Homeಮುಖಪುಟ’ಸಾಂವಿಧಾನಿಕ ತತ್ತ್ವಗಳ ಉಲ್ಲಂಘನೆ’: EWS ಭಿನ್ನಮತದ ತೀರ್ಪು

’ಸಾಂವಿಧಾನಿಕ ತತ್ತ್ವಗಳ ಉಲ್ಲಂಘನೆ’: EWS ಭಿನ್ನಮತದ ತೀರ್ಪು

- Advertisement -
- Advertisement -

’ಜನಹಿತ ಅಭಿಯಾನ ವರ್ಸಸ್ ಭಾರತ ಸರಕಾರ’ ಪ್ರಕರಣದಲ್ಲಿ ಆರ್ಥಿಕವಾಗಿ ಹಿಂದುಳಿದ ವಿಭಾಗಗಳಿಗೆ (ಇಡಬ್ಲ್ಯುಎಸ್) ಮೀಸಲಾತಿಯ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿಹಿಡಿಯುವ ಸುಪ್ರೀಂ ಕೋರ್ಟಿನ ನಿರ್ಧಾರವು ಸಾಮಾಜಿಕ ನ್ಯಾಯದ ಸಾಂವಿಧಾನಿಕ ಸ್ಫೂರ್ತಿಗೆ ವಿರುದ್ಧವಾಗಿದೆ. 103ನೇ ಸಾಂವಿಧಾನಿಕ ತಿದ್ದುಪಡಿಯ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿ ಹಿಡಿಯುವ ನ್ಯಾಯಮೂರ್ತಿಗಳಾದ ಮಹೇಶ್ವರಿ, ತ್ರಿವೇದಿ ಮತ್ತು ಪರ್ದಿವಾಲ ಅವರನ್ನು ಒಳಗೊಂಡಿದ್ದ ಪೀಠದ ಬಹುಮತದ ತೀರ್ಮಾನವು ಜಾತಿ ಆಧರಿತ ಮೀಸಲಾತಿಯ ಸಿಂಧುತ್ವದ ಬಗ್ಗೆಯೇ ಕಂಗೇಡಿಸುವ ಮತ್ತು ಕಳವಳಕಾರಿ ಪ್ರಶ್ನೆಗಳನ್ನು ಕೇಳಿದೆ.

ಆರ್ಥಿಕವಾಗಿ ಹಿಂದುಳಿದ ವಿಭಾಗಗಳು ಎಸ್‌ಸಿ/ಎಸ್‌ಟಿ ಮತ್ತು ಒಬಿಸಿ ಜನವಿಭಾಗಗಳ ಹಾಗೆಯೇ ತಾರತಮ್ಯ ಅನುಭವಿಸುತ್ತಿರುವ ಗುಂಪುಗಳು ಎಂದು ಈ ಬಹುಮತದ ನಿರ್ಧಾರವು ಹೇಳುತ್ತದೆ. ಇಡಬ್ಲ್ಯುಎಸ್ ಗುಂಪುಗಳು ಬಡತನದ ಕಾರಣದಿಂದ ತಾರತಮ್ಯ ಎದುರಿಸುವುದರಿಂದಾಗಿ ಸರಕಾರಿ ಉದ್ಯೋಗ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ 10 ಶೇಕಡಾ ಮೀಸಲಾತಿಗೆ ಅರ್ಹವಾಗಿವೆ ಎಂದು ತೀರ್ಪು ಹೇಳುತ್ತದೆ. ಸಾಂವಿಧಾನಿಕ ವಿಧಿ 15(4) ಮತ್ತು 16(4)ರ ಅನ್ವಯ ಎಸ್‌ಸಿ/ಎಸ್‌ಟಿ ಮತ್ತು ಒಬಿಸಿ ಗುಂಪುಗಳು ಈಗಾಗಲೇ ಮೀಸಲಾತಿ ಪಡೆಯುತ್ತಿರುವುದರಿಂದ ಅವುಗಳನ್ನು ಈ ಇಡಬ್ಲ್ಯುಎಸ್ ವಿಭಾಗದಿಂದ ಹೊರತುಪಡಿಸಲಾಗಿದೆ.

