Homeಅಂಕಣಗಳುಮತ್ತೆ ಗರಿಗೆದರಿದ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ

ಮತ್ತೆ ಗರಿಗೆದರಿದ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ

- Advertisement -
- Advertisement -

“ಬೆಳಗಾವಿ ಸೇರಿದಂತೆ ಮರಾಠಿ ಮಾತಾಡುವ ನಾಲ್ಕು ಜಿಲ್ಲೆಗಳ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಬೇಕು. ಇಂದಲ್ಲಾ ನಾಳೆ ಇದು ಆಗಲೇಬೇಕು (ಝಾಲಚ ಪಾಹೀಜೆ)” ಎನ್ನುವ ಘೋಷವಾಕ್ಯ ಗಡಿ ನಗರ ಬೆಳಗಾವಿಯಲ್ಲಿ ಚುನಾವಣೆ ಬಂದಾಗೊಮ್ಮೆ ಮೊಳಗುತ್ತದೆ. ಇದು ಸುಮಾರು 66 ವರ್ಷಗಳಿಂದ ನಡೆಯುತ್ತಿದೆ.

ಗಡಿ ಆಚೆಯ ಹೋರಾಟಗಾರರು ಹಾಗೂ ಈಚೆಗಿನ ಹೋರಾಟಗಾರರಿಗೆ ಜಟಾಪಟಿ ಶುರು ಆಗುತ್ತದೆ. ಆದರೆ ಅವರಿಬ್ಬರೂ ತಮ್ಮತಮ್ಮ ಸಿಟ್ಟನ್ನು ಬಡಪಾಯಿ ಬಸ್ಸುಗಳ ಮೇಲೆ ತೀರಿಸಿಕೊಳ್ಳುತ್ತಾರೆ. ಮೊದಲೇ ಸೊರಗಿಹೋಗಿರುವ ಮಹಾರಾಷ್ಟ್ರದ ಬಸ್ಸುಗಳು ಇನ್ನಷ್ಟು ಶಕ್ತಿಹೀನವಾಗಿ ಕುಟುಕುಟು ಓಡಾಡತೊಡಗುತ್ತವೆ. ಸೂಪರ್ ಸ್ಟಾರ್ ರಜನಿ ಅವರ ಪಾದಧೂಳು ಸೋಕಿದ ಬೆಂಗಳೂರಿನ ಮೆಜೆಸ್ಟಿಕ್ ಟು ಜೆಪಿ ನಗರವೆಂಬೋ ರೂಟಿನಲ್ಲಿ ಜಮ್‌ಜಮ್ ಅಂತ ಓಡಾಡಿ ನಂತರ ರಿಟೈರ್ ಆಗಿ ಕಲ್ಯಾಣ ಕರ್ನಾಟಕಕ್ಕೆ ಬಂದ ಕೆಂಪು ಬಸ್ಸುಗಳು ಇಲ್ಲಿ ಮೂತಿಗೆ ಮಸಿ ಬಳಿಸಿಕೊಳ್ಳುತ್ತವೆ; ರಾತ್ರಿ ಕತ್ತಲಾದ ಮೇಲೆ ಬೆಳಗಾವಿಗೆ ಬಂದು ಬಸ್ ನಿಲ್ದಾಣದ ಮೂಲೆಯಲ್ಲಿ ಯಾರಿಗೂ ಕಾಣದಂತೆ ನಿಂತುಕೊಳ್ಳುತ್ತವೆ. “ನಮ್ ಬ್ಯಾಂಗ್‌ಲೋರ್‌ನಲ್ಲಿ ಎಷ್ಟು ಚೆನ್ನಾಗಿದ್ದೆ, ಯಾರೋ ಕೆಟ್ಟ ಆಫೀಸರ್‌ಗಳು ನನ್ನನ್ನ ಜುಜುಬಿ ಒಂದು ಲಕ್ಷಕ್ಕೆ ಇಲ್ಲಿಗೆ ಮಾರ್‌ಬುಟ್ರೂ” ಅಂತ ಪಕ್ಕದ ಬಸ್ಸಿಗೆ ಗೋಳು ಹೇಳುತ್ತಾ, ಕಣ್ಣಿನಿಂದ ಕಪ್ಪಾಗಿ ಹೋದ ಇಂಜಿನ್ ಆಯಿಲ್ ಸುರಿಸುತವೆ.

