Homeಮುಖಪುಟಮಹಾರಾಷ್ಟ್ರದ ನಾಗಪುರ ಪೀಠದ ನ್ಯಾಯಮೂರ್ತಿ ರೋಹಿತ್ ದೇವ್ ರಾಜೀನಾಮೆ ಸುತ್ತ ಎದ್ದ ಪ್ರಶ್ನೆಗಳ ಹುತ್ತ

ಮಹಾರಾಷ್ಟ್ರದ ನಾಗಪುರ ಪೀಠದ ನ್ಯಾಯಮೂರ್ತಿ ರೋಹಿತ್ ದೇವ್ ರಾಜೀನಾಮೆ ಸುತ್ತ ಎದ್ದ ಪ್ರಶ್ನೆಗಳ ಹುತ್ತ

- Advertisement -
- Advertisement -

ಆಗಸ್ಟ್ 4 ರಂದು ಮಹಾರಾಷ್ಟ್ರದ ನಾಗಪುರ ಪೀಠದ 2ನೇ ಹಿರಿಯ ನ್ಯಾಯಮೂರ್ತಿ ರೋಹಿತ್ ದೇವ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು. ಆದರೆ ಈ ರಾಜೀನಾಮೆ ಪ್ರಕಟಿಸಿದ ರೀತಿ, ಸಮಯ ಹಾಗೂ ಸಂದರ್ಭಗಳು ದೇಶದಾದ್ಯಂತ ಚರ್ಚೆಗೆ ಎಡೆಮಾಡಿಕೊಟ್ಟಿದೆ. ಮಹಾರಾಷ್ಟ್ರದ ಮಾಜಿ ಅಡ್ವೋಕೇಟ್ ಜನರಲ್ ಆಗಿಯೂ ಕಾರ್ಯನಿರ್ವಹಿಸಿರುವ ಜಸ್ಟಿಸ್ ದೇವ್ ಅವರು ಎಂದಿನಂತೆ ಶುಕ್ರವಾರ ತಮ್ಮ ಕೋರ್ಟ್ ಹಾಲ್‌ಗೆ ಬಂದರು. ಆದರೆ ಅಲ್ಲಿ ನೆರೆದಿದ್ದ ಎಲ್ಲ ವಕೀಲರು ಮತ್ತು ಕಕ್ಷಿದಾರರ ಎದುರು ತಾವು ಈ ದಿನ ತಮ್ಮ ಹುದ್ದೆಗೆ ರಾಜೀನಾಮೆಯನ್ನು ನೀಡುತ್ತಿರುವುದಾಗಿ ಘೋಷಿಸಿದರು. ವಕೀಲರಿಗೆ ವೃತ್ತಿಪರತೆಯ ಬಗ್ಗೆ ಕಿವಿಮಾತನ್ನು ಹೇಳುತ್ತ ’ತನ್ನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮಿಸಿ, ಕಠಿಣ ಶ್ರಮ ವಹಿಸಿ ಕೆಲಸ ಮಾಡಿ’ ಎಂದು ಹೃದಯಸ್ಪರ್ಶಿಯಾಗಿ ಹೇಳಿ ನೆರೆದಿದ್ದ ಜನರಲ್ಲಿ ಆಘಾತ ಉಂಟುಮಾಡಿದರು. ಅವರು ರಾಜೀನಾಮೆಗೆ ವೈಯಕ್ತಿಕ ಕಾರಣ ನೀಡಿದ್ದರೂ ಸಹಿತ ಈ ಘಟನೆ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಸ್ವಲ್ಪವಾದರು ಒಡನಾಟವಿರುವ ಯಾರಿಗೇ ಆಗಲಿ ಸಂಶಯ, ಪ್ರಶ್ನೆ ಹಾಗೂ ಗೊಂದಲಗಳನ್ನು ಮೂಡಿಸಿರುವುದು ನಿಜ.

