Homeಮುಖಪುಟಮೂರ್ತಿ ಭಂಜನೆ ಎಂಬ ರಾಜಕೀಯ ಇತಿಹಾಸದ ಪಳೆಯುಳಿಕೆ

ಮೂರ್ತಿ ಭಂಜನೆ ಎಂಬ ರಾಜಕೀಯ ಇತಿಹಾಸದ ಪಳೆಯುಳಿಕೆ

- Advertisement -
- Advertisement -

ಮೂರ್ತಿ/ಪ್ರತಿಮೆಗಳ ಸ್ಥಾಪನೆ ಮತ್ತು ಭಂಜನೆ ಎರಡೂ ಇತಿಹಾಸದ ಉದ್ದಕ್ಕೂ ಮನುಷ್ಯರು ನೋಡುತ್ತಲೇ ಬಂದಿರುವ ಎರಡು ನಿರಂತರ ಪ್ರಕ್ರಿಯೆಗಳು. ಇದು ನಮ್ಮದೊಂದೇ ದೇಶಕ್ಕೆ ವಿಶಿಷ್ಟವಾಗಿ ಅನ್ವಯಿಸುವ ವಿಷಯವೇನಲ್ಲ. ಜಗತ್ತಿನ ಸಾರ್ವತ್ರಿಕ ವಿದ್ಯಮಾನಗಳಲ್ಲಿ ಒಂದಾಗಿ ಹೋಗಿದೆ. ಪ್ರತಿಯೊಂದು ಶಿಥಿಲಗೊಂಡ ಧಾರ್ಮಿಕ ಸ್ಮಾರಕ ಅಥವಾ ವಿರೂಪಗೊಂಡ ದೇವರ ಅವತಾರ, ದೇವಮಾನವರ ವಿಗ್ರಹ ಒಂದೊಂದು ಇತಿಹಾಸದ ರಾಜಕೀಯ ಕಾಲಘಟ್ಟಗಳ ಕಥೆಗಳನ್ನೇ ಹೇಳುತ್ತಿರುತ್ತವೆ.

ಭಾರತದ ಮಟ್ಟಿಗೆ ಹೇಳುವುದಾದರೆ, ಇದು ಕೇವಲ ಘಜನಿ ಮಹಮ್ಮದನಿಂದಲೇ ಪ್ರಾರಂಭವಾದ ವಿದ್ಯಮಾನವೇನಲ್ಲ. ಇಸ್ಲಾಂ ಈ ದೇಶಕ್ಕೆ ಕಾಲಿಡುವ ಸಾವಿರ ವರ್ಷಗಳ ಮೊದಲಿಂದಲೂ ಇದ್ದದ್ದೇ. ಆದರೆ ಆಯಾ ಕಾಲಕ್ಕೆ ತಕ್ಕಂತೆ ಈ ಆಕ್ರಮಣಗಳ ಹಿಂದಿನ ಉದ್ದೇಶಗಳು ಬದಲಾಗುತ್ತ ಸಾಗುತ್ತವೆ. ದೇವಸ್ಥಾನಗಳಿಗೆ ಸೇರಿದ ಮತ್ತು ಅಲ್ಲಿ ಬಚ್ಚಿಟ್ಟ ಸಂಪತ್ತು ಹೊತ್ತೊಯ್ಯುವುದು ಲೂಟಿಕೋರರ ಉದ್ದೇಶವಾದರೆ ಗೆದ್ದ ರಾಜ ಸೋತ ರಾಜ್ಯದ ದೇವರುಗಳ ವಿಗ್ರಹಗಳನ್ನು ಭಂಜಿಸಿ ಅವನ ಅಹಮಿಕೆಗೆ ಪೆಟ್ಟುಕೊಟ್ಟು ಹೋಗುವ ಕಾರಣಕ್ಕೂ ಇದು ನಡೆಯುತ್ತಿತ್ತು. ರಾಷ್ಟ್ರಕೂಟರ ದೊರೆ ಮೂರನೇ ಇಂದ್ರ, ಪ್ರತಿಹಾರ ದೊರೆಯನ್ನು ಸೋಲಿಸಿ ಅವನು ಆರಾಧಿಸುತ್ತಿದ್ದ ’ಕಲಾಪ್ರಿಯ’ ದೇವರ ಗುಡಿಯನ್ನು ನೆಲಸಮಗೊಳಿಸಿದ ಇತಿಹಾಸ ಇದಕ್ಕೆ ಒಂದು ಉದಾಹರಣೆಯಷ್ಟೇ!