ಮುಂದುವರಿದ ಜಾತಿಗಳು ಮತ್ತು ಇತರ ಮೀಸಲಾತಿಯಿಲ್ಲದ ಸಮುದಾಯಗಳಲ್ಲಿ ಕೂಡಾ ಬಡವರು ಇದ್ದಾರೆ ಎಂಬುದು ನಿಜ. ಬಡತನ ನಿರ್ಮೂಲನೆಗಾಗಿ ಸಂವಿಧಾನದ ಮಾರ್ಗದರ್ಶಕ ತತ್ವಗಳ ಅನುಸಾರ ಯಾವುದಾದರೂ ಶಾಸನಾತ್ಮಕ ಕ್ರಮ ಇರಬೇಕು. ಆದರೆ, ಅವರಿಗೆ ಮೀಸಲಾತಿ ನೀಡುವುದು ಸಾಂವಿಧಾನಿಕವಾಗಿ ಸೂಕ್ತವಲ್ಲದ ಪ್ರತಿಕ್ರಿಯೆಯಾಗಿದೆ. ಬಹುಮತದ ನಿರ್ಧಾರವು ಪರಿಹಾರಾತ್ಮಕ ತಾರತಮ್ಯದ ಸಾಂವಿಧಾನಿಕ ತರ್ಕವನ್ನು ಅರ್ಥಮಾಡಿಕೊಳ್ಳಲು ವಿಫಲವಾಗಿದೆ. ಎಸ್‌ಸಿ/ಎಸ್‌ಟಿ ಮತ್ತು ಒಬಿಸಿ ವರ್ಗಗಳು ಐತಿಹಾಸಿಕವಾಗಿ ಅನುಭವಿಸಿದ ಅನ್ಯಾಯಕ್ಕೆ ಪರಿಹಾರವೆಂದು ಸಾಂವಿಧಾನಿಕವಾಗಿ ನೀಡಲಾಗಿರುವ ಮೀಸಲಾತಿಯನ್ನು, ಅದು ಯಾವುದೋ ಬಡತನ ನಿರ್ಮೂಲನಾ ಕ್ರಮ ಎಂಬಂತೆ ಪರಿಗಣಿಸಿದೆ.

ಭಾರತದ ಸಂವಿಧಾನವು ಸ್ಪಷ್ಟಪಡಿಸುವ ಬಹುಮುಖ್ಯ ತತ್ವ ಎಂದರೆ, ಭಾರತೀಯ ಸಮಾಜದಲ್ಲೇ ಆಳವಾಗಿ ಬೇರೂರಿರುವ ಹಿಂದಿನ ಜಾತಿ ಆಧರಿತ ದಮನ ಮತ್ತು ಶೋಷಣೆಗೆ ಮೀಸಲಾತಿಯು ಪರಿಹಾರ ಒದಗಿಸಲು ಬಯಸುತ್ತದೆ ಎಂಬುದು.

ಐತಿಹಾಸಿಕವಾಗಿ ಬೇರೂರಿರುವ ತಾರತಮ್ಯದ ರೂಪಗಳಿಗೆ ಪರಿಹಾರವಾಗಿ ನೀಡಲಾಗಿರುವ ಮೀಸಲಾತಿಯನ್ನು, ಬಡತನದ ಕುರಿತ ನಿಜ ಆತಂಕಗಳ ನಿವಾರಣೆಗೆ ಬಳಸಿಕೊಳ್ಳಲು ಸಾಧ್ಯವಿಲ್ಲ. ಅಲ್ಪಸಂಖ್ಯಾತ ತೀರ್ಮಾನ ನೀಡಿದ ನ್ಯಾಯಮೂರ್ತಿಗಳಾದ ಭಟ್ ಮತ್ತು ಲಲಿತ್ ಸೇರಿದಂತೆ ಐವರು ನ್ಯಾಯಾಧೀಶರೂ ಆರ್ಥಿಕ ಆಧಾರದ ಮೀಸಲಾತಿಯು ಸಾಂವಿಧಾನಿಕ ಎಂದು ಹೇಳಿರುವುದು ನಿರಾಶಾಜನಕವಾಗಿದೆ. ಹಿಂದುಳಿದಿರುವಿಕೆಯನ್ನು ನಿರ್ಧರಿಸಲು ಆರ್ಥಿಕ ಪರಿಸ್ಥಿತಿಯೇ ಏಕೈಕ ಮಾನದಂಡವಲ್ಲ ಎಂಬ ’ಇಂದಿರಾ ಸಾಹ್ನಿ ವರ್ಸಸ್ ಭಾರತ ಸರಕಾರ’ ಪ್ರಕರಣದ ಪೂರ್ವ ನಿದರ್ಶನವನ್ನು ಸದರಿ ನ್ಯಾಯಪೀಠ ಈ ತೀರ್ಪಿನಲ್ಲಿ ಬದಿಗೆ ಸರಿಸಿದೆ.

