Homeಮುಖಪುಟಪರಸ್ಪರ ಸಂಧಿಸದ ಮಾನವೀಯ ಸಂಬಂಧಗಳ ಕಥನ ’ದ ಎಡ್ಜ್ ಆಫ್ ಹೆವೆನ್'

ಪರಸ್ಪರ ಸಂಧಿಸದ ಮಾನವೀಯ ಸಂಬಂಧಗಳ ಕಥನ ’ದ ಎಡ್ಜ್ ಆಫ್ ಹೆವೆನ್’

- Advertisement -
- Advertisement -

ಜರ್ಮನ್ ಮತ್ತು ಟರ್ಕಿ ದೇಶಗಳ ಸಂಬಂಧ ಶತಮಾನಗಳ ಹಿಂದಿನದು (ಅಟೊಮನ್ ಎಂಪೈರ್ ಕಾಲದಿಂದಲೂ). ಈ ರೀತಿಯ ಸಂಬಂಧದಿಂದ ಎರಡೂ ದೇಶಗಳು ಆರ್ಥಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ಸಾಮಾಜಿಕವಾಗಿ ಪರಸ್ಪರ ಶ್ರೀಮಂತವಾಗಿವೆ. ಮೊದಲ ಮಹಾಯುದ್ಧದ ಹೊತ್ತಿಗೆ ಈ ಎರಡೂ ದೇಶಗಳ ನಡುವಿನ ಸಂಬಂಧದಲ್ಲಿ ಸ್ವಲ್ಪ ಬದಲಾವಣೆ ಕಂಡುಬಂತು. ಎರಡನೇ ಮಹಾಯುದ್ಧದ ಪ್ರಾರಂಭದಲ್ಲಿ ಕೇವಲ ರಾಜತಾಂತ್ರಿಕವಾದ ಸಂಬಂಧವನ್ನ ಮಾತ್ರ ಉಳಿಸಿಕೊಂಡಿದ್ದ ಇವು, ಯುದ್ಧ ಕೊನೆಯಾಗುವಷ್ಟರಲ್ಲಿ ಆ ಸಂಬಂಧವೂ ಕಡಿತಗೊಂಡಿತ್ತು. 1961ರಲ್ಲಿ ಜರ್ಮನಿ, ಪೂರ್ವ ಮತ್ತು ಪಶ್ಚಿಮ ಎಂದು ಇಬ್ಭಾಗವಾದಾಗ, ಜರ್ಮನ್ ರಾಜಧಾನಿ ಬರ್ಲಿನ್‌ನಲ್ಲಿ ಈ ಎರಡು ಭಾಗಗಳ ನಡುವೆ ಗೋಡೆಯನ್ನು ನಿರ್ಮಿಸಲಾಯಿತು. ಗೋಡೆ ನಿರ್ಮಾಣ ಹಂತದಲ್ಲಿ ಕೆಲಸಗಾರರ ಕೊರತೆ ಶುರುವಾಯಿತು. ಪಶ್ಚಿಮ ಜರ್ಮನಿ ಅತಿಥಿ ಕಾರ್ಮಿಕರಿಗಾಗಿ ತನ್ನ ಗಡಿಯನ್ನು ತೆರೆಯಿತು. ಈ ಸಂದರ್ಭದಲ್ಲಿ ಟರ್ಕಿಯಿಂದ ಅಸಂಖ್ಯಾತ ಜನ ಜರ್ಮನಿಗೆ ವಲಸೆ ಬಂದರು. ಪ.ಜರ್ಮನಿ ಟರ್ಕಿಯೊಂದಿಗೆ ಕಾರ್ಮಿಕ ನೇಮಕಾತಿ ಒಪ್ಪಂದವೊಂದನ್ನು ಕೂಡ ಮಾಡಿಕೊಂಡಿತು. 1989ರಲ್ಲಿ ಬರ್ಲಿನ್ ಗೋಡೆ ಕೆಡವಿ ಪೂರ್ವ ಮತ್ತು ಪಶ್ಚಿಮ ಜರ್ಮನಿ ಒಂದಾಗ ಪರಿಸ್ಥಿತಿ ಬದಲಾಯಿತು. ಉಗ್ರ ರಾಷ್ಟ್ರೀಯತೆ, ಪೌರತ್ವ ವಿಚಾರಗಳು ಮುನ್ನಲೆಗೆ ಬಂದು, ವಲಸೆ ವಿರುದ್ಧದ ಭಾವನೆಗಳು ಹೆಚ್ಚಾದವು. ಅಲ್ಪಸಂಖ್ಯಾತರಾದ ಟರ್ಕಿಯನ್ನರ ಮೇಲೆ ಅಸಮಾಧಾನ ಉಲ್ಬಣಗೊಂಡಿತು. ಸಾಂಸ್ಕೃತಿಕ ಸಂಘರ್ಷಗಳು ಪ್ರಾರಂಭವಾದವು. ನಿಯೊ ನಾಝಿ ಎಂಬ ರಾಜಕೀಯ ಸಂಘಟನೆ ಹುಟ್ಟಿಕೊಂಡು ಅದು ಟರ್ಕಿಯನ್ನರ ವಿರುದ್ಧ ದ್ವೇಷ ಬಿತ್ತುವ ಕೆಲಸ ಶುರುಮಾಡಿತು.

