Homeಕರ್ನಾಟಕನಮ್ಮ ಸಚಿವರಿವರು; ಬುದ್ಧ-ಬಸವ-ಅಂಬೇಡ್ಕರ್ "ಮಂತ್ರವಾದಿ" ಸತೀಶ್ ಜಾರಕಿಹೊಳಿ!

ನಮ್ಮ ಸಚಿವರಿವರು; ಬುದ್ಧ-ಬಸವ-ಅಂಬೇಡ್ಕರ್ “ಮಂತ್ರವಾದಿ” ಸತೀಶ್ ಜಾರಕಿಹೊಳಿ!

- Advertisement -
- Advertisement -

ಸಮಾಜಮುಖಿ-ಮೂರ್ತಿ ಭಂಜಕ ನೀತಿ-ನಿಲುವು ಮತ್ತು ನಿರ್ಧಾರಗಳಿಂದ ರಾಜ್ಯ ರಾಜಕಾರಣದ ಪಡಸಾಲೆಯಲ್ಲಿ ಬಹುಚರ್ಚಿತ ರಾಜಕಾರಣಿ ಎನಿಸಿರುವ ಸತೀಶ್ ಜಾರಕಿಹೊಳಿ ಮತ್ತೆ ಮಂತ್ರಿಯಾಗಿದ್ದಾರೆ; ತನಗೆ ಪ್ರಾಪ್ತವಾಗುವ ಸಂಪತ್ತು ಮತ್ತು ಅಧಿಕಾರವನ್ನು ಶೋಷಿತ-ಅಸಹಾಯಕ-ಬಡ ಸಮುದಾಯದ ಮಂದಿ ಸ್ವಾವಲಂಬಿಗಳಾಗಿ ಬದುಕಲು ಸಹಕಾರವಾಗುವಂತೆ ಬಳಸುವ ಅಪರೂಪದ ರಾಜಕಾರಣಿ ಸತೀಶ್ ಜಾರಕಿಹೊಳಿ. ಹರಿತ ವೈಚಾರಿಕ ನಡೆ-ನುಡಿಯಿಂದ ಸತೀಶ್ ಜಾರಕಿಹೊಳಿಯವರ ಹಲವು ನಡೆನುಡಿಗಳು ಸನಾತನ ಲೋಕದಲ್ಲಿ ಅಲ್ಲೋಲಕಲ್ಲೋಲ ಉಂಟುಮಾಡಿದ್ದೂ ಇದೆ! ಪರಿಶಿಷ್ಟ ಪಂಗಡದ ಪ್ರಭಾವಿ ಬೇಡ (ವಾಲ್ಮೀಕಿ) ಜನಾಂಗದ ಸತೀಶ್ ಜಾರಕಿಹೊಳಿ ಬುದ್ಧ-ಬಸವ-ಅಂಬೇಡ್ಕರ್ ತತ್ವ-ಸಿದ್ಧಾಂತ ಜಪಿಸುತ್ತಲೆ ಕರ್ನಾಟಕದ ರಾಜಕೀಯ ರಂಗದ ಮುಂಚೂಣಿಗೆ ಬಂದು ತಲುಪಿರುವುದು ಆಸಕ್ತಿದಾಯಕವಾಗಿದೆ.

ಪಿಯುಸಿವರೆಗೆ ಅಕಾಡೆಮಿಕ್ ಶಿಕ್ಷಣ ಮುಗಿಸಿರುವ ಸತೀಶ್ ಜಾರಕಿಹೊಳಿ ಪ್ರಖರ ವೈಚಾರಿಕತೆ ಮತ್ತು ದೂರದರ್ಶಿತ್ವವುಳ್ಳ ಜನಸಾಮಾನ್ಯರ ನಂಬಿಕಸ್ಥ ನಾಯಕ ಎಂಬುದನ್ನು ವಿರೋಧಿಗಳೂ ಒಪ್ಪಿಕೊಳ್ಳುತ್ತಾರೆ. ಗೋಕಾಕ್‌ನ ಬೇಡ ಸಮುದಾಯದ ತಳಮಟ್ಟದ ಒಕ್ಕಲುತನ ಕುಟುಂಬದ ಲಕ್ಷ್ಮಣರಾವ್ ಜಾರಕಿಹೊಳಿಯ ಎರಡನೆ ಮಗ ಸತೀಶ್. ಸಾಂಪ್ರದಾಯಿಕ ಶಿಕ್ಷಣದ ಗಂಧವಿಲ್ಲದಿದ್ದರೂ ಲಕ್ಷ್ಮಣರಾವ್ ಜಾರಕಿಹೊಳಿ ವ್ಯಾವಹಾರಿಕವಾಗಿ ಚಾಕಚಕ್ಯತೆಯ ಧಾಡಸಿಯಾಗಿದ್ದರು. ಸೇಂಧಿ ಇಳಿಸುವ ಕಸಬು-ಮಾರಾಟ ಮತ್ತು ಸರಕಾರಿ ಸಾರಾಯಿ ಗುತ್ತಿಗೆಯಿಂದ ಅಪಾರ ಹಣ ಗಳಿಸಿದ್ದ ಲಕ್ಷ್ಮಣರಾವ್‌ರ ಐವರು ಮಕ್ಕಳು ಸಕ್ಕರೆ, ಸಿನೆಮಾ ಉದ್ಯಮದಲ್ಲಿ ಆ ಹಣ ತೊಡಗಿಸಿ ಪ್ರವರ್ಧಮಾನಕ್ಕೆ ಬಂದರೆನ್ನಲಾಗುತ್ತಿದೆ; ಕ್ರಮೇಣ ಗೋಕಾವಿಯ ರಾಜಕೀಯ, ಸಾಮಾಜಿಕ, ಆರ್ಥಿಕ ವ್ಯವಹಾರ ನಿಯಂತ್ರಿಸುವ ಮಟ್ಟಕ್ಕೂ ಬಂದರು.

ಲಕ್ಷ್ಮಣರಾವ್ ಜಾರಕಿಹೊಳಿ

ಸಾವಿರಾರು ಕಾರ್ಮಿಕರು ಕೆಲಸ ಮಾಡುವ ಗೋಕಾಕ್‌ನ ನೂಲಿನ ಗಿರಣಿಯ ಕಾರ್ಮಿಕ ಸಂಘಟನೆ ಮೇಲೆ ಹಿಡಿತ ಸಾಧಿಸುವಾತ ಸ್ಥಳೀಯ ಎಮ್ಮೆಲ್ಲೆಯಾಗುತ್ತಾನೆಂಬ ರಾಜಕೀಯ ವಾತಾವರಣ 1990ರ ದಶಕದ ಆಸುಪಾಸಿನಲ್ಲಿತ್ತು. ಆ ಸಂದರ್ಭದಲ್ಲಿ ಶಾಸಕನಾಗಿದ್ದ ಶಂಕರ್ ಕರಿನಿಂಗ್ ತಂಡ ಮತ್ತು ಲಕ್ಷ್ಮಣರಾವ್ ಜಾರಕಿಹೊಳಿ ಮಕ್ಕಳ ಬಳಗದ ಮಧ್ಯೆ ಗೋಕಾವಿ ಮಿಲ್ ಸಾಮ್ರಾಜ್ಯ ವಶಪಡಿಸಿಕೊಳ್ಳುವ ಘನಘೋರ ಯುದ್ಧ ನಡೆಯಿತು. ಭೀಭತ್ಸ ರಕ್ತಪಾತ-ಕೊಲೆಯಾಗಿ ಹೋಯಿತು. ಕಾನೂನು ಓದಲೆಂದು ಧಾರವಾಡ ಸೇರಿಕೊಂಡಿದ್ದ ಸತೀಶ್ ಮೇಲೆ ಕ್ರಿಮಿನಲ್ ಕೇಸು ದಾಖಲಾಯಿತು. ಈ ವ್ಯಾಜ್ಯದಿಂದಾಗಿ ಶಿಕ್ಷಣ ಮೊಟಕುಗೊಳಿಸಿದ ಸತೀಶ್ ಗೋಕಾಕ್‌ನಲ್ಲಿ ಸಕ್ಕರೆ ಕಾರ್ಖಾನೆ ವ್ಯವಹಾರ ಮತ್ತು ರಾಜಕಾರಣದಲ್ಲಿ ತೊಡಗಿಕೊಂಡರು.

