Homeಕರ್ನಾಟಕಕತ್ತಿಯ ಅಲಗಿನ ಮೇಲೆ; ಕರ್ನಾಟಕದಲ್ಲಿ ವಸ್ತು-ವಿಷಯಗಳು, ಆಕ್ಷೇಪಗಳು ಮತ್ತು ಉದ್ದೇಶಗಳು

ಕತ್ತಿಯ ಅಲಗಿನ ಮೇಲೆ; ಕರ್ನಾಟಕದಲ್ಲಿ ವಸ್ತು-ವಿಷಯಗಳು, ಆಕ್ಷೇಪಗಳು ಮತ್ತು ಉದ್ದೇಶಗಳು

- Advertisement -
- Advertisement -

ಕರ್ನಾಟಕದಲ್ಲಿ ಇರುವ (ಇಂಗ್ಲಿಷ್‌ನಲ್ಲಿ ಬರೆದಾಗ) ’K’ ಅಕ್ಷರವು ನನಗೆ ಬೇರೆ ಎರಡು ’K’ಗಳನ್ನು ನೆನಪಿಸುತ್ತದೆ. ಒಂದು ಫ್ರಾನ್ಝ್ ಕಾಫ್ಕಾನ ವಿಸ್ಮಯಕಾರಿ ಕಾದಂಬರಿ ’ಟ್ರಯಲ್’ನ ನಾಯಕ ಜೋಸೆಫ್ ’ಕೆ’ (Joseph ಏ) ಮತ್ತು ಇನ್ನೊಂದು ಮನಶ್ಶಾಸ್ತ್ರಜ್ಞೆ ಮೆಲನಿ ಕ್ಲೆಯ್ನ್ (Melanie Klein) ಅವರ ’ಕೆ’. ಒಂದು ಶಿಶುವು ತನ್ನ ನಾಲ್ಕನೇ ಮತ್ತು ಐದನೇ ತಿಂಗಳುಗಳ ನಡುವೆ ಕಲಿಯುತ್ತದೆ ಮತ್ತು ತಾಯಿಯ ಒಂದು ಮೊಲೆಯನ್ನು ಇಷ್ಟಪಡಲು ಅದು ಇನ್ನೊಂದನ್ನು ತಿರಸ್ಕರಿಸಲು ಆರಂಭಿಸುತ್ತದೆ ಎಂದು ಕ್ಲೆಯ್ನ್ ತೋರಿಸಿಕೊಟ್ಟಿದ್ದರು. ವ್ಯಾಪಕವಾಗಿ ಸ್ವೀಕೃತವಾದ ಈ ’ಓಬ್ಜೆಕ್ಟ್ಸ ರಿಲೇಶನ್ಸ್’ ಸಿದ್ಧಾಂತವನ್ನು ಅವರು 1921ರಲ್ಲಿ ಮಂಡಿಸಿದ್ದರು. ಸರಿಯಾಗಿ ಒಂದು ಶತಮಾನದ ನಂತರ, 2021ರ ಜುಲೈಯಲ್ಲಿ ಬಿ.ಎಸ್. ಯಡಿಯೂರಪ್ಪ ಆವರ ಜಾಗದಲ್ಲಿ ಮುಖ್ಯಮಂತ್ರಿಯಾಗಿ ಬಂದ ಬಸವರಾಜ ಬೊಮ್ಮಾಯಿ, ಈ ’ಕೆ’ ಸಿದ್ಧಾಂತಕ್ಕೆ ಸೂಕ್ತವಾಗಿ ಹೊಂದಿಕೊಳ್ಳುತ್ತಾರೆ.

