ತೆಲಂಗಾಣ ಮತ್ತು ಆಂಧ್ರಪ್ರದೇಶದ ಹೈಕೋರ್ಟ್ ವಕೀಲರು ಸೇರಿದಂತೆ ಅನೇಕ ನಾಗರಿಕ ಹಕ್ಕುಗಳ ಹೋರಾಟಗಾರರ ನಿವಾಸಗಳ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ದಾಳಿ ನಡೆಸಿದೆ. ಕಾನೂನುಬಾಹಿರ ಮಾವೋವಾದಿ ಪಕ್ಷಗಳೊಂದಿಗೆ ಸಂಪರ್ಕವಿದೆ ಎಂದು ಆರೋಪಿಸಿ ಈ ದಾಳಿ ನಡೆಸಲಾಗಿದೆ ಎಂದು ಸಂಸ್ಥೆ ಹೇಳಿದೆ. ಆದರೆ ಹೋರಾಟದ ದನಿಗಳನ್ನು ಹತ್ತಿಕ್ಕುವ ಪ್ರಯತ್ನ ಇದು ಎಂದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾನವ ಹಕ್ಕುಗಳ ಹೋರಾಟಗಾರರು, ಸ್ತ್ರೀವಾದಿ ಹೋರಾಟಗಾರರು, ಪ್ರಗತಿಪರ ಸಾಹಿತಿಗಳು ಮತ್ತು ವಕೀಲರು ಸೇರಿದಂತೆ 25 ಕ್ಕೂ ಹೆಚ್ಚು ಹೋರಾಟಗಾರರ ನಿವಾಸಗಳ ಮೇಲೆ ಎನ್ಐಎ ದಾಳಿ ನಡೆಸಿದೆ. ಅವರ ಫೋನ್ಗಳು, ಕಂಪ್ಯೂಟರ್ಗಳು, ಲ್ಯಾಪ್ಟಾಪ್ಗಳು, ಕೆಲವು ಪುಸ್ತಕಗಳು ಮತ್ತು ಪೇಪರ್ಗಳನ್ನು ಎನ್ಐಎ ವಶಪಡಿಸಿಕೊಂಡಿದೆ.
ಹೈದರಾಬಾದ್ನಲ್ಲಿ ಖ್ಯಾತ ಹೈಕೋರ್ಟ್ ವಕೀಲ ಮತ್ತು ನಾಗರಿಕ ಹಕ್ಕುಗಳ ಸಮಿತಿಯ ಉಪಾಧ್ಯಕ್ಷ ವಿ ರಘುನಾಥ್ ಅವರ ನಿವಾಸ ಸೇರಿದಂತೆ ಏಳು ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ ಎಂದು ನ್ಯೂಸ್ ಮೀಟರ್ ವರದಿ ಮಾಡಿದೆ.
ಆಂಧ್ರಪ್ರದೇಶದಲ್ಲಿ ಕಡಪಾ ಜಿಲ್ಲೆಯ ವಿರಸಂ (ಕ್ರಾಂತಿಕಾರಿ ಬರಹಗಾರರ ಸಂಘ) ಮಾಜಿ ಕಾರ್ಯದರ್ಶಿ ವರಲಕ್ಷ್ಮಿ ಅವರ ನಿವಾಸದಲ್ಲಿ ಶೋಧ ನಡೆಸಲಾಯಿತು. ಕರ್ನೂಲ್ ಮತ್ತು ಗುಂಟೂರು ಜಿಲ್ಲೆಗಳಲ್ಲೂ ಶೋಧ ನಡೆಸಲಾಗಿದೆ.
