Homeಮುಖಪುಟಗರ್ಭಪಾತ ಕಾನೂನು: ಮತ್ತೆ ಚರ್ಚೆಯ ಮುನ್ನಲೆಯಲ್ಲಿ..

ಗರ್ಭಪಾತ ಕಾನೂನು: ಮತ್ತೆ ಚರ್ಚೆಯ ಮುನ್ನಲೆಯಲ್ಲಿ..

- Advertisement -
- Advertisement -

ದೇಹ ನಿನ್ನದು, ಗರ್ಭ ನಿನ್ನದು ಆದರೆ ಗರ್ಭಪಾತ ಮಾಡುವ/ಮಾಡಿಸುವ ಅಧಿಕಾರ ನಿನಗಿಲ್ಲ. ಅಂದರೆ ಹೆಣ್ಣಿನ ದೇಹ ಅವಳದಾದರೂ ಅದರ ಮೇಲೆ ಅವಳಿಗೆ ಸಂಪೂರ್ಣ ಹಕ್ಕಿಲ್ಲ. ಈ ಗರ್ಭಪಾತ ಎಂಬುದು ಮುಂದುವರಿದ, ಮುಂದುವರಿಯುತ್ತಿರುವ ಅಥವಾ ಅತ್ಯಂತ ಸಂಪ್ರದಾಯಸ್ಥ ದೇಶಗಳು ಎನಿಸಿಕೊಂಡಲ್ಲಿ ಕೂಡ ಸಮಾನವಾಗಿ ಅಗಾಗ ಚರ್ಚೆಗೆ ಗ್ರಾಸವಾಗುವ ವಿಷಯ.

ಮನುಷ್ಯರು ಎಚ್ಟೇ ಮುಂದುವರಿದರೂ Reproduction ಅಥವಾ ಸಂತಾನೋತ್ಪತ್ತಿ ಕ್ರಿಯೆಯನ್ನು ಧಾರ್ಮಿಕ ಮತ್ತು ಸಾಮಾಜಿಕ ದೃಷ್ಟಿಕೋನದಿಂದಲೇ ಹೆಚ್ಚಾಗಿ ನೋಡುವುದರಿಂದ ಆ ಕ್ರಿಯೆಯ ಸುತ್ತ ನೂರಾರು ಚರ್ಚೆಗಳು ಮತ್ತು ವಿವಾದಗಳು ಹೆಣೆದುಕೊಂಡಿರುತ್ತವೆ. ಅಂಥ ಚರ್ಚೆ ಮತ್ತು ವಿವಾದಗಳು ಆಯಾ ಕಾಲ ದೇಶದ ಗಡಿಗಳನ್ನು ದಾಟಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ ಎಂದರೆ ಅದರ ಪ್ರಸ್ತುತತೆ ಮತ್ತು ಅಗತ್ಯಗಳ ಬಗ್ಗೆ ಮುಕ್ತ ಚರ್ಚೆಯಾಗುವ ಅವಶ್ಯಕತೆ ಹೆಚ್ಚಾಗಿದೆ ಎಂದರ್ಥ.