ಹೈಕೋರ್ಟಿನ ನ್ಯಾಯಮೂರ್ತಿಗಳ ಜೀವನ ಕಾರ್ಯವೈಖರಿ ಎಲ್ಲವೂ ಅತ್ಯಂತ ನಿರ್ಬಂಧಿತ ವಾತಾವರಣದಲ್ಲಿ ಮತ್ತು ನ್ಯಾಯಾಂಗದ ಕಣ್ಗಾವಲಿನಲ್ಲಿ ನಡೆಯುತ್ತದೆ. ಅವರು ರಾಜೀನಾಮೆಯನ್ನು ರಾಷ್ಟ್ರಪತಿಯನ್ನು ಉದ್ದೇಶಿಸಿ ನೀಡಬೇಕಾಗುತ್ತದೆ. ಹೀಗಾಗಿ ಜಸ್ಟಿಸ್ ರೋಹಿತ್ ದೇವ್ ಅವರ ನಡೆ ಐತಿಹಾಸಿಕವಾಗಿದ್ದು ಎನ್ನಬಹುದು.

ಡಿಸೆಂಬರ್ 2025ರವರೆಗೂ ಸೇವೆ ಬಾಕಿ ಇರುವ ಜಸ್ಟಿಸ್ ದೇವ್ 2 ವರ್ಷಗಳಿಗೂ ಅಧಿಕ ಸೇವಾವಧಿ ಬಾಕಿ ಇರುವಂತೆಯೇ ರಾಜೀನಾಮೆ ನೀಡಿರುವುದು ಗಂಭೀರ ಚರ್ಚೆಗೆ ಗ್ರಾಸವಾಗಿದೆ. ರಾಷ್ಟ್ರಪತಿಗೆ ರಾಜೀನಾಮೆಯನ್ನು ಇಮೇಲ್ ಮತ್ತು ಪೋಸ್ಟ್‌ನಲ್ಲೂ ಕಳಿಸಿದ್ದಾಗಿ ಜಸ್ಟಿಸ್ ದೇವ್ ತಿಳಿಸಿದ್ದಾರೆ.

2017ರಿಂದ ಈ ಹುದ್ದೆಗೆ ಏರಿದ್ದ ಜಸ್ಟಿಸ್ ರೋಹಿತ್ ದೇವ್ ಮಹಾರಾಷ್ಟ್ರದ 2ನೇ ಹಿರಿಯ ನ್ಯಾಯಮೂರ್ತಿ. ಎಲ್ಲಕ್ಕಿಂತ ಮುಖ್ಯವಾಗಿ ಈ ವಿಷಯ ಇಷ್ಟೊಂದು ಪ್ರಾಮುಖ್ಯತೆ ಪಡೆಯಲು ಕಾರಣವೆಂದರೆ ಕಳೆದ ಅಕ್ಟೋಬರ್ 14, 2022ರಂದು ಜಸ್ಟಿಸ್ ದೇವ್ ನಕ್ಸಲ್ ಸಹಾನುಭೂತಿ ಹೊಂದಿರುವ ಹಣೆಪಟ್ಟಿಯ ಜಿ.ಎನ್. ಸಾಯಿಬಾಬಾ ಮತ್ತು ಇತರ ನಾಲ್ವರನ್ನು ಜೀವಾವಧಿ ಶಿಕ್ಷೆಯಿಂದ ಬಿಡುಗಡೆಗೊಳಿಸಿದ್ದಾರೆ. ಮಹಾರಾಷ್ಟ್ರದ ಗಡಚಿರೋಲಿಯ ಸೆಷನ್ಸ್ ನ್ಯಾಯಾಲಯ ಈ 5 ಜನರಿಗೂ ಯುಎಪಿಎ ಕಾಯ್ದೆಯ ಅಡಿಯಲ್ಲಿ ನಕ್ಸಲ್ ಕಾರ್ಯಾಚರಣೆಗೆ ಸಹಾಯ ಮಾಡಿದ ಹಾಗೂ ದೇಶದ ಮೇಲೆ ಯುದ್ಧ ಘೋಷಿಸಿದ ಆರೋಪದ ಮೇಲೆ ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು. ಶಿಕ್ಷೆಯ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದ ಆರೋಪಿಗಳ ಶಿಕ್ಷೆಯನ್ನು ಜಸ್ಟಿಸ್ ರೋಹಿತ್ ದೇವ್ ಮತ್ತು ಅನಿಲ್ ಪನ್ಸಾರೆ ಅವರ ಪೀಠ ತಳ್ಳಿಹಾಕಿ ಆರೋಪಿಗಳನ್ನು ಬಿಡುಗಡೆಗೊಳಿಸುವ ತೀರ್ಪು ನೀಡಿದ್ದರು. ಆದರೆ ಆ ತೀರ್ಪು ಪ್ರಕಟವಾದ 24 ಗಂಟೆಗಳ ಒಳಗೆ ಸುಪ್ರೀಂ ಕೋರ್ಟ್ ಈ ತೀರ್ಮಾನದ ವಿರುದ್ಧ ತಡೆಯಾಜ್ಞೆ ನೀಡಿ ತೀರ್ಪನ್ನು ತಡೆಹಿಡಿಯುವ ಆದೇಶ ನೀಡಿತು.