ಬೆಳಗಾವಿ ಜಿಲ್ಲೆಯ ವಿವಿಧ ಸಂಘ-ಸಂಸ್ಥೆ, ವಿದ್ಯಾರ್ಥಿ ಸಂಘಟನೆ, ಸಹಕಾರಿ-ಸಕ್ಕರೆ ರಾಜಕಾರಣದಲ್ಲಿ ಸಕ್ರಿಯವಾಗಿದ್ದ ಸತೀಶ್ ಹಿಂದುಳಿದ ವರ್ಗದ ನಾಯಕ ಸಿದ್ದರಾಮಯ್ಯರ ನಿಷ್ಠಾನುಯಾಯಿಯಾಗಿ ಜನತಾ ಪರಿವಾರದ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು. ಸಿದ್ದು ಅವರ ಬೆಂಬಲದಿಂದ 1998ರಲ್ಲಿ ವಿಧಾನ ಪರಿಷತ್ ಸದಸ್ಯರಾದ ಸತೀಶ್ ಜಾರಕಿಹೊಳಿ 2004ರಲ್ಲಿ ಮತ್ತೊಂದು ಅವಧಿಗೂ ಚುನಾಯಿತರಾದರು. ಜಿಲ್ಲೆಯ ಸಕ್ಕರೆ ಉದ್ಯಮ ಲಾಬಿಯ ಆಯಕಟ್ಟಿನ ನಾಯಕಾಗ್ರೇಸರಾದ ಸತೀಶ್, ಅಣ್ಣ ರಮೇಶ್ ಮತ್ತು ತಮ್ಮ ಬಾಲಚಂದ್ರ ಜಾರಕಿಹೊಳಿಗೂ ರಾಜಕೀಯ ನೆಲೆಯನ್ನು ಕಲ್ಪಿಸಿದರು ಎಂದು ಜಿಲ್ಲೆಯ ರಾಜಕಾರಣದ ಇತಿಹಾಸ ಬಲ್ಲವರು ಹೇಳುತ್ತಾರೆ. 2008, 2013 ಮತ್ತು 2018ರಲ್ಲಿ ಸತತ ಮೂರು ಬಾರಿ ಯಮಕನಮರಡಿ ಅಸೆಂಬ್ಲಿ ಕ್ಷೇತ್ರದಿಂದ ಶಾಸಕನಾಗಿ ಚುನಾಯಿತರಾದ ಸತೀಶ್ ಮೂರು ಬಾರಿಯೂ ಮೂರು ಸರಕಾರಗಳಲ್ಲಿ ಸಚಿವರಾಗಿದ್ದರು. ಈ ನಡುವೆ ಬುದ್ಧ, ಬಸವ ಮತ್ತು ಅಂಬೇಡ್ಕರ್ ತತ್ವಾದರ್ಶಗಳನ್ನು ಅತಿಯಾಗಿ ಎದೆಗೊತ್ತಿಕೊಂಡಿದ್ದ ಸತೀಶ್ ಪ್ರಗತಿಪರರು ಮತ್ತು ವೈಚಾರಿಕ ಸಂಘಟನೆಗಳ ನಿಕಟಸಂಪರ್ಕ ಸಾಧಿಸಿದ್ದರು.

ಇದನ್ನೂ ಓದಿ: ಮುಸ್ಲಿಂ ಸಮುದಾಯಕ್ಕೆ ಸೇರಿದ ಮೊದಲ ಸ್ಪೀಕರ್ ಯು.ಟಿ. ಖಾದರ್

ಈ ಹೊತ್ತಿಗೆ ಸತೀಶ್ ಜಾರಕಿಹೊಳಿಯವರಿಗೆ ತನ್ನ ಬೇಡ (ನಾಯಕ) ಸಮುದಾಯವೂ ಸೇರಿದಂತೆ ತಳ ಸಮುದಾಯಗಳ ಜನರು ಆರ್ಥಿಕ, ಸಾಮಾಜಿಕವಾಗಿ ಹಿಂದುಳಿಯಲು ಮೂಢನಂಬಿಕೆ ಮತ್ತು ಗೊಡ್ಡು ಸನಾತನ ಸಂಪ್ರದಾಯ ಪಾಲನೆಯೇ ಪ್ರಮುಖ ಕಾರಣವೆಂಬುದು ಮನದಟ್ಟಾಗಿತ್ತು. ಅಹಿಂದ ವರ್ಗವನ್ನು ಮೌಢ್ಯದಿಂದ ಹೊರತರುವ ವಿಸ್ತೃತ ಕಾರ್ಯಯೋಜನೆಯನ್ನು ಹಮ್ಮಿಕೊಂಡರು; ಬುದ್ಧ, ಬಸವ, ಅಂಬೇಡ್ಕರ್ ಸಿದ್ಧಾಂತ ಪ್ರಸಾರ ಮಾಡುವ ಟೀಮುಗಳನ್ನು ತಯಾರು ಮಾಡಿಸಿದರು. ವಿವಿಧ ಸಂಘಟನೆಗಳಿಗೆ ಉಚಿತ ವಸತಿ, ಊಟೋಪಚಾರ ಒದಗಿಸಿ ಪ್ರಗತಿಪರ ಚಿಂತನೆಯ ವಿಚಾರಸಂಕಿರಣ ನಡೆಸಿದರು; ತರಬೇತಿ ಕೊಡಿಸಿದರು. ನಿರುದ್ಯೋಗಿ ಯುವಕರಿಗೆ ಬದುಕಲು ಬೇಕಾದ ಜೀವನ ಕಸುಬಿನ ಕೌಶಲ್ಯ ತರಬೇತಿಗೆ ವ್ಯವಸ್ಥೆ ಮಾಡಿದರು. ದೇವರ ಭಯದಲ್ಲಿ ಅಸಹಾಯಕ ಮಂದಿ ದಿಕ್ಕೆಡುವುದನ್ನು ತಪ್ಪಿಸುವ ಪ್ರಯತ್ನ ಮಾಡಿದರು. ಪೊಲೀಸ್, ಸೈನಿಕ, ಐಎಎಸ್, ಕೆಎಎಸ್ ಮುಂತಾದ ಸರಕಾರಿ ನೌಕರಿ ಪಡೆಯಲು ಬೇಕಾದ ಆರೆಂಟು ಕೋಚಿಂಗ್ ಸೆಂಟರ್ ತೆರೆದರು.

