Homeಕರ್ನಾಟಕಕತ್ತಿಯ ಅಲಗಿನ ಮೇಲೆ; ಕರ್ನಾಟಕದಲ್ಲಿ ವಸ್ತು-ವಿಷಯಗಳು, ಆಕ್ಷೇಪಗಳು ಮತ್ತು ಉದ್ದೇಶಗಳು

ಕತ್ತಿಯ ಅಲಗಿನ ಮೇಲೆ; ಕರ್ನಾಟಕದಲ್ಲಿ ವಸ್ತು-ವಿಷಯಗಳು, ಆಕ್ಷೇಪಗಳು ಮತ್ತು ಉದ್ದೇಶಗಳು

- Advertisement -
- Advertisement -

ಕರ್ನಾಟಕದಲ್ಲಿ ಇರುವ (ಇಂಗ್ಲಿಷ್‌ನಲ್ಲಿ ಬರೆದಾಗ) ’K’ ಅಕ್ಷರವು ನನಗೆ ಬೇರೆ ಎರಡು ’K’ಗಳನ್ನು ನೆನಪಿಸುತ್ತದೆ. ಒಂದು ಫ್ರಾನ್ಝ್ ಕಾಫ್ಕಾನ ವಿಸ್ಮಯಕಾರಿ ಕಾದಂಬರಿ ’ಟ್ರಯಲ್’ನ ನಾಯಕ ಜೋಸೆಫ್ ’ಕೆ’ (Joseph ಏ) ಮತ್ತು ಇನ್ನೊಂದು ಮನಶ್ಶಾಸ್ತ್ರಜ್ಞೆ ಮೆಲನಿ ಕ್ಲೆಯ್ನ್ (Melanie Klein) ಅವರ ’ಕೆ’. ಒಂದು ಶಿಶುವು ತನ್ನ ನಾಲ್ಕನೇ ಮತ್ತು ಐದನೇ ತಿಂಗಳುಗಳ ನಡುವೆ ಕಲಿಯುತ್ತದೆ ಮತ್ತು ತಾಯಿಯ ಒಂದು ಮೊಲೆಯನ್ನು ಇಷ್ಟಪಡಲು ಅದು ಇನ್ನೊಂದನ್ನು ತಿರಸ್ಕರಿಸಲು ಆರಂಭಿಸುತ್ತದೆ ಎಂದು ಕ್ಲೆಯ್ನ್ ತೋರಿಸಿಕೊಟ್ಟಿದ್ದರು. ವ್ಯಾಪಕವಾಗಿ ಸ್ವೀಕೃತವಾದ ಈ ’ಓಬ್ಜೆಕ್ಟ್ಸ ರಿಲೇಶನ್ಸ್’ ಸಿದ್ಧಾಂತವನ್ನು ಅವರು 1921ರಲ್ಲಿ ಮಂಡಿಸಿದ್ದರು. ಸರಿಯಾಗಿ ಒಂದು ಶತಮಾನದ ನಂತರ, 2021ರ ಜುಲೈಯಲ್ಲಿ ಬಿ.ಎಸ್. ಯಡಿಯೂರಪ್ಪ ಆವರ ಜಾಗದಲ್ಲಿ ಮುಖ್ಯಮಂತ್ರಿಯಾಗಿ ಬಂದ ಬಸವರಾಜ ಬೊಮ್ಮಾಯಿ, ಈ ’ಕೆ’ ಸಿದ್ಧಾಂತಕ್ಕೆ ಸೂಕ್ತವಾಗಿ ಹೊಂದಿಕೊಳ್ಳುತ್ತಾರೆ.

