Homeಮುಖಪುಟನಿರಂತರ ರಾಜಕೀಯ ದಾಳವಾಗಿರುವ ’ಏಕರೂಪ ನಾಗರಿಕ ಸಂಹಿತೆ’

ನಿರಂತರ ರಾಜಕೀಯ ದಾಳವಾಗಿರುವ ’ಏಕರೂಪ ನಾಗರಿಕ ಸಂಹಿತೆ’

- Advertisement -
- Advertisement -

ದೇಶದ ರಾಜಕೀಯದಲ್ಲಿ ಯಾವಾಗ ’ಏಕರೂಪ ನಾಗರಿಕ ಸಂಹಿತೆ’ ಎಂಬ ವಿಷಯ ಮೈಕೊಡವಿ ಎದ್ದು ನಿಲ್ಲುತ್ತದೋ ಆಗ ಎಲೆಕ್ಷನ್ ಹತ್ತಿರ ಬಂದಿದೆ ಎಂದರ್ಥ ಮತ್ತು ದೇಶದ ಅತ್ಯಂತ ಹಳೆಯ ಹಿಂದೂ-ಮುಸ್ಲಿಂ ಸಂಘರ್ಷದ ’ಚ್ಯೂಯಿಂಗ್ ಗಮ್’ಅನ್ನು ಮತ್ತಷ್ಟು ಜಗಿಯುವ ಸಮಯ ಬಂದಿದೆ ಎಂದೂ ಊಹಿಸಬಹುದು.

ಹಿಮಾಚಲ ಪ್ರದೇಶದಲ್ಲಿ ಸೋತರೂ ಸಹ ಗುಜರಾತ್ ಎಂಬ ಖಾತ್ರಿ ಗದ್ದುಗೆ ಏರಿದ ಆಡಳಿತಾರೂಢ ಬಿಜೆಪಿ ಪಕ್ಷಕ್ಕೆ ತನ್ನ ಮುಂದಿನ ಮುಖ್ಯ ಗುರಿ ಏನಿದ್ದರೂ 2024ರ ಲೋಕಸಭಾ ಎಲೆಕ್ಷನ್ ಎಂದೆನಿಸಿರುವುದರಲ್ಲಿ ಆಶ್ಚರ್ಯವೇನಿಲ್ಲ. ಅದಕ್ಕೆಂದೇ ರಾಜ್ಯಸಭೆಯ ಸದಸ್ಯರಾದ ರಾಜಸ್ಥಾನದ ಕಿರೋಡಿ ಲಾಲ್ ಮೀನಾ ಅವರ ಮೂಲಕ ಮತ್ತೆ ’ಏಕರೂಪ ನಾಗರಿಕ ಸಂಹಿತೆ’ಯ ಖಾಸಗಿ ಸದಸ್ಯ ಮಸೂದೆಯನ್ನು ಮುಂಚೂಣಿಗೆ ತಂದಿದೆ. ಈ ಕಿರೋಡಿ ಲಾಲ್ ಮೀನಾ ಅವರು ಈ ಮಸೂದೆಯನ್ನು ಮಂಡಿಸಿದ್ದು ಇದೇ ಮೊದಲ ಬಾರಿ ಏನಲ್ಲ. 2020ರಲ್ಲಿಯೇ ಅವರು ಈ ಖಾಸಗಿ ಮಸೂದೆಯನ್ನು ಮಂಡಿಸಿದ್ದರು. ಆದರೆ ದೇಶದೆಲ್ಲೆಡೆ ಸಿಎಎ ಮತ್ತು ಎನ್‌ಆರ್‌ಸಿ ಪ್ರತಿಭಟನೆ ಮತ್ತು ಹೋರಾಟಗಳು ಹೆಚ್ಚಾದಾಗ ಮತ್ತು ಮುಖ್ಯವಾಗಿ ಅಂದಿನ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಬರುವ ಹಿನ್ನೆಲೆಯಲ್ಲಿ ಇನ್ನೂ ಹೆಚ್ಚಿನ ಗಲಭೆ ಹಾಗೂ ಅಶಾಂತಿ ಬೇಡ ಎನಿಸಿ ಮಸೂದೆಯನ್ನು ತಣ್ಣಗೆ ಇಡಲಾಗಿತ್ತು. ಬಿಜೆಪಿಗೆ ಗೊತ್ತು ಅದನ್ನು ಎಷ್ಟೇ ತಣ್ಣಗೆ ಇಟ್ಟರೂ ಮತ್ತೆ ಹೊರಗೆ ತೆಗೆದ ದಿನ, ಜನರಿಗೆ ಬಿಸಿ ತಟ್ಟಿಸುವ ಶಕ್ತಿ ಅದಕ್ಕಿದೆ ಎಂಬುದು. ಅದಕ್ಕೇ ಗುಜರಾತ್ ಗೆಲುವಿನ ನಂತರ ಮತ್ತೆ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಲಾಗಿದೆ.

