Homeಅಂಕಣಗಳುರೈಲ್ವೇ ಮಾರ್ಗ ಮಲೆನಾಡಿನ ಸಾವಿರಾರು ಎಕರೆ ಪರಿಸರ ನುಂಗಿದ್ದು ಹೀಗೆ...

ರೈಲ್ವೇ ಮಾರ್ಗ ಮಲೆನಾಡಿನ ಸಾವಿರಾರು ಎಕರೆ ಪರಿಸರ ನುಂಗಿದ್ದು ಹೀಗೆ…

- Advertisement -
- Advertisement -

ಕಳೆದು ಹೋದ ದಿನಗಳು -9

ಅಪ್ಪ ಪೂರ್ಣಿಮಾ ಎಸ್ಟೇಟಿನಲ್ಲಿ ಕೆಲಸಕ್ಕೆ ನಿಂತ ನಂತರದ ಮೊದಲ ಭೇಟಿಯಲ್ಲೇ ಪೂಣಚ್ಚ ಅಪ್ಪನ ಅನುಮಾನಗಳನ್ನು ತೊಡೆದು ಹಾಕಿದ್ದರು. ಅವರು ಅಪ್ಪನೊಡನೆ ಹಳೆಯ ಸ್ನೇಹಿತನಂತೇ ಮಾತಾಡಿದ್ದರು. ಪ್ರಾರಂಭದ ದಿನಗಳಲ್ಲಿ ಅವರು ಬಂದಾಗ ಹಾರ್ಲೆಯಲ್ಲಿ ಗಣಪಯ್ಯನವರ ಬಂಗಲೆಯಲ್ಲೇ ಉಳಿದುಕೊಳ್ಳುತ್ತಿದ್ದರು. ನಂತರ ಅವರು ಬಂದಾಗ ಉಳಿದುಕೊಳ್ಳಲೆಂದು ತೋಟದಲ್ಲೇ ಮನೆಯೊಂದನ್ನು ಕಟ್ಟಿಸಿದರು. ಅದನ್ನು ಹೆಸರಿಗೆ ಪೂರ್ಣಿಮಾ ಬಂಗಲೆ ಎಂದು ಕರೆದರೂ ಅದೊಂದು ಸಾಧಾರಣ ಹಂಚಿನ ಮನೆಯಾಗಿತ್ತು. ನಂತರದ ದಿನಗಳಲ್ಲಿ ಪೂಣಚ್ಚನವರ ಕುಟುಂಬದವರು ತೋಟಕ್ಕೆ ಬಂದಾಗ ಅಲ್ಲೇ ಉಳಿದುಕೊಳ್ಳುತ್ತಿದ್ದರು.

ಅವರು ರೈಲ್ವೇ ಸಚಿವರಾಗಿದ್ದಾಗ ಒಮ್ಮೆ ಕರ್ನಾಟಕಕ್ಕೆ ಬಂದವರು ತೋಟದಲ್ಲಿ ಉಳಿಯುತ್ತೇನೆ ಎಂದಿದ್ದರು. ಆಗ ಹಾಸನ ಮಂಗಳೂರು ರೈಲ್ವೇ ಕೆಲಸ ನಡೆಯುತ್ತಿತ್ತು. ಅವರು ಬರುವ ಒಂದು ವಾರದ ಮುಂಚೆ ಪೋಲಿಸ್ ಅಧಿಕಾರಿಗಳು ಮತ್ತು ತಾಲ್ಲೂಕಿನ ತಹಸೀಲ್ದಾರರು ಸಚಿವರ ವಾಸ್ತವ್ಯದ ಸ್ಥಳ ಪರಿಶೀಲನೆಗೆ ಬಂದರು. ಆಗ ಅಪ್ಪ ಅಧಿಕಾರಿಗಳಿಗೆ ಬಂಗಲೆಯನ್ನು ತೋರಿಸಲು ಕರೆದುಕೊಂಡು ಹೋದರು. ಆ ಮನೆಯನ್ನು ನೋಡಿ ತಹಸೀಲ್ದಾರರು ದಂಗಾಗಿದ್ದರು.

