Homeಮುಖಪುಟಸುಶಾಂತ್ ಸಿಂಗ್ ಸಾವಿಗೆ ಕಾರಣ ತಿಳಿಯಬೇಕಾದರೆ ಬಾಲಿವುಡ್ ಎಂಬ ಚಕ್ರವ್ಯೂಹ ಅರಿಯಿರಿ..

ಸುಶಾಂತ್ ಸಿಂಗ್ ಸಾವಿಗೆ ಕಾರಣ ತಿಳಿಯಬೇಕಾದರೆ ಬಾಲಿವುಡ್ ಎಂಬ ಚಕ್ರವ್ಯೂಹ ಅರಿಯಿರಿ..

ಸಿನಿಮಾ ಜಗತ್ತಿನಲ್ಲಿ ಹೆಸರು ಮಾಡಿದವರ ಅನೇಕರ ಬಗ್ಗೆ ಅವರೆಂತಹ ಬಡಕುಟುಂಬದಿಂದ ಬಂದವರು ಎಂದೆಲ್ಲಾ ಹೇಳಲಾಗುತ್ತದಾದರೂ, ನನ್ನ ಅನುಭವದಲ್ಲಿ ಮಧ್ಯಮ ವರ್ಗ ಅಥವಾ ಕೆಳ ಮಧ್ಯಮ ವರ್ಗದವರಾರೂ ಹೀರೋ ಆಗಲು ಸಾಧ್ಯವಾದದ್ದು ನೋಡಿಲ್ಲ.

- Advertisement -
- Advertisement -

ಸುಶಾಂತ್ ಸಿಂಗ್ ಎಂಬ ಬಾಲಿವುಡ್ ಪ್ರತಿಭೆಯ ಸಾವಿನ ಸುದ್ದಿ ಗೊತ್ತಾದ ಕೂಡಲೇ, ನನ್ನ ತಲೆಯಲ್ಲಿ ಬಂದಿದ್ದು ನನಗೂ ಮತ್ತು ಅವನ ನಡುವಿನ ಕಾಮನ್ ಫ್ರೆಂಡ್ಸ್. ಅವರನ್ನು ಕರೆ ಮಾಡಿ ಅವನ್ಯಾಕೆ ಆತ್ಮಹತ್ಯೆ ಮಾಡಿಕೊಂಡ ಎಂದು ಕೇಳಬೇಕೆನಿಸಿತು. ಆದರೆ, ನಾನು ಯಾರಿಗೂ ಫೋನ್ ಮಾಡಲಿಲ್ಲ. ಅವರೇನೇ ಹೇಳಿದರೂ, ಅದು ನನ್ನ ಕುತೂಹಲವನ್ನು ಒಂದಿಷ್ಟು ತಣಿಸುತ್ತಿತ್ತೇ ಹೊರತು ಅದರಿಂದ ಮತ್ತೇನೂ ಆಗುತ್ತಿದ್ದಿಲ್ಲ. ಸುಶಾಂತ್‌ನ ಸಾವಿನ ಸುತ್ತ ಏನಾಯಿತು, ಆ ನಟನ ಮಾನಸಿಕ ಸ್ಥಿತಿ ಹೇಗಿತ್ತು, ಯಾವ್ಯಾವ ಒತ್ತಡಗಳಿದ್ದವು, ಅದಕ್ಕೆ ಏನು ಮಾಡಬೇಕಾಗಿತ್ತು ಎಂದು ಹೇಳಲು ನಾನು ಮನೋವಿಜ್ಞಾನದ ತಜ್ಞನೂ ಅಲ್ಲ.

ಅದೇ ಇಂಡಸ್ಟ್ರಿಯಲ್ಲಿ ನಾನೂ ಸುಮಾರು ಒಂದೂವರೆ ದಶಕ ಕಳೆದಿದ್ದರಿಂದ, ಅಲ್ಲಿಯ ಒತ್ತಡಗಳೇನು ಎಂಬುದುನ್ನು ಖುದ್ದಾಗಿ ಅನುಭವಿಸಿದ್ದೇನೆ; ಅದನ್ನೇ ಹಂಚಿಕೊಳ್ಳುವೆ.

ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಮುಂಬಯಿ ಎಂಬ ಮಾಯಾನಗರಿಗೆ ಹೋದೆ. ಒಂದಿಷ್ಟು ದಿನಗಳಲ್ಲಿ ಸ್ವಾಭಾವಿಕವಾಗಿಯೇ ನನ್ನ ಹಾಗೇ ಬೇರೆ ಬೇರೆ ಊರುಗಳಿಂದ ಬಂದವರು ಜೊತೆಗೂಡಿದೆವು. ಚಿತ್ರರಂಗ ಕಾರ್ಯನಿರ್ವಹಿಸುವ ವಿಧಾನವನ್ನು ಗ್ರಹಿಸದೇ ಹೋದ ಅನೇಕರು, ಮುಂಬಯಿಯನ್ನು, ಚಿತ್ರರಂಗವನ್ನೂ ಟೀಕಿಸಿ, ಸಿನಿಕರಾದರು. ಅದರಲ್ಲಿ ಹೆಚ್ಚಿನವರು ಯಾರಿಗೂ ಗೋಚರವಾಗದಂತೆ ಮರಳಿ ಮನೆಗೆ ಹೋದರೆ ಇನ್ನೂ ಕೆಲವರು ತಮ್ಮನ್ನು ತಾವು ಇಂಡಸ್ಟ್ರಿಗೆ ಅಳವಡಿಸಲು ಪ್ರಯತ್ನಿಸುತ್ತ ಇನ್ನಷ್ಟು ಕಾಲ ದೂಡಿದರು.

ನಾನು ಟಿವಿ ಧಾರಾವಾಹಿಗಳನ್ನು ನಿರ್ಮಿಸುತ್ತಿದ್ದ ಒಂದು ಪ್ರೊಡಕ್ಷನ್ ಹೌಸ್‌ನಲ್ಲಿ ಇನ್‌ಹೌಸ್ ಕಾಸ್ಟಿಂಗ್ ಡೈರೆಕ್ಟರ್ ಆಗಿ ಸೇರಿಕೊಂಡಿದ್ದೆ. ಮೊದಲ ಕೆಲ ತಿಂಗಳು ನಾನು ಆಯ್ಕೆ ಮಾಡುತ್ತಿದ್ದ ನಟರನ್ನು ಸಾರಾಸಗಟಾಗಿ ತಿರಸ್ಕರಿಸುತ್ತಿದ್ದರು ನನ್ನ ಬಾಸ್‌ಗಳು. ನಿಧಾನವಾಗಿ ಅವರಿಗೆ ಎಂತಹ ‘ನಟ’ರು ಬೇಕೋ ಅಂತಹ ನಟರನ್ನೇ ಆಯ್ಕೆ ಮಾಡಿ, ಶಾರ್ಟ್ಲಿಸ್ಟ್ ಮಾಡಲು ಪ್ರಾರಂಭಿಸಿದೆ. ಆದರೂ, ನಾನು ಆಯಾ ನಟರನ್ನು ನಿಜವಾಗಿಯೂ ಯಾವ ಕಾರಣಕ್ಕೆ ಆಯ್ಕೆ ಮಾಡುತ್ತಿದ್ದೇನೆ ಎಂಬುದು ನನಗೇ ಗೊತ್ತಿದ್ದಿಲ್ಲ. ಅದಕ್ಕೆ ಕಾರಣ ಹುಡುಕಲು ಪ್ರಾರಂಭಿಸಿದೆ. ಉತ್ತರ ಸಿಗುವುದು ತಡವಾಗಲಿಲ್ಲ. ನಾನು ಕಂಡುಕೊಂಡ ಉತ್ತರ: ನಾನು ನಟರನ್ನು ಆಯ್ಕೆ ಮಾಡುತ್ತಿದ್ದ ನಟರಲ್ಲಿ ಹೆಚ್ಚಿನವರು ಕಾರಿನಲ್ಲಿ ಬರುವವರಾಗಿದ್ದರು. ಮುಂಬಯಿಯ ಸೆಕೆಯಲ್ಲಿ ಬಸ್ಸೋ, ಟ್ರೇನೋ ಹಿಡಿದು, ಅಂಧೇರಿಗೆ ಬಂದು ಅಲ್ಲಿಂದ ಒಂದಿಷ್ಟು ದೂರ ನಡೆದುಕೊಂಡು ಬರುವವರ ಮುಖ ನೋಡಿ, ಅವರ ಆಡಿಷನ್ ಮಾಡಲು ‘ಮನಸ್ಸಾದರೂ ಹೇಗೆ ಆದೀತು’?

