ಕೇಂದ್ರ ಸರ್ಕಾರ ಅಂಗೀಕರಿಸಿರುವ ಮೂರು ಕೃಷಿ ಕಾಯ್ದೆಗಳಿಗೆ ಮತ್ತು ವಿದ್ಯುತ್ ಮಸೂದೆ 2020ಕ್ಕೆ ರೈತರ ವಿರೋಧ ಮುಂದುವರೆದಿದೆ. ಈ ಕಾಯ್ದೆಗಳನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಿ ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ (ಎಐಕೆಎಸ್ಸಿಸಿ)ಯ ನೇತೃತ್ವದಲ್ಲಿ ನವೆಂಬರ್ 5 ರಂದು ದೇಶಾದ್ಯಂತ ರಸ್ತೆ ತಡೆ ಮತ್ತು ನವೆಂಬರ್ 26-27 ರಂದು ‘ದೆಹಲಿ ಚಲೋ’ಗೆ ಕರೆ ನೀಡಲಾಗಿದೆ.
ದೇಶದ 500 ಕ್ಕೂ ಹೆಚ್ಚು ರೈತ ಸಂಘಟನೆಗಳ ಒಕ್ಕೂಟವಾದ ಎಐಕೆಎಸ್ಸಿಸಿ ಅಕ್ಟೋಬರ್ 27 ರಂದು ನವದೆಹಲಿಯ ಗುರುದ್ವಾರ ರಾಕಬ್ಗಂಜ್ನಲ್ಲಿ ಸಭೆ ಸೇರಿ ಹೋರಾಟವನ್ನು ತೀವ್ರಗೊಳಿಸುವ ನಿರ್ಧಾರ ತೆಗೆದುಕೊಂಡಿದೆ.
ಹಲವು ರಾಜ್ಯದ ರೈತಸಂಘಟನೆಗಳು ಮತ್ತು ರೈತ ಮುಖಂಡರಾದ ಬಲ್ಬೀರ್ ಸಿಂಗ್ ರಾಜೇವಾಲ್ ಮತ್ತು ಗುರ್ನಮ್ ಸಿಂಗ್ ಚಾಂದೂನಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ 3 ಕೃಷಿ ಕಾಯ್ದೆಗಳು ಮತ್ತು ವಿದ್ಯುತ್ ಮಸೂದೆ 2020 ವಿರುದ್ಧದ ಹೋರಾಟವನ್ನು ಮುನ್ನಡೆಸಲು ರೈತ ