Homeಮುಖಪುಟ’ಸಾಂವಿಧಾನಿಕ ತತ್ತ್ವಗಳ ಉಲ್ಲಂಘನೆ’: EWS ಭಿನ್ನಮತದ ತೀರ್ಪು

’ಸಾಂವಿಧಾನಿಕ ತತ್ತ್ವಗಳ ಉಲ್ಲಂಘನೆ’: EWS ಭಿನ್ನಮತದ ತೀರ್ಪು

- Advertisement -
- Advertisement -

’ಜನಹಿತ ಅಭಿಯಾನ ವರ್ಸಸ್ ಭಾರತ ಸರಕಾರ’ ಪ್ರಕರಣದಲ್ಲಿ ಆರ್ಥಿಕವಾಗಿ ಹಿಂದುಳಿದ ವಿಭಾಗಗಳಿಗೆ (ಇಡಬ್ಲ್ಯುಎಸ್) ಮೀಸಲಾತಿಯ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿಹಿಡಿಯುವ ಸುಪ್ರೀಂ ಕೋರ್ಟಿನ ನಿರ್ಧಾರವು ಸಾಮಾಜಿಕ ನ್ಯಾಯದ ಸಾಂವಿಧಾನಿಕ ಸ್ಫೂರ್ತಿಗೆ ವಿರುದ್ಧವಾಗಿದೆ. 103ನೇ ಸಾಂವಿಧಾನಿಕ ತಿದ್ದುಪಡಿಯ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿ ಹಿಡಿಯುವ ನ್ಯಾಯಮೂರ್ತಿಗಳಾದ ಮಹೇಶ್ವರಿ, ತ್ರಿವೇದಿ ಮತ್ತು ಪರ್ದಿವಾಲ ಅವರನ್ನು ಒಳಗೊಂಡಿದ್ದ ಪೀಠದ ಬಹುಮತದ ತೀರ್ಮಾನವು ಜಾತಿ ಆಧರಿತ ಮೀಸಲಾತಿಯ ಸಿಂಧುತ್ವದ ಬಗ್ಗೆಯೇ ಕಂಗೇಡಿಸುವ ಮತ್ತು ಕಳವಳಕಾರಿ ಪ್ರಶ್ನೆಗಳನ್ನು ಕೇಳಿದೆ.

ಆರ್ಥಿಕವಾಗಿ ಹಿಂದುಳಿದ ವಿಭಾಗಗಳು ಎಸ್‌ಸಿ/ಎಸ್‌ಟಿ ಮತ್ತು ಒಬಿಸಿ ಜನವಿಭಾಗಗಳ ಹಾಗೆಯೇ ತಾರತಮ್ಯ ಅನುಭವಿಸುತ್ತಿರುವ ಗುಂಪುಗಳು ಎಂದು ಈ ಬಹುಮತದ ನಿರ್ಧಾರವು ಹೇಳುತ್ತದೆ. ಇಡಬ್ಲ್ಯುಎಸ್ ಗುಂಪುಗಳು ಬಡತನದ ಕಾರಣದಿಂದ ತಾರತಮ್ಯ ಎದುರಿಸುವುದರಿಂದಾಗಿ ಸರಕಾರಿ ಉದ್ಯೋಗ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ 10 ಶೇಕಡಾ ಮೀಸಲಾತಿಗೆ ಅರ್ಹವಾಗಿವೆ ಎಂದು ತೀರ್ಪು ಹೇಳುತ್ತದೆ. ಸಾಂವಿಧಾನಿಕ ವಿಧಿ 15(4) ಮತ್ತು 16(4)ರ ಅನ್ವಯ ಎಸ್‌ಸಿ/ಎಸ್‌ಟಿ ಮತ್ತು ಒಬಿಸಿ ಗುಂಪುಗಳು ಈಗಾಗಲೇ ಮೀಸಲಾತಿ ಪಡೆಯುತ್ತಿರುವುದರಿಂದ ಅವುಗಳನ್ನು ಈ ಇಡಬ್ಲ್ಯುಎಸ್ ವಿಭಾಗದಿಂದ ಹೊರತುಪಡಿಸಲಾಗಿದೆ.