ಫತ್ಹಿ ಅಕಿನ್

ಫತ್ಹಿ ಅಕಿನ್ ಜರ್ಮನ್ ದೇಶದ ಖ್ಯಾತ ಸಿನಿಮಾ ನಿರ್ದೇಶಕ. 1960ರ ದಶಕದಲ್ಲಿ ಟರ್ಕಿಯಿಂದ ಜರ್ಮನಿಗೆ ಕಾರ್ಮಿಕರಾಗಿ ವಲಸೆ ಬಂದ ದಂಪತಿಗಳಿಗೆ ಜನಿಸಿದವರು. ಅಕಿನ್ ತನ್ನನ್ನು ಯಾವಕಾಲಕ್ಕೂ ಜರ್ಮನಿಗನೆಂದೆ ಗುರುತಿಸಿಕೊಳ್ಳಲು ಇಚ್ಛಿಸುತ್ತಾರೆ. ತನ್ನ ದೇಶ, ಭಾಷೆ ಎಲ್ಲವೂ ಜರ್ಮನ್ ಎಂದೇ ಅವರು ಹೇಳಿಕೊಳ್ಳುವುದು. ಇಷ್ಟಾದರೂ ಅವರಿಗೆ ಜರ್ಮನಿಯಲ್ಲಿ ತಾನು ಹೊರಗಿನವನು ಎಂಬ ಭಾವನೆ ಇದ್ದೆ ಇದೆ. ’ನೀವು ಟರ್ಕಿ ಮಗುವಾಗಿ ಜರ್ಮನಿಯಲ್ಲಿ ಜನಿಸಿದಾಗ ನೀವು ಹೊರಗಿನವರಾಗಿ ಮತ್ತು ಅಲ್ಪಸಂಖ್ಯಾತರಾಗಿಯೇ ಹುಟ್ಟುತ್ತೀರಿ. ಜಗತ್ತಿನ ಯಾವ ಮೂಲೆಯಲ್ಲಾದರೂ ಅಲ್ಪಸಂಖ್ಯಾತರಾಗಿ ಜನಿಸಿದ ಪ್ರತಿಯೊಬ್ಬರೂ ಒಂದು ಭಿನ್ನವಾದ ಅನುಭವವನ್ನ ಜೀವಿಸುತ್ತಿರುತ್ತಾರೆ. ಜಗತ್ತಿನ ಎಲ್ಲಾ ಬಗೆಯ ಅಲ್ಪಸಂಖ್ಯಾತರು ಮತ್ತು ಅವರ ಮೇಲಿನ ಶೋಷಣೆ ಬಗ್ಗೆ ನನಗೆ ಮರುಕ ಇದೆ’ ಎಂಬುದು ಅಕಿನ್‌ರ ಮನದಾಳದ ಮಾತು.

ಫತ್ಹಿ ಅಕಿನ್

ಫತ್ಹಿ ಅಕಿನ್ ಜಾಗತಿಕವಾಗಿ ಗುರುತಿಸಿಕೊಂಡಿದ್ದು ಅವನ ನಾಲ್ಕನೇ ಸಿನಿಮಾ Head-On (2004) ಮುಖಾಂತರ. ಇದು ಅವರ ’ಪ್ರೀತಿ-ಸಾವು-ಕೇಡು’ ತ್ರಿವಳಿಯಲ್ಲಿ ಮೊದಲನೆಯದು. ಈ ಸಿನಿಮಾ ಬರ್ಲಿನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಅತ್ಯುನ್ನತ ಪ್ರಶಸ್ತಿ Golden Bear ಪಡೆದುಕೊಂಡಿತು. ಜರ್ಮನ್‌ಯಲ್ಲಿ ಜನಿಸಿದ ಟರ್ಕಿ ಮೂಲದ ಎರಡನೇ ತಲೆಮಾರಿನ ಜನರ ಮನೋ ತುಮುಲಗಳನ್ನು ಪ್ರತಿನಿಧಿಸುವ ಇದು ವಿಮರ್ಶಕರಿಂದ ಬಹಳ ಮೆಚ್ಚುಗೆಯನ್ನು ಪಡೆಯಿತು. ಆ ನಂತರದ The edge of Heaven (2007), The Cut (2014), Good By Berlin (2016), In The Fade (2017) ಸಿನಿಮಾಗಳು ಅಕಿನ್‌ಗೆ ಜಾಗತಿಕ ಸಿನಿಮಾ ಕ್ಷೇತ್ರದಲ್ಲಿ ಖ್ಯಾತಿಯನ್ನು ತಂದುಕೊಟ್ಟವು.