ಕಳೆದ ಎಂಟು ತಿಂಗಳುಗಳ ಅವಧಿಯಲ್ಲಿ ಅವರು ಒಂದು ಶಿಶುವಿನಂತಹ ಬಾಂಧವ್ಯದಿಂದ- ತಾನು ಇಷ್ಟಪಡುವ ವಸ್ತು/ವಿಷಯಗಳಿಗೆ ಮತ್ತು ತಾನು ಅಸಡ್ಡೆ ತೋರಲು, ಕಡೆಗಣಿಸಲು, ಮತ್ತು ಬದಿಗೆ ಸರಿಸಲು ಇಷ್ಟಪಡುವ ವಸ್ತು/ವಿಷಯಗಳಿಗಾಗಿ ತನ್ನ ಶಕ್ತಿಯನ್ನು ವಿಭಜಿಸಿಕೊಂಡಿದ್ದಾರೆ. ಅವರು ಕಡೆಗಣಿಸಲು ಬಯಸುವ ವಾಸ್ತವವೆಂದರೆ, ಅವರು ಅಧಿಕಾರಕ್ಕೆ ಬರುವುದಕ್ಕೆ ಒಂದು ತಿಂಗಳ ಮೊದಲು ನಿರ್ಮಾಣಕಾರರು ಮತ್ತು ಗುತ್ತಿಗೆದಾರರ ಸಂಘವು (ಎಬಿಸಿ) ಸರಕಾರದಲ್ಲಿ ಭ್ರಷ್ಟಾಚಾರವು ತೀವ್ರ ಏರಿಕೆ ಕಂಡಿರುವುದನ್ನು ಪ್ರತಿಭಟಿಸಿ ಪ್ರಧಾನಿ ಕಚೇರಿಗೆ ದೂರು ನೀಡಿತ್ತು. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕೇಳುತ್ತಿರುವ ಪ್ರಸ್ತುತ ದರವು 40 ಶೇಕಡಾ ಆಗಿದೆ ಎಂದು ಆದು ಲಿಖಿತವಾಗಿ ಹೇಳಿತ್ತು. ಇದೊಂದು ಬಹಿರಂಗಗೊಂಡ ಪ್ರಕರಣ ಮತ್ತು ಯಾರೂ ಸಾರ್ವಜನಿಕವಾಗಿ ಹೇಳಲಿಚ್ಛಿಸದ ಇಂತಾ ಇನ್ನಷ್ಟು ಪ್ರಕರಣಗಳಿದ್ದು, ಭ್ರಷ್ಟಾಚಾರವನ್ನು ಅತ್ಯಂತ ತುರ್ತಿನ ಸವಾಲನ್ನಾಗಿ ಮಾಡಿದೆ. ಬಿಜೆಪಿಯು ಸರಕಾರ ರಚಿಸಲು ಸಾಧ್ಯವಾಗುವಂತೆ ಇತರ ಪಕ್ಷಗಳಿಂದ ದೊಡ್ಡ ರೀತಿಯ ಪಕ್ಷಾಂತರಗಳನ್ನು ಪ್ರಚೋದಿಸಲಾದ ಒಂದು ಸಂದರ್ಭದಲ್ಲಿ ಜೆಡಿಎಸ್‌ನ ಕುಮಾರಸ್ವಾಮಿ ಮತ್ತು ಬಿಜೆಪಿಯ ಯಡಿಯೂರಪ್ಪ ಅವರ ಉತ್ತರಾಧಿಕಾರಿಯಾಗಿ ಬೊಮ್ಮಾಯಿ ಅಧಿಕಾರಕ್ಕೆ ಬಂದಿದ್ದರು. ಇತ್ತೀಚಿನ ಉಪಚುನಾವಣೆಗಳು ಮತ್ತು ನಗರಾಡಳಿತ ಸಂಸ್ಥೆಗಳ ಚುನಾವಣೆಗಳ ಫಲಿತಾಂಶವು ಬಿಜೆಪಿಯ ಮಟ್ಟಿಗೆ ಹೇಳಿಕೊಳ್ಳುವಂತದ್ದಾಗಿರಲಿಲ್ಲ. ನದಿ ನೀರಿನ ವಿವಾದಗಳು ಇನ್ನೂ ಇತ್ಯರ್ಥವಾಗಿಲ್ಲ. ಕಳೆದ ಚುನಾವಣೆಯಲ್ಲಿ ಅತ್ಯಂತ ನಿರ್ಣಾಯಕ ಎಂದು ಸಾಮಾಜಿಕ ವಿಜ್ಞಾನಿಗಳು ಪರಿಗಣಿಸಿದ್ದ ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಈ ಎಲ್ಲಾ ಸಮಸ್ಯೆಗಳನ್ನು ಬೊಮ್ಮಾಯಿ ಕಣ್ಣೆತ್ತಿಯೂ ನೋಡಿಲ್ಲ.