ಸ್ಥಳೀಯ ‘ಮಧ್ಯವರ್ತಿ ಮಹಾರಾಷ್ಟ್ರ ಏಕೀಕರಣ ಸಮಿತಿ’ ಎನ್ನುವ ಪಕ್ಷ ಪ್ರತಿ ಬಾರಿ ಬಿಸಿರಕ್ತದ ತರುಣರನ್ನು ಕೆಣಕುತ್ತದೆ. ಅವರು ಕರ್ನಾಟಕ ಏಕೀಕರಣದ ದಿವಸ ‘ಕಾಳಾ ದಿನ್’ ಆಚರಿಸುತ್ತಾರೆ. ಪಾದಯಾತ್ರೆ, ಸೈಕಲ್ ಯಾತ್ರೆ ನಡೆಸುತ್ತಾರೆ. ಹಿರಿಯ ಪೊಲೀಸು ಅಧಿಕಾರಿಗಳು ಸುತ್ತಮುತ್ತಲಿನ ಜಿಲ್ಲೆಗಳ ಪೊಲೀಸರನ್ನು ಕರೆಸಿ ದೊಡ್ಡದೊಡ್ಡ ಬ್ಯಾರಿಕೇಡ್‌ಗಳನ್ನು ಹಾಕಿಸಿ, ರಾಜ್ಯೋತ್ಸವದ ಮೆರವಣಿಗೆ ಹಾಗೂ ಕಪ್ಪು ವಸ್ತ್ರಧಾರಿಗಳ ಯಾತ್ರೆ ಎರಡೂ ಒಂದಕ್ಕೊಂದು ಭೇಟಿ ಆಗದ ಹಾಗೆ ನೋಡಿಕೊಳ್ಳುತ್ತಾರೆ.

‘ತಮ್ಮ ಎಲೆಯಲ್ಲಿ ಕತ್ತೆ ಸತ್ತು ಬಿದ್ದಾಗ ಬೇರೆಯವರ ಎಲೆಯಲ್ಲಿ ನೊಣ ಹೊಡೆಯುವ’ ಮಹಾರಾಷ್ಟ್ರದ ಕೆಲ ರಾಜಕಾರಣಿಗಳು ಬೆಳಗಾವಿಯ ವಿಷಯ ಬಂದಾಗ ಮುಂಬೈ ಬಿಟ್ಟು ಓಡೋಡಿ ಬರುತ್ತಾರೆ. ಇಲ್ಲಿ ಬಂದು ಬಂದ್, ಧರಣಾ, ಕರ್ಫ್ಯು ಮುಂತಾದವುಗಳನ್ನು ಪ್ರಾಯೋಜಿಸುತ್ತಾರೆ. ಆದರೆ ಅಂತಾರಾಷ್ಟ್ರೀಯ ವಿಷಯಗಳ ಬಗ್ಗೆ ಭಯಂಕರ ಭಾಷಣ ಬಿಗಿಯುವ ಗಡಿ ಜಿಲ್ಲೆಯ ನಾಯಕರು ಗಡಿ ಸಮಸ್ಯೆ ಬಂದಾಗ ಬಾಯಲ್ಲಿರುವ ಅವಲಕ್ಕಿ ಚಪ್ಪರಿಸುತ್ತಾ ಮಿರ್ಚಿ-ಭಜಿಯ ಬಗ್ಗೆ ಚರ್ಚೆ ನಡೆಸುತ್ತಾ ಇರುತ್ತಾರೆ. ಇದೇ ನಾಯಕರು, ತಮ್ಮ ಸಕ್ಕರೆ ಕಾರ್ಖಾನೆಗಳ ಸಮಸ್ಯೆ ಇದ್ದಾಗ ಮುಂಬಯಿಗೆ ಹೋಗಿ ಅಲ್ಲಿನ ನೇತಾರರನ್ನು ಅಣ್ಣಾ-ಅಕ್ಕಾ ಎಂದು ಓಲೈಸಿ ಕೆಲಸ ಮಾಡಿಸಿಕೊಳ್ಳುತ್ತಾರೆ.

