Homeಮುಖಪುಟಗರ್ಭಪಾತ ಕಾನೂನು: ಮತ್ತೆ ಚರ್ಚೆಯ ಮುನ್ನಲೆಯಲ್ಲಿ..

ಗರ್ಭಪಾತ ಕಾನೂನು: ಮತ್ತೆ ಚರ್ಚೆಯ ಮುನ್ನಲೆಯಲ್ಲಿ..

- Advertisement -
- Advertisement -

ದೇಹ ನಿನ್ನದು, ಗರ್ಭ ನಿನ್ನದು ಆದರೆ ಗರ್ಭಪಾತ ಮಾಡುವ/ಮಾಡಿಸುವ ಅಧಿಕಾರ ನಿನಗಿಲ್ಲ. ಅಂದರೆ ಹೆಣ್ಣಿನ ದೇಹ ಅವಳದಾದರೂ ಅದರ ಮೇಲೆ ಅವಳಿಗೆ ಸಂಪೂರ್ಣ ಹಕ್ಕಿಲ್ಲ. ಈ ಗರ್ಭಪಾತ ಎಂಬುದು ಮುಂದುವರಿದ, ಮುಂದುವರಿಯುತ್ತಿರುವ ಅಥವಾ ಅತ್ಯಂತ ಸಂಪ್ರದಾಯಸ್ಥ ದೇಶಗಳು ಎನಿಸಿಕೊಂಡಲ್ಲಿ ಕೂಡ ಸಮಾನವಾಗಿ ಅಗಾಗ ಚರ್ಚೆಗೆ ಗ್ರಾಸವಾಗುವ ವಿಷಯ.

ಮನುಷ್ಯರು ಎಚ್ಟೇ ಮುಂದುವರಿದರೂ Reproduction ಅಥವಾ ಸಂತಾನೋತ್ಪತ್ತಿ ಕ್ರಿಯೆಯನ್ನು ಧಾರ್ಮಿಕ ಮತ್ತು ಸಾಮಾಜಿಕ ದೃಷ್ಟಿಕೋನದಿಂದಲೇ ಹೆಚ್ಚಾಗಿ ನೋಡುವುದರಿಂದ ಆ ಕ್ರಿಯೆಯ ಸುತ್ತ ನೂರಾರು ಚರ್ಚೆಗಳು ಮತ್ತು ವಿವಾದಗಳು ಹೆಣೆದುಕೊಂಡಿರುತ್ತವೆ. ಅಂಥ ಚರ್ಚೆ ಮತ್ತು ವಿವಾದಗಳು ಆಯಾ ಕಾಲ ದೇಶದ ಗಡಿಗಳನ್ನು ದಾಟಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ ಎಂದರೆ ಅದರ ಪ್ರಸ್ತುತತೆ ಮತ್ತು ಅಗತ್ಯಗಳ ಬಗ್ಗೆ ಮುಕ್ತ ಚರ್ಚೆಯಾಗುವ ಅವಶ್ಯಕತೆ ಹೆಚ್ಚಾಗಿದೆ ಎಂದರ್ಥ.