ವಿಚಾರವಾದಿ ರಾಜಕಾರಣಿ ಎಂದು ಪರಿಚಿತರಾಗಿರವ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ರಚಿತವಾಗಿರುವ “ಮಾನವ ಬಂಧುತ್ವ ವೇದಿಕೆ” ಬೆಳಗಾವಿ ಜಿಲ್ಲೆಯ ಗಡಿ ದಾಟಿ ಇತರ ಕೆಲವು ಜಿಲ್ಲೆಗಳಲ್ಲೂ ನೆಲೆಕಂಡಿದೆ. ಬಂಧುತ್ವ ಬೆಳೆಸುವ ಈ ವೇದಿಕೆಯ ಮೂಢನಂಬಿಕೆ ವಿರೋಧಿ ಅಭಿಯಾನ, ಸಹಿಷ್ಣುತೆ, ಸೌಹಾರ್ದತೆ, ಸಹಬಾಳ್ವೆ ಕುದುರಿಸುವ ಕಾರ್ಯಕ್ರಮಗಳಿಗೆ ಜನರು ಆಕರ್ಷಿತರಾಗುತ್ತಿದ್ದಾರೆ. ಒಂದೆಡೆ ಮಾನವ ಬಂಧುತ್ವ ವೇದಿಕೆ ಅಸಮಾನತೆ, ಮೌಢ್ಯ, ಧರ್ಮ ದ್ವೇಷ, ದೇವರ ಭಯದ ಶೋಷಣೆಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದರೆ, ಸತೀಶ್ ಜಾರಕಿಹೊಳಿ ಖುದ್ದು ಸಾರ್ವಜನಿಕವಾಗಿ ಕಂದಾಚಾರಗಳನ್ನು ಧಿಕ್ಕರಿಸಿ ಮಾದರಿ ಆಗುತ್ತಿದ್ದಾರೆ. ವೈದಿಕ ಪಂಚಾಂಗ ಮತ್ತು ಜ್ಯೋತಿಷ್ಯ ಶಾಸ್ತ್ರದಲ್ಲಿ ಅನಿಷ್ಟ-ಅಶುಭವೆಂದು ಪರಿಗಣಿತವಾದ “ರಾಹುಕಾಲ”ದಲ್ಲಿಯೇ ತಮ್ಮ ಪ್ರಮುಖ ಮತ್ತು ಸವಾಲಿನ ಕೆಲಸ-ಕಾರ್ಯಕ್ಕೆ ಕೈಹಾಕುವ ಸತೀಶ್ ಜಾರಕಿಹೊಳಿ, ತನ್ನ ಮಗ ಮತ್ತು ಮಗಳನ್ನು ಕಟ್ಟಿಕೊಂಡು ಜತೆಗಾರರೊಂದಿಗೆ ಸ್ಮಶಾನದಲ್ಲಿ ರಾತ್ರಿ ವಾಸ್ತವ್ಯ ಮಾಡುವ ಕ್ರಾಂತಿಕಾರಕ ನಡೆಗೂ ಹೆಸರಾಗಿದ್ದಾರೆ.