ಕಳೆದ ಎಂಟು ತಿಂಗಳುಗಳ ಅವಧಿಯಲ್ಲಿ ಅವರು ಒಂದು ಶಿಶುವಿನಂತಹ ಬಾಂಧವ್ಯದಿಂದ- ತಾನು ಇಷ್ಟಪಡುವ ವಸ್ತು/ವಿಷಯಗಳಿಗೆ ಮತ್ತು ತಾನು ಅಸಡ್ಡೆ ತೋರಲು, ಕಡೆಗಣಿಸಲು, ಮತ್ತು ಬದಿಗೆ ಸರಿಸಲು ಇಷ್ಟಪಡುವ ವಸ್ತು/ವಿಷಯಗಳಿಗಾಗಿ ತನ್ನ ಶಕ್ತಿಯನ್ನು ವಿಭಜಿಸಿಕೊಂಡಿದ್ದಾರೆ. ಅವರು ಕಡೆಗಣಿಸಲು ಬಯಸುವ ವಾಸ್ತವವೆಂದರೆ, ಅವರು ಅಧಿಕಾರಕ್ಕೆ ಬರುವುದಕ್ಕೆ ಒಂದು ತಿಂಗಳ ಮೊದಲು ನಿರ್ಮಾಣಕಾರರು ಮತ್ತು ಗುತ್ತಿಗೆದಾರರ ಸಂಘವು (ಎಬಿಸಿ) ಸರಕಾರದಲ್ಲಿ ಭ್ರಷ್ಟಾಚಾರವು ತೀವ್ರ ಏರಿಕೆ ಕಂಡಿರುವುದನ್ನು ಪ್ರತಿಭಟಿಸಿ ಪ್ರಧಾನಿ ಕಚೇರಿಗೆ ದೂರು ನೀಡಿತ್ತು. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕೇಳುತ್ತಿರುವ ಪ್ರಸ್ತುತ ದರವು 40 ಶೇಕಡಾ ಆಗಿದೆ ಎಂದು ಆದು ಲಿಖಿತವಾಗಿ ಹೇಳಿತ್ತು. ಇದೊಂದು ಬಹಿರಂಗಗೊಂಡ ಪ್ರಕರಣ ಮತ್ತು ಯಾರೂ ಸಾರ್ವಜನಿಕವಾಗಿ ಹೇಳಲಿಚ್ಛಿಸದ ಇಂತಾ ಇನ್ನಷ್ಟು ಪ್ರಕರಣಗಳಿದ್ದು, ಭ್ರಷ್ಟಾಚಾರವನ್ನು ಅತ್ಯಂತ ತುರ್ತಿನ ಸವಾಲನ್ನಾಗಿ ಮಾಡಿದೆ. ಬಿಜೆಪಿಯು ಸರಕಾರ ರಚಿಸಲು ಸಾಧ್ಯವಾಗುವಂತೆ ಇತರ ಪಕ್ಷಗಳಿಂದ ದೊಡ್ಡ ರೀತಿಯ ಪಕ್ಷಾಂತರಗಳನ್ನು ಪ್ರಚೋದಿಸಲಾದ ಒಂದು ಸಂದರ್ಭದಲ್ಲಿ ಜೆಡಿಎಸ್‌ನ ಕುಮಾರಸ್ವಾಮಿ ಮತ್ತು ಬಿಜೆಪಿಯ ಯಡಿಯೂರಪ್ಪ ಅವರ ಉತ್ತರಾಧಿಕಾರಿಯಾಗಿ ಬೊಮ್ಮಾಯಿ ಅಧಿಕಾರಕ್ಕೆ ಬಂದಿದ್ದರು. ಇತ್ತೀಚಿನ ಉಪಚುನಾವಣೆಗಳು ಮತ್ತು ನಗರಾಡಳಿತ ಸಂಸ್ಥೆಗಳ ಚುನಾವಣೆಗಳ ಫಲಿತಾಂಶವು ಬಿಜೆಪಿಯ ಮಟ್ಟಿಗೆ ಹೇಳಿಕೊಳ್ಳುವಂತದ್ದಾಗಿರಲಿಲ್ಲ. ನದಿ ನೀರಿನ ವಿವಾದಗಳು ಇನ್ನೂ ಇತ್ಯರ್ಥವಾಗಿಲ್ಲ. ಕಳೆದ ಚುನಾವಣೆಯಲ್ಲಿ ಅತ್ಯಂತ ನಿರ್ಣಾಯಕ ಎಂದು ಸಾಮಾಜಿಕ ವಿಜ್ಞಾನಿಗಳು ಪರಿಗಣಿಸಿದ್ದ ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಈ ಎಲ್ಲಾ ಸಮಸ್ಯೆಗಳನ್ನು ಬೊಮ್ಮಾಯಿ ಕಣ್ಣೆತ್ತಿಯೂ ನೋಡಿಲ್ಲ.

