Homeಕರ್ನಾಟಕಮುಸ್ಲಿಂ ಜೊತೆ ಮದುವೆಯಾದರೆ ಬಹಿಷ್ಕರಿಸಿ ಎನ್ನುವ ಬಿಜೆಪಿ ಮುಖಂಡ, ‘ಅಂತರ್ಜಾತಿ ವಿವಾಹ’ ಎಂದರೆ ಉತ್ತರಿಸುವುದಿಲ್ಲ!

ಮುಸ್ಲಿಂ ಜೊತೆ ಮದುವೆಯಾದರೆ ಬಹಿಷ್ಕರಿಸಿ ಎನ್ನುವ ಬಿಜೆಪಿ ಮುಖಂಡ, ‘ಅಂತರ್ಜಾತಿ ವಿವಾಹ’ ಎಂದರೆ ಉತ್ತರಿಸುವುದಿಲ್ಲ!

ಎಸ್‌ಎಸ್‌ಕೆ ಸಮಾಜದ ಯಾರಾದರೂ ಮುಸ್ಲಿಮರೊಂದಿಗೆ ವಿವಾಹವಾದರೆ ಸಾಮಾಜಿಕ ಬಹಿಷ್ಕಾರ ಹಾಕಬೇಕೆಂದು ಸಲಹೆ ನೀಡಿರುವ ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗೇಶ್‌ ಕಲಬುರ್ಗಿ ಅವರನ್ನು ‘ನಾನುಗೌರಿ.ಕಾಂ’ ಸಂದರ್ಶಿಸಿದೆ.

- Advertisement -
- Advertisement -

ಸೋಮವಂಶ ಸಹಾಸ್ರಾರ್ಜುನ ಕ್ಷತ್ರಿಯ (ಎಸ್‌ಎಸ್‌ಕೆ) ಸಮಾಜದ ಮುಖ್ಯ ಧರ್ಮದರ್ಶಿಗೆ ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗೇಶ್‌ ಕಲಬುರ್ಗಿಯವರು ಪತ್ರ ಬರೆದಿದ್ದು, ಎಸ್‌ಎಸ್‌ಕೆ ಸಮಾಜದ ಹೆಣ್ಣು ಹಾಗೂ ಗಂಡು ಮಕ್ಕಳು ಮುಸ್ಲಿಂ ಸಮಾಜದ ಜೊತೆ ವಿವಾಹವಾದರೆ ಸಾಮಾಜಿಕ ಬಹಿಷ್ಕಾರ ಹಾಕಬೇಕೆಂದು ಸಲಹೆ ನೀಡಿದ್ದಾರೆ.

ಇತ್ತೀಚೆಗೆ ಎಸ್‌ಎಸ್‌ಕೆ ಸಮಾಜದ ಯುವತಿಯೊಬ್ಬರು ಮುಸ್ಲಿಂ ಸಮುದಾಯದ ಯುವಕನನ್ನು ವಿವಾಹವಾಗಿದ್ದರು. ಇದಕ್ಕೆ ‘ಲವ್‌ ಜಿಹಾದ್‌’ ಎಂದು ಕರೆದು ವಿವಾದ ಸೃಷ್ಟಿಸಲು ಯತ್ನಿಸಿದಾಗ, ಯುವತಿ ಸ್ಪಷ್ಟನೆ ನೀಡಿದ್ದಳು. ತಾನು ಇಷ್ಟಪಟ್ಟು ಮದುವೆಯಾಗಿದ್ದೇನೆಂದು ಯುವತಿ ಹೇಳಿದ್ದರಿಂದ, ವಿವಾದ ಸೃಷ್ಟಿಸಲು ಯತ್ನಿಸಿದವರಿಗೆ ಹಿನ್ನಡೆಯಾಗಿತ್ತು. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ನಾಗೇಶ್ ಅವರ ಪತ್ರ ಹೊರಬಿದ್ದಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಸಮಾಜದ ಮುಖ್ಯ ಧರ್ಮದರ್ಶಿ ಹಾಗೂ ಕೇಂದ್ರ ಪಂಚ ಟ್ರಸ್ಟ್‌ ಕಮಿಟಿ ಸದಸ್ಯರಿಗೆ ಪತ್ರ ಬರೆದಿರುವ ಅವರು, “ಇತ್ತೀಚಿನ ದಿನಗಳಲ್ಲಿ ಮುಸ್ಲಿಂ ಸಮಾಜದ ಯುವಕರು ನಮ್ಮ ಸಮಾಜದ ಹೆಣ್ಣು ಮಕ್ಕಳನ್ನು ಟಾರ್ಗೆಟ್‌ ಮಾಡಿ ಲವ್‌ ಜಿಹಾದ್‌ನಲ್ಲಿ ಸಿಲುಕಿಸಿ ಮದುವೆ ಮಾಡಿಕೊಳ್ಳುತ್ತಿದ್ದಾರೆ. ಈಗ ಸಮಾಜ ಕಠಿಣ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ. ಯಾರು ಮುಸ್ಲಿಂ ಸಮಾಜದ ಯುವಕರನ್ನು, ಹೆಣ್ಣುಮಕ್ಕಳನ್ನು ಮದುವೆ ಆಗಿರುತ್ತಾರೋ ಅಂಥವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು” ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ.

