Homeಕರ್ನಾಟಕಕನ್ನಡ ಸಹಾಯಕ ಪ್ರಾಧ್ಯಾಪಕರ ಹುದ್ದೆ ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಸಾಲು ಸಾಲು ತಪ್ಪುಗಳು!

ಕನ್ನಡ ಸಹಾಯಕ ಪ್ರಾಧ್ಯಾಪಕರ ಹುದ್ದೆ ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಸಾಲು ಸಾಲು ತಪ್ಪುಗಳು!

ಸಹಾಯಕ ಪ್ರಾಧ್ಯಾಪಕ ಹುದ್ದೆಯ ಆಕಾಂಕ್ಷಿಗಳು ಪಟ್ಟಿ ಮಾಡಿರುವ ತಪ್ಪುಗಳಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನಿರ್ಲಕ್ಷ್ಯವು ಎದ್ದುಕಾಣುತ್ತದೆ. ಪ್ರಶ್ನೆ ಪತ್ರಿಕೆ ಕುರಿತು ಆಕಾಂಕ್ಷಿಗಳು ಎತ್ತಿರುವ ಆಕ್ಷೇಪಗಳು ಹೀಗಿವೆ...

- Advertisement -
- Advertisement -

ಏಳು ವರ್ಷಗಳ ಬಳಿಕ ನಡೆಸಲಾದ ಸಹಾಯಕ ಪ್ರಾಧ್ಯಾಪಕರ ಹುದ್ದೆಯ ಪರೀಕ್ಷೆಯಲ್ಲಿ ಕನ್ನಡ ಐಚ್ಛಿಕ ಪ್ರಶ್ನೆ ಪತ್ರಿಕೆಯಲ್ಲಾಗಿರುವ ದೋಷಗಳ ವಿರುದ್ಧ ಹುದ್ದೆಯ ಆಕಾಂಕ್ಷಿಗಳು ಧ್ವನಿ ಎತ್ತಿದ್ದು, ಮರುಪರೀಕ್ಷೆಗೆ ಆಗ್ರಹಿಸಿದ್ದಾರೆ.

ಪ್ರಶ್ನೆ ಪತ್ರಿಕೆಯಲ್ಲಿ ಹತ್ತಾರು ಲೋಪಗಳನ್ನು ಅಭ್ಯರ್ಥಿಗಳು ಗುರುತಿಸಿದ್ದು, ಕನ್ನಡ ಭಾಷೆಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಸಂಘಟಿತವಾಗಿ ಯಾರೂ ಧ್ವನಿ ಎತ್ತುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಪಶ್ನೆಪತ್ರಿಕೆಯಲ್ಲಾಗಿರುವ ತಪ್ಪುಗಳನ್ನು ಪಟ್ಟಿ ಮಾಡಿರುವ ನೊಂದ ಅಭ್ಯರ್ಥಿಗಳು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆ.ಇ.ಎ) ಅನೇಕ ಕಟ್ಟುನಿಟ್ಟುಗಳ ನಡುವೆ ದಿನಾಂಕ 12 ಮಾರ್ಚ್ 2022ರಿಂದ 16 ಮಾರ್ಚ್ 2022ವರೆಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿನ ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಸಂಬಂಧಿಸಿದಂತೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಿ ಕೈತೊಳೆದುಕೊಂಡಿದೆ. ಆದರೆ ಕನ್ನಡ ಐಚ್ಛಿಕ ಪ್ರಶ್ನೆಪತ್ರಿಕೆಯಲ್ಲಾದ ಎಡವಟ್ಟುಗಳ ಕುರಿತು ಗಂಭೀರವಾಗಿ ಯಾವುದೇ ಕ್ರಮ ಜರುಗಿಸುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ದಿನಾಂಕ 20 ಮಾರ್ಚ್ 2022ರ ‘ಪ್ರಜಾವಾಣಿ’ಗೆ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕರಾದ ಎಸ್. ರಮ್ಯಾ ಮೇಡಂ ಅವರು, “ಕನ್ನಡ ಹೊರತುಪಡಿಸಿ ಯಾವುದೇ ವಿಷಯಗಳ ಬಗ್ಗೆ ದೂರುಗಳು ಬಂದಿಲ್ಲ. ವ್ಯವಸ್ಥಿತವಾಗಿ ಪರೀಕ್ಷೆ ನಡೆಸಲಾಗಿದೆ. ಕನ್ನಡ ಪ್ರಶ್ನೆಪತ್ರಿಕೆ ಬಗ್ಗೆ ಪರಿಶೀಲಿಸಲಾಗುವುದು. ಯಾವ ಸರಣಿಯ ಪ್ರಶ್ನೆಪತ್ರಿಕೆಯಲ್ಲಿ ಎಷ್ಟು ದೋಷಗಳಿವೆ ಎನ್ನುವುದನ್ನು ಪರಿಶೀಲಿಸಲಾಗುವುದು” ಎಂದು ಹೇಳಿಕೆ ನೀಡಿದ್ದಾರೆ. ಇವರ ಮಾತಿನನ್ವಯ ದೂರು ಬಂದರಷ್ಟೇ ಪರಿಶೀಲಿಸುತ್ತಾರೆ. ಇಲ್ಲವಾದರೆ ತಪ್ಪುಗಳೇ ಸರಿಯೆಂಬ ನಿಲುವು ಖಚಿತವಾದಂತೆ. ಪರೀಕ್ಷೆಗೂ ಮೊದಲು ಪ್ರಶ್ನೆಪತ್ರಿಕೆಯಲ್ಲಿ ಕಂಡುಬರುವ ದೋಷಗಳನ್ನು ಪರಿಶೀಲಿಸದೇ ಹಾಗೇ ಕೊಡಲಾಗುತ್ತದೆ ಎಂಬುದನ್ನು ಒಪ್ಪಿಕೊಂಡಿರುವಂತಿದೆ ಇವರ ಮಾತಿನ ತಿರುಳು. ವ್ಯವಸ್ಥೆಗೆ ದೂರು ಬಂದರಷ್ಟೇ ಎಚ್ಚೆತ್ತುಕೊಳ್ಳುತ್ತದೆ. ಇಲ್ಲವೆಂದರೆ ತಪ್ಪುಗಳೇ ಸರಿಯಾಗುವ ಅಥವಾ ತಪ್ಪುಗಳನ್ನೇ ಸರಿಯೆಂದು ಸಮರ್ಥಿಸುವ ವಾತಾವರಣ ಇದೆ ಎಂದು ಹುದ್ದೆಯ ಆಕಾಂಕ್ಷಿಗಳು ಹೇಳಿದ್ದಾರೆ.

