Homeಅಂಕಣಗಳುತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ನಾನು ಮೊದಲ ಕೆಲಸಕ್ಕೆ ಸೇರಿದ್ದು ಹೀಗೆ: ಪ್ರಸಾದ್ ರಕ್ಷಿದಿ

ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ನಾನು ಮೊದಲ ಕೆಲಸಕ್ಕೆ ಸೇರಿದ್ದು ಹೀಗೆ: ಪ್ರಸಾದ್ ರಕ್ಷಿದಿ

- Advertisement -
- Advertisement -

ಕಳೆದು ಹೋದ ದಿನಗಳು – 12

1971 ರಲ್ಲಿ ಹೊಸ ಭರವಸೆಗಳೊಂದಿಗೆ ಬಂದ ಇಂದಿರಾ ಸರ್ಕಾರ  ಭೂಸುಧಾರಣೆ, ಮತ್ತಷ್ಟು ಬ್ಯಾಂಕುಗಳ ರಾಷ್ಟ್ರೀಕರಣ ಮುಂತಾದ ಕೆಲವು ಕ್ರಾಂತಿಕಾರಿ ಕಾರ್ಯಕ್ರಮಗಳನ್ನೇನೋ ತಂದಿತು. ಆದರೆ ರಾಜಕೀಯವಾಗಿ ಹಲವು ತಪ್ಪುಗಳನ್ನು ಮಾಡುತ್ತ ಸಾಗಿತು. ಮುಖ್ಯವಾಗಿ ರಾಜ್ಯಗಳ ನಾಯಕರು ಕಡೆಗಣಿಸಲ್ಪಟ್ಟರು. ಇಂದಿರಾ ಸರ್ವೋಚ್ಛ ನಾಯಕಿಯಾಗಿ ಪಕ್ಷ ಜೀ ಹುಜೂರ್‌ಗಳ ಸಂತೆಯಾಗತೊಡಗಿತು. ವಿರೋಧ ಪಕ್ಷಗಳನ್ನು ವ್ಯವಸ್ಥಿತವಾಗಿ ದಮನ ಮಾಡುವ ಕಾರ್ಯ ಆರಂಭವಾಗಿತ್ತು. ಮುಖ್ಯವಾಗಿ ಎಡಪಕ್ಷಗಳನ್ನು ಮತ್ತು ಕಾರ್ಯಕರ್ತರನ್ನು ಹಣಿಯಲಾರಂಭಿಸಿದರು. ಎಡಪಕ್ಷಗಳ ಒಂದು ವಿಭಾಗ ಇಂದಿರಾ ಜೊತೆಯಲ್ಲೇ ಇದ್ದರೂ ಅವರಲ್ಲೂ ಕೆಲವರಿಗೆ ಭ್ರಮನಿರಸನವಾಗುತ್ತಿತ್ತು. ಪಶ್ಚಿಮ ಬಂಗಾಳದಲ್ಲಿ ಸಿದ್ಧಾರ್ಥ ಶಂಕರ್ ರಾಯ್ ಅವರ ಸರ್ಕಾರವಂತೂ ಎನ್ ಕೌಂಟರ್ ಸ್ಪೆಶಲಿಸ್ಟ್ ಸರ್ಕಾರವಾಗಿ 1977ರ ತುರ್ತು ಪರಿಸ್ಥಿತಿಯನ್ನು 71 ರಿಂದಲೇ ಜಾರಿಗೆ ತಂದಿತ್ತು.

ಇದರೊಂದಿಗೆ ಇತರ ಸಾಮಾಜಿಕ ಸಮಸ್ಯೆಗಳಿದ್ದವು. ಬೆಲೆಗಳು ಒಂದೇ ಸಮನೆ ಏರತೊಡಗಿತ್ತು. 1971ರಲ್ಲಿ ಇಂದಿರಾ ಬೆಂಬಲಕ್ಕೆ ನಿಂತಿದ್ದ ಯುವ ಸಮೂಹದಲ್ಲೂ ಅತೃಪ್ತಿ ಬೆಳೆಯುತ್ತಿತ್ತು. ವಿದ್ಯಾರ್ಥಿ ಚಳುವಳಿಗಳು ನಿರಂತರವಾಗಿ ನಡೆಯತೊಡಗಿದವು.