ಇತಿಹಾಸಕ್ಕೂ ವರ್ತಮಾನಕ್ಕೂ ವ್ಯತ್ಯಾಸವನ್ನರಿಯದ ಜನ ಅಂತಹ ವ್ಯತ್ಯಾಸವನ್ನು ಉದ್ದೇಶಪೂರ್ವಕವಾಗಿ ತಿರುಚಿ ಆಳುವ ಜನರ ಕೈಗೊಂಬೆಯಾದಾಗ, ಪ್ರಜಾಪ್ರಭುತ್ವದಂತಹ ವ್ಯವಸ್ಥೆಯಲ್ಲೂ ಅದೇ ಹಳೆಯ ತಪ್ಪುಗಳನ್ನು ಎಸಗುವುದು ಸಾಮಾನ್ಯ. ಇವೇ ವೈಚಾರಿಕ ಹಿನ್ನೆಲೆಗಳು ಧಾರ್ಮಿಕ ಗ್ರಂಥ ಮತ್ತು ಧಾರ್ಮಿಕ ಚಿಹ್ನೆಗಳಿಗೂ ಅನ್ವಯಿಸುತ್ತದೆ.

ಧಾರ್ಮಿಕ ಗ್ರಂಥ ಅಥವಾ ಚಿಹ್ನೆಗಳು ಆಯಾಧರ್ಮದ ಜನರನ್ನು ಒಗ್ಗೂಡಿಸಲು ಅಥವಾ ಅವರಲ್ಲಿ ಒಂದು ಆಧ್ಯಾತ್ಮಿಕ ಚಿಂತನೆಯನ್ನು ಬಿತ್ತಿ ಒಂದು ಸಾರ್ವತ್ರಿಕ ಶಿಸ್ತನ್ನು ಅವರಲ್ಲಿ ಮೂಡಿಸಿ ಮನುಕುಲದ ಒಳಿತಿಗಾಗಿ ಶ್ರಮಿಸುವಂತೆ ಮಾಡುತ್ತವೆಂದು ಹೇಳುವುದು ಸಾಮಾನ್ಯ. ಆದರೆ ಆ ಧರ್ಮಗ್ರಂಥಗಳ
ಮೇಲೆ ಹಿಡಿತ ಹೊಂದಿರುವವರು, ಅದನ್ನೇ ಅಸ್ತ್ರವಾಗಿಸಿಕೊಂಡು, ಕೆಲವೊಂದು ಅಮಾಯಕ ಅಥವಾ ತಿಳಿಗೇಡಿಗಳು ಮಾಡುವ ತಪ್ಪಿಗೆ ಶಿಕ್ಷೆ ಕೊಡುವಂತೆ ಪ್ರೇರೆಪಿಸಿ ಕೊಲೆಗಳೇ ನಡೆದುಹೋಗುವುದು ದುರಂತ.