ಇದನ್ನೂ ಓದಿ: EWS: ದಲಿತ-ಶೂದ್ರರ ಮೀಸಲಾತಿಯ ಕ್ರಾಂತಿಗೆ ಬ್ರಾಹ್ಮಣ್ಯದ ಪ್ರತಿಕ್ರಾಂತಿ

ಬಹುಮತದ ತೀರ್ಮಾನವು ಆರ್ಥಿಕವಾಗಿ ಹಿಂದುಳಿದಿರುವವರ ಕೋಟಾದಲ್ಲಿ ಎಸ್‌ಸಿ/ಎಸ್‌ಟಿ ಮತ್ತು ಒಬಿಸಿ ಜಾತಿಗಳನ್ನು ಹೊರತುಪಡಿಸಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಎಸ್‌ಸಿ/ಎಸ್‌ಟಿ ಮತ್ತು ಒಬಿಸಿ ಜನವಿಭಾಗಗಳು ತಾಳಮೇಳವಿಲ್ಲದಷ್ಟು ಅತಿ ಹೆಚ್ಚು ಆರ್ಥಿಕವಾಗಿ ಹಿಂದುಳಿದ ಜನರ ಪ್ರಮಾಣವನ್ನು ಹೊಂದಿರುವುದರಿಂದ, ಈ ತಿದ್ದುಪಡಿಯು ಅವರನ್ನು ಮೀಸಲಾತಿಯಿಂದ ಹೊರತುಪಡಿಸಿರುವುದು ಅತಾರ್ಕಿಕವಾಗಿದೆ.

ವಾಸ್ತವದಲ್ಲಿ ನ್ಯಾಯಮೂರ್ತಿಗಳಾದ ಭಟ್ ಮತ್ತು ಲಲಿತ್ ಅವರ ಅಲ್ಪಸಂಖ್ಯಾತ ಅಭಿಪ್ರಾಯವು ಪರಿಶಿಷ್ಟ ಬುಡಕಟ್ಟುಗಳ ಒಟ್ಟು ಜನಸಂಖ್ಯೆಯಲ್ಲಿ 48 ಶೇಕಡಾ ಮಂದಿ, ಪರಿಶಿಷ್ಟ ಜಾತಿಗಳ 38 ಶೇಕಡಾ ಮಂದಿ ಹಾಗೂ ಒಬಿಸಿ ಜನಸಂಖ್ಯೆಯ 33 ಶೇಕಡಾ ಜನಕ್ಕೆ ಕಡಿಮೆ ಇಲ್ಲದಷ್ಟು ಮಂದಿ ಕಡುಬಡವರು ಎಂಬ ಸತ್ಯವನ್ನು ಗಮನಿಸಿದೆ. ಬಡ ಎಸ್‌ಸಿ/ಎಸ್‌ಟಿ ಮತ್ತು ಒಬಿಸಿ ಗುಂಪುಗಳನ್ನು ಇಡಬ್ಲ್ಯುಎಸ್ ಕೋಟದಿಂದ ಹೊರಗಿಡುವ ಕ್ರಮದ ಉದ್ದೇಶವೆಂದರೆ, ಅದನ್ನು ಕೇವಲ ಮೇಲ್ಜಾತಿಯವರಿಗೆ ನೀಡುವುದು. ’ಆರ್ಥಿಕ ಮಾನದಂಡದ ಮೀಸಲಾತಿಗೆ ಅರ್ಹರಾಗಿರುವ ಮತ್ತು ಒಟ್ಟಾಗಿ ದೇಶದ ಜನಸಂಖ್ಯೆಯಲ್ಲಿ 82 ಶೇಕಡಾ ಎಸ್‌ಸಿ/ಎಸ್‌ಟಿ ಮತ್ತು ಒಬಿಸಿ ಗುಂಪುಗಳನ್ನು ಅದರಿಂದ ಹೊರತುಪಡಿಸುವ ಕ್ರಮ’ವನ್ನು ತೀರ್ಪಿನ ಅಲ್ಪಸಂಖ್ಯಾತ ಅಭಿಪ್ರಾಯವು ಕಟುವಾಗಿ ಟೀಕಿಸಿದ್ದು, ’ಈ ಕ್ರಮವು ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಹಿತಾಸಕ್ತಿಯನ್ನು ಕಾಪಾಡುವುದೆಂದು ಸೂಚಿಸುವಂತದ್ದು ಏನೂ ಇಲ್ಲ ಎಂದು ಹೇಳಿದೆ.