ದಕ್ಷಿಣದ ರಾಜ್ಯಗಳಲ್ಲಿ ಇದರ ಬಿಸಿ ಬೇಗ ತಟ್ಟಲಿಲ್ಲ. ಕಾರಣ ಕರ್ನಾಟಕದಲ್ಲಿ ದೇವರಾಜ ಅರಸರ ಜನಪರ ಕೆಲಸಗಳು, ಹಾಗೇ ದಕ್ಷಿಣದ ಇತರ ರಾಜ್ಯಗಳಲ್ಲಿದ್ದ ಬೇರೆ ಬೇರೆ ಪಕ್ಷಗಳ ಸರ್ಕಾರಗಳು ಕೂಡಾ ಒಂದಷ್ಟು ಜನಪರವಾಗಿಯೇ ಇದ್ದವು.

ಈ ಸಮಯದಲ್ಲಿ ಗಮನಿಸಬೇಕಾದ ವಿಚಾರವೆಂದರೆ ಅದು ಭಾರತದ ಸಾಂಸ್ಕೃತಿಕ ವಲಯದ ಚಟುವಟಿಕೆಗಳು. ಆ ಸಮಯದಲ್ಲಿ, ಸಾಹಿತಿಗಳು, ನಾಟಕಕಾರರು, ರಂಗಭೂಮಿಯವರು, ಚಿಂತಕರು ಸಿನಿಮಾ ಮತ್ತು ಪತ್ರಿಕಾ ಮಾಧ್ಯಮದವರು ಹೀಗೆ ಎಲ್ಲ ವಿಭಾಗಗಳವರೂ ಹೊಸ ಹೊಸ ವಿಚಾರಗಳೊಂದಿಗೆ ಪ್ರಯೋಗಶೀಲರಾಗಿ ಹೊರಹೊಮ್ಮಿದ್ದರು. ಇವೆರಲ್ಲರ ವಿಚಾರವೂ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿತ್ತು.

ಬಸವಳಿದು ಕುಳಿತಂತಿದ್ದ ವಿರೋಧ ಪಕ್ಷಗಳು ಆಗ ಮತ್ತೊಮ್ಮೆ ದೇಶದ ರಾಜಕೀಯದಲ್ಲಿ ಮತ್ತೆ ಹೊಸ ಪ್ರಯೋಗಗಳಿಗೆ ತೊಡಗಿದರು. ಒಂದು ಕಡೆ ಎಡಪಕ್ಷಗಳು, ಲೋಹಿಯಾವಾದಿ ಪಕ್ಷಗಳು ಒಂದಾಗಿ ಹೋರಾಡಬೇಕೆಂದು ಯೋಚಿಸುತ್ತಿದ್ದರೆ, ಉದಾರವಾದಿ ಬಲಪಂಥೀಯ ಪಕ್ಷಗಳು, ರೈತ ಸಂಘಟನೆಗಳು ಸೇರಿ ಹೊಸ ಗುಂಪಾಗುವ ಚಿಂತನೆಯಲ್ಲಿದ್ದವು. ರಾಷ್ಟ್ರವಾದಿ ಪಕ್ಷ ಜನಸಂಘ ತನ್ನದೇ ಸಂಘಟನೆಯನ್ನು ಬಲಪಡಿಸುವ ಪ್ರಯತ್ನದಲ್ಲಿತ್ತು.

ಆ ಸಂದರ್ಭದಲ್ಲಿ 1974 ರಲ್ಲಿ ಹುಟ್ಟಿದ್ದು ಚರಣ್ ಸಿಂಗ್ ಅವರ ನೇತೃತ್ವದಲ್ಲಿ ಏಳು ಪಕ್ಷಗಳು ಜೊತೆಗೂಡಿದ ಭಾರತೀಯ ಲೋಕದಳ. ರಾಜಾಜಿಯವರು ಸ್ಥಾಪಿಸಿದ್ದ ಸ್ವತಂತ್ರ ಪಕ್ಷ ಅದರಲ್ಲಿ ವಿಲೀನವಾಯಿತು. ಲೋಕದಳ ಹಳೆಯ ಕಾಂಗ್ರೆಸ್ಸಿನ ಜೋಡೆತ್ತಿನ ಚಿನ್ಹೆಯನ್ನು ಪಡೆದುಕೊಂಡಿತು. ಭಾರತೀಯ ಲೋಕದಳದ ಕರ್ನಾಟಕ ರಾಜ್ಯದ ಅಧ್ಯಕ್ಷರಾಗಿ ಗಣಪಯ್ಯನವರೇ ಆಯ್ಕೆಯಾದರು.