ಗಡಿ ಆಚೆ-ಈಚಿನ ನಾಯಕರು ತಮ್ಮ ಅನುಕೂಲಸಿಂಧು ರಾಜಕಾರಣದಿಂದಾಗಿ ಕನ್ನಡಿಗರು-ಮರಾಠಿಗರು ಒಬ್ಬರು ಇನ್ನೊಬ್ಬರನ್ನು ಸಂಶಯದಿಂದ ನೋಡುವ ಸನ್ನಿವೇಶ ಸೃಷ್ಟಿಸಿಬಿಟ್ಟಿದ್ದಾರೆ.

ಹಿಂದೆಲ್ಲಾ ಹೀಗಿರಲಿಲ್ಲ. ಗಾಂಧೀಜಿ ಅವರ ಯಂಗ್ ಇಂಡಿಯಾದಿಂದ ಪ್ರೇರಣೆ ಪಡೆದು ಬಾಬುರಾವ್ ಠಾಕೂರ್ ಅವರು ತರುಣ್ ಭಾರತ ಅನ್ನುವ ನಾಲ್ಕು ಪುಟಗಳ ಪತ್ರಿಕೆ ಶುರು ಮಾಡಿದರು. ಅದು ಎರಡು ಪುಟ ಕನ್ನಡ ಹಾಗೂ ಎರಡು ಪುಟ ಮರಾಠಿ ಇತ್ತು. ಹೀಗೆ ಕೆಲವು ವರ್ಷ ನಡೆಯಿತು. ಆದರೆ 1956ಕ್ಕೆ ರಾಜ್ಯ ಮರು ವಿಂಗಡಣೆ ಆದಾಗ ಅದರ ಸಂಪಾದಕೀಯ ದೃಷ್ಟಿ ಬದಲಾಯಿತು. ಅದು ಸಂಪೂರ್ಣ ಮರಾಠಿ ಪತ್ರಿಕೆ ಆಯಿತು. ಬೆಳಗಾವಿ ಸೇರಿದಂತೆ ಇತರ ಮರಾಠಿ ಬಹುಸಂಖ್ಯಾತ ಪ್ರದೇಶಗಳು ಮಹಾರಾಷ್ಟ್ರ ಸೇರಲೇಬೇಕು ಎನ್ನುವ ಏಕಮೇವ ಅಜೆಂಡಾವನ್ನು ಪತ್ರಿಕೆ ಅಳವಡಿಸಿಕೊಂಡಿತು. ಈಗಲೂ ಅದೇ ನಡೆಯುತ್ತಿದೆ. ಅವರ ಮಗ ಕಿರಣ್ ಠಾಕೂರ್ ಈಗ ಆ ಪತ್ರಿಕೆಯ ಸಂಪಾದಕರು. ಅವರು ದೇಶದಲ್ಲಿನ ಅತಿ ದೊಡ್ಡ ಸಹಕಾರಿ ಸಂಸ್ಥೆಗಳಲ್ಲಿ ಒಂದರ ಮಾಲೀಕರು. ತಮ್ಮ ತಂದೆಯಿಂದ ಬಳುವಳಿ ಪಡೆದ ಪತ್ರಿಕೋದ್ಯಮ ಅಲ್ಲದೇ ಇನ್ನೂ ಅನೇಕ ವ್ಯವಹಾರ-ವ್ಯಾಪಾರಗಳನ್ನು ಅವರು ನಡೆಸುತ್ತಿದ್ದಾರೆ. ನೆನಪಾದಾಗ ಒಮ್ಮೆ ಮುಂಬಯಿಯ ಮಂತ್ರಾಲಯಕ್ಕೆ ಹೋಗಿ ಅಲ್ಲಿನ ತಮ್ಮ ದೇವರ ದರ್ಶನ ಮಾಡಿ, ಗಡಿ ವಿವಾದ ಇನ್ನೂ ಶತಮಾನಗಳವರೆಗೆ ಮುಂದುವರೆಯಲಿ, ನಮ್ಮ ಕೈ ತುಂಬಾ ಕೆಲಸ ಇರಲಿ ಎಂದು ಪ್ರಾರ್ಥಿಸಿ ಬರುತ್ತಾರೆ.