ಇದನ್ನೂ ಓದಿರಿ: ಎನ್‌ಇಟಿ ‘ಕನ್ನಡ’ ಪ್ರಶ್ನೆಪತ್ರಿಕೆಯಲ್ಲಿ ‘ಹಿಂದಿ’ ಹಾವಳಿ; ಅಭ್ಯರ್ಥಿಗಳ ಆಕ್ರೋಶ

ಕನ್ನಡ ಪ್ರಶ್ನೆ ಪತ್ರಿಕೆಯಲ್ಲಿ ಆಗಿರುವ ತಪ್ಪುಗಳನ್ನು ಪಟ್ಟಿ ಮಾಡಿರುವ ಅಭ್ಯರ್ಥಿಗಳು, “ಕೀ ಉತ್ತರಗಳನ್ನು ಪ್ರಕಟಿಸಬಾರದು. ಯಾವುದೇ ಕಾರಣಕ್ಕೂ ಗ್ರೇಸ್ ಅಂಕಗಳನ್ನು ಕೊಡಬಾರದು. ಐಚ್ಚಿಕ ಕನ್ನಡ ಪತ್ರಿಕೆಗೆ ಮರುಪರೀಕ್ಷೆಯನ್ನು ನಡೆಸಬೇಕು. ಆದಷ್ಟು ತುರ್ತಾಗಿ ಕೆ.ಇ.ಎ. ತನ್ನ ನಿಲುವನ್ನು ಪ್ರಕಟಿಸಬೇಕು. ಇಲ್ಲವಾದಲ್ಲಿ ಪ್ರಜಾಸತಾತ್ಮಕ ಸತ್ಯಾಗ್ರಹಕ್ಕೆ ನಾವೆಲ್ಲ ಸಿದ್ದರಿದ್ದೇವೆ” ಎಂದು ಎಚ್ಚರಿಸಿದ್ದಾರೆ.

ಸಹಾಯಕ ಪ್ರಾಧ್ಯಾಪಕ ಹುದ್ದೆಯ ಆಕಾಂಕ್ಷಿಗಳು ಪಟ್ಟಿ ಮಾಡಿರುವ ತಪ್ಪುಗಳಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನಿರ್ಲಕ್ಷ್ಯವು ಎದ್ದುಕಾಣುತ್ತದೆ. ಪ್ರಶ್ನೆ ಪತ್ರಿಕೆ ಕುರಿತು ಆಕಾಂಕ್ಷಿಗಳು ಎತ್ತಿರುವ ಆಕ್ಷೇಪಗಳು ಹೀಗಿವೆ…

kannada question paper

ಆಕ್ಷೇಪಗಳೇನು?