ಅವರು ಅಪ್ಪನಲ್ಲಿ “ಇದು ನಿಮ್ಮ ವಾಸದ ಮನೆನಾ? ಮಿನಿಸ್ಟರು ಬಂದಾಗ ಎಲ್ಲಿರ್ತಾರೆ? ಎಂದರಂತೆ!

ಆಗ ಅಪ್ಪ “ಇದೇ ಬಂಗಲೆಯಲ್ಲಿ ಅವರು ಬಂದಾಗ ಉಳಿಯೋದು” ಎಂದರು.

ಶಿರಾಡಿ ಘಾಟ್ ನಲ್ಲಿ ಹಾಸನ ಮಂಗಳೂರು ರೈಲ್ವೆ

“ಇದಾ ನಾವೇನೋ ದೊಡ್ಡ ಮನೆ ಇರುತ್ತೆ ಅಂದ್ರೆ ಇದೇನಿದು, ಒಂದೊಳ್ಳೆ ಬಂಗಲೆ ಕಟ್ಸಕೆ ಹೇಳಿ ನಿಮ್ ಸಾವ್ಕಾರ್ರಿಗೆ” ಎಂದು ಅಧಿಕಾರಿಗಳು ವಾಪಸ್ ಹೋದರು.

ಅಧಿಕಾರಿಗಳು ಆ ಸಲ ಪೂಣಚ್ಚನವರಿಗೆ ತೋಟದಲ್ಲಿ ಉಳಿಯುವ ಅವಕಾಶವನ್ನು ಕೊಡಲಿಲ್ಲ. ಬದಲಿಗೆ ಹಾಸನದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದರು.

ಆದರೆ ಪೂಣಚ್ಚ ತೋಟಕ್ಕೊಂದು ಭೇಟಿ ನೀಡಿದರು. ಜೊತೆಯಲ್ಲಿ ಹಲವಾರು ಅಧಿಕಾರಿಗಳು. ಅಪ್ಪ ದೂರದಲ್ಲೆಲ್ಲೋ ನಿಂತು ನೋಡುತ್ತಿದ್ದರು. ಅಧಿಕಾರಿಗಳು ನೋಡುತ್ತಿದ್ದಂತೆ ಪೂಣಚ್ಚ ಸ್ವತಃ ಅಪ್ಪನ ಹತ್ತಿರ ಬಂದು ಹೆಗಲಿಗೆ ಕೈಹಾಕಿ ಸ್ವಲ್ಪದೂರ ಕರೆದುಕೊಂಡು ಹೋಗಿ ಮಾತಾಡುತ್ತ ನಿಂತರು. ಆಗಲೂ ಅವರು ತೋಟದ ವಿಚಾರ ಮಾತಾಡದೆ ಕೌಟುಂಬಿಕ ವಿಚಾರಗಳನ್ನು ಮಾತಾಡಿದ್ದು. ಹೊರಡುವಾಗ ಎರಡು ಒಳ್ಳೆಯ ಪೆನ್ನುಗಳು, ಡೈರಿ ಮುಂತಾದವುಗಳ ಕೊಡುಗೆಯಿತ್ತು ಹೋದರು.

1971 ರವರೆಗೆ ಪೂಣಚ್ಚ ರೈಲ್ವೆ ಮಂತ್ರಿಗಳಾಗಿದ್ದರು. ಮತ್ತೊಂದೆರಡು ಸಲ ಹಾಸನ ಮಂಗಳೂರು ರೈಲ್ವೆ ಕಾಮಗಾರಿ ಪರಿಶೀಲನೆಗೆ ಬಂದಿದ್ದರೂ ಅವರು ತೋಟಕ್ಕೆ ಬರಲಾಗಲಿಲ್ಲ. ಮುಂದೊಂದು ದಿನ ಪೂಣಚ್ಚ ತೋಟಕ್ಕೆ ಬಂದು ಉಳಿದಾಗ ಅಪ್ಪನೊಡನೆ ಮಾತಾಡುತ್ತ ಕೆಲವು ವಿಚಾರ ತಿಳಿಸಿದರು. ಅದು ಒಂದು ಚಾರಿತ್ರಿಕ ಮಹತ್ವದ್ದಾದ್ದರಿಂದ ಇಲ್ಲಿ ಉಲ್ಲೇಖಿಸುತ್ತೇನೆ.