ಇತ್ತೀಚೆಗೆ ಅಮೆರಿಕದ ಸುಪ್ರೀಂಕೋರ್ಟ್ ಗರ್ಭಪಾತ ಕಾನೂನನ್ನು ತೆಗೆದು ಹಾಕಿದಾಗ ಎಷ್ಟೋ ಜನ ’ಅಮೆರಿಕದಂತಹ ದೇಶದಲ್ಲಿ ಇದು ಸಾಧ್ಯವೇ?’ ಎಂದು ಆಶ್ಚರ್ಯಪಟ್ಟರು. ಅದಕ್ಕೆ ಕಾರಣವೂ ಇದೆ. ಒಂದು ಅತ್ಯಂತ ಮುಂದುವರೆದ ದೇಶ, ಉತ್ತಮ ಆಧುನಿಕ ಜೀವನಶೈಲಿಗೆ ಹೆಸರಾದ ದೇಶ ಎಂದು ಗುರುತಿಸಲ್ಪಡುವ ಅಮೆರಿಕದಲ್ಲಿ ಇಂಥ ಪುರೋಗಾಮಿ ಕಾನೂನು ಬರಬಹುದೇ ಎಂದು ಜನ ಆಶ್ಚರ್ಯಪಡುವುದು ಸಹಜ. ಆದರೆ ಈ ಬದಲಾವಣೆಗೆ ಮುನ್ನುಡಿ ಬರೆದಿದ್ದು 2016ರಲ್ಲಿ ಅಮೆರಿಕ ಅಧ್ಯಕ್ಷ ಚುನಾವಣೆಯ ಸಮಯದಲ್ಲಿ. ಹಿಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತನ್ನ ಅಧ್ಯಕ್ಷೀಯ ಚುನಾವಣಾ ಪ್ರಣಾಳಿಕೆಯಲ್ಲಿ 1973ರಿಂದ ಜಾರಿಗೆ ಬಂದ ಗರ್ಭಪಾತ ಕಾನೂನನ್ನು ತೆಗೆದುಹಾಕುವ ಇಂಗಿತ ವ್ಯಕ್ತಪಡಿಸಿದ್ದರು. ಅದರಂತೇ ಅಧಿಕಾರಕ್ಕೆ ಬಂದ ಕೂಡಲೇ ಸುಪ್ರೀಂಕೋರ್ಟಿಗೆ 3 ಹೊಸ ಜಡ್ಜ್‌ಗಳ ನೇಮಕ ಮಾಡಿದ್ದರು. ಅದರ ಪರಿಣಾಮವಾಗಿಯೇ ಇತ್ತೀಚೆಗೆ 1973ರಲ್ಲಿ ರೋ ವರ್ಸಸ್ ವೇಡ್ ಕೇಸಿನ ಮೂಲಕ ನೀಡಲಾಗಿದ್ದ ಗರ್ಭಪಾತದ ಸ್ವಾತಂತ್ರ್ಯವನ್ನು ತಿರಸ್ಕರಿಸಿ ಪರಿಸ್ಥಿತಿಯನ್ನು ದಶಕಗಳಷ್ಟು ಹಿಂದಕ್ಕೆ ಒಯ್ಯಲಾಗಿದೆ.

ಅಮೆರಿಕದಲ್ಲಿ ಮೊದಲಿನಿಂದಲೂ ಗರ್ಭಪಾತ ಎಂಬುದು ಅತ್ಯಂತ ಚರ್ಚಾಹ ವಸ್ತು. ಸಂಪ್ರದಾಯವಾದಿಗಳು ಮತ್ತು ಲಿಬರಲ್ಸ್‌ಗಳ ನಡುವೆ ಈ ಚರ್ಚೆ ನಡೆಯುತ್ತಲೇ ಇರುತ್ತದೆ. ಸಂಪ್ರದಾಯವಾದಿಗಳು ಮಕ್ಕಳನ್ನು/ಗರ್ಭವನ್ನು ದೇವರ ಆಶೀರ್ವಾದ ಎಂದು ಬಗೆದರೆ, ಲಿಬರಲ್ಸ್ ’ಮಹಿಳೆಗೆ ಸಂವಿಧಾನಾತ್ಮಕವಾಗಿ ತನ್ನ ದೇಹದ ಮೇಲೆ ಸಂಪೂರ್ಣ ಹಕ್ಕಿದೆ’ ಎನ್ನುತ್ತಾರೆ.

ಅಮೆರಿಕದ ಸುಪ್ರೀಂಕೋರ್ಟ್ ಗರ್ಭಪಾತಕ್ಕೆ ಅವಕಾಶ ನೀಡಿದ ಹಳೆಯ ತೀರ್ಪನ್ನು ತೆಗೆದು ಹಾಕಿದ ಕೂಡಲೇ 13 ರಾಜ್ಯಗಳು ಈ ತೀರ್ಪನ್ನು ತಕ್ಷಣವೇ ಒಪ್ಪಿಕೊಂಡು ಅನುಷ್ಠಾನಕ್ಕೂ ತಂದವು. ಸಂಪ್ರದಾಯವಾದಿಗಳಾದ ರಿಪಬ್ಲಿಕನ್ ಬಹುಮತ ಇರುವ ರಾಜ್ಯಗಳು ಬಹುತೇಕ ಇದನ್ನು ಇರುವಂತೆಯೇ ಸ್ವೀಕರಿಸಿ ತಕ್ಷಣದಿಂದಲೇ ಜಾರಿಗೆ ತಂದವು.