ಇತ್ತೀಚೆಗೆ ಅಮೆರಿಕದ ಸುಪ್ರೀಂಕೋರ್ಟ್ ಗರ್ಭಪಾತ ಕಾನೂನನ್ನು ತೆಗೆದು ಹಾಕಿದಾಗ ಎಷ್ಟೋ ಜನ ’ಅಮೆರಿಕದಂತಹ ದೇಶದಲ್ಲಿ ಇದು ಸಾಧ್ಯವೇ?’ ಎಂದು ಆಶ್ಚರ್ಯಪಟ್ಟರು. ಅದಕ್ಕೆ ಕಾರಣವೂ ಇದೆ. ಒಂದು ಅತ್ಯಂತ ಮುಂದುವರೆದ ದೇಶ, ಉತ್ತಮ ಆಧುನಿಕ ಜೀವನಶೈಲಿಗೆ ಹೆಸರಾದ ದೇಶ ಎಂದು ಗುರುತಿಸಲ್ಪಡುವ ಅಮೆರಿಕದಲ್ಲಿ ಇಂಥ ಪುರೋಗಾಮಿ ಕಾನೂನು ಬರಬಹುದೇ ಎಂದು ಜನ ಆಶ್ಚರ್ಯಪಡುವುದು ಸಹಜ. ಆದರೆ ಈ ಬದಲಾವಣೆಗೆ ಮುನ್ನುಡಿ ಬರೆದಿದ್ದು 2016ರಲ್ಲಿ ಅಮೆರಿಕ ಅಧ್ಯಕ್ಷ ಚುನಾವಣೆಯ ಸಮಯದಲ್ಲಿ. ಹಿಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತನ್ನ ಅಧ್ಯಕ್ಷೀಯ ಚುನಾವಣಾ ಪ್ರಣಾಳಿಕೆಯಲ್ಲಿ 1973ರಿಂದ ಜಾರಿಗೆ ಬಂದ ಗರ್ಭಪಾತ ಕಾನೂನನ್ನು ತೆಗೆದುಹಾಕುವ ಇಂಗಿತ ವ್ಯಕ್ತಪಡಿಸಿದ್ದರು. ಅದರಂತೇ ಅಧಿಕಾರಕ್ಕೆ ಬಂದ ಕೂಡಲೇ ಸುಪ್ರೀಂಕೋರ್ಟಿಗೆ 3 ಹೊಸ ಜಡ್ಜ್‌ಗಳ ನೇಮಕ ಮಾಡಿದ್ದರು. ಅದರ ಪರಿಣಾಮವಾಗಿಯೇ ಇತ್ತೀಚೆಗೆ 1973ರಲ್ಲಿ ರೋ ವರ್ಸಸ್ ವೇಡ್ ಕೇಸಿನ ಮೂಲಕ ನೀಡಲಾಗಿದ್ದ ಗರ್ಭಪಾತದ ಸ್ವಾತಂತ್ರ್ಯವನ್ನು ತಿರಸ್ಕರಿಸಿ ಪರಿಸ್ಥಿತಿಯನ್ನು ದಶಕಗಳಷ್ಟು ಹಿಂದಕ್ಕೆ ಒಯ್ಯಲಾಗಿದೆ.

ಅಮೆರಿಕದಲ್ಲಿ ಮೊದಲಿನಿಂದಲೂ ಗರ್ಭಪಾತ ಎಂಬುದು ಅತ್ಯಂತ ಚರ್ಚಾಹ ವಸ್ತು. ಸಂಪ್ರದಾಯವಾದಿಗಳು ಮತ್ತು ಲಿಬರಲ್ಸ್‌ಗಳ ನಡುವೆ ಈ ಚರ್ಚೆ ನಡೆಯುತ್ತಲೇ ಇರುತ್ತದೆ. ಸಂಪ್ರದಾಯವಾದಿಗಳು ಮಕ್ಕಳನ್ನು/ಗರ್ಭವನ್ನು ದೇವರ ಆಶೀರ್ವಾದ ಎಂದು ಬಗೆದರೆ, ಲಿಬರಲ್ಸ್ ’ಮಹಿಳೆಗೆ ಸಂವಿಧಾನಾತ್ಮಕವಾಗಿ ತನ್ನ ದೇಹದ ಮೇಲೆ ಸಂಪೂರ್ಣ ಹಕ್ಕಿದೆ’ ಎನ್ನುತ್ತಾರೆ.

ಅಮೆರಿಕದ ಸುಪ್ರೀಂಕೋರ್ಟ್ ಗರ್ಭಪಾತಕ್ಕೆ ಅವಕಾಶ ನೀಡಿದ ಹಳೆಯ ತೀರ್ಪನ್ನು ತೆಗೆದು ಹಾಕಿದ ಕೂಡಲೇ 13 ರಾಜ್ಯಗಳು ಈ ತೀರ್ಪನ್ನು ತಕ್ಷಣವೇ ಒಪ್ಪಿಕೊಂಡು ಅನುಷ್ಠಾನಕ್ಕೂ ತಂದವು. ಸಂಪ್ರದಾಯವಾದಿಗಳಾದ ರಿಪಬ್ಲಿಕನ್ ಬಹುಮತ ಇರುವ ರಾಜ್ಯಗಳು ಬಹುತೇಕ ಇದನ್ನು ಇರುವಂತೆಯೇ ಸ್ವೀಕರಿಸಿ ತಕ್ಷಣದಿಂದಲೇ ಜಾರಿಗೆ ತಂದವು.