ಪೂಣಚ್ಚ ತೋಟಕ್ಕೆ ವರ್ಷಕ್ಕೆ ಒಮ್ಮೆಯೋ ಎರಡು ಬಾರಿಯೋ ಬರುತ್ತಿದ್ದುದಷ್ಟೆ. ಬಂದಾಗ ತೋಟದವನ್ನು ಸುತ್ತಿ ನೋಡುವರೇ ಹೊರತು, ತೋಟದ ಬಗ್ಗೆ ಒಂದೇ ಒಂದು ಮಾತನ್ನು ಆಡಿದವರಲ್ಲ. ಸಂಜೆ ಅಪ್ಪ ತಾವಾಗಿಯೇ ಬಂಗಲೆಗೆ ಹೋಗಿ ಏನಾದರೂ ಹೇಳಿದರೆ ಕೇಳಿಸಿಕೊಳ್ಳುವರು. ಆಗಲೂ ಅಷ್ಟೆ ಯಾವುದೇ ಟೀಕೆ ಟಿಪ್ಪಣಿ ಇಲ್ಲ.

ರೈಲ್ವೆ ಸಚಿವರಾಗಿ ಪ್ರಧಾನಿ ಇಂದಿರಾ ಜೊತೆ ಪೂಣಚ್ಚ

ಆದರೆ ಅಪ್ಪನೊಡನೆ ಟೀ ಕುಡಿಯುತ್ತಾ ಮಾತಾಡುವರು. ಕೊಡಗಿನ ಎಷ್ಟೋ ಹಳೆಯ ಸಂಗತಿಗಳನ್ನು ಮೆಲುಕು ಹಾಕುವರು. ಆಗ ಹಾಸನ ಮಂಗಳೂರು ರೈಲು ದಾರಿಯ ಬಗ್ಗೆ ಹೇಳುತ್ತಾ. “ಕೆಲವು ಸಂಗತಿಗಳನ್ನು ನಾನು ಮಾತಾಡಬಾರದು. ಆದರೆ ಹಾಸನ ಮಂಗಳೂರು ರೈಲು ದಾರಿಯ ಬಗ್ಗೆ ನಾನು ಏನೂ ಮಾಡಲಾರದ ವ್ಯಥೆ ಇದೆ. ಇದು ನಿಜವಾಗಿ ಮೊದಲು ಸರ್ವೆಯಾದಂತೆ (ಈ ಎಲ್ಲಾ ಸರ್ವೆಗಳೂ ಬ್ರಿಟಿಷ್ ಕಾಲದಲ್ಲಿಯೇ ಆಗಿದ್ದವು) ಸಕಲೇಶಪುರದಿಂದ ಹಾನುಬಾಳು ದೇವರುಂದ ಬೈರಾಪುರ, ಬಿ.ಸಿ.ರೋಡಿಗಾಗಿ ಹೋಗಬೇಕಿತ್ತು. ನಲುವತ್ತು ಕಿ.ಮೀ ಹತ್ತಿರದ ದಾರಿ ಇಷ್ಟು ಅರಣ್ಯ ನಾಶವೂ ಇರಲಿಲ್ಲ. ಖರ್ಚೂ ಬಹಳ ಕಡಿಮೆ ಆಗುತ್ತಿತ್ತು. ಈಗಿನ ದಾರಿ ಎಲ್ಲ ರೀತಿಯಿಂದಲೂ ಸೂಕ್ತವಲ್ಲ. ನಾನು ಮಂತ್ರಿಯಾಗುವಾಗ ಕೆಲಸ ತುಂಬಾ ದೂರ ಸಾಗಿ ಆಗಿತ್ತು, ಈಗ ಇದರ ಬಗ್ಗೆ ಮಾತಾಡಿ ಪ್ರಯೋಜನ ಇಲ್ಲ.” ಎಂದಿದ್ದರು.