ಪ್ರವಾದಿ ಮಹಮ್ಮದರ ಚಿತ್ರ ಬರೆದರೆಂಬ ಕಾರಣಕ್ಕೆ ಪ್ಯಾರಿಸ್ಸಿನ ’ಚಾರ್ಲಿ ಹೆಬ್ಡೋ’ ಪತ್ರಿಕೆಯ ಮೇಲೆ ಭಯೋತ್ಪಾದಕ ದಾಳಿಯನ್ನೇ ಮಾಡಿ ಸಂಪಾದಕರೂ ಸೇರಿದಂತೆ ಅನೇಕ ಪತ್ರಕರ್ತರ ಹತ್ಯಾಕಾಂಡವೇ ನಡೆದುಹೋಯಿತು. ಮನೆಯಲ್ಲಿ ದನದ ಮಾಂಸ ಇದೆ ಎಂದು ಅಕ್ಲಾಖ್‌ನ ಕೊಲೆ ನಡೆದರೆ, ಇತ್ತೀಚಿಗೆ ಪಂಜಾಬ್‌ನಲ್ಲಿ ಸಿಖ್ಖರ ಪವಿತ್ರ ಚಿಹ್ನೆ ನಿಶಾನ್ ಸಾಹಿಬ್‌ಗೆ ಅವಮಾನ ಮಾಡಿದರೆಂಬ ಕಾರಣಕ್ಕೆ ಅಮೃತ್‌ಸರ್ ಮತ್ತು ಕಪುರ್ತಲಾ ಜಿಲ್ಲೆಗಳಲ್ಲಿ ಇಬ್ಬರು ಯುವಕರ ಬರ್ಬರ ಕೊಲೆ ನಡೆಯಿತು. ಇಂಥದೇ ಘಟನೆ ದೆಹಲಿಯ ರೈತ ಚಳುವಳಿಯ ಸಮಯದಲ್ಲೂ ನಡೆದಿತ್ತು. ಮನುಷ್ಯನ ಸ್ಪಂದನೆ ಮತ್ತು ನಡವಳಿಕೆಯನ್ನು ಧರ್ಮದ ಗುತ್ತಿಗೆದಾರರು ಎಷ್ಟರಮಟ್ಟಿಗೆ ನಿಯಂತ್ರಿಸುತ್ತಾರೆಂದರೆ, ತಮ್ಮ ಕಾನೂನಾತ್ಮಕ ಬೇಡಿಕೆಗಳಿಗಾಗಿ ವರ್ಷಗಟ್ಟಲೆ ಶಾಂತ ರೀತಿಯಿಂದ ಪ್ರತಿಭಟನೆ ನಡೆಸಿ ಇಡೀ ಜಗತ್ತಿಗೇ ಮಾದರಿ ದಾರಿಯನ್ನು ತೋರಿಸಿದ ಸಿಖ್ಖರು, ’ನಿಶಾನ್ ಸಾಹಿಬ್‌ಗೆ’ ಅವಮಾನ ಮಾಡಿದರೆಂದು ಅಮಾಯಕ ಕೊಲೆ ಮಾಡಿದ್ದನ್ನು ನೋಡಿದಾಗ (ಆ ಧರ್ಮದ ಒಂದು ವರ್ಗವೇ ಸರಿ) ಈ ಧರ್ಮದ ಬೇರುಗಳು ಎಷ್ಟು ಆಳವಾಗಿ ಮನುಷ್ಯರ ವೈಚಾರಿಕತೆಯನ್ನು ಮೀರಿ ಅವರ ಬುದ್ಧಿಯನ್ನು ಆವರಿಸಿಕೊಂಡಿವೆ ಎಂಬುದು ಗೊತ್ತಾಗುತ್ತದೆ.

ಈ ಎಲ್ಲವನ್ನೂ ಈ ದೇಶದ ಸಂವಿಧಾನ ಹಾಗೂ ಕಾನೂನುಗಳ ಹಿನ್ನೆಲೆಯಲ್ಲಿ ನೋಡಿ ಇಂತಹ ಘಟನೆಗಳ ತಾತ್ವಿಕ ಅಥವಾ ಅತಾರ್ಕಿಕ ನೆಲೆಗಟ್ಟು ಏನು ಎಂಬುದನ್ನು ವಿಶ್ಲೇಷಿಸಿ ಅದಕ್ಕೆ ಒಂದು ಪರಿಹಾರ ಕಂಡುಕೊಳ್ಳದಿದ್ದರೆ ಸಂವಿಧಾನವೆಂಬುದು ಕೇವಲ ಅಂತಾರಾಷ್ಟ್ರೀಯ ಮಟ್ಟದ ಚರ್ಚೆಗಳಲ್ಲಿ ತೋರಿಸಿಕೊಳ್ಳಲು ಹೆಗ್ಗಳಿಕೆಯ ಪ್ರದರ್ಶನದ ಒಂದು ಗ್ರಂಥವಾಗಿ ಮಾತ್ರ ಉಳಿಯುತ್ತದೆ.

