Homeಮುಖಪುಟಪ್ರಧಾನಮಂತ್ರಿ ಕಿಸಾನ್ ಸನ್ಮಾನ್ ನಿಧಿ: ಬಿಡುಗಡೆಯಾಗಿದ್ದು 6 ಕಂತು, ಬಂದಿದ್ದು 3 ಕಂತು ಮಾತ್ರ

ಪ್ರಧಾನಮಂತ್ರಿ ಕಿಸಾನ್ ಸನ್ಮಾನ್ ನಿಧಿ: ಬಿಡುಗಡೆಯಾಗಿದ್ದು 6 ಕಂತು, ಬಂದಿದ್ದು 3 ಕಂತು ಮಾತ್ರ

ಬೆಳೆಗಳಿಗೆ ಸರಿಯಾದ ಧಾರಣೆ ನೀಡಿದರೆ, ಉತ್ತಮ ಮಾರುಕಟ್ಟೆ ಸೌಲಭ್ಯ ಕಲ್ಪಿಸಿದರೆ, ರೈತರ ಸಮಸ್ಯೆಗಳನ್ನು ಪರಿಹರಿಸಿದರೆ ರೈತರಿಗೆ ಯಾವ ಹಣವನ್ನೂ ನೀಡಬೇಕಾದ ಅಗತ್ಯವಿಲ್ಲ.

- Advertisement -
- Advertisement -

ಪ್ರಧಾನಮಂತ್ರಿ ಕಿಸಾನ್ ಸನ್ಮಾನ್ ನಿಧಿ ಯೋಜನೆಯಡಿ ರೈತರಿಗೆ ಆರನೇ ಕಂತಿನ ಹಣ ಬಿಡುಗಡೆಯಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿದೆ. ಆದರೆ ವಾಸ್ತವದಲ್ಲಿ ಕೇವಲ ಮೂರು-ನಾಲ್ಕು ಕಂತಿನ ಹಣ ಮಾತ್ರ ಕೆಲ ರೈತರ ಖಾತೆಗೆ ನೇರ ವರ್ಗಾವಣೆಯಾಗಿದೆ ಎಂದು ರೈತರು ದೂರುತ್ತಿದ್ದಾರೆ. ಈ ಕುರಿತು ಹಲವು ರೈತರನ್ನು ಮಾತನಾಡಿಸಿದಾಗ ಎಲ್ಲಾ ದಾಖಲೆ ಸಲ್ಲಿಸಿದ್ದರೂ ಕೇವಲ 2 ಬಾರಿ ಹಣ ಬಂದಿದ್ದು ನಂತರ ಬಂದಿಲ್ಲ ಎಂದು ಕೆಲವು ರೈತರು ಹೇಳಿದ್ದಾರೆ.

ಈ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿಯ ಮಹಾತ್ವಾಕಾಂಕ್ಷೆಯ ಯೋಜನೆ ಎನ್ನಲಾಗಿದ್ದು, ಲೋಕಸಭಾ ಚುನಾವಣಾ ಪೂರ್ವದಲ್ಲಿ ಈ ಯೋಜನೆ ಘೋಷಣೆ ಮಾಡಲಾಗಿತ್ತು. ತುಮಕೂರಿನ ಸರ್ಕಾರಿ ಜೂನಿಯರ್ ಕಾಲೇಜು ಆವರಣದಲ್ಲಿ ಜನವರಿ 2, 2019 ರಂದು ನಡೆದ ಬೃಹತ್ ರೈತರ ಸಮಾವೇಶದಲ್ಲಿ ಪ್ರಧಾನಿ ನರೇಂದ್ರಿ ಮೋದಿ ಮೊದಲ ಕಂತು ಬಿಡುಗಡೆ ಮಾಡಿದ್ದರು. ಬಟನ್ ಒತ್ತುವ ಮೂಲಕ ಫಲನುಭವಿ ರೈತರ ಖಾತೆಗೆ ಹಣ ಜಮಾವಣೆ ಮಾಡಿದ್ದರು. ಆರಂಭದಲ್ಲಿ ಎಲ್ಲರಿಗೂ ಹಣ ಜಮೆಗೊಂಡಿತಾದರೂ ನಂತರ ಹಣ ಬರಲೇ ಇಲ್ಲ ಎನ್ನುವ ಆರೋಪಗಳು ಕೇಳಿಬರುತ್ತಿವೆ.