ಇದಕ್ಕೆಲ್ಲ ರಾಜ್ಯ ಮರು ವಿಂಗಡನಾ ಆಯೋಗದ ಶಿಫಾರಸು ಕಾರಣ ಅಂತ ಮರಾಠಿ ಹೋರಾಟಗಾರರು ಹೇಳುತ್ತಾರೆ. ಆದರೆ ಪ್ರಧಾನಿ ನೆಹರು ಅವರು ನೇಮಿಸಿದ ಮೊದಲ ಆಯೋಗ ರಾಜ್ಯಗಳನ್ನು ಭಾಷಾ ಆಧಾರದ ಮೇಲೆ ವಿಂಗಡಣೆ ಮಾಡಿ ಅಂತ ಹೇಳಲಿಲ್ಲ. ಭಾಷೆ- ಪ್ರದೇಶ ಮುಂತಾದ ಭಾವನಾತ್ಮಕ ವಿಷಯಗಳ ಆಧಾರದ ಮೇಲೆ ರಾಜ್ಯ ಮರು ನಿರ್ಮಾಣ ಆಗಬಾರದು. ಅದು ರಾಜಧಾನಿಗೆ ಇರುವ ಅಂತರ, ಆಡಳಿತಾತ್ಮಕ ಅನುಕೂಲ, ಮೂಲ ಸೌಕರ್ಯಗಳ ಇರುವಿಕೆ-ಅಗತ್ಯ, ಜನಸಂಖ್ಯೆ ಇತ್ಯಾದಿ ಅಂಶಗಳ ಆಧಾರದ ಮೇಲೆ ನಿರ್ಧಾರ ಆಗಬೇಕು ಎಂದು ಆ ಸಮಿತಿಯ ತಜ್ಞರು ಹೇಳಿದರು. ಆಂಧ್ರದ ಭಾಷಾ ಪ್ರೇಮಿ ಹೋರಾಟಗಾರ ಪೊಟ್ಟಿ ಶ್ರೀರಾಮುಲು ಅವರು ಯಶಸ್ವಿ ಆಮರಣ ಉಪವಾಸ ಮಾಡಿದ ಮೇಲೆ ಪ್ರಧಾನಿ ಕಚೇರಿಯ ಮೇಲೆ ಒತ್ತಡ ಹೆಚ್ಚಾಗಿ ಎರಡನೇ ಆಯೋಗ ನೇಮಕ ಆಯಿತು. ಇವರು ಒಂದು ಭಾಷೆ ಮಾತಾಡುವವರು ಒಂದು ಕಡೆ ಎನ್ನುವ ತತ್ವದ ಮೇಲೆ ರಾಜ್ಯ ವಿಂಗಡಣೆ ಮಾಡಿದರು. ಆದರೂ ಒಂದೇ ಭಾಷೆ ಮಾತಾಡುವ ನಾಲ್ಕು ರಾಜ್ಯಗಳನ್ನು ಸೃಷ್ಟಿ ಮಾಡಿದರು. ಇರಲಿ.