ಇನ್ನೊಂದು ಕಡೆಯಲ್ಲಿ, ಈ ’ಮುಮ್ಮಡಿ’ ಮುಖ್ಯಮಂತ್ರಿಯವರು ಅಲ್ಪಸಂಖ್ಯಾತರನ್ನು ಬಗ್ಗುಬಡಿಯಲು ತನ್ನೆಲ್ಲಾ ಶಕ್ತಿಯನ್ನು ವಿನಿಯೋಗಿಸಿದ್ದಾರೆ. ಮತಾಂತರ ವಿರೋಧಿ ಕಾಯಿದೆ ಆಂಗೀಕಾರವಾಗುವಂತೆ ಮಾಡಿದ್ದು, ಹಿಜಾಬನ್ನು ಒಂದು ವಿವಾದವನ್ನಾಗಿ ಮಾಡಿದ್ದು, ದೇವಾಲಯಗಳ ಆವರಣದ ಸುತ್ತಮುತ್ತ ಮುಸ್ಲಿಮರು ಅಂಗಡಿಯಿಟ್ಟು ವ್ಯಾಪಾರ ಮಾಡದಂತೆ ನಿಷೇಧಿಸುವ ಅಸಂಬದ್ಧ ಕಾಯಿದೆಗೆ ಮರುಜೀವ ನೀಡಿದ್ದು, ಹಲಾಲ್ ಮಾಂಸವನ್ನು ಬಹಿಷ್ಕರಿಸುವ ಅಭಿಯಾನ ಆರಂಭಿಸಿದ್ದು, ಅಲ್ಪಸಂಖ್ಯಾತರ ಸಂಸ್ಥೆಗಳನ್ನು ನಿಗಾದಲ್ಲಿ ಇರಿಸಿದ್ದು, ಶಾಲೆಗಳಲ್ಲಿ ಭಗವದ್ಗೀತೆಯನ್ನು ಆರಂಭಿಸಲು ಸಿದ್ಧತೆ ನಡೆಸಿರುವುದು- ಇಂತಹ ವಿಷಯಗಳಿಗಾಗಿಯೇ ಅವರು ಸುದ್ದಿಯಲ್ಲಿದ್ದಾರೆ.

