Homeಅಂಕಣಗಳುತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ನಾನು ಮೊದಲ ಕೆಲಸಕ್ಕೆ ಸೇರಿದ್ದು ಹೀಗೆ: ಪ್ರಸಾದ್ ರಕ್ಷಿದಿ

ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ನಾನು ಮೊದಲ ಕೆಲಸಕ್ಕೆ ಸೇರಿದ್ದು ಹೀಗೆ: ಪ್ರಸಾದ್ ರಕ್ಷಿದಿ

- Advertisement -
- Advertisement -

ಕಳೆದು ಹೋದ ದಿನಗಳು – 12

1971 ರಲ್ಲಿ ಹೊಸ ಭರವಸೆಗಳೊಂದಿಗೆ ಬಂದ ಇಂದಿರಾ ಸರ್ಕಾರ  ಭೂಸುಧಾರಣೆ, ಮತ್ತಷ್ಟು ಬ್ಯಾಂಕುಗಳ ರಾಷ್ಟ್ರೀಕರಣ ಮುಂತಾದ ಕೆಲವು ಕ್ರಾಂತಿಕಾರಿ ಕಾರ್ಯಕ್ರಮಗಳನ್ನೇನೋ ತಂದಿತು. ಆದರೆ ರಾಜಕೀಯವಾಗಿ ಹಲವು ತಪ್ಪುಗಳನ್ನು ಮಾಡುತ್ತ ಸಾಗಿತು. ಮುಖ್ಯವಾಗಿ ರಾಜ್ಯಗಳ ನಾಯಕರು ಕಡೆಗಣಿಸಲ್ಪಟ್ಟರು. ಇಂದಿರಾ ಸರ್ವೋಚ್ಛ ನಾಯಕಿಯಾಗಿ ಪಕ್ಷ ಜೀ ಹುಜೂರ್‌ಗಳ ಸಂತೆಯಾಗತೊಡಗಿತು. ವಿರೋಧ ಪಕ್ಷಗಳನ್ನು ವ್ಯವಸ್ಥಿತವಾಗಿ ದಮನ ಮಾಡುವ ಕಾರ್ಯ ಆರಂಭವಾಗಿತ್ತು. ಮುಖ್ಯವಾಗಿ ಎಡಪಕ್ಷಗಳನ್ನು ಮತ್ತು ಕಾರ್ಯಕರ್ತರನ್ನು ಹಣಿಯಲಾರಂಭಿಸಿದರು. ಎಡಪಕ್ಷಗಳ ಒಂದು ವಿಭಾಗ ಇಂದಿರಾ ಜೊತೆಯಲ್ಲೇ ಇದ್ದರೂ ಅವರಲ್ಲೂ ಕೆಲವರಿಗೆ ಭ್ರಮನಿರಸನವಾಗುತ್ತಿತ್ತು. ಪಶ್ಚಿಮ ಬಂಗಾಳದಲ್ಲಿ ಸಿದ್ಧಾರ್ಥ ಶಂಕರ್ ರಾಯ್ ಅವರ ಸರ್ಕಾರವಂತೂ ಎನ್ ಕೌಂಟರ್ ಸ್ಪೆಶಲಿಸ್ಟ್ ಸರ್ಕಾರವಾಗಿ 1977ರ ತುರ್ತು ಪರಿಸ್ಥಿತಿಯನ್ನು 71 ರಿಂದಲೇ ಜಾರಿಗೆ ತಂದಿತ್ತು.

ಇದರೊಂದಿಗೆ ಇತರ ಸಾಮಾಜಿಕ ಸಮಸ್ಯೆಗಳಿದ್ದವು. ಬೆಲೆಗಳು ಒಂದೇ ಸಮನೆ ಏರತೊಡಗಿತ್ತು. 1971ರಲ್ಲಿ ಇಂದಿರಾ ಬೆಂಬಲಕ್ಕೆ ನಿಂತಿದ್ದ ಯುವ ಸಮೂಹದಲ್ಲೂ ಅತೃಪ್ತಿ ಬೆಳೆಯುತ್ತಿತ್ತು. ವಿದ್ಯಾರ್ಥಿ ಚಳುವಳಿಗಳು ನಿರಂತರವಾಗಿ ನಡೆಯತೊಡಗಿದವು.

ದಕ್ಷಿಣದ ರಾಜ್ಯಗಳಲ್ಲಿ ಇದರ ಬಿಸಿ ಬೇಗ ತಟ್ಟಲಿಲ್ಲ. ಕಾರಣ ಕರ್ನಾಟಕದಲ್ಲಿ ದೇವರಾಜ ಅರಸರ ಜನಪರ ಕೆಲಸಗಳು, ಹಾಗೇ ದಕ್ಷಿಣದ ಇತರ ರಾಜ್ಯಗಳಲ್ಲಿದ್ದ ಬೇರೆ ಬೇರೆ ಪಕ್ಷಗಳ ಸರ್ಕಾರಗಳು ಕೂಡಾ ಒಂದಷ್ಟು ಜನಪರವಾಗಿಯೇ ಇದ್ದವು.

ಈ ಸಮಯದಲ್ಲಿ ಗಮನಿಸಬೇಕಾದ ವಿಚಾರವೆಂದರೆ ಅದು ಭಾರತದ ಸಾಂಸ್ಕೃತಿಕ ವಲಯದ ಚಟುವಟಿಕೆಗಳು. ಆ ಸಮಯದಲ್ಲಿ, ಸಾಹಿತಿಗಳು, ನಾಟಕಕಾರರು, ರಂಗಭೂಮಿಯವರು, ಚಿಂತಕರು ಸಿನಿಮಾ ಮತ್ತು ಪತ್ರಿಕಾ ಮಾಧ್ಯಮದವರು ಹೀಗೆ ಎಲ್ಲ ವಿಭಾಗಗಳವರೂ ಹೊಸ ಹೊಸ ವಿಚಾರಗಳೊಂದಿಗೆ ಪ್ರಯೋಗಶೀಲರಾಗಿ ಹೊರಹೊಮ್ಮಿದ್ದರು. ಇವೆರಲ್ಲರ ವಿಚಾರವೂ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿತ್ತು.

ಬಸವಳಿದು ಕುಳಿತಂತಿದ್ದ ವಿರೋಧ ಪಕ್ಷಗಳು ಆಗ ಮತ್ತೊಮ್ಮೆ ದೇಶದ ರಾಜಕೀಯದಲ್ಲಿ ಮತ್ತೆ ಹೊಸ ಪ್ರಯೋಗಗಳಿಗೆ ತೊಡಗಿದರು. ಒಂದು ಕಡೆ ಎಡಪಕ್ಷಗಳು, ಲೋಹಿಯಾವಾದಿ ಪಕ್ಷಗಳು ಒಂದಾಗಿ ಹೋರಾಡಬೇಕೆಂದು ಯೋಚಿಸುತ್ತಿದ್ದರೆ, ಉದಾರವಾದಿ ಬಲಪಂಥೀಯ ಪಕ್ಷಗಳು, ರೈತ ಸಂಘಟನೆಗಳು ಸೇರಿ ಹೊಸ ಗುಂಪಾಗುವ ಚಿಂತನೆಯಲ್ಲಿದ್ದವು. ರಾಷ್ಟ್ರವಾದಿ ಪಕ್ಷ ಜನಸಂಘ ತನ್ನದೇ ಸಂಘಟನೆಯನ್ನು ಬಲಪಡಿಸುವ ಪ್ರಯತ್ನದಲ್ಲಿತ್ತು.

ಆ ಸಂದರ್ಭದಲ್ಲಿ 1974 ರಲ್ಲಿ ಹುಟ್ಟಿದ್ದು ಚರಣ್ ಸಿಂಗ್ ಅವರ ನೇತೃತ್ವದಲ್ಲಿ ಏಳು ಪಕ್ಷಗಳು ಜೊತೆಗೂಡಿದ ಭಾರತೀಯ ಲೋಕದಳ. ರಾಜಾಜಿಯವರು ಸ್ಥಾಪಿಸಿದ್ದ ಸ್ವತಂತ್ರ ಪಕ್ಷ ಅದರಲ್ಲಿ ವಿಲೀನವಾಯಿತು. ಲೋಕದಳ ಹಳೆಯ ಕಾಂಗ್ರೆಸ್ಸಿನ ಜೋಡೆತ್ತಿನ ಚಿನ್ಹೆಯನ್ನು ಪಡೆದುಕೊಂಡಿತು. ಭಾರತೀಯ ಲೋಕದಳದ ಕರ್ನಾಟಕ ರಾಜ್ಯದ ಅಧ್ಯಕ್ಷರಾಗಿ ಗಣಪಯ್ಯನವರೇ ಆಯ್ಕೆಯಾದರು.