ಇನ್ನೊಂದು ಕಡೆಯಲ್ಲಿ, ಈ ’ಮುಮ್ಮಡಿ’ ಮುಖ್ಯಮಂತ್ರಿಯವರು ಅಲ್ಪಸಂಖ್ಯಾತರನ್ನು ಬಗ್ಗುಬಡಿಯಲು ತನ್ನೆಲ್ಲಾ ಶಕ್ತಿಯನ್ನು ವಿನಿಯೋಗಿಸಿದ್ದಾರೆ. ಮತಾಂತರ ವಿರೋಧಿ ಕಾಯಿದೆ ಆಂಗೀಕಾರವಾಗುವಂತೆ ಮಾಡಿದ್ದು, ಹಿಜಾಬನ್ನು ಒಂದು ವಿವಾದವನ್ನಾಗಿ ಮಾಡಿದ್ದು, ದೇವಾಲಯಗಳ ಆವರಣದ ಸುತ್ತಮುತ್ತ ಮುಸ್ಲಿಮರು ಅಂಗಡಿಯಿಟ್ಟು ವ್ಯಾಪಾರ ಮಾಡದಂತೆ ನಿಷೇಧಿಸುವ ಅಸಂಬದ್ಧ ಕಾಯಿದೆಗೆ ಮರುಜೀವ ನೀಡಿದ್ದು, ಹಲಾಲ್ ಮಾಂಸವನ್ನು ಬಹಿಷ್ಕರಿಸುವ ಅಭಿಯಾನ ಆರಂಭಿಸಿದ್ದು, ಅಲ್ಪಸಂಖ್ಯಾತರ ಸಂಸ್ಥೆಗಳನ್ನು ನಿಗಾದಲ್ಲಿ ಇರಿಸಿದ್ದು, ಶಾಲೆಗಳಲ್ಲಿ ಭಗವದ್ಗೀತೆಯನ್ನು ಆರಂಭಿಸಲು ಸಿದ್ಧತೆ ನಡೆಸಿರುವುದು- ಇಂತಹ ವಿಷಯಗಳಿಗಾಗಿಯೇ ಅವರು ಸುದ್ದಿಯಲ್ಲಿದ್ದಾರೆ.

