Homeಅಂಕಣಗಳುಪುಸ್ತಕ ಪರಿಚಯ; 'ನೀಲವ್ವ': ಆಗುವಿಕೆಯನ್ನು ತೋರುವ ಕತೆಗಳು

ಪುಸ್ತಕ ಪರಿಚಯ; ‘ನೀಲವ್ವ’: ಆಗುವಿಕೆಯನ್ನು ತೋರುವ ಕತೆಗಳು

- Advertisement -
- Advertisement -

’ನೀಲವ್ವ’ ಸಂಕಲನದ ಕತೆಗಳು ಒಂದು ಸಹಜ ಮಾನವ ಸಂಬಂಧ, ಜೀವಸಂಬಂಧಕ್ಕೂ ಎಡೆಯಿಲ್ಲದಿರುವ ಬದುಕಿನ ವಿಕಾರವನ್ನು ಚಿತ್ರಿಸುತ್ತಲೇ, ಇದಕ್ಕೆ ಮದ್ದರೆಯುವ ಜೀವಸೆಲೆಯನ್ನು ಹುಡುಕುತ್ತಾ ಹೋಗುತ್ತದೆ. ’ನೀಲಿ’ ಎನ್ನುವುದು ಅರಿವು ಮತ್ತು ಎಚ್ಚರ ಸಂಕೇತದಂತೆ ಕಾಣುತ್ತದೆ. ಇಲ್ಲಿನ ಕತೆಗಳಿಗೆ, ನೇರ ಪ್ರತಿರೋಧಕ್ಕಿಂತ ಹೆಚ್ಚಾಗಿ ಆತ್ಮಸಾಕ್ಷಿಯನ್ನು ಕಲಕುವ ಗುಣವಿದೆ. ಬದಲಾವಣೆ, ಕ್ರಾಂತಿಯ ದಾರಿಯ ಹಾಗೆಯೇ ನಿರಂತರ ಎಚ್ಚರದ, ಸಾವಧಾನದ ಹಾದಿಯಿದೆ. ಈ ಹಾದಿಯಲ್ಲಿ ನೋವಿದೆ, ಆಕ್ರೋಶ ಇದೆ, ಎಚ್ಚರ ಇದೆ, ವಿವೇಕ ಇದೆ, ಬದಲಾಗಬಲ್ಲದೆಂಬ ಭರವಸೆ ಇದೆ. ‘ನೀಲವ್ವ’ ಸಂಕಲನದ ಕತೆಗಳು ನಮ್ಮನ್ನು ಆವರಿಸಿಬಿಡುವುದು ಹೀಗೇ.

ಇಲ್ಲಿ ಜಡೆಪ್ಪ, ಹುಲುಗ, ಸುಂಕ, ಭರಮಪ್ಪನ ಮಗ, ಉಮಾಶಂಕರ್ ಮುಂತಾದ ಪಾತ್ರಗಳು ತಾವು ಅನುಭವಿಸುತ್ತಿರುವ ಅಪಮಾನ, ಹಸಿವು, ನೋವುಗಳಿಂದ ಅನೇಕ ಸವಾಲುಗಳಿಗೆ ಎದುರಾಗುತ್ತಾ ಹೊಸಬದುಕಿನತ್ತ ಮುಖಮಾಡುತ್ತವೆ. ಇದು ಅವರ ವೈಯಕ್ತಿಕ ಬಿಡುಗಡೆಯ ಹಾದಿಯಷ್ಟೇ ಅಲ್ಲ ಅಥವಾ ಕೇವಲ ಅವರ ಸಮುದಾಯದ ಬಿಡುಗಡೆಯ ದಾರಿಯಷ್ಟೇ ಅಲ್ಲ; ಬದಲಿಗೆ ಒಟ್ಟು ಸಮಾಜವೇ ತನಗಂಟಿದ ಕ್ರೌರ್ಯದಿಂದ ಮುಕ್ತಗೊಳ್ಳುವ ದಾರಿಯೂ ಆಗಿದೆ. ‘ಒಂದು ಹೆಜ್ಜೆ’ ಕತೆಯಲ್ಲಿ ಬರುವ ಈಶ್ವರ್ ಸರ್, ‘ತೆರೆಮರೆಯ ಯೋಧ’ದ ದಿನೇಶ್, ‘ದೇವರಬಾವಿ’ಯ ವೈದ್ಯ ಇವರೆಲ್ಲ ತಮ್ಮನ್ನು ಕವಿದುಕೊಂಡಿದ್ದ ಮೌಢ್ಯದ ಪೊರೆ ಹರಿದು ಮಿಡಿಯುವುದು ಇದನ್ನು ಸಾಬೀತುಪಡಿಸುತ್ತದೆ. ‘ನೀಲವ್ವ’ಳ ಪ್ರಖರ ನ್ಯಾಯಪ್ರಜ್ಞೆ, ದೌರ್ಜನ್ಯವನ್ನು ಎದುರಾಗಬೇಕಾದ ಬಗೆಯನ್ನು ಕಾಣಿಸುವ ರೀತಿ ವಿಶಿಷ್ಟವಾಗಿದೆ. ಹೀಗಾಗಿ ಇಲ್ಲಿನ ಕತೆಗಳು ಚಲನೆಯನ್ನು, ಆಗುತ್ತಿರುವ ಬಗೆಯನ್ನು ಹಿಡಿದಿಡುವ ಕತೆಗಳಾಗಿ ನಮ್ಮೊಳಗನ್ನೂ ಕಲಕಿ ಪ್ರಶ್ನಿಸಿ ಜೊತೆಗೆ ಒಯ್ಯುತ್ತವೆ.