ಅಮೆರಿಕದ ಮಹಿಳಾ ಹೋರಾಟಗಾರರು, ಲಿಬರಲ್ಸ್ ಹಾಗೂ ತೀರ್ಪಿನ ಬಗ್ಗೆ ಅಸಮಾಧಾನವಿರುವವರೆಲ್ಲ ’ನನ್ನ ದೇಹ ನನ್ನ ಸ್ವಾತಂತ್ರ್ಯ’ ಎಂಬ ಘೋಷಣೆಯೊಂದಿಗೆ ವಿಶ್ವದಾದ್ಯಂತ ತಮ್ಮ ಈ ನಿಲುವಿಗೆ ಸಮರ್ಥನೆಯನ್ನು ಮತ್ತು ಬೆಂಬಲವನ್ನು ಬಯಸುತ್ತಿದ್ದಾರೆ. ಒಟ್ಟಿನಲ್ಲಿ ಗರ್ಭಪಾತ ಎಂಬ ವಿಷಯ ವೈಜ್ಞಾನಿಕ ಮತ್ತು ವೈಯಕ್ತಿಕ ಪರಿಧಿಯನ್ನು ಬಿಟ್ಟು ಬೇರೆಯದೇ ಲೋಕ ಪ್ರವೇಶಿಸಿದೆ.

ಗರ್ಭಪಾತ ವಿರೋಧಿ ಧೋರಣೆಗಳು ಸ್ಪಷ್ಟವಾಗಿ ಕಾಣಲು ಪ್ರಾರಂಭವಾಗುವುದು 19ನೇ ಶತಮಾನದಲ್ಲಿ. ಯುರೋಪಿನ ದೇಶಗಳು ವಿಶ್ವದಾದ್ಯಂತ ತಮ್ಮ ವಸಾಹತುಗಳನ್ನು ಸ್ಥಾಪಿಸುತ್ತ ಹೋದಂತೆ ತಮ್ಮ ಕಾನೂನು ವ್ಯವಸ್ಥೆಯನ್ನೂ ಕೊಂಡೊಯ್ದರು. ಆ ಕಾನೂನುಗಳಲ್ಲಿ ಕೆಲವೊಂದು ಅವರ ಧಾರ್ಮಿಕ ವಿಚಾರಧಾರೆಗಳಿಗೆ ಪೂರಕವಾಗಿದ್ದು ಅದಕ್ಕೆ ಕಾನೂನಿನ ಚೌಕಟ್ಟನ್ನು ಒದಗಿಸಲಾಯಿತು. ಆದರೆ ಕ್ರಮೇಣ ಜನ ಹಾಗೂ ದೇಶಗಳ ಬದಲಾದ ರಾಜಕೀಯ ಮೌಲ್ಯಗಳ ಹಿನ್ನೆಲೆಯಲ್ಲಿ ಸುರಕ್ಷಿತ ಗರ್ಭಪಾತ ಎನ್ನುವ ಹೊಸ ತತ್ವ ರೂಪುಗೊಂಡಿತು. ಆದರೆ ಹೆಚ್ಚುಕಮ್ಮಿ ಕ್ರಿಶ್ಚಿಯಾನಿಟಿ ತರಹವೇ ಆದರೂ ಅದಕ್ಕಿಂತ ತೀವ್ರವಾಗಿ ಗರ್ಭಪಾತವನ್ನು ವಿರೋಧಿಸುವ ಧರ್ಮವೆಂದರೆ ಇಸ್ಲಾಂ. ಕೇವಲ ’ಟ್ಯುನಿಸಿಯಾ ಮತ್ತು ಯುಎಇ’ಗಳಲ್ಲಿ ಮಾತ್ರ 120 ದಿನಗಳ ಒಳಗಿನ ಗರ್ಭವನ್ನು ತೆಗೆಸಬಹುದು. ಇದನ್ನು ಹೊರತುಪಡಿಸಿ ಯಾವುದೇ ಇಸ್ಲಾಮಿಕ್ ದೇಶಗಳಲ್ಲಿ ಗರ್ಭಪಾತಕ್ಕೆ ಅವಕಾಶವಿಲ್ಲ. ಕೆಲವು ವರ್ಷಗಳ ಹಿಂದೆ ಐರ್ಲೆಂಡಿನಲ್ಲಿ ಭಾರತದ ದಂತ ವೈದ್ಯೆ ಸವಿತಾ ಹಾಲಪ್ಪನವರ್ ಎಂಬುವವರು ಗರ್ಭಧಾರಣೆಯಲ್ಲಿ ತೊಂದರೆಯಾಗಿ ಗರ್ಭಪಾತಕ್ಕೆ ಅರ್ಜಿ ಸಲ್ಲಿಸಿದಾಗ ಅದು ಇಂಥದೇ ಕಾನೂನಿನ ತೊಡಕುಗಳಿಗೆ ಸಿಕ್ಕು ಅದಕ್ಕೆ ಅವಕಾಶ ಸಿಗದೆ ಗರ್ಭದಲ್ಲಿ ನಂಜು ಹರಡಿ ಅವರು ಮೃತಪಟ್ಟ ಘಟನೆ ನಡೆದಿತ್ತು. ಇದು ಗರ್ಭಪಾತ ಕಾನೂನುಗಳನ್ನು ಬಹಳ ಚರ್ಚೆಗೆ ಒಳಪಡುವಂತೆ ಮಾಡಿತ್ತು. ಆದರೆ ಅದರ ಕಾನೂನು ಪರಿಹಾರಕ್ಕೆ ಬಹಳ ಕಾಲ ಬೇಕಾಯಿತು.