ಮುಖಪುಟದಲ್ಲಿ ಋಣಾತ್ಮಕ ಅಂಕಗಳ ಕುರಿತಾಗಿ ಸೂಚನೆಯಿಲ್ಲ

ಕನ್ನಡ ವಿಷಯಕ್ಕೆ ಪ್ರಾಧಿಕಾರವು 15 ಪುಟಗಳ ಪಠ್ಯಕ್ರಮವನ್ನು ನಿಗದಿಪಡಿಸಿತ್ತು. ಅದರಂತೆ ಪ್ರಶ್ನೆಪತ್ರಿಕೆಗಳ ಗುಣಮಟ್ಟವನ್ನು ಕಾಯ್ದುಕೊಂಡಿಲ್ಲ. ಕೆಲವು ಘಟಕಗಳಿಗೆ ಆದ್ಯತೆ ನೀಡಿ, ಕೆಲವನ್ನು ಸಂಪೂರ್ಣವಾಗಿ ಅಲಕ್ಷಿಸಲಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಯಾವ ಬಟ್ಟೆಗಳನ್ನು ಹಾಕಿಕೊಂಡು ಬರಬೇಕು, ಏನೇನು ತರಬಾರದು, ಏನು ಮಾಡಬೇಕು, ಏನು ಮಾಡಬಾರದು ಎಂಬುದರ ಬಗ್ಗೆ ಕಠಿಣ ಸೂಚನೆಗಳನ್ನು ಕೊಟ್ಟ ಪ್ರಾಧಿಕಾರ, ಪ್ರಶ್ನೆ ಪತ್ರಿಕೆಯ ಮುಖಪುಟದಲ್ಲಿ: ಮಾಡಿ ವಿಭಾಗದಲ್ಲಿ 5, ಮಾಡಬೇಡಿ ಎಂದು 2, ಅಭ್ಯರ್ಥಿಗೆ ಸೂಚನೆಗಳು ವಿಭಾಗದಲ್ಲಿ 9, ಹೀಗೆ 3 ವಿಭಾಗಗಳಲ್ಲಿ ಕೆಲವು ಅಂಶಗಳನ್ನು ಸೂಚನೆಯ ರೂಪದಲ್ಲಿ ಕೊಟ್ಟಿದ್ದಾರೆ. ಇಷ್ಟೊಂದು ಸೂಚನೆಗಳನ್ನು ಕೊಟ್ಟವರು ’ತಪ್ಪು ಉತ್ತರಕ್ಕೆ ಅಂಕಗಳನ್ನು ಕಳೆಯಲಾಗುತ್ತದೆ’ ಎಂಬ ಸೂಚನೆ ಏಕೆ ಕೆಇಎ ಕೊಟ್ಟಿಲ್ಲ? ಈ ಸೂಚನೆ ಮುದ್ರಿಸುವುದಕ್ಕೆ ಸ್ಥಳಸಿಗಲಿಲ್ಲವೆ?

ಪ್ರಶ್ನೆಪತ್ರಿಕೆಯ ಮುಖಪುಟದಲ್ಲಿ ಋಣಾತ್ಮಕ ಅಂಕಗಳ ಕುರಿತಾಗಿ ಯಾವ ಸೂಚನೆಯನ್ನೂ ನಮೂದಿಸಿಲ್ಲ. ಹಾಗಾಗಿ ಬಹುತೇಕರು 125 ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಪ್ರಶ್ನೆ ಪತ್ರಿಕೆಯ ಸೂಚನೆಯಲ್ಲಿ ನಮೂದಿಸಬೇಕಾದದ್ದು ಯಾರ ಜವಾಬ್ದಾರಿ? ಎಕ್ಸಾಂ ಸೆಂಟರ್ಗಳಲ್ಲಿಯೂ ಅಭ್ಯರ್ಥಿಗಳಿಗೆ ಯಾರೂ ಸರಿಯಾದ ಮಾಹಿತಿ ನೀಡಿಲ್ಲ. ಮತ್ತೊಂದು ದುರಂತವೆಂದರೆ ಕನ್ನಡ ಐಚ್ಚಿಕ ಪ್ರಶ್ನೆ ಪತ್ರಿಕೆಗೆ ಕನ್ನಡದಲ್ಲಿ ಮುದ್ರಿತವಾಗಿರುವ ಪ್ರಶ್ನೆಗಳ ಬಗ್ಗೆ ಏನಾದರೂ ಸಂದೇಹವಿದ್ದಲ್ಲಿ ಇಂಗ್ಲಿಷ್‌‌ ಆವೃತ್ತಿಯ ಪ್ರಶ್ನೆ ಪತ್ರಿಕೆಯನ್ನು ನೋಡಬಹುದು. ಏನಾದರೂ ವ್ಯತ್ಯಾಸ ಕಂಡುಬಂದಲ್ಲಿ ಇಂಗ್ಲೀಷ್ ಆವೃತ್ತಿಯನ್ನು ಅಂತಿಮ ಎಂದು ಪರಿಗಣಿಸಲಾಗುವುದು ಎಂದು ಸೂಚನೆ ಕೊಟ್ಟಿದ್ದಾರೆ. ಇವರ ಸೂಚನೆಯಂತೆ ನಮ್ಮ ಪತ್ರಿಕೆಗಳಲ್ಲಿ ಇಂಗ್ಲೀಷ್ ಆವೃತ್ತಿ ಮುದ್ರಣವಾಗಿರಲಿಲ್ಲ. ಬಹುಮುಖ್ಯ ಪ್ರಶ್ನೆ ಎಂದರೆ ಐಚ್ಚಿಕ ಕನ್ನಡಕ್ಕೆ ಇಂಗ್ಲಿಷ್‌ ಆವೃತ್ತಿಯ ಅವಶ್ಯಕತೆ ಇದೆಯಾ ಎಂಬುದು.

A4 ಸರಣಿಯ ಪತ್ರಿಕೆಯಲ್ಲಿರುವ ದೋಷಗಳ ಪಟ್ಟಿ

1. ಪ್ರಶ್ನೆಸಂಖ್ಯೆ 2ರಲ್ಲಿ ಎಚ್.ಎಲ್. ನಾಗೇಗೌಡರ ‘ಪದವವೆ ನಮ್ಮ ಎದೆಯಲ್ಲಿ’ ಕೃತಿಯ ಹೆಸರನ್ನು ’ಪದವಿವೆ ನನ್ನ ಎದೆಯಲ್ಲಿ’ ಎಂದು ಮಾಡಲಾಗಿದೆ.