ಒಂದು ನ್ಯಾಯಾಲಯ ನೀಡಿರುವ ತೀರ್ಪಿನ ಮೇಲೆ ಅದರ ಮೇಲಿನ ನ್ಯಾಯಾಲಯ ವ್ಯತಿರಿಕ್ತ ತೀರ್ಪು ಕೊಡುವುದು ಇಲ್ಲ ತಡೆಯಾಜ್ಞೆ ಕೊಡುವುದು ಸಾಮಾನ್ಯ; ಇದರಲ್ಲಿ ಅಂಥ ವೈಪರೀತ್ಯ ಏನಿದೆ ಎಂಬ ಮಾತು ಬರಬಹುದು. ಆದರೆ ನೀಡಿರುವ ತೀರ್ಪು ಯಾರದು, ಅದು ಸಮಾಜಕ್ಕೆ ನೀಡುವ ಸಂದೇಶವೇನು? ಯಾವ ಸಂದರ್ಭದಲ್ಲಿ ಆ ತೀರ್ಪು ಹೊರಬಂದಿದೆ ಮತ್ತು ಅದರಿಂದ ಆಡಳಿತ ಪಕ್ಷಕ್ಕೆ ಯಾವ ರೀತಿಯ ಪರಿಣಾಮ ಉಂಟಾಗುತ್ತದೆ ಎಂಬುದರ ಮೇಲೆ ತೀರ್ಪಿನ ಪ್ರಾಮುಖ್ಯತೆಯನ್ನು ಅರ್ಥೈಸಬೇಕಾಗುತ್ತದೆ.

