Homeಮುಖಪುಟನೆರೆಯ ಹೊರೆ: ನೆಮ್ಮದಿಯಲ್ಲಿ ಒಂದೂ ಊರಿಲ್ಲ, ಆರು ತಿಂಗಳಾದರೂ ಸೂರಿಲ್ಲ

ನೆರೆಯ ಹೊರೆ: ನೆಮ್ಮದಿಯಲ್ಲಿ ಒಂದೂ ಊರಿಲ್ಲ, ಆರು ತಿಂಗಳಾದರೂ ಸೂರಿಲ್ಲ

- Advertisement -
- Advertisement -

ಗದಗ: ‘ಕರೆಕ್ಟ್ ಅಂದ್ರ ಕರೆಕ್ಟ್’ ಎಂದು ಅಳತೆಪಟ್ಟಿ ಹಿಡಿದು ಮನೆ ಕಾಮಗಾರಿಯನ್ನು ಅಳೆದವರಂತೆ ಆಡುತ್ತಿರುವ ಜಿಲ್ಲೆಯ ಆಡಳಿತಶಾಹಿ, ನೆರೆ ಪ್ರವಾಹ ಬಂದು ಏಳು ತಿಂಗಳಾಗುತ್ತ ಬಂದರೂ ಮನೆ ನಿರ್ಮಾಣಕ್ಕೆ ಅಥವಾ ರಿಪೇರಿಗೆ ಎರಡನೇ ಕಂತಿನ ಹಣ ನೀಡಲು ತಯಾರಿಲ್ಲ. ಆರು ತಿಂಗಳಾದರೂ ಹಲವಾರು ಊರುಗಳ ನೂರಾರು ಕುಟುಂಬಗಳು ಸುಭದ್ರ ಸೂರಿಲ್ಲದೇ ಜೀವನ ನಡೆಸುತ್ತಿವೆ.

ಈ ಕಡೆ ಜಮೀನಿನಲ್ಲಾದ ಕೊರೆತ, ರಸ್ತೆ ಸೇರಿದಂತೆ ಒಂದಿಲ್ಲೊಂದು ಸಮಸ್ಯೆ ಇದ್ದೇ ಇದೆ. ಹೀಗಾಗಿ ಮಲಪ್ರಭೆ, ಬೆಣ್ಣೆಹಳ್ಳ ತಣ್ಣಗಾಗಿ ಒಣಗಿದರೂ, ನಮ್ಮ ಅಧಿಕಾರಿಗಳ ಒಣ ಉಸಾಬರಿ ಮಾತ್ರ ನಿಂತಿಲ್ಲ.

ಗಣಿ, ಭೂವಿಜ್ಞಾನ ಮತ್ತು ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲರ ನರಗುಂದ ಕ್ಷೇತ್ರ ನೆರೆಪ್ರವಾಹಕ್ಕೆ ಸಿಕ್ಕು ನಜ್ಜುಗುಜ್ಜಾಗಿದೆ. ಆದರೆ ಪಾಟೀಲರು ಇದರ ಬಗ್ಗೆ ತೆಲೆ ಕೆಡಿಸಿಕೊಂಡಿಲ್ಲ. ಪರಿಹಾರ ತಂದಿದ್ದಿನಲ್ಲ ಎಂದು ಮನೆಯಿಂದ ತಂದವರಂತೆ ಮಾತಾಡುತ್ತಾರೆ ಹೊರತು, ಆ ಪರಿಹಾರ ಸಂತ್ರಸ್ತರಿಗೆ ತಲುಪಿತೋ ಇಲ್ಲವೋ ಎಂಬ ಬಗ್ಗೆ ಕಾಳಜಿಯಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರಿಗೆ ತಾವು ಗಣಿ ಸಚಿವ ಎಂಬುದು ಇಂಪಾರ್ಟೆಂಟ್, ಅದಕ್ಕೇ ಅವರು ಜಿಲ್ಲೆಯ ಜೀವನಾಡಿ ಕಪ್ಪತಗುಡ್ಡದಲ್ಲಿ ಗಣಿಗಾರಿಕೆಗೆ ಹೊಂಚು ಹಾಕಿ ಕುಳಿತಿರುವ ಬಲ್ಡೊಟಾ ಮತ್ತು ಪೊಸ್ಕೊಗಳಂತಹ ಕಂಪನಿಗಳ ಬಗ್ಗೆ ಸಾಫ್ಟ್‌ ಕಾರ್ನರ್ ಹೊಂದಿದ್ದಾರೆ. ಗಣಿ ಖಾತೆ ನಿಭಾಯಿಸಬೇಕಲ್ಲ, ಪಾಪ, ಅವರಿಗೆ ಜಿಲ್ಲಾ ಉಸ್ತುವಾರಿ ಮಾಡಕು ಟೈಮ್ ಇಲ್ಲವಂತೆ.