ಬಹುಸಂಖ್ಯಾತ ಅಭಿಪ್ರಾಯವು ಇದನ್ನು ನಿರಾಕರಿಸಿದರೂ, 103ನೇ ಸಾಂವಿಧಾನಿಕ ತಿದ್ದುಪಡಿಯು ಎಂಟು ಲಕ್ಷಕ್ಕಿಂತ ಕಡಿಮೆ ಆದಾಯ ಇರುವ ಮುಂದುವರಿದ ವರ್ಗಗಳಿಗೆ ನೀಡಿದ ಮೀಸಲಾತಿ ಎಂದು ಸೂಕ್ತವಾಗಿಯೇ ಕರೆಯಬಹುದು. (ಈ ಆದಾಯ ಮಿತಿಯನ್ನು ಸರಕಾರಿ ಅಧಿಸೂಚನೆಯಲ್ಲಿ ನೀಡಲಾಗಿದೆ.) ಹಿಂದೆ 50 ಶೇಕಡಾದಷ್ಟಿದ್ದ ಮುಕ್ತ ಸ್ಥಾನಗಳು ಎಲ್ಲರಿಗೂ ಮುಕ್ತವಾಗಿದ್ದವು. ಅಂದರೆ, ಮೀಸಲಾತಿ ಇರುವ ಅಭ್ಯರ್ಥಿಗಳಿಗೂ ಅನ್ವಯವಾಗುತ್ತಿದ್ದವು. ಪ್ರಸ್ತುತ ವ್ಯವಸ್ಥೆಯಲ್ಲಿ ಈ 10 ಶೇಕಡಾ ಮೀಸಲಾತಿಯನ್ನು ಎಸ್‌ಸಿ/ಎಸ್‌ಟಿ ಮತ್ತು ಒಬಿಸಿ ಜನವಿಭಾಗಗಳಿಗೆ ಸಿಗದಂತೆ ಮಾಡಲಾಗಿದೆ.

ಹೀಗಿದ್ದರೂ, ಅಲ್ಪಸಂಖ್ಯಾತ ತೀರ್ಮಾನವು ತಾರತಮ್ಯ ರಹಿತತೆ ಕುರಿತ ವಿಶ್ಲೇಷಣೆಯಲ್ಲಿ ಬಹುಸಂಖ್ಯಾತ ತರ್ಕವನ್ನು ಗೌರವಿಸುತ್ತಲೇ ಹಲವಾರು ದಲಿತರು, ಆದಿವಾಸಿಗಳು ಮತ್ತು ಮಾನವಹಕ್ಕು ಗುಂಪುಗಳು ಬಹುಸಂಖ್ಯಾತ ತೀರ್ಮಾನದ ಬಗ್ಗೆ ವ್ಯಕ್ತಪಡಿಸುತ್ತಿರುವ ಆತಂಕಗಳಿಗೆ ಧ್ವನಿ ನೀಡಿದೆ.