ಇದನ್ನೂ ಓದಿ: ಈಶ್ವರಪ್ಪನವರು ಮೊದಲ ಬಾರಿ ಒಂದು ಒಳ್ಳೆಯ ಕೆಲಸ ಮಾಡಿದ್ದಾರೆ: ಸಿದ್ದರಾಮಯ್ಯ
ಮಾರ್ಚ್ 2021 ರಲ್ಲಿ ಎನ್ಐಎ ನೋಂದಾಯಿಸಿದ ಪ್ರಕರಣಕ್ಕೆ ಈ ದಾಳಿಗಳು ಸಂಬಂಧಿಸಿದೆ. 2020 ರ ನವೆಂಬರ್ನಲ್ಲಿ ಆಂಧ್ರಪ್ರದೇಶ ಪೊಲೀಸರು 64 ಜನರ ವಿರುದ್ಧ ವಿಶಾಖಪಟ್ಟಣಂ ಜಿಲ್ಲೆಯ ಮಂಚಿಂಗ್ಪುಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಮಾವೋವಾದಿ ಬೆಂಬಲಿಗ ಎಂದು ಪತ್ರಕರ್ತ ಮತ್ತು ಪಂಗಿ ನಾಗಣ್ಣ ಅವರನ್ನು ಬಂಧಿಸಿದ್ದರು.
ಮಾವೋವಾದಿ ಸಾಹಿತ್ಯ, ಪತ್ರಿಕಾ ಟಿಪ್ಪಣಿಗಳು, ಔಷಧಿಗಳು, ಮತ್ತು ಇತರ ದೋಷಾರೋಪಣೆ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದಲ್ಲದೆ, ಪೊಲೀಸರು 63 ಇತರರನ್ನು ಪ್ರಕರಣದ ಆರೋಪಿಗಳೆಂದು ಹೆಸರಿಸಿದ್ದರು.
ನಂತರ ಎನ್ಐಎ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿತು. ತನಿಖೆಯ ಭಾಗವಾಗಿ ಎನ್ಐಎ ಶೋಧ ನಡೆಸಿತು. ಶೋಧಗಳು ಬುಧವಾರ ಸಂಜೆ 6 ಗಂಟೆಗೆ ಪ್ರಾರಂಭವಾಗಿ ತಡರಾತ್ರಿಯವರೆಗೂ ಮುಂದುವರೆದವು.
“ಅನ್ಯಾಯದ ವಿರುದ್ಧ ಎದ್ದಿರುವ ಮತ್ತು ಸರ್ಕಾರವನ್ನು ಪ್ರಶ್ನಿಸುವ ದನಿಗಳನ್ನು ಅಡಗಿಸುವ ಪ್ರಯತ್ನ ಇದು. ಈಗ ದಾಳಿಗೆ ಒಳಗಾಗಿರುವವರೆಲ್ಲರೂ ತೆಲಂಗಾಣ ಮತ್ತು ಆಂದ್ರಪ್ರದೇಶ ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ ಕಾನೂನುಗಳು ಮತ್ತು ಅಕ್ರಮ ಬಂಧನಗಳ ವಿರುದ್ಧ ಹೋರಾಡಿದವರು. ಜೊತೆಗೆ ಮಹಿಳೆಯರ ವಿರುದ್ಧದ ಹಿಂಸಾಚಾರ, ಜಾತಿ, ಪಿತೃಪ್ರಧಾನತೆಯ ಹಿಂಸಾಚಾರ, ಮುಸ್ಲಿಮರ ವಿರುದ್ಧ ಹಿಂದುತ್ವ ಪಡೆಗಳ ಅಧಿಪತ್ಯದ ದಾಳಿ, ಜನರ ಭೂಮಿ ಮತ್ತು ಅರಣ್ಯ ಹಕ್ಕುಗಳನ್ನು ರಕ್ಷಿಸುವುದು ಸೇರಿದಂತೆ ಇತರೆ ವಿಷಯಗಳನ್ನು ಮುಂದಿಟ್ಟುಕೊಂಡು ಹೋರಾಟ ಮಾಡಿದವರು” ಎಂದು ಪಿಯುಸಿಎಲ್ನ ಕವಿತಾ ಶ್ರೀವಾಸ್ತವ ಹೇಳಿದ್ದಾರೆ.