 

ತಮ್ಮ ಹಕ್ಕಿನ ಹಣಕ್ಕೆ ಕಾದವರ ಎದುರು ಅಧಿಕಾರಿಗಳು ತಾಂತ್ರಿಕ ತೊಂದರೆ, ಮೆಜರ್‌ಮೆಂಟು, ಫ್ಲಿಂಥು, ನಿಯಮ ಎನ್ನುವುದಿದೆಯಲ್ಲ, ಅದಂತೂ ಬದುಕುವ ಹಕ್ಕಿನ ಮೇಲೆ ದಾಳಿ ಮಾಡಿದಂತೆ.

ಜಿಲ್ಲೆಯ ನೆರೆಪೀಡಿತ ತಾಲೂಕುಗಳಾದ ನರಗುಂದ ಮತ್ತು ರೋಣಗಳಲ್ಲಿ ಅಧಿಕಾರಶಾಹಿಯ ‘ಕಂತಿನ ಲೆಕ್ಕಕ್ಕೆ’ ಹೈರಾಣಾದವರು ಡಿಸಿಯವರಿಗೆ ದೂರು ತಲುಪಿಸಿದರೂ ಪ್ರಯೋಜನವಾಗಿಲ್ಲ.

ಅಂತೂ ಇಂತೂ ಪರಿಹಾರ ಬಂತು!
ಆರಂಭದಲ್ಲಿ ಈ ಸರ್ಕಾರದಿಂದ ನೆರೆ ಪರಿಹಾರ ಸಿಗುವುದೋ ಇಲ್ಲವೋ ಎಂಬ ಅನುಮಾನ, ಆತಂಕಗಳಿದ್ದವು. ಆದರೂ ಅಂತೂ ಇಂತೂ ಪರಿಹಾರ ಬಂತು. ಆದರೀಗ ಮುಳ್ಳಾಗಿರುವುದು ಕಂತು!

ಕೊಣ್ಣೂರು, ವಾಸನ, ಬೂದಿಹಾಳ, ಮೆಣಸಗಿ.. ಹೀಗೆ ನೆರೆಪೀಡಿತ ಯಾವ ಊರಿಗೆ ಹೋದರೂ ಜನರ ಗೋಳು ನಿಂತೇ ಇಲ್ಲ. ಮನೆ ನಿರ್ಮಾಣಕ್ಕೆ ಹಣ ನೀಡುವಾಗಲೇ ಗ್ರೇಡುಗಳ ಹೆಸರಿನಲ್ಲಿ ನಿಯಮಗಳ ಗೋಡೆಗಳು ಎದ್ದವು. ಮನೆ ಯಾವ ಪ್ರಮಾಣದಲ್ಲಿ ಹಾನಿಯಾಗಿದೆ ಎಂಬುದನ್ನು ವಿಂಗಡಿಸಲು ಎ, ಬಿ, ಮತ್ತು ಸಿ ಎಂದು ಮೂರು ಗ್ರೇಡ್‌ಗಳನ್ನು ಮಾಡಲಾಯಿತು. ಸಂಪೂರ್ಣ ಮನೆ ನೆಲಸಮವಾಗಿದ್ದರೆ ‘ಎ’ ಗ್ರೇಡ್‌ನಲ್ಲಿ ಅದಕ್ಕೆ ಪೂರ್ಣ ಪರಿಹಾರ, ಶೇ.50ರಷ್ಟು ಹಾನಿಯಾಗಿದ್ದರೆ ಅದಕ್ಕೆ ‘ಬಿ’ ಗ್ರೇಡ್‌ನಲ್ಲಿ ಶೇ.50 ಪರಿಹಾರ ಮತ್ತು ಶೇ.25ರಿಂದ 30ರಷ್ಟು ಹಾನಿಯಾಗಿದ್ದರೆ ‘ಸಿ’ ಗ್ರೇಡ್‌ನಲ್ಲಿ 25-30 ಸಾವಿರ ರೂ ನೀಡುವ ನಿಯಮ ಮಾಡಲಾಯಿತು.

