಟನೆ, ಸಿನಿಮಾ, ರಂಗಭೂಮಿ ಮತ್ತು ಸಾಹಿತ್ಯ ಆಸಕ್ತಿಯ ಕ್ಷೇತ್ರಗಳು.


ಇದನ್ನೂ ಓದಿ: ಹುಸಿ ಕಾಳಜಿಯ, ಪಕ್ಷಪಾತ ಧೋರಣೆಯ, ದ್ವೇಷದ ಅಜೆಂಡಾವುಳ್ಳ ’ದ ಕಾಶ್ಮೀರ್ ಫೈಲ್ಸ್’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...