2018ರ ಚುನಾವಣೆ ಹೊತ್ತಲ್ಲಿ ಸತೀಶ್ ಜಾರಕಿಹೊಳಿ ರಾಹುಕಾಲದಲ್ಲೇ ನಾಮಪತ್ರ ಸಲ್ಲಿಸಿ ಸ್ಮಶಾನದಿಂದ ಪ್ರಚಾರ ಶುರುಮಾಡಿದ್ದರು. ಅಷ್ಟೇ ಅಲ್ಲ ಕ್ಯಾಂಡಿಡೇಟ್ ಕ್ಷೇತ್ರದಲ್ಲಿ ಇಲ್ಲದಿದ್ದರೂ ಗೆಲ್ಲಬಹುದು ಎಂದು ತೋರಿಸುವ ಪ್ರಯತ್ನ ಮಾಡಿದ್ದರು. ಸತೀಶ್ ನಾಮಪತ್ರ ಸಲ್ಲಿಸಿದ ಮರುಕ್ಷಣವೆ ಸಿದ್ದರಾಮಯ್ಯನವರು ಸ್ಪರ್ಧಿಸಿದ್ದ ಬಾದಾಮಿಗೆ ಹೋಗಿ ಉಳಿದಿದ್ದರು; ಮತದಾನದ ದಿನ ಬಂದಿದ್ದ ಸತೀಶ್ ಆ ಚುನಾವಣೆಯಲ್ಲಿ 2,850 ಮತಗಳ ಕೂದಲೆಳೆ ಅಂತರದಲ್ಲಿ ಆಯ್ಕೆಯಾಗಿದ್ದರು. ಇದು ರಾಹುಕಾಲದ ಮಹಿಮೆ ಎಂದು ಸಂಪ್ರದಾಯವಾದಿ ಕರ್ಮಠರು ಜಾಗಟೆ ಬಾರಿಸಿದ್ದರೂ ಕೂಡ, ತಾನು ಕ್ಷೇತ್ರದಲ್ಲಿ ಇಲ್ಲದಿದ್ದರಿಂದ ಗೆಲುವಿನ ಅಂತರ ಕಡಿಮೆಯಾಗಿದೆ; ಮುಂದಿನ ಚುನಾವಣೆಯಲ್ಲಿ 50 ಸಾವಿರಕ್ಕಿಂತ ಹೆಚ್ಚು ಲೀಡ್‌ನಲ್ಲಿ ಗೆದ್ದುತೋರಿಸುತ್ತೇನೆ ಎಂದಿದ್ದರು.

ಕಳೆದ ವಾರ ಪ್ರಕಟವಾದ ಚುನಾವಣೆಯ ಫಲಿತಾಂಶದಲ್ಲಿ ಸತೀಶ್ ಜಾರಕಿಹೊಳಿ ತಮ್ಮ ಸಮೀಪದ ಬಿಜೆಪಿ ಪ್ರತಿಸ್ಪರ್ಧಿಯನ್ನು 57,211 ಮತದಿಂದ ಮಣಿಸಿ ಮೂಢನಂಬಿಕೆ “ಮಾಟಗಾರರ” ಬಂಡವಾಳ ಬಯಲುಗೊಳಿಸಿದ್ದಾರೆ ಎಂಬ ಅಭಿಪ್ರಾಯ ಕೇಳಿಬರುತ್ತಿದೆ. ಈ ಸಲವೂ ಸತೀಶ್ ಚುನಾವಣಾ ನಾಮಪತ್ರವನ್ನು ರಾಹುಕಾಲದಲ್ಲಿಯೇ ಸಲ್ಲಿಸಿದ್ದರಷ್ಟೇ ಅಲ್ಲ, ಸ್ಮಶಾನದಿಂದಲೇ ಮತಯಾಚನೆಯ “ಶುಭ”ಕಾರ್ಯ ಆರಂಭಿಸಿದ್ದರು! ಕೆಲವು ತಿಂಗಳ ಹಿಂದೆ ನಿಪ್ಪಾಣಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಸತೀಶ್ ಜಾರಕಿಹೊಳಿ “ಹಿಂದು” ಎಂಬ ಪದ ಪರ್ಶಿಯನ್ ಮೂಲದ್ದು; ಅದಕ್ಕೆ ಅಲ್ಲಿ ಅಶ್ಲೀಲ ಎಂಬರ್ಥವಿದೆ ಎಂದು ಹೇಳಿದ್ದು ಹಿಂದುತ್ವವಾದಿಗಳ ಕಣ್ಣು ಕೆಂಪಾಗಿಸಿತ್ತು. ಸಂಘ ಪರಿವಾರ ಸತೀಶ್‌ರನ್ನು ಸೋಲಿಸಲು ಸ್ಕೆಚ್ ಹಾಕಿತ್ತು. ಆದರೆ ಪ್ರವಾಹದ ವಿರುದ್ಧ ಈಜುವ ಕಲೆ ಕರಗತ ಮಾಡಿಕೊಂಡಿರುವ ಸತೀಶ್ ಭರ್ಜರಿ ಅಂತರದಲ್ಲಿಯೇ ಗೆದ್ದಿದ್ದಾರೆ.