ಯಾವುದೇ ನಂಬಿಕೆಯನ್ನು ಪ್ರತಿಪಾದನೆ ಮತ್ತು ಬೋಧನೆ ಮಾಡುವ ಮೂಲಭೂತ ಹಕ್ಕನ್ನು ಖಾತರಿಪಡಿಸುವ ಸಂವಿಧಾನಕ್ಕೆ ಮತಾಂತರ ವಿರೋಧಿ ಕಾಯಿದೆಯು ಅನುಗುಣವಾಗಿಲ್ಲ ಎಂದು ಕ್ರೈಸ್ತ ಸಮುದಾಯವು ಸರಕಾರಕ್ಕೆ ಹೇಳಲು ಪ್ರಯತ್ನಿಸಿತು. ಕರ್ನಾಟಕ ಸರಕಾರವು ಅವರೊಂದಿಗೆ ಯಾವುದೇ ರೀತಿಯ ಮಾತುಕತೆ ನಡೆಸಿತೇ? ಶಾಲಾ ಸಮವಸ್ತ್ರ ಕುರಿತ ನಿಯಮಗಳನ್ನು ವರ್ಷದ ಆರಂಭದಲ್ಲಿ ರೂಪಿಸಲಾಯಿತು. ಆದರೆ, ಹಿಜಾಬ್ ವಿವಾದವನ್ನು ನಂತರ ಎಬ್ಬಿಸಿ ಕದಡಲಾಯಿತು. ಅದು ಶಿಕ್ಷಣದ ಹಕ್ಕಿನ ಮೇಲೆ ಎಂತಹ ಪರಿಣಾಮ ಬೀರುತ್ತದೆ ಎಂದು ಸರಕಾರ ಪರಿಗಣಿಸಿದೆಯೆ? ಹಿಂದೂ ದೇವಾಲಯಗಳು ಮತ್ತು ಮುಸ್ಲಿಂ ವ್ಯಾಪಾರಿಗಳ
ನಡುವಿನ ಸಂಬಂಧವು ಶತಮಾನಗಳಷ್ಟು ಹಳೆಯದು. ವ್ಯಾಪಾರ ಮಾಡದಂತೆ ತಡೆಯೊಡ್ಡುವುದು ಸಾಮಾಜಿಕ
ಸಾಮರಸ್ಯವನ್ನು ಹೇಗೆ ಕದಡಬಹುದು ಎಂದು ಸರಕಾರ ಯೋಚಿಸಿತೆ? ಇಲ್ಲ. ಜಟ್ಕಾ ಮಾಂಸವು ’ರಾಷ್ಟ್ರವಾದಿ’ ಎಂದು ಬಿಂಬಿಸಿ, ಹಲಾಲ್ ಮಾಂಸವು ಅಷ್ಟೊಂದು ’ರಾಷ್ಟ್ರವಾದಿ’ಯಲ್ಲ ಎಂದು ಹೇಳುವುದು ಅಸಂಬದ್ಧ ಮತ್ತು ಇಬ್ಬಗೆ ನೀತಿ. ಇವುಗಳ ಬಗ್ಗೆ ಮುಸ್ಲಿಮರು ಮತ್ತು ಕ್ರೈಸ್ತರು ಎತ್ತಿರುವ ಪ್ರಶ್ನೆಗಳಿಗೆ ಸರಕಾರ ಯಾವುದೇ ಪ್ರತಿಕ್ರಿಯೆ ತೋರದೇ ಇರುವುದು ಕಾಫ್ಕಾನ ’ಟ್ರಯಲ್’ ಕೃತಿಯನ್ನು ನೆನಪಿಸುತ್ತದೆ. ಅಧಿಕಾರಿಗಳಿಂದ ಹಿಡಿದು ಪೊಲೀಸರ ತನಕ, ರಾಜಕಾರಣಿಗಳಿಂದ ಹಿಡಿದು ನ್ಯಾಯಾಲಯದ ತನಕ ನಿಮಗೆ ಬೇಕಾದಷ್ಟು ಸುತ್ತು ಹೊಡೆದು ಬನ್ನಿ; ನಿಮಗೆ ನ್ಯಾಯ ಮತ್ತು ಸಂವಾದದ ಮುಂದೂಡಿಕೆಯೇ ಎದುರಾಗುತ್ತದೆ. ಬೊಮ್ಮಾಯಿ ಸರಕಾರವು ಹಿಂದುತ್ವದ ನೀಲನಕ್ಷೆಯನ್ನು- ಕರ್ನಾಟಕವು ಪರಿಣತಿ ಪಡೆದಿರುವ ಸಂಗೀತದ ’ದ್ರುತ್ ಖಯಾಲ್’ನಷ್ಟೇ ತ್ವರಿತ ಗತಿಯಲ್ಲಿ ಜಾರಿಗೊಳಿಸುತ್ತಿದೆ.