ಸಾಯಿಬಾಬಾ ಕೇಸ್‌ನ ಹಿನ್ನಲೆ

ಆಂಧ್ರ ಮೂಲದ ಸಾಯಿಬಾಬಾ ದೆಹಲಿಯ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಫ್ರೊಫೆಸರ್. ಶೇಕಡ 90% ಅಂಗವೈಕಲ್ಯದಿಂದ ಬಳಲುತ್ತಿರುವ ಸಾಯಿಬಾಬಾ ಅವರಿಗೆ ಸುಮಾರು 15ಕ್ಕಿಂತ ಹೆಚ್ಚಿನ ಗಂಭೀರವಾದ ಕಾಯಿಲೆಗಳಿವೆ. ಇಂತಹ ಗಂಭೀರ ಸಮಸ್ಯೆಗಳ ನಡುವೆಯೂ ಆದಿವಾಸಿಗಳ ಸಮಸ್ಯೆಗಳಿಗೆ ಮರುಗಿ ಅವರ ಹಕ್ಕುಗಳ ಸಲುವಾಗಿ ಹೋರಾಟ ಮಾಡಿದ ಸಾಯಿಬಾಬಾರನ್ನು ಮಹಾರಾಷ್ಟ್ರ ಸರ್ಕಾರ ’ನಿಷೇಧಿತ ಸಿಪಿಐ(ಎಂ)’ ಸಂಘಟನೆಯೊಂದಿಗೆ ಸಂಪರ್ಕದಲ್ಲಿದೆ ಎಂದು ಹೇಳಲಾದ ರೆವಲ್ಯೂಷನರಿ ಡೆಮಾಕ್ರಟಿಕ್ ಫ್ರಂಟ್ (RDF)’ ಸಂಘಟನೆಯೊಂದಿಗೆ ನಂಟು ಹೊಂದಿದ ಆರೋಪದ ಮೇಲೆ ಸಾಯಿಬಾಬಾ ಮತ್ತು ಇತರರನ್ನು 2014ರಲ್ಲಿ ಬಂಧಿಸಿತು. ನ್ಯಾಯಾಲಯ ಯುಎಪಿಎ ಕಾಯ್ದೆಯಅಡಿ ಜೀವಾವಧಿ ಶಿಕ್ಷೆಯನ್ನೂ ವಿಧಿಸಿತು. ಜೈಲಿನ ವಾತಾವರಣದಲ್ಲಿ ಜರ್ಝರಿತರಾದ ಸಾಯಿಬಾಬಾರ ಆರೋಗ್ಯದ ಬಗ್ಗೆ ಸಂಯುಕ್ತ ರಾಷ್ಟ್ರ ಸಂಘಟನೆಗಳ ಮಾನವ ಹಕ್ಕು ಅಂಗ ಭಾರತ ಸರ್ಕಾರಕ್ಕೆ ಕಾಳಜಿ ವಹಿಸುವಂತೆ ಕೋರಿದೆ; ಆದರೆ ಪರಿಣಾಮ ಶೂನ್ಯ.

ಇದನ್ನೂ ಓದಿ: ಗಂಡನ ಆಸ್ತಿಯಲ್ಲಿ ಹೆಂಡತಿಗೆ ಸಮಪಾಲು: ಮದ್ರಾಸ್ ಹೈಕೋರ್ಟ್‌ನ ಮಹತ್ವದ ತೀರ್ಪು

ಜೀವಾವಧಿ ಶಿಕ್ಷೆಯ ಮೇಲ್ಮನವಿಯಲ್ಲಿ ಸುಮಾರು 101 ಪುಟಗಳ ಸುದೀರ್ಘ ತೀರ್ಪನ್ನು ನೀಡಿದ ಪೀಠ ಹೇಗೆ ನ್ಯಾಯದಾನದ ಪ್ರತಿ ಹಂತದಲ್ಲೂ ಕಾನೂನುಬದ್ಧ ಕ್ರಮಗಳ ಉಲ್ಲಂಘನೆ ಆಗಿದೆ ಎಂದು ಹೇಳಿರುವುದಲ್ಲದೆ, ಜೊತೆಗೆ ಅತ್ಯಂತ ಪ್ರಮುಖ ಅಂಶವಾದ, “ದೇಶದ ವಿರುದ್ಧ ನಡೆಯುವ ವಿಧ್ವಂಸಕ ಕೃತ್ಯಗಳನ್ನು ತಡೆಯುವ ಅಗತ್ಯಗಳ ಜೊತೆಗೆ, ಪ್ರಜಾಪ್ರಭುತ್ವದ ಆಶಯಗಳು ಹಾಗೂ ನಾಗರಿಕ ಹಕ್ಕುಗಳ ರಕ್ಷಣೆ ಪ್ರಮುಖವಾದದ್ದು”, ಈ ನಿಟ್ಟಿನಲ್ಲಿ ಯಾವುದೇ ಕಾರ್ಯವೈಖರಿ ಅಥವಾ ಕರ್ತವ್ಯಲೋಪಗಳನ್ನು ಸಮರ್ಥಿಸಲು ಆಗುವುದಿಲ್ಲ ಎಂದು ಹೇಳಿತ್ತು.