ಮೊದಲನೆಯ ಕಂತೇನೋ ಬಂತು. ಆದರೆ ಇನ್ನು ಎಷ್ಟೋ ಜನರಿಗೆ ಎರಡನೇ ಕಂತು ಬರದೇ ಮನೆಗಳೆಲ್ಲ ಅರ್ಧಂಬರ್ಧ ರಿಪೇರಿಯಾಗಿ ನಿಂತಿವೆ. ಜಿಲ್ಲಾಧಿಕಾರಿ ಖಾತೆಯಲ್ಲಿ ಇನ್ನೂ 20 ಕೋಟಿ ರೂ ಉಳಿದಿದೆ. ಮೊದಲನೇ ಕಂತಿನ ಹಣದಲ್ಲಿ ಇಂತಿಷ್ಟು ಕಾಮಗಾರಿಯಾಗಿದ್ದರೆ ಮಾತ್ರ ಎರಡನೇ ಕಂತು ಎಂದು ಕ್ರೂರತನ ತೋರಲಾಗುತ್ತಿದೆ.

ಇವರು ನಿಯಮ ಮಾಡಿದ್ದು ಆರು ತಿಂಗಳ ಹಿಂದೆ. ಪ್ರತಿ ತಿಂಗಳೂ ಸಿಮೆಂಟ್, ಕಲ್ಲು, ಕಬ್ಬಿಣ, ನಿರ್ಮಾಣದ ಕೂಲಿ ಏರುತ್ತಲೇ ಇರುವಾಗ ಇವರು ಹೇಳಿದಷ್ಟು ಎತ್ತರಕ್ಕೆ ಮನೆ ತಂದು ನಿಲ್ಲಿಸಿದರಷ್ಟೇ ಇನ್ನೊಂದು ಕಂತು ಎನ್ನುವುದು ಅವೈಜ್ಞಾನಿಕ ಮತ್ತು ಹೊಣೆಗೇಡಿತನ.

ಕೊಣ್ಣೂರು ಗ್ರಾಮದಲ್ಲಿ ಸುಮಾರು 50 ಕ್ಕೂ ಹೆಚ್ಚು ಸಿ ಗ್ರೇಡ್ ಫಲಾನುಭವಿಗಳಿಗೆ ಒಂದನೆಯ ಕಂತಿನ ಹಣವನ್ನು ಬಿಡುಗಡೆ ಮಾಡಿದ್ದಾರೆ. ಆದರೆ ಎರಡನೇ ಕಂತು ಮರೀಚಿಕೆಯಾಗಿದೆ. ಹೀಗಾಗಿ ಫಲಾನುಭವಿಗಳ ಮನೆಗಳು ಅಪೂರ್ಣವಾಗಿವೆ. ಮನೆಗಳನ್ನು ಪೂರ್ಣ ಮಾಡಬೇಕೆಂದರೆ, ಲೋಕದಲ್ಲಿಲ್ಲದ ನಿಯಮ ತೋರಿಸುವ ಅಧಿಕಾರಿಗಳು ನಿರಾಶೆ ಮೂಡಿಸುತ್ತಿದ್ದಾರೆ. ಇಂತಹ ಆಪತ್ತಿನ ಸಮಯದಲ್ಲಿ ಮಧ್ಯಸ್ಥಿಕೆ ವಹಿಸಬೇಕಾದ ಜನಪ್ರತಿನಿಧಿಗಳು ಹತ್ತಿರ ಸುಳಿಯುತ್ತಿಲ್ಲ.

ನೆರೆಪ್ರವಾಹಕ್ಕೂ ಮುನ್ನ ನೆಮ್ಮದಿ ಹಾಗೂ ಸ್ವಾಭಿಮಾನದಿಂದ ಬದುಕು ಸಾಗಿಸುತ್ತಿದ್ದ ತಮ್ಮದೇ ತೆರಿಗೆ ಹಣಕ್ಕೆ ‘ಕಂತು’ ಎಂಬ ಹಾಳೆ ಸುತ್ತಿ ಭಿಕ್ಷೆಯಂತೆ ನೀಡುತ್ತಿರುವುದನ್ನು ಕಂಡು ಅಸಮಾಧಾನಗೊಂಡಿದ್ದಾರೆ.

ಮಾರ್ಚ್‌ನಲ್ಲೇನಾದರೂ ಅಕಾಲಿಕ ಮಳೆ ಸುರಿದರೆ ಈಗ ಮತ್ತೆ ಮನೆ ತುಂಬ ನೀರು ನಿಲ್ಲಲಿದೆ. ಇದ್ಯಾವುದರ ಪರಿವೆಯೂ ಇಲ್ಲದ ಜಿಲ್ಲಾಡಳಿತ ಫ್ಲಿಂಥು, ಜಿಪಿಎಸ್ಸು ಅಂತೆಲ್ಲ ಮಾತಾಡುತ್ತ ಕುಳಿತಿದೆ.