ಅಮೆರಿಕದ ಮಹಿಳಾ ಹೋರಾಟಗಾರರು, ಲಿಬರಲ್ಸ್ ಹಾಗೂ ತೀರ್ಪಿನ ಬಗ್ಗೆ ಅಸಮಾಧಾನವಿರುವವರೆಲ್ಲ ’ನನ್ನ ದೇಹ ನನ್ನ ಸ್ವಾತಂತ್ರ್ಯ’ ಎಂಬ ಘೋಷಣೆಯೊಂದಿಗೆ ವಿಶ್ವದಾದ್ಯಂತ ತಮ್ಮ ಈ ನಿಲುವಿಗೆ ಸಮರ್ಥನೆಯನ್ನು ಮತ್ತು ಬೆಂಬಲವನ್ನು ಬಯಸುತ್ತಿದ್ದಾರೆ. ಒಟ್ಟಿನಲ್ಲಿ ಗರ್ಭಪಾತ ಎಂಬ ವಿಷಯ ವೈಜ್ಞಾನಿಕ ಮತ್ತು ವೈಯಕ್ತಿಕ ಪರಿಧಿಯನ್ನು ಬಿಟ್ಟು ಬೇರೆಯದೇ ಲೋಕ ಪ್ರವೇಶಿಸಿದೆ.

ಗರ್ಭಪಾತ ವಿರೋಧಿ ಧೋರಣೆಗಳು ಸ್ಪಷ್ಟವಾಗಿ ಕಾಣಲು ಪ್ರಾರಂಭವಾಗುವುದು 19ನೇ ಶತಮಾನದಲ್ಲಿ. ಯುರೋಪಿನ ದೇಶಗಳು ವಿಶ್ವದಾದ್ಯಂತ ತಮ್ಮ ವಸಾಹತುಗಳನ್ನು ಸ್ಥಾಪಿಸುತ್ತ ಹೋದಂತೆ ತಮ್ಮ ಕಾನೂನು ವ್ಯವಸ್ಥೆಯನ್ನೂ ಕೊಂಡೊಯ್ದರು. ಆ ಕಾನೂನುಗಳಲ್ಲಿ ಕೆಲವೊಂದು ಅವರ ಧಾರ್ಮಿಕ ವಿಚಾರಧಾರೆಗಳಿಗೆ ಪೂರಕವಾಗಿದ್ದು ಅದಕ್ಕೆ ಕಾನೂನಿನ ಚೌಕಟ್ಟನ್ನು ಒದಗಿಸಲಾಯಿತು. ಆದರೆ ಕ್ರಮೇಣ ಜನ ಹಾಗೂ ದೇಶಗಳ ಬದಲಾದ ರಾಜಕೀಯ ಮೌಲ್ಯಗಳ ಹಿನ್ನೆಲೆಯಲ್ಲಿ ಸುರಕ್ಷಿತ ಗರ್ಭಪಾತ ಎನ್ನುವ ಹೊಸ ತತ್ವ ರೂಪುಗೊಂಡಿತು. ಆದರೆ ಹೆಚ್ಚುಕಮ್ಮಿ ಕ್ರಿಶ್ಚಿಯಾನಿಟಿ ತರಹವೇ ಆದರೂ ಅದಕ್ಕಿಂತ ತೀವ್ರವಾಗಿ ಗರ್ಭಪಾತವನ್ನು ವಿರೋಧಿಸುವ ಧರ್ಮವೆಂದರೆ ಇಸ್ಲಾಂ. ಕೇವಲ ’ಟ್ಯುನಿಸಿಯಾ ಮತ್ತು ಯುಎಇ’ಗಳಲ್ಲಿ ಮಾತ್ರ 120 ದಿನಗಳ ಒಳಗಿನ ಗರ್ಭವನ್ನು ತೆಗೆಸಬಹುದು. ಇದನ್ನು ಹೊರತುಪಡಿಸಿ ಯಾವುದೇ ಇಸ್ಲಾಮಿಕ್ ದೇಶಗಳಲ್ಲಿ ಗರ್ಭಪಾತಕ್ಕೆ ಅವಕಾಶವಿಲ್ಲ. ಕೆಲವು ವರ್ಷಗಳ ಹಿಂದೆ ಐರ್ಲೆಂಡಿನಲ್ಲಿ ಭಾರತದ ದಂತ ವೈದ್ಯೆ ಸವಿತಾ ಹಾಲಪ್ಪನವರ್ ಎಂಬುವವರು ಗರ್ಭಧಾರಣೆಯಲ್ಲಿ ತೊಂದರೆಯಾಗಿ ಗರ್ಭಪಾತಕ್ಕೆ ಅರ್ಜಿ ಸಲ್ಲಿಸಿದಾಗ ಅದು ಇಂಥದೇ ಕಾನೂನಿನ ತೊಡಕುಗಳಿಗೆ ಸಿಕ್ಕು ಅದಕ್ಕೆ ಅವಕಾಶ ಸಿಗದೆ ಗರ್ಭದಲ್ಲಿ ನಂಜು ಹರಡಿ ಅವರು ಮೃತಪಟ್ಟ ಘಟನೆ ನಡೆದಿತ್ತು. ಇದು ಗರ್ಭಪಾತ ಕಾನೂನುಗಳನ್ನು ಬಹಳ ಚರ್ಚೆಗೆ ಒಳಪಡುವಂತೆ ಮಾಡಿತ್ತು. ಆದರೆ ಅದರ ಕಾನೂನು ಪರಿಹಾರಕ್ಕೆ ಬಹಳ ಕಾಲ ಬೇಕಾಯಿತು.

