ಈ ಲಾಕ್ ಡೌನ್ ಕೀಲಿ ಕೀಟಕ್ ಕಾಲದಾಗ ನಮ್ಮೆಲ್ಲರ ಪ್ರೀತಿಯ ಆಂಟಿ ಸೋಷಿಯಲ್ ಮೀಡಿಯಾದಾಗ ಒಬ್ಬರಿಗೊಬ್ಬರು ಟ್ಯಾಗು ಮಾಡಿ, ನಾಮಿನೇಟು ಮಾಡೋ ಆಟ Y ಹುಡುಗರ ಡುಬ್ಬಾ ಡುಬ್ಬಿ ಆಟ ಇದ್ದಂಗ. ಅದಕ್ಕೇನು ಅರ್ಥ ಇಲ್ಲ ಸ್ವಾರ್ಥ ಇಲ್ಲ. ಆದರ ಒಬ್ಬರಿಂದಾ ಒಬ್ಬರಿಗೆ ಹಬ್ಬಿಕೊಂಡು ನಡದಾದ- ಒಣಾ ಹುಲ್ಲಿಗೆ ಹತ್ತಿದ ಬೆಂಕಿ ಇದ್ದಂಗ.
ಅಂತಹ ಸಮಾಜ ವಿರೋಧಿ ಮಾಧ್ಯಮದಾಗ ಒಬ್ಬರು ಮೊನ್ನೆ ಒಂದು ಪ್ರಶ್ನೆ ಕೇಳಿದರು-
ನಿಮಗೆ ಅತೀವ ಖಿನ್ನತೆ ಉಂಟಾದಾಗ ನಿಮ್ಮನ್ನು ಹುರಿದುಂಬಿಸುವ ವಿಷಯ ಯಾವುದು?. ಅದಕ್ಕ ಕೆಲವರು ನಿಸರ್ಗ, ನದಿ ದಂಡೆ, ಕಾಡು, ಅಡುಗೆ, ಸಂಗೀತ, ನೃತ್ಯ, ಚಿತ್ರಕಲೆ, ನಮ್ಮ ಮನೆಯ ನಾಯಿ ಬೆಕ್ಕು ಅಂತೆಲ್ಲಾ ಉತ್ತರ ಕೊಟ್ಟರು.
ಆದರೆ ಒಬ್ಬರು ಒಂದು ಕುತೂಹಲಕಾರಿ ಉತ್ತರ ಕೊಟ್ಟರು – “ಯಾರಾದರೂ ಪ್ರಖ್ಯಾತರು ಖಿನ್ನತೆಯಿಂದ ಬಳಲುತ್ತಿದ್ದಾರೆ ಅನ್ನೋ ಸುದ್ದಿಯನ್ನು ಓದೋದು’’. ಇದು ಅಪಹಾಸ್ಯದ ಉತ್ತರ ಇರಬಹುದು. ಆದರೆ ಬಹಳ ಮಂದಿಯ ಮನಸಿನೊಳಗ ಇರೋ ಮಾತನ್ನು ಅವರು ಒಡದು ಹೇಳಿದಾರು.
ನಾವು ಯಾವಾಗಲೂ ಹಿಂಗ. ಬೇರೆಯವರು ಬಿದ್ದಾಗ ನಗೋದು ನಮ್ಮ ಸ್ವಭಾವ. ಇನ್ನೊಬ್ಬರು ಗುಂಡಿಯೊಳಗ ಬಿದ್ದಾಗ ಆವರಿಗೆ ಕೈ ಕೊಟ್ಟು ಎತ್ತೋದು ಬಿಟ್ಟು ಮೊಬೈಲಿನಾಗ ವಿಡಿಯೋ ತೆಗಿಯೋದು ನಮ್ಮ ಚಟ.
ಮೊನ್ನೆ ಸುಶಾಂತ ಸಿಂಗ್ ರಜಪೂತ ಅವರ ಸಾವು ಪತ್ರಿಕೆ, ಚಾನೆಲ್, ವೆಬ್ಸೈಟುಗಳಲ್ಲಿ ರಾರಾಜಿಸಿತು. ಕ್ರಿಕೆಟ್ ಆಟಗಾರ ಎಂ.ಎಸ್ ಧೋನಿ ಅವರ ಪಾತ್ರ ವಹಸಿದ್ದ ಯುವ ಕಲಾವಿನದ ಸಾವಿನ, ಆರೋಪಿತ ಆತ್ಮ ಹತ್ಯೆಯ ಬಗ್ಗೆ ಅನೇಕ ಆಧಾರ ರಹಿತ ವಿಷಯಗಳು ಚರ್ಚೆಗೆ ಬಂದವು.