ಅದೀಗ ನಿಜವಾಗಿದೆ. ಈ ರೈಲ್ವೇ ಸಾವಿರಾರು ಕೋಟಿಗಳನ್ನು ಕಬಳಿಸಿತು. ಸಾವಿರಾರು ಎಕರೆ ಪರಿಸರವನ್ನು ನುಂಗಿತು. ಈಗ ಮತ್ತೆ ಶಿಶಿಲ ಬೈರಾಪುರ ರಸ್ತೆಯ ಮಾತಾಡುತ್ತಿದ್ದಾರೆ.

1969 ರಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಸುಂಟರಗಾಳಿ ಎದ್ದಿತು. ಪಕ್ಷ ಒಡೆದು ಎರಡು ಹೋಳಾಯಿತು. ಕಾಮರಾಜ- ನಿಜಲಿಂಗಪ್ಪನವರ ಹಿರಿಯರ ಸಂಸ್ಥಾ ಕಾಂಗ್ರೆಸ್ ಒಂದು ಕಡೆಯಾದರೆ ಇಂದಿರಾಗಾಂಧಿ ನಾಯಕತ್ವದ ಹೆಚ್ಚಾಗಿ ಯುವ ಕಾಂಗ್ರೆಸಿಗರೇ ಇದ್ದ ಇಂದಿರಾ ಕಾಂಗ್ರೆಸ್ ಇನ್ನೊಂದು ಭಾಗವಾಗಿತ್ತು.

ಪೂಣಚ್ಚ ಇಂದಿರಾ ಬಣದಲ್ಲೇ ಇದ್ದರು. ಕೆಲವು ಮೂಲಗಳ ಪ್ರಕಾರ ಪೂಣಚ್ಚ ಒಳಗೊಳಗೇ ಸಂಸ್ಥಾ ಕಾಂಗ್ರೆಸ್ಸಿನ ಪರ ಇದ್ದಾರೆಂದು ಕೆಲವರು ಇಂದಿರಾ ಮನಸ್ಸಿನಲ್ಲಿ ತುಂಬಿದ್ದಾರೆಂಬ ಸುದ್ದಿಯಿತ್ತು. ಆದರೆ ಇಂದಿರಾ ಗಾಂಧಿ ಪೂಣಚ್ಚನವರನ್ನು ಮಂತ್ರಿ ಮಂಡಲದಿಂದ ಕೈಬಿಟ್ಟಿರಲಿಲ್ಲ. 1971 ರವರೆಗೂ ಪೂಣಚ್ಚ ಮಂತ್ರಿಗಳಾಗಿಯೇ ಇದ್ದರು. ಇನ್ನೊಂದು  ಮೂಲದ ಪ್ರಕಾರ ಇಂದಿರಾ ನೇರವಾಗಿ ಪೂಣಚ್ಚನವರಲ್ಲಿ ನೀವು ನಿಜಲಿಂಗಪ್ಪನವರ ಚೇಲಾ ಎಂದು ಹೇಳಿದರೆಂದು  ಸುದ್ದಿಯಾಗಿತ್ತು. ಆದರೆ ಅಧಿಕೃತವಾಗಿ ಪೂಣಚ್ಚ ಏನೂ ಹೇಳಲಿಲ್ಲ. ಆದರೆ 1971 ರ ಮಹಾಚುನಾವಣೆಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಪೂಣಚ್ಚನವರ ಹೆಸರಿರಲಿಲ್ಲ. ಮಂಗಳೂರಿನಿಂದ ಕೆ.ಕೆ. ಶೆಟ್ಟರು ಅಭ್ಯರ್ಥಿಯಾಗಿದ್ದರು!

ಪೂಣಚ್ಚನವರ ಮಗ ಸಿ.ಪಿ. ಬೆಳ್ಳಿಯಪ್ಪ ಪುಸ್ತಕ ಓದುತ್ತಾ…

ಆ ಚುನಾವಣೆಯಲ್ಲಿ ಪೂಣಚ್ಚ ಸಂಸ್ಥಾ ಕಾಂಗ್ರೆಸ್‌ನಿಂದ ಅಭ್ಯರ್ಥಿಯಾದರು. ಸಂಸ್ಥಾ ಕಾಂಗ್ರೆಸ್ ಸಂಪೂರ್ಣ ಸೋತಿತು. ಇಂದಿರಾ ಮತ್ತೆ ಪ್ರಧಾನಿಯಾದರು.