ಇದನ್ನೂ ಓದಿ: ಬೆಳಗಾವಿ: ಕಾಲೇಜಿನಲ್ಲಿ ಕನ್ನಡ ಬಾವುಟ ಹಿಡಿದ ವಿದ್ಯಾರ್ಥಿಗೆ ಥಳಿತ -ಕರವೇ ಪ್ರತಿಭಟನೆ

ಅದನ್ನು ಒಪ್ಪದ ಅಂದಿನ ಮಹಾರಾಷ್ಟ್ರ ಸರಕಾರ, ಕೇಂದ್ರಕ್ಕೆ ಮೊರೆಹೋಯಿತು. ಆಗ ಸರಕಾರ ಸುಪ್ರೀಂ ಕೋರ್ಟಿನ ಮಾಜಿ ನ್ಯಾಯಮೂರ್ತಿ, ಕಾಶ್ಮೀರ ಮೂಲದವರಾದ ಮಿಹಿರ ಚಂದ ಮಹಾಜನ್ ಅವರ ಅಧ್ಯಕ್ಷತೆಯಲ್ಲಿ ಆಯೋಗ ರಚಿಸಿತು.

ಒಂದೇ ಭಾಷೆ ಮಾತಾಡುವರು ಒಂದೇ ಕಡೆ ಇರಲಿ ಎನ್ನುವ ತತ್ವ ಒಪ್ಪುವುದಾದರೆ ಬೆಳಗಾವಿ ಹಾಗೂ ಇತರ ಕೆಲವು ಪ್ರದೇಶ ಮಹಾರಾಷ್ಟ್ರಕ್ಕೆ ಹೋಗಲಿ, ಮಹಾರಾಷ್ಟ್ರದ ಕೆಲವು ತಾಲೂಕುಗಳು ಕರ್ನಾಟಕಕ್ಕೆ ಬರಲಿ ಎಂದು ಮಹಾಜನ್ ಆಯೋಗ ಶಿಫಾರಸು ಮಾಡಿತು. ಇದನ್ನು ಒಪ್ಪದ ಮಹಾರಾಷ್ಟ್ರ 2004ರಲ್ಲಿ ಸುಪ್ರೀಂ ಕೋರ್ಟಿಗೆ ಹೋಯಿತು. ಅದರ ಕೊನೆಯ ವಾದ ವಿವಾದದ ತಾರೀಕು ನವೆಂಬರ್ 30. ತೀರ್ಪು ಬರುವುದು ಇನ್ನೂ ತಡ ಆಗಬಹುದು.

ಆಯಿತು. ಈಗ ಒಂದು ಭಾಷೆ ಮಾತಾಡುವವರು ಒಂದೇ ಕಡೆ ಇರಲಿ ಎನ್ನುವ ಬೇಡಿಕೆಯಲ್ಲಿ ಏನು ತಪ್ಪಿದೆ? ತಪ್ಪೇನೂ ಇಲ್ಲ. ಆದರೆ ಅದು ಭಾಷಾ ಗಣತಿಯ ಮೇಲೆ ಅವಲಂಬಿತವಾಗಿರಬೇಕೆ ಹೊರತು, ಚುನಾವಣೆ ಪೂರ್ವದಲ್ಲಿ ವಿವಿಧ ಜಾತಿ ನಾಯಕರು ತಮ್ಮತಮ್ಮ ಜಾತಿಯ ಸಂಖ್ಯೆಯ ಬಗ್ಗೆ ಮಾತಾಡುವ ತಳ ಬುಡವಿಲ್ಲದ ಮಾತುಗಳಂತೆ ಸುಳ್ಳಾಗಿರಬಾರದು.