“ಮುಸ್ಲಿಮರೊಂದಿಗೆ ವಿವಾಹವಾದ ಕುಟುಂಬವನ್ನು ಸಮಾಜದಿಂದ ಹೊರಗಿಡುವುದು, ಆ ಕುಟುಂಬಕ್ಕೆ ಸಮಾಜದ ಯಾವುದೇ ದೇವಸ್ಥಾನದಲ್ಲಿ ಪ್ರವೇಶ ನಿರಾಕರಿಸುವುದು, ಸಮಾಜದ ಜನ ಯಾರೂ ಹೆಣ್ಣು ಕೊಡದಿರುವುದು ಮತ್ತು ತೆಗೆದುಕೊಳ್ಳದಿರುವುದು, ಸಮಾಜದ ಜನ ತಮ್ಮ ಮನೆಯ ಯಾವುದೇ ಕಾರ್ಯಕ್ರಮದಲ್ಲಿ ಕರೆಯದಿರುವುದು, ಅವರ ಮನೆಯಲ್ಲಿ ಭಾಗವಹಿಸದಿರುವುದು” ಎಂಬ ಸಲಹೆಗಳನ್ನು ನಾಗೇಶ್ ನೀಡಿದ್ದಾರೆ.

ಇದನ್ನೂ ಓದಿರಿ: ಮಾಜಿ ಸಿಎಂಗಳಾದ ಎಚ್‌ಡಿಕೆ, ಸಿದ್ದರಾಮಯ್ಯ, ಸಾಹಿತಿ ಕುಂವೀ ಸೇರಿ 61+ ಜನರಿಗೆ ಕೊಲೆ ಬೆದರಿಕೆ

“ಇಂತಹ ಕಠಿಣ ಕ್ರಮಕೈಗೊಳ್ಳುವುದರಿಂದ ಸಮಾಜದಲ್ಲಿ ಎಚ್ಚರಿಕೆ ಗಂಟೆ ಭಾರಿಸವುದು ಅನಿವಾರ್ಯವಾಗಿದೆ. ಈ ವಿಚಾರವಾಗಿ ಎಸ್‌ಎಸ್‌ಕೆ ಸಮಾಜದ ಕೇಂದ್ರ ಪಂಚ ಟ್ರಸ್ಟ್‌ ಕಮಿಟಿಯ ಸಭೆಯಲ್ಲಿ ದೀರ್ಘವಾಗಿ ಚರ್ಚಿಸಿ ಸಮಾಲೋಚಿಸಿ” ಎಂದು ಅವರು ವಿನಂತಿಸಿಕೊಂಡಿದ್ದಾರೆ.