ಗಣಪಯ್ಯ ಮತ್ತೆ ಮೊದಲಿಗಿಂತ ಹೆಚ್ಚು ಉತ್ಸಾಹದಿಂದ ಪಕ್ಷ ಕಟ್ಟುವ ಕೆಲಸದಲ್ಲಿ ತೊಡಗಿಕೊಂಡರು.

1958ರಲ್ಲಿ ಗಣಪಯ್ಯನವರ ಮಗ ರವೀಂದ್ರನಾಥರ ವಿವಾಹವಾಗಿತ್ತು.(ಪತ್ನಿ ಕಮಲಾ ರವೀಂದ್ರನಾಥ) ಅವರು ಹಾರ್ಲೆಯ ಪಕ್ಕದಲ್ಲಿರುವ ಇವರದ್ದೇ ಆದ ವೊಡ್‌ಗಲ್ ತೋಟದಲ್ಲಿ ವಾಸಿಸುತ್ತಿದ್ದರು. ರವೀಂದ್ರನಾಥ ದಂಪತಿಗೆ ಮೂವರು ಮಕ್ಕಳು. ಮಕ್ಕಳು ಬೆಂಗಳೂರಿನಲ್ಲಿ ಓದುತ್ತಿದ್ದರಿಂದ ರವೀಂದ್ರನಾಥರು ಕೆಲಕಾಲ ಬೆಂಗಳೂರಿನಲ್ಲಿಯೂ ಇರುತ್ತಿದ್ದರು.

ರವೀಂದ್ರನಾಥ ಅವರು 1972ರ ಸಮಯದಲ್ಲಿ ಪ್ರಥಮಬಾರಿಗೆ ಸಕಲೇಪುರದಲ್ಲಿ ಒಂದು ಕೋಳಿಫಾರಂ ಅನ್ನು ಪ್ರಾರಂಭಿಸಿದ್ದರು. ಕೆಲಕಾಲ ಅದನ್ನು ನಡೆಸಿದರು. ಮಲೆನಾಡಿನ ಸಕಲೇಶಪುರದಲ್ಲಿ ಅದು ಚೆನ್ನಾಗಿ ನಡೆಯಲಿಲ್ಲ. ಅದನ್ನು ನಿಲ್ಲಿಸಿ ನಂತರ ಪಶುಸಂಗೋಪನೆಗೆ ತೊಡಗಿದರು. ಸಕಲೇಶಪುರಕ್ಕೆ ಮಿಶ್ರತಳಿ ಹಸುಗಳನ್ನು ತಂದು ಸಾಕಲು ಪ್ರಾರಂಬಿಸಿದ ಮೊದಲಿಗರಲ್ಲಿ ಇವರೂ ಪ್ರಮುಖರು. ಮೊದಲು ಸಕಲೇಶಪುರ ನಗರದಲ್ಲಿ ಪ್ರಾರಂಭಿಸಿ ನಿಧಾನವಾಗಿ ಹಾರ್ಲೆ ಎಸ್ಟೇಟ್, ಹಾಗೂ ಇವರದ್ದೇ ಉಸ್ತುವಾರಿಯ ಹಲವು ತೋಟಗಳಲ್ಲಿ ಪಶುಸಾಕಣೆಯನ್ನು ವಿಸ್ತರಿಸಿದರು. ರವೀಂದ್ರನಾಥರ ಪ್ರಯತ್ನದಿಂದಾಗಿ ಸಕಲೇಶಪುರ ಹಾಲು ಉತ್ಪಾದಕರ ಸಂಘ ಅಸ್ತಿತ್ವಕ್ಕೆ ಬಂದಿತು. ಹೈನುಗಾರಿಕೆ ಸಕಲೇಶಪುರ ತಾಲ್ಲೂಕಿನಲ್ಲಿ ಕಾಫಿಯ ಜೊತೆ ಒಂದು ಉಪವೃತ್ತಿಯಾಗಿ ಬೆಳೆಯುವಲ್ಲಿ ರವೀಂದ್ರನಾಥರ ಕೊಡುಗೆ ದೊಡ್ಡದು.