ಅಲ್ಪಸಂಖ್ಯಾತರ ಈ ಅವಮಾನದೊಂದಿಗೆ ಸರಿಹೊಂದುವಂತೆಯೇ ಶಾಲೆಗಳಲ್ಲಿ ಭಗವದ್ಗೀತೆಯನ್ನು ಪರಿಚಯಿಸುವ ಪ್ರಸ್ತಾಪ ಮಾಡಲಾಗಿದೆ. ಅದರ ಪರಿಣಾಮಗಳ ಕುರಿತು ಸರಕಾರದ ಅಂದಾಜಿಗೆ ವ್ಯತಿರಿಕ್ತವಾಗಿ- ಈ ಕ್ರಮವನ್ನು ಕರ್ನಾಟಕದಲ್ಲಿ ’ಬಹುಸಂಖ್ಯಾತರು’ ಮೆಚ್ಚುವ ಸಾಧ್ಯತೆ ಕಡಿಮೆ. 2011ರ ’ಪರಿಷ್ಕೃತ’ ಜನಗಣತಿಯ ದತ್ತಾಂಶವು, ಕರ್ನಾಟಕದಲ್ಲಿ 12 ಶೇಕಡಾ ಮುಸ್ಲಿಮರು, 1.87 ಶೇಕಡಾ ಕ್ರೈಸ್ತರು ಮತ್ತು 1.2 ಶೇಕಡಾ ಬೌದ್ಧ, ಜೈನ, ಸಿಖ್ ಜನಸಂಖ್ಯೆಗೆ ಪ್ರತಿಯಾಗಿ, 84 ಶೇಕಡಾ ಹಿಂದೂ ಜನಸಂಖ್ಯೆಯನ್ನು ತೋರಿಸುತ್ತಿರಬಹುದು; ಆದರೆ, ಕರ್ನಾಟಕದಲ್ಲಿ ’ಹಿಂದೂ’ ಎಂಬ ವರ್ಗೀಕರಣವು ’ಏಕಶಿಲೆ’ಯಂತೆ ಒಂದೇ ಆಗಿಲ್ಲ. ಅದನ್ನು ಅಸಾಂಪ್ರದಾಯಿಕವಾದ ಗುಂಪುಗಳು, ಬ್ರಾಹ್ಮಣ ವಿರೋಧಿ ಗುಂಪುಗಳಾದ ಪರಿಶಿಷ್ಟ ಜಾತಿಗಳು (19.5 ಶೇಕಡಾ), ಲಿಂಗಾಯತ (14 ಶೇಕಡಾ), ಒಕ್ಕಲಿಗ (11 ಶೇಕಡಾ) ಮತ್ತು ಕುರುಬ (7 ಶೇಕಡಾ) ಇತ್ಯಾದಿಗಳೂ ಒಳಗೊಂಡಿರುವಂತೆ ತೋರಿಸಲಾಗಿದೆ. ಅವರು ಭಾವನಾತ್ಮಕವಾಗಿ ಮತ್ತು ಆಧ್ಯಾತ್ಮಿಕವಾಗಿ ಹೇಗೆ ಗೀತೆಯೊಂದಿಗೆ ಸಂಬಂಧ ಕಲ್ಪಿಸಿಕೊಳ್ಳಲು ಸಾಧ್ಯ? ಗೀತೆಯ ಕೊನೆಯ ಭಾಗವಾದ 18ನೇ ಅಧ್ಯಾಯವು ವರ್ಣಾಶ್ರಮ ತಾರತಮ್ಯವನ್ನು ಸಮರ್ಥಿಸುತ್ತದೆ. 21ನೇ ಶತಮಾನದ ಪರಿಶಿಷ್ಟ ಮಕ್ಕಳು ಈ ಸಮರ್ಥನೆಯನ್ನು ಒಪ್ಪಿಕೊಳ್ಳುವರು ಎಂದು ನಾವು ನಿರೀಕ್ಷಿಸುತ್ತಿದ್ದೇವೆಯೆ? ಲಿಂಗಾಯತ ಸಮುದಾಯದ ಮಕ್ಕಳು ಹನ್ನೆರಡನೇ ಶತಮಾನದ ಲಿಂಗಾಯತ ಶರಣ ಅಲ್ಲಮ ಪ್ರಭುವಿನ ವಚನಗಳನ್ನು ಓದಲು ಇಷ್ಟಪಡಬಹುದು; ಕುರುಬ ಸಮುದಾಯದ ಮಕ್ಕಳು ಹದಿನಾರನೇ ಶತಮಾನದ ಕನಕದಾಸರ ಕೃತಿಗಳನ್ನು ಬಯಸಬಹುದು. ಅದಲ್ಲದೇ, ಕರ್ನಾಟಕದಲ್ಲಿ ಗೀತಾಭಾಷ್ಯದ ಕಳೆದ ಸಾವಿರ ವರ್ಷಗಳ ಶ್ರೀಮಂತ ತಾತ್ವಿಕ ಪರಂಪರೆಯು, ಗೀತೆಯನ್ನು ಒಂದೇ ಅವತಾರದ ಏಕದೃಷ್ಟಿಗಿಂತ ಉಪಾಸನೆಗಿಂತಲೂ, ಧಾರ್ಮಿಕ ಒಕ್ಕೂಟದ ಬಹುದೇವಾರಾಧನೆಯ ಸಾಧ್ಯತೆಯನ್ನು (ಅನೇಕಾಂತ) ಚಿತ್ರಿಸುತ್ತದೆ. ಈ ಸಂಪ್ರದಾಯವು ಕನ್ನಡದ ಎಲ್ಲಾ ಸಾಹಿತ್ಯ, ಸಂಸ್ಕೃತಿ ಮತ್ತು ತತ್ವಜ್ಞಾನದಲ್ಲಿ ಆಳವಾಗಿ ಇಂಗಿದ್ದು, ಇತ್ತೀಚಿನ ಕಾಲದಲ್ಲಿ ಇದನ್ನು ರಾಷ್ಟ್ರಕವಿ ಕೆ.ವಿ. ಪುಟ್ಟಪ್ಪ (1904-1994) ಅವರು ಚೆನ್ನಾಗಿ ಪ್ರತಿಪಾದಿಸಿದ್ದಾರೆ. ಅದಲ್ಲದೇ, ಗೀತೆಯನ್ನು ದೇವನಾಗರಿ ಲಿಪಿಯಲ್ಲಿ ಪರಿಚಯಿಸಿದರೆ, ಅದು ವಿದ್ಯಾರ್ಥಿಗಳಿಗೆ ಕಿರಿಕಿರಿಯಾಗಿ ಕಾಣುವುದು ಖಂಡಿತ.