ನಾವುಗಳೂ ಮೊದಲ ಅನೇಕ ವರ್ಷ ಟ್ರೇನ್ ಮತ್ತು ಕಾಲ್ನಡಿಗೆಯನ್ನು ನಂಬಿಕೊಂಡವರೆ. ಎಲ್ಲೋ ಆಡಿಷನ್ ನಡೆಯುತ್ತಿದೆ ಎಂದು ಗೊತ್ತಾದೊಡನೇ ಆಡಿಷನ್‌ಗಾಗಿ ಸರದಿಯಲ್ಲಿ ಕಾದು, ‘ಇಲ್ಲ ನೀವು ಈ ರೋಲ್‌ಗೆ ಫಿಟ್ ಆಗುವುದಿಲ್ಲ’ ಎಂಬುದನ್ನು ಕೇಳಿಸಿಕೊಂಡಾಗ, ಇಂದಿನ ಸ್ಟ್ರಗಲ್ ಮಾಡಿದೆನಲ್ಲ ಎಂಬ ‘ಗುಡ್ ಫೀಲಿಂಗ್’ನೊಂದಿಗೆ ಮರಳುತ್ತಿದ್ದೆವು. ಕ್ರಮೇಣ, ನಾವು ಹೀರೋ ಆಗಲು ಸಾಧ್ಯವಿಲ್ಲ ಎಂಬ ತಥ್ಯ ಹೆಚ್ಚಿನವರಿಗೆ ಒಂದೆರಡು ವರ್ಷಗಳಲ್ಲಿ ತಿಳಿಯುತ್ತಿತ್ತು. ಹೇಗಾದರೂ ಮಾಡಿ ಯಾವುದೋ ಒಂದು ರೋಲ್ ಸಿಕ್ಕರೆ ಸಾಕು ಎಂದು ಸ್ಟ್ರಗಲ್ ಮುಂದುವರೆಯುತ್ತಿತ್ತು. ಇನ್ನಿತರರು ನಾಟಕದ ಗುಂಪಿಗೆ ಸೇರಿ, ಅಲ್ಲಿಯೇ ಮಾನಸಿಕ ನೆಲೆ ಕಂಡುಕೊಳ್ಳುತ್ತಿದ್ದರು.

ಇಂಡಸ್ಟ್ರಿಯಲ್ಲೂ ಜಾಹೀರಾತುಗಳ ಮತ್ತು ಧಾರಾವಾಹಿಗಳ ಜಗತ್ತು ಸಿನಿಮಾ ಜಗತ್ತಿಗಿಂತ ಒಂದಿಷ್ಟು ನೇರ. ಅಲ್ಲಿಯೂ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾದರೂ, ಆಡಿಷನ್ ಕೊಡುವ, ಅದರಲ್ಲಿ ಶಾರ್ಟ್ಲಿಸ್ಟ್ ಆಗುವ ಅವಕಾಶ ಸಾಮಾನ್ಯವಾಗಿ ಎಲ್ಲರಿಗೂ ಇರುತ್ತದೆ. ಸುಶಾಂತ್‌ನಂತವರು ಟಿವಿ ಧಾರಾವಾಹಿಗೆ ಹೇಳಿ ಮಾಡಿಸಿದಂಥವರು.

ಸಿನಿಮಾ ಜಗತ್ತಿನಲ್ಲಿ ಹೆಸರು ಮಾಡಿದವರ ಅನೇಕರ ಬಗ್ಗೆ ಅವರೆಂತಹ ಬಡಕುಟುಂಬದಿಂದ ಬಂದವರು ಎಂದೆಲ್ಲಾ ಹೇಳಲಾಗುತ್ತದಾದರೂ, ನನ್ನ ಅನುಭವದಲ್ಲಿ ಮಧ್ಯಮ ವರ್ಗ ಅಥವಾ ಕೆಳ ಮಧ್ಯಮ ವರ್ಗದವರಾರೂ ಹೀರೋ ಆಗಲು ಸಾಧ್ಯವಾದದ್ದು ನೋಡಿಲ್ಲ. ಇರ್ಫಾನ್, ನವಾಜುದ್ದಿನ್ ಸಿದ್ದಿಕಿ, ರಾಜ್‌ಕುಮಾರ್ ರಾವ್‌ನಂತವರೆಲ್ಲ ಪ್ರತಿಷ್ಠಿತ ಸಂಸ್ಥೆಗಳಿಂದ ಬಂದವರು. ಅವರು ಮುಂಬಯಿಗೆ ಕಾಲಿಟ್ಟಾಗ ಅವರನ್ನು ತರಬೇತುಗೊಳಿಸಲು ರೆಕಮೆಂಡ್ ಮಾಡಲು ಸೀನಿಯರ್‌ಗಳ ಒಂದು ತಂಡವಿರುತ್ತೆ. ಅದರಲ್ಲೂ ಅನೇಕರಿಗೆ ಸಿನೆಮಾ ಇಂಡಸ್ಟ್ರಿಯಲ್ಲಿ ನಿಲ್ಲಲಾಗುವುದಿಲ್ಲ.

