Homeಮುಖಪುಟಪ್ರಧಾನಮಂತ್ರಿ ಕಿಸಾನ್ ಸನ್ಮಾನ್ ನಿಧಿ: ಬಿಡುಗಡೆಯಾಗಿದ್ದು 6 ಕಂತು, ಬಂದಿದ್ದು 3 ಕಂತು ಮಾತ್ರ

ಪ್ರಧಾನಮಂತ್ರಿ ಕಿಸಾನ್ ಸನ್ಮಾನ್ ನಿಧಿ: ಬಿಡುಗಡೆಯಾಗಿದ್ದು 6 ಕಂತು, ಬಂದಿದ್ದು 3 ಕಂತು ಮಾತ್ರ

ಬೆಳೆಗಳಿಗೆ ಸರಿಯಾದ ಧಾರಣೆ ನೀಡಿದರೆ, ಉತ್ತಮ ಮಾರುಕಟ್ಟೆ ಸೌಲಭ್ಯ ಕಲ್ಪಿಸಿದರೆ, ರೈತರ ಸಮಸ್ಯೆಗಳನ್ನು ಪರಿಹರಿಸಿದರೆ ರೈತರಿಗೆ ಯಾವ ಹಣವನ್ನೂ ನೀಡಬೇಕಾದ ಅಗತ್ಯವಿಲ್ಲ.

- Advertisement -
- Advertisement -

ಪ್ರಧಾನಮಂತ್ರಿ ಕಿಸಾನ್ ಸನ್ಮಾನ್ ನಿಧಿ ಯೋಜನೆಯಡಿ ರೈತರಿಗೆ ಆರನೇ ಕಂತಿನ ಹಣ ಬಿಡುಗಡೆಯಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿದೆ. ಆದರೆ ವಾಸ್ತವದಲ್ಲಿ ಕೇವಲ ಮೂರು-ನಾಲ್ಕು ಕಂತಿನ ಹಣ ಮಾತ್ರ ಕೆಲ ರೈತರ ಖಾತೆಗೆ ನೇರ ವರ್ಗಾವಣೆಯಾಗಿದೆ ಎಂದು ರೈತರು ದೂರುತ್ತಿದ್ದಾರೆ. ಈ ಕುರಿತು ಹಲವು ರೈತರನ್ನು ಮಾತನಾಡಿಸಿದಾಗ ಎಲ್ಲಾ ದಾಖಲೆ ಸಲ್ಲಿಸಿದ್ದರೂ ಕೇವಲ 2 ಬಾರಿ ಹಣ ಬಂದಿದ್ದು ನಂತರ ಬಂದಿಲ್ಲ ಎಂದು ಕೆಲವು ರೈತರು ಹೇಳಿದ್ದಾರೆ.

ಈ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿಯ ಮಹಾತ್ವಾಕಾಂಕ್ಷೆಯ ಯೋಜನೆ ಎನ್ನಲಾಗಿದ್ದು, ಲೋಕಸಭಾ ಚುನಾವಣಾ ಪೂರ್ವದಲ್ಲಿ ಈ ಯೋಜನೆ ಘೋಷಣೆ ಮಾಡಲಾಗಿತ್ತು. ತುಮಕೂರಿನ ಸರ್ಕಾರಿ ಜೂನಿಯರ್ ಕಾಲೇಜು ಆವರಣದಲ್ಲಿ ಜನವರಿ 2, 2019 ರಂದು ನಡೆದ ಬೃಹತ್ ರೈತರ ಸಮಾವೇಶದಲ್ಲಿ ಪ್ರಧಾನಿ ನರೇಂದ್ರಿ ಮೋದಿ ಮೊದಲ ಕಂತು ಬಿಡುಗಡೆ ಮಾಡಿದ್ದರು. ಬಟನ್ ಒತ್ತುವ ಮೂಲಕ ಫಲನುಭವಿ ರೈತರ ಖಾತೆಗೆ ಹಣ ಜಮಾವಣೆ ಮಾಡಿದ್ದರು. ಆರಂಭದಲ್ಲಿ ಎಲ್ಲರಿಗೂ ಹಣ ಜಮೆಗೊಂಡಿತಾದರೂ ನಂತರ ಹಣ ಬರಲೇ ಇಲ್ಲ ಎನ್ನುವ ಆರೋಪಗಳು ಕೇಳಿಬರುತ್ತಿವೆ.

