Homeಮುಖಪುಟಸಂವಿಧಾನದ ನಿಜ ಆಶಯಗಳನ್ನು ಎತ್ತಿಹಿಡಿದ ಗರ್ಭಪಾತ ಹಕ್ಕಿನ ತೀರ್ಪು

ಸಂವಿಧಾನದ ನಿಜ ಆಶಯಗಳನ್ನು ಎತ್ತಿಹಿಡಿದ ಗರ್ಭಪಾತ ಹಕ್ಕಿನ ತೀರ್ಪು

- Advertisement -
- Advertisement -

ಇತ್ತೀಚೆಗೆ ಬಂದ ಸುಪ್ರೀಂಕೋರ್ಟಿನ ಗರ್ಭಪಾತದ ಬಗೆಗಿನ ತೀರ್ಪು ಬದಲಾಗುತ್ತಿರುವ ಸಮಯದ ಅಗತ್ಯ ಹಾಗೂ ಧೋರಣೆ ಹೇಗಿರಬೇಕು ಎಂಬುದನ್ನು ಎತ್ತಿ ತೋರಿಸುತ್ತದೆ.

ಭಾರತದಲ್ಲಿ ಕಾನೂನುಬದ್ಧವಾದ ಗರ್ಭಪಾತದ ಅವಕಾಶ 1971ರಿಂದಲೇ ಇತ್ತು. ಆದರೆ ಪಿತೃಪ್ರಧಾನ ವ್ಯವಸ್ಥೆಯ ಅಡಿಯಲ್ಲಿ ಹೆಣ್ಣು ಮಗುವಿನ ಹುಟ್ಟು ಎಂಬುದೇ ಒಂದು ಶಾಪದಂತೆ ನೋಡುವ ಜನರು ಲಕ್ಷಾಂತರ ಸಂಖ್ಯೆಯಲ್ಲಿ ಕಾನೂನುಬಾಹಿರವಾಗಿ ಹೆಣ್ಣು ಭ್ರೂಣಹತ್ಯೆ ಮಾಡುತ್ತ ಜನಸಂಖ್ಯಾ ಅನುಪಾತದಲ್ಲಿ ಏರುಪೇರುಗಳಾದುದರಿಂದ ಸಮಸ್ಯೆಗಳು ತಲೆದೋರಿದವು. ಅದನ್ನು ನಿಯಂತ್ರಿಸಲು ಅನೇಕ ನೀತಿ ನಿಯಮಗಳು ಜಾರಿಗೆ ಬಂದು ಗರ್ಭಪಾತ ಅನೇಕ ಅಂಕುಶಗಳಿಗೆ ಒಳಪಟ್ಟಿತ್ತು. ಭಾರತದಲ್ಲಷ್ಟೇ ಅಲ್ಲ ಪ್ರಪಂಚದಾದ್ಯಂತ ಗರ್ಭಧಾರಣೆಯ ಸುತ್ತು ನಿರಂತರ ಚರ್ಚೆಗಳನ್ನು ಕೇಳುತ್ತಲೇ ಇರುತ್ತೇವೆ. ಇತ್ತೀಚೆಗೆ ಅಮೆರಿಕದ ಸುಪ್ರೀಂಕೋರ್ಟ್ ಗರ್ಭಪಾತವನ್ನು ಕಾನೂನುಬಾಹಿರ ಎಂದು ತೀರ್ಪುನೀಡಿ ಅಲ್ಲಿನ ಸೂಕ್ಷ್ಮ ಮತ್ತು ಸಂವೇದನಾಶೀಲ ಜನರ ವಿಮರ್ಶೆಗೆ ಗುರಿಯಾಗಿದೆ. ದೇಶ ಯಾವುದಾದರೇನು, ಪ್ರಜಾತಂತ್ರ ವ್ಯವಸ್ಥೆ ಎಷ್ಟು ಪರಿಣಾಮಕಾರಿಯಾಗಿದ್ದರೇನು, ಅಲ್ಲಿ ಕೊನೆಗೆ ನಡೆಯುವುದು ಪುರುಷಪ್ರಧಾನ ಮನಸ್ಥಿತಿಗಳ ಆಡಳಿತವೇ ಎಂಬುದನ್ನು ಅದು ತೋರಿಸಿಕೊಟ್ಟಿತ್ತು.