ಗಣಪಯ್ಯ ಮತ್ತೆ ಮೊದಲಿಗಿಂತ ಹೆಚ್ಚು ಉತ್ಸಾಹದಿಂದ ಪಕ್ಷ ಕಟ್ಟುವ ಕೆಲಸದಲ್ಲಿ ತೊಡಗಿಕೊಂಡರು.

1958ರಲ್ಲಿ ಗಣಪಯ್ಯನವರ ಮಗ ರವೀಂದ್ರನಾಥರ ವಿವಾಹವಾಗಿತ್ತು.(ಪತ್ನಿ ಕಮಲಾ ರವೀಂದ್ರನಾಥ) ಅವರು ಹಾರ್ಲೆಯ ಪಕ್ಕದಲ್ಲಿರುವ ಇವರದ್ದೇ ಆದ ವೊಡ್‌ಗಲ್ ತೋಟದಲ್ಲಿ ವಾಸಿಸುತ್ತಿದ್ದರು. ರವೀಂದ್ರನಾಥ ದಂಪತಿಗೆ ಮೂವರು ಮಕ್ಕಳು. ಮಕ್ಕಳು ಬೆಂಗಳೂರಿನಲ್ಲಿ ಓದುತ್ತಿದ್ದರಿಂದ ರವೀಂದ್ರನಾಥರು ಕೆಲಕಾಲ ಬೆಂಗಳೂರಿನಲ್ಲಿಯೂ ಇರುತ್ತಿದ್ದರು.

ರವೀಂದ್ರನಾಥ ಅವರು 1972ರ ಸಮಯದಲ್ಲಿ ಪ್ರಥಮಬಾರಿಗೆ ಸಕಲೇಪುರದಲ್ಲಿ ಒಂದು ಕೋಳಿಫಾರಂ ಅನ್ನು ಪ್ರಾರಂಭಿಸಿದ್ದರು. ಕೆಲಕಾಲ ಅದನ್ನು ನಡೆಸಿದರು. ಮಲೆನಾಡಿನ ಸಕಲೇಶಪುರದಲ್ಲಿ ಅದು ಚೆನ್ನಾಗಿ ನಡೆಯಲಿಲ್ಲ. ಅದನ್ನು ನಿಲ್ಲಿಸಿ ನಂತರ ಪಶುಸಂಗೋಪನೆಗೆ ತೊಡಗಿದರು. ಸಕಲೇಶಪುರಕ್ಕೆ ಮಿಶ್ರತಳಿ ಹಸುಗಳನ್ನು ತಂದು ಸಾಕಲು ಪ್ರಾರಂಬಿಸಿದ ಮೊದಲಿಗರಲ್ಲಿ ಇವರೂ ಪ್ರಮುಖರು. ಮೊದಲು ಸಕಲೇಶಪುರ ನಗರದಲ್ಲಿ ಪ್ರಾರಂಭಿಸಿ ನಿಧಾನವಾಗಿ ಹಾರ್ಲೆ ಎಸ್ಟೇಟ್, ಹಾಗೂ ಇವರದ್ದೇ ಉಸ್ತುವಾರಿಯ ಹಲವು ತೋಟಗಳಲ್ಲಿ ಪಶುಸಾಕಣೆಯನ್ನು ವಿಸ್ತರಿಸಿದರು. ರವೀಂದ್ರನಾಥರ ಪ್ರಯತ್ನದಿಂದಾಗಿ ಸಕಲೇಶಪುರ ಹಾಲು ಉತ್ಪಾದಕರ ಸಂಘ ಅಸ್ತಿತ್ವಕ್ಕೆ ಬಂದಿತು. ಹೈನುಗಾರಿಕೆ ಸಕಲೇಶಪುರ ತಾಲ್ಲೂಕಿನಲ್ಲಿ ಕಾಫಿಯ ಜೊತೆ ಒಂದು ಉಪವೃತ್ತಿಯಾಗಿ ಬೆಳೆಯುವಲ್ಲಿ ರವೀಂದ್ರನಾಥರ ಕೊಡುಗೆ ದೊಡ್ಡದು.