ಇನ್ನೊಂದು, ಇದು ಸಾಂಸ್ಕೃತಿಕ ಹೋರಾಟ ಆಗಬೇಕೇ ಹೊರತು, ರಾಜಕೀಯ ಹೋರಾಟ ಆಗಬಾರದು. ಈಗ ಆಗುತ್ತಿರುವುದು ಎರಡನೆಯದು. ಇನ್ನೊಂದು ದುಃಖಕರ ಸಂಗತಿ ಅಂದರೆ ಇದರ ಚರ್ಚೆ ಆರೋಗ್ಯಕರವಾಗಿ ಆಗುತ್ತಿಲ್ಲ. ಮರಾಠಿ ಪತ್ರಿಕೆಗಳು ಕರ್ನಾಟಕವನ್ನು ‘ಕರ್ ನಾಟಕ’ ಅಂತ ಕರೆಯುವುದೂ, ಕನ್ನಡ ಪತ್ರಿಕೆಗಳು ಮರಾಠಿ ಹೊರಟಗಾರರನ್ನು ‘ನಾಡದ್ರೋಹಿಗಳು’, ‘ಕಂಗಾಲ ಕಂಪನಿ’ ಅಂತ ಕರೆಯುವುದು, ನಡೆದೇ ಇರುತ್ತದೆ.

ಗಡಿಯ ಮರಾಠಿ ಹೋರಾಟಗಾರರು ಕರ್ನಾಟಕ ಏಕೀಕರಣ ದಿನವನ್ನು ಕರಾಳ ದಿನವನ್ನಾಗಿ ಆಚರಿಸುತ್ತಾರೆ ಅನ್ನುವುದನ್ನು ಘೋರವಾಗಿ ಖಂಡಿಸಲಾಗುತ್ತದೆ. ಆದರೆ ಕಾಸರಗೋಡು ಕನ್ನಡಿಗರು ಕರ್ನಾಟಕ ಸೇರಲು ಬಯಸುತ್ತಿದ್ದಾರೆ ಎನ್ನುವ ಮಾತುಗಳನ್ನು ಹೆಮ್ಮೆಯಿಂದ ಹೇಳಿಕೊಳ್ಳಲಾಗುತ್ತದೆ. ನಮಗೆ ಇದು ಸರಿ ಎನ್ನಿಸಿದರೂ ಹೊರಗಿನಿಂದ ನೋಡುವವರಿಗೆ ಕನ್ನಡಿಗರದು ಇಬ್ಬಗೆ ನೀತಿ ಅನ್ನಿಸಬಹುದು.

ಕೊನೆಯದಾಗಿ, ಯಾವ ರಾಜ್ಯವೂ ಇನ್ನೊಂದು ರಾಜ್ಯಕ್ಕೆ ತನ್ನ ಪ್ರದೇಶವನ್ನು ಸುಲಭವಾಗಿ ಬಿಟ್ಟುಕೊಡುವುದಿಲ್ಲ. ಆದರೆ ಈ ಐಡಿಯಾ ಪ್ರಾಯೋಗಿಕವಲ್ಲ ಎನ್ನುವುದು ಅನೇಕರಿಗೆ ಗೊತ್ತಿದೆ. ಅದನ್ನು ಜೋರಾಗಿ ಪ್ರತಿಪಾದಿಸುವವರಿಗೂ ಅದು ಗೊತ್ತಿರಬಹುದು. ಅವರು ಜೋರಾಗಿ ಹೇಳುತ್ತಿಲ್ಲ ಅಷ್ಟೇ. ಭಾಷೆಯ ಹೆಸರಿನಲ್ಲಿ ಮನೆ ಮಠ ಬಿಟ್ಟು, ಬಸ್ಸಿಗೆ ಮಸಿ ಹಚ್ಚುವ ಹುಡುಗರಿಗೆ ಇದು ಗೊತ್ತಾಗುತ್ತಿಲ್ಲ.