ಜಿ.ಎನ್. ಸಾಯಿಬಾಬಾ

ಈ ತೀರ್ಪಿನ ವಿರುದ್ಧ ಮಹಾರಾಷ್ಟ್ರ ಸರ್ಕಾರ 24 ಗಂಟೆಗಳ ಒಳಗೆ ಸುಪ್ರೀಂ ಕೋರ್ಟಿಗೆ ಮೇಲ್ಮನವಿಗೆ ಹೋದಾಗ ಮೊದಲಿಗೆ ಅದು ಜಸ್ಟಿಸ್ ಚಂದ್ರಚೂಡ್ ಅವರ ಎದುರಿಗೆ ಬಂದಿತ್ತು. ಇನ್ನೆರಡೇ ದಿನಗಳಲ್ಲಿ ಮುಖ್ಯ ನ್ಯಾಯಮೂರ್ತಿ ಆಗಲಿದ್ದ ಅವರು, ಯಾವುದೇ ತುರ್ತು ಅಗತ್ಯ ಇಲ್ಲದ ಕಾರಣ 2 ದಿನಗಳ ನಂತರ ಸೋಮವಾರಕ್ಕೆ ಪ್ರಕರಣ ಕೈಗೆತ್ತಿಕೊಳ್ಳಬಹುದು ಎಂದಾಗ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಪ್ರಕರಣವನ್ನು ಬೇರೆ ಪೀಠದ ಮುಂದೆ ತುರ್ತಾಗಿ ತರುವಂತೆ ಕೇಳಿದ ಮೇರೆಗೆ, ಶನಿವಾರ ಜಸ್ಟಿಸ್ ಶಾ ಹಾಗೂ ಬೇಲಾ ತ್ರಿವೇದಿ ಅವರ ಪೀಠದ ಮುಂದೆ ಪ್ರಕರಣವನ್ನು ತಂದು ತಡೆಯಾಜ್ಞೆಯನ್ನು ಪಡೆಯಲಾಯಿತು. ಈ ಪ್ರಕರಣದ ಆಳ ಅಗಲಗಳನ್ನು ಬಗೆಯುತ್ತ ಹೋದರೆ ಅಲ್ಲಿ ಪ್ರಜಾಪ್ರಭುತ್ವ ಮತ್ತು ನ್ಯಾಯಾಂಗದ ಅಂತಃಸಾಕ್ಷಿಗೆ ಚೂರಿ ಇರಿದ ಅನುಭವವಾಗುತ್ತದೆ.

ಜಸ್ಟಿಸ್ ರೋಹಿತ್ ದೇವ್ ತಮ್ಮ ರಾಜೀನಾಮೆಗೆ ಯಾವುದೇ ಕಾರಣಗಳನ್ನು ನೀಡಿರದೇ ಇರಬಹುದು ಆದರೆ ಇತ್ತೀಚೆಗೆ ಅವರನ್ನು ನಾಗಪುರದಿಂದ ಅಲಹಾಬಾದ್‌ಗೆ ವರ್ಗಾವಣೆ ಮಾಡಿ ಹೊರಡಿಸಿದ್ದ ಆದೇಶವೂ ಕಾರಣ ಎನ್ನಲಾಗುತ್ತಿದೆ.

