‘ದಿ ಕಾಶ್ಮೀರ ವಾಲಾ’ ನ್ಯೂಸ್ ಪೋರ್ಟಲ್ ಸಂಪಾದಕರಾದ ಕಾಶ್ಮೀರಿ ಪತ್ರಕರ್ತ ಫಹಾದ್ ಶಾ ಬಂಧನವನ್ನು ಖಂಡಿಸಿರುವ ಹಲವಾರು ಪತ್ರಿಕಾ ಸಂಸ್ಥೆಗಳು ತಕ್ಷಣವೇ ಅವರನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿವೆ.
ಜಮ್ಮು ಕಾಶ್ಮೀರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗುವಂತೆ ಸಾರ್ವಜನಿಕರನ್ನು ಪ್ರಚೋದಿಸುವ ಉದ್ದೇಶದೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ದೇಶ ವಿರೋಧಿ ವಿಷಯವನ್ನು ಅಪ್ಲೋಡ್ ಮಾಡಿದ್ದಾರೆ ಎಂದು ಆರೋಪಿಸಿ ಕಾಶ್ಮೀರದ ಪತ್ರಕರ್ತ ಫಹಾದ್ ಶಾ ಅವರನ್ನು ಪೊಲೀಸರು ಶುಕ್ರವಾರ (ಫೆ.4) ಬಂಧಿಸಿದ್ದಾರೆ.
‘ದಿ ಕಾಶ್ಮೀರ ವಾಲಾ’ ನ್ಯೂಸ್ ಪೋರ್ಟಲ್ ಸಂಪಾದಕರಾದ ಫಹಾದ್ ಅವರ ಮೇಲೆ ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜನವರಿ 30 ರಂದು ಪುಲ್ವಾಮಾದ ನೈರಾ ಪ್ರದೇಶದಲ್ಲಿ ನಡೆದ ಎನ್ಕೌಂಟರ್ನಲ್ಲಿ ಹತರಾದ ಭಯೋತ್ಪಾದಕನ ಕುಟುಂಬದ ಹೇಳಿಕೆಯನ್ನು ಆಧರಿಸಿ ಸುದ್ದಿ ಮಾಡಿ ಪೋರ್ಟಲ್ನಲ್ಲಿ ಅಪ್ಲೋಡ್ ಮಾಡಿದ ನಂತರ ಅವರನ್ನು ಈ ಹಿಂದೆ ಪೊಲೀಸರು ಪ್ರಶ್ನಿಸಿದ್ದರು. ಅವರ ಪೋಸ್ಟ್ಗಳು ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯುಂಟುಮಾಡುತ್ತವೆ ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: ಪಂಜಾಬ್ ಚುನಾವಣೆ: ಚರಣ್ಜಿತ್ ಸಿಂಗ್ ಚನ್ನಿ ಕಾಂಗ್ರೆಸ್ ಸಿಎಂ ಅಭ್ಯರ್ಥಿ- ರಾಹುಲ್ ಗಾಂಧಿ ಘೋಷಣೆ
ಭಾನುವಾರ ಹೇಳಿಕೆ ಬಿಡುಗಡೆ ಮಾಡಿರುವ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಹೇಳಿಕೆಯಲ್ಲಿ ಫಹಾದ್ ಶಾ ಬಂಧನವನ್ನು ಬಲವಾಗಿ ಖಂಡಿಸಿದೆ. “ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಕಾಶ್ಮೀರ ವಾಲಾ ಪತ್ರಿಕೆಯ ಸಂಪಾದಕ ಫಹಾದ್ ಶಾ ಅವರ ಬಂಧನವನ್ನು ಬಲವಾಗಿ ಖಂಡಿಸುತ್ತದೆ. ಅವರನ್ನು ತಕ್ಷಣವೇ ಬಿಡುಗಡೆ ಮಾಡಲು ಒತ್ತಾಯಿಸುತ್ತದೆ. ಎಫ್ಐಆರ್ಗಳು, ಬೆದರಿಸುವ ಪ್ರಶ್ನೆಗಳು ಮತ್ತು ತಪ್ಪಾದ ಬಂಧನವನ್ನು ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಸಾಧನಗಳಾಗಿ ಬಳಸುವುದಿಲ್ಲ ಎಂದು ರಾಜ್ಯದ ಅಧಿಕಾರಿಗಳು ಖಚಿತಪಡಿಸಿಕೊಳ್ಳಬೇಕು” ಎಂದು ಒತ್ತಾಯಿಸಿದೆ.
Editors Guild of India strongly condemns the arrest of Fahad Shah, editor of the Kashmir Walla. Demands his immediate release and urges state authorities to ensure that FIRs, intimidatory questioning, and wrongful detainment are not used as tools for suppressing press freedom pic.twitter.com/4hWCXZUQth
— Editors Guild of India (@IndEditorsGuild) February 6, 2022
ಕಾಶ್ಮೀರದಲ್ಲಿ ಪತ್ರಕರ್ತರನ್ನು ಭದ್ರತಾ ಪಡೆಗಳು ಪ್ರಶ್ನಿಸಲು ಕರೆಯುವುದು ಮತ್ತು ವಿಮರ್ಶಾತ್ಮಕವಾಗಿ ವರದಿ ಮಾಡಿದ ಕಾರಣ ಅವರನ್ನು ಆಗಾಗ್ಗೆ ಬಂಧಿಸುವುದು ದೊಡ್ಡ ಕೆಲಸ ಮಾಡಿಕೊಂಡಿದ್ದಾರೆ ಎಂದು ಟೀಕಿಸಿದೆ.