ಬದಲಾಗುತ್ತಿರುವ ಪರಿಸರದಲ್ಲಿ ಶೋಷಣೆಯ ಆಯಾಮಗಳೂ ಬದಲಾಗಿರುವುದನ್ನು ಇಲ್ಲಿನ ಕೆಲವು ಕತೆಗಳು ಸೂಕ್ಷ್ಮವಾಗಿ ಹಿಡಿದಿಟ್ಟಿವೆ. ’ಒಂದು ಹೆಜ್ಜೆ’ ಕತೆಯ ಉಮಾಶಂಕರ್, ವಿದ್ಯೆ, ಉದ್ಯೋಗ ಗಳಿಸುವ ಮೂಲಕ ಹಿಂದಿನ ತಲೆಮಾರಿಗಿಂತ ಭಿನ್ನವಾಗಿದ್ದಾನೆ. ಜೊತೆಗೆ ಅದೇ ತಾರತಮ್ಯ ಹೊಸ ರೂಪದಲ್ಲಿ ಅವನನ್ನು ಹಿಂಡುತ್ತಿದೆ. ಇದನ್ನು ತನ್ನದೇ ಆದ ರೀತಿಯಲ್ಲಿ ಎದುರಿಸುವ ಉಮಾಶಂಕರ್ ಹಾಗೂ ಅವನ ತಾಯಿಯ ನಡೆ ನಾವು ಈಗ ತಾರತಮ್ಯದ ನೆಲೆಗಳನ್ನು ಹೊಸ ಬಗೆಯಲ್ಲಿ ಎದುರಾಗಬೇಕು ಎನ್ನುವುದನ್ನು ಸೂಚಿಸುವಂತಿದೆ. ಶೋಷಕರ ಹೊಸ ಮುಖವಾಡಗಳಂತೆಯೇ ಶೋಷಣೆಯನ್ನು ರಮ್ಯಗೊಳಿಸುವ ಪರಿಭಾಷೆಯೂ ನಮ್ಮ ನಡುವೆ ಇದೆ. ‘ತೆರೆಮರೆಯ ಯೋಧ’ ಕತೆಯ ಕೊನೆಯಲ್ಲಿ ಯೋಧ ದಿನೇಶ್ ಪೌರಕಾರ್ಮಿಕನಾದ ಭರಮಪ್ಪನನ್ನು ‘ಕಾಣದ ಶತ್ರುಗಳನ್ನು ನಿವಾರಿಸುವ ತೆರೆಮರೆಯ ಯೋಧ’ ಎಂದು ಅಭಿನಂದಿಸಿದ ಸಂದರ್ಭಲ್ಲಿ ಭರಮಪ್ಪ ಮೈಕ್ ತೆಗೆದುಕೊಂಡು ‘ನನ್ನ ಮಗನಿಗೆ ಕೆಲಸ ಸಿಕ್ಕೈತೆ. ನಾಳೆಯಿಂದ ಈ ಕೆಲ್ಸ ಮಾಡಕ್ಕಿಲ್ಲ’ ಎನ್ನುವುದು ನಮ್ಮೆಲ್ಲರ ಒಳಗನ್ನೂ ಚುಚ್ಚುತ್ತದೆ.

ವಿಕಾಸ್‌ ಆರ್‌.ಮೌರ್ಯ

ಸಂಕಲನದಲ್ಲಿ ನಮ್ಮನ್ನು ಹಿಡಿದಿಡುವ ಇನ್ನೊಂದು ಕತೆ ‘ಚಿನ್ನದ ಕನ್ನಡಕ’. ಅಂಬೇಡ್ಕರ್ ಜಯಂತಿಯಂದು ಅವರ ಮೂರ್ತಿಗೆ ಚಿನ್ನದ ಕನ್ನಡಕ ತೊಡಿಸುವ ಸಂಭ್ರಮ, ಮೆರವಣಿಗೆಯ ಹಿನ್ನೆಲೆಯಲ್ಲಿ ಈ ಸಂಭ್ರಮದ ಅಸಂಗತತೆ, ಬದಲಾಗದ ಬದುಕುಗಳನ್ನು ಕಾಣಿಸುತ್ತಾ ಹೋಗುತ್ತದೆ. ಆಶಯ ಮತ್ತು ವಸ್ತುಸ್ಥಿತಿಗಳ ನಡುವಣ ಬಿರುಕನ್ನು ಕತೆಗಾರ ವಿಕಾಸ್ ಶಕ್ತವಾಗಿ ಹಿಡಿದಿಡುತ್ತಾ ಹೋಗುತ್ತಾರೆ. ಅಂಬೇಡ್ಕರ್ ಜಯಂತಿಗೆ ಶುಭಕೋರುವ ಬ್ಯಾನರ್‌ನಲ್ಲಿ ಮುಂಡವಿಲ್ಲದ ರುಂಡಗಳಂತೆ ಕಾಣುವ ಶುಭಕೋರುವವರ ಚಿತ್ರಗಳು, ಸ್ವಾಧೀನ ಕಳೆದುಕೊಂಡ ನೀಲವ್ವ, ಭಾರ ಕಳೆದುಕೊಳ್ಳದ ಊಟದ ಬುತ್ತಿ, ಜನರ ಮುಗಿಯದ ನೋವಿನ ನಡುವೆಯೇ ಅಂಬೇಡ್ಕರ್‌ಗೆ ಹಾಕಿದ ಚಿನ್ನದ ಕನ್ನಡಕ ಮುಂತಾದ ಪ್ರತಿಮೆಗಳು ವರ್ತಮಾನದ ವ್ಯಂಗ್ಯವನ್ನು ಸಮರ್ಥವಾಗಿ ಹಿಡಿದಿಟ್ಟಿವೆ. ‘ತಲೆ ತಲಾಂತರ’ ಕತೆ ಬೇರುಗಳನ್ನು ಕಳೆದುಕೊಂಡ ಸಮುದಾಯ, ತನ್ನ ಅಧೀನತೆಯನ್ನು ತೊರೆದು ಮೂಲಸಂಸ್ಕೃತಿಗೆ ಮರಳುವ ಮೂಲಕ ನೀಗಿಕೊಳ್ಳುವ ಹಾದಿ ತೋರುತ್ತದೆ.