ನಗರಾಭಿವೃದ್ಧಿ ಪ್ರಾಧಿಕಾರದ ಲೆಟರ್‌ ಹೆಡ್‌ನಲ್ಲಿ ನಾಗೇಶ್‌ ಪಿ.ಕಲಬುರ್ಗಿಯವರು ಪತ್ರ ಬರೆದಿದ್ದು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಪತ್ರವನ್ನು ಹೇಗಾದರೂ ಬರೆದಿರಲಿ, ಈ ರೀತಿಯ ಬಹಿಷ್ಕಾರ ಸಂವಿಧಾನ ಬಾಹಿರವಲ್ಲವೇ? ಎಂಬ ಪ್ರಶ್ನೆಯನ್ನು ಮುಖ್ಯವಾಗಿಟ್ಟುಕೊಂಡು ‘ನಾನುಗೌರಿ.ಕಾಂ’ ನಾಗೇಶ್ ಅವರನ್ನು ಸಂಪರ್ಕಿಸಿತು. ಹಲವಾರು ಪ್ರಶ್ನೆಗಳನ್ನು ಕೇಳಲಾಗಿದ್ದು, ಹಾರಿಕೆಯ ಉತ್ತರಗಳನ್ನು ನಾಗೇಶ್‌ ನೀಡಿದ್ದಾರೆ.

“ಇದು ಪ್ರಾಧಿಕಾರದಿಂದ ಬರೆದ ಅಧಿಕೃತ ಪತ್ರವಲ್ಲ” ಎಂದು ಅವರು ಮೊದಲಿಗೆ ಸ್ಪಷ್ಟಪಡಿಸಿದರು.

ನಾನುಗೌರಿ.ಕಾಂ: “ಅಧಿಕೃತ ಪತ್ರವೋ ಅಲ್ಲವೋ ಬದಿಗಿರಲಿ. ಜವಾಬ್ದಾರಿಯುತ ಸ್ಥಾನದಲ್ಲಿರುವ ನೀವು, ಈ ರೀತಿಯಲ್ಲಿ ಸಂವಿಧಾನ ಬಾಹಿರ ನಿಲುವು ತಾಳಬಹುದೇ? ಮದುವೆ ಎಂಬುದು ವೈಯಕ್ತಿಕ ಆಯ್ಕೆ. ಒಂದು ಕುಟುಂಬವನ್ನು ಬಹಿಷ್ಕರಿಸುವ ಅಧಿಕಾರ ನಿಮಗೆ ಇದೆಯೇ?’’

ನಾಗೇಶ್‌: ನಮ್ಮ ಸಮಾಜದ ಹುಡುಗಿ ಲವ್‌ ಜಿಹಾದ್‌ನಲ್ಲಿ ಸಿಲುಕಿ ರಿಜಿಸ್ಟ್ರಾರ್‌ ಮದುವೆ ಆಗಿದ್ದಾಳೆ. ‌ಇದನ್ನು ಸಮಾಜದ ಮುಖಂಡರು ವಿರೋಧಿಸಿದ್ದಾರೆ. ಹೀಗೇಕೆ ಆಗುತ್ತಿದೆ ಎಂದು ಧರ್ಮದರ್ಶಿಗಳು ಚರ್ಚೆ ಮಾಡಿದರು. ಸಮಾಜದಲ್ಲಿ ಸ್ವಲ್ಪ ಎಚ್ಚರಿಕೆ ಘಂಟೆ ಬಾರಿಸಬೇಕು. ಹಾಗಾದಾಗ ಮಾತ್ರ ಇಂಥವು ಕಡಿಮೆಯಾಗಬಹುದು ಎಂದು ಅವರಲ್ಲಿ ತಿಳಿಸಿದೆ. ಕೆಲವು ಸಲಹೆ ನೀಡುವಂತೆ ಧರ್ಮದರ್ಶಿಗಳು ಸೂಚಿಸಿದರು. ಹೀಗಾಗಿ ಐದು ಸಲಹೆಗಳನ್ನು ಕೊಟ್ಟಿದ್ದೇನೆ. ಅವುಗಳನ್ನು ಒಪ್ಪುವುದು, ಬಿಡುವುದು ಸಮಿತಿಗೆ ಬಿಟ್ಟಿದ್ದು.