ದ ಎಡ್ಜ್ ಆಫ್ ಹೆವೆನ್

ದ ಎಡ್ಜ್ ಆಫ್ ಹೆವೆನ್, ಅಕಿನ್‌ರ ’ಪ್ರೀತಿ-ಸಾವು-ಕೇಡು’ ತ್ರಿವಳಿಯ ಎರಡನೇ ಸಿನಿಮಾ. ಮೂರು ಭಾಗಗಳಲ್ಲಿರುವ ಇದು, ಫಾರ್ಮ್‌ನಲ್ಲಿ ನೋಡುವುದಾದರೆ ಒಂದು ರೀತಿ ಅಂತರ್ ಹೆಣಿಗೆ ಇರುವಂತದ್ದು; ಕಥೆಯಲ್ಲಿ ನೋಡುವುದಾದರೆ ಆಕಸ್ಮಿಕಗಳ ಸರಣಿ. ಇಲ್ಲಿನ ಪಾತ್ರಗಳು ಯಾರನ್ನೋ ಹುಡುಕಲು ಹೊರಡುತ್ತವೆ, ಆದರೆ ಅವರನ್ನು ಸಂಧಿಸುವುದೇ ಇಲ್ಲ. ಕಥೆ ಹಿಂದೆ ಮುಂದೆ ಚಲಿಸುವ ರೀತಿಯ ದೃಶ್ಯ ಕಟ್ಟುವಿಕೆ ಮೆಕ್ಸಿಕನ್ ಖ್ಯಾತ ನಿರ್ದೇಶಕ ಅಲೆಝಾಂಡ್ರೊ ಇನರ್ರಿಟುವಿನ 21 Grams ಸಿನಿಮಾವನ್ನು ನೆನಪಿಸಿದರೆ, ಕಥನದ ಕೆಲವು ಘಟನೆಗಳು ಅವನದೇ ಮತ್ತೊಂದು ಸಿನಿಮಾ Babelಅನ್ನು ನೆನಪಿಸುತ್ತದೆ. ಈ ಎರಡು ಇನರ್ರಿಟುವಿನ ಡೆತ್ ಟ್ರಯಾಲಜಿಯ ಸರಣಿ ಸಿನಿಮಾಗಳು. ಕಥೆಯ ಪಾತ್ರಗಳು ಇದೇ ಜರ್ಮನಿಯ ಪ್ರಸಿದ್ಧ ಸಿನಿಮಾ ನಿರ್ಮಾತೃ ರೈನರ್ ಫಾಸಬೈಂಡರ್‌ನ Ali: Fear Eats The Soul ಸಿನಿಮಾವನ್ನು ನೆನಪಿಸುತ್ತವೆ.

ಭಾಗ-1: ಯೆಟರ್‌ಳ ಸಾವು

ಮೊದಲ ತಲೆಮಾರಿನ ಟರ್ಕಿ ವಲಸಿಗ ಮತ್ತು ಜರ್ಮನ್ ನಿವಾಸಿ ಆಲಿ ಒಬ್ಬ ನಿವೃತ್ತ ಕಾರ್ಮಿಕ ಮತ್ತು ವಿಧುರ. ಒಮ್ಮೆ ವೇಶ್ಯೆವಾಟಿಕೆ ಸ್ಥಳದಲ್ಲಿ ಟರ್ಕಿ ಮೂಲದ ಯೆಟೆರ್‌ಳನ್ನು ಸಂಧಿಸುತ್ತಾನೆ. ಹಲವು ಭೇಟಿಗಳ ನಂತರ ಯೆಟೆರ್‌ಗೆ ತನ್ನ ಜೊತೆ ಬಂದು ಇರುವುದಾದರೆ ಸಂಬಳ ನೀಡುವುದಾಗಿ ಆಫರ್ ಮಾಡುತ್ತಾನೆ. ಇದೇ ವೇಳೆಗೆ ಯೆಟೆರ್‌ಗೆ ಜರ್ಮನಿಯಲ್ಲಿರುವ ಟರ್ಕಿ ಧಾರ್ಮಿಕ ಮೂಲಭೂತವಾದಿಗಳಿಂದ ತನ್ನ ವೃತ್ತಿ ಬಗ್ಗೆ ಬೆದರಿಕೆ ಇರುತ್ತದೆ. ಆ ಕಾರಣಕ್ಕೆ, ಆಲಿಯ ಈ ಪ್ರಸ್ತಾವನೆಯನ್ನ ಒಪ್ಪುತ್ತಾಳೆ. ಆಲಿಯ ಮಗ ನೆಜತ್ ಜರ್ಮನಿಯ ವಿಶ್ವವಿದ್ಯಾನಿಲಯವೊಂದರಲ್ಲಿ ಜರ್ಮನ್ ಭಾಷೆಯ ಪ್ರಾಧ್ಯಾಪಕ. ಅವನಿಗೆ ಅಪ್ಪನ ಈ ನಡೆ ಕಸಿವಿಸಿ ಉಂಟುಮಾಡುತ್ತದೆ. ಆದರೆ, ಯೆಟರ್ ಟರ್ಕಿಯಲ್ಲಿರುವ ತನ್ನ ಮಗಳ ವಿದ್ಯಾಭ್ಯಾಸದ ಸಲುವಾಗಿ ತಾನು ಈ ವೃತ್ತಿ ಮಾಡುತ್ತಿರುವುದಾಗಿ, ಈ ವಿಷಯ ತನ್ನ ಮಗಳಿಗೆ ತಿಳಿದಿಲ್ಲ ಎಂಬುದು ಗೊತ್ತಾದಾಗ ಯೆಟೆರ್ ಬಗ್ಗೆ ಮರುಗುತ್ತಾನೆ. ಒಮ್ಮೆ ಆಲಿ ಕುಡಿದ ಮತ್ತಿನಲ್ಲಿ ಯೆಟೆರ್‌ಗೆ ಹೊಡೆದಾಗ ಆಕೆ ಸಾಯುತ್ತಾಳೆ. ನಂತರ ಆಲಿ ಜೈಲುಪಾಲಾಗುತ್ತಾನೆ. ನೆಜೆತ್‌ಗೆ ತಂದೆ ಮೇಲೆ ಜಿಗುಪ್ಸೆ ಬಂದು ಆತನನ್ನು ಮತ್ತೆಂದಿಗೂ ನೋಡದಿರಲು ನಿರ್ಧರಿಸಿ, ಯೆಟರ್ ಮಗಳಿಗೆ ಸಹಾಯ ಮಾಡುವ ಸಂಬಂಧ ಅವಳನ್ನ ಹುಡುಕಿಕೊಂಡು ಟರ್ಕಿಗೆ ಪ್ರಯಾಣಿಸುತ್ತಾನೆ.