ಇದನ್ನೂ ಓದಿ: ಭಾರತೀಯ ರೈತರಿಗೆ ಅಮೇರಿಕಾ-ಭಾರತ ಮುಕ್ತ ವ್ಯಾಪಾರ ಒಪ್ಪಂದ ತಂದೊಡ್ಡುವ ಅಪಾಯಗಳು

ವಾರ್ಷಿಕ ಮೂರು ಕಂತುಗಳಲ್ಲಿ 6 ಸಾವಿರ ರೂಪಾಯಿ ರೈತರ ಖಾತೆಗೆ ಹಣ ವರ್ಗಾವಣೆಯಾಗುತ್ತಿದೆ ಎಂದು ಕೇಂದ್ರ ಸರ್ಕಾರ ಹೇಳುತ್ತ ಬಂದಿದೆ. ಅರ್ಹ ಫಲನುಭವಿ ರೈತರು ಆಧಾರ್, ಮೊಬೈಲ್ ನಂಬರ್, ಪಹಣಿ, ಬ್ಯಾಂಕ್ ಖಾತೆ ಲಿಂಕ್ ಮಾಡಿದರೆ ಹಣ ಬರುತ್ತದೆ ಎಂದು ಸರ್ಕಾರ ಹೇಳಿತ್ತು. ಅದರಂತೆ ಎಲ್ಲಾ ದಾಖಲೆ ಸಲ್ಲಿಸಿದರೂ ಕೆಲವರಿಗೆ ಬಂದಿಲ್ಲ. ಕೆಲವರಿಗೆ ಎರಡು, ಮತ್ತೆ ಹಲವರಿಗೆ ಮೂರು, ನಾಲ್ಕು ಕಂತಿನ ಹಣ ಮಾತ್ರ ಬಂದಿದೆ. ಉಳಿದ ಕಂತಿನ ಹಣ ಬಂದಿಲ್ಲ. ಇದೇಕೆ ಹೀಗೆ? ಎರಡು ಕಂತಿನ ಹಣಬರುವವರೆಗೆ ದಾಖಲೆಗಳು ಸರಿ ಇದ್ದವು. ನಂತರ ದಾಖಲೆಗಳು ಸರಿ ಇಲ್ಲವೇ ಎಂದು ಹಣ ಬಾರದ ರೈತರು ಪ್ರಶ್ನಿಸಿದ್ದಾರೆ.

ಕಳೆದ ಒಂದು ವರ್ಷ 8 ತಿಂಗಳಲ್ಲಿ 6 ಕಂತುಗಳಲ್ಲಿ ಹಣ ಬಿಡುಗಡೆಯಾಗಿದೆ. ಆಗಸ್ಟ್ 9, 2020ರಂದು ಪ್ರಧಾನಿ ಆರನೇ ಕಂತಿನ ಹಣ ರೈತರ ಖಾತೆಗಳಿಗೆ ವರ್ಗಾಯಿಸಿದರು. ಆ ದಿನದ 17 ಸಾವಿರ ಕೋಟಿ ಸೇರಿ ಒಟ್ಟು ಇದುವರೆಗೆ 75 ಸಾವಿರ ಕೋಟಿ ರೂಪಾಯಿಗಳನ್ನು 8.5 ಕೋಟಿ ಫಲನುಭವಿ ರೈತರಿಗೆ ನೀಡಿದೆ ಎಂದು ಸರ್ಕಾರದ ಅಂಕಿ ಅಂಶಗಳು ತಿಳಿಸುತ್ತವೆ. ವಾಸ್ತವವಾಗಿ ನೋಡಿದರೆ ಕಿಸಾನ್ ಸನ್ಮಾನ್ ನಿಧಿ ಯೋಜನೆ ಘೋಷಣೆಯಾಗಿ 20 ತಿಂಗಳು ಕಳೆದಿವೆ. ಅಂದರೆ ವಾರ್ಷಿಕ ಮೂರು ಕಂತುಗಳಾದರೆ ಒಂದು ವರ್ಷ ಎಂಟು ತಿಂಗಳಿಗೆ 5 ಕಂತುಗಳು ಮಾತ್ರ ಆಗುತ್ತವೆ. ಸರ್ಕಾರದ ಪ್ರಕಾರ ಒಂದು ಕಂತಿನ ಹಣ ಹೆಚ್ಚುವರಿಯಾಗಿ ಬಿಡುಗಡೆಯಾಗಿದೆ.