2. ಪ್ರಶ್ನೆಸಂಖ್ಯೆ 9ರಲ್ಲಿ ಷ. ಶೆಟ್ಟರ್ ಅವರ “Memorial stones : a study of their origin, significance, and variety” ಎಂಬ ಸಂಪಾದಿತ ಕೃತಿಯ ಹೆಸರನ್ನು ‘Memorial stones in South India’ಎಂದು ಬದಲಾಯಿಸಿ, ಇದನ್ನೇ ಸರಿಯಾದ ಆಯ್ಕೆಯನ್ನಾಗಿ ಗುರುತಿಸಲು ಹೇಳಲಾಗಿದೆ! ‘South Indian ‘Memorial stones’ ಕೆ. ರಾಜನ್ ಅವರ ಕೃತಿ. ಇದನ್ನೆ ಉಲ್ಟಾಪಲ್ಟಾ ಮಾಡಿದಂತಿದೆ.

3. ಪ್ರಶ್ನೆಸಂಖ್ಯೆ 12ರಲ್ಲಿ ಯಾವುದು ಹೊಂದಾಣಿಕೆ ಆಗುತ್ತದೆ? ಒಂದನ್ನು ಮಾತ್ರ ಗುರುತಿಸಬೇಕು. ಆದರೆ ಕೊಟ್ಟಿರುವ ಎರಡು ಆಯ್ಕೆಗಳೂ ಸರಿಯಾಗಿವೆ. ಅವು ಜಿ.ಎಸ್. ಆಮೂರರ ’ಸೀಮೋಲ್ಲಂಘನ’, ಓ.ಎಲ್.ನಾಗಭೂಷಣ ಸ್ವಾಮಿ ಅವರ ’ಇಂದಿನ ಹೆಜ್ಜೆ’. ಇಂತಹ ಪ್ರಶ್ನೆಗಳಿಗೆ ’ಗ್ರೇಸ್’ ಅಂಕಗಳನ್ನು ಕೊಡುವುದಾದರೆ ಪರೀಕ್ಷೆ ಏಕೆ ಮಾಡಬೇಕು?

ಇದನ್ನೂ ಓದಿರಿ: ಕನ್ನಡ ಪ್ರಶ್ನೆ ಪತ್ರಿಕೆಯಲ್ಲಿ ಹಿಂದಿ ಪ್ರಶ್ನೆಗಳು: ‘ಕನ್ನಡ ಕಟುಕರ ಕೈಯ್ಯಲ್ಲಿ ಸಿಕ್ಕಿಕೊಂಡಿದೆ’ಎಂದು ಎಚ್‌ಡಿಕೆ ಆಕ್ರೋ

4. ಪ್ರಶ್ನೆಸಂಖ್ಯೆ 13ರಲ್ಲಿ ಯಾವ ಸೂಚನೆಯೇ ಕೊಡದೆ ಪ್ರಶ್ನೆಗೆ ಉತ್ತರವನ್ನು ಗುರುತಿಸುವಂತೆ ಮಾಡಲಾಗಿದೆ. ಇನ್ನೊಂದು ವಿಶೇಷವೆಂದರೆ ಈ ಪ್ರಶ್ನೆಯ ಉತ್ತರದ ರೋಮನ್ ಸಂಖ್ಯೆಯ ಸ್ವರೂಪ, ಉಳಿದ 3 ರೋಮನ್ ಸಂಖ್ಯೆಯ ಸ್ವರೂಪಗಳಿಂದ ಭಿನ್ನವಾಗಿದೆ. ಭಿನ್ನವಾಗಿರುವುದೇ ಉತ್ತರವಾಗಿದೆ. ಇದು ಪರೀಕ್ಷಾ ಆಕ್ರಮದ ಸೂಚನೆಯಾಗಿರುವುದರಲ್ಲಿ ಸಂಶಯವೇ ಇಲ್ಲ.

5. ಪ್ರಶ್ನೆಸಂಖ್ಯೆ 18ರ ಆಯ್ಕೆಗಳಲ್ಲಿ ಕೊಟ್ಟಿರುವ ಕೃತಿಯ ಹೆಸರಾದ ’ವಿಮರ್ಶೆಯ ನರಿಭಾಷೆ’ಯ ಕರ್ತೃ ಯಾರೆಂಬುದನ್ನು ಕಲಿಸದ ಕನ್ನಡ ಸಾಹಿತ್ಯ ಮೇಷ್ಟ್ರುಗಳು ವಿದ್ಯಾರ್ಥಿಗಳಿಗೆ ಮೋಸಮಾಡಿದ್ದಾರೆ! ’ನರಿಭಾಷೆ’ಯ ಶೀರ್ಷಿಕೆಯುಳ್ಳ ಪುಸ್ತಕವನ್ನು ಪರಿಚಯಿಸಿದ್ದಕ್ಕೆ ಪ್ರಾಧಿಕಾರಕ್ಕೆ ಧನ್ಯವಾದಗಳು. ಪ್ರಾಧಿಕಾರವು ಈ ’ನರಿಭಾಷೆ’ ಕೃತಿಯನ್ನು ಆದಷ್ಟು ಬೇಗ ಪ್ರಕಟಿಸಬೇಕು. ಇಂತಹ ಕೃತಿಯನ್ನು ಪ್ರಶ್ನೆಯಾಗಿಸಿದ ಗುಳ್ಳೆನರಿಗಳ ಗೂಳಿನೊಳಗೆ ನಮ್ಮಂತವರ ಆರ್ತನಾದ ಪ್ರಾಧಿಕಾರಕ್ಕೆ ಕೇಳುವುದೆ?