ಇದನ್ನೂ ಓದಿ: ಭಾರತೀಯ ರೈತರಿಗೆ ಅಮೇರಿಕಾ-ಭಾರತ ಮುಕ್ತ ವ್ಯಾಪಾರ ಒಪ್ಪಂದ ತಂದೊಡ್ಡುವ ಅಪಾಯಗಳು

ವಾರ್ಷಿಕ ಮೂರು ಕಂತುಗಳಲ್ಲಿ 6 ಸಾವಿರ ರೂಪಾಯಿ ರೈತರ ಖಾತೆಗೆ ಹಣ ವರ್ಗಾವಣೆಯಾಗುತ್ತಿದೆ ಎಂದು ಕೇಂದ್ರ ಸರ್ಕಾರ ಹೇಳುತ್ತ ಬಂದಿದೆ. ಅರ್ಹ ಫಲನುಭವಿ ರೈತರು ಆಧಾರ್, ಮೊಬೈಲ್ ನಂಬರ್, ಪಹಣಿ, ಬ್ಯಾಂಕ್ ಖಾತೆ ಲಿಂಕ್ ಮಾಡಿದರೆ ಹಣ ಬರುತ್ತದೆ ಎಂದು ಸರ್ಕಾರ ಹೇಳಿತ್ತು. ಅದರಂತೆ ಎಲ್ಲಾ ದಾಖಲೆ ಸಲ್ಲಿಸಿದರೂ ಕೆಲವರಿಗೆ ಬಂದಿಲ್ಲ. ಕೆಲವರಿಗೆ ಎರಡು, ಮತ್ತೆ ಹಲವರಿಗೆ ಮೂರು, ನಾಲ್ಕು ಕಂತಿನ ಹಣ ಮಾತ್ರ ಬಂದಿದೆ. ಉಳಿದ ಕಂತಿನ ಹಣ ಬಂದಿಲ್ಲ. ಇದೇಕೆ ಹೀಗೆ? ಎರಡು ಕಂತಿನ ಹಣಬರುವವರೆಗೆ ದಾಖಲೆಗಳು ಸರಿ ಇದ್ದವು. ನಂತರ ದಾಖಲೆಗಳು ಸರಿ ಇಲ್ಲವೇ ಎಂದು ಹಣ ಬಾರದ ರೈತರು ಪ್ರಶ್ನಿಸಿದ್ದಾರೆ.

ಕಳೆದ ಒಂದು ವರ್ಷ 8 ತಿಂಗಳಲ್ಲಿ 6 ಕಂತುಗಳಲ್ಲಿ ಹಣ ಬಿಡುಗಡೆಯಾಗಿದೆ. ಆಗಸ್ಟ್ 9, 2020ರಂದು ಪ್ರಧಾನಿ ಆರನೇ ಕಂತಿನ ಹಣ ರೈತರ ಖಾತೆಗಳಿಗೆ ವರ್ಗಾಯಿಸಿದರು. ಆ ದಿನದ 17 ಸಾವಿರ ಕೋಟಿ ಸೇರಿ ಒಟ್ಟು ಇದುವರೆಗೆ 75 ಸಾವಿರ ಕೋಟಿ ರೂಪಾಯಿಗಳನ್ನು 8.5 ಕೋಟಿ ಫಲನುಭವಿ ರೈತರಿಗೆ ನೀಡಿದೆ ಎಂದು ಸರ್ಕಾರದ ಅಂಕಿ ಅಂಶಗಳು ತಿಳಿಸುತ್ತವೆ. ವಾಸ್ತವವಾಗಿ ನೋಡಿದರೆ ಕಿಸಾನ್ ಸನ್ಮಾನ್ ನಿಧಿ ಯೋಜನೆ ಘೋಷಣೆಯಾಗಿ 20 ತಿಂಗಳು ಕಳೆದಿವೆ. ಅಂದರೆ ವಾರ್ಷಿಕ ಮೂರು ಕಂತುಗಳಾದರೆ ಒಂದು ವರ್ಷ ಎಂಟು ತಿಂಗಳಿಗೆ 5 ಕಂತುಗಳು ಮಾತ್ರ ಆಗುತ್ತವೆ. ಸರ್ಕಾರದ ಪ್ರಕಾರ ಒಂದು ಕಂತಿನ ಹಣ ಹೆಚ್ಚುವರಿಯಾಗಿ ಬಿಡುಗಡೆಯಾಗಿದೆ.