ಭಾರತ ಕೃಷಿ ಪ್ರಧಾನ ದೇಶ. ಶೇಕಡ 65 ರಷ್ಟು ಕುಟುಂಬಗಳು ಕೃಷಿಯನ್ನೇ ಅವಲಂಬಿಸಿವೆ. ಕೃಷಿಯ ಜೊತೆ ಇತರೆ ಉಪಕಸುಬುಗಳಲ್ಲೂ ತೊಡಗಿಸಿಕೊಂಡಿವೆ. ದೇಶಕ್ಕೆ ಅನ್ನ ನೀಡುವ ರೈತ ಕುಟುಂಬಗಳ ದಿಕ್ಕುಗಾಣದೆ ಜೀವನ ನಡೆಸುತ್ತಿವೆ. ಇಂತಹ ಹೊತ್ತಿನಲ್ಲಿ ಸರ್ಕಾರ ಪ್ರತಿಯೊಬ್ಬ ರೈತ ಈ ಯೋಜನೆ ವ್ಯಾಪ್ತಿಗೆ ಬರುವಂತೆ ನೋಡಿಕೊಳ್ಳಬೇಕಿತ್ತು. ಆದರೆ ಅಂತಹ ಕೆಲಸ ಅಗಿಲ್ಲ. ಪಹಣಿ ಇಲ್ಲದ, ಪಾಲುದಾರಿಕೆ ಸರಿಯಾಗಿ ಆಗದೇ ಇರುವಂಥ, ಬಗರ್ ಹುಕುಂ ಸಾಗುವಳಿಯಲ್ಲಿ ತೊಡಗಿರುವಂಥ ರೈತರೂ ಕೃಷಿ ಸಮ್ಮಾನ್ ಯೋಜನೆಯ ಫಲನುಭವಿಗಳು ಆಗಲು ಸಾಧ್ಯವಾಗಿಲ್ಲ. ಎಷ್ಟೋ ಜಮೀನುಗಳು ಇನ್ನೂ ತಾತ-ಮುತ್ತಾತನ ಹೆಸರಿನಲ್ಲೇ ಓಡುತ್ತಿವೆ. ಇಂತಹ ಸಂಕಷ್ಟಗಳು ಈ ದೇಶದ ಅಧಿಕಾರದ ಚುಕ್ಕಾಣಿ ಹಿಡಿದಿರುವವರಿಗೆ ಕಾಣುತ್ತಿಲ್ಲ.

ಇದನ್ನೂ ಓದಿ: ಹುಲಿಗಳಿಗೆ ಧಾಮ! ರೈತ, ಆದಿವಾಸಿಗಳಿಗೆ ಪಂಗನಾಮ!!

ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಜಿ.ಸಿ.ಬಯ್ಯಾರೆಡ್ಡಿ ಅವರು ನಾನುಗೌರಿ.ಕಾಂ ಜೊತೆ ಮಾತನಾಡಿ, “ಟ್ರಾಕ್ಟರ್ ನಲ್ಲಿ ಒಂದು ಗಂಟೆ ಉಳುಮೆ ಮಾಡಲು 1500 ರೂ ನೀಡಬೇಕು. ರಸಗೊಬ್ಬರ ಖರೀದಿಗೆ ಸಾವಿರಾರು ರೂಪಾಯಿ ವೆಚ್ಚವಾಗುತ್ತದೆ. ವರ್ಷಕ್ಕೆ 6 ಸಾವಿರ ರೂ ನೀಡಿದರೆ ಯಾವುದಕ್ಕು ಆಗುವುದಿಲ್ಲ. ನಮ್ಮೂರಿನಲ್ಲಿ 300 ರೈತ ಕುಟುಂಬಗಳಿವೆ. ಅವರಲ್ಲಿ ಕೇವಲ 60 ಮಂದಿಗೆ ಮಾತ್ರ ಬಂದಿದೆ. ಅಧಿಕಾರಿಗಳು ರೆಕಾರ್ಡ್ ಮಾತ್ರ ಕೇಳುತ್ತಾರೆ. ಭೂಮಿ ಉಳುವ ಗೇಣಿದಾರನಿಗೆ ಯಾವುದೇ ದಾಖಲೆ ಇಲ್ಲ. ಭೂಮಾಲಿಕರು ಮಾತ್ರ ಕಿಸಾನ್ ಸನ್ಮಾನ್ ಯೋಜನೆಯ ಲಾಭ ಪಡೆಯುತ್ತಾರೆ. ಗೇಣಿದಾರರಿಗೂ ಹಣ ನೀಡಬೇಕು ಎಂಬುದು ನಮ್ಮ ಒತ್ತಾಯ. ದೇಶದಲ್ಲಿ ಬಹುಸಂಖ್ಯಾತರು ರೈತರಾದರೂ ಸರ್ಕಾರದ ನೆರವು ದೊರೆಯುತ್ತಿಲ್ಲ. ಇದು ನೋವಿನ ಸಂಗತಿ” ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರ ಡಾ. ಸ್ವಾಮಿನಾಥನ್ ವರದಿಯನ್ವಯ ರೈತರು ಮಾಡಿದ ವೆಚ್ಚದ ಒಂದೂವರೆ ಪಟ್ಟು ಹಣ ನೀಡಬೇಕೆಂದು ವ್ಯಾಪಕ ಆಗ್ರಹ ಕೇಳಿಬಂತು. ಇದರ ಒತ್ತಡವನ್ನು ಸಹಿಸದ ಕೇಂದ್ರ ಸರ್ಕಾರ ಅತುರವಾಗಿ ಕಿಸಾನ್ ಸನ್ಮಾನ್ ನಿಧಿ ಯೋಜನೆ ಜಾರಿಗೆ ತಂದಿತು. ಇದರಿಂದ ನಿಜವಾದ ರೈತರಿಗೆ ಪ್ರಯೋಜನವಿಲ್ಲ. ಇದೊಂದು ನಾಮಕಾವಸ್ತೆ ಮತ್ತು ತೋರಿಕೆಯ ಯೋಜನೆ ಎಂದು ಅವರು ಹೇಳಿದರು.