ಮುಂದುವರಿದ ಜಾತಿಗಳು ಮತ್ತು ಇತರ ಮೀಸಲಾತಿಯಿಲ್ಲದ ಸಮುದಾಯಗಳಲ್ಲಿ ಕೂಡಾ ಬಡವರು ಇದ್ದಾರೆ ಎಂಬುದು ನಿಜ. ಬಡತನ ನಿರ್ಮೂಲನೆಗಾಗಿ ಸಂವಿಧಾನದ ಮಾರ್ಗದರ್ಶಕ ತತ್ವಗಳ ಅನುಸಾರ ಯಾವುದಾದರೂ ಶಾಸನಾತ್ಮಕ ಕ್ರಮ ಇರಬೇಕು. ಆದರೆ, ಅವರಿಗೆ ಮೀಸಲಾತಿ ನೀಡುವುದು ಸಾಂವಿಧಾನಿಕವಾಗಿ ಸೂಕ್ತವಲ್ಲದ ಪ್ರತಿಕ್ರಿಯೆಯಾಗಿದೆ. ಬಹುಮತದ ನಿರ್ಧಾರವು ಪರಿಹಾರಾತ್ಮಕ ತಾರತಮ್ಯದ ಸಾಂವಿಧಾನಿಕ ತರ್ಕವನ್ನು ಅರ್ಥಮಾಡಿಕೊಳ್ಳಲು ವಿಫಲವಾಗಿದೆ. ಎಸ್‌ಸಿ/ಎಸ್‌ಟಿ ಮತ್ತು ಒಬಿಸಿ ವರ್ಗಗಳು ಐತಿಹಾಸಿಕವಾಗಿ ಅನುಭವಿಸಿದ ಅನ್ಯಾಯಕ್ಕೆ ಪರಿಹಾರವೆಂದು ಸಾಂವಿಧಾನಿಕವಾಗಿ ನೀಡಲಾಗಿರುವ ಮೀಸಲಾತಿಯನ್ನು, ಅದು ಯಾವುದೋ ಬಡತನ ನಿರ್ಮೂಲನಾ ಕ್ರಮ ಎಂಬಂತೆ ಪರಿಗಣಿಸಿದೆ.

ಭಾರತದ ಸಂವಿಧಾನವು ಸ್ಪಷ್ಟಪಡಿಸುವ ಬಹುಮುಖ್ಯ ತತ್ವ ಎಂದರೆ, ಭಾರತೀಯ ಸಮಾಜದಲ್ಲೇ ಆಳವಾಗಿ ಬೇರೂರಿರುವ ಹಿಂದಿನ ಜಾತಿ ಆಧರಿತ ದಮನ ಮತ್ತು ಶೋಷಣೆಗೆ ಮೀಸಲಾತಿಯು ಪರಿಹಾರ ಒದಗಿಸಲು ಬಯಸುತ್ತದೆ ಎಂಬುದು.

ಐತಿಹಾಸಿಕವಾಗಿ ಬೇರೂರಿರುವ ತಾರತಮ್ಯದ ರೂಪಗಳಿಗೆ ಪರಿಹಾರವಾಗಿ ನೀಡಲಾಗಿರುವ ಮೀಸಲಾತಿಯನ್ನು, ಬಡತನದ ಕುರಿತ ನಿಜ ಆತಂಕಗಳ ನಿವಾರಣೆಗೆ ಬಳಸಿಕೊಳ್ಳಲು ಸಾಧ್ಯವಿಲ್ಲ. ಅಲ್ಪಸಂಖ್ಯಾತ ತೀರ್ಮಾನ ನೀಡಿದ ನ್ಯಾಯಮೂರ್ತಿಗಳಾದ ಭಟ್ ಮತ್ತು ಲಲಿತ್ ಸೇರಿದಂತೆ ಐವರು ನ್ಯಾಯಾಧೀಶರೂ ಆರ್ಥಿಕ ಆಧಾರದ ಮೀಸಲಾತಿಯು ಸಾಂವಿಧಾನಿಕ ಎಂದು ಹೇಳಿರುವುದು ನಿರಾಶಾಜನಕವಾಗಿದೆ. ಹಿಂದುಳಿದಿರುವಿಕೆಯನ್ನು ನಿರ್ಧರಿಸಲು ಆರ್ಥಿಕ ಪರಿಸ್ಥಿತಿಯೇ ಏಕೈಕ ಮಾನದಂಡವಲ್ಲ ಎಂಬ ’ಇಂದಿರಾ ಸಾಹ್ನಿ ವರ್ಸಸ್ ಭಾರತ ಸರಕಾರ’ ಪ್ರಕರಣದ ಪೂರ್ವ ನಿದರ್ಶನವನ್ನು ಸದರಿ ನ್ಯಾಯಪೀಠ ಈ ತೀರ್ಪಿನಲ್ಲಿ ಬದಿಗೆ ಸರಿಸಿದೆ.