ಅತ್ಯಂತ ಮುಂದುವರಿದ ದೇಶ ಎನ್ನುತ್ತಲೇ ಅಮೆರಿಕದ ಸುಪ್ರೀಂಕೋರ್ಟ್ ಅತ್ಯಂತ ಪುರೋಗಾಮಿ ನಡೆಗೆ ತೀರ್ಪಿತ್ತಾಗ, ಕೆಲವರಿಗೆ ಅದು ಆಶ್ಚರ್ಯವೆನಿಸಿತಾದರೂ, ಈ ಮನಸ್ಥಿತಿ ಅಲ್ಲಿನ ಬಲಪಂಥೀಯರಲ್ಲಿ ಎಂದಿನಿಂದಲೂ ಇದೆ ಎಂಬುದು ಸತ್ಯ. ಡೊನಾಲ್ಡ್ ಟ್ರಂಪ್ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿದಾಗಲೇ ಗರ್ಭಪಾತ ಕಾನೂನು ತೆಗೆದುಹಾಕುವ ಆಶ್ವಾಸನೆ ನೀಡಿದ್ದರು ಮತ್ತು ಅದಕ್ಕೆ ಪೂರಕವಾಗಿ ಸುಪ್ರೀಂಕೋರ್ಟಿಗೆ ಮೂರು ನ್ಯಾಯಮೂರ್ತಿಗಳನ್ನು ನೇಮಕ ಮಾಡಿದ್ದರು. ಇಂಥ ಹಿನ್ನೆಲೆಯಲ್ಲಿ ಭಾರತದ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಸಂವಿಧಾನದ ಆಶಯಗಳನ್ನು ನಿಜವಾದ ಅರ್ಥದಲ್ಲಿ ಎತ್ತಿಹಿಡಿದಿದೆ ಎನ್ನಬಹುದು.

ಜಸ್ಟಿಸ್ ಎನ್.ವೈ ಚಂದ್ರಚೂಡ್, ಜಸ್ಟಿಸ್ ಎ.ಎಸ್ ಬೋಪಣ್ಣ ಹಾಗೂ ಪರ್ಡಿವಾಲ ಅವರ ವಿಭಾಗೀಯ ಪೀಠ 1971ರ ಕಾಯ್ದೆಗೆ ಮಹತ್ವದ ಬದಲಾವಣೆಗಳನ್ನು ಮಾಡುತ್ತ ಸಂವಿಧಾನದ 14 ಮತ್ತು 21ನೇ ಪರಿಚ್ಛೇದದ ಅಡಿಯಲ್ಲಿ ಹೆಣ್ಣಿಗೆ ಅವಳ ದೇಹದ ಮೇಲೆ ಸಂಪೂರ್ಣವಾದ ಹಕ್ಕನ್ನು ನೀಡಿ ಅವಳ ಇಚ್ಛೆ ಮತ್ತು ವ್ಯಕ್ತಿತ್ವಕ್ಕೆ ಸಂಪೂರ್ಣ ಮನ್ನಣೆಯನ್ನು ನೀಡಿದ್ದಾರೆ.

ಪ್ರಮುಖ ಅಂಶಗಳು

1. ಅವಿವಾಹಿತ ಮಹಿಳೆಗೂ ಗರ್ಭಪಾತದ ಹಕ್ಕು ಇಲ್ಲಿಯವರೆಗೂ ಗರ್ಭಪಾತ ಎಂಬುದು ಕೇವಲ ವಿವಾಹಿತ ಸ್ತ್ರೀಯರಿಗೆ ಮಾತ್ರ ನೀಡಲಾಗಿದ್ದ ಹಕ್ಕಾಗಿತ್ತು. ಈ ತೀರ್ಪಿನಲ್ಲಿ ನ್ಯಾಯಮೂರ್ತಿಗಳು, “ವಿವಾಹಿತ ಮತ್ತು ಅವಿವಾಹಿತ ಎಂಬ ವ್ಯತ್ಯಾಸ ಕೃತಕವಾದದ್ದು ಮತ್ತು ಸಂವಿಧಾನ ವಿರೋಧಿಯಾದದ್ದು; ಹಾಗೆ ಮಾಡುವುದರಿಂದ ಅವರ ದೇಹದ ಸ್ವಾಯತ್ತತೆಯ ಮೇಲಷ್ಟೇ ಅಲ್ಲದೆ ಅವರ ಮುಂದಿನ ಬದುಕನ್ನೂ ಇದು ದುರ್ಬಲಗೊಳಿಸುತ್ತದೆ” ಎಂದು ಹೇಳಿದ್ದಾರೆ. ಎಲ್ಲಿಯೂ ಮಹಿಳೆಯ ಗಂಡ ಎಂಬ ಪದವನ್ನು ಬಳಸದೆ ಜೊತೆಗಾರ (Partner) ಎಂದು ಹೇಳುತ್ತಾರೆ. ಕಾನೂನು ಎಂಬುದು ನಿಂತ ನೀರಲ್ಲ ಅದು ನಿರಂತರವಾಗಿ ಬದಲಾಗುತ್ತಿರುವ ಕಾಲಕ್ಕೆ ಸ್ಪಂದಿಸುವಂತೆ ಇರಬೇಕು ಎನ್ನುತ್ತಾರೆ. ಗಂಡ ಮತ್ತು ಹೆಂಡತಿ ಎಂಬ ಸಂಬಂಧಗಳ ಜೊತೆಗೇ ಲಿವ್‌ಇನ್ ಜೋಡಿಗಳ ಹಕ್ಕನ್ನು ಎತ್ತಿಹಿಡಿದಿದ್ದಾರೆ.