ಭಾಗ-2: ಲೊಟ್ಟೆಯ ಸಾವು

ಮೇಲಿನ ಘಟನೆಗಳು ಜರುಗುತ್ತಿದ್ದ ಸಂದರ್ಭದಲ್ಲಿಯೇ, ಇಸ್ತಾಂಬುಲ್‌ನಲ್ಲಿ ಯೆಟರ್ ಮಗಳು ಆಯಟೆನ್, ಟರ್ಕಿ ಯುರೋಪಿಯನ್ ಯೂನಿಯನ್ ಜೊತೆ ಸೇರಿಕೊಳ್ಳುವುದರ ವಿರುದ್ಧ ಮತ್ತು ಸರ್ಕಾರದ ಕೆಲವು ಪಾಲಿಸಿಗಳ ವಿರುದ್ಧದ ಚಳವಳಿಗಳಲ್ಲಿ ಸಕ್ರಿಯವಾಗಿದ್ದುದರಿಂದ, ಪೊಲೀಸ್ ಪ್ರಕರಣವೊಂದರಲ್ಲಿ ತಪ್ಪಿಸಿಕೊಳ್ಳಲು ಹಾಗು ತನ್ನ ತಾಯಿ ಯೆಟರ್‌ಳನ್ನು ಹುಡುಕಿಕೊಂಡು ಜರ್ಮನಿಗೆ ಪ್ರಯಾಣಿಸುತ್ತಾಳೆ. ಯೆಟೆರ್ ತನ್ನ ಮಗಳಿಗೆ ತಾನು ಷೂ ಮಾರಾಟದ ಮಳಿಗೆಯೊಂದರಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿರುತ್ತಾಳೆ. ಎಷ್ಟು ಹುಡುಕಿದರು ಆಯಟೆನ್‌ಗೆ ತನ್ನ ತಾಯಿ ಸಿಗುವುದಿಲ್ಲ. ಕೈಯಲ್ಲಿ ಕಾಸಿಲ್ಲ. ಈ ಸಂದರ್ಭದಲ್ಲಿ ಆಯಟೆನ್‌ಗೆ ಪರಿಚಿತವಾಗಿ ಸಹಾಯ ಮಾಡುವುದು ಜರ್ಮನಿಯವಳಾದ ಲೊಟ್ಟೆ. ಆಯಟಿನ್‌ಗೆ ಲೊಟ್ಟೆ ತನ್ನ ಮನೆಯಲ್ಲೇ ಆಶ್ರಯ ನೀಡುತ್ತಾಳೆ. ಇದು ಲೊಟ್ಟೆ ತಾಯಿ ಸುಸಾನೆಗೆ ಇಷ್ಟ ಇರುವುದಿಲ್ಲ. ಆಯಟಿನ್ ಮತ್ತು ಲೊಟ್ಟೆ ಇಬ್ಬರೂ ಭಾವನಾತ್ಮಕವಾಗಿ ಮತ್ತು ದೈಹಿಕವಾಗಿ ಆಕರ್ಷಿತರಾಗುತ್ತಾರೆ. ಫೇಕ್ ಪಾಸಪೋರ್ಟ್ ಮೂಲಕ ಜರ್ಮನಿಗೆ ಬಂದಿದ್ದ ಆಯಟನ್ ಒಮ್ಮೆ ಜರ್ಮನ್ ಪೊಲೀಸರಿಗೆ ಸಿಕ್ಕಿಬೀಳುತ್ತಾಳೆ. ಮತ್ತೆ ಅವಳನ್ನ ಟರ್ಕಿಗೆ ವಾಪಸ್ ಕಳುಹಿಸಲಾಗುತ್ತದೆ. ಲೊಟ್ಟೆ ಆಯಟೆನ್‌ಳನ್ನು ಜೈಲಿನಿಂದ ಬಿಡುಗಡೆಗೊಳಿಸಲು ಸಹಾಯ ಮಾಡುವ ಸಂಬಂಧ ತನ್ನ ತಾಯಿಯ ವಿರೋಧದ ನಡುವೆಯೂ ಹಾಗೂ ತನ್ನ ಶಿಕ್ಷಣವನ್ನು ಲೆಕ್ಕಿಸದೆ ಟರ್ಕಿಗೆ ಬರುತ್ತಾಳೆ. ಟರ್ಕಿ ಜೈಲಿನಲ್ಲಿ ಆಯಟೆನ್ ಭೇಟಿಯಾಗುವ ಲೊಟ್ಟೆ ನಂತರ ಜರುಗುವ ಆಕಸ್ಮಿಕ ಘಟನೆಯೊಂದರಲ್ಲಿ ಸಾವನ್ನಪ್ಪುತ್ತಾಳೆ.