6. ಪ್ರಶ್ನೆಸಂಖ್ಯೆ 19ರಲ್ಲಿ ಕೆ.ವಿ. ತಿರುಮಲೇಶರ ವಿಮರ್ಶಾ ಕೃತಿ ’ಸಮ್ಮುಖ’ವನ್ನು ’ಸರ್ಮುಖ’ಗೊಳಿಸಿ, ಲೇಖಕರ ಮುಖಕ್ಕೆ ಹೊಡೆಯಲಾಗಿದೆ.

7. ಪ್ರಶ್ನೆಸಂಖ್ಯೆ 19ರಲ್ಲಿರುವ ’ಬುದ್ಧಡ್ಡಿ ಹಿಂಗಮಿರೆ’ ಇವರು ಯಾರು ಎಂಬುದು ತಿಳಿದಿಲ್ಲ. ನಮಗೆ ಬುದ್ಧಣ್ಣ ಹಿಂಗಮಿರೆ ಗೊತ್ತಿದೆ.

8. ಪ್ರಶ್ನೆಸಂಖ್ಯೆ 19ರಲ್ಲಿರುವ ’ರಸೀದು ಟಿಕೆಟ್ಟು’ ಅಲ್ಲ. ’ರಸೀದಿ ತಿಕೀಟು’

9. ಪ್ರಶ್ನೆಸಂಖ್ಯೆ 35ರಲ್ಲಿ ಹಲ್ಮಿಡಿ ಶಾಸನದಲ್ಲಿ ಕಂಡುಬರುವ ಸ್ಥಳನಾಮ ’ನರಿದಾವಿಳೆ ನಾಡು’ ಎಂಬುದು. ಪ್ರಶ್ನೆ ಪತ್ರಿಕೆಯಲ್ಲಿ ’ನಂದಾವಿಳೆ ನಾಡು’ ಎಂದು ಕೊಟ್ಟಿದ್ದಾರೆ. ಪ್ರಶ್ನೆ ಪತ್ರಿಕೆ ಮಾಡಿದವರು ಶಾಸನದೊಳಗಿರುವ ಹೊಸ ಸ್ಥಳನಾಮವನ್ನು ಶೋಧಿಸಿದ್ದಾರೆ. ಈ ಮಹಾನ್ ಸಂಶೋಧನೆಗೆ ಅಭಿನಂದನೆಗಳನ್ನು ಹೇಳಲೇಬೇಕು.

ಇದನ್ನೂ ಓದಿರಿ: ‘BIFFes’ ಎಂಬ ಅಂತಾರಾಷ್ಟ್ರೀಯ, Sorry ‘ಕನ್ನಡ ಅಂತಾರಾಷ್ಟ್ರೀಯ ಸಿನಿಮೋತ್ಸವ!’

10. ಪ್ರಶ್ನೆಸಂಖ್ಯೆ 45ರಲ್ಲಿ ವಚನಕಾರ ಅಲ್ಲಮ ಪ್ರಭು ಅವರ ಇಂದು ಸಾವ ಹೆಂಡತಿಗೆ ನಾಳೆ ಸಾವ ಗಂಡನವ್ವಾ ಎಂಬ ವಚನವನ್ನು ಇಂದು ಸಾವ ಹೆಂಡತಿಗೆ ನಾಳೆ ಸಾವ ಗಂಡ ನೋಡವ್ವಾ ಎಂದು ಕೊಡಲಾಗಿದೆ. ಬಿ.ವಿ. ಮಲ್ಲಾಪುರರ ಸಂಪಾದಕತ್ವದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಪ್ರಕಟಿಸಿದ ಅಲ್ಲಮ ಪ್ರಭುದೇವರ ವಚನ ಸಂಪುಟ-2ರಲ್ಲಿ ಮತ್ತು ಇದೇ ಪ್ರಾಧಿಕಾರವು ಎಂ.ಎಂ. ಕಲಬುರ್ಗಿಯವರು ಪ್ರಧಾನ ಸಂಪಾದಕತ್ವದಲ್ಲಿ ಸಿದ್ಧಪಡಿಸಿದ ಸಂಪುಟಗಳಲ್ಲಿಯೂ ’ಗಂಡನವ್ವಾ’ ಎಂದೇ ಇದೆ.