ಭಾಷಾ ಜಗಳ ಅನ್ನುವುದು ಅಂತಾರಾಷ್ಟ್ರೀಯ ಸಮಸ್ಯೆ. ಕೆನಡಾ ದೇಶದ ಕೇಬೇಕ ಪ್ರಾಂತದವರು ಫ್ರೆಂಚ್ ಮಾತಾಡುತ್ತಾರೆ. ಫ್ರಾನ್ಸ್ ದೇಶಕ್ಕೆ ಸೆಡ್ಡು ಹೊಡೆದು ಫ್ರೆಂಚ್ ಸಿನಿಮಾ ತಯಾರಿಸುತ್ತಾರೆ. ಟರ್ಕಿಯ ಅನೇಕ ಪ್ರದೇಶಗಳಲ್ಲಿ ಅರ್ಧ ಜನ ಒಂದು, ಇನ್ನರ್ಧ ಜನ ಇನ್ನೊಂದು ಭಾಷೆ ಮಾತಾಡುತ್ತಾರೆ. ಎಲ್ಲಾ ಹೋಗಲಿ, ಆಫ್ರಿಕಾದ ಉಬಾಂಗ ಪ್ರದೇಶದಲ್ಲಿ ಗಂಡು ಮಕ್ಕಳು ಬೇರೆ- ಹೆಣ್ಣು ಮಕ್ಕಳು ಬೇರೆ ಭಾಷೆ ಮಾತಾಡುತ್ತಾರೆ.

ಭಾಷೆ ನಮ್ಮನ್ನು ಜೋಡಿಸುವ ಉಪಕರಣ ಆಗಬೇಕೇ ಹೊರತು ಸ್ವಾರ್ಥ ಸಾಧನೆಯ ರಾಜಕಾರಣಿಗಳ ಆಯುಧವಾಗಬಾರದು; ವಿವಿಧ ಭಾಷೆ ಮಾತಾಡುವ, ನೆರೆ ಹೊರೆಯಲ್ಲಿ ಜೀವಿಸುವ ಅಣ್ಣ ತಮ್ಮಂದಿರನ್ನು ಪರಸ್ಪರ ವಿರೋಧಿಗಳನ್ನಾಗಿಸುವ ಹತಾರವಾಗಬಾರದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...

ಮುಸ್ಲಿಂ ಮಹಿಳೆಯರ ವಿರುದ್ಧದ ಷರಿಯಾ ಕಾನೂನಿಗೆ ಏಕರೂಪ ನಾಗರಿಕ ಸಂಹಿತೆ ಪರಿಹಾರ: ಸುಪ್ರೀಂ ಕೋರ್ಟ್

"ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ತಾರತಮ್ಯದ ಆನುವಂಶಿಕ ನಿಬಂಧನೆಗಳನ್ನು ಪರಿಹರಿಸಲು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅತ್ಯಂತ ಪರಿಣಾಮಕಾರಿ ಪರಿಹಾರ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಮಾ.20) ಹೇಳಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ...

ಮುಂಬೈ: ಬಜೆಟ್ ಅಧಿವೇಶನದ ನಡುವೆ ವಿಧಾನ ಭವನದ ಬಳಿ ವ್ಯಕ್ತಿಯೊಬ್ಬನಿಂದ ಆತ್ಮಹತ್ಯೆಗೆ ಯತ್ನ: ವಶಕ್ಕೆ ಪಡೆದ ಪೊಲೀಸರು

ಮುಂಬೈ: ಮಾರ್ಚ್ 11, ಬುಧವಾರ ಮಹಾರಾಷ್ಟ್ರ ವಿಧಾನ ಭವನದ ಹೊರಗೆ ವ್ಯಕ್ತಿಯೊಬ್ಬರು ಆತ್ಮಾಹುತಿ ಮಾಡಿಕೊಳ್ಳಲು ಯತ್ನಿಸಿರುವುದಾಗಿ ವರದಿಯಾಗಿದೆ. ತಕ್ಷಣವೇ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದಾರೆ.  2026 ರ ಮಹಾರಾಷ್ಟ್ರ ಬಜೆಟ್ ಅಧಿವೇಶನ ವಿಧಾನ ಭವನದಲ್ಲಿ...