ಭಾರತ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ರಕ್ಷಣೆಗಾಗಿ ನಡೆದ ಸಮಾವೇಶದಲ್ಲಿ ಒಬ್ಬ ಪಾಲುದಾರನಾಗಿ ಸಹಿ ಹಾಕಿದೆ. ಇದೇ ಮಾತನ್ನು ಸುಪ್ರಿಂಕೋರ್ಟ್ “ಕೇಶವಾನಂದ ಭಾರತಿ vs ಕೇರಳ ರಾಜ್ಯ” ಪ್ರಕರಣದಲ್ಲಿ ಪುನರುಚ್ಚರಿಸುತ್ತ ನಮ್ಮ ದೇಶದ ಸಂವಿಧಾನದಲ್ಲಿ ನಮೂದಿಸಿರುವ ಮೂಲಭೂತ ಹಕ್ಕುಗಳನ್ನು ವಿವರಿಸುವಾಗ ಅದನ್ನು ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ವಿವರಣೆಯ ಹಿನ್ನೆಲೆಯಲ್ಲಿ ವಿವರಿಸಬೇಕು ಎಂದು ಹೇಳಿದೆ.

ಸಂವಿಧಾನದ ಮೂಲಭೂತ ಹಕ್ಕುಗಳನ್ನು, ಧಾರ್ಮಿಕ ವಿಷಯದಲ್ಲಿ ಎಷ್ಟೊಂದು ವಿಷದವಾಗಿ ವಿವರಿಸಲಾಗಿದೆ ಎಂಬುದು ಎಲ್ಲರಿಗೂ ತಿಳಿದಿರುವಂಥದ್ದೇ. ಪ್ರತಿಯೊಬ್ಬ ಪ್ರಜೆಯೂ ತನ್ನ ಇಷ್ಟದ ಧರ್ಮವನ್ನು ಅನುಸರಿಸುವ, ಆರಾಧಿಸುವ ಸಂಪೂರ್ಣ ಸ್ವಾತಂತ್ರ್ಯವನ್ನು ಹೊಂದಿದ್ದಾನೆ. ವೈಚಾರಿಕ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಗಳೂ ಅತ್ಯಂತ ಸ್ಪಷ್ಟವಾಗಿದೆ. ಇವುಗಳ ಅರ್ಥ ಇಷ್ಟೇ, ಪ್ರತಿಯೊಬ್ಬ ಮನುಷ್ಯನಿಗೂ ತನ್ನ ಪರಿಮಿತಿಯಲ್ಲಿ, ಕಾನೂನುಗಳ ಚೌಕಟ್ಟಿನ ಒಳಗೆ ಸಂಪೂರ್ಣ ಸ್ವಾತಂತ್ರ್ಯವಿದೆ, ಅಲ್ಲದೆ ಸಂವಿಧಾನ ದೇಶದ ಪ್ರಜೆಗಳನ್ನು ’ಪ್ರಬುದ್ಧ ನಾಗರಿಕರು’ ಎಂದು ಮೂಲದಲ್ಲಿ ನಂಬುತ್ತದೆ. ಆದ್ದರಿಂದಲೇ ಈ ಸ್ವಾತಂತ್ರ್ಯಗಳು ಯಾವುದೇ ಭೇದಭಾವವಿಲ್ಲದೆ ಸಮಾನವಾಗಿವೆ.

ಈಗ ಉತ್ತರ ಪ್ರದೇಶ ಸೇರಿದಂತೆ ಅನೇಕ ರಾಜ್ಯಗಳು ಮತಾಂತರ ನಿಷೇಧ ಕಾಯ್ದೆಯನ್ನು ತಂದದ್ದು ಹೇಗೆ ಕಾನೂನಿನ ಚೌಕಟ್ಟಿನ ಒಳಗೆ ಸೇರಿಕೊಳ್ಳುತ್ತವೆ ಎನ್ನುವುದು ದೊಡ್ಡ ಪ್ರಶ್ನೆ. ಈ ಸಾಲಿಗೆ ಈಗ ಕರ್ನಾಟಕವೂ ಸೇರಿಕೊಳ್ಳುವತ್ತ ಮುಂದುವರೆದಿದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ವಿವಿಧ ಹಿನ್ನೆಲೆಯ ಜನರಿಗೆ ಅವರ ಹಿನ್ನೆಲೆಯ ಆಧಾರದ ಮೇಲೆ ಶಿಕ್ಷೆಯನ್ನು ಸೂಚಿಸಿದೆ. ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಈ ಎಲ್ಲ ಮತಾಂತರ ನಿಷೇಧ ಕಾಯ್ದೆಗಳು ಪ್ರಜೆಗಳನ್ನು ’ಮೂಲದಲ್ಲಿ ಮೂರ್ಖರು’ ಎಂದು ಪರಿಗಣಿಸುತ್ತವೆ. ಬಲವಂತದಿಂದ ನಡೆಯುವ ಎಲ್ಲ ದೌರ್ಜನ್ಯಗಳಿಗೂ ವಿವಿಧ ಕಾನೂನಗಳು, ಮುಖ್ಯವಾಗಿ ದಂಡಸಂಹಿತೆ ಇದ್ದಾಗಲೂ ಇಂತಹ ಕಾಯ್ದೆ ತರುವುದಕ್ಕೆ ರಾಜಕೀಯ ಧ್ರುವೀಕರಣದ ಉದ್ದೇಶವಲ್ಲದೇ ಬೇರೇನೂ ಇಲ್ಲ.