ಯಾವುದೇ ನಂಬಿಕೆಯನ್ನು ಪ್ರತಿಪಾದನೆ ಮತ್ತು ಬೋಧನೆ ಮಾಡುವ ಮೂಲಭೂತ ಹಕ್ಕನ್ನು ಖಾತರಿಪಡಿಸುವ ಸಂವಿಧಾನಕ್ಕೆ ಮತಾಂತರ ವಿರೋಧಿ ಕಾಯಿದೆಯು ಅನುಗುಣವಾಗಿಲ್ಲ ಎಂದು ಕ್ರೈಸ್ತ ಸಮುದಾಯವು ಸರಕಾರಕ್ಕೆ ಹೇಳಲು ಪ್ರಯತ್ನಿಸಿತು. ಕರ್ನಾಟಕ ಸರಕಾರವು ಅವರೊಂದಿಗೆ ಯಾವುದೇ ರೀತಿಯ ಮಾತುಕತೆ ನಡೆಸಿತೇ? ಶಾಲಾ ಸಮವಸ್ತ್ರ ಕುರಿತ ನಿಯಮಗಳನ್ನು ವರ್ಷದ ಆರಂಭದಲ್ಲಿ ರೂಪಿಸಲಾಯಿತು. ಆದರೆ, ಹಿಜಾಬ್ ವಿವಾದವನ್ನು ನಂತರ ಎಬ್ಬಿಸಿ ಕದಡಲಾಯಿತು. ಅದು ಶಿಕ್ಷಣದ ಹಕ್ಕಿನ ಮೇಲೆ ಎಂತಹ ಪರಿಣಾಮ ಬೀರುತ್ತದೆ ಎಂದು ಸರಕಾರ ಪರಿಗಣಿಸಿದೆಯೆ? ಹಿಂದೂ ದೇವಾಲಯಗಳು ಮತ್ತು ಮುಸ್ಲಿಂ ವ್ಯಾಪಾರಿಗಳ
ನಡುವಿನ ಸಂಬಂಧವು ಶತಮಾನಗಳಷ್ಟು ಹಳೆಯದು. ವ್ಯಾಪಾರ ಮಾಡದಂತೆ ತಡೆಯೊಡ್ಡುವುದು ಸಾಮಾಜಿಕ
ಸಾಮರಸ್ಯವನ್ನು ಹೇಗೆ ಕದಡಬಹುದು ಎಂದು ಸರಕಾರ ಯೋಚಿಸಿತೆ? ಇಲ್ಲ. ಜಟ್ಕಾ ಮಾಂಸವು ’ರಾಷ್ಟ್ರವಾದಿ’ ಎಂದು ಬಿಂಬಿಸಿ, ಹಲಾಲ್ ಮಾಂಸವು ಅಷ್ಟೊಂದು ’ರಾಷ್ಟ್ರವಾದಿ’ಯಲ್ಲ ಎಂದು ಹೇಳುವುದು ಅಸಂಬದ್ಧ ಮತ್ತು ಇಬ್ಬಗೆ ನೀತಿ. ಇವುಗಳ ಬಗ್ಗೆ ಮುಸ್ಲಿಮರು ಮತ್ತು ಕ್ರೈಸ್ತರು ಎತ್ತಿರುವ ಪ್ರಶ್ನೆಗಳಿಗೆ ಸರಕಾರ ಯಾವುದೇ ಪ್ರತಿಕ್ರಿಯೆ ತೋರದೇ ಇರುವುದು ಕಾಫ್ಕಾನ ’ಟ್ರಯಲ್’ ಕೃತಿಯನ್ನು ನೆನಪಿಸುತ್ತದೆ. ಅಧಿಕಾರಿಗಳಿಂದ ಹಿಡಿದು ಪೊಲೀಸರ ತನಕ, ರಾಜಕಾರಣಿಗಳಿಂದ ಹಿಡಿದು ನ್ಯಾಯಾಲಯದ ತನಕ ನಿಮಗೆ ಬೇಕಾದಷ್ಟು ಸುತ್ತು ಹೊಡೆದು ಬನ್ನಿ; ನಿಮಗೆ ನ್ಯಾಯ ಮತ್ತು ಸಂವಾದದ ಮುಂದೂಡಿಕೆಯೇ ಎದುರಾಗುತ್ತದೆ. ಬೊಮ್ಮಾಯಿ ಸರಕಾರವು ಹಿಂದುತ್ವದ ನೀಲನಕ್ಷೆಯನ್ನು- ಕರ್ನಾಟಕವು ಪರಿಣತಿ ಪಡೆದಿರುವ ಸಂಗೀತದ ’ದ್ರುತ್ ಖಯಾಲ್’ನಷ್ಟೇ ತ್ವರಿತ ಗತಿಯಲ್ಲಿ ಜಾರಿಗೊಳಿಸುತ್ತಿದೆ.