2. ಅನೈಚ್ಛಿಕವಾದ ಅಥವಾ ಬೇರೆ ಕಾರಣಗಳಿಂದ ಬೇಡವಾದ ಗರ್ಭವನ್ನು ತೆಗೆಸುವ ಅವಧಿಯನ್ನು 24 ವಾರಕ್ಕೆ ಏರಿಸುವ ಮೂಲಕ ಜೊತೆಗಾರರಿಗೆ ಅಥವಾ ಮಹಿಳೆಗೆ ತೀರ್ಮಾನ ತೆಗೆದುಕೊಳ್ಳಲು ಹೆಚ್ಚಿನ ಸಮಯಾವಕಾಶವನ್ನು ನೀಡಲಾಗಿದೆ.

3. ಅತ್ಯಾಚಾರ ಎಂಬ ಪದವನ್ನು ವೈವಾಹಿಕ ಸಂಬಂಧಕ್ಕೂ ವಿಸ್ತರಿಸುವ ಮೂಲಕ ವೈವಾಹಿಕ ಅತ್ಯಾಚಾರದಿಂದ ಗರ್ಭಧರಿಸಿದ ಹೆಣ್ಣು ಮಕ್ಕಳೂ ಗರ್ಭಪಾತ ಮಾಡಿಸಲು ಅವಕಾಶ ನೀಡಲಾಗಿದೆ.

ವಿವಾಹ ಎಂಬುದನ್ನು ಅತ್ಯಾಚಾರದ ಪರಿಧಿಯಿಂದ ದೂರ ಇಟ್ಟಿರುವ ಸರ್ಕಾರಗಳು ಇಲ್ಲಿಯವರೆಗೂ ವೈವಾಹಿತ ಅತ್ಯಾಚಾರವನ್ನು ಅಪರಾಧ ಎಂದು ಪರಿಗಣಿಸಿಲ್ಲ; ಹಾಗೆ ಮಾಡುವುದರಿಂದ ಕುಟುಂಬ ವ್ಯವಸ್ಥೆಯೇ ಕುಸಿದುಬೀಳುತ್ತದೆ ಎಂಬ ವಾದ ಮುಂದಿಟ್ಟು, ಒಲ್ಲದ ಮದುವೆಯಲ್ಲಿ ಹೆಣ್ಣು ಬಲವಂತದಿಂದ ಎಲ್ಲವನ್ನೂ ಸಹಿಸಿಕೊಳ್ಳುವಂತೆ ಮಾಡಲಾಗಿದೆ. ಆದರೆ ಈ ಬದಲಾದ ಸಂದರ್ಭದಲ್ಲಿ ನ್ಯಾಯಮೂರ್ತಿಗಳು ಒಲ್ಲದ ಸಂಭೋಗದಿಂದ ಧರಿಸಿದ ಗರ್ಭವನ್ನು ತೆಗೆಸುವ ಹಕ್ಕು ಮಹಿಳೆಗೆ ಇದೆ ಹಾಗೂ ಅವಳ ದೇಹ ಅವಳ ಸ್ವಾಯತ್ತತೆ; ಅದನ್ನು ಪುರುಷ ಪ್ರಧಾನ ವ್ಯವಸ್ಥೆಯ ದೃಷ್ಟಿಕೋನದಿಂದ ನೋಡುವುದನ್ನು ನಿಲ್ಲಿಸಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿಸುಪ್ರೀಂಕೋರ್ಟ್: ಬದಲಾವಣೆಯ ಗಾಳಿ ಜಸ್ಟಿಸ್ ಯು.ಯು ಲಲಿತ್