ರಾಜಕೀಯ ವಿಮರ್ಶಕರ ಪ್ರಕಾರ ಬಿಜೆಪಿಯ ಪ್ರಮುಖ ಅಜೆಂಡಾಗಳಲ್ಲಿ ’ಏಕರೂಪ ನಾಗರಿಕ ಸಂಹಿತೆ’ ಎಂಬುದು ಸ್ವಲ್ಪ ಕಷ್ಟಕರವಾದದ್ದು. ಏಕೆಂದರೆ ಇದನ್ನು ಜಾರಿಗೆ ತರುವ ಮುಂಚೆ ಅದರ ಬಗ್ಗೆ ಅಧ್ಯಯನಗಳು ಆಗಬೇಕು ಮತ್ತು ವಿವಾದಗಳಿಗೆ ಆಸ್ಪದ ಕೊಡದ ರೀತಿಯಲ್ಲಿ ಕಾಯ್ದೆಯ ರಚನೆ ಆಗಬೇಕು.

ಕೇಂದ್ರ ಸರ್ಕಾರದ ಮೂರು ಪ್ರಮುಖ ಆಶ್ವಾಸನೆಗಳಲ್ಲಿ, ಒಂದು ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನವನ್ನು (370ನೇ ಪರಿಚ್ಛೇದ) ರದ್ದು ಮಾಡಿದ್ದು, ಎರಡನೆಯದು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಹಾಗೂ ಕೊನೆಯದು ’ಏಕರೂಪ ನಾಗರಿಕ ಸಂಹಿತೆ’; ಅಭಿವೃದ್ಧಿ ಮತ್ತು ವಿಕಾಸ ಎಂದು ಹೇಳಿದ್ದು ಈ ಮೂರನ್ನು ಒಳಗೊಂಡ ಮಾತ್ರೆಗೆ ಲೇಪಿಸಿದ ಸಕ್ಕರೆಯ ಕವಚದಂತೆ ಮಾತ್ರ, ಅದು ಎಂದೋ ಕರಗಿಹೋಗಿದೆ.

ಕಿರೋಡಿ ಲಾಲ್ ಮೀನಾ

ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನ ತೆಗೆದಾಗಿದೆ. ಈಗ ಇನ್ನೊಂದಿಷ್ಟು ತಿಂಗಳುಗಳಲ್ಲಿ ಅಲ್ಲಿ ಚುನಾವಣೆಗಳನ್ನೂ ಮಾಡಬಹುದು; ಆದರೆ ಅದರಿಂದ ಆದ ಬದಲಾವಣೆಗಳು ಏನು ಎಂಬುದು ಯಾರಿಗೂ ತಿಳಿದಿಲ್ಲ. ವರ್ಷಾನುಗಟ್ಟಲೆ ಅಲ್ಲಿನ ಜನರ ನಾಗರಿಕ ಸವಲತ್ತುಗಳನ್ನು ಕಸಿದು ಕತ್ತಲೆಯ ರಾಜ್ಯ ಸೃಷ್ಟಿ ಮಾಡಿದ್ದರ ಉದ್ದೇಶ ಈಡೇರಿದೆಯೇ? ಅಲ್ಲಿ ಶಾಂತಿ ಸುವ್ಯವಸ್ಥೆ ನೆಲೆಸಿದೆಯೇ? ನಾಗರಿಕ ಬದುಕಿನಲ್ಲಿ ಭರವಸೆ, ಉದ್ಯೋಗಗಳ ಸೃಷ್ಟಿ, ಭಯೋತ್ಪಾದನೆಯ ನಿರ್ಮೂಲನೆ, ಗಡಿ ಸಮಸ್ಯೆ ಮುಕ್ತಾಯ ಏನಾದರೂ ಸಾಧ್ಯವಾಗಿದೆಯೇ? ಬಹುಶಃ ಉತ್ತರ ಯಾರಿಗೂ ಸಿಗಲಿಕ್ಕಿಲ್ಲ. ಆದರೆ ಪಕ್ಷ ತನ್ನ ಆಶ್ವಾಸನೆ ಈಡೇರಿಸಿತು ಎಂಬ ಹೆಮ್ಮೆ ಮಾತ್ರ ಹೇಳಿಕೊಳ್ಳಲು ಇದೆ.