ಸಚಿವ ಸಿ.ಸಿ ಪಾಟೀಲ್‌

ರೋಣ ಮತ್ತು ನರಗುಂದದ ಎಲ್ಲ ಹಂತಗಳ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಜನರ ಪರವಾಗಿ ಧ್ವನಿ ಎತ್ತುವುದು ಈಗ ಅನಿವಾರ್ಯ. ಅವರನ್ನು ಆರಿಸಿದ್ದು ಇನ್ನೇತಕ್ಕೆ?


ಸರ್ವೆ ನಂ. 703 ಮತ್ತು 705ರಲ್ಲಿ 15*20 ವಿಸ್ತೀರ್ಣದ ನನ್ನ ಎರಡು ಮನೆ ಇದ್ದವು. 703ರ ಮನೆ ಪೂರ್ತಿ ಬಿದ್ದಿದ್ದರೆ, 705ರ ಮನೆ ಭಾಗಶ: ಬಿದ್ದಿತ್ತು. ಸರ್ವೆ ಮಾಡಲು ಬಂದವರಿಗೆ 705ರ ಮನೆ ಬೇಡ, ಪೂರ್ತಿ ಬಿದ್ದ 703ರ ಮನೆ ಪರಿಗಣಿಸಿ ಎಂದೆ. ಎರಡನ್ನೂ ಸರ್ವೇ ಮಾಡಿಕೊಂಡು ಹೋಗಿ, ಭಾಗಶ: ಬಿದ್ದ ಮನೆ ಆಯ್ಕೆ ಮಾಡಿದ್ದಾರೆ. ಈ ಕುರಿತು ಡಿಸಿವರೆಗೆ ದೂರು ಕೊಟ್ಟರೂ ಸರಿಪಡಿಸಿಲ್ಲ.
-ವೀರಪ್ಪ ದ್ಯಾವಣ್ಣವರ, ಕೊಣ್ಣೂರು


ನನ್ನ ಹೊಲ, ಮನೆ ಎರಡೂ ಹಾನಿಯಾಗಿವೆ. ಭಾಗಶ: ಹಾನಿ ಎಂದು ಮೊದಲ ಕಂತು 25 ಸಾವಿರ ರೂ. ನೀಡಿದರು. 6 ತಿಂಗಳಾದರೂ 2ನೇ ಕಂತು ನೀಡುತ್ತಿಲ್ಲ. ತಹಸೀಲ್ದಾರ್, ಡಿಸಿ ಗಮನಕ್ಕೂ ತಂದರೂ ಪ್ರಯೋಜನವಾಗಿಲ್ಲ.
– ಕೃಷ್ಣಪ್ಪ, ವಾಸನ

ಎಂ.ಜಿ. ಹಿರೇಮಠ, ಜಿಲ್ಲಾಧಿಕಾರಿ

ನೆರೆ ಪರಿಹಾರಕ್ಕೆ 57 ಕೋಟಿ ರೂ. ಖರ್ಚು ಮಾಡಿದ್ದೇವೆ. ಇನ್ನೂ 20 ಕೋಟಿ ರೂ ಇದೆ. ಆದರೆ ಮನೆ ನಿರ್ಮಾಣ ಅಥವಾ ರಿಪೇರಿಗೆ ಮೊದಲ ಕಂತು ಪಡೆದ ಬಹುತೇಕರು ಅದನ್ನು ಪೂರ್ಣಗೊಳಿಸಿಲ್ಲ. ಫ್ಲಿಂಥ್‌ವರೆಗೂ ಬಂದರೆ 2ನೇ ಕಂತು ಬಿಡುಗಡೆ ಮಾಡುತ್ತೇವೆ, ಅವರೇ ಅವಸರ ಮಾಡುತ್ತಿಲ್ಲ. 10 ಕೋಟಿ ರೂ ಬೆಳೆ ಪರಿಹಾರ ನೇರವಾಗಿ ರೈತರ ಖಾತೆಗೆ ಹೋಗಿದೆ. ಕೆಲವು ತಾಂತ್ರಿಕ ಸಮಸ್ಯೆಯಿಂದ ಕೆಲವರಿಗೆ ತಲುಪಿಲ್ಲ. ಸರಿಪಡಿಸುತ್ತೇವೆ.
-ಎಂ.ಜಿ. ಹಿರೇಮಠ, ಜಿಲ್ಲಾಧಿಕಾರಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...