ಇದು ಇಂಡಸ್ಟ್ರಿಯನ್ನು ಭೇದಿಸಲಾಗದವರ ಕಥೆಯಾದರೆ, ಭೇದಿಸಿದವರ ಕಥೆಯೇ ಬೇರೆ.

ತಮ್ಮ ಅದೃಷ್ಟ, ಲುಕ್, ಪ್ರತಿಭೆ ಮತ್ತು ಇತರ ಕಾಣದ ಕಾರಣಗಳಿಂದ ಇಂಡಸ್ಟ್ರಿಯಲ್ಲಿ ನೆಲೆಯೂರಿದರೂ, ಅವರ ಗೋಳು ಕಡಿಮೆಯಾಗುವುದಿಲ್ಲ. ಅದಕ್ಕೆ ಒಬ್ಬ ಸೀನಿಯರ್ ಹೇಳಿದ ಒಂದು ಮಾತನ್ನು ಉಲ್ಲೇಖಿಸುತ್ತೇನೆ; ಓಂ ಪುರಿ, ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ಪ್ರತಿಭಾವಂತ ನಟರಲ್ಲಿ ಒಬ್ಬರು, ಅವರು ಚಾರ್ಲಿ ವಿಲ್ಸನ್ಸ್ ವಾರ್ ಎಂಬ ಹಾಲಿವುಡ್ ಚಿತ್ರದಲ್ಲಿ ವಿಶ್ವವಿಖ್ಯಾತ ನಟ ಟಾಮ್ ಹ್ಯಾಂಕ್ಸ್‌ನೊಂದಿಗೆ ಅಭಿನಯಿಸಿದರು. ಚಿತ್ರೀಕರಣದ ನಂತರ ಟಾಮ್ ಹ್ಯಾಂಕ್ಸ್ ಮನೆಗೆ ಅತಿಥಿಯಾಗಿ ಹೋಗಿದ್ದರಂತೆ ಓಮ್ ಪುರಿ. ಆದರೆ, ಓಂ ಪುರಿಯಂತಹ ನಟರಿಗೆ ಯಾವುದಾದರೂ ಬಾಲಿವುಡ್ ಸ್ಟಾರ್‌ಗಳ ಮನೆಗೆ ಆಹ್ವಾನವಿತ್ತಾ? ಇಲ್ಲ. ಅವರೆಂದೂ ಹೊರಗಿನವರೆ, ಕ್ಯಾರೆಕ್ಟರ್ ರೋಲ್‌ಗಳನ್ನು ಮಾಡುವವರು, ಆರ್ಟ್ ಸಿನೆಮಾ ಮಾಡುವವರು.

ಅದೇ ಸಮಯದಲ್ಲಿ, ಸಂಜಯ್ ಲೀಲಾ ಭನ್ಸಾಲಿ ಎಂಬ ನಿರ್ದೇಶಕ ಹೊಸ ಚಿತ್ರ ಮಾಡುವಾಗ, ಅನಿಲ್ ಕಪೂರ್‌ನ ಮಗಳು ಮತ್ತು ರಿಷಿ ಕಪೂರ್‌ನ ಮಗನನ್ನು ಹೀರೊ, ಹೀರೊಯಿನ್ ಆಗಿ ಮಾಡುತ್ತಾನೆ. ಜೆ.ಪಿ.ದತ್ತಾ ಎಂಬ ಯಶಸ್ವಿ ನಿರ್ದೇಶಕ ಹೊಸ ಚಿತ್ರ ಮಾಡುವಾಗ, ಅಮಿತಾಭ್ ಬಚ್ಚನ್‌ನ ಮಗ ಮತ್ತು ರಾಜ್‌ಕಪೂರ್‌ನ ಮೊಮ್ಮಗಳನ್ನು ಹೀರೊ, ಹೀರೋಯಿನ್ ಆಗುತ್ತಾರೆ. ಇದು ಮಾಮೂಲು. ಇಷ್ಟು ದೊಡ್ಡ ನಿರ್ದೇಶಕರಾದ ಇವರೇಕೇ ಸ್ಟಾರ್‌ಸನ್, ಸ್ಟಾರ್‌ಡಾಟರ್‌ಗಳನ್ನು ಲಾಂಚ್ ಮಾಡುತ್ತಾರೆ ಎಂದು ಈ ನಿರ್ದೇಶಕರ ಬಗ್ಗೆ ಸಿಟ್ಟು ಬರುತ್ತಿತ್ತು. ಆದರೆ ಅದು ವ್ಯವಸ್ಥೆ; ಅಲ್ಲಿ ಬದುಕುಳಿಯಬೇಕಾದರೆ, ಅಲ್ಲಿಯ ನಿಯಮಗಳನ್ನು ಪಾಲಿಸಲೇಬೇಕು. ಯಾವ ಹೀರೋ ಅಥವಾ ಹೀರೋಯಿನ್ ಮನಬಿಚ್ಚಿ ಮಾತನಾಡುವಂತಿಲ್ಲ. ಅವರ ಎಲ್ಲಾ ಸಂದರ್ಶನಗಳನ್ನು ಮೊದಲೇ ಪ್ಲಾನ್ ಮಾಡಲಾಗುತ್ತೆ; ಅವರು ಸಂದರ್ಶನಗಳನ್ನು ಕೊಡುವುದೂ ಅವರ ಚಿತ್ರಗಳ ಬಿಡುಗಡೆಗೆ ಮುನ್ನ ಮಾತ್ರ. ಹಾಗಾಗಿ ಕೇವಲ ‘ಪಾಸಿಟಿವ್’ ಆಗಿರುವ ವಿಷಯಗಳನ್ನೇ ಹೇಳಬೇಕಾಗುತ್ತೆ. ಸಂದರ್ಶನದ ಈ ನಿಯಮವನ್ನು ಮುರಿಯುವಂತಿಲ್ಲ. ಏಕೆಂದರೆ ಬಹಿಷ್ಕಾರ ಎಂಬುದು ತೂಗುವ ಕತ್ತಿ ಅವರ ತಲೆಯ ಮೇಲೆ ಸದಾಕಾಲ ತೂಗುತ್ತಿರುತ್ತದೆ.