ಭಾಗ-3: ದ ಎಡ್ಜ್ ಆಫ್ ಹೆವೆನ್

ಆಲಿ ಜೈಲಿನಿಂದ ಬಿಡುಗಡೆಯಾದ ನಂತರ ಅವನನ್ನು ಟರ್ಕಿಗೆ ಗಡಿಪಾರು ಮಾಡಲಾಗುತ್ತದೆ. ಮತ್ತೊಂದು ಕಡೆ ಮಗಳ ಸಾವು ಸುಸಾನೆಯನ್ನು ಅಗಾಧವಾಗಿ ಬಾಧಿಸುತ್ತದೆ. ತನ್ನ ಮಗಳ ಉದ್ದೇಶವನ್ನು ಈಡೇರಿಸುವುದು ಅವಳ ಧ್ಯೇಯವಾಗತ್ತದೆ. ಆ ಕಾರಣವಾಗಿ ಅವಳು ಟರ್ಕಿಗೆ ಬರುತ್ತಾಳೆ. ಜೈಲಿನಲ್ಲಿ ಆಯಟೆನ್‌ಳನ್ನು ಭೇಟಿಯಾಗುತ್ತಾಳೆ. ಸುಸಾನೆಯನ್ನು ನೋಡಿದ ತಕ್ಷಣದಲ್ಲೆ ಆಯಟೆನ್ ಲೊಟ್ಟೆ ಸಾವಿಗೆ ತಾನೇ ಕಾರಣ ಎಂದು ಪಶ್ಚಾತ್ತಾಪದಿಂದ ಕುಗ್ಗಿಹೋಗುತ್ತಾಳೆ. ಸಿನಿಮಾದಲ್ಲಿನ ಈ ದೃಶ್ಯ ಅತಿ ಭಾವುಕವಾದುದ್ದು. ಕೊನೆಗೆ ಆಯಟಿನ್‌ಳನ್ನು ಜೈಲಿನಿಂದ ಬಿಡುಗಡೆಗೊಳಿಸುವಲ್ಲಿ ಸುಸಾನೆ ಯಶಸ್ವಿಯಾಗುತ್ತಾಳೆ. ನೆಜೆತ್‌ಗೆ ತನ್ನ ತಂದೆಯ ಮೇಲಿನ ಸಿಟ್ಟು ಕಡಿಮೆಯಾಗಿ ಅವನನ್ನು ಭೇಟಿಯಾಗಲು ಅವನಿರುವ ಜಾಗಕ್ಕೆ ಬರುತ್ತಾನೆ.

ನೆಜತ್, ಲೊಟ್ಟೆ ಮತ್ತು ಸುಸಾನೆ ಈ ಮೂವರು ಜರ್ಮನಿಯಿಂದ ಟರ್ಕಿಗೆ ಪ್ರಯಾಣಿಸುವ ಉದ್ದೇಶ ಒಂದೇ. ಅದು ಆಯಟೆನ್‌ಳಿಗೆ ಸಹಾಯ ಮಾಡುವುದು. ನೆಜತ್‌ನನ್ನು ಸಂಧಿಸುವ ಲೊಟ್ಟೆ ಅವನ ಮನೆಯನ್ನೆ ಕೆಲ ಸಮಯ ಹಂಚಿಕೊಳ್ಳುತ್ತಾಳೆ ಆದರೆ ಇಬ್ಬರ ಉದ್ದೇಶ ಒಬ್ಬರಿಗೊಬ್ಬರಿಗೆ ತಿಳಿಯುವುದಿಲ್ಲ. ನಂತರ ಬರುವ ಸುಸಾನೆ ಕೂಡ ತನ್ನ ಮಗಳು ಉಳಿದುಕೊಂಡಿದ್ದ ಮನೆಯಲ್ಲೆ ಉಳಿಯಬೇಕು ಎಂಬ ಆಸೆಯಿಂದ ನೆಜತ್‌ನನ್ನು ಭೇಟಿಯಾಗಿ ಅದೇ ಮನೆಯಲ್ಲಿ ಉಳಿಯುತ್ತಾಳೆ. ಆದರೆ ನೆಜತ್ ಟರ್ಕಿಗೆ ಬಂದ ಉದ್ದೇಶ ಸುಸಾನೆಗೆ ತಿಳಿಯುವುದಿಲ್ಲ.