ಹೊಸಪಟ್ಟುಗಳ ಮೂಲಕ ಶೋಷಣೆಯ ಹಿಡಿತವನ್ನು ಬಿಗಿಮಾಡುತ್ತಿರುವ ವ್ಯವಸ್ಥೆ, ತನ್ನ ಹಿತಾಸಕ್ತಿ ಕಾಪಾಡಿಕೊಳ್ಳುವುದಕ್ಕೆ ಸುಂಕ ಬಾವಿಗೆ ಹಾರಿ ಶಾರದೆಯ ಮಗುವನ್ನು ಕಾಪಾಡಲು ಅನುವು ಮಾಡಿಕೊಟ್ಟು ಅದಕ್ಕೆ ಪ್ರಾಯಶ್ಚಿತ್ತವನ್ನೂ ಮಾಡುತ್ತದೆ. ಅದೇ ಸುಂಕನನ್ನು ಮನುಷ್ಯನೆಂದು ನೋಡಲು ನಿರಾಕರಿಸುತ್ತದೆ. ಎಲ್ಲವನ್ನೂ ಸಂಕೇತಗಳನ್ನಾಗಿಸಿಕೊಂಡು ಅವುಗಳ ವಿಜೃಂಭಣೆಯಲ್ಲೇ ಆಶಯಗಳನ್ನು ಮರೆತ ಜನಸಮೂಹವೂ ಇದೆ. ಈ ಎಲ್ಲದರ ನಡುವೆ ಸುಂಕ, ಗಂಟಪ್ಪ, ನೀಲವ್ವ ಎಲ್ಲ ನೋವುಗಳನ್ನು ನುಂಗಿಯೂ ಎಲ್ಲೂ ಎಚ್ಚರ ಕಳೆದುಕೊಳ್ಳುವುದಿಲ್ಲ. ‘ತೆರೆಮರೆಯ ಯೋಧ’ ಕತೆಯಲ್ಲಿ ಭರಮಪ್ಪನ ಮಗ ಓದಿ ಕೆಲಸ ತೆಗೆದುಕೊಳ್ಳುವುದು, ‘ಒಂದು ಹೆಜ್ಜೆ’ ಕತೆಯಲ್ಲಿ ಪೂರ್ಣಿಮಾ ಮೇಡಂಗೆ ಉಮಾಶಂಕರ್ ಹೋಳಿಗೆಯ ಬಾಕ್ಸ್ ಕೊಡುವುದು, ‘ದೇವರ ಬಾವಿ’ ಕತೆಯಲ್ಲಿ ಶಾರದೆ ಸುಂಕರಿಗೆ ನೆರವಾಗುವ ವೈದ್ಯರು ಎಲ್ಲದರ ಮಧ್ಯೆ ಭರವಸೆಯಂತೆ ಕಾಣುತ್ತಾರೆ.

ಬೆಳಗಿನ ವಾಕ್‌ಗೆ ಉಳ್ಳವರು ನಡೆದು ಬರುವ ಬಗೆಯನ್ನು ‘ದಢೂತಿ ದೇಹಗಳು ನೀರು ತುಂಬಿದ ಪ್ಲಾಸ್ಟಿಕ್ ಕವರುಗಳಂತೆ ತುಳುಕುತ್ತಾ ನಡೆದು ಬರುತ್ತಿದ್ದವು’ ಎಂದು ವಿಕಾಸ್ ಬರೆಯುತ್ತಾರೆ. ಜಡೆಪ್ಪ ಪಾಟಿಚೀಲ ಹೊತ್ತು ಬರುತ್ತಿರುವುದನ್ನು ನೋಡಿದ ರಮ್ಯ ಮತ್ತು ಲಚುಮಿಯ ಮೊಗಗಳು ‘ಬಾಡು ಕಂಡಂತಾದವು’ ಎಂಬ ಸೊಗಸಾದ ಹೋಲಿಕೆ ನೀಡುತ್ತಾರೆ. ಕತೆಗಳ ಹೆಣಿಗೆ ಅಲ್ಲಲ್ಲಿ ಸಡಿಲವಾದಂತೆನಿಸಿದರೂ ಸುತ್ತಲಿನ ಪರಿವೇಶವನ್ನು ಕತೆಗೆ ಪೂರಕವಾಗಿ ಕಟ್ಟಿಕೊಡುವ ಪ್ರಯತ್ನದಿಂದ ಇವರು ಇದನ್ನು ಮೀರುವ ಯತ್ನದಲ್ಲಿದ್ದಾರೆ.