ಕೆಲವೊಂದು ಸಂದರ್ಭಗಳಲ್ಲಿ ಕಾರಣಗಳನ್ನು ನೇರವಾಗಿ ಹೇಳದೆ ಇದ್ದರೂ ಆ ಸಂದರ್ಭದ ಹಿನ್ನೆಲೆ ಹಾಗೂ ಅದನ್ನು ಸುತ್ತುವರಿದ ಘಟನಾವಳಿಗಳ ಹಿನ್ನೆಲೆಯಲ್ಲಿ ಕಾರಣಗಳನ್ನು ವಿಶ್ಲೇಷಿಸಬೇಕಾಗುತ್ತದೆ. ಈ ವಿಶ್ಲೇಷಣೆಗಳು ತರ್ಕದ ಹಿನ್ನಲೆಗಳು ಎಲ್ಲವನ್ನು ಜಾಲಾಡಿದಾಗ ವಸ್ತುಸ್ಥಿತಿ ಗೋಚರವಾಗಬಹುದು. ಇಂದಿನ ಮಾಧ್ಯಮಗಳ ದಿವಾಳಿತನ ಮತ್ತು ಆಡಳಿತ ಪಕ್ಷದೆಡೆಗಿನ ಭಟ್ಟಂಗಿತನವನ್ನು ನೋಡುವ ಯಾವುದೇ ವ್ಯಕ್ತಿಗೆ ವಸ್ತುನಿಷ್ಠ ವರದಿ ಹಾಗೂ ಕಾರಣಗಳು ಕಾಣುವ ಸಾಧ್ಯತೆಗಳಿಲ್ಲ.

ದೇಶದ ಆಗುಹೋಗುಗಳನ್ನು ಕೇವಲ ಆ ದಿನದ ಘಟನೆಗಳಂತೆ ನೋಡುವವರಿಗೆ ಒಂದು ಗಂಭೀರ ಘಟನೆಯ ಚಾರಿತ್ರಿಕ ಹಿನ್ನಲೆಯಾಗಲಿ ಅದು ಮುಂದೆ ದೇಶದ ಮೇಲೆ ಬೀರಬಹುದಾದ ಪರಿಣಾಮಗಳ ಬಗ್ಗೆಯಾಗಲಿ ಅರಿವು ಇರುವುದಿಲ್ಲ. ಜಸ್ಟಿಸ್ ದೇವ್ ಅವರ ರಾಜೀನಾಮೆ ಕೇವಲ ಒಂದು ಸಣ್ಣ ಘಟನೆ ಅಲ್ಲ.

ಇನ್ನು ವೃತ್ತಿಬಾಂಧವರಿಗೆ ಇದೊಂದು ನೋವಿನ ಸಂಗತಿ. ಒಬ್ಬ ದಕ್ಷ ನ್ಯಾಯಮೂರ್ತಿಯ ರಾಜೀನಾಮೆ ಕೆಲಸದ ಮೇಲೆ ಅಡ್ಡಪರಿಣಾಮಗಳನ್ನು ಬೀರುತ್ತದೆ. ಆದರೆ ಪ್ರಜಾಪ್ರಭುತ್ವದ ತತ್ವಗಳಲ್ಲಿ ನಂಬಿಕೆ ಇರಿಸಿ ದೇಶದ ಆಗುಹೋಗುಗಳನ್ನು ಸೂಕ್ಷ್ಮವಾಗಿ ಗಮನಿಸುವ ಪ್ರತಿಯೊಬ್ಬರಿಗೂ ಇದೊಂದು ಆಘಾತಕಾರಿ ಸುದ್ದಿ.