11. ಪ್ರಶ್ನೆಸಂಖ್ಯೆ 52ರ ಹೊಂದಾಣಿಕೆಯಲ್ಲಿ ನೀಡಲಾದ ವಚನಕಾರ್ತಿಯರು ಮತ್ತವರ ವಚನಗಳಲ್ಲಿ ಅಕ್ಕಮಹಾದೇವಿಯ ವಚನದ ಬದಲಿಗೆ ಅಕ್ಕಮ್ಮಳ ವಚನವನ್ನು ಕೊಡಲಾಗಿದೆ. ಅಕ್ಕಮಹಾದೇವಿಯ ಹೆಸರಿನೊಂದಿಗೆ ಬೇರೆಯಾವ ಆಯ್ಕೆಯೂ ಹೊಂದಾಣಿಕೆ ಆಗುವುದಿಲ್ಲ. ಇದಕ್ಕೆ ಪ್ರಾಧಿಕಾರ ಯಾವ ಉತ್ತರಕೊಡುತ್ತದೆಯೋ ಕಾಯಬೇಕು. ಆದರೆ ತಪ್ಪಾಗಿ ಕೊಟ್ಟಿರುವುದರ ಬಗ್ಗೆ ಆಕ್ಷೇಪಣೆ ಎತ್ತಲೇ ಬೇಕು. ಏಕೆಂದರೆ ಈ ಥರದ ಸಣ್ಣಪುಟ್ಟ ಗೊಂದಲಗಳು ಅಭ್ಯರ್ಥಿ ಪ್ರಶ್ನೆಯನ್ನು ಅಟೆಂಡ್ ಮಾಡದಂತೆ ತಡೆಯುತ್ತವೆ. ಮಾಡಿದರೆ ಅಂಕಗಳನ್ನು ಕಳೆದುಕೊಳ್ಳುವ ಆತಂಕ ಬೇರೆ!

12. ಪ್ರಶ್ನೆಸಂಖ್ಯೆ 53ರಲ್ಲಿ ’ಚಾಮುಂಡರಾಯ ಪುರಾಣ’ ಎಂದು ಬರೆಯಲಾಗಿದೆ. ಈ ಕೃತಿಯನ್ನು ನಮಗೆ ’ಚಾವುಂಡರಾಯ ಪುರಾಣ’ವೆಂದು ಓದಿಸಿದ್ದು ಮತ್ತು ನಾವು ಓದಿದ್ದು.

13. ಪ್ರಶ್ನೆಸಂಖ್ಯೆ 54 ಮತ್ತು 55ರಲ್ಲಿ ವಚನ ಮತ್ತು ಕೀರ್ತನೆಕಾರರ ಸಾಲುಗಳನ್ನು ತಮಗೆ ಬೇಕಾದಂತೆ ಬರೆದುಕೊಂಡಿದ್ದಾರೆ. ’ಲಿಂಗಾರ್ಪಿತ’, ಇದು ’ಲಿಂಗಾರ್ಪಿತವ’ ಆಗಬೇಕು. ’ಮನಸು’ ಇದು ’ಮನವ’ ಆಗಬೇಕು.

14. ಪ್ರಶ್ನೆಸಂಖ್ಯೆ 57 ’ನೆಪೋಲಿಯನ್ ಮತ್ತು ನಾಯಿ’ ಇದು ಇವರ ಕವನ ಎಂದು ಕೇಳಲಾಗಿದೆ. ಇದಕ್ಕೆ ಉತ್ತರದ ಆಯ್ಕೆ ಕುವೆಂಪು. ಈ ಕವಿತೆಯ ಶೀರ್ಷಿಕೆ ಪ್ರಶ್ನೆಪತ್ರಿಕೆಯಲ್ಲಿರುವಂತೆ ಇಲ್ಲ. ’ಕೋಗಿಲೆ ಮತ್ತು ಸೋವಿಯಟ್ ರಷ್ಯಾ’ ಕವನ ಸಂಕಲನದಲ್ಲಿ ’ವೀರನ ಕನಿಕರ (ನಾಯಿ-ನೆಪೋಲಿಯನ್)’ ಎಂದಿದೆ. ಪ್ರಶ್ನೆ ಮಾಡಿದವರು ಶೀರ್ಷಿಕೆಯನ್ನೇ ಬದಲಾಯಿಸಿದ್ದಾರೆ. ಇಂತಹ ’ಮತ್ತು’ಗಳನ್ನು ಪ್ರಶ್ನೆಯಲ್ಲಿ ಸೇರಿಸಿ, ಓದಿದವರನ್ನು ವಂಚಿಸುವ ಹುನ್ನಾರ ಪ್ರಶ್ನೆಪತ್ರಿಕೆಯನ್ನು ಸಿದ್ಧಪಡಿಸಿದವರಿಗೆ ಇದ್ದಂತಿದೆ.

15. ಪ್ರಶ್ನೆಸಂಖ್ಯೆ 63ರ ಹೊಂದಿಸಿ ಬರೆಯಿರಿಯಲ್ಲಿ ಕನ್ನಡ ಸಾಹಿತ್ಯಕ್ಕೆ ಹೊಸ ಕವಿಯೊಬ್ಬರನ್ನು ಪರಿಚಯಿಸಿದ್ದಾರೆ. ಆ ಕವಿಯ ಹೆಸರೇ ’ಕೆ.ಎಸ್. ನರಸಿಂಹವರ್ಮ’! ಇಲ್ಲಿಯವರೆಗೂ ಇಂಥ ಪ್ರಸಿದ್ಧ ಕವಿಯೊಬ್ಬರ ಹೆಸರನ್ನು ಅಲಕ್ಷಿಸಿದ ಶಾಲಾ, ಕಾಲೇಜು, ವಿಶ್ವವಿದ್ಯಾಲಯಗಳ ಪಠ್ಯಪುಸ್ತಕ ಕಮಿಟಿಗಳಿಗೆ, ವಿಮರ್ಶಕರಿಗೆ ಧಿಕ್ಕಾರಗಳು. ಇತಿಹಾಸದಲ್ಲಿ ’ಶರ್ಮ’ ’ವರ್ಮ’ ಆಗಿದ್ದನ್ನು ಓದಿದ್ದೆವು. ’ಸ್ವಾಮಿ’ ’ವರ್ಮ’ ಆಗಿ ಬದಲಾಗಿದ್ದನ್ನು ಕಂಡು ದಿಗಿಲುಗೊಂಡಿದ್ದೇವೆ! ಇದೇ ಪ್ರಶ್ನೆಯಲ್ಲಿ ಕೆ.ಎಸ್. ನಿಸಾರ್ ಅಹಮ್ಮದ್ ಅವರ ಹೆಸರನ್ನು ’ಕೆ.ಸ್.’ ಎಂದು ಬರೆಯಲಾಗಿದೆ. ಪ್ರಶ್ನೆಪತ್ರಿಕೆಯನ್ನು ಸರಿಯಾಗಿ ಬರೆದುಕೊಡದೇ ಇರುವವರಿಗೆ ಮೊದಲು ಪರೀಕ್ಷೆ ನಡೆಸಬೇಕಿದೆ.