ಇದನ್ನೂ ಓದಿ: EWS: ದಲಿತ-ಶೂದ್ರರ ಮೀಸಲಾತಿಯ ಕ್ರಾಂತಿಗೆ ಬ್ರಾಹ್ಮಣ್ಯದ ಪ್ರತಿಕ್ರಾಂತಿ

ಬಹುಮತದ ತೀರ್ಮಾನವು ಆರ್ಥಿಕವಾಗಿ ಹಿಂದುಳಿದಿರುವವರ ಕೋಟಾದಲ್ಲಿ ಎಸ್‌ಸಿ/ಎಸ್‌ಟಿ ಮತ್ತು ಒಬಿಸಿ ಜಾತಿಗಳನ್ನು ಹೊರತುಪಡಿಸಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಎಸ್‌ಸಿ/ಎಸ್‌ಟಿ ಮತ್ತು ಒಬಿಸಿ ಜನವಿಭಾಗಗಳು ತಾಳಮೇಳವಿಲ್ಲದಷ್ಟು ಅತಿ ಹೆಚ್ಚು ಆರ್ಥಿಕವಾಗಿ ಹಿಂದುಳಿದ ಜನರ ಪ್ರಮಾಣವನ್ನು ಹೊಂದಿರುವುದರಿಂದ, ಈ ತಿದ್ದುಪಡಿಯು ಅವರನ್ನು ಮೀಸಲಾತಿಯಿಂದ ಹೊರತುಪಡಿಸಿರುವುದು ಅತಾರ್ಕಿಕವಾಗಿದೆ.

ವಾಸ್ತವದಲ್ಲಿ ನ್ಯಾಯಮೂರ್ತಿಗಳಾದ ಭಟ್ ಮತ್ತು ಲಲಿತ್ ಅವರ ಅಲ್ಪಸಂಖ್ಯಾತ ಅಭಿಪ್ರಾಯವು ಪರಿಶಿಷ್ಟ ಬುಡಕಟ್ಟುಗಳ ಒಟ್ಟು ಜನಸಂಖ್ಯೆಯಲ್ಲಿ 48 ಶೇಕಡಾ ಮಂದಿ, ಪರಿಶಿಷ್ಟ ಜಾತಿಗಳ 38 ಶೇಕಡಾ ಮಂದಿ ಹಾಗೂ ಒಬಿಸಿ ಜನಸಂಖ್ಯೆಯ 33 ಶೇಕಡಾ ಜನಕ್ಕೆ ಕಡಿಮೆ ಇಲ್ಲದಷ್ಟು ಮಂದಿ ಕಡುಬಡವರು ಎಂಬ ಸತ್ಯವನ್ನು ಗಮನಿಸಿದೆ. ಬಡ ಎಸ್‌ಸಿ/ಎಸ್‌ಟಿ ಮತ್ತು ಒಬಿಸಿ ಗುಂಪುಗಳನ್ನು ಇಡಬ್ಲ್ಯುಎಸ್ ಕೋಟದಿಂದ ಹೊರಗಿಡುವ ಕ್ರಮದ ಉದ್ದೇಶವೆಂದರೆ, ಅದನ್ನು ಕೇವಲ ಮೇಲ್ಜಾತಿಯವರಿಗೆ ನೀಡುವುದು. ’ಆರ್ಥಿಕ ಮಾನದಂಡದ ಮೀಸಲಾತಿಗೆ ಅರ್ಹರಾಗಿರುವ ಮತ್ತು ಒಟ್ಟಾಗಿ ದೇಶದ ಜನಸಂಖ್ಯೆಯಲ್ಲಿ 82 ಶೇಕಡಾ ಎಸ್‌ಸಿ/ಎಸ್‌ಟಿ ಮತ್ತು ಒಬಿಸಿ ಗುಂಪುಗಳನ್ನು ಅದರಿಂದ ಹೊರತುಪಡಿಸುವ ಕ್ರಮ’ವನ್ನು ತೀರ್ಪಿನ ಅಲ್ಪಸಂಖ್ಯಾತ ಅಭಿಪ್ರಾಯವು ಕಟುವಾಗಿ ಟೀಕಿಸಿದ್ದು, ’ಈ ಕ್ರಮವು ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಹಿತಾಸಕ್ತಿಯನ್ನು ಕಾಪಾಡುವುದೆಂದು ಸೂಚಿಸುವಂತದ್ದು ಏನೂ ಇಲ್ಲ ಎಂದು ಹೇಳಿದೆ.

