ಅಸ್ಸಾಂ ಆರೋಗ್ಯ ಸಚಿವ ಮತ್ತು ಬಿಜೆಪಿಯ ಹಿರಿಯ ಮುಖಂಡ ಹಿಮಾಂತ ಬಿಸ್ವಾ ಶರ್ಮಾ ಅವರ “ಅಸ್ಸಾಂನಲ್ಲಿ ಕೊರೊನಾ ಇಲ್ಲ … (ಆದ್ದರಿಂದ) ಫೇಸ್ ಮಾಸ್ಕ್ ಧರಿಸುವ ಅಗತ್ಯವಿಲ್ಲ” ಎಂಬ ಹೇಳಿಕೆ ಸಾಕಷ್ಟು ಟ್ರೋಲ್ಗೆ ಒಳಗಾಗಿತ್ತು. ಇದಕ್ಕೆ ಗರಂ ಆಗಿರುವ ಸಚಿವರು ’ಗೇಲಿ ಮಾಡುವವರು ಅಸ್ಸಾಂಗೆ ಬಂದು ನೋಡಿ’ ಎಂದು ತಿರುಗೇಟು ನೀಡಿದ್ದಾರೆ.
ಶನಿವಾರ ಮಾತನಾಡಿದ್ದ ಆರೋಗ್ಯ ಸಚಿವ ಹಿಮಾಂತ ಬಿಸ್ವಾ ಶರ್ಮಾ, “ಅಸ್ಸಾಂನಲ್ಲಿ ಕೊರೊನಾ ಇಲ್ಲ, ಹಾಗಾಗಿ ಅಸ್ಸಾಂನಲ್ಲಿ ಈಗ ಫೇಸ್ ಮಾಸ್ಕ್ ಧರಿಸುವ ಅಗತ್ಯವಿಲ್ಲ. ಅಗತ್ಯವಿದ್ದರೆ ನಾನು ಜನರಿಗೆ ತಿಳಿಸುತ್ತೇನೆ” ಎಂದಿದ್ದರು. ಈ ಹೇಳಿಕೆ ಸಾಕಷ್ಟು ಗೇಲಿಗೆ ಒಳಗಾಗಿತ್ತು.
ಭಾನುವಾರ ಟ್ವೀಟ್ ಮಾಡಿರುವ ಆರೋಗ್ಯ ಸಚಿವ “ಫೇಸ್ ಮಾಸ್ಕ್ ಬಗ್ಗೆ ನನ್ನ ಹೇಳಿಕೆಯನ್ನು ಗೇಲಿ ಮಾಡುವವರು ಅಸ್ಸಾಂಗೆ ಬರಬೇಕು. ದೆಹಲಿ, ಕೇರಳ ಮತ್ತು ಮಹಾರಾಷ್ಟ್ರದಂತಹ ರಾಜ್ಯಗಳಿಗೆ ಹೋಲಿಸಿದರೆ, ಆಥೀಕ ಚೇತರಿಕೆಯೊಂದಿಗೆ ನಾವು ಎಷ್ಟು ಕೊರೊನಾ ಪ್ರಕರಣಗಳನ್ನು ಹೊಂದಿದ್ದೇವೆ ಎಂಬುದನ್ನು ನೋಡಬೇಕು” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಎರಡೇ ಪದದ ಟ್ವೀಟ್: ಚುನಾವಣಾ ಆಯೋಗದ ವಿರುದ್ಧ ಗಂಭೀರ ಆರೋಪ ಮಾಡಿದ ರಾಹುಲ್ ಗಾಂಧಿ
Those who are making fun on my statement on mask, must come to Assam and see how we have contained COVID-19 in compare to the states like Delhi, Kerala, and Maharashtra along with impressive recovery of our economy.We will celebrate Bihu also with the same enthusiasm this year
— Himanta Biswa Sarma (@himantabiswa) April 4, 2021
ಜೊತೆಗೆ “ನಾವು ಈ ವರ್ಷವೂ ಅದೇ ಉತ್ಸಾಹದಿಂದ ಬಿಹುವನ್ನು (ಅಸ್ಸಾಂನ ಹಬ್ಬ) ಆಚರಿಸುತ್ತೇವೆ” ಎಂದು ಹೇಳಿದ್ದಾರೆ.