ಕಾರ್ಮಿಕ ಮುಖಂಡ ಸೈಯದ್ ಮುಜೀಬ್ ಹೇಳುವಂತೆ, “ಕೇಂದ್ರ ಸರ್ಕಾರ ಕೇವಲ 8.5 ಕೋಟಿ ರೈತರನ್ನು ರೀಚ್ ಆಗಲು ಸಾಧ್ಯವಾಗಿದೆ. ಸರ್ಕಾರ ನೀಡುತ್ತಿರುವ ಹಣ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತೆ. ರೈತರ ಮೂಗಿಗೆ ತುಪ್ಪ ಸವರುವಂತಹ ಕೆಲಸ ಮಾಡಿದೆ. ರೈತರ ಪ್ರಶ್ನೆಗಳನ್ನು ಕೇಂದ್ರ ಸರ್ಕಾರ ಇತ್ಯರ್ಥ ಪಡಿಸಿದರೆ, ಬೆಳೆಗಳಿಗೆ ಸರಿಯಾದ ಧಾರಣೆ ನೀಡಿದರೆ, ಉತ್ತಮ ಮಾರುಕಟ್ಟೆ ಸೌಲಭ್ಯ ಕಲ್ಪಿಸಿದರೆ, ರೈತರ ಸಮಸ್ಯೆಗಳನ್ನು ಪರಿಹರಿಸಿದರೆ ರೈತರಿಗೆ ಯಾವ ಹಣವನ್ನೂ ನೀಡಬೇಕಾದ ಅಗತ್ಯವಿಲ್ಲ. ರೈತರ ನಿಜವಾದ ಸಮಸ್ಯೆಗೆ ಸರ್ಕಾರ ಸ್ಪಂದಿಸಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ: ಹೊಂಬಾಳೆ – 2: ಕಂದಾಯ ಇಲಾಖೆ ಕೈಯಲ್ಲಿ ರೈತನ ಜುಟ್ಟು – ನಳಿನಿ ಕೋಲಾರ

ಶಿರಾ ತಾಲೂಕಿನ ಗೌಡಗೆರೆ ಗ್ರಾಮದ ಈರಣ್ಣ ನಾನುಗೌರಿ.ಕಾಂ ಜೊತೆ ಮಾತನಾಡಿದರು ‘’ನನಗೆ ಎರಡು ಕಂತು ಬಂತು ಸ್ವಾಮಿ, ಉಳಿದಿದ್ದು ಬಂದಿಲ್ಲ.. ನಮ್ಮ ಚಿಕ್ಕಪ್ಪನ ಮಕ್ಕಳಿಗೆ ಮೂರು ಕಂತು ಬಂತು. ನಾನು, ಅಧಿಕಾರಿಗಳನ್ನು ಕೇಳಿದೆ. ಬೇರೆಯವರಿಗೆ ಮೂರು ಕಂತು ಬಂದೈತೆ. ನನಗೆ ಎರಡೇ ಕಂತು ಬಂದಿರೋದು ಅಂದ್ರೆ ಬರುತ್ತೆ ಹೋಗಿ ಎಂದು ಹೇಳಿಕಳಿಸ್ತಾರೆ. ಇವಾಗ ನೋಡಿದ್ರೆ 6 ಕಂತು ಹಣ ಬಿಡುಗಡೆ ಆಗೈತೆ ಅಂತಾರೆ. ನನಗೇನು ಬಂದಿಲ್ಲ ಸ್ವಾಮಿ” ಎಂದು ಹೇಳಿದರು.

ಪಾವಗಡ ತಾಲೂಕು ರೈತ ಮುದ್ದಪ್ಪ ಅವರನ್ನು ಸಂಪರ್ಕಿಸಿದಾಗ “ನಮಗೆ ಎರಡು ಸಾರಿ ಬಂದೈತೆ. ಎರಡು ಸರಿನು ಬ್ಯಾಂಕ್‌ಗೆ ಹೋಗಿ ಎರಡೆರಡು ಸಾವಿರ ತಂದ್ವಿ. ಈ ತಿಂಗ್ಳಾಗೆ ಒಂದು ಮೆಸೇಜ್ ಬಂದೈತೆ. 2 ಸಾವಿರ ಹಾಕಿದ್ದೀವಿ ಅಂತ. ಇನ್ನೂ ಹೋಗಿಲ್ಲ. ಹೋಗಿ ತರಬೇಕು. ಇದು ಸೇರಿದ್ರೆ ಮೂರು ಸಾರಿ ಬಂದಂಗಾಗ್ತೈತೆ” ಎಂದು ತಿಳಿಸಿದರು.