ಬಹುಸಂಖ್ಯಾತ ಅಭಿಪ್ರಾಯವು ಇದನ್ನು ನಿರಾಕರಿಸಿದರೂ, 103ನೇ ಸಾಂವಿಧಾನಿಕ ತಿದ್ದುಪಡಿಯು ಎಂಟು ಲಕ್ಷಕ್ಕಿಂತ ಕಡಿಮೆ ಆದಾಯ ಇರುವ ಮುಂದುವರಿದ ವರ್ಗಗಳಿಗೆ ನೀಡಿದ ಮೀಸಲಾತಿ ಎಂದು ಸೂಕ್ತವಾಗಿಯೇ ಕರೆಯಬಹುದು. (ಈ ಆದಾಯ ಮಿತಿಯನ್ನು ಸರಕಾರಿ ಅಧಿಸೂಚನೆಯಲ್ಲಿ ನೀಡಲಾಗಿದೆ.) ಹಿಂದೆ 50 ಶೇಕಡಾದಷ್ಟಿದ್ದ ಮುಕ್ತ ಸ್ಥಾನಗಳು ಎಲ್ಲರಿಗೂ ಮುಕ್ತವಾಗಿದ್ದವು. ಅಂದರೆ, ಮೀಸಲಾತಿ ಇರುವ ಅಭ್ಯರ್ಥಿಗಳಿಗೂ ಅನ್ವಯವಾಗುತ್ತಿದ್ದವು. ಪ್ರಸ್ತುತ ವ್ಯವಸ್ಥೆಯಲ್ಲಿ ಈ 10 ಶೇಕಡಾ ಮೀಸಲಾತಿಯನ್ನು ಎಸ್‌ಸಿ/ಎಸ್‌ಟಿ ಮತ್ತು ಒಬಿಸಿ ಜನವಿಭಾಗಗಳಿಗೆ ಸಿಗದಂತೆ ಮಾಡಲಾಗಿದೆ.

ಹೀಗಿದ್ದರೂ, ಅಲ್ಪಸಂಖ್ಯಾತ ತೀರ್ಮಾನವು ತಾರತಮ್ಯ ರಹಿತತೆ ಕುರಿತ ವಿಶ್ಲೇಷಣೆಯಲ್ಲಿ ಬಹುಸಂಖ್ಯಾತ ತರ್ಕವನ್ನು ಗೌರವಿಸುತ್ತಲೇ ಹಲವಾರು ದಲಿತರು, ಆದಿವಾಸಿಗಳು ಮತ್ತು ಮಾನವಹಕ್ಕು ಗುಂಪುಗಳು ಬಹುಸಂಖ್ಯಾತ ತೀರ್ಮಾನದ ಬಗ್ಗೆ ವ್ಯಕ್ತಪಡಿಸುತ್ತಿರುವ ಆತಂಕಗಳಿಗೆ ಧ್ವನಿ ನೀಡಿದೆ.

