Homeಮುಖಪುಟನಿರಂತರ ರಾಜಕೀಯ ದಾಳವಾಗಿರುವ ’ಏಕರೂಪ ನಾಗರಿಕ ಸಂಹಿತೆ’

ನಿರಂತರ ರಾಜಕೀಯ ದಾಳವಾಗಿರುವ ’ಏಕರೂಪ ನಾಗರಿಕ ಸಂಹಿತೆ’

- Advertisement -
- Advertisement -

ದೇಶದ ರಾಜಕೀಯದಲ್ಲಿ ಯಾವಾಗ ’ಏಕರೂಪ ನಾಗರಿಕ ಸಂಹಿತೆ’ ಎಂಬ ವಿಷಯ ಮೈಕೊಡವಿ ಎದ್ದು ನಿಲ್ಲುತ್ತದೋ ಆಗ ಎಲೆಕ್ಷನ್ ಹತ್ತಿರ ಬಂದಿದೆ ಎಂದರ್ಥ ಮತ್ತು ದೇಶದ ಅತ್ಯಂತ ಹಳೆಯ ಹಿಂದೂ-ಮುಸ್ಲಿಂ ಸಂಘರ್ಷದ ’ಚ್ಯೂಯಿಂಗ್ ಗಮ್’ಅನ್ನು ಮತ್ತಷ್ಟು ಜಗಿಯುವ ಸಮಯ ಬಂದಿದೆ ಎಂದೂ ಊಹಿಸಬಹುದು.

ಹಿಮಾಚಲ ಪ್ರದೇಶದಲ್ಲಿ ಸೋತರೂ ಸಹ ಗುಜರಾತ್ ಎಂಬ ಖಾತ್ರಿ ಗದ್ದುಗೆ ಏರಿದ ಆಡಳಿತಾರೂಢ ಬಿಜೆಪಿ ಪಕ್ಷಕ್ಕೆ ತನ್ನ ಮುಂದಿನ ಮುಖ್ಯ ಗುರಿ ಏನಿದ್ದರೂ 2024ರ ಲೋಕಸಭಾ ಎಲೆಕ್ಷನ್ ಎಂದೆನಿಸಿರುವುದರಲ್ಲಿ ಆಶ್ಚರ್ಯವೇನಿಲ್ಲ. ಅದಕ್ಕೆಂದೇ ರಾಜ್ಯಸಭೆಯ ಸದಸ್ಯರಾದ ರಾಜಸ್ಥಾನದ ಕಿರೋಡಿ ಲಾಲ್ ಮೀನಾ ಅವರ ಮೂಲಕ ಮತ್ತೆ ’ಏಕರೂಪ ನಾಗರಿಕ ಸಂಹಿತೆ’ಯ ಖಾಸಗಿ ಸದಸ್ಯ ಮಸೂದೆಯನ್ನು ಮುಂಚೂಣಿಗೆ ತಂದಿದೆ. ಈ ಕಿರೋಡಿ ಲಾಲ್ ಮೀನಾ ಅವರು ಈ ಮಸೂದೆಯನ್ನು ಮಂಡಿಸಿದ್ದು ಇದೇ ಮೊದಲ ಬಾರಿ ಏನಲ್ಲ. 2020ರಲ್ಲಿಯೇ ಅವರು ಈ ಖಾಸಗಿ ಮಸೂದೆಯನ್ನು ಮಂಡಿಸಿದ್ದರು. ಆದರೆ ದೇಶದೆಲ್ಲೆಡೆ ಸಿಎಎ ಮತ್ತು ಎನ್‌ಆರ್‌ಸಿ ಪ್ರತಿಭಟನೆ ಮತ್ತು ಹೋರಾಟಗಳು ಹೆಚ್ಚಾದಾಗ ಮತ್ತು ಮುಖ್ಯವಾಗಿ ಅಂದಿನ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಬರುವ ಹಿನ್ನೆಲೆಯಲ್ಲಿ ಇನ್ನೂ ಹೆಚ್ಚಿನ ಗಲಭೆ ಹಾಗೂ ಅಶಾಂತಿ ಬೇಡ ಎನಿಸಿ ಮಸೂದೆಯನ್ನು ತಣ್ಣಗೆ ಇಡಲಾಗಿತ್ತು. ಬಿಜೆಪಿಗೆ ಗೊತ್ತು ಅದನ್ನು ಎಷ್ಟೇ ತಣ್ಣಗೆ ಇಟ್ಟರೂ ಮತ್ತೆ ಹೊರಗೆ ತೆಗೆದ ದಿನ, ಜನರಿಗೆ ಬಿಸಿ ತಟ್ಟಿಸುವ ಶಕ್ತಿ ಅದಕ್ಕಿದೆ ಎಂಬುದು. ಅದಕ್ಕೇ ಗುಜರಾತ್ ಗೆಲುವಿನ ನಂತರ ಮತ್ತೆ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಲಾಗಿದೆ.