ಡೈರಿ ಹಸುಗಳು

ರವೀಂದ್ರನಾಥರು ರೋಟರಿ ಸಂಸ್ಥೆಯ ಸದಸ್ಯರಾಗಿದ್ದರು. ಅವರ ರೋಟರಿ ಸಂಸ್ಥೆ ಮತ್ತು ಅದರಿಂದ ಲಭ್ಯವಾದ ಜನ ಸಂಪರ್ಕಗಳನ್ನು ಅವರ ಅನೇಕ ಜನಪರ ಕೆಲಸಗಳಿಗೆ ವೇದಿಕೆಯಾಗಿ ಬಳಸಿಕೊಂಡರು. ಪಶುಸಂಗೋಪನೆಯ ಹಲವಾರು ತಜ್ಞರುಗಳನ್ನು ಕರೆಸಿ ಭಾಷಣ, ವಿಚಾರ ಸಂಕಿರಣ, ಪ್ರಾತ್ಯಕ್ಷಿಕೆ, ಅದಕ್ಕೆ ಸಂಬಂಧಪಟ್ಟ ಚಲನಚಿತ್ರ ಪ್ರದರ್ಶನಗಳು ನಡೆಯತೊಡಗಿದವು. ನಮ್ಮ ಜನಸಂಖ್ಯೆಯ ಪ್ರಮಾಣಕ್ಕೆ ತಕ್ಕಂತೆ ಅದರಲ್ಲಿಯೂ ಮಕ್ಕಳಿಗೆ ಹಾಲು ಸಿಗುತ್ತಿಲ್ಲ, ಇದರಿಂದಾಗಿ ಪೋಷಕಾಂಶದ ಕೊರತೆ ದೊಡ್ಡ ಪ್ರಮಾಣದಲ್ಲಿದೆ. ಒಂದು ನಿಶ್ಶಕ್ತ ಪೀಳಿಗೆಯನ್ನಿಟ್ಟುಕೊಂಡು ನಾವು ಅಭಿವೃದ್ಧಿಯನ್ನು ಸಾಧಿಸಲಾರೆವು ಒಬ್ಬನಿಗೆ ಕನಿಷ್ಟ  ದಿನವೊಂದಕ್ಕೆ ಇನ್ನೂರು ಮಿ.ಲೀಟರ್ ನಷ್ಟಾದರೂ ಹಾಲು ದೊರಯುವಂತಾಗಬೇಕು ಎಂದು ಪ್ರತಿಪಾದಿಸುತ್ತಿದ್ದರು.

ಮುಂದಿನ ದಿನಗಳಲ್ಲಿ ಈ ತಂದೆ ಮತ್ತು ಮಗ ಇವರ ಸಾಮಾಜಿಕ ಕೆಲಸಗಳು ಹೊಸ ವಿಸ್ತಾರ ಮತ್ತು ಎತ್ತರಗಳನ್ನು ಪಡೆದವು.

ದೇಶಾದ್ಯಂತ ಚಳುವಳಿಗಳು ಹೆಚ್ಚಾಗುತ್ತ ನಡೆದಿದ್ದವು. ಜಯಪ್ರಕಾಶ ನಾರಾಯಣ ಅವರ ಸಂಪೂರ್ಣ ಕ್ರಾಂತಿಯ ಮೊಳಗುವಿಕೆ ಯುವಕರನ್ನು ಅಪಾರ ಪ್ರಮಾಣದಲ್ಲಿ ಬೀದಿಗಿಳಿಯುವಂತೆ ಮಾಡಿತು.

1974ರಲ್ಲಿ ನನ್ನ ಕಾಲೇಜು ವಿದ್ಯೆಯನ್ನು ಮುಗಿಸಿ ನಾನು ಮನೆಗೆ ಬಂದೆ, ಮುಂದೇನು ? ಎಂಬ ಗುರಿ ನನಗೂ ಇರಲಿಲ್ಲ. ಆಗಲೇ ಸಾಕಷ್ಟು ವಿದ್ಯಾರ್ಥಿ ಚಳುವಳಿಗಳಲ್ಲಿ ಭಾಗವಹಿಸಿದ್ದೆ. ಚೂರು ಪಾರು ಸಾಹಿತ್ಯ ಮತ್ತು ರಂಗಭೂಮಿಯ ಆಸಕ್ತಿ ಬೆಳೆಸಿಕೊಂಡಿದ್ದೆ. ಮನೆಗೆ ಬಂದರೆ ಅಪ್ಪನಿಗೆ ನಿವೃತ್ತಿಯ ವಯಸ್ಸಾಗಿತ್ತು. ನಾನು ಕೂಡಲೇ ದುಡಿಮೆಗೆ ತೊಡಗುವ ಅಗತ್ಯವಿತ್ತು. ಬಿಟ್ಟು ಬೇರೆಡೆಗೆ ಹೋಗಲು ಯಾವ ನೆಲೆಯೂ ಇರಲಿಲ್ಲ.

