ಇಂದು ನೂತನ ಸಂಸತ್ ಕಟ್ಟಡದ ಎದುರು ಮಹಿಳಾ ಮಹಾ ಪಂಚಾಯತ್ ನಡೆಸಲು ಕುಸ್ತಿಪಟುಗಳು ನಿರ್ಧರಿಸಿದ್ದು ಮೆರವಣಿಗೆಗೆ ಸಿದ್ದತೆ ನಡೆಸಿದ್ದಾರೆ. ಆದರೆ ಇದಕ್ಕೆ ಒಪ್ಪದ ದೆಹಲಿ ಪೊಲೀಸರು ಮಾರ್ಗದುದ್ದಕ್ಕೂ ಬ್ಯಾರಿಕೇಡ್ಗಳನ್ನು ಹಾಕಿ ಅಡ್ಡಗಟ್ಟಿದ್ದಾರೆ.
ಕಳೆದ 35 ದಿನಗಳಿಂದ ನ್ಯಾಯಕ್ಕಾಗಿ ಆಗ್ರಹಿಸಿ ದೆಹಲಿಯ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಮಹಿಳಾ ಕುಸ್ತಿಪಟುಗಳು ಕೇಂದ್ರದ ಮಧ್ಯಸ್ತಿಕೆ ಪ್ರಸ್ತಾಪಗಳಿಗೆ ಒಪ್ಪದೇ ಪ್ರತಿಭಟನೆ ಮುಂದುವರೆಸಲು ನಿರ್ಧರಿಸಿದ್ದಾರೆ. ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಬಿಜೆಪಿ ಸಂಸದ ಮತ್ತು ಕುಸ್ತಿ ಫಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ರನ್ನು ಬಂಧಸಿಬೇಕೆಂದು ಕುಸ್ತಿಪಟುಗಳು ಪಟ್ಟು ಹಿಡಿದಿದ್ದಾರೆ.
ಇಂದಿನ ಮಹಿಳಾ ಕುಸ್ತಿಪಟುಗಳ ಪ್ರತಿಭಟನೆ ರೈತರು ಮತ್ತು ವಿದ್ಯಾರ್ಥಿಗಳು ಬೆಂಬಲ ವ್ಯಕ್ತಪಡಿಸಿದ್ದಾರೆ. ಖಾಪ್ ಪಂಚಾಯತ್ ಸದಸ್ಯರು ಮಹಿಳಾ ಮಹಾಪಂಚಾಯತ್ನಲ್ಲಿ ಭಾಗವಹಿಸಲು ಆಗಮಿಸುತ್ತಿದ್ದು, ದೆಹಲಿ ಪೊಲೀಸರು ಹೀಗಾಗಲೇ ಹಲವರನ್ನು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.
Woman activist Jagmati Sangwan is arrested from Jantar Mantar pic.twitter.com/fd108BgAmx
— Mandeep Punia (@mandeeppunia1) May 28, 2023
ತಡರಾತ್ರಿ ಸಭೆ ಬಳಿಕ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಎರಡು ಬಾರಿಯ ವಿಶ್ವಚಾಂಪಿಯನ್ಶಿಪ್ ಕಂಚಿನ ಪದಕ ವಿಜೇತ ವಿನೇಶ್ ಫೋಗತ್, “ಆರೋಪಿಯನ್ನು ಬಂಧಿಸಬೇಕು ಎಂಬ ನಮ್ಮ ಪುಮುಖ ಬೇಡಿಕೆಗೆ ಸರ್ಕಾರ ಒಪ್ಪಿಕೊಳ್ಳದ ಕಾರಣ ಮಾತುಕತೆ ವಿಫಲವಾಗಿದೆ. ಧರಣಿ ನಿಲ್ಲಿಸುವಂತೆ ನಮ್ಮ ಮೇಲೆ ಭಾರಿ ಒತ್ತಡ ಇದೆ. ಆದರೆ ತಾತ್ವಿಕ ಅಂತ್ಯ ಕಾಣಿಸುವವರೆಗೂ ಹೋರಾಟ ಮುಂದುವರಿಸುತ್ತೇವೆ” ಎಂದಿದ್ದಾರೆ. ಅವರೊಟ್ಟಿಗೆ ರಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪುನಿಯಾ ಸಹ ಇದ್ದರು.
जहां नई संसद के उद्घाटन के ज़रिये भारत के मज़बूत लोकतंत्र का संदेश दिया जा रहा है वहीं किसान नेताओं और शांतिपूर्ण आंदोलनकारियों की देर रात से पकड़ पकड़के गिरफ़्तारी की जा रही है। क्या ये लोकतंत्र का अपमान नहीं है ? pic.twitter.com/Nh3rIO9k13
— Sakshee Malikkh (@SakshiMalik) May 28, 2023
ಹರ್ಯಾಣದ ರಾಜ್ಯಸಭಾ ಸದಸ್ಯ ಕಾರ್ತಿಕೇಯ ಶರ್ಮಾ ಶನಿವಾರ ಕುಸ್ತಿಪಟುಗಳ ಜತೆ ರಹಸ್ಯ ಸಭೆ ನಡೆಸಿದರು ಎಂದು ತಿಳಿದುಬಂದಿದೆ. ಡಬ್ಲ್ಯುಎಫ್ಐ ಸ್ವಚ್ಛಗೊಳಿಸುವ ಮತ್ತು ಸಿಂಗ್ ಕುಟುಂಬ ಸದಸ್ಯರು ಒಕ್ಕೂಟದಲ್ಲಿ ಯಾವುದೇ ಹುದ್ದೆ ಹೊಂದಬಾರದು ಎಂಬ ಕುಸ್ತಿಪಟುಗಳ ಬೇಡಿಕೆಗೆ ಸರ್ಕಾರದ ಪುತಿನಿಧಿ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ ಬ್ರಿಜ್ ಭೂಷಣ್ ಸಿಂಗ್ ಬಂಧನಕ್ಕೆ ಒಪ್ಪದ ಕಾರಣ ಮಾತುಕತೆ ಮುರಿದು ಬಿದ್ದಿದೆ ಎನ್ನಲಾಗಿದೆ.
ಬೆಂಗಳೂರಿನಲ್ಲಿ ಪ್ರತಿಭಟನೆ
ದೆಹಲಿಯಲ್ಲಿ ನ್ಯಾಯಕ್ಕಾಗಿ ಆಗ್ರಹಿಸಿ ಮಹಿಳಾ ಕುಸ್ತಿಪಟುಗಳು ನಡೆಸುತ್ತಿರು ಪ್ರತಿಭಟನೆ ಬೆಂಬಲಿಸಿ ಬೆಂಗಳೂರಿನಲ್ಲಿ ಹಲವಾರು ಸಮಾನ ಮನಸ್ಕರು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.
ಬೆಂಗಳೂರಿನ ಫ್ರೀಡಂ ಪಾರ್ಕ್ ಎದುರು ಭಾನುವಾರ ಮಧ್ಯಾಹ್ನ 3 ಗಂಟೆಗೆ ಪ್ರತಿಭಟನೆ ಆರಂಭವಾಗಲಿದೆ ಎಂದು ತಿಳಿಸಲಾಗಿದೆ.
ಇದನ್ನೂ ಓದಿ: ಉದ್ಘಾಟನಾ ದಿನದಂದೇ ಹೊಸ ಸಂಸತ್ತಿನ ಹೊರಗೆ ಪ್ರತಿಭಟನೆ ನಡೆಸಲು ಕುಸ್ತಿಪಟುಗಳ ನಿರ್ಧಾರ