ಇದನ್ನೂ ಓದಿರಿ: ಹರ್ಷ ಹತ್ಯೆಯ ನಂತರ ದ್ವೇಷ ಭಾಷಣ: ಸಚಿವ ಈಶ್ವರಪ್ಪ ವಿರುದ್ದ ಎಫ್‌ಐಆರ್‌‌

ನಾನುಗೌರಿ.ಕಾಂ: ಅಧಿಕೃತ ಪತ್ರವೋ, ಅಲ್ಲವೋ ಬೇರೆ ಪ್ರಶ್ನೆ. ನೀವು ಸಮಾಜವನ್ನು ನೋಡುತ್ತೀರೋ; ಜಾತಿ, ಧರ್ಮ ತಾರತಮ್ಯ ನಿರ್ಬಂಧಿಸಿರುವ, ಅಸ್ಪೃಶ್ಯತೆ ಆಚರಣೆ ಶಿಕ್ಷಾರ್ಹ ಅಪರಾಧ ಎಂದಿರುವ ಸಂವಿಧಾನವನ್ನು ಪಾಲನೆ ಮಾಡುತ್ತೀರೋ?

ನಾಗೇಶ್‌: ಸಮಾಜದವರು ಏನು ನಿರ್ಧಾರ ತೆಗೆದುಕೊಳ್ಳುತ್ತಾರೋ ಅದಕ್ಕೆ ಬದ್ಧನಾಗಿರುತ್ತೇನೆ. ಸಮಾಜಕ್ಕಿಂತ ದೊಡ್ಡವನು ನಾನಲ್ಲ.

ನಾನುಗೌರಿ.ಕಾಂ: ಸಂವಿಧಾನ ದೊಡ್ಡದೋ ಸಮಾಜ ದೊಡ್ಡದೋ ತಿಳಿಸಿ.

ನಾಗೇಶ್‌: ಸಂವಿಧಾನವೂ ಬೇಕು, ಸಮಾಜವೂ ಬೇಕು. ಸಮಾಜದ ರಕ್ಷಣೆಯಾಗಬೇಕಲ್ಲ? ನಾನು ಸಲಹೆಗಳನ್ನು ನೀಡಿದ್ದೇನೆಯೇ ಹೊರತು, ಜಾರಿ ಮಾಡಲೇಬೇಕು ಎಂದು ಹಠ ಹಿಡಿದಿಲ್ಲ. ಸಂವಿಧಾನ ವಿರೋಧಿಯಾಗಿದ್ದರೆ ಸಮಾಜ ಸಲಹೆಗಳನ್ನು ಸಮಾಜ ನಿರಾಕರಿಸುತ್ತದೆ. ಸಂವಿಧಾನಕ್ಕಿಂತ ದೊಡ್ಡವರು ಯಾರು? ನಮ್ಮ ಸಮಾಜದ ಯುವತಿ ಮುಸ್ಲಿಂ ಸಮುದಾಯದವರನ್ನು ಮದುವೆಯಾದಲ್ಲಿ, ಇಡೀ ಕುಟುಂಬವೇ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಜಾಗೃತಿ ಮೂಡಿಸಲು ಪತ್ರ ಬರೆದಿದ್ದೇನೆ. ಇದನ್ನು ಜಾರಿ ಮಾಡಲೇಬೇಕೆಂದು ಹೇಳುತ್ತಿಲ್ಲ. ಸಮಾಜದಲ್ಲಿ ಹೆದರಿಕೆ ಹುಟ್ಟಿಲಿ ಎಂದು ಬರೆದಿದ್ದೇನೆ.

ನಾನುಗೌರಿ.ಕಾಂ: ಮದುವೆ ಎಂಬುದು ವೈಯಕ್ತಿಕ ನಿರ್ಧಾರವಾಗಿರುವಾಗ ಹೆದರಿಕೆ ಹುಟ್ಟಿಸಲು ನೀವ್ಯಾರು?

ನಾಗೇಶ್‌: ಸಮಾಜ ರಕ್ಷಣೆಯನ್ನು ನಾವು ಮಾಡಬೇಕಾಗುತ್ತದೆ.

ನಾನುಗೌರಿ.ಕಾಂ: ಸಂವಿಧಾನ ಬಾಹಿರವಾಗಿ ಸಮಾಜವನ್ನು ರಕ್ಷಣೆ ಮಾಡಬಾರದಲ್ಲ?