ಅಲ್ಪಸಂಖ್ಯಾತ ತೀರ್ಮಾನವು ಈ ತಿದ್ದುಪಡಿಯನ್ನು ಸಂಪೂರ್ಣವಾಗಿ ತಳ್ಳಿಹಾಕಿದೆ: “ನಮ್ಮ ಸಂವಿಧಾನವು ’ಹೊರತುಪಡಿಸುವ’ ಭಾಷೆಯಲ್ಲಿ ಮಾತನಾಡುವುದಿಲ್ಲ ಮತ್ತು ಈ ತಿದ್ದುಪಡಿಯು ’ಹೊರತುಪಡಿಸುವ’ ಭಾಷೆಯ ಮೂಲಕ ಸಾಮಾಜಿಕ ನ್ಯಾಯದ ಮೂಲಕಲ್ಪನೆಯನ್ನೇ ಮಾತ್ರವಲ್ಲ; ಆ ಮೂಲಕ- ಸಂವಿಧಾನದ ಮೂಲ ಸಂರಚನೆಯನ್ನೇ ಅವಗಣಿಸಿದೆ” ಎಂದಿದೆ. “ಮೊದಲ ಬಾರಿಗೆ ಸಾಮಾಜಿಕ ಅನ್ಯಾಯದ ಬಲಿಪಶುಗಳೂ, ಈ ದೇಶದಲ್ಲಿ ಅತ್ಯಂತ ಬಡವರೂ ಆಗಿರುವವರ ಹೊರತುಪಡಿಸುವಿಕೆಯನ್ನು ಕಾರ್ಯರೂಪಕ್ಕೆ ತರಲು ಸಾಂವಿಧಾನಿಕ ಅಧಿಕಾರವನ್ನು ಬಳಸಲಾಗಿದೆ” ಎಂದು ಅಲ್ಪಸಂಖ್ಯಾತ ತೀರ್ಮಾನವು ಕಟುವಾಗಿ ಹೇಳಿದೆ.

ಅಲ್ಪಸಂಖ್ಯಾತ ತೀರ್ಮಾನದ ಪ್ರಕಾರ, ಎಸ್‌ಸಿ/ಎಸ್‌ಟಿ ಮತ್ತು ಒಬಿಸಿ ಜನವರ್ಗಗಳನ್ನು ಇಡಬ್ಲ್ಯುಎಸ್ ಮೀಸಲಾತಿಯಿಂದ ಹೊರತುಪಡಿಸಿರುವುದು ಸಂವಿಧಾನದ ಸಮಾನತೆಯ ತತ್ವಕ್ಕೆ ವಿರುದ್ಧವಾದುದು ಎಂದು ಅಲ್ಪಸಂಖ್ಯಾತ ಅಭಿಪ್ರಾಯವು ಹೇಳುತ್ತದೆ. ಈ ಸಮಾನತೆಯ ತತ್ವವು, ಅಂದರೆ ವಿಧಿ 14, 15, 16 ಮತ್ತು 17 ಎಂಬುದು “ಕಾನೂನಿನ ಮುಂದೆ ಸಮಾನತೆ ಮತ್ತು ಕಾನೂನಿನ ಪ್ರಕಾರ ಸಮಾನ ರಕ್ಷಣೆ” ಕುರಿತ ತೆಳುವಾದ ಹೇಳಿಕೆಯಲ್ಲ; “ಜಾತಿಯಂತಹ ಸೂಚಿತ ವಿಷಯಗಳ ಆಧಾರದಲ್ಲಿ ತಾರತಮ್ಯ ಮಾಡದಂತೆ ಸರಕಾರವನ್ನು ಪ್ರತಿಬಂಧಿಸುತ್ತದೆ” ಎಂದು ಈ ತೀರ್ಮಾನ ಹೇಳುತ್ತದೆ. ಅದು ವಿಧಿ 17ನ್ನು ಅಸ್ಪೃಶ್ಯತೆಯ ವಿರುದ್ಧ ಒಂದು ಅತ್ಯಂತ ಸ್ಪಷ್ಟವಾದ ಪ್ರತಿಬಂಧಕಾಜ್ಞೆ ಎಂದು ಹೇಳಿದ್ದು, “ಪ್ರತ್ಯಕ್ಷವಾಗಿ ಅಥವಾ ವರ್ಗೀಕರಣದ ಮೂಲಕ ಜಾತಿ ತಾರತಮ್ಯವನ್ನು ತಡೆಯುವ ಹೊಣೆಗಾರಿಕೆಯನ್ನು ಸರಕಾರದ ಮೇಲೆ ಹೊರಿಸಿರುವುದು ಮಾತ್ರವಲ್ಲ; ಅದು ಸಮಾನತೆಯ ತತ್ವದ ಮತ್ತು ಖಂಡಿತವಾಗಿಯೂ ಇಡೀ ಸಂವಿಧಾನದ ಚೌಕಟ್ಟಿನ ಬಹುದೊಡ್ಡ ಭಾಗವಾಗಿದೆ.”