ಜಗತ್ತಿನ ಬಹುತೇಕ ದೇಶಗಳು ಕೆಲವೊಂದು ನಿರ್ದಿಷ್ಟ ಕಾರಣಗಳಿಗಾಗಿ ಗರ್ಭಪಾತಕ್ಕೆ ಅವಕಾಶ ನೀಡುತ್ತವೆ ಮತ್ತು ಕೆಲವು ನಿರ್ದಿಷ್ಟ ಅವಧಿಯವರೆಗೆ ನೀಡುತ್ತವೆ. ಅವುಗಳಲ್ಲಿ ಎಲ್ಲಕ್ಕಿಂತ ಮುಖ್ಯವಾದದ್ದು ಎಂದರೆ ತಾಯಿಯ ಜೀವಕ್ಕೆ ಅಪಾಯವಿದ್ದಲ್ಲಿ ಎಂಬುದು; ಇನ್ನುಳಿದಂತೆ ಹುಟ್ಟಲಿರುವ ಮಗುವಿನ ಅಂಗವೈಕಲ್ಯ, ಬೆಳವಣಿಗೆಯ ಕೊರತೆ, ಸಾಮಾಜಿಕ ಆರ್ಥಿಕ ಕಾರಣಗಳು ಮುಂತಾದವು.

ಆದರೆ ಈ ರೀತಿಯ ನಿರ್ಬಂಧಗಳು ಕಾನೂನುಬಾಹಿರ ಗರ್ಭಪಾತಕ್ಕೆ ದಾರಿ ಮಾಡಿಕೊಡುತ್ತವೆ ಎಂದು ಸರ್ವೆಗಳು ಹೇಳುತ್ತವೆ. ವಿಶ್ವ ಆರೋಗ್ಯ ಸಂಸ್ಥೆ ನಡೆಸಿದ ಸರ್ವೇ ಪ್ರಕಾರ ಯಾವುದೇ ಪ್ರತಿಬಂಧಗಳಿಲ್ಲದೆ ಗರ್ಭಪಾತಕ್ಕೆ ಅವಕಾಶವಿರುವ ಮತ್ತು ಅದನ್ನು ಅಪರಾಧಿತವಲ್ಲದ (Decriminalised) ಕ್ರಿಯೆ ಎಂದು ಪರಿಗಣಿಸಿರುವ ದೇಶಗಳಲ್ಲಿ ’ಗರ್ಭಪಾತದ ಸಮಯದಲ್ಲಿ ಮಹಿಳೆಯ ಸಾವಿನ ಸಂಖ್ಯೆ ’೦’ (ಶೂನ್ಯ) ಇದೆ. ಕೆನಡಾ ಅಂಥ ಒಂದು ದೇಶ. ಗರ್ಭಪಾತಕ್ಕೆ ಕಾನೂನಿನ ಸುರಕ್ಷೆ ಇರುವುದರಿಂದ ಅಲ್ಲಿ ಕದ್ದು ಮುಚ್ಚಿ ಗರ್ಭ ಎಸಗುವ ಅಥವಾ ಅನಾರೋಗ್ಯಕರವಾದ ಹಾಗೂ ಸುರಕ್ಷಿತವಲ್ಲದ ಕಾನೂನುಬಾಹಿರ ಗರ್ಭಪಾತ ಕೇಂದ್ರಗಳಿಗೆ ಹೋಗುವ ಪ್ರಮೇಯವೇ ಇರುವುದಿಲ್ಲ.