ಬಾರ್ ಎಂಡ್ ಬೆಂಚ್ ವರದಿಯ ಪ್ರಕಾರ 2017ರಿಂದ ಈಚೆಗೆ ಒಟ್ಟು 15 ಜನ ನ್ಯಾಯಮೂರ್ತಿಗಳು ಬಾಂಬೆ ಹೈಕೋರ್ಟ್‌ಗೆ ರಾಜೀನಾಮೆಯನ್ನು ನೀಡಿದ್ದಾರೆ. ಇನ್ನು ಹೆಚ್ಚುವರಿ ನ್ಯಾಯಮೂರ್ತಿಗಳನ್ನೂ ಸೇರಿಸಿದರೆ ಈ ಸಂಖ್ಯೆ ಇನ್ನೂ ಹೆಚ್ಚಾಗುತ್ತದೆ. ನ್ಯಾಯಮೂರ್ತಿಗಳು ಎಂಥ ಕಠಿಣ ಪರಿಸ್ಥಿತಿಗಳಲ್ಲೂ ತಮ್ಮ ನಿಷ್ಠೆ, ಪ್ರಾಮಾಣಿಕತೆಗಳನ್ನು ಕಾಯ್ದಿಟ್ಟುಕೊಳ್ಳಬೇಕು ಎಂಬುದು ಸಮಾಜದ ಆಶಯ. ಆದರೆ ಒಂದು ವ್ಯತಿರರಿಕ್ತ ಪರಿಸ್ಥಿತಿಯಲ್ಲಿ ಸಮಗ್ರ ವ್ಯವಸ್ಥೆಯನ್ನೇ ಎದುರು ಹಾಕಿಕೊಳ್ಳುವ ದಾಷ್ಟ್ರ್ಯ ಮತ್ತು ಅಗತ್ಯ ಎಷ್ಟು ಜನರಿಗೆ ಇರುತ್ತದೆ? ತಮ್ಮ ತೀರ್ಪುಗಳಲ್ಲಿ ಕಾನೂನುಗಳ ಉಲ್ಲೇಖಾ, ವಿಶ್ಲೇಷಣೆಗಳ ಜೊತೆಗೆ ಧರ್ಮದ ತಿರುಳು, ಸಾರ ಮುಂತಾದ ಉದಾಹರಣೆಗಳನ್ನು ನೀಡುತ್ತಿದ್ದ ಕೆಲವು ನ್ಯಾಯಮೂರ್ತಿಗಳನ್ನು ನಾವು ನೋಡಿದ್ದೇವೆ; ಆದರೆ ಪ್ರಖ್ಯಾತ ಕಾನೂನು ತಜ್ಞ ಡಾ. ಮೋಹನ್ ಗೋಪಾಲ್ ಅವರು ನೀಡಿರುವ ಒಂದು ಉಪನ್ಯಾಸದಲ್ಲಿ “ಸಂವಿಧಾನದಿಂದ ಮೂಲವನ್ನು ಗ್ರಹಿಸುವ ಬದಲು ಧರ್ಮಗ್ರಂಥಗಳಿಂದ ಆಕರಗಳನ್ನು ಹುಡುಕಿ ತೀರ್ಪು ನೀಡುತ್ತಿರುವ ನ್ಯಾಯಮೂರ್ತಿಗಳ ಸಂಖ್ಯೆ ಕಳೆದ ದಶಕದಲ್ಲಿ ಹೆಚ್ಚಾಗಿವೆ” ಎಂದು ಉದಾಹರಣೆಗಳ ಮೂಲಕ ಹೇಳುತ್ತಾರೆ. ಅಂದರೆ ಇವತ್ತಿನ ಧರ್ಮದ ಅಮಲಿನ ಆಡಳಿತ ಪಕ್ಷಕ್ಕೆ ಪೂರಕವಾಗಿ ನಡೆದುಕೊಳ್ಳುತ್ತಿರುವ ನ್ಯಾಯಮೂರ್ತಿಗಳ ಸಂಖ್ಯೆ ಹೆಚ್ಚಾಗಿದೆ ಎಂದು ಅರ್ಥ. ಇನ್ನು ಸಂವಿಧಾನಾತ್ಮಕವಾಗಿ ತೀರ್ಪು ನೀಡಿದರೆ ಅನಪೇಕ್ಷಿತ ಮತ್ತು ಅನಿರೀಕ್ಷಿತ ವರ್ಗಾವಣೆಗಳು ಕಾಯುತ್ತವೆ ಎಂದರೆ ನ್ಯಾಯಮೂರ್ತಿಗಳು ನಿರ್ಭೀತಿಯಿಂದ ಕೆಲಸ ಮಾಡಲು ಹೇಗೆ ಸಾಧ್ಯ?