ಇವರ ವಿರುದ್ಧ ಅಕ್ರಮ ಪ್ರಕರಣಗಳನ್ನು ದಾಖಲಿಸಿ, ಯುಎಪಿಎ ವಿಭಾಗಗಳ ಅಡಿಯಲ್ಲಿ ಎಫ್ಐಆರ್ ಹಾಕಿರುವ ವೈ ಎಸ್ ಜಗನ್ಮೋಹನ್ ರೆಡ್ಡಿ ಸರ್ಕಾರದ ಕ್ರಮ ಸರಿಯಲ್ಲ. ಇದು ಹೋರಾಟಗಾರರನ್ನು ತಡೆಯಲು ಸರ್ಕಾರ ಮಾಡಿರುವ ಅತ್ಯಂತ ಕೆಟ್ಟ ಕ್ರಮವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ತಮಿಳುನಾಡು ವಿಧಾನಸಭಾ ಚುನಾವಣೆ: ದ್ರಾವಿಡ ರಾಜಕೀಯಕ್ಕೆ ಹೊಸ ಸವಾಲುಗಳು!
ಎಎನ್ಐ ದಾಳಿಗೆ ಒಳಗಾದವರು:
ಕ್ರಾಂತಿಕಾರಿ ಬರಹಗಾರರ ಸಂಘದ ಸದಸ್ಯರು: 1. ಪಾನಿ, (ಕರ್ನೂಲ್ ಜಿಲ್ಲೆ), 2. ವರಲಕ್ಷ್ಮಿ (ಕಡಪ ಜಿಲ್ಲೆ), 3. ಅರುಣ್ (ಕರ್ನೂಲ್ ಜಿಲ್ಲೆ).
ಚೈತನ್ಯ ಮಹಿಳಾ ಸಂಗಮ್ ಸದಸ್ಯರು: 4. ದೇವೇಂದ್ರ, 5. ಶಿಲ್ಪಾ, 6. ಸ್ವಪ್ನಾ, 7. ರಾಜೇಶ್ವರಿ (ಗುಂಟೂರು), 8. ಪದ್ಮ (ವಿಶಾಖಪಟ್ಟಣಂ).
ಆಂಧ್ರಪ್ರದೇಶ ನಾಗರಿಕ ಸ್ವಾತಂತ್ರ್ಯ ಸಮಿತಿ (ಎಪಿಸಿಎಲ್ಸಿ): 9. ರಘುನಾಥ್, (ಹೈದರಾಬಾದ್, 10. ಚಿಲಿಕ ಚಂದ್ರಶೇಖರ್ (ಗುಂಟೂರು ಜಿಲ್ಲೆ), 11. ಚಿಟ್ಟಿ ಬಾಬು (ಪೂರ್ವ ಗೋದಾವರಿ).
ಮಾನವ ಹಕ್ಕುಗಳ ವೇದಿಕೆ: (ಎಚ್ಆರ್ಎಫ್), 12, ಕೃಷ್ಣ (ವಿಶಾಖಪಟ್ಟಣಂ)
ಪ್ರಜಾಕಲಾ ಮಂಡಳಿ: 13. ಡಪ್ಪು ರಮೇಶ್ (ಹೈದರಾಬಾದ್)
ಅಮರುಲಾ ಬಂಧು ಮಿತ್ರುಲಾ ಸಂಘಂ, ಮಾರ್ಕ್ಸ್ವಾದಿ ಸ್ನೇಹಿತರು ಮತ್ತು ಸಂಬಂಧಿಗಳು (ಎಬಿಎಂಎಸ್) 14. ಅಂಜಮ್ಮ (ಪ್ರಕಾಶಂ ಜಿಲ್ಲೆ), 15. ಸಿರಿಶಾ (ಪ್ರಕಾಶಂ ಜಿಲ್ಲೆ).
ವಕೀಲ: 16. ಕೆ.ಎಸ್.ಚೆಲಂ (ವಿಶಾಖಪಟ್ಟಣಂನ) ಮತ್ತು ಇತರರು.
ಇದನ್ನೂ ಓದಿ: ರಾಜ್ಯಪಾಲರಿಗೆ ದೂರು: ಈಶ್ವರಪ್ಪ ವಿರುದ್ದ ಮುಗಿಬಿದ್ದ ಬಿಜೆಪಿ ಶಾಸಕರು



ಈ ದಾಳಿ ಕಂಡನಾರ್ಹ.