ಒಂದು ರೀತಿಯೊಳಗ ಆ ಸಾವು ಎರಡು- ಮೂರು ದಿನಗಳ ಮಟ್ಟಿಗೆ ಸುದ್ದಿ ವಾಹಿನಿಗಳನ್ನ ಮನೋರಂಜನೆ ವಾಹಿನಿಗಳನ್ನಾಗಿ ಬದಲಾಯಿಸಿಬಿಟ್ಟಿತು.
ಒಂದು ಹಿಂದಿ ವಾಹಿನಿಯಂತೂ `ತೆರೆಯ ಮೇಲಿನ ಧೋನಿಯ ಹಿಟ್ ವಿಕೆಟ್ಟು ಆಗಿದ್ದು ಹೇಗೆ?’ ಅಂತ ಚೀರಾಡಿಕೊಂಡಿತು. ಆ ವಾಹಿನಿಯ ಮೇಲೆ ಈಗ ಕಾನೂನು ಕ್ರಮ ಆರಂಭ ಆಗೇದ.
ಅಂತರರಾಷ್ಟ್ರೀಯ ಮಟ್ಟದಲ್ಲಿ ಆತ್ಮಹತ್ಯೆಯನ್ನು ಮಾಧ್ಯಮಗಳು ಹೇಗೆ ವರದಿ ಮಾಡಬೇಕು ಅಂತ ಅನುಸೂಚಿಗಳು ಇವೆ. ಅದನ್ನು ಕೆಲವರು ಪಾಲಿಸುತ್ತಾರೆ, ಕೆಲವರು ಪಾಲಿಸುವುದಿಲ್ಲ.
ಅದರ ಪ್ರಕಾರ ಸುದ್ದಿ ಶೀರ್ಷಿಕೆಯೊಳಗ, ಅಥವಾ ಮೊದಲನೇ ಸಾಳಿನೊಳಗ ಆತ್ಮಹತ್ಯೆ ಅನ್ನೋ ಪದ ಇರಬಾರದು. ಮತ್ತು ಅವರು ಹೇಗೆ ಆತ್ಮಹತ್ಯೆ ಮಾಡಿಕೊಂಡರು ಅನ್ನೋ ವಿವರ ಇರಬಾರದು.
ಅದು ಯಾಕ ಅಂದ್ರ ಖಿನ್ನತೆಯಿಂದ ಬಳಲುತ್ತಿರುವ ಜನ ಆತ್ಮಹತೆಯ ಸುದ್ದಿ ಓದಿದಾಗ ತಾವೂ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನ ಮಾಡ್ತಾರೆ ಅಂತ ಅಧ್ಯಯನದಿಂದ ತಿಳದು ಬಂದದ. ವಿವರ ತಿಳಿಸಿದರ ಅದೇ ರೀತಿಯೊಳಗ ತಾವೂ ಮಾಡಿಕೊಳ್ಳಲಿಕ್ಕೆ ಪ್ರಯತ್ನ ಮಾಡ್ತಾರ.
ಇನ್ನು ಸುದ್ದಿಯ ಕೊನೆಗೆ ಖಿನ್ನತೆ ಅಥವಾ ಇತರ ಮಾನಸಿಕ ತೊಂದರೆಗೆ ಒಳಗಾದವರಿಗೆ ಸಲಹೆ ನೀಡುವಂತಹ ಯಾವುದಾದರೂ ಸಂಸ್ಥೆಯ ಟೆಲಿಫೋನ್ ಸಂಖ್ಯೆ ಕೊಡಬೇಕು ಅಂತನೂ ಅದ. ಇದನ್ನು ಎಷ್ಟು ಪತ್ರಿಕೆಯವರು, ಟೀವಿಯವರು ಮಾಡತಾರ?