ನಂತರ ಪೂಣಚ್ಚ 1976 ರವರೆಗೆ ಹೆಚ್ಚೂ ಕಡಿಮೆ ರಾಜಕಾರಣದಿಂದ ದೂರವುಳಿದಿದ್ದರು.

ಪೂಣಚ್ಚ ಒಳ್ಳೆಯ ಓದುಗರು ಕೂಡಾ ಕನ್ನಡದ ಮೇರು ಕೃತಿಗಳನ್ನೆಲ್ಲ ಓದಿದ್ದರು. ಒಮ್ಮೆ ನಾನು ಸಕಲೇಶಪುರದ  ಗ್ರಂಥಾಲಯದಿಂದ ಕೆಲವು ಪುಸ್ತಕಗಳನ್ನು  ತಂದಿಟ್ಟುಕೊಂಡಿದ್ದೆ. ಅದನ್ನು ನೋಡಿ “ಹೋ ನಿಮಗೆ ಓದುವ ಅಭ್ಯಾಸ ಇದೆ. ಅದು ಬಹಳ ಒಳ್ಳೆಯದು ಬಿಡಬೇಡಿ” ಎಂದರು. ಅವರಾಗ ರಾವ ಬಹದ್ದೂರ್ ಅವರ ಗ್ರಾಮಾಯಣವನ್ನು ಓದುತ್ತಿದ್ದರು.

ಪೂಣಚ್ಚನವರಿಗೆ ನಾಲ್ವರು ಮಕ್ಕಳು. ಹಿರಿಯ ಮಗ ಸಿ.ಪಿ. ಬೆಳ್ಳಿಯಪ್ಪ. ಇವರು Victoria gowramma the last princes of coorg, nuggets from coorg history  ಮುಂತಾದ ಪುಸ್ತಕಗಳ ಬರಹಗಾರರು.

ಕಿಟ್ಟಿ ಗಾಳಿಪಟ

ಇನ್ನೊಬ್ಬಳು ಮಗಳು ವಿಜಯಾ ಬ್ರಿಗೇಡಿಯರ್ ಡಿಯರ್ ಕೆ.ಎಂ. ಮುತ್ತಣ್ಣನವರ ಪತ್ನಿ. ಮೂರನೆಯವರು ಖ್ಯಾತ ಪರಿಸರಾಸಕ್ತ ಕರ್ನಲ್ ಸಿ.ಪಿ ಮುತ್ತಣ್ಣ. ಪರಿಸರ ಹೋರಾಟಕ್ಕಾಗಿ ಡಾ. ಅಬ್ದುಲ್ ಕಲಾಂ ಪ್ರಶಸ್ತಿಯನ್ನು ಪಡೆದಿರುವ ಸಿ.ಪಿ. ಮುತ್ತಣ್ಣ ಈಗ ಕೊಡಗಿಗೆ ರೈಲ್ವೇ ತರುವುದರ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದಾರೆ.

ಕೊನೆಯವರು ವೈದ್ಯೆ ಕಾದಂಬರಿಕಾರ್ತಿ ಕಾವೇರಿ ನಂಬೀಶನ್  The story must not be told, the scent of pepper ಮುಂತಾದ ಐದು ಕಾದಂಬರಿಗಳನ್ನು kitty kite ಸೇರಿದಂತೆ ಮಕ್ಕಳಿಗಾಗಿ ಕೆಲವು ಪುಸ್ತಕಗಳನ್ನು ಬರೆದಿದ್ದಾರೆ. Kitty kite ಕನ್ನಡದಲ್ಲೂ ಬಂದಿದೆ.

ಅಪರೂಪಕ್ಕೊಮ್ಮೆ ಇವರೆಲ್ಲರೂ ಕೂಡಿ ತೋಟಕ್ಕೆ ಬರುವುದಿತ್ತು.