ಕಳೆದ ಎರಡು ದಶಕಗಳಲ್ಲಿ ಬಂದ ಹೀರೋಗಳನ್ನು ನೋಡಿದರೆ, ಅವರಲ್ಲಿ ಹೆಚ್ಚಿನವರು ಸ್ಟಾರ್‌ಸನ್‌ಗಳೇ. ಸ್ವಾಭಾವಿಕವಾಗಿಯೇ ಹೊರಗಿನವರನ್ನು ಇವರು ಸಹಿಸಿಕೊಳ್ಳುವುದಿಲ್ಲ. ಸುಶಾಂತ್ ಸಿಂಗ್ ನಿಧನದ ನಂತರ ಬಂದ ಸಂತಾಪಗಳ ಮಹಾಪೂರವನ್ನು ನೋಡಿ ಸಿಟ್ಟಿಗೆದ್ದು, ಚಿತ್ರರಂಗದ ಹಿಪಾಕ್ರಸಿಯನ್ನು ತೋರಿಸಿ ಇಷ್ಟೆಲ್ಲ ಸುಳ್ಳು ಹೇಳುವ ಬದಲಿಗೆ ಒಂದು ದಿನದ ಮೌನಾಚರಣೆ ಆಚರಿಸಿ ಎಂದು ಹೇಳಿದ್ದೂ ಒಬ್ಬ ಸ್ಟಾರ್‌ಸನ್, ಸೈಫ್ ಅಲಿ ಖಾನ್.

#ಮೀಟೂ ಎಂಬ ಚಳವಳಿ ಇಂಡಸ್ಟ್ರಿಯಲ್ಲಿ ‘ಸ್ವಾಭಾವಿಕ’ವಾಗಿರುವ ಲೈಂಗಿಕ ಕಿರುಕುಳದ ಬಗ್ಗೆ ಬೆಳಕು ಚೆಲ್ಲಿತು. ಸುಶಾಂತ್ ಸಿಂಗ್ ಎಂಬ ಪ್ರತಿಭಾವಂತ ನಟನ ಸಾವು ಬಾಲಿವುಡ್ ನ ಕರಾಳ ಒಳಜಗತ್ತು, ಅದರ ಕಟ್ಟುನಿಟ್ಟಾದ ನಿಯಮಗಳು, ಶೋಷಣೆ ಮತ್ತು ಚಿತ್ರರಂಗವನ್ನು ಭೇದಿಸಿದ ಪ್ರತಿಭೆಗಳು ಎದುರಿಸಬೇಕಾದ ಸಮಸ್ಯೆಗಳನ್ನು ಬೆಳಕಿಗೆ ತರಬಹುದು ಎಂದು ಆಶಿಸಬಹುದಷ್ಟೆ.


ಇದನ್ನೂ ಓದಿ: ಸುಶಾಂತ್‌ಸಿಂಗ್ ರಜಪೂತ್ ಸಾವು: ಕನಸು ಬಿತ್ತುವವರ ಕಮರಿದ ಬದುಕು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...