ಡೈರಿ ಹಸುಗಳು

ರವೀಂದ್ರನಾಥರು ರೋಟರಿ ಸಂಸ್ಥೆಯ ಸದಸ್ಯರಾಗಿದ್ದರು. ಅವರ ರೋಟರಿ ಸಂಸ್ಥೆ ಮತ್ತು ಅದರಿಂದ ಲಭ್ಯವಾದ ಜನ ಸಂಪರ್ಕಗಳನ್ನು ಅವರ ಅನೇಕ ಜನಪರ ಕೆಲಸಗಳಿಗೆ ವೇದಿಕೆಯಾಗಿ ಬಳಸಿಕೊಂಡರು. ಪಶುಸಂಗೋಪನೆಯ ಹಲವಾರು ತಜ್ಞರುಗಳನ್ನು ಕರೆಸಿ ಭಾಷಣ, ವಿಚಾರ ಸಂಕಿರಣ, ಪ್ರಾತ್ಯಕ್ಷಿಕೆ, ಅದಕ್ಕೆ ಸಂಬಂಧಪಟ್ಟ ಚಲನಚಿತ್ರ ಪ್ರದರ್ಶನಗಳು ನಡೆಯತೊಡಗಿದವು. ನಮ್ಮ ಜನಸಂಖ್ಯೆಯ ಪ್ರಮಾಣಕ್ಕೆ ತಕ್ಕಂತೆ ಅದರಲ್ಲಿಯೂ ಮಕ್ಕಳಿಗೆ ಹಾಲು ಸಿಗುತ್ತಿಲ್ಲ, ಇದರಿಂದಾಗಿ ಪೋಷಕಾಂಶದ ಕೊರತೆ ದೊಡ್ಡ ಪ್ರಮಾಣದಲ್ಲಿದೆ. ಒಂದು ನಿಶ್ಶಕ್ತ ಪೀಳಿಗೆಯನ್ನಿಟ್ಟುಕೊಂಡು ನಾವು ಅಭಿವೃದ್ಧಿಯನ್ನು ಸಾಧಿಸಲಾರೆವು ಒಬ್ಬನಿಗೆ ಕನಿಷ್ಟ  ದಿನವೊಂದಕ್ಕೆ ಇನ್ನೂರು ಮಿ.ಲೀಟರ್ ನಷ್ಟಾದರೂ ಹಾಲು ದೊರಯುವಂತಾಗಬೇಕು ಎಂದು ಪ್ರತಿಪಾದಿಸುತ್ತಿದ್ದರು.

ಮುಂದಿನ ದಿನಗಳಲ್ಲಿ ಈ ತಂದೆ ಮತ್ತು ಮಗ ಇವರ ಸಾಮಾಜಿಕ ಕೆಲಸಗಳು ಹೊಸ ವಿಸ್ತಾರ ಮತ್ತು ಎತ್ತರಗಳನ್ನು ಪಡೆದವು.

ದೇಶಾದ್ಯಂತ ಚಳುವಳಿಗಳು ಹೆಚ್ಚಾಗುತ್ತ ನಡೆದಿದ್ದವು. ಜಯಪ್ರಕಾಶ ನಾರಾಯಣ ಅವರ ಸಂಪೂರ್ಣ ಕ್ರಾಂತಿಯ ಮೊಳಗುವಿಕೆ ಯುವಕರನ್ನು ಅಪಾರ ಪ್ರಮಾಣದಲ್ಲಿ ಬೀದಿಗಿಳಿಯುವಂತೆ ಮಾಡಿತು.

1974ರಲ್ಲಿ ನನ್ನ ಕಾಲೇಜು ವಿದ್ಯೆಯನ್ನು ಮುಗಿಸಿ ನಾನು ಮನೆಗೆ ಬಂದೆ, ಮುಂದೇನು ? ಎಂಬ ಗುರಿ ನನಗೂ ಇರಲಿಲ್ಲ. ಆಗಲೇ ಸಾಕಷ್ಟು ವಿದ್ಯಾರ್ಥಿ ಚಳುವಳಿಗಳಲ್ಲಿ ಭಾಗವಹಿಸಿದ್ದೆ. ಚೂರು ಪಾರು ಸಾಹಿತ್ಯ ಮತ್ತು ರಂಗಭೂಮಿಯ ಆಸಕ್ತಿ ಬೆಳೆಸಿಕೊಂಡಿದ್ದೆ. ಮನೆಗೆ ಬಂದರೆ ಅಪ್ಪನಿಗೆ ನಿವೃತ್ತಿಯ ವಯಸ್ಸಾಗಿತ್ತು. ನಾನು ಕೂಡಲೇ ದುಡಿಮೆಗೆ ತೊಡಗುವ ಅಗತ್ಯವಿತ್ತು. ಬಿಟ್ಟು ಬೇರೆಡೆಗೆ ಹೋಗಲು ಯಾವ ನೆಲೆಯೂ ಇರಲಿಲ್ಲ.