ಅಲ್ಪಸಂಖ್ಯಾತ ತೀರ್ಮಾನವು ಈ ತಿದ್ದುಪಡಿಯನ್ನು ಸಂಪೂರ್ಣವಾಗಿ ತಳ್ಳಿಹಾಕಿದೆ: “ನಮ್ಮ ಸಂವಿಧಾನವು ’ಹೊರತುಪಡಿಸುವ’ ಭಾಷೆಯಲ್ಲಿ ಮಾತನಾಡುವುದಿಲ್ಲ ಮತ್ತು ಈ ತಿದ್ದುಪಡಿಯು ’ಹೊರತುಪಡಿಸುವ’ ಭಾಷೆಯ ಮೂಲಕ ಸಾಮಾಜಿಕ ನ್ಯಾಯದ ಮೂಲಕಲ್ಪನೆಯನ್ನೇ ಮಾತ್ರವಲ್ಲ; ಆ ಮೂಲಕ- ಸಂವಿಧಾನದ ಮೂಲ ಸಂರಚನೆಯನ್ನೇ ಅವಗಣಿಸಿದೆ” ಎಂದಿದೆ. “ಮೊದಲ ಬಾರಿಗೆ ಸಾಮಾಜಿಕ ಅನ್ಯಾಯದ ಬಲಿಪಶುಗಳೂ, ಈ ದೇಶದಲ್ಲಿ ಅತ್ಯಂತ ಬಡವರೂ ಆಗಿರುವವರ ಹೊರತುಪಡಿಸುವಿಕೆಯನ್ನು ಕಾರ್ಯರೂಪಕ್ಕೆ ತರಲು ಸಾಂವಿಧಾನಿಕ ಅಧಿಕಾರವನ್ನು ಬಳಸಲಾಗಿದೆ” ಎಂದು ಅಲ್ಪಸಂಖ್ಯಾತ ತೀರ್ಮಾನವು ಕಟುವಾಗಿ ಹೇಳಿದೆ.

ಅಲ್ಪಸಂಖ್ಯಾತ ತೀರ್ಮಾನದ ಪ್ರಕಾರ, ಎಸ್‌ಸಿ/ಎಸ್‌ಟಿ ಮತ್ತು ಒಬಿಸಿ ಜನವರ್ಗಗಳನ್ನು ಇಡಬ್ಲ್ಯುಎಸ್ ಮೀಸಲಾತಿಯಿಂದ ಹೊರತುಪಡಿಸಿರುವುದು ಸಂವಿಧಾನದ ಸಮಾನತೆಯ ತತ್ವಕ್ಕೆ ವಿರುದ್ಧವಾದುದು ಎಂದು ಅಲ್ಪಸಂಖ್ಯಾತ ಅಭಿಪ್ರಾಯವು ಹೇಳುತ್ತದೆ. ಈ ಸಮಾನತೆಯ ತತ್ವವು, ಅಂದರೆ ವಿಧಿ 14, 15, 16 ಮತ್ತು 17 ಎಂಬುದು “ಕಾನೂನಿನ ಮುಂದೆ ಸಮಾನತೆ ಮತ್ತು ಕಾನೂನಿನ ಪ್ರಕಾರ ಸಮಾನ ರಕ್ಷಣೆ” ಕುರಿತ ತೆಳುವಾದ ಹೇಳಿಕೆಯಲ್ಲ; “ಜಾತಿಯಂತಹ ಸೂಚಿತ ವಿಷಯಗಳ ಆಧಾರದಲ್ಲಿ ತಾರತಮ್ಯ ಮಾಡದಂತೆ ಸರಕಾರವನ್ನು ಪ್ರತಿಬಂಧಿಸುತ್ತದೆ” ಎಂದು ಈ ತೀರ್ಮಾನ ಹೇಳುತ್ತದೆ. ಅದು ವಿಧಿ 17ನ್ನು ಅಸ್ಪೃಶ್ಯತೆಯ ವಿರುದ್ಧ ಒಂದು ಅತ್ಯಂತ ಸ್ಪಷ್ಟವಾದ ಪ್ರತಿಬಂಧಕಾಜ್ಞೆ ಎಂದು ಹೇಳಿದ್ದು, “ಪ್ರತ್ಯಕ್ಷವಾಗಿ ಅಥವಾ ವರ್ಗೀಕರಣದ ಮೂಲಕ ಜಾತಿ ತಾರತಮ್ಯವನ್ನು ತಡೆಯುವ ಹೊಣೆಗಾರಿಕೆಯನ್ನು ಸರಕಾರದ ಮೇಲೆ ಹೊರಿಸಿರುವುದು ಮಾತ್ರವಲ್ಲ; ಅದು ಸಮಾನತೆಯ ತತ್ವದ ಮತ್ತು ಖಂಡಿತವಾಗಿಯೂ ಇಡೀ ಸಂವಿಧಾನದ ಚೌಕಟ್ಟಿನ ಬಹುದೊಡ್ಡ ಭಾಗವಾಗಿದೆ.”