ಇನ್ನು ಭಾರತದ ಮಟ್ಟಿಗೆ ಹೇಳುವುದಾದರೆ ಇಲ್ಲಿಯೂ ಗರ್ಭಪಾತಕ್ಕೆ ಮೇಲೆ ಹೇಳಿದ ಕಾರಣಗಳ ರೀತಿಯಲ್ಲಿಯೇ ಅವಕಾಶವಿದೆ. ಗರ್ಭಧಾರಣೆಯ ಮೊದಲ ಕೆಲವಾರಗಳಲ್ಲಿ ನಿರ್ದಿಷ್ಟವಾದ ಕಾರಣಗಳಿದ್ದರೆ ಗರ್ಭಪಾತವನ್ನು ವೈದ್ಯರ ಮೇಲ್ವಿಚಾರಣೆಯಲ್ಲಿ ಮಾಡಬಹುದು. 20 ವಾರಗಳಿಗಿಂತ ಹೆಚ್ಚಿದ್ದರೆ ನ್ಯಾಯಾಲಯದ ಅನುಮತಿಯಿಂದಲೇ ಮಾಡಬೇಕು.

ಇಲ್ಲಿ ಎಲ್ಲಕ್ಕಿಂತ ಮುಖ್ಯವಾಗಿ ಏಳುವ ಪ್ರಶ್ನೆ ಎಂದರೆ ಈ ಎಲ್ಲ ಪ್ರಕ್ರಿಯೆಲ್ಲಿ ಗರ್ಭ ಧರಿಸಿದ ಮಹಿಳೆಯ ಪಾತ್ರ ಏನು? ಮೂಲಭೂತ ಸ್ವಾತಂತ್ರ್ಯ ಎಂಬ ಪರಿಕಲ್ಪನೆಯಲ್ಲಿ ಅವಳಿಗೆ ತನ್ನ ದೇಹದ ಮೇಲೆ ಹಕ್ಕಿಲ್ಲವೆ? ಎಂಬುದು.

ಇನ್ನೊಂದು ಪ್ರಶ್ನೆ, ಕೇವಲ ಗರ್ಭಪಾತಕ್ಕೆ ಅವಕಾಶ ಇದೆ ಎಂಬ ಕಾರಣಕ್ಕೆ ಜನ ಅನವಶ್ಯಕವಾಗಿ ಗರ್ಭಪಾತ ಮಾಡಿಸುತ್ತಾರಾ? ಎಂಬುದು.