ಭಾರತ ಕೃಷಿ ಪ್ರಧಾನ ದೇಶ. ಶೇಕಡ 65 ರಷ್ಟು ಕುಟುಂಬಗಳು ಕೃಷಿಯನ್ನೇ ಅವಲಂಬಿಸಿವೆ. ಕೃಷಿಯ ಜೊತೆ ಇತರೆ ಉಪಕಸುಬುಗಳಲ್ಲೂ ತೊಡಗಿಸಿಕೊಂಡಿವೆ. ದೇಶಕ್ಕೆ ಅನ್ನ ನೀಡುವ ರೈತ ಕುಟುಂಬಗಳ ದಿಕ್ಕುಗಾಣದೆ ಜೀವನ ನಡೆಸುತ್ತಿವೆ. ಇಂತಹ ಹೊತ್ತಿನಲ್ಲಿ ಸರ್ಕಾರ ಪ್ರತಿಯೊಬ್ಬ ರೈತ ಈ ಯೋಜನೆ ವ್ಯಾಪ್ತಿಗೆ ಬರುವಂತೆ ನೋಡಿಕೊಳ್ಳಬೇಕಿತ್ತು. ಆದರೆ ಅಂತಹ ಕೆಲಸ ಅಗಿಲ್ಲ. ಪಹಣಿ ಇಲ್ಲದ, ಪಾಲುದಾರಿಕೆ ಸರಿಯಾಗಿ ಆಗದೇ ಇರುವಂಥ, ಬಗರ್ ಹುಕುಂ ಸಾಗುವಳಿಯಲ್ಲಿ ತೊಡಗಿರುವಂಥ ರೈತರೂ ಕೃಷಿ ಸಮ್ಮಾನ್ ಯೋಜನೆಯ ಫಲನುಭವಿಗಳು ಆಗಲು ಸಾಧ್ಯವಾಗಿಲ್ಲ. ಎಷ್ಟೋ ಜಮೀನುಗಳು ಇನ್ನೂ ತಾತ-ಮುತ್ತಾತನ ಹೆಸರಿನಲ್ಲೇ ಓಡುತ್ತಿವೆ. ಇಂತಹ ಸಂಕಷ್ಟಗಳು ಈ ದೇಶದ ಅಧಿಕಾರದ ಚುಕ್ಕಾಣಿ ಹಿಡಿದಿರುವವರಿಗೆ ಕಾಣುತ್ತಿಲ್ಲ.

ಇದನ್ನೂ ಓದಿ: ಹುಲಿಗಳಿಗೆ ಧಾಮ! ರೈತ, ಆದಿವಾಸಿಗಳಿಗೆ ಪಂಗನಾಮ!!

ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಜಿ.ಸಿ.ಬಯ್ಯಾರೆಡ್ಡಿ ಅವರು ನಾನುಗೌರಿ.ಕಾಂ ಜೊತೆ ಮಾತನಾಡಿ, “ಟ್ರಾಕ್ಟರ್ ನಲ್ಲಿ ಒಂದು ಗಂಟೆ ಉಳುಮೆ ಮಾಡಲು 1500 ರೂ ನೀಡಬೇಕು. ರಸಗೊಬ್ಬರ ಖರೀದಿಗೆ ಸಾವಿರಾರು ರೂಪಾಯಿ ವೆಚ್ಚವಾಗುತ್ತದೆ. ವರ್ಷಕ್ಕೆ 6 ಸಾವಿರ ರೂ ನೀಡಿದರೆ ಯಾವುದಕ್ಕು ಆಗುವುದಿಲ್ಲ. ನಮ್ಮೂರಿನಲ್ಲಿ 300 ರೈತ ಕುಟುಂಬಗಳಿವೆ. ಅವರಲ್ಲಿ ಕೇವಲ 60 ಮಂದಿಗೆ ಮಾತ್ರ ಬಂದಿದೆ. ಅಧಿಕಾರಿಗಳು ರೆಕಾರ್ಡ್ ಮಾತ್ರ ಕೇಳುತ್ತಾರೆ. ಭೂಮಿ ಉಳುವ ಗೇಣಿದಾರನಿಗೆ ಯಾವುದೇ ದಾಖಲೆ ಇಲ್ಲ. ಭೂಮಾಲಿಕರು ಮಾತ್ರ ಕಿಸಾನ್ ಸನ್ಮಾನ್ ಯೋಜನೆಯ ಲಾಭ ಪಡೆಯುತ್ತಾರೆ. ಗೇಣಿದಾರರಿಗೂ ಹಣ ನೀಡಬೇಕು ಎಂಬುದು ನಮ್ಮ ಒತ್ತಾಯ. ದೇಶದಲ್ಲಿ ಬಹುಸಂಖ್ಯಾತರು ರೈತರಾದರೂ ಸರ್ಕಾರದ ನೆರವು ದೊರೆಯುತ್ತಿಲ್ಲ. ಇದು ನೋವಿನ ಸಂಗತಿ” ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರ ಡಾ. ಸ್ವಾಮಿನಾಥನ್ ವರದಿಯನ್ವಯ ರೈತರು ಮಾಡಿದ ವೆಚ್ಚದ ಒಂದೂವರೆ ಪಟ್ಟು ಹಣ ನೀಡಬೇಕೆಂದು ವ್ಯಾಪಕ ಆಗ್ರಹ ಕೇಳಿಬಂತು. ಇದರ ಒತ್ತಡವನ್ನು ಸಹಿಸದ ಕೇಂದ್ರ ಸರ್ಕಾರ ಅತುರವಾಗಿ ಕಿಸಾನ್ ಸನ್ಮಾನ್ ನಿಧಿ ಯೋಜನೆ ಜಾರಿಗೆ ತಂದಿತು. ಇದರಿಂದ ನಿಜವಾದ ರೈತರಿಗೆ ಪ್ರಯೋಜನವಿಲ್ಲ. ಇದೊಂದು ನಾಮಕಾವಸ್ತೆ ಮತ್ತು ತೋರಿಕೆಯ ಯೋಜನೆ ಎಂದು ಅವರು ಹೇಳಿದರು.