ರಾಜಕೀಯ ವಿಮರ್ಶಕರ ಪ್ರಕಾರ ಬಿಜೆಪಿಯ ಪ್ರಮುಖ ಅಜೆಂಡಾಗಳಲ್ಲಿ ’ಏಕರೂಪ ನಾಗರಿಕ ಸಂಹಿತೆ’ ಎಂಬುದು ಸ್ವಲ್ಪ ಕಷ್ಟಕರವಾದದ್ದು. ಏಕೆಂದರೆ ಇದನ್ನು ಜಾರಿಗೆ ತರುವ ಮುಂಚೆ ಅದರ ಬಗ್ಗೆ ಅಧ್ಯಯನಗಳು ಆಗಬೇಕು ಮತ್ತು ವಿವಾದಗಳಿಗೆ ಆಸ್ಪದ ಕೊಡದ ರೀತಿಯಲ್ಲಿ ಕಾಯ್ದೆಯ ರಚನೆ ಆಗಬೇಕು.

ಕೇಂದ್ರ ಸರ್ಕಾರದ ಮೂರು ಪ್ರಮುಖ ಆಶ್ವಾಸನೆಗಳಲ್ಲಿ, ಒಂದು ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನವನ್ನು (370ನೇ ಪರಿಚ್ಛೇದ) ರದ್ದು ಮಾಡಿದ್ದು, ಎರಡನೆಯದು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಹಾಗೂ ಕೊನೆಯದು ’ಏಕರೂಪ ನಾಗರಿಕ ಸಂಹಿತೆ’; ಅಭಿವೃದ್ಧಿ ಮತ್ತು ವಿಕಾಸ ಎಂದು ಹೇಳಿದ್ದು ಈ ಮೂರನ್ನು ಒಳಗೊಂಡ ಮಾತ್ರೆಗೆ ಲೇಪಿಸಿದ ಸಕ್ಕರೆಯ ಕವಚದಂತೆ ಮಾತ್ರ, ಅದು ಎಂದೋ ಕರಗಿಹೋಗಿದೆ.

ಕಿರೋಡಿ ಲಾಲ್ ಮೀನಾ

ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನ ತೆಗೆದಾಗಿದೆ. ಈಗ ಇನ್ನೊಂದಿಷ್ಟು ತಿಂಗಳುಗಳಲ್ಲಿ ಅಲ್ಲಿ ಚುನಾವಣೆಗಳನ್ನೂ ಮಾಡಬಹುದು; ಆದರೆ ಅದರಿಂದ ಆದ ಬದಲಾವಣೆಗಳು ಏನು ಎಂಬುದು ಯಾರಿಗೂ ತಿಳಿದಿಲ್ಲ. ವರ್ಷಾನುಗಟ್ಟಲೆ ಅಲ್ಲಿನ ಜನರ ನಾಗರಿಕ ಸವಲತ್ತುಗಳನ್ನು ಕಸಿದು ಕತ್ತಲೆಯ ರಾಜ್ಯ ಸೃಷ್ಟಿ ಮಾಡಿದ್ದರ ಉದ್ದೇಶ ಈಡೇರಿದೆಯೇ? ಅಲ್ಲಿ ಶಾಂತಿ ಸುವ್ಯವಸ್ಥೆ ನೆಲೆಸಿದೆಯೇ? ನಾಗರಿಕ ಬದುಕಿನಲ್ಲಿ ಭರವಸೆ, ಉದ್ಯೋಗಗಳ ಸೃಷ್ಟಿ, ಭಯೋತ್ಪಾದನೆಯ ನಿರ್ಮೂಲನೆ, ಗಡಿ ಸಮಸ್ಯೆ ಮುಕ್ತಾಯ ಏನಾದರೂ ಸಾಧ್ಯವಾಗಿದೆಯೇ? ಬಹುಶಃ ಉತ್ತರ ಯಾರಿಗೂ ಸಿಗಲಿಕ್ಕಿಲ್ಲ. ಆದರೆ ಪಕ್ಷ ತನ್ನ ಆಶ್ವಾಸನೆ ಈಡೇರಿಸಿತು ಎಂಬ ಹೆಮ್ಮೆ ಮಾತ್ರ ಹೇಳಿಕೊಳ್ಳಲು ಇದೆ.