ಈ ಎರಡನೇ ಪ್ರಶ್ನೆಯನ್ನೇ ಮೊದಲು ನಮ್ಮ ದೇಶದ ಹಿನ್ನೆಲೆಯಲ್ಲಿ ನೋಡಿದರೆ “ಹೌದು ದುರುಪಯೋಗ ಆಗುತ್ತದೆ” ಎನ್ನಬಹುದು. ಗಂಡು ಮಕ್ಕಳಿಂದಲೇ ವಂಶೋದ್ಧಾರ ಎನ್ನುವ ಜನರ ಮಧ್ಯೆ ಹೆಣ್ಣು ಭ್ರೂಣವನ್ನು ತೆಗೆಸುವ ಲಕ್ಷಾಂತರ ಪ್ರಕರಣಗಳು ನಮ್ಮ ಎದುರಿಗಿವೆ. ಗರ್ಭಧರಿಸಿದ ಮಹಿಳೆಯ ಆರೋಗ್ಯ ಕೆಲವು ಬಾರಿ ಪ್ರಾಣಕ್ಕೆ ಕುತ್ತು ಉಂಟಾಗುವ ಸಂದರ್ಭಗಳೂ ಇವೆ. ಭಾರತದಂತಹ ದೇಶದಲ್ಲಿ ಇದಕ್ಕೆ ಕಾನೂನಿನ ಸ್ಪಷ್ಟ ಚೌಕಟ್ಟು ಮತ್ತು ಪರಿಭಾಷೆಯ ಅಗತ್ಯ ಖಂಡಿತವಾಗಿಯೂ ಇದೆ. ಇನ್ನು ಮೊದಲನೆಯ ಪ್ರಶ್ನೆಗೆ ಬಂದರೆ ಮಹಿಳೆಗೆ ಖಂಡಿತವಾಗಿಯೂ ಈ ಮೇಲೆ ಹೇಳಲಾದ ಕಾರಣಗಳ ಹೊರತಾಗಿಯೂ ತನ್ನ ದೇಹದ ಮೇಲೆ ಸ್ವಾತಂತ್ರ್ಯ ಹೊಂದುವ ಅಗತ್ಯವಿದೆ. ಗರ್ಭಧಾರಣೆಯನ್ನು ಕೇವಲ ಪುರುಷಪ್ರಧಾನ ವ್ಯವಸ್ಥೆಯ ಕಣ್ಣಿನಿಂದ ನೋಡುವುದನ್ನು ಬಿಟ್ಟು ಬದಲಾಗುತ್ತಿರುವ ಕಾಲಮಾನದಲ್ಲಿ ಮಹಿಳೆಯ ಅಗತ್ಯ ಮತ್ತು ಮನಸ್ಥಿತಿಗಳ ಹಿನ್ನೆಲೆಯಲ್ಲಿ ವಿಶ್ಲೇಷಿಸುವ ಅಗತ್ಯ ಹಿಂದೆಗಿಂತಲೂ ಹೆಚ್ಚಿದೆ.,

ರಾಜಲಕ್ಷ್ಮಿ ಅಂಕಲಗಿ

ರಾಜಲಕ್ಷ್ಮಿ ಅಂಕಲಗಿ
ಹೈಕೋರ್ಟ್ ವಕೀಲರು, ಹಲವು ಜನಪರ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದಾರೆ. ಕಾನೂನು ವಿಷಯಗಳ ಮೇಲೆ ಹಲವು ಲೇಖನಗಳನ್ನು ಪ್ರಕಟಿಸಿದ್ದಾರೆ.


ಇದನ್ನೂ ಓದಿ: ತಂದೆ ಮತ್ತು ಮೂವರು ಹೆಣ್ಣುಮಕ್ಕಳು; ದ್ವೇಷದ ರಂಗಭೂಮಿಯಲ್ಲಿ ಒಂದು ಹಳೆಯ ಕಥೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಭಾರತ-ಅಮೆರಿಕ ವ್ಯಾಪಾರ ಒಪ್ಪಂದವು ದೇಶದ ಸಾರ್ವಭೌಮತ್ವದ ಮೇಲಿನ ದಾಳಿ’: ಸಿಪಿಎಂ

ಭಾರತ-ಅಮೆರಿಕ ವ್ಯಾಪಾರ ಒಪ್ಪಂದವು ದೇಶದ ಸಾರ್ವಭೌಮತ್ವದ ಮೇಲಿನ ದಾಳಿಯಾಗಿದೆ ಎಂದು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ-ಮಾರ್ಕ್ಸಿಸ್ಟ್ (ಸಿಪಿಎಂ) ಭಾನುವಾರ ಹೇಳಿದೆ. ಕೇಂದ್ರವನ್ನು ಟೀಕಿಸಿದ ಪಕ್ಷವು, ಅಮೆರಿಕದೊಂದಿಗಿನ ಒಪ್ಪಂದವು "ಬಿಜೆಪಿ ನೇತೃತ್ವದ ಸರ್ಕಾರದ ನಾಚಿಕೆಗೇಡಿನ ಶರಣಾಗತಿ"...

ತೆಲಂಗಾಣ ಎಫ್‌ಎಸ್‌ಎಲ್‌ನಲ್ಲಿ ಬೆಂಕಿ : ಸಾಕ್ಷ್ಯ ನಾಶದ ಶಂಕೆ ವ್ಯಕ್ತಪಡಿಸಿದ ಬಿಆರ್‌ಎಸ್‌

ಹೈದರಾಬಾದ್‌ನ ನಾಂಪಲ್ಲಿಯಲ್ಲಿರುವ ತೆಲಂಗಾಣ ರಾಜ್ಯ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ (ಟಿಎಸ್‌ಎಫ್‌ಎಸ್‌ಎಲ್‌) ಶನಿವಾರ (ಫೆ.7) ಬೆಂಕಿ ಅವಘಡ ಸಂಭವಿಸಿದ್ದು, ಪ್ರತಿಪಕ್ಷ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್‌) ಪ್ರಮುಖ ಪ್ರಕರಣಗಳ ಸಾಕ್ಷ್ಯ ನಾಶದ ಶಂಕೆ ವ್ಯಕ್ತಪಡಿಸಿದೆ....