ಇದು ಕೇವಲ ಭಾರತೀಯರ ಸಮಸ್ಯೆ ಅಲ್ಲ. ನೀವು ಹಾಲಿವುಡ್ ನಟರ ವಿವರಗಳನ್ನು ವಿಕಿಪೀಡಿಯಾದಾಗ ನೋಡಿದರ ಸರಾಸರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಕೈಯಾರೆ ತಮ್ಮ ಜೀವ ತೊಗೊಂಡವರು ಆದ್ರಗ ಸಿಗತಾರ. ಅವರಿಗೆ ಇನ್ನೂ ಕಮ್ಮಿ ಆಗಿತ್ತು? ಅವರ ಹತ್ತರ ಹಣ, ಯಶಸ್ಸು, ಅನಗತ್ಯ ಪ್ರಚಾರ, ಎಲ್ಲಾ ಇತ್ತು. ಮರಲಿನ ಮನರೋ ರೀತಿಯ ನಟಿಯರು ಈ ಪರಬೇಧದಾಗ ಬರ್ತಾರ.
ಇನ್ನೊಂದು ಕಡೆ ಕೆಲವು ನಟ- ನಟಿಯರು ಇರತಾರ. ಅವರು ನೂರಕ್ಕೂ ಹೆಚ್ಚು ವರ್ಷ ಆರಾಮಾಗಿ ಇರ್ತಾರ, ಸಾಯೋ ತನಕ ಸಿನಿಮಾ- ರಂಗಭೂಮಿದಾಗ ಚಾಲತಿ ಒಳಗ ಇರ್ತಾರ. ಇಲ್ಲಾ ಅಂದ್ರ ಸಮಾಜ ಸೇವೆ, ಸಾಲವೆಶನ ಆರ್ಮಿಯಂತಹ ಧಾರ್ಮಿಕ ಸಂಸ್ಥೆಗಳು, ವಿಶ್ವ ಸಂಸ್ಥೆ, ಅಥವಾ ರಾಜಕೀಯ ಇಂತದರಾಗ ಬಿಸಿ ಆಗಿ ಬಿಡತಾರ. ಜೂಲಿ ಅಂಡರೂಸ್, ಆಡರಿ ಹೆಪಬರ್ನ ನಂತವರು ಈ ಕೆಟಗರಿ ಒಳಗ ಬರ್ತಾರ.
ಈ ಎರಡನೇ ರೀತಿಯ ನಟ- ನಟಿಯರ, ಯಶಸ್ಸಿನ ಗುಟ್ಟು ಏನು?
ನಟ ಮನೋಜ್ ಬಾಜಪೇಯಿ ಹೇಳಿದಂತೆ ಮೊದಲನೇ ರೀತಿಯ ನಟರು ತಮ್ಮ ತೆರೆಯ ಮೇಲಿನ ಜೀವನವನ್ನೇ ನಿಜಜೀವನ ಅಂತ ತಿಳಕೊಂಡರು, ಎರಡನೇ ರೀತಿಯವರು ತಮ್ಮ ಜೀವನದಿಂದ ಅತಿ ಮಾನುಷ ಅಪೇಕ್ಷೆಗಳನ್ನು ಇಟ್ಟುಕೊಳ್ಳಲಿಲ್ಲ.
ನಮ್ಮ ಮಾಧ್ಯಮಗಳಿಂದ ನಾವು ಕೇವಲ ಹುಲು ಮಾನವ ಅಪೇಕ್ಷೆಗಳನ್ನು ಇಟ್ಟುಕೊಳ್ಳಬಹುದಲ್ಲವೇ ಮನೋಲ್ಲಾಸಿನಿ?
- ಐ ವಿ ಗೌಲ್
ಇದನ್ನೂ ಓದಿ: ಸುಶಾಂತ್ ಸಿಂಗ್ ಸಾವಿಗೆ ಕಾರಣ ತಿಳಿಯಬೇಕಾದರೆ ಬಾಲಿವುಡ್ ಎಂಬ ಚಕ್ರವ್ಯೂಹ ಅರಿಯಿರಿ..



After looking over a handful of the blog posts
on your web page, I honestly appreciate your way of writing a blog.
I book-marked it to my bookmark webpage list
and will be checking back soon. Please check out my website too and
let me know what you think.