ಮನೆಗೆ ಬಂದ ನಂತರ ಕೆಲವು ತಿಂಗಳು ಅಲ್ಲಿ ಇಲ್ಲಿ ಕೆಲಸ ಹುಡುಕುವುದರಲ್ಲಿ ಕಳೆಯಿತು. ಆ ಸಮಯದಲ್ಲಿ ತೋಟಕ್ಕೆ ಬಂದ ಸಿ.ಎಂ.ಪೂಣಚ್ಚನವರು ನನ್ನನ್ನು ನೋಡಿ  ನೀವು ಯಾಕೆ ಮಿಲಿಟರಿ ಸೇರಬಾರದು? ಎಂದರು.

“ಸೆಲೆಕ್ಟ್ ಆದರೆ ಖಂಡಿತ ಸೇರತ್ತೇನೆ. ಆದರೆ ಈಗ ರಿಕ್ರೂಟ್ ಮೆಂಟ್ ಇಲ್ಲವಲ್ಲ” ಎಂದೆ.

“ನೀವು ಬೆಂಗಳೂರಿಗೆ ಹೋಗಿ ಅಲ್ಲಿ ಪ್ರತಿದಿನ ಆಯ್ಕೆ ನಡೆಯುತ್ತಿದೆ. ನಮ್ಮ ಮಗಳ ಮನೆ ಇದೆ ಅಲ್ಲಿ ನೀವು ಉಳಿದುಕೊಳ್ಳಬಹುದು” ಎಂದರು. ಅಂತೆಯೇ ನನಗೊಂದು ಪತ್ರ ಬರೆದುಕೊಟ್ಟು ಬೆಂಗಳೂರಿಗೆ ಹೋಗುವಂತೆ ತಿಳಿಸಿದರು.

ಇಲ್ಲಿ ನಾನು ಇನ್ನೊಂದು ವಿಚಾರವನ್ನು ತಿಳಿಸಬೇಕು. ಪೂಣಚ್ಚನವರು ನನ್ನನ್ನು ಪ್ರಾಥಮಿಕ ಶಾಲೆಯ ಹುಡುಗನಾಗಿದ್ದಾಗಲೇ ಕಂಡವರು. ಅವರು ನನ್ನನ್ನು “ನೀವು” ಎಂದದ್ದಕ್ಕೆ ನಾನು “ಸರ್ ನೀವು ನನ್ನನ್ನು ನೀನು ಎಂದೇ ಕರೆಯಿರಿ” ಎಂದೆ.

ಆಗ ಅವರು “ಇಲ್ಲ ಆಗ ನೀವು ಚಿಕ್ಕವರಿದ್ದಿರಿ, ಈಗ ಹಾಗಲ್ಲ ಪ್ರತಿಯೊಬ್ಬರಿಗೂ ಒಂದು ವ್ಯಕ್ತಿತ್ವವಿರುತ್ತದೆ, ನಾವು ಅದನ್ನು ಗೌರವಿಸಬೇಕು” ಎಂದರು.

ನಾನು ಬೆಂಗಳೂರಿನಲ್ಲಿ ಕೆಲವು ದಿನಗಳ ಕಾಲ ಪೂಣಚ್ಚನವರ ಮಗಳು ವಿಜಯಾ (ಪತಿ ಬ್ರಿಗೇಡಿಯರ್ ಕೆ.ಎಂ.ಮುತ್ತಣ್ಣ) ಅವರ ಮನೆಯಲ್ಲಿದ್ದೆ. ಸೈನ್ಯಕ್ಕೆ ಆಯ್ಕೆಯೂ ಆದೆ.

ನಾನು ಬೆಂಗಳೂರಿನಲ್ಲಿ ಇರುವಾಗಲೇ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾಯಿತು. ಮಹಾತ್ಮ ಗಾಂಧಿ ರಸ್ತೆಯ ಪ್ರಜಾವಾಣಿ ಕಛೇರಿ ಮುಂದೆ ವಿಷಯ ತಿಳಿದುಕೊಳ್ಳಲು ಜನ ಗುಂಪು ಸೇರಿದ್ದರು.