ಆನ್ಲೈನ್ ಸುದ್ದಿ ವೆಬ್ಸೈಟ್ ದಿ ಲಾಲಾಂಟಾಪ್ದ ವರದಿಗಾರರಿಗೆ ನೀಡಿದ ಸಂದರ್ಶನದಲ್ಲಿ ಆರೋಗ್ಯ ಸಚಿವ ಹಿಮಾಂತ ಬಿಸ್ವಾ ಶರ್ಮಾ ಮಾಸ್ಕ್ ಧರಿಸುವ ಅಗತ್ಯವಿಲ್ಲ ಎಂಬ ಹೇಳಿಕೆ ನೀಡಿದ್ದರು.
ದೇಶದಲ್ಲಿ ಗಣನೀಯವಾಗಿ ಎರುತ್ತಿರುವ ಕೊರೊನಾ ಪ್ರಕರಣಗಳಲ್ಲಿ ಅಸ್ಸಾಂನ ಪಾಲು ಅತ್ಯಲ್ಪ. ದಿನಕ್ಕೆ 68 ಹೊಸ ಪ್ರಕರಣಗಳು ಮತ್ತು ಯಾವುದೇ ಸಾವುಗಳು ಕಾಣಿಸಿಕೊಂಡಿಲ್ಲ. ಆದರೆ ವೈರಸ್ ಹರಡುತ್ತಿರುವ ಮಟ್ಟ ಅಪಾಯಕಾರಿಯಾಗಿದೆ ಎನ್ನಲಾಗಿದೆ. ಪಾಸಿಟಿವ್ ಪ್ರಕರಣಗಳ ಪ್ರಮಾಣವು ನಾಲ್ಕು ವಾರಗಳ ಹಿಂದೆ ಶೇಕಡಾ 2.2 ರಷ್ಟು ಇದ್ದದ್ದು, ಈಗ 7.1 ಕ್ಕೆ ಏರಿಕೆಯಾಗಿದೆ.
ಕೊರೊನಾ ಸೋಂಕು ಉಲ್ಬಣಗೊಳ್ಳುತ್ತಿರುವ ಕಾರಣ ದೇಶದಲ್ಲಿ ನಡೆಯುತ್ತಿರುವ ವ್ಯಾಕ್ಸಿನೇಷನ್ ಡ್ರೈವ್ ಸೇರಿದಂತೆ ಕೋವಿಡ್ ಸಂಬಂಧಿತ ವಿಷಯಗಳನ್ನು ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ ಉನ್ನತ ಮಟ್ಟದ ಸಭೆ ನಡೆಸುತ್ತಿದ್ದಾರೆ. ಸಭೆಯಲ್ಲಿ ಕ್ಯಾಬಿನೆಟ್ ಕಾರ್ಯದರ್ಶಿ, ಪ್ರಧಾನಮಂತ್ರಿಯ ಪ್ರಧಾನ ಕಾರ್ಯದರ್ಶಿ, ಆರೋಗ್ಯ ಕಾರ್ಯದರ್ಶಿ ಸೇರಿದಂತೆ ಎಲ್ಲ ಹಿರಿಯ ಅಧಿಕಾರಿಗಳು ಭಾಗವಹಿಸುತ್ತಿದ್ದಾರೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ಇದನ್ನೂ ಓದಿ: ಕೊರೊನಾ ಸೋಂಕು ಉಲ್ಬಣ: ಉನ್ನತ ಮಟ್ಟದ ಸಭೆ ಕರೆದ ಪ್ರಧಾನಿ ಮೋದಿ