ಇನ್ನು ರಾಮಮಂದಿರದ ನಿರ್ಮಾಣವನ್ನು ಹಾಗೋ ಹೀಗೋ ಮಾಡಿ 2024ರ ಎಲೆಕ್ಷನ್‌ಗೆ ಮುಂಚೆ ಮುಗಿಸಿ, ಕೇಸರಿ ಬಟ್ಟೆ ಧರಿಸಿ, ಧರ್ಮಾಧಿಕಾರಿಯ ರೂಪದಲ್ಲಿ ಮಾನ್ಯ ಪ್ರಧಾನಮಂತ್ರಿಗಳು ಅದರ ಉದ್ಘಾಟನೆಯೊಂದನ್ನು ನೆರವೇರಿಸಿಬಿಟ್ಟರೆ ದೇಶದ ಅರ್ಧ ಸಮಸ್ಯೆಗಳು ಮುಗಿದ ಹಾಗೆಯೇ. ಕೊನೆಗೆ ಉಳಿಯುವುದು ’ಏಕರೂಪ ನಾಗರಿಕ ಸಂಹಿತೆ’ ಮಾತ್ರ.

ಇದನ್ನೂ ಓದಿ: ರಾಮಸೇತು ಇದೆ ಎಂಬುದಕ್ಕೆ ದೃಢವಾದ ಪುರಾವೆಗಳಿಲ್ಲ: ಸಂಸತ್ತಿನಲ್ಲಿ ಮೋದಿ ಸರ್ಕಾರದ ಹೇಳಿಕೆ

ಹಿನ್ನೆಲೆ

ಏಕರೂಪ ನಾಗರಿಕ ಸಂಹಿತೆ ಬಗ್ಗೆ ವಿವರವಾದ ಚರ್ಚೆಗಳು ನಡೆದದ್ದು ನವೆಂಬರ್ 23, 1948ರಲ್ಲಿ. ಸಂವಿಧಾನ ರಚನಾ ಸಭೆಯಲ್ಲಿ ಈ ವಿಷಯದ ಕುರಿತು ನಡೆದ ಸುದೀರ್ಘ ಚರ್ಚೆಯಲ್ಲಿ ಪರ ಮತ್ತು ವಿರೋಧವಾದ ಅನೇಕ ಅಭಿಪ್ರಾಯಗಳು ವ್ಯಕ್ತವಾದವು. ಅನೇಕ ಮುಸ್ಲಿಂ ಮುಖಂಡರು ಇದಕ್ಕೆ ವಿರೋಧ ವ್ಯಕ್ತಪಡಿಸಿದರೆ ಡಾ. ಅಂಬೇಡ್ಕರ್ ಮತ್ತು ಸರ್ದಾರ್ ಪಟೇಲ್‌ರವರು ವೈಯಕ್ತಿಕ ಕಾನೂನುಗಳನ್ನು ಕ್ರೋಢೀಕರಿಸುವ ಮಹತ್ವದ ಬಗ್ಗೆ ಚರ್ಚಿಸಿದರು. ಆದರೆ ಸಂವಿಧಾನದ 19ನೇ ಪರಿಚ್ಛೇದ ನೀಡುವ ಧಾರ್ಮಿಕ ಸ್ವಾತಂತ್ರ್ಯ ಎಂಬ ಮೂಲಭುತ ಹಕ್ಕಿಗೆ ’ಏಕರೂಪ ನಾಗರಿಕ ಸಂಹಿತೆ’ ಹೇಗೆ ಪರ್ಯಾಯವಾಗಲು ಸಾಧ್ಯ ಅಥವಾ ಅವೆರಡೂ ಏಕಕಾಲದಲ್ಲಿ ಹೇಗೆ ಅಸ್ತಿತ್ವದಲ್ಲಿರಲು ಸಾಧ್ಯ ಎಂಬ ಚರ್ಚೆಯೂ ಪ್ರಮುಖವಾಗಿ ನಡೆಯಿತು. ಇನ್ನೂ ಮುಖ್ಯವಾಗಿ, ’ಏಕರೂಪ ನಾಗರಿಕ ಸಂಹಿತೆ’ಯ ಜಾರಿ ಹೇರಿಕೆಯ ರೀತಿಯಲ್ಲಿ ಆಗದೆ ನಿಧಾನವಾಗಿ ಒಮ್ಮತದ ನಿರ್ಣಯದಿಂದ ಆಗಬೇಕು ಎಂಬ ಅಭಿಪ್ರಾಯವೂ ವ್ಯಕ್ತವಾಯಿತು. ದೇಶ ವಿಭಜನೆಯ ಬೃಹತ್ ಸಮಸ್ಯೆಯಲ್ಲಿದ್ದಾಗ, ’ಏಕರೂಪ ನಾಗರಿಕ ಸಂಹಿತೆ’ಯ ಹೇರಿಕೆ ಇನ್ನೂ ಹೆಚ್ಚಿನ ಧಾರ್ಮಿಕ ಒಡಕನ್ನು ಸೃಷ್ಟಿಸಬಹುದು ಎಂಬ ಹಿಂಜರಿಕೆಯೂ, ಅದರ ಹಿನ್ನಡೆಗೆ ಕಾರಣವಾಯಿತು.