ನಾನು ಮನೆಗೆ ಬಂದೆ. ಕಾರಣಾಂತರದಿಂದ ನನಗೆ ಸೈನಕ್ಕೆ ಹೋಗಲು ಸಾಧ್ಯವಾಗಲಿಲ್ಲ. ನಾನು ಇಲ್ಲೇ ಉಳಿದುಬಿಟ್ಟೆ.

ನಂತರ ಪೂಣಚ್ಚನವರಿಗೆ ವಿಷಯ ತಿಳಿಯಿತು. ಸರಿ ನೋಡೋಣ ಎಂದರು.

ಆ ವೇಳೆಗಾಗಲೇ ರವೀಂದ್ರನಾಥ ಅವರು ಪೂರ್ಣಿಮಾ ಎಸ್ಟೇಟ್‌ನಲ್ಲಿಯೂ ಪಶುಸಂಗೋಪನೆ ಪ್ರಾರಂಭಿಸಿದ್ದರು.

ಅದನ್ನು ನೋಡಿಕೊಳ್ಳುತ್ತಿದ್ದವರೊಬ್ಬರು ಬಿಟ್ಟುಹೋಗಿದ್ದರು. ಆಗ ರವೀಂದ್ರನಾಥರು ನೀನು ಇಲ್ಲೇ ಯಾಕೆ ಕೆಲಸ ಮಾಡಬಾರದು ಎಂದು ಕೇಳಿದರು. ನನಗೂ ಒಂದು ಕೆಲಸದ ಅನಿವಾರ್ಯವಿತ್ತು. ನನಗೆ ಆ ಸಂದರ್ಭದಲ್ಲಿ ಬೇರೆ ಆಯ್ಕೆ ಇರಲಿಲ್ಲವಾದ್ದರಿಂದ ಒಪ್ಪಿದೆ. ಸದ್ಯಕ್ಕೆ ನಿನಗೆ ಹೆಚ್ಚು ಸಂಬಳ ಕೊಡಲು ಸಾಧ್ಯವಾಗದು. ಕೆಲಸ ಚೆನ್ನಾಗಿ ಕಲಿ ಮುಂದೆ ನೋಡೋಣ ಎಂದಿದ್ದರು. 1975 ಸೆಪ್ಟಂಬರ್‌ನಲ್ಲಿ ಪೂರ್ಣಿಮಾ ಡೈರಿಯಲ್ಲಿ ದಿನಗೂಲಿ ನೌಕರನಾಗಿ ಸೇರಿಕೊಂಡೆ.

ಹಾರ್ಲೆ ತೋಟಗಳ ಸಮೂಹದಲ್ಲಿ ನನ್ನ ದಿನಚರಿ ಪ್ರಾರಂಭವಾಯಿತು. ಆ ನಂತರ ಗಣಪಯ್ಯ ಮತ್ತು ರವೀಂದ್ರನಾಥರ ಹತ್ತಿರದ ನೋಟ ಲಭ್ಯವಾಯಿತು.

ಪ್ರಸಾದ್ ರಕ್ಷಿದಿ

(ಪ್ರಸಾದ್ ರಕ್ಷಿದಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಜೈ ಕರ್ನಾಟಕ ಸಂಘ’ ಎಂಬ ವೇದಿಕೆ ಸ್ಥಾಪಿಸಿದ ಅವರು ಸುತ್ತಲಿನ ಕಾರ್ಮಿಕರನ್ನೆಲ್ಲ ಒಟ್ಟುಹಾಕಿ ಅವರಿಗೆ ರಾತ್ರಿಶಾಲೆಗಳ ಮೂಲಕ ಅಕ್ಷರಾಭ್ಯಾಸ ಕಲಿಸಿದವರು. ಕೂಲಿ ಕಾರ್ಮಿಕರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟಿ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಅವರ ಆಸಕ್ತಿಯ ಕ್ಷೇತ್ರಗಳು. ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ.)


ಇದನ್ನೂ ಓದಿ: ರೈಲ್ವೇ ಮಾರ್ಗ ಮಲೆನಾಡಿನ ಸಾವಿರಾರು ಎಕರೆ ಪರಿಸರ ನುಂಗಿದ್ದು ಹೀಗೆ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....