4. ಸಂತಾನೋತ್ಪತ್ತಿಯ ಹಕ್ಕುಗಳು ಎಂಬುದನ್ನು ವಿವರಿಸುತ್ತ ನ್ಯಾಯಮೂರ್ತಿಗಳು, ಇದು ಕೇವಲ ಮಕ್ಕಳನ್ನು ಹೆರುವುದಕ್ಕಷ್ಟೇ ಅಲ್ಲದೆ, ಸಂತಾನ ನಿಯಂತ್ರಣ ಪ್ರಕ್ರಿಯೆಗಳು ಮತ್ತು ಸೌಲಭ್ಯಗಳ ಬಗೆಗೆ ಸರಿಯಾದ ಮಾಹಿತಿ ಮತ್ತು ಜ್ಞಾನ ಹೊಂದುವುದೂ ಆಗಿದೆ ಎಂದು ಹೇಳುತ್ತಾರೆ. ಯಾವಾಗ ಮಕ್ಕಳನ್ನು ಹೆರಬೇಕು, ಎಷ್ಟು ಮಕ್ಕಳನ್ನು ಹೆರಬೇಕು ಎಂಬ ಎಲ್ಲ ನಿರ್ಧಾರಗಳನ್ನು ತೆಗೆದುಕೊಳ್ಳಲೂ ಹೆಣ್ಣು ಸಂಪೂರ್ಣವಾಗಿ ಸ್ವತಂತ್ರಳು ಎಂದು ಹೇಳುವ ಮೂಲಕ ಹೆಣ್ಣಿನ ಹಕ್ಕನ್ನು ಗಂಡಿಗೆ ಸರಿಸಮನಾಗಿ ಗುರ್ತಿಸಿದ್ದಾರೆ.

ನ್ಯಾಯಮೂರ್ತಿಗಳು ನೀಡಿದ ತೀರ್ಪು ಅತ್ಯಂತ ಸಂವೇದನಾಶೀಲವಾಗಿರುವುದರೆ ಜೊತೆಗೇ ಸಮಾನತೆ ಎಂಬ ಹಕ್ಕಿನ ನಿಜವಾದ ವ್ಯಾಖ್ಯಾನವಾಗಿದೆ. ದೇಶದೆಲ್ಲೆಡೆ ಬಹುತೇಕ ಎಲ್ಲರೂ ಈ ತೀರ್ಪಿಗೆ ಸಮ್ಮತಿ ಸಹಮತವನ್ನೇ ಸೂಚಿಸಿದ್ದರೂ ಸಹಿತ ಕೆಲವರು ತಮ್ಮ ಆತಂಕಗಳನ್ನು ವ್ಯಕ್ತಪಡಿಸಿದ್ದಾರೆ. ಈ ಆತಂಕಗಳು ನಿರಾಧಾರವಾದದ್ದು ಅಲ್ಲವಾದರೂ ಅವಕ್ಕೆ ಕೋರ್ಟು ಗಮನದಲ್ಲಿಟ್ಟುಕೊಂಡೇ ತೀರ್ಪು ನೀಡಿದೆ.

ಆತಂಕಗಳು

1. ಭಾರತದಲ್ಲಿ ವೈವಾಹಿತ ಅತ್ಯಾಚಾರವನ್ನು ಅಪರಾಧ ಎಂದು ಪರಿಗಣಿಸಿಲ್ಲ. ಹಾಗಾದರೆ ಅಂತ ಸಂದರ್ಭದಲ್ಲಿ ಇದನ್ನು ಹೇಗೆ ಅರ್ಥೈಸುವುದು.

ಈಗಾಗಲೇ ಹೇಳಿದಂತೆ ನ್ಯಾಯಮೂರ್ತಿಗಳು ಹೆಣ್ಣಿನ ಸಮಾನತೆಯ ಹಕ್ಕು ಮತ್ತು ಅವಳಿಗೆ ತನ್ನ ದೇಹದ ಮೇಲಿನ ಸ್ವಾಯತ್ತತೆಯ ಹಕ್ಕನ್ನು ಎತ್ತಿ ಹಿಡಿದಾಗ ಇಲ್ಲಿ ಸಂವಿಧಾನ ನೀಡಿದ ಮೂಲಭೂತ ಹಕ್ಕುಗಳು ಮುಖ್ಯವಾಗುತ್ತವೆ ಹೊರತು ಇತರ ಕಾನೂನುಗಳಲ್ಲ. ಏಕೆಂದರೆ ನಿಸ್ಸಂಶಯವಾಗಿ ಸಂವಿಧಾನ ಎಲ್ಲಾ ಕಾನೂನಗಳಿಗೂ ಮೂಲ.