ಇದನ್ನೂ ಓದಿರಿ: ‘ಹೆಬ್ಬೆಟ್ಟು ಗಿರಾಕಿಗಳು’ ಮತ್ತು ಕನ್ನಡದ ಪರಂಪರೆಯು

16. ಪ್ರಶ್ನೆಸಂಖ್ಯೆ 74ರ ಸರಿಯಾದ ಹೊಂದಾಣಿಕೆಯನ್ನು ಗುರುತಿಸಲು ಸೂಚಿಸಿದ್ದಾರೆ. ದುರಂತ ಅಂದರೆ ಸರಿ ಉತ್ತರದ ಆಯ್ಕೆಯಲ್ಲಿನ ಲೇಖಕರೆ ಹೆಸರೇ ತಪ್ಪಾಗಿದೆ. ನಮಗೆ ಲೇಖಕ ರಾಘವೇಂದ್ರ ಖಾಸನೀಸ ಗೊತ್ತಿತ್ತು. ’ನಾಘವೇಂದ್ರ ಖಾಸನೀಸ’ ಗೊತ್ತಿರಲಿಲ್ಲ.

17. ಪ್ರಶ್ನೆಸಂಖ್ಯೆ 80ನ್ನು ಹೇಗೆ ಗ್ರಹಿಸಿ, ಉತ್ತರಿಸಬೇಕು. ಯಾವ ಸೂಚನೆಯೂ ಇಲ್ಲ.

18. ಪ್ರಶ್ನೆಸಂಖ್ಯೆ 81ನ್ನು ಹೇಗೆ ಗ್ರಹಿಸಿ, ಉತ್ತರಿಸಬೇಕು. ಯಾವ ಸೂಚನೆಯೂ ಇಲ್ಲ.

19. ಪ್ರಶ್ನೆಸಂಖ್ಯೆಗಳಾದ 113, 119ಕ್ಕೆ ಹೇಗೆ ಗ್ರಹಿಸಿ, ಉತ್ತರಿಸಬೇಕು. ಯಾವ ಸೂಚನೆಯೂ ಇಲ್ಲ.

20. ಪ್ರಶ್ನೆಸಂಖ್ಯೆ 100ರಲ್ಲಿ ಆರ್.ಎಸ್.ಕಿಟಿಲ್ ಎಂದು ಕೊಡಲಾಗಿದೆ. ಇದು ಸರಿಯೆ? ಇದು ಪ್ರಸಿದ್ಧ ಸಂಶೋಧಕರ ಹೆಸರಿಗೆ ಮಾಡುವ ಅಪಚಾರವಲ್ಲವೆ?

21. ಪ್ರಶ್ನೆಸಂಖ್ಯೆ 102ರಲ್ಲಿ ಕೊಟ್ಟಿರುವ ಬಹುಆಯ್ಕೆ ಇಂಗ್ಲೀಷ್ ಸೂಚಕಗಳು ಸಿ ಮತ್ತು ಡಿ ಆಗಬೇಕಿತ್ತು. ಆದರೆ ಎರಡೂ ಸಿ,ಸಿ. ಆಗಿವೆ. ಉತ್ತರ ಸಿ.ಡಿ. ಗುರುತಿಸಬೇಕು. ಕೊಟ್ಟಿರುವ ಆಯ್ಕೆಗಳಲ್ಲಿಯೆ ಸಿ,ಸಿ ಇದ್ದು, ಸರಿಯಾದ ಉತ್ತರದಲ್ಲಿ ಸಿ ಮತ್ತು ಡಿ ಅಂತ ಕೊಟ್ಟರೆ ಹೇಗೆ?

22. ಪ್ರಶ್ನೆಸಂಖ್ಯೆ 106ರಲ್ಲಿ ನಾಗವರ್ಮನ ಛಂದೋಂಬುಧಿಯ ಛಂದಮನರಿಯದೆ ಕವಿತೆಯ ದುಂದುಗದೊಳ್ ತೊಳಲಿ ಸುಳಿವ ಕುಕವಿಯೆ ಕುರುಡಂ ಎಂಬ ವಾಕ್ಯವನ್ನು ಛಂದಮನರಿಯದೆ ಕವಿತೆಯ ದುಂದುಗದೊಳ್ ನುಡಿವ ಕುಕವಿಯೆ ಕುರುಡಂ ಎಂದು ಬದಲಾಯಿಸಲಾಗಿದೆ. ಇದು ತಮಗೆ ಬೇಕಾದಂತೆ ಬರೆದು ಪ್ರಶ್ನೆಪತ್ರಿಕೆ ಸಿದ್ಧಪಡಿಸಿದ ವಿದ್ವಾಂಸರ ಸಾಹಿತ್ಯಿಕ ಜ್ಞಾನ ಎಷ್ಟರ ಮಟ್ಟಿಗೆ ಇದೆ ಎಂಬುದನ್ನು ತೋರಿಸುತ್ತದೆ.