ನ್ಯಾಯಾಂಗ ಇವತ್ತು ಅಡ್ಡರಸ್ತೆಯಲ್ಲಿ ಇದೆಯಾ? ನ್ಯಾಯದಾನ ಎಂಬುದು ಎಲ್ಲಿದೆ? ಅಸಮಾನತೆ ಮತ್ತು ಅಸಹಿಷ್ಣುತೆಯ ಪ್ರತಿಬಿಂಬವಾದ ಮನು ಮಹಾರಾಜನ ಮೂರ್ತಿಯನ್ನು ತನ್ನ ಆವರಣದಲ್ಲಿ ಪ್ರತಿಷ್ಠಾಪಿಸಿದ ರಾಜಸ್ಥಾನದ ಹೈಕೋರ್ಟ್ ಜನರಿಗೆ ಕೊಡುತ್ತಿರುವ ಸಂದೇಶವೇನು? ಇವೆಲ್ಲಾ ಪ್ರಶ್ನೆಗಳು ಜಸ್ಟಿಸ್ ರೋಹಿತ್ ದೇವ್ ರಾಜೀನಾಮೆ ಹಿನ್ನೆಲೆಯಲ್ಲಿ ಏಳುತ್ತವೆ.

ರಾಜಲಕ್ಷ್ಮಿ ಅಂಕಲಗಿ

ರಾಜಲಕ್ಷ್ಮಿ ಅಂಕಲಗಿ
ಹೈಕೋರ್ಟ್ ವಕೀಲರು, ಹಲವು ಜನಪರ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...

ಕ್ಷೇತ್ರ ಮರುವಿಂಗಡನೆ : ಗೃಹ ಸಚಿವ ಅಮಿತ್ ಶಾ ಹೇಳಿದ್ದೆಲ್ಲವು ನಿಜವೇ?..ಇಲ್ಲಿದೆ ವಾಸ್ತವಾಂಶ

ದೇಶದ ಗೃಹ ಸಚಿವರು ಸಂಸತ್ತಿನಲ್ಲಿ ಪ್ರಮುಖ ಕಾನೂನಿನ ಬಗ್ಗೆ ವಿವರಿಸುವಾಗ ವಿಷಯ ಸ್ಪಷ್ಟವಾಗಿರಬೇಕು. ಆದರೆ, ಕ್ಷೇತ್ರ ಮರುವಿಂಗಡನೆ ಕುರಿತು ಗೃಹ ಸಚಿವ ಅಮಿತ್ ಶಾ ಮಾತನಾಡಿರುವುದು ಹಾಗಿರಲಿಲ್ಲ. ದಕ್ಷಿಣ ಭಾರತದ ರಾಜ್ಯಗಳು ತಮ್ಮ...

ಮಹಿಳಾ ಮೀಸಲು ಮಸೂದೆ 2023ರಲ್ಲೇ ಗೆದ್ದಿದೆ, ಈಗ ಸೋತಿರುವುದು ಮೋದಿ ಸರ್ಕಾರ

ಮೋದಿ ಸರ್ಕಾರ ಮಂಡಿಸಿದ್ದ ಮಹಿಳಾ ಮೀಸಲಾತಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾಗಿದೆ ಎಂಬುವುದು ದೇಶದಲ್ಲಿ ಪ್ರಸ್ತುತ ದೊಡ್ಡ ಚರ್ಚೆಯ ವಿಷಯವಾಗಿದೆ. ಕಾಂಗ್ರೆಸ್‌ ನೇತೃತ್ವದಲ್ಲಿ ವಿಪಕ್ಷಗಳು ಮಸೂದೆಯನ್ನು ಸೋಲಿಸುವ ಮೂಲಕ ದೇಶದ ಮಹಿಳೆಯರ ಸಬಲೀಕರಣಕ್ಕೆ...