ಸರಕಾರವು 103ನೇ ತಿದ್ದುಪಡಿಯ ಮೂಲಕ ಎಸ್‌ಸಿ/ಎಸ್‌ಟಿ ಮತ್ತು ಒಬಿಸಿ ಗುಂಪುಗಳನ್ನು ಆರ್ಥಿಕವಾಗಿ ಹಿಂದುಳಿದ ವರ್ಗಗಳ ಮೀಸಲಾತಿಯಿಂದ ಹೊರತುಪಡಿಸಿರುವ ಕ್ರಮದಿಂದ ಸರಕಾರವು ಸಂವಿಧಾನದ ಈ ಪ್ರತಿಬಂಧಕಾಜ್ಞೆಯನ್ನು ಉಲ್ಲಂಘಿಸಿದೆ ಎಂದು ಅಲ್ಪಸಂಖ್ಯಾತ ತೀರ್ಮಾನವು ಹೇಳುತ್ತದೆ.

ಹಾಗೆ ನೋಡಿದರೆ, ಈ ಹೊರತುಪಡಿಸುವಿಕೆಯು ಭಾರತೀಯ ಸಂವಿಧಾನದ ಮೂಲ ಸಂರಚನೆಯನ್ನೇ ಉಲ್ಲಂಘಿಸಿದೆ. ಭಾರತೀಯ ಸಾಂವಿಧಾನಿಕ ಕಾನೂನಿನ ಮೂಲ ಅಡಿಪಾಯವೇ “ಭಾರತೀಯ ಸಂವಿಧಾನದ ಅಸ್ಮಿತೆ, ವ್ಯಕ್ತಿತ್ವ, ಸ್ವಭಾವ ಮತ್ತು ಚಾರಿತ್ರ್ಯದ” ಒಳಗೇ ಅಡಕವಾಗಿರುವ ಆಯಾಮಗಳನ್ನು ಬದಲಿಸಲು ಸಂಸತ್ತಿಗೆ ಅಧಿಕಾರ ಇಲ್ಲವೆಂದು ಹೇಳುತ್ತದೆ.

ಇದನ್ನೂ ಓದಿ: EWS: ಆರ್ಥಿಕ ದುರ್ಬಲ ವರ್ಗದ ಹೆಸರಿನಲ್ಲಿ ಮೀಸಲಾತಿಯನ್ನೇ ದುರ್ಬಲಗೊಳಿಸುವ ಹುನ್ನಾರ