23. ಪ್ರಶ್ನೆಸಂಖ್ಯೆಗಳಾದ 106, 110, 111, 117 ಇವುಗಳು ಕಾಲಾನುಕ್ರಮಣಿಗೆ ಸಂಬಂಧಿಸಿವೆ. ಇದನ್ನು ಯಾವ ಕಾಲದಲ್ಲಿ ಜೋಡಿಸಬೇಕು? ರಚಿತವಾದ ಕಾಲವೋ, ಸಂಪಾದನೆಯಾದ ಕಾಲವೋ ಅಥವಾ ಕೊನೆಯಲ್ಲಿ ರಚಿತವಾದ ಕಾಲವೋ? ಹೇಗೆ?

24. ಪ್ರಶ್ನೆಸಂಖ್ಯೆ 121ರಲ್ಲಿ ಜೀ.ಶಂ.ಪರಮಶಿವಯ್ಯನವರ ಹೆಸರನ್ನು ’ಜೀ.ಕಂ.ಪರಮಶಿವಯ್ಯ’ ಎಂದು ಬರೆದಿದ್ದಾರೆ. ಈ ಜೀ.ಕಂ. ಪರಮಶಿವಯ್ಯನವರು ಬೇರೆ ಇರಬಹುದೇನೊ? ಕೊಟ್ಟ ಪಠ್ಯಕ್ರಮದಲ್ಲಿಯೂ ಇವರ ಹೆಸರಿರಲಿಲ್ಲ.

****

ನೊಂದ ಅಭ್ಯರ್ಥಿಗಳು

ಡಾ. ರವಿ.ಎಂ. ಸಿದ್ಲಿಪುರ ಶಿವಮೊಗ್ಗ, ಯಲ್ಲಪ್ಪ ಬೆಂಗಳೂರು, ವೀರಣ್ಣ ಮಡಿವಾಳ, ಅಶೋಕ್ ಕುಮಾರ್, ಪಕ್ರುದ್ದೀನ ನದಾಫ, ಶಿವಾನಂದ, ಉಮೇಶ್ ಎನ್. ಮಂಡ್ಯ, ಡಾ. ಸುಧಾಕುಮಾರಿ ಕೆ., ಜ್ಯೋತಿ ಚಿತ್ರದುರ್ಗ, ಪವಿತ್ರ ಎಂ.ಆರ್., ವಿಜಯಕುಮಾರಿ ಎಂ.ಆರ್., ಕೆ. ಕವಾಡಿ, ಚಿದಾನಂದ ಕುಡ್ಡನ್, ಭೀಮೇಶ ಕೊಪ್ಪಳ, ಧನಂಜಯ ಕುಮಾರ, ಗುಂಡೂರಾವ್, ರಾಜಶೇಖರ ಬಿ. ಶಿರಗುಂಪಿ, ರವಿಕುಮಾರ, ಉಸ್ಮಾನ ಪಾಷಾ ಖಾಜಿ, ಗೋಲಸಾರ್, ದವಳಮಲಿಕ್ ಮುಧೋಳ, ಶಾಂತಾ, ರಂಜಿತ ಕೆ. ಎಲ್., ಭವ್ಯಶ್ರೀ, ಸಮಿಉಲ್ಲಾ ಕೆ., ಗುರು ಎಚ್. ಸಿ., ಸಂಜು ಎಚ್. ಎಸ್., ಭರತೇಶ ಹೆಚ್. ಎಸ್., ಗಂಗಾಧರ್ ಬಾಣಸಂದ್ರ, ಯೋಗೇಶ ಮಂಡ್ಯ, ಮೈತ್ರಿ ಭಟ್ ಮಂಗಳೂರು, ಹರ್ಷಿತ ಕೆ. ಶಿವಮೊಗ್ಗ, ಆಶಾ ಎ. ಶಿವಮೊಗ್ಗ, ರಘು ಎಂ., ಸಿದ್ದರಾಮಯ್ಯ, ಕೆ. ರಮೇಶ, ಮಾರುತಿ ಜಿ. ಹಾಸನ, ಪ್ರಶಾಂತ ಎ. ಎಸ್, ಪುರುಷೋತ್ತಮ ಕೆ., ಮಹೇಶ ಕುಮಾರ್ ಎ., ಜಗದೀಶ್ ಡಿ. ಮಧುಗಿರಿ.


ಇದನ್ನೂ ಓದಿರಿ: ಎನ್‌ಇಟಿ ಕನ್ನಡ ಪ್ರಶ್ನೆಪತ್ರಿಕೆಯಲ್ಲಿ ಹಿಂದಿ ವಿವಾದ: ‘ಕೀ ಆನ್ಸರ್‌’ ನೋಡಿ ಪರೀಕ್ಷಾರ್ಥಿಗಳಿಗೆ ಆತಂಕ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...