ಪಂಜಾಬ್‌ನ ಸ್ವರ್ಣಮಂದಿರದಲ್ಲಿ ಆಪರೇಶನ್ ಬ್ಲೂ ಸ್ಟಾರ್ ನಡೆದು, ನಂತರ ಅಂದಿನ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿ ಹತ್ಯೆಯಾದ ನಂತರ ’ಧಾರ್ಮಿಕ ಸ್ಥಳಗಳ ದುರುಪಯೋಗ ನಿಷೇಧ ಕಾಯ್ದೆ 1988’ ಜಾರಿಗೆ ಬಂದಿತು. ಅದೇರೀತಿ ರಾಷ್ಟ್ರಿಯ ಚಿಹ್ನೆಗಳಾದ ಧ್ವಜ, ಲಾಂಛನ ಮುಂತಾದವುಗಳ ಗೌರವ ಕಾಪಾಡಲು ’ರಾಷ್ಟ್ರೀಯ ಲಾಂಛನಗಳ ಅವಮಾನ ತಡೆಕಾಯ್ದೆ’ ಇದೆ. ಇವುಗಳ ಹಿನ್ನೆಲೆಯಲ್ಲಿ ನೋಡುವುದಾದರೆ, ಧರ್ಮದ ಹೆಸರಲ್ಲಿ ನಡೆಯುವ ಹತ್ಯೆ ಬೇರೇನೂ ಅಲ್ಲ ಅದೊಂದು ಸಾಮಾನ್ಯ ಉದ್ದೇಶದಿಂದ (Common intention) ಧರ್ಮಾಂಧರು ಸೇರಿ ನಡೆಸುವ ಕೊಲೆ.

ಯಾವಾಗ ದೇಶದ ನಾಯಕರು ತಮ್ಮ ಸ್ವಾರ್ಥಗಳಿಗಾಗಿ ದೇಶದ ಸಂವಿಧಾನ ಮತ್ತು ಕಾನೂನಗಳನ್ನು ಅವಹೇಳನ ಮಾಡಿ, ಬಾಯಿಗೆ ಬಂದಂತೆ ಮಾತಾಡುತ್ತಾರೋ ಆಗ ಈ ಕ್ಷುದ್ರ ಅಂಶಗಳಿಗೆ ಬಲ ಬಂದಂತೆ ಭಾಸವಾಗುತ್ತದೆ ಮತ್ತು ಕೊಲೆಗಳು ನಡೆಯುವುದು ಸಾಮಾನ್ಯವಾಗುತ್ತಾ ಸಾಗುತ್ತದೆ.