ಸೈದ್ಧಾಂತಿಕ ಬದ್ಧತೆಯ ರಾಜಕಾರಣ ಮಾಡುತ್ತಿರುವ ಸತೀಶ್ 2013ರಲ್ಲಿ, ತಮ್ಮ “ಗುರು” ಸಿದ್ದು ಅಬಕಾರಿ ಖಾತೆ ವಹಿಸಿದಾಗ-ಇದು ತನಗೆ ಹೊಂದಿಕೆಯಾಗದ ಇಲಾಖೆ; ಜನರಿಗೆ ಸಾರಾಯಿ ಕುಡಿಸುವ ಕೆಲಸ ಮಾಡಲಾರೆ; ಬೇರೆ ಖಾತೆ ಕೊಡಿ ಎಂದು ತಗಾದೆ ತೆಗೆದು ಸಣ್ಣ ಕೈಗಾರಿಕಾ ಖಾತೆ ಪಡೆದುಕೊಂಡಿದ್ದರು. ಈಗ ಸತೀಶ್ ಯಾವ ಖಾತೆ ಪಡೆಯುತ್ತಾರೆ, ಸಿಕ್ಕ ಖಾತೆಯನ್ನು ಅಹಿಂದ ಹಿತಕ್ಕೆ ಹೇಗೆ ಬಳಸುತ್ತಾರೆಂಬ ಕುತೂಹಲ ಅವರು ಪ್ರತಿನಿಧಿಸುವ ಯಮಕನಮರಡಿ, ಬೆಳಗಾವಿ ಜಿಲ್ಲೆಗಳಲ್ಲಷ್ಟೇ ಅಲ್ಲ, ಇಡೀ ರಾಜ್ಯದಲ್ಲಿ ಮೂಡಿದೆ. ರಾಜಕೀಯ ಸ್ಥಾನಮಾನಕ್ಕಾಗಿ ಹೋರಾಡುವ “ಸಮನ್ವಯ” ಸಿದ್ಧಾಂತಿಗಳ ಹಾವಳಿಯ ಈ ಕಾಲಘಟ್ಟದಲ್ಲಿ ಪ್ರಖರ ವೈಚಾರಿಕತೆಯ ಸತೀಶ್ ಜಾರಕಿಹೊಳಿ ಶೋಷಿತ ಸಮದಾಯದ ಗಟ್ಟಿ ಧ್ವನಿಯ ಅಪರೂಪದ ರಾಜಕೀಯ ನಾಯಕನಾಗಿ ಕಾಣಿಸುತ್ತಿದ್ದಾರೆ.

ಇದನ್ನೂ ಓದಿ: ಬಿಕ್ಕಟ್ಟಿನಲ್ಲೂ ಸೆಕ್ಯುಲರ್ ಮೌಲ್ಯಗಳನ್ನು ಬಿಡದ ಎತ್ತರದ ನಾಯಕ ಸಿದ್ದರಾಮಯ್ಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಲಂಚ ಪಡೆಯುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕ; ಲೋಕಾಯುಕ್ತ ಪೊಲೀಸರಿಂದ ಚಂದ್ರು ಲಮಾಣಿ ಬಂಧನ

ಲಂಚ ಪಡೆಯುವಾಗಲೇ ಲೋಕಾಯುಕ್ತ ಪೊಲೀಸರು ಬಿಜೆಪಿ ಶಾಸಕ ಚಂದ್ರು ಲಮಾಣಿ ಅವರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಗುತ್ತಿಗೆದಾರ ವಿಜಯ್ ಪೂಜಾರ್ ಅವರ ದೂರಿನ ಮೇರೆಗೆ ಗದಗ ಲೋಕಾಯುಕ್ತ ಪೊಲೀಸರು ನಡೆಸಿದ...