ಅಲ್ಪಸಂಖ್ಯಾತರ ಈ ಅವಮಾನದೊಂದಿಗೆ ಸರಿಹೊಂದುವಂತೆಯೇ ಶಾಲೆಗಳಲ್ಲಿ ಭಗವದ್ಗೀತೆಯನ್ನು ಪರಿಚಯಿಸುವ ಪ್ರಸ್ತಾಪ ಮಾಡಲಾಗಿದೆ. ಅದರ ಪರಿಣಾಮಗಳ ಕುರಿತು ಸರಕಾರದ ಅಂದಾಜಿಗೆ ವ್ಯತಿರಿಕ್ತವಾಗಿ- ಈ ಕ್ರಮವನ್ನು ಕರ್ನಾಟಕದಲ್ಲಿ ’ಬಹುಸಂಖ್ಯಾತರು’ ಮೆಚ್ಚುವ ಸಾಧ್ಯತೆ ಕಡಿಮೆ. 2011ರ ’ಪರಿಷ್ಕೃತ’ ಜನಗಣತಿಯ ದತ್ತಾಂಶವು, ಕರ್ನಾಟಕದಲ್ಲಿ 12 ಶೇಕಡಾ ಮುಸ್ಲಿಮರು, 1.87 ಶೇಕಡಾ ಕ್ರೈಸ್ತರು ಮತ್ತು 1.2 ಶೇಕಡಾ ಬೌದ್ಧ, ಜೈನ, ಸಿಖ್ ಜನಸಂಖ್ಯೆಗೆ ಪ್ರತಿಯಾಗಿ, 84 ಶೇಕಡಾ ಹಿಂದೂ ಜನಸಂಖ್ಯೆಯನ್ನು ತೋರಿಸುತ್ತಿರಬಹುದು; ಆದರೆ, ಕರ್ನಾಟಕದಲ್ಲಿ ’ಹಿಂದೂ’ ಎಂಬ ವರ್ಗೀಕರಣವು ’ಏಕಶಿಲೆ’ಯಂತೆ ಒಂದೇ ಆಗಿಲ್ಲ. ಅದನ್ನು ಅಸಾಂಪ್ರದಾಯಿಕವಾದ ಗುಂಪುಗಳು, ಬ್ರಾಹ್ಮಣ ವಿರೋಧಿ ಗುಂಪುಗಳಾದ ಪರಿಶಿಷ್ಟ ಜಾತಿಗಳು (19.5 ಶೇಕಡಾ), ಲಿಂಗಾಯತ (14 ಶೇಕಡಾ), ಒಕ್ಕಲಿಗ (11 ಶೇಕಡಾ) ಮತ್ತು ಕುರುಬ (7 ಶೇಕಡಾ) ಇತ್ಯಾದಿಗಳೂ ಒಳಗೊಂಡಿರುವಂತೆ ತೋರಿಸಲಾಗಿದೆ. ಅವರು ಭಾವನಾತ್ಮಕವಾಗಿ ಮತ್ತು ಆಧ್ಯಾತ್ಮಿಕವಾಗಿ ಹೇಗೆ ಗೀತೆಯೊಂದಿಗೆ ಸಂಬಂಧ ಕಲ್ಪಿಸಿಕೊಳ್ಳಲು ಸಾಧ್ಯ? ಗೀತೆಯ ಕೊನೆಯ ಭಾಗವಾದ 18ನೇ ಅಧ್ಯಾಯವು ವರ್ಣಾಶ್ರಮ ತಾರತಮ್ಯವನ್ನು ಸಮರ್ಥಿಸುತ್ತದೆ. 21ನೇ ಶತಮಾನದ ಪರಿಶಿಷ್ಟ ಮಕ್ಕಳು ಈ ಸಮರ್ಥನೆಯನ್ನು ಒಪ್ಪಿಕೊಳ್ಳುವರು ಎಂದು ನಾವು ನಿರೀಕ್ಷಿಸುತ್ತಿದ್ದೇವೆಯೆ? ಲಿಂಗಾಯತ ಸಮುದಾಯದ ಮಕ್ಕಳು ಹನ್ನೆರಡನೇ ಶತಮಾನದ ಲಿಂಗಾಯತ ಶರಣ ಅಲ್ಲಮ ಪ್ರಭುವಿನ ವಚನಗಳನ್ನು ಓದಲು ಇಷ್ಟಪಡಬಹುದು; ಕುರುಬ ಸಮುದಾಯದ ಮಕ್ಕಳು ಹದಿನಾರನೇ ಶತಮಾನದ ಕನಕದಾಸರ ಕೃತಿಗಳನ್ನು ಬಯಸಬಹುದು. ಅದಲ್ಲದೇ, ಕರ್ನಾಟಕದಲ್ಲಿ ಗೀತಾಭಾಷ್ಯದ ಕಳೆದ ಸಾವಿರ ವರ್ಷಗಳ ಶ್ರೀಮಂತ ತಾತ್ವಿಕ ಪರಂಪರೆಯು, ಗೀತೆಯನ್ನು ಒಂದೇ ಅವತಾರದ ಏಕದೃಷ್ಟಿಗಿಂತ ಉಪಾಸನೆಗಿಂತಲೂ, ಧಾರ್ಮಿಕ ಒಕ್ಕೂಟದ ಬಹುದೇವಾರಾಧನೆಯ ಸಾಧ್ಯತೆಯನ್ನು (ಅನೇಕಾಂತ) ಚಿತ್ರಿಸುತ್ತದೆ. ಈ ಸಂಪ್ರದಾಯವು ಕನ್ನಡದ ಎಲ್ಲಾ ಸಾಹಿತ್ಯ, ಸಂಸ್ಕೃತಿ ಮತ್ತು ತತ್ವಜ್ಞಾನದಲ್ಲಿ ಆಳವಾಗಿ ಇಂಗಿದ್ದು, ಇತ್ತೀಚಿನ ಕಾಲದಲ್ಲಿ ಇದನ್ನು ರಾಷ್ಟ್ರಕವಿ ಕೆ.ವಿ. ಪುಟ್ಟಪ್ಪ (1904-1994) ಅವರು ಚೆನ್ನಾಗಿ ಪ್ರತಿಪಾದಿಸಿದ್ದಾರೆ. ಅದಲ್ಲದೇ, ಗೀತೆಯನ್ನು ದೇವನಾಗರಿ ಲಿಪಿಯಲ್ಲಿ ಪರಿಚಯಿಸಿದರೆ, ಅದು ವಿದ್ಯಾರ್ಥಿಗಳಿಗೆ ಕಿರಿಕಿರಿಯಾಗಿ ಕಾಣುವುದು ಖಂಡಿತ.