ಸಿನಿಮಾವನ್ನು ಒಂದು ಬೌದ್ಧಿಕ ಕಲೆ ಎಂದು ಪರಿಗಣಿಸಿ ಗಂಭೀರವಾಗಿ ಚರ್ಚಿಸುವ ಮತ್ತು ವಿಮರ್ಶಿಸುವವರನ್ನು ದಾಟಿ ಅಸಂಖ್ಯಾತ ಸಾಮಾನ್ಯ ಸಿನಿಮಾ ಪ್ರೇಕ್ಷಕರನ್ನು ಸೆಳೆದ ಹೆಗ್ಗಳಿಕೆ ’ದ ಎಡ್ಜ್ ಆಫ್ ಹೆವೆನ್‌’ದು. ಸ್ವಂತ ಅನುಭವದಲ್ಲೇ ಹೇಳುವುದಾದರೆ, ಸಿನಿಮಾ ಒಂದು ಜನಪ್ರಿಯ ಮನರಂಜನೆಯ ಕಲಾಪ್ರಕಾರ ಎಂದು ತಿಳಿದು ಅದೇ ಮಾದರಿಯ ಸಿನಿಮಾಗಳನ್ನಷ್ಟೆ ನೋಡುತ್ತಿದ್ದ ನನಗೆ ಪ್ರಪಂಚದ ಬೇರೆಬೇರೆ ಭಾಗದ ಸಿನಿಮಾಗಳನ್ನು ನೋಡುವ ಕುತೂಹಲ ಉಂಟುಮಾಡಿದ ಪ್ರಾರಂಭದ ಸಿನಿಮಾಗಳಲ್ಲಿ ಇದೂ ಒಂದು.

ಅಕಿನ್ ತನ್ನ Head-On (2004) ಸಿನಿಮಾದಲ್ಲಿ ಟರ್ಕಿ ಮೂಲದ ಜರ್ಮನ್ ನಿವಾಸಿಗಳ ಮನೋತುಮುಲ, ಅವರ ಗುರುತಿನ ಬಿಕ್ಕಟ್ಟು, ಧಾರ್ಮಿಕ ಮೂಲಭೂತವಾದದ ಒತ್ತಡ, ಸ್ವತಂತ್ರವಾಗಿ ಬದುಕುವ ಕನಸು ಈ ಎಲ್ಲಾ ಸಂಗತಿಗಳನ್ನು ಚರ್ಚಿಸಿದ್ದಾರೆ. ಈ ಎಲ್ಲಾ ಸಂಗತಿಗಳನ್ನು The edge of Heavenನಲ್ಲಿ ಇನ್ನೂ ಹಲವು ಆಯಾಮಗಳೊಂದಿಗೆ ವಿಶಾಲವಾದ ಮನೋಭಾವದಿಂದ ಚರ್ಚಿಸುತ್ತಾರೆನಿಸುತ್ತದೆ. ಟರ್ಕಿ ಮತ್ತು ಜರ್ಮನ್ ನಡುವಿನ ಸದ್ಯದ ಬಿಕ್ಕಟ್ಟು, ಸಾಂಸ್ಕೃತಿಕ ಸಂಘರ್ಷ, ಟರ್ಕಿ ಯುರೋಪಿಯನ್ ಯೂನಿಯನ್ ಸೇರಿಕೊಳ್ಳುವ ಚರ್ಚೆ, ಯುರೋಪಿಯನ್ ಯೂನಿಯನ್‌ನಲ್ಲಿ ಬಲಾಢ್ಯ ರಾಷ್ಟ್ರಗಳ ಯಜಮಾನಿಕೆ, ಅಮೆರಿಕದ 9/11 ಘಟನೆ ನಂತರ ಮುಸ್ಲಿಂ ರಾಷ್ಟ್ರಗಳ ಮೇಲೆ ಯುರೋಪ್ ದೇಶಗಳ ಅಭಿಪ್ರಾಯ ಇವೆಲ್ಲವುಗಳ ಜೊತೆಗೆ ಟರ್ಕಿಯಲ್ಲಿ ಅಲ್ಪಸಂಖ್ಯಾತ ಕುರ್ಡಿಷ್ ಸಮುದಾಯದ ಬಗ್ಗೆ ಕೂಡ ಸೂಚ್ಯವಾಗಿ ಚರ್ಚಿಸುತ್ತಾರೆ.