ಮನೆಗೆ ಬಂದ ನಂತರ ಕೆಲವು ತಿಂಗಳು ಅಲ್ಲಿ ಇಲ್ಲಿ ಕೆಲಸ ಹುಡುಕುವುದರಲ್ಲಿ ಕಳೆಯಿತು. ಆ ಸಮಯದಲ್ಲಿ ತೋಟಕ್ಕೆ ಬಂದ ಸಿ.ಎಂ.ಪೂಣಚ್ಚನವರು ನನ್ನನ್ನು ನೋಡಿ  ನೀವು ಯಾಕೆ ಮಿಲಿಟರಿ ಸೇರಬಾರದು? ಎಂದರು.

“ಸೆಲೆಕ್ಟ್ ಆದರೆ ಖಂಡಿತ ಸೇರತ್ತೇನೆ. ಆದರೆ ಈಗ ರಿಕ್ರೂಟ್ ಮೆಂಟ್ ಇಲ್ಲವಲ್ಲ” ಎಂದೆ.

“ನೀವು ಬೆಂಗಳೂರಿಗೆ ಹೋಗಿ ಅಲ್ಲಿ ಪ್ರತಿದಿನ ಆಯ್ಕೆ ನಡೆಯುತ್ತಿದೆ. ನಮ್ಮ ಮಗಳ ಮನೆ ಇದೆ ಅಲ್ಲಿ ನೀವು ಉಳಿದುಕೊಳ್ಳಬಹುದು” ಎಂದರು. ಅಂತೆಯೇ ನನಗೊಂದು ಪತ್ರ ಬರೆದುಕೊಟ್ಟು ಬೆಂಗಳೂರಿಗೆ ಹೋಗುವಂತೆ ತಿಳಿಸಿದರು.

ಇಲ್ಲಿ ನಾನು ಇನ್ನೊಂದು ವಿಚಾರವನ್ನು ತಿಳಿಸಬೇಕು. ಪೂಣಚ್ಚನವರು ನನ್ನನ್ನು ಪ್ರಾಥಮಿಕ ಶಾಲೆಯ ಹುಡುಗನಾಗಿದ್ದಾಗಲೇ ಕಂಡವರು. ಅವರು ನನ್ನನ್ನು “ನೀವು” ಎಂದದ್ದಕ್ಕೆ ನಾನು “ಸರ್ ನೀವು ನನ್ನನ್ನು ನೀನು ಎಂದೇ ಕರೆಯಿರಿ” ಎಂದೆ.

ಆಗ ಅವರು “ಇಲ್ಲ ಆಗ ನೀವು ಚಿಕ್ಕವರಿದ್ದಿರಿ, ಈಗ ಹಾಗಲ್ಲ ಪ್ರತಿಯೊಬ್ಬರಿಗೂ ಒಂದು ವ್ಯಕ್ತಿತ್ವವಿರುತ್ತದೆ, ನಾವು ಅದನ್ನು ಗೌರವಿಸಬೇಕು” ಎಂದರು.

ನಾನು ಬೆಂಗಳೂರಿನಲ್ಲಿ ಕೆಲವು ದಿನಗಳ ಕಾಲ ಪೂಣಚ್ಚನವರ ಮಗಳು ವಿಜಯಾ (ಪತಿ ಬ್ರಿಗೇಡಿಯರ್ ಕೆ.ಎಂ.ಮುತ್ತಣ್ಣ) ಅವರ ಮನೆಯಲ್ಲಿದ್ದೆ. ಸೈನ್ಯಕ್ಕೆ ಆಯ್ಕೆಯೂ ಆದೆ.

ನಾನು ಬೆಂಗಳೂರಿನಲ್ಲಿ ಇರುವಾಗಲೇ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾಯಿತು. ಮಹಾತ್ಮ ಗಾಂಧಿ ರಸ್ತೆಯ ಪ್ರಜಾವಾಣಿ ಕಛೇರಿ ಮುಂದೆ ವಿಷಯ ತಿಳಿದುಕೊಳ್ಳಲು ಜನ ಗುಂಪು ಸೇರಿದ್ದರು.