ಇನ್ನು ರಾಮಮಂದಿರದ ನಿರ್ಮಾಣವನ್ನು ಹಾಗೋ ಹೀಗೋ ಮಾಡಿ 2024ರ ಎಲೆಕ್ಷನ್‌ಗೆ ಮುಂಚೆ ಮುಗಿಸಿ, ಕೇಸರಿ ಬಟ್ಟೆ ಧರಿಸಿ, ಧರ್ಮಾಧಿಕಾರಿಯ ರೂಪದಲ್ಲಿ ಮಾನ್ಯ ಪ್ರಧಾನಮಂತ್ರಿಗಳು ಅದರ ಉದ್ಘಾಟನೆಯೊಂದನ್ನು ನೆರವೇರಿಸಿಬಿಟ್ಟರೆ ದೇಶದ ಅರ್ಧ ಸಮಸ್ಯೆಗಳು ಮುಗಿದ ಹಾಗೆಯೇ. ಕೊನೆಗೆ ಉಳಿಯುವುದು ’ಏಕರೂಪ ನಾಗರಿಕ ಸಂಹಿತೆ’ ಮಾತ್ರ.

ಇದನ್ನೂ ಓದಿ: ರಾಮಸೇತು ಇದೆ ಎಂಬುದಕ್ಕೆ ದೃಢವಾದ ಪುರಾವೆಗಳಿಲ್ಲ: ಸಂಸತ್ತಿನಲ್ಲಿ ಮೋದಿ ಸರ್ಕಾರದ ಹೇಳಿಕೆ

ಹಿನ್ನೆಲೆ

ಏಕರೂಪ ನಾಗರಿಕ ಸಂಹಿತೆ ಬಗ್ಗೆ ವಿವರವಾದ ಚರ್ಚೆಗಳು ನಡೆದದ್ದು ನವೆಂಬರ್ 23, 1948ರಲ್ಲಿ. ಸಂವಿಧಾನ ರಚನಾ ಸಭೆಯಲ್ಲಿ ಈ ವಿಷಯದ ಕುರಿತು ನಡೆದ ಸುದೀರ್ಘ ಚರ್ಚೆಯಲ್ಲಿ ಪರ ಮತ್ತು ವಿರೋಧವಾದ ಅನೇಕ ಅಭಿಪ್ರಾಯಗಳು ವ್ಯಕ್ತವಾದವು. ಅನೇಕ ಮುಸ್ಲಿಂ ಮುಖಂಡರು ಇದಕ್ಕೆ ವಿರೋಧ ವ್ಯಕ್ತಪಡಿಸಿದರೆ ಡಾ. ಅಂಬೇಡ್ಕರ್ ಮತ್ತು ಸರ್ದಾರ್ ಪಟೇಲ್‌ರವರು ವೈಯಕ್ತಿಕ ಕಾನೂನುಗಳನ್ನು ಕ್ರೋಢೀಕರಿಸುವ ಮಹತ್ವದ ಬಗ್ಗೆ ಚರ್ಚಿಸಿದರು. ಆದರೆ ಸಂವಿಧಾನದ 19ನೇ ಪರಿಚ್ಛೇದ ನೀಡುವ ಧಾರ್ಮಿಕ ಸ್ವಾತಂತ್ರ್ಯ ಎಂಬ ಮೂಲಭುತ ಹಕ್ಕಿಗೆ ’ಏಕರೂಪ ನಾಗರಿಕ ಸಂಹಿತೆ’ ಹೇಗೆ ಪರ್ಯಾಯವಾಗಲು ಸಾಧ್ಯ ಅಥವಾ ಅವೆರಡೂ ಏಕಕಾಲದಲ್ಲಿ ಹೇಗೆ ಅಸ್ತಿತ್ವದಲ್ಲಿರಲು ಸಾಧ್ಯ ಎಂಬ ಚರ್ಚೆಯೂ ಪ್ರಮುಖವಾಗಿ ನಡೆಯಿತು. ಇನ್ನೂ ಮುಖ್ಯವಾಗಿ, ’ಏಕರೂಪ ನಾಗರಿಕ ಸಂಹಿತೆ’ಯ ಜಾರಿ ಹೇರಿಕೆಯ ರೀತಿಯಲ್ಲಿ ಆಗದೆ ನಿಧಾನವಾಗಿ ಒಮ್ಮತದ ನಿರ್ಣಯದಿಂದ ಆಗಬೇಕು ಎಂಬ ಅಭಿಪ್ರಾಯವೂ ವ್ಯಕ್ತವಾಯಿತು. ದೇಶ ವಿಭಜನೆಯ ಬೃಹತ್ ಸಮಸ್ಯೆಯಲ್ಲಿದ್ದಾಗ, ’ಏಕರೂಪ ನಾಗರಿಕ ಸಂಹಿತೆ’ಯ ಹೇರಿಕೆ ಇನ್ನೂ ಹೆಚ್ಚಿನ ಧಾರ್ಮಿಕ ಒಡಕನ್ನು ಸೃಷ್ಟಿಸಬಹುದು ಎಂಬ ಹಿಂಜರಿಕೆಯೂ, ಅದರ ಹಿನ್ನಡೆಗೆ ಕಾರಣವಾಯಿತು.