ಎಐ ಶೃಂಗಸಭೆಯಲ್ಲಿ ಪ್ರತಿಭಟನೆ : ನಾಲ್ವರು ಯುವ ಕಾಂಗ್ರೆಸ್‌ ಕಾರ್ಯಕರ್ತರು 5 ದಿನ ಪೊಲೀಸ್ ಕಸ್ಟಡಿಗೆ

ನವದೆಹಲಿಯ ಭಾರತ ಮಂಟಪದಲ್ಲಿ ಆಯೋಜಿಸಿದ್ದ ಎಐ ಶೃಂಗಸಭೆಯಲ್ಲಿ ಶರ್ಟ್ ಬಿಚ್ಚಿ ಪ್ರತಿಭಟಿಸಿದ್ದ ನಾಲ್ವರು ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ದೆಹಲಿ ನ್ಯಾಯಾಲಯ ಶನಿವಾರ (ಫೆ.21) 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ದೆಹಲಿ ಪೊಲೀಸರು...

ಮೈಮೇಲೆ ದೇವರು ಬಂದಂತೆ ನಟಿಸಿ ದಲಿತ ನವದಂಪತಿ ದೇವಸ್ಥಾನ ಪ್ರವೇಶ ನಿರಾಕರಣೆ: ವ್ಯಕ್ತಿ ಬಂಧನ

ಮೈಮೇಲೆ ದೇವರು ಬಂದಂತೆ ನಾಟಕವಾಡಿದ ವ್ಯಕ್ತಿಯೊಬ್ಬ, ದೇವಸ್ಥಾನಕ್ಕೆ ಬಂದಿದ್ದ ದಲಿತ ನವದಂಪತಿಯನ್ನು ಹೊರಗೆ ಕಳುಹಿಸುವ ಮೂಲಕ ಅಸ್ಪೃಶ್ಯತೆ ಆಚರಣೆ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಗೋಣಿ ತುಮಕೂರಿನಲ್ಲಿ (ಫೆ.20) ನಡೆದಿದೆ. ಗೃಹ...

ಜಾತಿವಾದಿ ಹೇಳಿಕೆ: ಜೆಎನ್‌ಯು ಉಪಕುಲಪತಿ ರಾಜೀನಾಮೆಗೆ ವಿದ್ಯಾರ್ಥಿ ಸಂಘ ಆಗ್ರಹ

ದೆಹಲಿಯ ಜವಾಹರಲಾಲ್ ನೆಹರು ವಿಶ್ವ ವಿದ್ಯಾಲಯದ (ಜೆಎನ್‌ಯು) ಉಪಕುಲಪತಿ ಶಾಂತಿಶ್ರೀ ಧೂಳಿಪುಡಿ ಪಂಡಿತ್ ಅವರು 'ದ ಸಂಡೇ ಗಾರ್ಡಿಯನ್' ಯೂಟ್ಯೂಬ್‌ ಚಾನೆಲ್‌ನ ಪಾಡ್‌ಕಾಸ್ಟ್‌ನಲ್ಲಿ 'ಜಾತಿ ಮತ್ತು ವಿಕ್ಟಿಮ್ ಕಾರ್ಡ್' ಕುರಿತು ನೀಡಿದ ಹೇಳಿಕೆ...

10 ವರ್ಷಗಳಲ್ಲಿ 33 ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ : ದಂಪತಿಗೆ ಮರಣದಂಡನೆ

ಸುಮಾರು 10 ವರ್ಷಗಳಲ್ಲಿ 33 ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ದಂಪತಿಗೆ ಮರಣದಂಡನೆ ವಿಧಿಸಿ ಉತ್ತರ ಪ್ರದೇಶದ ಬಂಡಾ ವಿಶೇಷ ಪೋಕ್ಸೋ ನ್ಯಾಯಾಲಯ ಶುಕ್ರವಾರ (ಫೆ.20) ಆದೇಶಿಸಿದೆ. ಉತ್ತರ ಪ್ರದೇಶದ...

ರಾಜ್ಯಸಭೆ ಚುನಾವಣೆ : ಬಿಹಾರದಲ್ಲಿ ಕಿಂಗ್ ಮೇಕರ್ ಆದ ಓವೈಸಿ ಪಕ್ಷ

ಮಾರ್ಚ್ 16ರಂದು ನಡೆಯಲಿರುವ ಬಿಹಾರದ ಐದು ರಾಜ್ಯಸಭಾ ಸ್ಥಾನಗಳ ಚುನಾವಣೆಯಲ್ಲಿ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ ಪಕ್ಷವು 'ಕಿಂಗ್ ಮೇಕರ್' ಆಗಿ ಹೊರಹೊಮ್ಮಿದೆ. ಬಿಹಾರದಲ್ಲಿ ಒಂದು ರಾಜ್ಯಸಭಾ ಸ್ಥಾನ ಗೆಲ್ಲಲು ಕನಿಷ್ಠ...