2. ಒಲ್ಲದ ಗರ್ಭಧಾರಣೆ ಎಂಬ ಕಾರಣಕ್ಕೆ ಹೆಣ್ಣು ಭ್ರೂಣಹತ್ಯೆ ಹೆಚ್ಚಾಗಬಹುದು. ಅದರಿಂದ ಸಮಾಜದ ಸಮತೋಲನ ಕೆಡಬಹುದು ಎಂಬುದು.

ಡೊನಾಲ್ಡ್ ಟ್ರಂಪ್

ತೀರ್ಪು ನೀಡುವ ಸಂದರ್ಭದಲ್ಲಿ ಇದನ್ನು ವಿವರಿಸುತ್ತ ಭ್ರೂಣಲಿಂಗ ಪತ್ತೆ ಹಚ್ಚುವ ಕಾಯ್ದೆಯನ್ನು ಹೇಗೆ ಬಲಪಡಿಸಬೇಕು ಎಂಬ ಬಗ್ಗೆಯೂ ಹೇಳಲಾಗಿದೆ. ಏಕೆಂದರೆ ಭ್ರೂಣದ ಲಿಂಗ ಪತ್ತೆ ಆಗದೆ ಹೆಣ್ಣು ಮಗು ಎಂಬ ಕಾರಣಕ್ಕೆ ಗರ್ಭಪಾತ ಮಾಡಿಸುವುದು ಅಸಾಧ್ಯ ಅದಕ್ಕೆಂದೇ ಬಲವಾದ ಕಾನೂನುಗಳನ್ನು ರಚಿಸುವ ಮೂಲಕ ಇಂತಹ ದುರುಪಯೋಗ ತಡೆಯುತ್ತೇವೆ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.

3. 24 ವಾರಗಳು ಎಂಬುದು ಸ್ವಲ್ಪ ಮುಂದುವರಿದ ಗರ್ಭವಾದ್ದರಿಂದ ಅಂಥ ಸಂದರ್ಭದಲ್ಲಿ ಗರ್ಭಪಾತ ಮಾಡಿಸಲು ಹೋಗಿ ಗರ್ಭಿಣಿಯರಿಗೆ ಅಪಾಯವಾಗುವ ಸಂಭವವಿದೆ.

24 ವಾರ ಎಂಬುದು 6ನೇ ತಿಂಗಳ ಗರ್ಭ; ಹಾಗಾಗಿ ಸುರ್ಪೀಂಕೋರ್ಟ್ ಎಲ್ಲಾ ಬಗೆಯ ಸುರಕ್ಷತಾ ಕ್ರಮಗಳನ್ನು ವಿವರಿಸುತ್ತಲೇ ಇದಕ್ಕೆ ಅನುಮತಿ ನೀಡಿದೆ. ಗರ್ಭದ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗಳು ಕೆಲವೊಮ್ಮೆ ಗರ್ಭಧಾರಣೆಯ ಪ್ರಾರಂಭಿಕ ತಿಂಗಳುಗಳಲ್ಲಿ ಪತ್ತೆಯಾಗುವುದಿಲ್ಲ ಅಥವಾ ಗರ್ಭಿಣಿ ಇರುವ ಸ್ಥಳದಲ್ಲಿ ಅಂತಹ ಪರೀಕ್ಷೆಗಳಿಗೆ ಅವಕಾಶ ಇರುವುದಿಲ್ಲ. ಆದ್ದರಿಂದ ಸ್ವಲ್ಪ ತಡವಾದರೂ ಸಹಿತ ಸುರಕ್ಷಿತವಾದ ಪ್ರಕ್ರಿಯೆಗಳ ಮೂಲಕ ಗರ್ಭಪಾತ ಮಾಡುವುದರಿಂದ ಒಂದು ಮಗು ವಿಕಲಚೇತನವಾಗಿ ಜೀವನಪರ್ಯಂತ ನರಳುವುದನ್ನು ತಡೆಯಬಹುದು.