ಬಿಹಾರದ ದರ್ಭಾಂಗದಲ್ಲಿ ಆರು ವರ್ಷದ ಬಾಲಕಿಯ ಹತ್ಯೆ: ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಶಂಕೆ 

ಪಾಟ್ನಾ: ಬಿಹಾರದ ದರ್ಭಾಂಗಾ ಪಟ್ಟಣದ ವಿಶ್ವವಿದ್ಯಾಲಯ ಪೊಲೀಸ್ ಠಾಣೆ ವ್ಯಾಪ್ತಿಯ ಕೊಳದ ಬಳಿ ಭಾನುವಾರ ಆರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಮೂಲಗಳ ಪ್ರಕಾರ, ಶನಿವಾರ ಸಂಜೆ...

‘ರಾಜಕೀಯ ಪ್ರೇರಿತ’: ಪೌರತ್ವಕ್ಕೂ ಮುನ್ನವೇ ಮತದಾರರ ಪಟ್ಟಿಯಲ್ಲಿ ಹೆಸರಿತ್ತು ಎಂಬ ಆರೋಪ ನಿರಾಕರಿಸಿದ ಸೋನಿಯಾ ಗಾಂಧಿ

ಭಾರತದ ನಾಗರಿಕತ್ವ ಪಡೆಯುವ ಮೂರು ವರ್ಷಗಳ ಮೊದಲೇ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲಾಗಿತ್ತು ಎಂಬ ಆರೋಪದ ಮೇಲೆ ತನ್ನ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಕೋರಿರುವ ಅರ್ಜಿಯು 'ಸಂಪೂರ್ಣ ರಾಜಕೀಯ ಪ್ರೇರಿತ, ಕಾನೂನು ಪ್ರಕ್ರಿಯೆಯ...

ರಾಜ್ಯದಲ್ಲಿ ಮಂಜೂರಾದ ಯೋಜನೆಗಳಿಗೆ ಹಣ ಬಿಡುಗಡೆ ಮಾಡುವಂತೆ, ರೈಲು ಯೋಜನೆ ತ್ವರಿತಗೊಳಿಸುವಂತೆ ಪ್ರಧಾನಿ ಮೋದಿಗೆ ಪತ್ರ ಬರೆದ ಸ್ಟಾಲಿನ್

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ರಾಜ್ಯದಲ್ಲಿ ಮಂಜೂರಾದ ಯೋಜನೆಗಳಿಗೆ ಅಗತ್ಯವಿರುವ ಹಣವನ್ನು ಬಿಡುಗಡೆ ಮಾಡುವ ಮೂಲಕ ಮತ್ತು ಸ್ಥಗಿತಗೊಂಡಿರುವ ಯೋಜನೆಗಳನ್ನು ಪುನರುಜ್ಜೀವನಗೊಳಿಸುವ...

ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ವಿರೋಧಿಸಿದ ರೈತ ಸಂಘಟನೆಗಳು : ರಾಷ್ಟ್ರವ್ಯಾಪಿ ಪ್ರತಿಭಟನೆ ಘೋಷಣೆ

ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ), ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್‌) ಸೇರಿದಂತೆ ಹಲವಾರು ರೈತ ಸಂಘಟನೆಗಳು ಶನಿವಾರ (ಫೆ.7) ಭಾರತ-ಅಮೆರಿಕ ವ್ಯಾಪಾರ ಒಪ್ಪಂದವನ್ನು ವಿರೋಧಿಸಿದ್ದು, ಫೆಬ್ರವರಿ 12ರಂದು ರಾಷ್ಟ್ರವ್ಯಾಪಿ ಪ್ರತಿಭಟನೆ ಘೋಷಿಸಿವೆ. ಈ...

