ಪ್ರಧಾನ್ ಮಂತ್ರಿ ಫಸಲ್ ಭೀಮಾ ಯೋಜನೆ (PMFBY) ಅಡಿಯಲ್ಲಿ ವಿಮಾ ಹಕ್ಕು ನಿರಾಕರಿಸಿದ್ದ ಸಾರ್ವಜನಿಕ ವಲಯದ ವಿಮಾ ಕಂಪನಿ ಮತ್ತು ಸರ್ಕಾರಿ ಸಹಕಾರಿ ಬ್ಯಾಂಕ್ ವಿರುದ್ಧ ಸುಮಾರು ಮೂರು ವರ್ಷಗಳ ಕಾನೂನು ಹೋರಾಟ ನಡೆಸಿ ಗೆಲುವು ಕಂಡಿದ್ದಾರೆ ರಾಜಸ್ಥಾನದ ರೈತರು.
ಹೌದು, ರಾಜಸ್ಥಾನದ ಜೋಧಪುರದ ರೈತರು ಕಳೆದ ಮೂರು ವರ್ಷಗಳಿಂದ ತಮಗೆ ದೊರೆಯಬೇಕಿದ್ದ ವಿಮಾ ಹಕ್ಕುಗಳಿಗಾಗಿ ಕಾನೂನು ಹೋರಾಟ ನಡೆಸಿದ್ದರು. ಅಂತಿಮವಾಗಿ 2016ರ ಬೆಳೆಗಳಿಗೆ ತಮ್ಮ ಪಾಲನ್ನು ಸ್ವೀಕರಿಸಿದ್ದಾರೆ.
ಜೋಧ್ಪುರದ ಸತ್ಲಾನಾ ಗ್ರಾಮ ಪಂಚಾಯತ್ನ ಸಾವಿರಾರು ರೈತರಿಗೆ ವಿಮೆ ಹಕ್ಕು ನಿರಾಕರಿಸಲಾಗಿತ್ತು. ಏಕೆಂದರೆ ಸಾರ್ವಜನಿಕ ವಲಯದ ವಿಮಾ ಕಂಪನಿಯಾದ ಅಗ್ರಿಕಲ್ಚರಲ್ ಇನ್ಶುರೆನ್ಸ್ ಕಂಪನಿ ಆಫ್ ಇಂಡಿಯಾ ಲಿಮಿಟೆಡ್ (ಎಐಸಿ) ರೈತರು ಪ್ರೀಮಿಯಂಗಳನ್ನು ಪಾವತಿಸಿದ ಒಂದು ವರ್ಷದ ನಂತರ, ರೈತರು ಸಾಫ್ಟ್ ಕಾಪಿಗಳಲ್ಲಿ ವಿಮಾ ವಿವರಗಳನ್ನು ಸಲ್ಲಿಸಿಲ್ಲ ಎಂಬ ಕಾರಣ ನೀಡಿ ಜೋಧಪುರ ಕೇಂದ್ರ ಸಹಕಾರ ಸಮಿತಿ ಬ್ಯಾಂಕ್ಗೆ ಪ್ರೀಮಿಯಂಗಳನ್ನು ಮರುಪಾವತಿಸಿದೆ. ಇತ್ತ ರೈತರ ಖಾತೆಗಳಲ್ಲಿ ಮರುಪಾವತಿಯನ್ನು ಜಮಾ ಮಾಡಲು ಬ್ಯಾಂಕ್ ಕೂಡ ಯಾವುದೇ ಪ್ರಯತ್ನ ಮಾಡಲಿಲ್ಲ.
ಈ ರೈತರು ತಮ್ಮ ಪಂಚಾಯಿತಿ ಅಧ್ಯಕ್ಷ ಭಾಲಾ ರಾಮ್ ಪಟೇಲ್ ಅವರ ಬೆಂಬಲದೊಂದಿಗೆ 2018 ರಲ್ಲಿ ರಾಜಸ್ಥಾನ ಹೈಕೋರ್ಟ್ನ ಜೋಧ್ಪುರ ನ್ಯಾಯಪೀಠದ ಮುಂದೆ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಿದ್ದರು.