ಈ ಸಿನಿಮಾದಲ್ಲಿ ಕಥೆಗಿಂತ ಕಥಾಪಾತ್ರಗಳು ಹೆಚ್ಚು ಕಾಡುತ್ತವೆ. ಅದರಲ್ಲಿಯೂ ಲೊಟ್ಟೆ ಮತ್ತು ಅವಳ ತಾಯಿ ಸುಸಾನೆಯ ಪಾತ್ರ ವಿಶಿಷ್ಟವಾದದ್ದು; ಒಂದು ದೇಶದ ಬಹುಸಂಖ್ಯಾತ ಮತ್ತು ಪ್ರಿವಿಲೆಜ್ ಸಮುದಾಯದವರು ಅಲ್ಪಸಂಖ್ಯಾತರ ಮತ್ತು ಶೋಷಿತರ ಬಗ್ಗೆ ಯಾವ ರೀತಿಯ ಕಾಳಜಿಯನ್ನು ಹೊಂದಿರಬೇಕು ಎಂಬುದಕ್ಕೆ ಲೊಟ್ಟೆ ಪಾತ್ರ ಮಾದರಿಯಾದರೆ, ತಾಯಿ ಸುಸಾನೆಯದು ಲೊಟ್ಟೆಯ ಕಾಳಜಿಯ ಮಾದರಿ ಕಡೆ ಚಲಿಸಲು ಪ್ರಯತ್ನಿಸುವ ಪಾತ್ರ. ರೈನರ್ ಫಾಸಬೈಂಡರ್‌ನ Ali: Fear Eats The Soul ಸಿನಿಮಾದಲ್ಲಿ ಬರುವ ಎಮ್ಮಿ ಕೂಡ ಇದೇ ಮಾದರಿಯ ವಿಶಾಲ ಮನೋಭಾವವುಳ್ಳ ಕಾಳಜಿಯ ಪಾತ್ರ. ಅಕಿನ್ ತನ್ನ ಪಾತ್ರಗಳನ್ನ ಹೃದಯವಂತಿಕೆಯಿಂದ ಕಟ್ಟಿಕೊಡುತ್ತಾರೆ. ಆಲಿ ಒಬ್ಬ ಕೊಲೆಗಡುಕ ಎಂದು ದೂರವಾಗುವ ಮಗ ನೆಜತ್ ಸಿನಿಮಾ ಕೊನೆಯಲ್ಲಿ ತನ್ನ ತಂದೆಯನ್ನು ನೋಡಲು ಹಂಬಲಿಸುತ್ತಾನೆ. ಲೊಟ್ಟೆಗೆ ನೀನು ನನ್ನ ಮಗಳೆ ಅಲ್ಲ ಎಂದು ದೂರುವ ಸುಸಾನೆ ಲೊಟ್ಟೆ ಸಾವಿನ ನಂತರ ಅವಳ ಉದ್ದೇಶವನ್ನು ಈಡೇರಿಸಲು ಮುಂದಾಗುತ್ತಾಳೆ. The edge of Heavenನಲ್ಲಿ ಬರುವ ಕಥಾಪಾತ್ರಗಳ ಮನಸ್ಥಿತಿ ಮತ್ತು ಆದ್ಯತೆ ಸಿನಿಮಾ ಕೊನೆಯಷ್ಟರಲ್ಲಿ ಬದಲಾಗಿರುತ್ತದೆ. ಈ ಬದಲಾವಣೆಯೆ ಮಾನವೀಯ ಸಂಬಂಧಗಳ ಕಡೆಗಿನ ತುಡಿತ ಮತ್ತು ಚಲನೆ. ಈ ಕಾರಣಕ್ಕಾಗಿ ಫತ್ಹೆ ಅಕಿನ್‌ನ The edge of Heaven ಸದಾಕಾಲ ನೆನಪಿನಲ್ಲುಳಿಯುವ ಸಿನಿಮಾ.

ಯದುನಂದನ್ ಕೀಲಾರ

ಯದುನಂದನ್ ಕೀಲಾರ
ಜಗತ್ತಿನ ಸಿನಿಮಾಗಳ ವೀಕ್ಷಣೆ ಮತ್ತು ಅವುಗಳು ಬೀರುವ ಸಾಮಾಜಿಕ ಪ್ರಭಾವದ ಸಾಧ್ಯತೆಗಳ ಬಗ್ಗೆ ಅಪಾರ ಉತ್ಸಾಹ ಇರುವ ಯದುನಂದನ್ ಸಿನಿಮಾಗಳ ರಾಜಕೀಯ ನಿಲುವುಗಳನ್ನು ತೀಕ್ಷ್ಣವಾಗಿ ಶೋಧಿಸುತ್ತಾರೆ.


ಇದನ್ನೂ ಓದಿ: ಸಮಕಾಲೀನ ಸಮಾಜದ ಪ್ರಮುಖ ಸಿನಿಮಾ ನಿರ್ಮಾತೃ Andrey Zvyagintsev

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...

ಮುಸ್ಲಿಂ ಮಹಿಳೆಯರ ವಿರುದ್ಧದ ಷರಿಯಾ ಕಾನೂನಿಗೆ ಏಕರೂಪ ನಾಗರಿಕ ಸಂಹಿತೆ ಪರಿಹಾರ: ಸುಪ್ರೀಂ ಕೋರ್ಟ್

"ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ತಾರತಮ್ಯದ ಆನುವಂಶಿಕ ನಿಬಂಧನೆಗಳನ್ನು ಪರಿಹರಿಸಲು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅತ್ಯಂತ ಪರಿಣಾಮಕಾರಿ ಪರಿಹಾರ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಮಾ.20) ಹೇಳಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ...