ಕೋವಿಡ್ ಲಸಿಕೆ ಕೆಲ ಸಾವುಗಳಿಗೆ ಕಾರಣವಾಗಿದೆ ಎಂದು ಅಧಿಕೃತ ದತ್ತಾಂಶ ತೋರಿಸಿದೆ, ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಸರ್ಕಾರದ ಅಧೀನದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲಕ ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ. ಕೋವಿಡ್ ಲಸಿಕೆ ಪಡೆದ ಬಳಿಕ ಕೆಲ ಸಾವುಗಳು ಸಂಭವಿಸಿರುವುದನ್ನು ಅಧಿಕೃತ ದತ್ತಾಂಶಗಳೇ ದೃಢಪಡಿಸಿವೆ. ಹೀಗಿರುವಾಗ, ಲಸಿಕೆ ಹಾಕಿಸಿಕೊಂಡ ನಂತರ ಸಾವು...

ತಮಿಳುನಾಡು| ಪೊಲೀಸ್ ದೌರ್ಜನ್ಯದಿಂದ ಎರಡು ತಿಂಗಳಲ್ಲಿ ನಾಲ್ವರು ದಲಿತರು ಸಾವು

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದನ್ನು ಪ್ರತಿಬಿಂಬಿಸುವ ಆತಂಕಕಾರಿ ವಿಚಾರವೊಂದು ಮುನ್ನಲೆಗೆ ಬಂದಿದ್ದು, ಪೊಲೀಸ್ ಹಿಂಸಾಚಾರದಿಂದಾಗಿ ಎರಡು ತಿಂಗಳ ಅವಧಿಯಲ್ಲಿ ನಾಲ್ವರು ದಲಿತರು ಸಾವನ್ನಪ್ಪಿದ್ದಾರೆ. ಈ ಸಾವುಗಳಲ್ಲಿ, ಎರಡು ಪ್ರಕರಣಗಳನ್ನು...

ಪಶ್ಚಿಮ ಏಷ್ಯಾ ಸಂಘರ್ಷ| ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿದ್ದಾಗಿ ವಿಡಿಯೋ ಹಂಚಿಕೊಂಡ ಅಮೆರಿಕ ಸೇನೆ

ಪಶ್ಚಿಮ ಏಷ್ಯಾದಿಂದ ತೈಲ ರಫ್ತನ್ನು ತಡೆಯಲು ಇರಾನ್ ಪ್ರಯತ್ನಿಸುತ್ತಿರುವುದರಿಂದ ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿರುವುದಾಗಿ ಅಮೆರಿಕ ಸೇನೆ ಹೇಳಿಕೊಂಡಿದೆ.  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಇರಾನ್ ಜಲಸಂಧಿಯಲ್ಲಿ ಗಣಿಗಳನ್ನು...

13 ವರ್ಷಗಳಿಂದ ಕೋಮಾದಲ್ಲಿರುವ ಯುವಕನ ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅನುಮತಿ

ಕಳೆದ 13 ವರ್ಷಗಳಿಂದ ಕೋಮಾದಲ್ಲಿರುವ 32 ವರ್ಷದ ಹರೀಶ್ ರಾಣಾ ಎಂಬ ಯುವಕನ ಪರೋಕ್ಷ (ನಿಷ್ಕ್ರಿಯ) ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಬುಧವಾರ (ಮಾ.11) ಅನುಮತಿ ನೀಡಿದೆ ಎಂದು livelaw.in ವರದಿ ಮಾಡಿದೆ. ದೆಹಲಿ ಮೂಲದ ಹರೀಶ್...