ಸರಕಾರವು 103ನೇ ತಿದ್ದುಪಡಿಯ ಮೂಲಕ ಎಸ್‌ಸಿ/ಎಸ್‌ಟಿ ಮತ್ತು ಒಬಿಸಿ ಗುಂಪುಗಳನ್ನು ಆರ್ಥಿಕವಾಗಿ ಹಿಂದುಳಿದ ವರ್ಗಗಳ ಮೀಸಲಾತಿಯಿಂದ ಹೊರತುಪಡಿಸಿರುವ ಕ್ರಮದಿಂದ ಸರಕಾರವು ಸಂವಿಧಾನದ ಈ ಪ್ರತಿಬಂಧಕಾಜ್ಞೆಯನ್ನು ಉಲ್ಲಂಘಿಸಿದೆ ಎಂದು ಅಲ್ಪಸಂಖ್ಯಾತ ತೀರ್ಮಾನವು ಹೇಳುತ್ತದೆ.

ಹಾಗೆ ನೋಡಿದರೆ, ಈ ಹೊರತುಪಡಿಸುವಿಕೆಯು ಭಾರತೀಯ ಸಂವಿಧಾನದ ಮೂಲ ಸಂರಚನೆಯನ್ನೇ ಉಲ್ಲಂಘಿಸಿದೆ. ಭಾರತೀಯ ಸಾಂವಿಧಾನಿಕ ಕಾನೂನಿನ ಮೂಲ ಅಡಿಪಾಯವೇ “ಭಾರತೀಯ ಸಂವಿಧಾನದ ಅಸ್ಮಿತೆ, ವ್ಯಕ್ತಿತ್ವ, ಸ್ವಭಾವ ಮತ್ತು ಚಾರಿತ್ರ್ಯದ” ಒಳಗೇ ಅಡಕವಾಗಿರುವ ಆಯಾಮಗಳನ್ನು ಬದಲಿಸಲು ಸಂಸತ್ತಿಗೆ ಅಧಿಕಾರ ಇಲ್ಲವೆಂದು ಹೇಳುತ್ತದೆ.

ಇದನ್ನೂ ಓದಿ: EWS: ಆರ್ಥಿಕ ದುರ್ಬಲ ವರ್ಗದ ಹೆಸರಿನಲ್ಲಿ ಮೀಸಲಾತಿಯನ್ನೇ ದುರ್ಬಲಗೊಳಿಸುವ ಹುನ್ನಾರ