ಕಾರ್ಮಿಕ ಮುಖಂಡ ಸೈಯದ್ ಮುಜೀಬ್ ಹೇಳುವಂತೆ, “ಕೇಂದ್ರ ಸರ್ಕಾರ ಕೇವಲ 8.5 ಕೋಟಿ ರೈತರನ್ನು ರೀಚ್ ಆಗಲು ಸಾಧ್ಯವಾಗಿದೆ. ಸರ್ಕಾರ ನೀಡುತ್ತಿರುವ ಹಣ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತೆ. ರೈತರ ಮೂಗಿಗೆ ತುಪ್ಪ ಸವರುವಂತಹ ಕೆಲಸ ಮಾಡಿದೆ. ರೈತರ ಪ್ರಶ್ನೆಗಳನ್ನು ಕೇಂದ್ರ ಸರ್ಕಾರ ಇತ್ಯರ್ಥ ಪಡಿಸಿದರೆ, ಬೆಳೆಗಳಿಗೆ ಸರಿಯಾದ ಧಾರಣೆ ನೀಡಿದರೆ, ಉತ್ತಮ ಮಾರುಕಟ್ಟೆ ಸೌಲಭ್ಯ ಕಲ್ಪಿಸಿದರೆ, ರೈತರ ಸಮಸ್ಯೆಗಳನ್ನು ಪರಿಹರಿಸಿದರೆ ರೈತರಿಗೆ ಯಾವ ಹಣವನ್ನೂ ನೀಡಬೇಕಾದ ಅಗತ್ಯವಿಲ್ಲ. ರೈತರ ನಿಜವಾದ ಸಮಸ್ಯೆಗೆ ಸರ್ಕಾರ ಸ್ಪಂದಿಸಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ: ಹೊಂಬಾಳೆ – 2: ಕಂದಾಯ ಇಲಾಖೆ ಕೈಯಲ್ಲಿ ರೈತನ ಜುಟ್ಟು – ನಳಿನಿ ಕೋಲಾರ