ಜಾರಿಗೆ ತರುವಲ್ಲಿ ಇರುವ ತೊಡಕುಗಳು

ಪ್ರತಿಯೊಂದು ಧರ್ಮದಲ್ಲೂ ಮದುವೆ, ಆಸ್ತಿ ವಾರಸುದಾರ ಪದ್ಧತಿ, ದತ್ತು ಪದ್ಧತಿಗಳು, ಮಹಿಳೆಯರ ಹಕ್ಕುಗಳು ವಿಭಿನ್ನವಾಗಿವೆ. ಅಷ್ಟೇ ಅಲ್ಲದೆ ವೈಯಕ್ತಿಕ ಕಾನೂನುಗಳ ಅಡಿಯಲ್ಲಿ ಪ್ರತಿಯೊಂದು ಸಂಗತಿಯನ್ನೂ ಧಾರ್ಮಿಕ ಚೌಕಟ್ಟಿನ ಒಳಗೇ ಅರ್ಥೈಸಿ ಅನುಸರಿಸಬೇಕಾಗಿರುವುದರಿಂದ, ಅದರಿಂದ ಮಹಿಳಾ ಸಮಾನತೆ ಎಂಬುದು ಕೇವಲ ಮರೀಚಿಕೆ ಆಗುತ್ತದೆ ಎಂಬುದು ಪ್ರಮುಖವಾದ ವಾದ. ಆದರೆ ಹಿಂದೂ ಧರ್ಮದಲ್ಲಿ ಮದುವೆ ಎಂಬುದು ಸಂಸ್ಕಾರವಾದರೆ, ಇಸ್ಲಾಂನಲ್ಲಿ ಅದು ಒಪ್ಪಂದ. ಹೀಗಿದ್ದಾಗ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರುವ ಬಗೆ ಹೇಗೆ ಎಂಬುದೂ ಒಂದು ಮುಖ್ಯ ಪ್ರಶ್ನೆಯಾಗಿ ತಲೆದೋರಿದೆ. ಈ ಎಲ್ಲ ವಾಸ್ತವಿಕ ತೊಡಕುಗಳ ಬಗ್ಗೆ ಚರ್ಚೆ ನಡೆದಾಗ ಸಂಹಿತೆಯ ಪರವಾಗಿ ವಾದಿಸುವವರು ’ದೇಶದಲ್ಲಿ ಸಿವಿಲ್ ಪ್ರಕ್ರಿಯಾ ಸಂಹಿತೆ, ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ ಮತ್ತು ದಂಡ ಸಂಹಿತೆಗಳು ಒಂದೇ ಇದ್ದು ಕೆಲವೊಂದು ರಾಜ್ಯಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಕೆಲವೊಂದು ತಿದ್ದುಪಡಿಗಳನ್ನು ಮಾಡಿಕೊಳ್ಳುವ ಹಾಗೆ ಏಕರೂಪ ಸಂಹಿತೆಯನ್ನು ಆಯಾ ಧರ್ಮಗಳ ಅನುಯಾಯಿಗಳು ಹೆಚ್ಚಿಗೆ ಇರುವ ರಾಜ್ಯಗಳಲ್ಲಿ ಕೆಲವೊಂದು ತಿದ್ದುಪಡಿಗಳನ್ನು ಮಾಡಿಕೊಳ್ಳಬಹುದು’ ಎಂದು ವಾದಿಸುತ್ತಾರೆ. ಆದರೆ ಕೇವಲ ಇದನ್ನು ಮಾತ್ರ ಜಾರಿಗೆ ತಂದರೆ ದೇಶದ ಎಲ್ಲ ತಾರತಮ್ಯಗಳು ಅಳಿಸಿಹೋಗುತ್ತವಾ? ಹಾಗಾದರೆ ಬ್ರಾಹ್ಮಣ ಮತ್ತು ದಲಿತರ ಮಧ್ಯೆ ಏಕರೂಪತೆ ಸಾಧಿಸಲು ಏಕೆ ಪ್ರಯತ್ನಗಳು ಆಗುವುದಿಲ್ಲ ಎಂಬ ಯಕ್ಷಪ್ರಶ್ನೆಗೆ ಉತ್ತರ ಎಲ್ಲಿದೆ.