ಮೂರ್ತಿ ಭಂಜನೆ ಆಗಲಿ ಧರ್ಮಗ್ರಂಥಗಳ ಅಪಮಾನವಾಗಲಿ, ಮೇಲ್ನೋಟಕ್ಕೆ ಕಾಣುವ ಈ ಘಟನೆಗಳ ಹಿಂದೆ ಅವು ಪ್ರತಿನಿಧಿಸುವ ಸಿದ್ಧಾಂತಗಳನ್ನು ಧಿಕ್ಕರಿಸುವ, ಅಪಮಾನಿಸುವ ಮತ್ತು ಅವುಗಳನ್ನು ತುಚ್ಛೀಕರಿಸುವ ಉದ್ದೇಶವಿರುತ್ತದೆ. ಉತ್ತರ ಪ್ರದೇಶದಲ್ಲಿ ನಿರಂತರವಾಗಿ ಒಂದಲ್ಲ ಒಂದು ಕಡೆ ನಡೆಯುವ ಅಂಬೇಡ್ಕರ್ ಮೂರ್ತಿಯ ಅಪಮಾನ, ದಲಿತ ಸಮುದಾಯವನ್ನು ಪರೋಕ್ಷವಾಗಿ ಅಪಮಾನಿಸುವ ಉದ್ದೇಶದ ಕೃತ್ಯವಾಗಿರುತ್ತದೆ. ಸಮಾನತೆ, ಜಾತ್ಯತೀತತೆಯ ಕನಸು ಮರೀಚಿಕೆ ಎಂದು ನೆನಪಿಸುವ ಪ್ರಯತ್ನವಾಗಿರುತ್ತದೆ. ಗಾಂಧೀಜಿಯ ಮೂರ್ತಿ ಭಂಜನೆ ಈ ದೇಶ ಜಗತ್ತಿಗೆ ಪ್ರತಿಪಾದಿಸಿದ ಶಾಂತಿ, ಅಹಿಂಸೆಯ ಮೂಲ ಪಾಠ ಬದಲಾಗಿದೆ ಎಂದು ಸಾರುವ ಪ್ರಯತ್ನ. ರಾಜಸ್ತಾನದ ಹೈಕೋರ್ಟ್ ಆವರಣದಲ್ಲಿ ಸಾಮಾಜಿಕ ಅಸಮಾನತೆಯ ಹರಿಕಾರನಾದ ’ಮನು ಮಹಾರಾಜನ’ ಮೂರ್ತಿಯನ್ನು ಸ್ಥಾಪಿಸಿದ್ದು, ನ್ಯಾಯವನ್ನು ಕೇಳಿಬರುವ ಜನರಿಗೆ ಮೂಲದಲ್ಲೇ ಒಂದು ಸಂದೇಶ ನೀಡುವ ಪ್ರಯತ್ನವಾಗಿದೆ. ಇದು ಸಿದ್ಧಾಂತಗಳ ಸಮರ ಎಂದು ತೋರಿಸಿ, ಹೊಸ ದಾರಿಯ ಹೆಸರಲ್ಲಿ ದೇಶವನ್ನು ಕಾನೂನು ವ್ಯವಸ್ಥೆಯನ್ನು ಹಾಳುಗೆಡುವುದು, ಜನರ ನಿಜವಾದ ಅವಶ್ಯಕತೆಗಳಿಗೆ ಅವರನ್ನು ವಿಮುಖರಾಗಿಸಿ ಕೊಲೆ ಮುಂತಾದ ಅಪರಾಧಗಳಲ್ಲಿ ಸಿಲುಕಿಸುವುದು – ರಾಜಕಾರಣಿಗಳ ಇಂತಹ ಸ್ವಾರ್ಥ ಸಿದ್ಧಾಂತಗಳನ್ನು ಸೋಲಿಸುವ ಒಂದೇ ದಾರಿ ಸಂವಿಧಾನದ ಸಿದ್ಧಾಂತಗಳನ್ನು ಗೆಲ್ಲಿಸುವುದು.

ರಾಜಲಕ್ಷ್ಮಿ ಅಂಕಲಗಿ

ರಾಜಲಕ್ಷ್ಮಿ ಅಂಕಲಗಿ
ಹೈಕೋರ್ಟ್ ವಕೀಲರು, ಹಲವು ಜನಪರ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದಾರೆ. ಕಾನೂನು ವಿಷಯಗಳ ಮೇಲೆ ಹಲವು ಲೇಖನಗಳನ್ನು ಪ್ರಕಟಿಸಿದ್ದಾರೆ.


ಇದನ್ನೂ ಓದಿ: ಮಾನವಸ್ತ್ರಗಳಿಗೆ ದುಮ್ಮಾನದ ವರ್ಷ- 2021

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮುಂದುವರಿದ ಬಿಜೆಪಿ ನಾಯಕರ ದ್ವೇಷ ಭಾಷಣ; ‘ಕಾಂಗ್ರೆಸ್ ದೇಶದಲ್ಲಿ ಷರಿಯಾ ಕಾನೂನು ಜಾರಿಗೆ ತರಲಿದೆ’...

0
ಸಂಪತ್ತು ಮರು ಹಂಚಿಕೆ ಕುರಿತು ದ್ವೇಷ ಭಾಷಣ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿಯವರ ನಂತರ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಮಂಗಳವಾರ ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. 'ಕಾಂಗ್ರೆಸ್...