ಜಾರಿಗೆ ತರುವಲ್ಲಿ ಇರುವ ತೊಡಕುಗಳು

ಪ್ರತಿಯೊಂದು ಧರ್ಮದಲ್ಲೂ ಮದುವೆ, ಆಸ್ತಿ ವಾರಸುದಾರ ಪದ್ಧತಿ, ದತ್ತು ಪದ್ಧತಿಗಳು, ಮಹಿಳೆಯರ ಹಕ್ಕುಗಳು ವಿಭಿನ್ನವಾಗಿವೆ. ಅಷ್ಟೇ ಅಲ್ಲದೆ ವೈಯಕ್ತಿಕ ಕಾನೂನುಗಳ ಅಡಿಯಲ್ಲಿ ಪ್ರತಿಯೊಂದು ಸಂಗತಿಯನ್ನೂ ಧಾರ್ಮಿಕ ಚೌಕಟ್ಟಿನ ಒಳಗೇ ಅರ್ಥೈಸಿ ಅನುಸರಿಸಬೇಕಾಗಿರುವುದರಿಂದ, ಅದರಿಂದ ಮಹಿಳಾ ಸಮಾನತೆ ಎಂಬುದು ಕೇವಲ ಮರೀಚಿಕೆ ಆಗುತ್ತದೆ ಎಂಬುದು ಪ್ರಮುಖವಾದ ವಾದ. ಆದರೆ ಹಿಂದೂ ಧರ್ಮದಲ್ಲಿ ಮದುವೆ ಎಂಬುದು ಸಂಸ್ಕಾರವಾದರೆ, ಇಸ್ಲಾಂನಲ್ಲಿ ಅದು ಒಪ್ಪಂದ. ಹೀಗಿದ್ದಾಗ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರುವ ಬಗೆ ಹೇಗೆ ಎಂಬುದೂ ಒಂದು ಮುಖ್ಯ ಪ್ರಶ್ನೆಯಾಗಿ ತಲೆದೋರಿದೆ. ಈ ಎಲ್ಲ ವಾಸ್ತವಿಕ ತೊಡಕುಗಳ ಬಗ್ಗೆ ಚರ್ಚೆ ನಡೆದಾಗ ಸಂಹಿತೆಯ ಪರವಾಗಿ ವಾದಿಸುವವರು ’ದೇಶದಲ್ಲಿ ಸಿವಿಲ್ ಪ್ರಕ್ರಿಯಾ ಸಂಹಿತೆ, ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ ಮತ್ತು ದಂಡ ಸಂಹಿತೆಗಳು ಒಂದೇ ಇದ್ದು ಕೆಲವೊಂದು ರಾಜ್ಯಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಕೆಲವೊಂದು ತಿದ್ದುಪಡಿಗಳನ್ನು ಮಾಡಿಕೊಳ್ಳುವ ಹಾಗೆ ಏಕರೂಪ ಸಂಹಿತೆಯನ್ನು ಆಯಾ ಧರ್ಮಗಳ ಅನುಯಾಯಿಗಳು ಹೆಚ್ಚಿಗೆ ಇರುವ ರಾಜ್ಯಗಳಲ್ಲಿ ಕೆಲವೊಂದು ತಿದ್ದುಪಡಿಗಳನ್ನು ಮಾಡಿಕೊಳ್ಳಬಹುದು’ ಎಂದು ವಾದಿಸುತ್ತಾರೆ. ಆದರೆ ಕೇವಲ ಇದನ್ನು ಮಾತ್ರ ಜಾರಿಗೆ ತಂದರೆ ದೇಶದ ಎಲ್ಲ ತಾರತಮ್ಯಗಳು ಅಳಿಸಿಹೋಗುತ್ತವಾ? ಹಾಗಾದರೆ ಬ್ರಾಹ್ಮಣ ಮತ್ತು ದಲಿತರ ಮಧ್ಯೆ ಏಕರೂಪತೆ ಸಾಧಿಸಲು ಏಕೆ ಪ್ರಯತ್ನಗಳು ಆಗುವುದಿಲ್ಲ ಎಂಬ ಯಕ್ಷಪ್ರಶ್ನೆಗೆ ಉತ್ತರ ಎಲ್ಲಿದೆ.