ಅಲ್ಪಸಂಖ್ಯಾತ ತೀರ್ಮಾನದ ಪ್ರಕಾರ ಈ ತಿದ್ದುಪಡಿಯು ಭಾರತೀಯ ಸಂವಿಧಾನದ ಮೂಲ ಸಂರಚನೆಯ ಉಲ್ಲಂಘನೆ ಆಗಿದೆ. ಅದು ಹೇಳುವಂತೆ, ಹೊರತುಪಡಿಸುವಿಕೆಯು ಅದರ ಎಲ್ಲಾ ಋಣಾತ್ಮಕ ಅರ್ಥಗಳ ಹೊರತಾಗಿಯೂ ಸಂವಿಧಾನದ ತತ್ವಗಳಲ್ಲಿ ಇಲ್ಲ. “ಮತ್ತದಕ್ಕೆ ನಮ್ಮ ಸಂವಿಧಾನದ ತತ್ವಗಳ ನಡುವೆ ಜಾಗವಿಲ್ಲ. ಹಿಂದುಳಿದಿರುವಿಕೆಯ ಆಧಾರದಲ್ಲಿ ಜನರನ್ನು ಹೊರತುಪಡಿಸುವುದು ಎಂದರೆ, ’ಸಂವಿಧಾನದ ಮೌಲ್ಯಗಳಾದ ಭ್ರಾತೃತ್ವ, ತಾರತಮ್ಯವೆಸಗದಿರುವ, ಹೊರತುಪಡಿಸುವಿಕೆಯನ್ನು ಇಲ್ಲವಾಗಿಸುವ” ಇತ್ಯಾದಿ ಸಾಂವಿಧಾನಿಕ ತತ್ವಗಳನ್ನು ನಾಶಪಡಿಸುವುದು ಎಂದರ್ಥ.

ಅಲ್ಪಸಂಖ್ಯಾತ ತೀರ್ಮಾನವು ಸಾಂವಿಧಾನಿಕ ತಿಳಿವಳಿಕೆಯ ಮೇಲೆ ಆಳವಾಗಿ ಬೇರುಬಿಟ್ಟಿದೆ. ಆದುದರಿಂದಲೇ ಸ್ವಾಗತಾರ್ಹವಾಗಿದೆ.

ಎಡಿಎಂ ಜಬ್ಬಲ್ಪುರ್ ನ್ಯಾಯಮೂರ್ತಿ ಖನ್ನಾ, ತುರ್ತುಪರಿಸ್ಥಿತಿಯ ಪ್ರಕರಣದಲ್ಲಿ ಹೇಳಿದ್ದು: “ಒಂದು ನ್ಯಾಯಾಲಯದಲ್ಲಿ ಭಿನ್ನಮತವು ಒಂದು ಕೊನೆಯ ಅವಕಾಶ.. ಅದು ಕಾನೂನಿನ ಸಹಜ ಸ್ಫೂರ್ತಿಗೆ, ಭವಿಷ್ಯದಲ್ಲಿ ಕಾಣಬಹುದಾದ ಬುದ್ಧಿವಂತಿಕೆಗೆ ಒಂದು ಮನವಿ… ಅದು ಬಹುಶಃ ನ್ಯಾಯವ್ಯವಸ್ಥೆಯೇ ದ್ರೋಹ ಬಗೆದಿರಬಹುದು ಎಂದು ತಾವು ನಂಬಿದ್ದ, ಹಿಂದಿನ ತೀರ್ಪಿನ ತಪ್ಪನ್ನು ಮುಂದಿನವರು ಸರಿಪಡಿಸಬಹುದು ಎಂಬ ವಿಶ್ವಾಸವೇ ಆ ಭಿನ್ನಮತದ ನ್ಯಾಯಾಧೀಶರದ್ದು.”

ಆ ದಿನಗಳು ಮುಂದೆ ಬೇಗನೇ ಬರಲಿ ಎಂದು ಆಶಿಸೋಣ.

ಕನ್ನಡಕ್ಕೆ: ನಿಖಿಲ್ ಕೋಲ್ಪೆ

ಅರವಿಂದ್ ನಾರಾಯಣ್

ಅರವಿಂದ್ ನಾರಾಯಣ್
ಸಂವಿಧಾನ ತಜ್ಞರು, ಪಿಯುಸಿಎಲ್-ಕೆ ರಾಜ್ಯಾಧ್ಯಕ್ಷರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....