ಏಕರೂಪ ನಾಗರಿಕ ಸಂಹಿತೆಯ ಹಿಂದಿನ ನಿಜವಾದ ಉದ್ದೇಶ ಅದನ್ನು ಪ್ರಸ್ತುತಪಡಿಸಿದ ಸಮಯದಲ್ಲಿ ಎಷ್ಟೇ ಉದಾತ್ತವಾಗಿದ್ದರೂ ಅದರ ನಂತರದ ದಿನಗಳಲ್ಲಿ ಅದು ಕೇವಲ ರಾಜಕೀಯದ ಬೇಳೆ ಬೇಯಿಸಿಕೊಳ್ಳುವ ಸಲುವಾಗಿ ಉಪಯೋಗವಾಗುತ್ತಿದೆ. ಅದರ ಸುತ್ತ ಯಾವುದೇ ಚರ್ಚೆ ನಡೆದರೂ ಸದ್ಯ ಆಳುವ ಪಕ್ಷಕ್ಕೆ ಅದು ಲಾಭದಾಯಕವೇ. ಸಂಹಿತೆಯನ್ನು ಕೇವಲ ಮುಸ್ಲಿಮರ ವಿರುದ್ಧ ಎಂಬಂತೆ ಬಿಂಬಿಸಲಾದರೂ ದೇಶದ ಎಲ್ಲ ಧರ್ಮಗಳಿಗೂ ಅದು ಅನ್ವಯಿಸುತ್ತದೆ. ಇದೊಂದು ಅತ್ಯಂತ ಸೂಕ್ಷ್ಮವಾದ ವಿಚಾರವಾದ್ದರಿಂದ ಇದರ ಜಾರಿ ಎಂಬುದು ರಾಜಕೀಯ ಪಗಡೆಯಾಟವಾಗದೆ ನಿಜವಾದ ಕಾಳಜಿಯಿಂದ ಕೂಡಿದರೆ ಬಹುಶಃ ಸಂವಿಧಾನ ನಿರ್ಮಾತೃಗಳು ಕಂಡ ಕನಸು ನನಸಾಗಬಹುದೇನೋ.

ರಾಜಲಕ್ಷ್ಮಿ ಅಂಕಲಗಿ

ರಾಜಲಕ್ಷ್ಮಿ ಅಂಕಲಗಿ
ಹೈಕೋರ್ಟ್ ವಕೀಲರು, ಹಲವು ಜನಪರ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದಾರೆ. ಕಾನೂನು ವಿಷಯಗಳ ಮೇಲೆ ಹಲವು ಲೇಖನಗಳನ್ನು ಪ್ರಕಟಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...