ನಾನು ಮನೆಗೆ ಬಂದೆ. ಕಾರಣಾಂತರದಿಂದ ನನಗೆ ಸೈನಕ್ಕೆ ಹೋಗಲು ಸಾಧ್ಯವಾಗಲಿಲ್ಲ. ನಾನು ಇಲ್ಲೇ ಉಳಿದುಬಿಟ್ಟೆ.

ನಂತರ ಪೂಣಚ್ಚನವರಿಗೆ ವಿಷಯ ತಿಳಿಯಿತು. ಸರಿ ನೋಡೋಣ ಎಂದರು.

ಆ ವೇಳೆಗಾಗಲೇ ರವೀಂದ್ರನಾಥ ಅವರು ಪೂರ್ಣಿಮಾ ಎಸ್ಟೇಟ್‌ನಲ್ಲಿಯೂ ಪಶುಸಂಗೋಪನೆ ಪ್ರಾರಂಭಿಸಿದ್ದರು.

ಅದನ್ನು ನೋಡಿಕೊಳ್ಳುತ್ತಿದ್ದವರೊಬ್ಬರು ಬಿಟ್ಟುಹೋಗಿದ್ದರು. ಆಗ ರವೀಂದ್ರನಾಥರು ನೀನು ಇಲ್ಲೇ ಯಾಕೆ ಕೆಲಸ ಮಾಡಬಾರದು ಎಂದು ಕೇಳಿದರು. ನನಗೂ ಒಂದು ಕೆಲಸದ ಅನಿವಾರ್ಯವಿತ್ತು. ನನಗೆ ಆ ಸಂದರ್ಭದಲ್ಲಿ ಬೇರೆ ಆಯ್ಕೆ ಇರಲಿಲ್ಲವಾದ್ದರಿಂದ ಒಪ್ಪಿದೆ. ಸದ್ಯಕ್ಕೆ ನಿನಗೆ ಹೆಚ್ಚು ಸಂಬಳ ಕೊಡಲು ಸಾಧ್ಯವಾಗದು. ಕೆಲಸ ಚೆನ್ನಾಗಿ ಕಲಿ ಮುಂದೆ ನೋಡೋಣ ಎಂದಿದ್ದರು. 1975 ಸೆಪ್ಟಂಬರ್‌ನಲ್ಲಿ ಪೂರ್ಣಿಮಾ ಡೈರಿಯಲ್ಲಿ ದಿನಗೂಲಿ ನೌಕರನಾಗಿ ಸೇರಿಕೊಂಡೆ.

ಹಾರ್ಲೆ ತೋಟಗಳ ಸಮೂಹದಲ್ಲಿ ನನ್ನ ದಿನಚರಿ ಪ್ರಾರಂಭವಾಯಿತು. ಆ ನಂತರ ಗಣಪಯ್ಯ ಮತ್ತು ರವೀಂದ್ರನಾಥರ ಹತ್ತಿರದ ನೋಟ ಲಭ್ಯವಾಯಿತು.

ಪ್ರಸಾದ್ ರಕ್ಷಿದಿ

(ಪ್ರಸಾದ್ ರಕ್ಷಿದಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಜೈ ಕರ್ನಾಟಕ ಸಂಘ’ ಎಂಬ ವೇದಿಕೆ ಸ್ಥಾಪಿಸಿದ ಅವರು ಸುತ್ತಲಿನ ಕಾರ್ಮಿಕರನ್ನೆಲ್ಲ ಒಟ್ಟುಹಾಕಿ ಅವರಿಗೆ ರಾತ್ರಿಶಾಲೆಗಳ ಮೂಲಕ ಅಕ್ಷರಾಭ್ಯಾಸ ಕಲಿಸಿದವರು. ಕೂಲಿ ಕಾರ್ಮಿಕರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟಿ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಅವರ ಆಸಕ್ತಿಯ ಕ್ಷೇತ್ರಗಳು. ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ.)


ಇದನ್ನೂ ಓದಿ: ರೈಲ್ವೇ ಮಾರ್ಗ ಮಲೆನಾಡಿನ ಸಾವಿರಾರು ಎಕರೆ ಪರಿಸರ ನುಂಗಿದ್ದು ಹೀಗೆ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...