ಮುಂಬೈ: ಬಜೆಟ್ ಅಧಿವೇಶನದ ನಡುವೆ ವಿಧಾನ ಭವನದ ಬಳಿ ವ್ಯಕ್ತಿಯೊಬ್ಬನಿಂದ ಆತ್ಮಹತ್ಯೆಗೆ ಯತ್ನ: ವಶಕ್ಕೆ ಪಡೆದ ಪೊಲೀಸರು

ಮುಂಬೈ: ಮಾರ್ಚ್ 11, ಬುಧವಾರ ಮಹಾರಾಷ್ಟ್ರ ವಿಧಾನ ಭವನದ ಹೊರಗೆ ವ್ಯಕ್ತಿಯೊಬ್ಬರು ಆತ್ಮಾಹುತಿ ಮಾಡಿಕೊಳ್ಳಲು ಯತ್ನಿಸಿರುವುದಾಗಿ ವರದಿಯಾಗಿದೆ. ತಕ್ಷಣವೇ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದಾರೆ.  2026 ರ ಮಹಾರಾಷ್ಟ್ರ ಬಜೆಟ್ ಅಧಿವೇಶನ ವಿಧಾನ ಭವನದಲ್ಲಿ...

ಕೋವಿಡ್ ಲಸಿಕೆ ಕೆಲ ಸಾವುಗಳಿಗೆ ಕಾರಣವಾಗಿದೆ ಎಂದು ಅಧಿಕೃತ ದತ್ತಾಂಶ ತೋರಿಸಿದೆ, ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಸರ್ಕಾರದ ಅಧೀನದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲಕ ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ. ಕೋವಿಡ್ ಲಸಿಕೆ ಪಡೆದ ಬಳಿಕ ಕೆಲ ಸಾವುಗಳು ಸಂಭವಿಸಿರುವುದನ್ನು ಅಧಿಕೃತ ದತ್ತಾಂಶಗಳೇ ದೃಢಪಡಿಸಿವೆ. ಹೀಗಿರುವಾಗ, ಲಸಿಕೆ ಹಾಕಿಸಿಕೊಂಡ ನಂತರ ಸಾವು...

ತಮಿಳುನಾಡು| ಪೊಲೀಸ್ ದೌರ್ಜನ್ಯದಿಂದ ಎರಡು ತಿಂಗಳಲ್ಲಿ ನಾಲ್ವರು ದಲಿತರು ಸಾವು

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದನ್ನು ಪ್ರತಿಬಿಂಬಿಸುವ ಆತಂಕಕಾರಿ ವಿಚಾರವೊಂದು ಮುನ್ನಲೆಗೆ ಬಂದಿದ್ದು, ಪೊಲೀಸ್ ಹಿಂಸಾಚಾರದಿಂದಾಗಿ ಎರಡು ತಿಂಗಳ ಅವಧಿಯಲ್ಲಿ ನಾಲ್ವರು ದಲಿತರು ಸಾವನ್ನಪ್ಪಿದ್ದಾರೆ. ಈ ಸಾವುಗಳಲ್ಲಿ, ಎರಡು ಪ್ರಕರಣಗಳನ್ನು...

ಪಶ್ಚಿಮ ಏಷ್ಯಾ ಸಂಘರ್ಷ| ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿದ್ದಾಗಿ ವಿಡಿಯೋ ಹಂಚಿಕೊಂಡ ಅಮೆರಿಕ ಸೇನೆ

ಪಶ್ಚಿಮ ಏಷ್ಯಾದಿಂದ ತೈಲ ರಫ್ತನ್ನು ತಡೆಯಲು ಇರಾನ್ ಪ್ರಯತ್ನಿಸುತ್ತಿರುವುದರಿಂದ ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿರುವುದಾಗಿ ಅಮೆರಿಕ ಸೇನೆ ಹೇಳಿಕೊಂಡಿದೆ.  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಇರಾನ್ ಜಲಸಂಧಿಯಲ್ಲಿ ಗಣಿಗಳನ್ನು...

13 ವರ್ಷಗಳಿಂದ ಕೋಮಾದಲ್ಲಿರುವ ಯುವಕನ ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅನುಮತಿ

ಕಳೆದ 13 ವರ್ಷಗಳಿಂದ ಕೋಮಾದಲ್ಲಿರುವ 32 ವರ್ಷದ ಹರೀಶ್ ರಾಣಾ ಎಂಬ ಯುವಕನ ಪರೋಕ್ಷ (ನಿಷ್ಕ್ರಿಯ) ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಬುಧವಾರ (ಮಾ.11) ಅನುಮತಿ ನೀಡಿದೆ ಎಂದು livelaw.in ವರದಿ ಮಾಡಿದೆ. ದೆಹಲಿ ಮೂಲದ ಹರೀಶ್...