ಶಿರಾ ತಾಲೂಕಿನ ಗೌಡಗೆರೆ ಗ್ರಾಮದ ಈರಣ್ಣ ನಾನುಗೌರಿ.ಕಾಂ ಜೊತೆ ಮಾತನಾಡಿದರು ‘’ನನಗೆ ಎರಡು ಕಂತು ಬಂತು ಸ್ವಾಮಿ, ಉಳಿದಿದ್ದು ಬಂದಿಲ್ಲ.. ನಮ್ಮ ಚಿಕ್ಕಪ್ಪನ ಮಕ್ಕಳಿಗೆ ಮೂರು ಕಂತು ಬಂತು. ನಾನು, ಅಧಿಕಾರಿಗಳನ್ನು ಕೇಳಿದೆ. ಬೇರೆಯವರಿಗೆ ಮೂರು ಕಂತು ಬಂದೈತೆ. ನನಗೆ ಎರಡೇ ಕಂತು ಬಂದಿರೋದು ಅಂದ್ರೆ ಬರುತ್ತೆ ಹೋಗಿ ಎಂದು ಹೇಳಿಕಳಿಸ್ತಾರೆ. ಇವಾಗ ನೋಡಿದ್ರೆ 6 ಕಂತು ಹಣ ಬಿಡುಗಡೆ ಆಗೈತೆ ಅಂತಾರೆ. ನನಗೇನು ಬಂದಿಲ್ಲ ಸ್ವಾಮಿ” ಎಂದು ಹೇಳಿದರು.

ಪಾವಗಡ ತಾಲೂಕು ರೈತ ಮುದ್ದಪ್ಪ ಅವರನ್ನು ಸಂಪರ್ಕಿಸಿದಾಗ “ನಮಗೆ ಎರಡು ಸಾರಿ ಬಂದೈತೆ. ಎರಡು ಸರಿನು ಬ್ಯಾಂಕ್‌ಗೆ ಹೋಗಿ ಎರಡೆರಡು ಸಾವಿರ ತಂದ್ವಿ. ಈ ತಿಂಗ್ಳಾಗೆ ಒಂದು ಮೆಸೇಜ್ ಬಂದೈತೆ. 2 ಸಾವಿರ ಹಾಕಿದ್ದೀವಿ ಅಂತ. ಇನ್ನೂ ಹೋಗಿಲ್ಲ. ಹೋಗಿ ತರಬೇಕು. ಇದು ಸೇರಿದ್ರೆ ಮೂರು ಸಾರಿ ಬಂದಂಗಾಗ್ತೈತೆ” ಎಂದು ತಿಳಿಸಿದರು.

ಕೇಂದ್ರ ಸರ್ಕಾರ 6 ಸಾವಿರ ಘೋಷಣೆ ಮಾಡುತ್ತಿದ್ದಂತೆಯೇ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೂಡ ರಾಜ್ಯ ಸರ್ಕಾರವೂ 4 ಸಾವಿರ ಕೊಡುತ್ತದೆ ಎಂದು ಭರವಸೆ ನೀಡಿದರು. 2019 ರ ಸಾಲಿನಲ್ಲಿ ರೈತರಿಗೆ ನೀಡಿದ ಭರವಸೆಯಂತೆ ಕೆಲವರಿಗೆ 4 ಸಾವಿರ ರೂಪಾಯಿ ದೊರೆಯಿತು. ಮತ್ತೆ ಕೆಲವರಿಗೆ 2 ಸಾವಿರ ಮಾತ್ರ ಖಾತೆಗೆ ಬಂತು. 2020 ನೇ ಸಾಲಿನಲ್ಲಿ ಕೊರೊನಾ ಬಂದ ಮೇಲೆ ಹಣವೂ ಇಲ್ಲ. ಅದರ ಬಗ್ಗೆ ಸೊಲ್ಲೂ ಇಲ್ಲ ಅನ್ನುವಂತಾಗಿದೆ.

ಕೇಂದ್ರ ಸರ್ಕಾರದ ಕಿಸಾನ್ ಸನ್ಮಾನ್ ಯೋಜನೆ 8.5 ಕೋಟಿ ರೈತರ ಪೈಕಿ ಬಹುತೇಕರಿಗೆ ಎರಡು, ಮೂರು ಮತ್ತು ನಾಲ್ಕು ಬಾರಿ ಹಣ ಬಂದಿದ್ದರೆ, ಕೆಲವೇ ಮಂದಿ ರೈತರಿಗೆ ಆರು ಕಂತುಗಳು ಬಂದಿವೆ. ಆದರೆ ನಿಜ ರೈತ ಫಲನುಭವಿಗಳು ಈ ಯೋಜನೆಯಿಂದ ಹೊರಗಿದ್ದು ಸೌಲಭ್ಯದಿಂದ ವಂಚಿತರಾಗಿದ್ದಾರೆ.


ಓದಿ: ರೈತರ ಮರಣ ಶಾಸನ ಬರೆಯಲು ಕಳ್ಳದಾರಿ ಹಿಡಿದ ರಾಜ್ಯ ಸರ್ಕಾರ: ಸಿದ್ದರಾಮಯ್ಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...