ಇದನ್ನೂ ಓದಿ: ಕೃಷಿ ಮಸೂದೆಗಳು: ಪಂಜಾಬ್ ’ರಾಷ್ಟ್ರ ವಿರೋಧಿ’ ಎಂದವರ ವಿರುದ್ಧ ಅಮರಿಂದರ್ ಸಿಂಗ್ ವಾಗ್ದಾಳಿ
ಸೆಪ್ಟೆಂಬರ್ 16, 2020 ರ ಆದೇಶದಲ್ಲಿ, ನ್ಯಾಯಮೂರ್ತಿ ಸಂಗೀತ ಲೋಧಾ ಮತ್ತು ನ್ಯಾಯಮೂರ್ತಿ ರಾಮೇಶ್ವರ ವ್ಯಾಸ್ ಅವರು 2016 ರ ಬೆಳೆಗೆ ರೈತರಿಗೆ 2020 ರ ಆಗಸ್ಟ್ 20ರಂದು ಪಾವತಿ ಮಾಡಲಾಗಿದೆ ಎಂದು ದೃಢಪಡಿಸಿದರು.
ದಿ ವೈರ್ನೊಂದಿಗೆ ಮಾತನಾಡಿರುವ ಸರ್ಪಂಚ್, “ಇದು ಸತ್ಲಾನಾದ ಎಲ್ಲ ರೈತರಿಗೆ ದೊಡ್ಡ ಗೆಲುವು. ಪಿಎಂಎಫ್ಬಿವೈ ಅಡಿಯಲ್ಲಿ ವಿಮಾ ಹಕ್ಕುಗಳನ್ನು ಪಡೆಯುವುದು ಭಾರತದಾದ್ಯಂತದ ರೈತರಿಗೆ ಸವಾಲಾಗಿ ಪರಿಣಮಿಸಿದೆ. ವಿಮಾ ಕಂಪನಿಗಳು ಮತ್ತು ಬ್ಯಾಂಕುಗಳು ಯಾವಾಗಲೂ ತಪ್ಪಿಸಿಕೊಳ್ಳುವ ಮಾರ್ಗಗಳನ್ನು ಕಂಡುಕೊಳ್ಳುತ್ತವೆ. ಕಲ್ಪಿಸಿಕೊಳ್ಳಿ, ನಾವು ನಮ್ಮ ಹಕ್ಕುಗಳಿಗಾಗಿ ಎದ್ದು ನಿಲ್ಲದಿದ್ದಿದ್ದರೆ, ಕಂಪನಿಯು 81 ಲಕ್ಷ ರೂಪಾಯಿಗಳನ್ನು ಪಾವತಿಸಲು ಕಾಳಜಿ ವಹಿಸುತ್ತಿರಲಿಲ್ಲ” ಎಂದಿದ್ದಾರೆ.
ಸತ್ಲಾನಾ, ಕಾರ್ನಿಯಾಲಿ ಮತ್ತು ಭಚಾರ್ಣ ಸೇರಿದಂತೆ ಈ ಮೂರು ಪತ್ವಾರ್ ಮಂಡಳಿಗಳಲ್ಲಿ ಖಾರಿಫ್ 2016ಕ್ಕೆ 70% ರಷ್ಟು ಇಳುವರಿ ನಷ್ಟವನ್ನು ರಾಜ್ಯ ಕಂದಾಯ ಇಲಾಖೆಯು ನಿರ್ಣಯಿಸಿತ್ತು. ಆದರೆ ರೈತರಿಗೆ ವಿಮಾ ಹಕ್ಕುಗಳನ್ನು ನಿರಾಕರಿಸಲಾಗಿತ್ತು.
ಇನ್ನೂ ಸಟ್ಲಾನಾದಲ್ಲಿ 2017ರ ಖಾರಿಫ್ ಬೆಳೆಗಳಿಗೂ ಎಐಸಿ ವಿಮಾ ಹಕ್ಕುಗಳನ್ನು ನಿರಾಕರಿಸಿದ ಬಗ್ಗೆ ಪಿಐಎಲ್ ಕಳವಳ ವ್ಯಕ್ತಪಡಿಸಿತ್ತು. ಆ ವಿಷಯವನ್ನು ಮತ್ತೊಮ್ಮೆ ವಿಚಾರಣೆ ನಡೆಸುವುದಾಗಿ ನ್ಯಾಯಾಲಯ ತಿಳಿಸಿದೆ.