ಏಕರೂಪ ನಾಗರಿಕ ಸಂಹಿತೆಯ ಹಿಂದಿನ ನಿಜವಾದ ಉದ್ದೇಶ ಅದನ್ನು ಪ್ರಸ್ತುತಪಡಿಸಿದ ಸಮಯದಲ್ಲಿ ಎಷ್ಟೇ ಉದಾತ್ತವಾಗಿದ್ದರೂ ಅದರ ನಂತರದ ದಿನಗಳಲ್ಲಿ ಅದು ಕೇವಲ ರಾಜಕೀಯದ ಬೇಳೆ ಬೇಯಿಸಿಕೊಳ್ಳುವ ಸಲುವಾಗಿ ಉಪಯೋಗವಾಗುತ್ತಿದೆ. ಅದರ ಸುತ್ತ ಯಾವುದೇ ಚರ್ಚೆ ನಡೆದರೂ ಸದ್ಯ ಆಳುವ ಪಕ್ಷಕ್ಕೆ ಅದು ಲಾಭದಾಯಕವೇ. ಸಂಹಿತೆಯನ್ನು ಕೇವಲ ಮುಸ್ಲಿಮರ ವಿರುದ್ಧ ಎಂಬಂತೆ ಬಿಂಬಿಸಲಾದರೂ ದೇಶದ ಎಲ್ಲ ಧರ್ಮಗಳಿಗೂ ಅದು ಅನ್ವಯಿಸುತ್ತದೆ. ಇದೊಂದು ಅತ್ಯಂತ ಸೂಕ್ಷ್ಮವಾದ ವಿಚಾರವಾದ್ದರಿಂದ ಇದರ ಜಾರಿ ಎಂಬುದು ರಾಜಕೀಯ ಪಗಡೆಯಾಟವಾಗದೆ ನಿಜವಾದ ಕಾಳಜಿಯಿಂದ ಕೂಡಿದರೆ ಬಹುಶಃ ಸಂವಿಧಾನ ನಿರ್ಮಾತೃಗಳು ಕಂಡ ಕನಸು ನನಸಾಗಬಹುದೇನೋ.

ರಾಜಲಕ್ಷ್ಮಿ ಅಂಕಲಗಿ

ರಾಜಲಕ್ಷ್ಮಿ ಅಂಕಲಗಿ
ಹೈಕೋರ್ಟ್ ವಕೀಲರು, ಹಲವು ಜನಪರ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದಾರೆ. ಕಾನೂನು ವಿಷಯಗಳ ಮೇಲೆ ಹಲವು ಲೇಖನಗಳನ್ನು ಪ್ರಕಟಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...