ಡಾ. ಕಾವೇರಿ ಭಾರತದ ಹಲವಾರು ಕಡೆಗಳಲ್ಲಿ ಹಿಂದುಳಿದ ಗ್ರಾಮಾಂತರ ಪ್ರದೇಶದಲ್ಲಿ ವೈದ್ಯೆಯಾಗಿ ಕೆಲಸಮಾಡಿದವರು. ಗ್ರಾಮ ಭಾರತ ಅವರ ಆಯ್ಕೆ. ಸಕಲೇಶಪುರದ ಪಕ್ಕ ಹಳ್ಳಿಯೊಂದರಲ್ಲಿ ಸಣ್ಣ ಆಸ್ಪತ್ರೆಯೊಂದನ್ನು ಸ್ಥಾಪಿಸಿ ಕೆಲಸ ಮಾಡುವ ಉದ್ದೇಶದಿಂದ ರಕ್ಷಿದಿಯಲ್ಲಿ ಒಂದು ಸ್ಥಳವನ್ನು ಕೊಂಡುಕೊಳ್ಳಲು ಬಯಸಿದ್ದರು. ಸ್ಥಳವನ್ನು ಮಾರಬಯಸಿದ್ದ ವ್ಯಕ್ತಿ ಕೊನೆಯ ಕ್ಷಣದಲ್ಲಿ ಕರಾರಿಗೆ ತಪ್ಪಿದ್ದರಿಂದ ಪೂಣಚ್ಚನವರಿಗೆ ನಿರಾಸೆಯಾಯಿತು. ನಂತರ ಸಕಲೇಶಪುರದ ಪಕ್ಕದ ನಾರ್ವೆಗ್ರಾಮದಲ್ಲಿ(ತೇಜಸ್ವಿಯವರ ಕರ್ವಾಲೋ ಕಾದಂಬರಿಯಲ್ಲಿ ಬರುವ ನಾರ್ವೆ ಗ್ರಾಮ ಇದೇ) ನಾರ್ವೆ ಮಹಾಂತಪ್ಪನವರ ಕುಟುಂಬದವರು ಉಚಿತವಾಗಿ ಸ್ಥಳ ಕೊಡುತ್ತೇವೆಂದರೂ ಯಾಕೋ ಅವರು ಮನಸ್ಸು ಮಾಡಲಿಲ್ಲ. ನಂತರ ಅವರು ಕೊಡಗಿನ ಅಮ್ಮತ್ತಿಯ ಬಳಿಯೇ ಒಂದು ಆಸ್ಪತ್ರೆಯನ್ನು ಸ್ಥಾಪಿಸಿದರು.

ಆ ಕಾರಣದಿಂದ ಸಕಲೇಶಪುರದ ಪರಿಸರದಲ್ಲಿ ಸಮಾಜಮುಖಿ ವೈದ್ಯರೊಬ್ಬರ ಸೇವೆ ಸಿಗುವುದು ತಪ್ಪಿಹೋಯಿತು.

  • ಪ್ರಸಾದ್ ರಕ್ಷಿದಿ

(ಪ್ರಸಾದ್ ರಕ್ಷಿದಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಜೈ ಕರ್ನಾಟಕ ಸಂಘ’ ಎಂಬ ವೇದಿಕೆ ಸ್ಥಾಪಿಸಿದ ಅವರು ಸುತ್ತಲಿನ ಕಾರ್ಮಿಕರನ್ನೆಲ್ಲ ಒಟ್ಟುಹಾಕಿ ಅವರಿಗೆ ರಾತ್ರಿಶಾಲೆಗಳ ಮೂಲಕ ಅಕ್ಷರಾಭ್ಯಾಸ ಕಲಿಸಿದವರು. ಕೂಲಿ ಕಾರ್ಮಿಕರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟಿ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಅವರ ಆಸಕ್ತಿಯ ಕ್ಷೇತ್ರಗಳು. ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ.)


ಇದನ್ನೂ ಓದಿ: ಕಳೆದು ಹೋದ ದಿನಗಳು -5: ಗಣಪಯ್ಯ ಎಂಬ ಅನ್ನದಾತ, ಉದ್ಯೋಗದಾತ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...