ನಾಗೇಶ್‌: ನನ್ನ ಸಲಹೆಗಳು ಜಾರಿಯೇನೂ ಆಗಿಲ್ಲವಲ್ಲ.

(ಕೇಂದ್ರ ಸರ್ಕಾರ ಲವ್‌ ಜಿಹಾದ್ ಕುರಿತು ಸಂಸತ್ತಿನಲ್ಲಿ ನೀಡಿರುವ ಹೇಳಿಕೆಯನ್ನು ಅವರ ಗಮನಕ್ಕೆ ತರಲಾಯಿತು. “ಇದುವರೆಗೂ ‘ಲವ್ ಜಿಹಾದ್’ ಪ್ರಕರಣವನ್ನು ಯಾವುದೇ ಕೇಂದ್ರ ಏಜೆನ್ಸಿಗಳು ವರದಿ ಮಾಡಿಲ್ಲ” ಎಂದು ಸರ್ಕಾರ ಹೇಳಿರುವುದನ್ನು ವಿವರಿಸಲಾಯಿತು.)

ನಾನುಗೌರಿ.ಕಾಂ: ಮುಸ್ಲಿಂ ವಿರುದ್ಧ ಮಾತನಾಡುತ್ತಿದ್ದೀರಿ. ಇರಲಿ, ಈಗ ನಿಮ್ಮ ಸಮಾಜದವರು ಹಿಂದೂ ಧರ್ಮದಲ್ಲೇ ಬರುವ ದಲಿತ ಹಾಗೂ ಇತರ ಜಾತಿಯವರನ್ನು ಮದುವೆಯಾದರೆ ನಿಮ್ಮ ನಿಲುವು ಏನಾಗಿರುತ್ತದೆ?

ನಾಗೇಶ್‌: ನಾನು ಸ್ಪಷ್ಟವಾಗಿ ಹೇಳುತ್ತಿರುವುದು ಮುಸ್ಲಿಂ ಬಗ್ಗೆ ಮಾತ್ರ. ಹಿಂದೂ ಸಮಾಜ ಜಾಗೃತಿಯಾಗಬೇಕಿದೆ.

ನಾನುಗೌರಿ.ಕಾಂ: ದಲಿತರೊಂದಿಗೆ ವಿವಾಹವಾದರೂ ನಿಮ್ಮ ಸಮಾಜಕ್ಕೆ ಇಂಥದ್ದೇ ಸಲಹೆ ನೀಡುತ್ತೀರಾ?

ನಾಗೇಶ್‌: ಲವ್‌ ಜಿಹಾದ್‌ ಬಗ್ಗೆ ಹೇಳುತ್ತಿದ್ದೇನೆ.

ನಾನುಗೌರಿ.ಕಾಂ: ಹಾಗಾದರೆ ಬೇರೆ ಜಾತಿಯವರನ್ನು ಮದುವೆಯಾಗಬಹುದಲ್ಲವೇ?

ನಾಗೇಶ್‌: ಇಲ್ಲಿ ಲವ್‌ ಜಿಹಾದ್‌- ಮಾತ್ರ ವಿರೋಧಿಸುತ್ತಿದ್ದೇನೆ. ಮೊನ್ನೆ ನಡೆದ ಘಟನೆ ಬೇಜಾರಾಗಿದೆ.

ಅಂತರ್‌ಜಾತಿ ವಿವಾಹದ ಕುರಿತು ಎಷ್ಟೇ ಪ್ರಶ್ನಿಸಿದರೂ ನಾಗೇಶ್ ಅವರ ಉತ್ತರ ಬದಲಾಗಲೇ ಇಲ್ಲ. ಅಂತರ್ಜಾತಿ ವಿವಾಹವು ಸಂವಿಧಾನದಲ್ಲಿ ಮಾನ್ಯವಾಗಿದೆ ಎಂದು ಪದೇ ಪದೇ ಉಲ್ಲೇಖಿಸಿದರೂ, ‘ಲವ್‌ ಜಿಹಾದ್‌, ಲವ್ ಜಿಹಾದ್‌’ ಎನ್ನುತ್ತಾ ಮಾತು ಮುಗಿಸಿದರು.