ರಾಮ ಮತ್ತು ಕೃಷ್ಣರಿಗಿಂತ ಶಿವ, ಮಹಾವೀರ, ಮಾತೃ ದೇವತೆಗಳು ಮತ್ತು ಜಾನಪದ ದೇವರುಗಳು ಹೆಚ್ಚು ಜನಪ್ರಿಯವಾಗಿರುವ ಜನಸಂಖ್ಯಾತ್ಮಕ, ಸಾಂಸ್ಕೃತಿಕ, ಐತಿಹಾಸಿಕ ಸವಾಲುಗಳ ನಡುವೆ ಮುಖ್ಯಮಂತ್ರಿ ಬೊಮ್ಮಾಯಿ ಶಾಲೆಗಳಲ್ಲಿ ಗೀತೆಯನ್ನು ಪರಿಚಯಿಸುವ ಹಾದಿಯನ್ನು ಏಕೆ ಹಿಡಿದಿದ್ದಾರೆ?

ಇದು ಬಿಜೆಪಿಯ ಸ್ವಯಂವಿನಾಶದ ದಾರಿಯಾಗಿ ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಆದರೆ, ಚುನಾವಣಾ ಲೆಕ್ಕಾಚಾರವು- ಮುಂದಿನ ವರ್ಷದ ವಿಧಾನಸಭಾ ಚುನಾವಣೆಯಲ್ಲಿ ಆಹಿಂದ ಕೂಟವು ಮೂಡಿಬರುವುದನ್ನು ಎದುರಿಸಲು ಅದು ಸಿದ್ಧವಿಲ್ಲ ಎಂಬುದನ್ನು ತೋರಿಸುತ್ತದೆ. ಅಹಿಂದವು ಮೊತ್ತಮೊದಲಾಗಿ ದೇವರಾಜ ಅರಸು ಅವರು ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳವರು ಮತ್ತು ದಲಿತರ ಒಕ್ಕೂಟವನ್ನು ಸೂಚಿಸಲು ಹುಟ್ಟುಹಾಕಿದ ಕನ್ನಡ ಪದ. ಕುರುಬ ಸಮುದಾಯದ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಕ್ರಿಯವಾಗಿ ಈ ಚಿಂತನೆಯನ್ನು ಪ್ರೋತ್ಸಾಹಿಸುತ್ತಿದ್ದಾರೆ. ಇದೇ ಹೊತ್ತಿಗೆ, ಲಿಂಗಾಯತರ ನಡುವೆ ಬಿಜೆಪಿ
ಕುರಿತ ಅಸಮಾಧಾನ ಹೆಚ್ಚುತ್ತಿದೆ. ಲಿಂಗಾಯತರ ಸಣ್ಣ ಬೆಂಬಲದೊಂದಿಗಾದರೂ ಈ ಮೈತ್ರಿಯು ಮೂಡಿಬಂದರೆ, ಬಿಜೆಪಿಯ ಸ್ಥಿತಿಯು 2018ರಂತಾಗುವುದು ಅಥವಾ ಅದಕ್ಕಿಂತ ಕೆಟ್ಟದಾಗುವುದು. ಇದರಿಂದ ದಕ್ಷಿಣದಲ್ಲಿ ಬಿಜೆಪಿಯ ಏಕೈಕ ರಾಜ್ಯದ ಹಿಡಿತವು ಸಡಿಲವಾಗುವುದು. ಬಿಜೆಪಿಯ ದುಷ್ಟ ಯೋಚನೆಯಂತೆ, ಅಲ್ಪಸಂಖ್ಯಾತರನ್ನು ರಾಕ್ಷಸರಂತೆ ಚಿತ್ರಿಸುವುದು- ತನ್ನ ಸ್ವಂತ ಜನರನ್ನು ಹಿಡಿದಿಟ್ಟುಕೊಳ್ಳಲು ಮತ್ತು ತನ್ನ ಕ್ಯಾಂಪಿನಲ್ಲಿ ಹಿಂದೂಗಳೆಂದು ಚಿತ್ರಿಸಲಾಗುವ ಲಿಂಗಾಯತರು ಹೊರಹೋಗದಂತೆ ತಡೆಯಲು ಬಿಜೆಪಿಯ ಮಾಡುತ್ತಿರುವ ಹತಾಶ ಯತ್ನವಾಗಿದೆ ಈ ಪ್ರಯತ್ನ.