“ಕಳೆದ ತಿಂಗಳು, ಕಾಶ್ಮೀರ ಪ್ರೆಸ್ ಕ್ಲಬ್ ಆಡಳಿತದಲ್ಲಿ ಮೂಗು ತೂರಿಸಿದ ಭದ್ರತಾ ಪಡೆಗಳು ಕೆಲವು ಪತ್ರಕರ್ತರಿಗೆ ಕುಮ್ಮಕ್ಕು ನೀಡಿದ್ದವು. ನಂತರ ರಾಜ್ಯದ ಆಡಳಿತಾಧಿಕಾರಿಗಳು ಕ್ಲಬ್ ಅನ್ನು ಸಂಪೂರ್ಣವಾಗಿ ಮುಚ್ಚಿದ್ದು, ಆ ಸ್ಥಳವನ್ನು ಎಸ್ಟೇಟ್ ಇಲಾಖೆಗೆ ಹಿಂತಿರುಗಿಸಿದ್ದಾರೆ” ಎಂದು ಎಡಿಟರ್ಸ್ ಗಿಲ್ಡ್ ತಿಳಿಸಿದೆ.
ಹಲವಾರು ಮಾಧ್ಯಮ ಸಂಸ್ಥೆಗಳ ಸಂಘ ಡಿಜಿಪಬ್ ತನ್ನ ಹೇಳಿಕೆಯಲ್ಲಿ ಫಹಾದ್ ಶಾ ಅವರು ಕಾನೂನುಬಾಹಿರವಾದ ಯಾವುದೇ ಕೆಲಸದಲ್ಲಿ ಭಾಗಿಯಾಗಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಯಿಲ್ಲ ಎಂದು ಹೇಳಿದೆ.
DIGIPUB condemns in the strongest possible terms the shocking arrest of Fahad Shah, Founding Editor and Editor-in-Chief of the KashmirWalla @tkwmag @pzfahad pic.twitter.com/CvsW36dtGJ
— DIGIPUB News India Foundation (@DigipubIndia) February 6, 2022
ಪತ್ರಕರ್ತರ ಬಂಧನದ ನಂತರ, ಪತ್ರಕರ್ತರ ರಕ್ಷಣಾ ಸಮಿತಿ ಕೂಡ ಅವರನ್ನು ಬಿಡುಗಡೆ ಮಾಡಲು ಒತ್ತಾಯಿಸಿತ್ತು. “ಫಹಾದ್ ಶಾ ಬಂಧನದಿಂದ ಜಮ್ಮು ಮತ್ತು ಕಾಶ್ಮೀರದ ಅಧಿಕಾರಿಗಳು ಪತ್ರಿಕಾ ಸ್ವಾತಂತ್ರ್ಯ ಮತ್ತು ಪತ್ರಕರ್ತರ ಮೂಲಭೂತ ಹಕ್ಕನ್ನು ಮುಕ್ತವಾಗಿ ಮತ್ತು ಸುರಕ್ಷಿತವಾಗಿ ವರದಿ ಮಾಡುವ ಹಕ್ಕನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿದ್ದಾರೆ ಎಂಬುದನ್ನು ತೋರಿಸುತ್ತದೆ” ಎಂದು ಪತ್ರಕರ್ತರ ರಕ್ಷಣಾ ಸಮಿತಿಯ ಏಷ್ಯಾ ಕಾರ್ಯಕ್ರಮ ಸಂಯೋಜಕ ಸ್ಟೀವನ್ ಬಟ್ಲರ್ ಹೇಳಿದ್ದಾರೆ.
ಶ್ರೀನಗರದ ಹೊರವಲಯದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಲಷ್ಕರ್-ಎ-ತೊಯ್ಬಾ ಕಮಾಂಡರ್ ಸಲೀಂ ಪರ್ರೆ ಅವರ ಸಾವಿನ ನಂತರ ಅವರ ಕುಟುಂಬ ಸದಸ್ಯರು ಮತ್ತು ಸಂಬಂಧಿಕರು ಪ್ರತಿಭಟಿಸುವ ವೀಡಿಯೊವನ್ನು ಪೋಸ್ಟ್ ಮಾಡಿದ್ದ ಬಳಿಕ ಪತ್ರಕರ್ತರನ್ನು ಜನವರಿ 6 ರಂದು ಬಂಧಿಸಲಾಗಿತ್ತು. ಈಗ ಮತ್ತೆ ಪುಲ್ವಾಮಾದ ನೈರಾ ಪ್ರದೇಶದಲ್ಲಿ ನಡೆದ ಎನ್ಕೌಂಟರ್ನಲ್ಲಿ ಹತರಾದ ಉಗ್ರರ ಕುಟುಂಬದ ಹೇಳಿಕೆಯನ್ನು ಆಧರಿಸಿ ಸುದ್ದಿ ಮಾಡಿ ಪೋರ್ಟಲ್ನಲ್ಲಿ ಅಪ್ಲೋಡ್ ಮಾಡಿದಕ್ಕೆ ಬಂಧಿಸಲಾಗಿದೆ.
ಇದನ್ನೂ ಓದಿ: ಕಾಶ್ಮೀರದ ಪತ್ರಕರ್ತ ಫಹಾದ್ ಶಾ ಬಂಧನ