ರಾಮ ಮತ್ತು ಕೃಷ್ಣರಿಗಿಂತ ಶಿವ, ಮಹಾವೀರ, ಮಾತೃ ದೇವತೆಗಳು ಮತ್ತು ಜಾನಪದ ದೇವರುಗಳು ಹೆಚ್ಚು ಜನಪ್ರಿಯವಾಗಿರುವ ಜನಸಂಖ್ಯಾತ್ಮಕ, ಸಾಂಸ್ಕೃತಿಕ, ಐತಿಹಾಸಿಕ ಸವಾಲುಗಳ ನಡುವೆ ಮುಖ್ಯಮಂತ್ರಿ ಬೊಮ್ಮಾಯಿ ಶಾಲೆಗಳಲ್ಲಿ ಗೀತೆಯನ್ನು ಪರಿಚಯಿಸುವ ಹಾದಿಯನ್ನು ಏಕೆ ಹಿಡಿದಿದ್ದಾರೆ?

ಇದು ಬಿಜೆಪಿಯ ಸ್ವಯಂವಿನಾಶದ ದಾರಿಯಾಗಿ ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಆದರೆ, ಚುನಾವಣಾ ಲೆಕ್ಕಾಚಾರವು- ಮುಂದಿನ ವರ್ಷದ ವಿಧಾನಸಭಾ ಚುನಾವಣೆಯಲ್ಲಿ ಆಹಿಂದ ಕೂಟವು ಮೂಡಿಬರುವುದನ್ನು ಎದುರಿಸಲು ಅದು ಸಿದ್ಧವಿಲ್ಲ ಎಂಬುದನ್ನು ತೋರಿಸುತ್ತದೆ. ಅಹಿಂದವು ಮೊತ್ತಮೊದಲಾಗಿ ದೇವರಾಜ ಅರಸು ಅವರು ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳವರು ಮತ್ತು ದಲಿತರ ಒಕ್ಕೂಟವನ್ನು ಸೂಚಿಸಲು ಹುಟ್ಟುಹಾಕಿದ ಕನ್ನಡ ಪದ. ಕುರುಬ ಸಮುದಾಯದ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಕ್ರಿಯವಾಗಿ ಈ ಚಿಂತನೆಯನ್ನು ಪ್ರೋತ್ಸಾಹಿಸುತ್ತಿದ್ದಾರೆ. ಇದೇ ಹೊತ್ತಿಗೆ, ಲಿಂಗಾಯತರ ನಡುವೆ ಬಿಜೆಪಿ
ಕುರಿತ ಅಸಮಾಧಾನ ಹೆಚ್ಚುತ್ತಿದೆ. ಲಿಂಗಾಯತರ ಸಣ್ಣ ಬೆಂಬಲದೊಂದಿಗಾದರೂ ಈ ಮೈತ್ರಿಯು ಮೂಡಿಬಂದರೆ, ಬಿಜೆಪಿಯ ಸ್ಥಿತಿಯು 2018ರಂತಾಗುವುದು ಅಥವಾ ಅದಕ್ಕಿಂತ ಕೆಟ್ಟದಾಗುವುದು. ಇದರಿಂದ ದಕ್ಷಿಣದಲ್ಲಿ ಬಿಜೆಪಿಯ ಏಕೈಕ ರಾಜ್ಯದ ಹಿಡಿತವು ಸಡಿಲವಾಗುವುದು. ಬಿಜೆಪಿಯ ದುಷ್ಟ ಯೋಚನೆಯಂತೆ, ಅಲ್ಪಸಂಖ್ಯಾತರನ್ನು ರಾಕ್ಷಸರಂತೆ ಚಿತ್ರಿಸುವುದು- ತನ್ನ ಸ್ವಂತ ಜನರನ್ನು ಹಿಡಿದಿಟ್ಟುಕೊಳ್ಳಲು ಮತ್ತು ತನ್ನ ಕ್ಯಾಂಪಿನಲ್ಲಿ ಹಿಂದೂಗಳೆಂದು ಚಿತ್ರಿಸಲಾಗುವ ಲಿಂಗಾಯತರು ಹೊರಹೋಗದಂತೆ ತಡೆಯಲು ಬಿಜೆಪಿಯ ಮಾಡುತ್ತಿರುವ ಹತಾಶ ಯತ್ನವಾಗಿದೆ ಈ ಪ್ರಯತ್ನ.