ಅಂತಾರ್ಜಾತಿ ವಿವಾಹವನ್ನು ಒಪ್ಪಲ್ಲ: ಎಸ್‌ಎಸ್‌ಕೆ ಸಮುದಾಯದ ಮುಖಂಡ

ಎಸ್‌ಎಸ್‌ಕೆ ಸಮಾಜ ಚಿಂತನ ಮಂಥನ ರಾಜ್ಯ ಸಮಿತಿಯ ಪ್ರಮುಖರಾದ ಹನುಮಂತ ಚಂದ್ರಕಾಂತ ನಿರಂಜನ ‘ನಾನುಗೌರಿ.ಕಾಂ’ ಸಂಪರ್ಕಕ್ಕೆ ಸಿಕ್ಕರು. ನಾಗೇಶ್ ಅವರಿಗೆ ಕೇಳಿದ ಪ್ರಶ್ನೆಗಳನ್ನೇ ಅವರಲ್ಲಿಯೂ ಪ್ರಸ್ತಾಪಿಸಲಾಯಿತು. “ಸಂವಿಧಾನ, ಕಾಯ್ದೆಗಳು ಒಂದು ಕಡೆ ಇದ್ದರೆ, ಸಮಾಜದ ಕಟ್ಟಳೆಗಳು ಬೇರೆ ಇವೆ” ಎಂದ ಅವರು, ನಾಗೇಶ್‌ ಅವರ ಪತ್ರವನ್ನು ಸಮರ್ಥಿಸಿಕೊಂಡರು.

ಹನುಮಂತ ಅವರು ಲವ್‌ ಜಿಹಾದ್‌ನಿಂದ ಮಾತು ಆರಂಭಿಸಿ ಹಿಜಾಬ್‌, ಮುಸ್ಲಿಮರ ಬಂದ್‌ ಇತ್ಯಾದಿಗಳನ್ನೆಲ್ಲ ಪ್ರಸ್ತಾಪಿಸಿದರು. “ಮುಸ್ಲಿಂ ಸಮುದಾಯವನ್ನು ಹೊರತುಪಡಿಸಿ ಹೇಳುವುದಾದರೆ ಹಿಂದೂ ಧರ್ಮದಲ್ಲಿನ ಇತರ ಜಾತಿಗಳೊಂದಿಗೂ ನಿಮ್ಮ ಸಮಾಜದವರು ವಿವಾಹ ಆಗುವುದನ್ನು ನೀವು ಒಪ್ಪುವುದಿಲ್ಲವೇ?” ಎಂದು ಪ್ರಶ್ನಿಸಲಾಯಿತು.

“ಅದನ್ನೂ ಕೂಡ ನಾವು ಸ್ವೀಕಾರ ಮಾಡಲ್ಲ. ಅಂತಾರ್ಜಾತಿ ವಿವಾಹವೂ ತಪ್ಪು” ಎಂದರು.

ಹುಬ್ಬಳ್ಳಿ–ಧಾರವಾಡದ ಎಸ್‌ಎಸ್‌ಕೆ ಸಮಾಜದ ಕೇಂದ್ರ ಪಂಚ ಸಮಿತಿಯ ಧರ್ಮದರ್ಶಿ ನೀಲಕಂಠ ಪಿ.ಜಡಿ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದೇವೆ. ಅವರ ಪ್ರತಿಕ್ರಿಯೆ ಸಿಕ್ಕಲ್ಲಿ ಅಪ್‌ಡೇಟ್‌ ಮಾಡಲಾಗುವುದು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಇದನ್ನೂ ಓದಿರಿ: ಕೊಲೆ ಬೆದರಿಕೆ ಸ್ವೀಕರಿಸಿರುವ ಚಿಂತಕರು ಏನಂತಾರೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಹಾಗಾದರೆ ಆರ್ ಎಸ್ ಎಸ್ ಮುಖಂಡರ ಮಕ್ಕಳ ಮದುವೆ ಬಗ್ಗೆ ಯೆನನ್ನುವೆ ನೀನು

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...