ದೆಹಲಿ : ಪ್ರಧಾನಿ ಮನೆ ಬಳಿಯ ಕೊಳಗೇರಿಗಳ 717 ಕುಟುಂಬಗಳಿಗೆ ಮನೆ ಖಾಲಿ ಮಾಡುವಂತೆ ನೋಟಿಸ್

ನವದೆಹಲಿಯ ಪ್ರಧಾನಿ ನಿವಾಸದ ಬಳಿಯ ಮೂರು ಕೊಳಗೇರಿಗಳಲ್ಲಿ ವಾಸಿಸುತ್ತಿರುವ ಏಳುನೂರ ಹದಿನೇಳು ಕುಟುಂಬಗಳು ಮಾರ್ಚ್ 6ರೊಳಗೆ ತಮ್ಮ ಮನೆಗಳನ್ನು ಖಾಲಿ ಮಾಡುವಂತೆ ಸೂಚಿಸಲಾಗಿದೆ. ಇಲ್ಲದಿದ್ದರೆ ಕಾನೂನು ಕ್ರಮ ಎದುರಿಸಲು ಸಿದ್ದರಾಗುವಂತೆ ಎಚ್ಚರಿಕೆ ನೀಡಲಾಗಿದೆ...

ಹೊಸ ಅಸ್ತ್ರ ಪ್ರಯೋಗಿಸಿದ ಟ್ರಂಪ್ : ಎಲ್ಲಾ ರಾಷ್ಟ್ರಗಳ ಆಮದು ಮೇಲೆ ಶೇ.10ರಷ್ಟು ಜಾಗತಿಕ ಸುಂಕ ಘೋಷಣೆ

ಎಲ್ಲಾ ದೇಶಗಳ ಆಮದುಗಳ ಮೇಲೆ ಹೊಸದಾಗಿ ಶೇಕಡ 10 ಸುಂಕ ವಿಧಿಸುವ ಕಾರ್ಯನಿರ್ವಾಹಕ ಆದೇಶಕ್ಕೆ ಸಹಿ ಹಾಕಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ (ಫೆ.20) ಘೋಷಿಸಿದ್ದಾರೆ. ಇದಕ್ಕೂ ಕೆಲ ಗಂಟೆಗಳ ಮೊದಲು,...

ಭಾರತದೊಂದಿಗಿನ ವ್ಯಾಪಾರ ಒಪ್ಪಂದದಲ್ಲಿ ಯಾವುದೇ ಬದಲಾವಣೆ ಇಲ್ಲ: ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಟ್ರಂಪ್ ಹೇಳಿಕೆ

ಅಮೆರಿಕ ಸುಪ್ರೀಂ ಕೋರ್ಟ್ ಪ್ರತಿ ಸುಂಕ (Reciprocal tariffs) ನೀತಿಯನ್ನು ರದ್ದುಗೊಳಿಸಿದರೂ, ಭಾರತ-ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ (ಫೆ.20) ತಿಳಿಸಿದ್ದಾರೆ. ಶ್ವೇತಭವನದಲ್ಲಿ...

ಗುಜರಾತ್: ‘ಲವ್ ಜಿಹಾದ್’ ತಡೆಗೆ ವಿವಾಹ ನೋಂದಣಿ ಪ್ರಕ್ರಿಯೆಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡುತ್ತೇವೆ; ಡಿಸಿಎಂ ಹರ್ಷ ಸಾಂಘವಿ ಘೋಷಣೆ

ಅಹಮದಾಬಾದ್: ಗುಜರಾತ್‌ನ ಉಪಮುಖ್ಯಮಂತ್ರಿ ಹರ್ಷ ಸಾಂಘವಿ ಶುಕ್ರವಾರ, ರಾಜ್ಯ ಸರ್ಕಾರವು ವಿವಾಹ ನೋಂದಣಿ ಕಾರ್ಯವಿಧಾನದಲ್ಲಿ ಬದಲಾವಣೆಗಳನ್ನು ತರಲಿದೆ ಎಂದು ಘೋಷಿಸಿದ್ದು, "ಸಮಾಜ ವಿರೋಧಿ ಶಕ್ತಿಗಳು", ವಿಶೇಷವಾಗಿ ಗುಜರಾತ್‌ನ ಹೆಣ್ಣುಮಕ್ಕಳನ್ನು "ಲವ್ ಜಿಹಾದ್" ಗಾಗಿ...