ಜಗತ್ತಿನ ಬಹುತೇಕ ದೇಶಗಳು ಕೆಲವೊಂದು ನಿರ್ದಿಷ್ಟ ಕಾರಣಗಳಿಗಾಗಿ ಗರ್ಭಪಾತಕ್ಕೆ ಅವಕಾಶ ನೀಡುತ್ತವೆ ಮತ್ತು ಕೆಲವು ನಿರ್ದಿಷ್ಟ ಅವಧಿಯವರೆಗೆ ನೀಡುತ್ತವೆ. ಅವುಗಳಲ್ಲಿ ಎಲ್ಲಕ್ಕಿಂತ ಮುಖ್ಯವಾದದ್ದು ಎಂದರೆ ತಾಯಿಯ ಜೀವಕ್ಕೆ ಅಪಾಯವಿದ್ದಲ್ಲಿ ಎಂಬುದು; ಇನ್ನುಳಿದಂತೆ ಹುಟ್ಟಲಿರುವ ಮಗುವಿನ ಅಂಗವೈಕಲ್ಯ, ಬೆಳವಣಿಗೆಯ ಕೊರತೆ, ಸಾಮಾಜಿಕ ಆರ್ಥಿಕ ಕಾರಣಗಳು ಮುಂತಾದವು.