ಹೀಗಿದ್ದರೂ, ಈ ರೀತಿಯ ವಿವಿಧ ರಾಜಕೀಯ ತಂತ್ರಗಳು ಸಂವಿಧಾನಕ್ಕೆ ಗಮನಾರ್ಹವಾದ ಹಾನಿ ಉಂಟುಮಾಡಬಹುದು. ಉಪನಿಷತ್ ಹೇಳುವಂತೆ “ಕ್ಷುರಸ್ಯ ಧಾರಾ ನಿಶಿತಾ ಧೂರ್ತ್ಯಯ” ಅಂದರೆ, ಕರ್ನಾಟಕ ಮುಖ್ಯಮಂತ್ರಿಯವರ ಮುಂದಿನ ಹಾದಿ ಕತ್ತಿಯ ಅಲಗಿನ ಮೇಲಿನ ನಡಿಗೆಯಾಗಿದೆ.

ಅನುವಾದ: ನಿಖಿಲ್ ಕೋಲ್ಪೆ

ಪ್ರೊ. ಜಿ ಎನ್ ದೇವಿ

ಪ್ರೊ ಜಿ ಎನ್ ದೇವಿ
ಭಾರತದ ಖ್ಯಾತ ಚಿಂತಕರಲ್ಲಿ ಒಬ್ಬರಾದ ದೇವಿ ಅವರು, ಪೀಪಲ್ ಲಿಂಗ್ವಿಸ್ಟಿಕ್ಸ್ ಸರ್ವೆ ಮೂಲಕ ಚಿರಪರಿಚಿತರು. ‘ಆಫ್ಟರ್ ಅಮ್ನೇಶಿಯಾ’ ಪುಸ್ತಕಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ಚಳವಳಿಗಳ ಸಂಗಾತಿಯಾಗಿರುವ ದೇವಿ ಸದ್ಯಕ್ಕೆ ದಿ ಸೌತ್ ಫೋರಮ್‌ನ ಸಂಚಾಲಕರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

 


ಇದನ್ನೂ ಓದಿ: ಹೆಚ್ಚಿದ ಕೋಮು ಉದ್ವಿಗ್ನತೆ ಹಿನ್ನಲೆ: ಕಂಪೆನಿಗಳನ್ನು ಕರ್ನಾಟಕದಿಂದ ತಮಿಳುನಾಡಿಗೆ ಸೆಳೆಯಲು ಪ್ರಯತ್ನಿಸುತ್ತಿರುವ ಡಿಎಂಕೆ ಸರ್ಕಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...