ಕೇಂದ್ರ ಸರ್ಕಾರ 6 ಸಾವಿರ ಘೋಷಣೆ ಮಾಡುತ್ತಿದ್ದಂತೆಯೇ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೂಡ ರಾಜ್ಯ ಸರ್ಕಾರವೂ 4 ಸಾವಿರ ಕೊಡುತ್ತದೆ ಎಂದು ಭರವಸೆ ನೀಡಿದರು. 2019 ರ ಸಾಲಿನಲ್ಲಿ ರೈತರಿಗೆ ನೀಡಿದ ಭರವಸೆಯಂತೆ ಕೆಲವರಿಗೆ 4 ಸಾವಿರ ರೂಪಾಯಿ ದೊರೆಯಿತು. ಮತ್ತೆ ಕೆಲವರಿಗೆ 2 ಸಾವಿರ ಮಾತ್ರ ಖಾತೆಗೆ ಬಂತು. 2020 ನೇ ಸಾಲಿನಲ್ಲಿ ಕೊರೊನಾ ಬಂದ ಮೇಲೆ ಹಣವೂ ಇಲ್ಲ. ಅದರ ಬಗ್ಗೆ ಸೊಲ್ಲೂ ಇಲ್ಲ ಅನ್ನುವಂತಾಗಿದೆ.

ಕೇಂದ್ರ ಸರ್ಕಾರದ ಕಿಸಾನ್ ಸನ್ಮಾನ್ ಯೋಜನೆ 8.5 ಕೋಟಿ ರೈತರ ಪೈಕಿ ಬಹುತೇಕರಿಗೆ ಎರಡು, ಮೂರು ಮತ್ತು ನಾಲ್ಕು ಬಾರಿ ಹಣ ಬಂದಿದ್ದರೆ, ಕೆಲವೇ ಮಂದಿ ರೈತರಿಗೆ ಆರು ಕಂತುಗಳು ಬಂದಿವೆ. ಆದರೆ ನಿಜ ರೈತ ಫಲನುಭವಿಗಳು ಈ ಯೋಜನೆಯಿಂದ ಹೊರಗಿದ್ದು ಸೌಲಭ್ಯದಿಂದ ವಂಚಿತರಾಗಿದ್ದಾರೆ.


ಓದಿ: ರೈತರ ಮರಣ ಶಾಸನ ಬರೆಯಲು ಕಳ್ಳದಾರಿ ಹಿಡಿದ ರಾಜ್ಯ ಸರ್ಕಾರ: ಸಿದ್ದರಾಮಯ್ಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...

ಮುಸ್ಲಿಂ ಮಹಿಳೆಯರ ವಿರುದ್ಧದ ಷರಿಯಾ ಕಾನೂನಿಗೆ ಏಕರೂಪ ನಾಗರಿಕ ಸಂಹಿತೆ ಪರಿಹಾರ: ಸುಪ್ರೀಂ ಕೋರ್ಟ್

"ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ತಾರತಮ್ಯದ ಆನುವಂಶಿಕ ನಿಬಂಧನೆಗಳನ್ನು ಪರಿಹರಿಸಲು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅತ್ಯಂತ ಪರಿಣಾಮಕಾರಿ ಪರಿಹಾರ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಮಾ.20) ಹೇಳಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ...

ಮುಂಬೈ: ಬಜೆಟ್ ಅಧಿವೇಶನದ ನಡುವೆ ವಿಧಾನ ಭವನದ ಬಳಿ ವ್ಯಕ್ತಿಯೊಬ್ಬನಿಂದ ಆತ್ಮಹತ್ಯೆಗೆ ಯತ್ನ: ವಶಕ್ಕೆ ಪಡೆದ ಪೊಲೀಸರು

ಮುಂಬೈ: ಮಾರ್ಚ್ 11, ಬುಧವಾರ ಮಹಾರಾಷ್ಟ್ರ ವಿಧಾನ ಭವನದ ಹೊರಗೆ ವ್ಯಕ್ತಿಯೊಬ್ಬರು ಆತ್ಮಾಹುತಿ ಮಾಡಿಕೊಳ್ಳಲು ಯತ್ನಿಸಿರುವುದಾಗಿ ವರದಿಯಾಗಿದೆ. ತಕ್ಷಣವೇ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದಾರೆ.  2026 ರ ಮಹಾರಾಷ್ಟ್ರ ಬಜೆಟ್ ಅಧಿವೇಶನ ವಿಧಾನ ಭವನದಲ್ಲಿ...