‘ನಮ್ಮ ಹಟ್ಟಿ’ ಕೇವಲ ದೊರೈರಾಜು ಅವರ ಕಥೆಯಲ್ಲ, ಒಂದು ಸಾಂಸ್ಕೃತಿಕ ಲೋಕವನ್ನೇ ಕಟ್ಟಿಕೊಡುವ ಕೃತಿ’: ಕೋಟಿಗಾನಹಳ್ಳಿ ರಾಮಯ್ಯ 

‘ಸಾಮಾನ್ಯವಾಗಿ ಆತ್ಮಕಥನಗಳು ಅಂದರೆ ಒಬ್ಬ ವ್ಯಕ್ತಿಯ ವಿವರಗಳು ಬಿಚ್ಚಿಕೊಳ್ಳುತ್ತಾ ಹೋಗುತ್ತವೆ. ಆದರೆ ‘ನಮ್ಮ ಹಟ್ಟಿ’ ಆತ್ಮಕಥಾನಕದಲ್ಲಿ ಒಂದು ಹಟ್ಟಿಯ ವಿವರಗಳು ಬಿಚ್ಚಿಕೊಳ್ಳುತ್ತಾ ಹೋಗುತ್ತವೆ. ಅಲ್ಲಿರುವ ಅನೇಕ ಕುಶಲ ಕರ್ಮಿಗಳು, ಹಾಗೂ ವಿಶಿಷ್ಟ ಲೋಕವೇ...

ಪ. ಬಂಗಾಳ ಎಸ್‌ಐಆರ್ | ಮೈಕ್ರೋ ಅಬ್ಸರ್ವರ್ಸ್ ಬದಲಿಗೆ 8,505 ಗ್ರೂಪ್ ಬಿ ಅಧಿಕಾರಿಗಳನ್ನು ಒದಗಿಸುತ್ತೇವೆ : ಚು. ಆಯೋಗಕ್ಕೆ ತಿಳಿಸಿದ ಮಮತಾ ಸರ್ಕಾರ

ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯಕ್ಕಾಗಿ ಮೈಕ್ರೋ ಅಬ್ಸರ್ವರ್ಸ್ ಬದಲಿಗೆ ತನ್ನ ಅಧೀನದ ಸುಮಾರು 8,505 ಗ್ರೂಪ್ ಬಿ ಅಧಿಕಾರಿಗಳನ್ನು ನಿಯೋಜಿಸಲು ಸಿದ್ಧವಿರುವುದಾಗಿ ಪಶ್ಚಿಮ ಬಂಗಾಳ ಸರ್ಕಾರ ಕೇಂದ್ರ...

ಸಿಎಂ ಶರ್ಮಾ ಮುಸ್ಲಿಮರಿಗೆ ಗುಂಡಿಕ್ಕಿದಂತೆ ತೋರಿಸುವ ವಿಡಿಯೋ ಹಂಚಿಕೊಂಡ ಅಸ್ಸಾಂ ಬಿಜೆಪಿ!

ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮುಸ್ಲಿಮರಿಗೆ ಗುಂಡಿಕ್ಕಿದಂತೆ ತೋರಿಸುವ ವಿಡಿಯೋವನ್ನು ಅಸ್ಸಾಂ ಬಿಜೆಪಿಯ ರಾಜ್ಯ ಘಟಕ ತನ್ನ ಅಧಿಕೃತ ಎಕ್ಸ್ ಹ್ಯಾಂಡಲ್‌ನಲ್ಲಿ ಶನಿವಾರ (ಫೆ.7) ಹಂಚಿಕೊಂಡಿತ್ತು. ತೀವ್ರ ಆಕ್ರೋಶ ವ್ಯಕ್ತವಾದ ಬಳಿಕ ಅದನ್ನು...

ಯಾವುದೇ ಕಾರಣಕ್ಕೂ ಕೇರಳದಲ್ಲಿ ಎನ್‌ಪಿಆರ್ ಜಾರಿಯಾಗುವುದಿಲ್ಲ : ಸಿಎಂ ಪಿಣರಾಯಿ ವಿಜಯನ್

ಕೇರಳದಲ್ಲಿ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್) ಯನ್ನು ಜಾರಿಗೆ ತರಲು ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಶನಿವಾರ (ಫೆ.7) ಪುನರುಚ್ಚರಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿರುವ ಅವರು, "ಯಾವುದೇ ಸಂದರ್ಭದಲ್ಲೂ...