ಆದರೆ ಈ ರೀತಿಯ ನಿರ್ಬಂಧಗಳು ಕಾನೂನುಬಾಹಿರ ಗರ್ಭಪಾತಕ್ಕೆ ದಾರಿ ಮಾಡಿಕೊಡುತ್ತವೆ ಎಂದು ಸರ್ವೆಗಳು ಹೇಳುತ್ತವೆ. ವಿಶ್ವ ಆರೋಗ್ಯ ಸಂಸ್ಥೆ ನಡೆಸಿದ ಸರ್ವೇ ಪ್ರಕಾರ ಯಾವುದೇ ಪ್ರತಿಬಂಧಗಳಿಲ್ಲದೆ ಗರ್ಭಪಾತಕ್ಕೆ ಅವಕಾಶವಿರುವ ಮತ್ತು ಅದನ್ನು ಅಪರಾಧಿತವಲ್ಲದ (Decriminalised) ಕ್ರಿಯೆ ಎಂದು ಪರಿಗಣಿಸಿರುವ ದೇಶಗಳಲ್ಲಿ ’ಗರ್ಭಪಾತದ ಸಮಯದಲ್ಲಿ ಮಹಿಳೆಯ ಸಾವಿನ ಸಂಖ್ಯೆ ’೦’ (ಶೂನ್ಯ) ಇದೆ. ಕೆನಡಾ ಅಂಥ ಒಂದು ದೇಶ. ಗರ್ಭಪಾತಕ್ಕೆ ಕಾನೂನಿನ ಸುರಕ್ಷೆ ಇರುವುದರಿಂದ ಅಲ್ಲಿ ಕದ್ದು ಮುಚ್ಚಿ ಗರ್ಭ ಎಸಗುವ ಅಥವಾ ಅನಾರೋಗ್ಯಕರವಾದ ಹಾಗೂ ಸುರಕ್ಷಿತವಲ್ಲದ ಕಾನೂನುಬಾಹಿರ ಗರ್ಭಪಾತ ಕೇಂದ್ರಗಳಿಗೆ ಹೋಗುವ ಪ್ರಮೇಯವೇ ಇರುವುದಿಲ್ಲ.

ಇನ್ನು ಭಾರತದ ಮಟ್ಟಿಗೆ ಹೇಳುವುದಾದರೆ ಇಲ್ಲಿಯೂ ಗರ್ಭಪಾತಕ್ಕೆ ಮೇಲೆ ಹೇಳಿದ ಕಾರಣಗಳ ರೀತಿಯಲ್ಲಿಯೇ ಅವಕಾಶವಿದೆ. ಗರ್ಭಧಾರಣೆಯ ಮೊದಲ ಕೆಲವಾರಗಳಲ್ಲಿ ನಿರ್ದಿಷ್ಟವಾದ ಕಾರಣಗಳಿದ್ದರೆ ಗರ್ಭಪಾತವನ್ನು ವೈದ್ಯರ ಮೇಲ್ವಿಚಾರಣೆಯಲ್ಲಿ ಮಾಡಬಹುದು. 20 ವಾರಗಳಿಗಿಂತ ಹೆಚ್ಚಿದ್ದರೆ ನ್ಯಾಯಾಲಯದ ಅನುಮತಿಯಿಂದಲೇ ಮಾಡಬೇಕು.

ಇಲ್ಲಿ ಎಲ್ಲಕ್ಕಿಂತ ಮುಖ್ಯವಾಗಿ ಏಳುವ ಪ್ರಶ್ನೆ ಎಂದರೆ ಈ ಎಲ್ಲ ಪ್ರಕ್ರಿಯೆಲ್ಲಿ ಗರ್ಭ ಧರಿಸಿದ ಮಹಿಳೆಯ ಪಾತ್ರ ಏನು? ಮೂಲಭೂತ ಸ್ವಾತಂತ್ರ್ಯ ಎಂಬ ಪರಿಕಲ್ಪನೆಯಲ್ಲಿ ಅವಳಿಗೆ ತನ್ನ ದೇಹದ ಮೇಲೆ ಹಕ್ಕಿಲ್ಲವೆ? ಎಂಬುದು.

ಇನ್ನೊಂದು ಪ್ರಶ್ನೆ, ಕೇವಲ ಗರ್ಭಪಾತಕ್ಕೆ ಅವಕಾಶ ಇದೆ ಎಂಬ ಕಾರಣಕ್ಕೆ ಜನ ಅನವಶ್ಯಕವಾಗಿ ಗರ್ಭಪಾತ ಮಾಡಿಸುತ್ತಾರಾ? ಎಂಬುದು.