ಹೀಗಿದ್ದರೂ, ಈ ರೀತಿಯ ವಿವಿಧ ರಾಜಕೀಯ ತಂತ್ರಗಳು ಸಂವಿಧಾನಕ್ಕೆ ಗಮನಾರ್ಹವಾದ ಹಾನಿ ಉಂಟುಮಾಡಬಹುದು. ಉಪನಿಷತ್ ಹೇಳುವಂತೆ “ಕ್ಷುರಸ್ಯ ಧಾರಾ ನಿಶಿತಾ ಧೂರ್ತ್ಯಯ” ಅಂದರೆ, ಕರ್ನಾಟಕ ಮುಖ್ಯಮಂತ್ರಿಯವರ ಮುಂದಿನ ಹಾದಿ ಕತ್ತಿಯ ಅಲಗಿನ ಮೇಲಿನ ನಡಿಗೆಯಾಗಿದೆ.

ಅನುವಾದ: ನಿಖಿಲ್ ಕೋಲ್ಪೆ

ಪ್ರೊ. ಜಿ ಎನ್ ದೇವಿ

ಪ್ರೊ ಜಿ ಎನ್ ದೇವಿ
ಭಾರತದ ಖ್ಯಾತ ಚಿಂತಕರಲ್ಲಿ ಒಬ್ಬರಾದ ದೇವಿ ಅವರು, ಪೀಪಲ್ ಲಿಂಗ್ವಿಸ್ಟಿಕ್ಸ್ ಸರ್ವೆ ಮೂಲಕ ಚಿರಪರಿಚಿತರು. ‘ಆಫ್ಟರ್ ಅಮ್ನೇಶಿಯಾ’ ಪುಸ್ತಕಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ಚಳವಳಿಗಳ ಸಂಗಾತಿಯಾಗಿರುವ ದೇವಿ ಸದ್ಯಕ್ಕೆ ದಿ ಸೌತ್ ಫೋರಮ್‌ನ ಸಂಚಾಲಕರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

 


ಇದನ್ನೂ ಓದಿ: ಹೆಚ್ಚಿದ ಕೋಮು ಉದ್ವಿಗ್ನತೆ ಹಿನ್ನಲೆ: ಕಂಪೆನಿಗಳನ್ನು ಕರ್ನಾಟಕದಿಂದ ತಮಿಳುನಾಡಿಗೆ ಸೆಳೆಯಲು ಪ್ರಯತ್ನಿಸುತ್ತಿರುವ ಡಿಎಂಕೆ ಸರ್ಕಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...