ಇದನ್ನೂ ಓದಿಗರ್ಭಪಾತಕ್ಕೆ ವಿವಾಹಿತ ಮತ್ತು ಅವಿವಾಹಿತ ಮಹಿಳೆ ಎಂಬ ಬೇಧವಿರಬಾರದು: ಸುಪ್ರೀಂ

ಇಲ್ಲಿಯವರೆಗೂ ಚಾಲ್ತಿಯಲ್ಲಿದ್ದ ಕಾಯ್ದೆಯ ಪ್ರಕಾರ ಗರ್ಭಪಾತ ಕಾನೂನಿನಲ್ಲಿ ಹೇಳಲಾದ ಕಾರಣಗಳ ಪ್ರಕಾರವೇ ಗರ್ಭಪಾತ ಮಾಡಲಾಗುತ್ತಿದೆ ಎಂಬುದನ್ನು ಹೆಣ್ಣುಮಗಳೇ ಸಾಬೀತುಪಡಿಸಬೇಕಾಗಿತ್ತು. ಸ್ವಲ್ಪ ಹೆಚ್ಚುಕಮ್ಮಿ ಆದರೂ ಅದನ್ನು ಅಪರಾಧವೆಂದು ಪರಿಗಣಿಸುವ ಸಾಧ್ಯತೆಯಿತ್ತು. ಈ ಎಲ್ಲ ಹಿನ್ನೆಲೆಯಲ್ಲಿ ನೇರ ಮತ್ತು ಪರೋಕ್ಷವಾದ ಅನೇಕ ನಿಯಮಗಳು ತೊಡಕಾಗಿದ್ದವು. ಇಂಥ ತೊಡಕುಗಳಿಂದ ತಪ್ಪಿಸಿಕೊಳ್ಳಲು ಜನರು ಕಾನೂನುಬಾಹಿರವಾಗಿ ನಡೆಯುತ್ತಿರುವ ಸಾವಿರಾರು ಗರ್ಭಪಾತ ಕೇಂದ್ರಗಳಿಗೆ ಹೋಗಿ ಅಲ್ಲಿನ ಅಸುರಕ್ಷಿತ ವಾತಾವರಣದಲ್ಲಿ ಪ್ರಾಣ ಕಳೆದುಕೊಂಡ ಉದಾಹರಣೆಗಳೂ ಬೇಕಾದಷ್ಟಿವೆ.

ವಿಶ್ವ ಆರೋಗ್ಯ ಸಂಸ್ಥೆ ನಡೆಸಿದ ಸಮೀಕ್ಷೆಯ ಪ್ರಕಾರ ಯಾವ ದೇಶಗಳಲ್ಲಿ ಗರ್ಭಪಾತಕ್ಕೆ ಕಾನೂನಿನ ಸಹಮತ ಮತ್ತು ರಕ್ಷಣೆ ಇದೆಯೋ ಅಲ್ಲಿ ಗರ್ಭಪಾತದ ಸಮಯದಲ್ಲಿ ಅಸುರಕ್ಷಿತ ಕ್ರಮಗಳಿಂದ ಪ್ರಾಣ ಕಳೆದುಕೊಳ್ಳುವ ಹೆಣ್ಣುಮಕ್ಕಳ ಸಂಖ್ಯೆ ಕಡಿಮೆ ಇದೆ. ಈ ಸಮೀಕ್ಷೆ ಪ್ರಕಾರ ಕೆನಡಾದಲ್ಲಿ ಗರ್ಭಪಾತದ ಸಮಯದಲ್ಲಿ ಸಾವಿನ ಸಂಖ್ಯೆ ಶೂನ್ಯ. ಸುಪೀಂ ಕೋರ್ಟಿನ ಈ ಸುರಕ್ಷಿತ ಗರ್ಭಪಾತ ಕಾನೂನಿನ ಜೊತೆಗೆ ಭ್ರೂಣಲಿಂಗ ಪತ್ತೆ ಸಂಪೂರ್ಣವಾಗಿ ನಿಂತರೆ ಬಹುಶಃ ನಮ್ಮ ದೇಶದ ಹೆಣ್ಣುಮಕ್ಕಳ ಸುರಕ್ಷತೆ ಸಾಧಿಸಬಹುದು.

ರಾಜಲಕ್ಷ್ಮಿ ಅಂಕಲಗಿ

ರಾಜಲಕ್ಷ್ಮಿ ಅಂಕಲಗಿ
ಹೈಕೋರ್ಟ್ ವಕೀಲರು, ಹಲವು ಜನಪರ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದಾರೆ. ಕಾನೂನು ವಿಷಯಗಳ ಮೇಲೆ ಹಲವು ಲೇಖನಗಳನ್ನು ಪ್ರಕಟಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...