ಈ ಎರಡನೇ ಪ್ರಶ್ನೆಯನ್ನೇ ಮೊದಲು ನಮ್ಮ ದೇಶದ ಹಿನ್ನೆಲೆಯಲ್ಲಿ ನೋಡಿದರೆ “ಹೌದು ದುರುಪಯೋಗ ಆಗುತ್ತದೆ” ಎನ್ನಬಹುದು. ಗಂಡು ಮಕ್ಕಳಿಂದಲೇ ವಂಶೋದ್ಧಾರ ಎನ್ನುವ ಜನರ ಮಧ್ಯೆ ಹೆಣ್ಣು ಭ್ರೂಣವನ್ನು ತೆಗೆಸುವ ಲಕ್ಷಾಂತರ ಪ್ರಕರಣಗಳು ನಮ್ಮ ಎದುರಿಗಿವೆ. ಗರ್ಭಧರಿಸಿದ ಮಹಿಳೆಯ ಆರೋಗ್ಯ ಕೆಲವು ಬಾರಿ ಪ್ರಾಣಕ್ಕೆ ಕುತ್ತು ಉಂಟಾಗುವ ಸಂದರ್ಭಗಳೂ ಇವೆ. ಭಾರತದಂತಹ ದೇಶದಲ್ಲಿ ಇದಕ್ಕೆ ಕಾನೂನಿನ ಸ್ಪಷ್ಟ ಚೌಕಟ್ಟು ಮತ್ತು ಪರಿಭಾಷೆಯ ಅಗತ್ಯ ಖಂಡಿತವಾಗಿಯೂ ಇದೆ. ಇನ್ನು ಮೊದಲನೆಯ ಪ್ರಶ್ನೆಗೆ ಬಂದರೆ ಮಹಿಳೆಗೆ ಖಂಡಿತವಾಗಿಯೂ ಈ ಮೇಲೆ ಹೇಳಲಾದ ಕಾರಣಗಳ ಹೊರತಾಗಿಯೂ ತನ್ನ ದೇಹದ ಮೇಲೆ ಸ್ವಾತಂತ್ರ್ಯ ಹೊಂದುವ ಅಗತ್ಯವಿದೆ. ಗರ್ಭಧಾರಣೆಯನ್ನು ಕೇವಲ ಪುರುಷಪ್ರಧಾನ ವ್ಯವಸ್ಥೆಯ ಕಣ್ಣಿನಿಂದ ನೋಡುವುದನ್ನು ಬಿಟ್ಟು ಬದಲಾಗುತ್ತಿರುವ ಕಾಲಮಾನದಲ್ಲಿ ಮಹಿಳೆಯ ಅಗತ್ಯ ಮತ್ತು ಮನಸ್ಥಿತಿಗಳ ಹಿನ್ನೆಲೆಯಲ್ಲಿ ವಿಶ್ಲೇಷಿಸುವ ಅಗತ್ಯ ಹಿಂದೆಗಿಂತಲೂ ಹೆಚ್ಚಿದೆ.,

ರಾಜಲಕ್ಷ್ಮಿ ಅಂಕಲಗಿ

ರಾಜಲಕ್ಷ್ಮಿ ಅಂಕಲಗಿ
ಹೈಕೋರ್ಟ್ ವಕೀಲರು, ಹಲವು ಜನಪರ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದಾರೆ. ಕಾನೂನು ವಿಷಯಗಳ ಮೇಲೆ ಹಲವು ಲೇಖನಗಳನ್ನು ಪ್ರಕಟಿಸಿದ್ದಾರೆ.


ಇದನ್ನೂ ಓದಿ: ತಂದೆ ಮತ್ತು ಮೂವರು ಹೆಣ್ಣುಮಕ್ಕಳು; ದ್ವೇಷದ ರಂಗಭೂಮಿಯಲ್ಲಿ ಒಂದು ಹಳೆಯ ಕಥೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....

ವಿಜಯ್ ಹೇಳಿದ ಭ್ರಷ್ಟಾಚಾರ ನಿರ್ಮೂಲನೆ ಮತ್ತು ಟಿವಿಕೆ ಶಾಸಕರ ಕ್ರಿಮಿನಲ್ ಹಿನ್ನೆಲೆ

ಎರಡು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಟಿವಿಕೆ ಎಂಬ ಪಕ್ಷ, 75 ವರ್ಷಗಳ ಅನುಭವಿ ಪಕ್ಷವಾದ ಡಿಎಂಕೆಯನ್ನು ಸೋಲಿಸಿರುವುದು, ಕಳೆದ ಅರವತ್ತು ವರ್ಷಗಳಲ್ಲಿ ಮೊಟ್ಟ ಮೊದಲ ಬಾರಿಗೆ ದ್ರಾವಿಡ ಚಳುವಳಿ ಹಿನ್ನೆಲೆಯ ಪಕ್ಷವನ್ನು...

ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿಗೆ ಬಿಜೆಪಿ ಗೆಲುವು: ಫಲಿತಾಂಶದ ಬಳಿಕ ಭುಗಿಲೆದ್ದ ಹಿಂಸಾಚಾರ, ಕನಿಷ್ಠ ಐದು ಮಂದಿ ಸಾವು

ಕೊಲ್ಕತ್ತಾ, ಮೇ 8: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಮೊದಲ ಬಾರಿಗೆ ಬೃಹತ್ ಗೆಲುವು ಸಾಧಿಸಿದ್ದು, ರಾಜ್ಯದ 294 ಸ್ಥಾನಗಳ ಪೈಕಿ 206 ಸ್ಥಾನಗಳನ್ನು ಗೆದ್ದು ಮುಂದಿನ...

ಪಂಚರಾಜ್ಯ ಚುನಾವಣೆಯ ಗೋಜಲುಗಳು

ವಿವಾದಾತ್ಮಕ ಮತ್ತು ಸಂವಿಧಾನ ವಿರೋಧಿ ವಿಶೇಷ ತೀವ್ರ ಪರಿಷ್ಕರಣೆ (ಎಸ್ ಐಆರ್) ಅಡಿಯಲ್ಲಿ ನಡೆದ 2026ರ ಐದು ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಏಕರೂಪದ ಅಭಿಮತವನ್ನು ವ್ಯಕ್ತಪಡಿಸಲಿಲ್ಲ. ಮತ್ತು ಸಂಕೀರ್ಣವಾದ ಫಲಿತಾಂಶ ಕೊಟ್ಟಿದ್ದಾರೆ. ಪಶ್ಚಿಮ...

ಪ್ರಜಾಸತ್ತೆಯ ಉಳಿವಿಗೆ ಇದು ನಿರ್ಣಾಯಕ ಕ್ಷಣ : ಮಹತ್ವದ ಕಣ್ಣೋಟ

ಚುನಾವಣೆಗಳು ಮತ್ತು ನ್ಯಾಯಾಲಯಗಳು ಇನ್ನು ಪರಿಹಾರವಲ್ಲ ಎಂಬ ಅಭಿಪ್ರಾಯಕ್ಕೆ ಜನರು ಬರಲು ಈ ಬಾರಿಯ ವಿಧಾನಸಭಾ ಚುನಾವಣೆಗಳೇ ಕಾರಣವಾಗಿವೆ. ಇಂದು 'ಭಾರತದ ಪರಿಕಲ್ಪನೆ'ಗೆ (Idea of India) ಸಂಚಕಾರ ಬಂದಿದೆ. ಪ್ರಜಾಪ್ರಭುತ್ವವು ಕೇವಲ...

ಭಾಗ-2: ಎಸ್‌ಐಆರ್ ಜಾರಿಯಿಂದ ಕಾಂಗ್ರೆಸ್‌ ಕಳೆದುಕೊಳ್ಳುವ ಕ್ಷೇತ್ರಗಳೆಷ್ಟು?

30 ಸಾವಿರದಿಂದ ಒಂದು ಸಾವಿರದ ಒಳಗಿನ ಮತಗಳ ಅಂತರದಿಂದ ಗೆದ್ದಿರುವ ಕರ್ನಾಟಕದ 97 ಕ್ಷೇತ್ರಗಳನ್ನು ನಾವು ಪಟ್ಟಿ ಮಾಡಿದ್ದೇವೆ. ಪಶ್ಚಿಮ ಬಂಗಾಳದಲ್ಲಿ ಆದಂತೆಯೇ ರಾಜ್ಯದಲ್ಲಿ ಚುನಾವಣೆ ಸಮೀಪಿಸಿದಾಗ ಎಸ್‌ಐಆರ್ ಜಾರಿಯಾದರೆ ಬಿಜೆಪಿಗೆ ಅನುಕೂಲವಾಗುವ...