ವಿಕಾಸ್ ಮೌರ್ಯ ಅವರದು ಒಬ್ಬ ಹೋರಾಟಗಾರನ ಮನಸ್ಸು. ಅವರು ಸುತ್ತಲಿನ ಪರಿಸರವನ್ನು ನೋಡುವ ಬಗೆ, ದಾಖಲಿಸುವ ಬಗೆ ಒಂದು ಸೃಜನಶೀಲ ಅಭಿವ್ಯಕ್ತಿಯಾಗಿರುವಂತೆಯೇ, ಇದು ಯಾಕೆ ಇನ್ನೂ ಹೀಗಿದೆ, ಬದಲಾಗುವ ಬಗೆಯೆಂತು ಎಂಬ ವ್ಯಗ್ರತೆಯನ್ನು ಎಳೆಯಾಗಿ ಹೊಂದಿದೆ. ಹೀಗಾಗಿ ಇವರ ಕತೆಗಳ ಆಶಯ ನಿಚ್ಚಳವಾಗಿದೆ. ವಿಕಾಸ್ ಅವರೊಳಗಿನ ತಲ್ಲಣ, ವ್ಯಗ್ರತೆ ಬರಹಕ್ಕೆ ಒಂದು ಶಕ್ತಿ ಕೊಟ್ಟಹಾಗೆಯೇ, ಹೇಳುವ ಧಾವಂತ ಮೂಡಿಸುತ್ತವೆ. ಕತೆಯ ಮೂಲಕ ಕಾಣಿಸುವುದಕ್ಕಿಂತ ಒಳಗೇ ಕುದಿಯುತ್ತಿರುವ ವಿಚಾರವನ್ನು ಹೊರಹಾಕಬೇಕು ಎಂಬ ತುಡಿತದಲ್ಲಿ ಇಲ್ಲಿನ ಕತೆಗಳು ಮೂಡಿವೆ. ಹೀಗಾಗಿ ಇಲ್ಲಿನ ಪಾತ್ರಗಳ ರೂಪುರೇಷೆ ಸ್ಪಷ್ಟ. ಬದುಕಿನ ಸಂಕೀರ್ಣತೆ, ಅನಿರೀಕ್ಷಿತತೆ ಇಲ್ಲಿ ಕಾಣುವುದಿಲ್ಲ. ಆದರೆ ಇಷ್ಟೆಲ್ಲ ಹೋರಾಟಗಳ ನಡುವೆಯೂ ಅವೇ ವಿಕಾರಗಳು ಎಲ್ಲೆಡೆಯಲ್ಲಿಯೂ ಮತ್ತೆ ಮತ್ತೆ ಢಾಳಾಗಿ ಕಾಣುತ್ತಿರುವ ಸಂದರ್ಭದಲ್ಲಿ ಅದು ಒಳಗೇ ಚುಚ್ಚಿದ ಮುಳ್ಳಿನಂತೆ ಬಾಧಿಸುವುದರಿಂದ ಬಿಡುಗಡೆಯಿಲ್ಲ. ಬದುಕಿನಲ್ಲಿ, ಸಮಾಜದಲ್ಲಿ ಮಾಯದ ಗಾಯಗಳಿರುವವರೆಗೂ ಬರೆಯುತ್ತಲೇ ಇರಬೇಕಾಗುತ್ತದೆ.

ಡಾ. ಭಾರತೀದೇವಿ.ಪಿ

ಡಾ. ಭಾರತೀದೇವಿ.ಪಿ
ಭಾರತೀದೇವಿ ಅವರು ಹೊಳೆನರಸೀಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕಿಯಾಗಿದ್ದು ಈ ಸದ್ಯ ಹಾಸನದಲ್ಲಿ ನೆಲೆಸಿದ್ದಾರೆ.


ಇದನ್ನೂ ಓದಿ: ಪುಸ್ತಕ ವಿಮರ್ಶೆ; ನಡೆ-ನುಡಿಗಳಲ್ಲಿ ಪ್ರಖರ ಬದ್ಧತೆ ತೋರಿದ ಹೋರಾಟಗಾರನ ಸಾಂಸ್ಕೃತಿಕ ಕಥನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...