ಕೋವಿಡ್ ಲಸಿಕೆ ಕೆಲ ಸಾವುಗಳಿಗೆ ಕಾರಣವಾಗಿದೆ ಎಂದು ಅಧಿಕೃತ ದತ್ತಾಂಶ ತೋರಿಸಿದೆ, ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಸರ್ಕಾರದ ಅಧೀನದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲಕ ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ. ಕೋವಿಡ್ ಲಸಿಕೆ ಪಡೆದ ಬಳಿಕ ಕೆಲ ಸಾವುಗಳು ಸಂಭವಿಸಿರುವುದನ್ನು ಅಧಿಕೃತ ದತ್ತಾಂಶಗಳೇ ದೃಢಪಡಿಸಿವೆ. ಹೀಗಿರುವಾಗ, ಲಸಿಕೆ ಹಾಕಿಸಿಕೊಂಡ ನಂತರ ಸಾವು...

ತಮಿಳುನಾಡು| ಪೊಲೀಸ್ ದೌರ್ಜನ್ಯದಿಂದ ಎರಡು ತಿಂಗಳಲ್ಲಿ ನಾಲ್ವರು ದಲಿತರು ಸಾವು

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದನ್ನು ಪ್ರತಿಬಿಂಬಿಸುವ ಆತಂಕಕಾರಿ ವಿಚಾರವೊಂದು ಮುನ್ನಲೆಗೆ ಬಂದಿದ್ದು, ಪೊಲೀಸ್ ಹಿಂಸಾಚಾರದಿಂದಾಗಿ ಎರಡು ತಿಂಗಳ ಅವಧಿಯಲ್ಲಿ ನಾಲ್ವರು ದಲಿತರು ಸಾವನ್ನಪ್ಪಿದ್ದಾರೆ. ಈ ಸಾವುಗಳಲ್ಲಿ, ಎರಡು ಪ್ರಕರಣಗಳನ್ನು...

ಪಶ್ಚಿಮ ಏಷ್ಯಾ ಸಂಘರ್ಷ| ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿದ್ದಾಗಿ ವಿಡಿಯೋ ಹಂಚಿಕೊಂಡ ಅಮೆರಿಕ ಸೇನೆ

ಪಶ್ಚಿಮ ಏಷ್ಯಾದಿಂದ ತೈಲ ರಫ್ತನ್ನು ತಡೆಯಲು ಇರಾನ್ ಪ್ರಯತ್ನಿಸುತ್ತಿರುವುದರಿಂದ ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿರುವುದಾಗಿ ಅಮೆರಿಕ ಸೇನೆ ಹೇಳಿಕೊಂಡಿದೆ.  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಇರಾನ್ ಜಲಸಂಧಿಯಲ್ಲಿ ಗಣಿಗಳನ್ನು...

13 ವರ್ಷಗಳಿಂದ ಕೋಮಾದಲ್ಲಿರುವ ಯುವಕನ ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅನುಮತಿ

ಕಳೆದ 13 ವರ್ಷಗಳಿಂದ ಕೋಮಾದಲ್ಲಿರುವ 32 ವರ್ಷದ ಹರೀಶ್ ರಾಣಾ ಎಂಬ ಯುವಕನ ಪರೋಕ್ಷ (ನಿಷ್ಕ್ರಿಯ) ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಬುಧವಾರ (ಮಾ.11) ಅನುಮತಿ ನೀಡಿದೆ ಎಂದು livelaw.in ವರದಿ ಮಾಡಿದೆ. ದೆಹಲಿ ಮೂಲದ ಹರೀಶ್...