ಅಲ್ಪಸಂಖ್ಯಾತ ತೀರ್ಮಾನದ ಪ್ರಕಾರ ಈ ತಿದ್ದುಪಡಿಯು ಭಾರತೀಯ ಸಂವಿಧಾನದ ಮೂಲ ಸಂರಚನೆಯ ಉಲ್ಲಂಘನೆ ಆಗಿದೆ. ಅದು ಹೇಳುವಂತೆ, ಹೊರತುಪಡಿಸುವಿಕೆಯು ಅದರ ಎಲ್ಲಾ ಋಣಾತ್ಮಕ ಅರ್ಥಗಳ ಹೊರತಾಗಿಯೂ ಸಂವಿಧಾನದ ತತ್ವಗಳಲ್ಲಿ ಇಲ್ಲ. “ಮತ್ತದಕ್ಕೆ ನಮ್ಮ ಸಂವಿಧಾನದ ತತ್ವಗಳ ನಡುವೆ ಜಾಗವಿಲ್ಲ. ಹಿಂದುಳಿದಿರುವಿಕೆಯ ಆಧಾರದಲ್ಲಿ ಜನರನ್ನು ಹೊರತುಪಡಿಸುವುದು ಎಂದರೆ, ’ಸಂವಿಧಾನದ ಮೌಲ್ಯಗಳಾದ ಭ್ರಾತೃತ್ವ, ತಾರತಮ್ಯವೆಸಗದಿರುವ, ಹೊರತುಪಡಿಸುವಿಕೆಯನ್ನು ಇಲ್ಲವಾಗಿಸುವ” ಇತ್ಯಾದಿ ಸಾಂವಿಧಾನಿಕ ತತ್ವಗಳನ್ನು ನಾಶಪಡಿಸುವುದು ಎಂದರ್ಥ.

ಅಲ್ಪಸಂಖ್ಯಾತ ತೀರ್ಮಾನವು ಸಾಂವಿಧಾನಿಕ ತಿಳಿವಳಿಕೆಯ ಮೇಲೆ ಆಳವಾಗಿ ಬೇರುಬಿಟ್ಟಿದೆ. ಆದುದರಿಂದಲೇ ಸ್ವಾಗತಾರ್ಹವಾಗಿದೆ.

ಎಡಿಎಂ ಜಬ್ಬಲ್ಪುರ್ ನ್ಯಾಯಮೂರ್ತಿ ಖನ್ನಾ, ತುರ್ತುಪರಿಸ್ಥಿತಿಯ ಪ್ರಕರಣದಲ್ಲಿ ಹೇಳಿದ್ದು: “ಒಂದು ನ್ಯಾಯಾಲಯದಲ್ಲಿ ಭಿನ್ನಮತವು ಒಂದು ಕೊನೆಯ ಅವಕಾಶ.. ಅದು ಕಾನೂನಿನ ಸಹಜ ಸ್ಫೂರ್ತಿಗೆ, ಭವಿಷ್ಯದಲ್ಲಿ ಕಾಣಬಹುದಾದ ಬುದ್ಧಿವಂತಿಕೆಗೆ ಒಂದು ಮನವಿ… ಅದು ಬಹುಶಃ ನ್ಯಾಯವ್ಯವಸ್ಥೆಯೇ ದ್ರೋಹ ಬಗೆದಿರಬಹುದು ಎಂದು ತಾವು ನಂಬಿದ್ದ, ಹಿಂದಿನ ತೀರ್ಪಿನ ತಪ್ಪನ್ನು ಮುಂದಿನವರು ಸರಿಪಡಿಸಬಹುದು ಎಂಬ ವಿಶ್ವಾಸವೇ ಆ ಭಿನ್ನಮತದ ನ್ಯಾಯಾಧೀಶರದ್ದು.”

ಆ ದಿನಗಳು ಮುಂದೆ ಬೇಗನೇ ಬರಲಿ ಎಂದು ಆಶಿಸೋಣ.

ಕನ್ನಡಕ್ಕೆ: ನಿಖಿಲ್ ಕೋಲ್ಪೆ

ಅರವಿಂದ್ ನಾರಾಯಣ್

ಅರವಿಂದ್ ನಾರಾಯಣ್
ಸಂವಿಧಾನ ತಜ್ಞರು, ಪಿಯುಸಿಎಲ್-ಕೆ ರಾಜ್ಯಾಧ್ಯಕ್ಷರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...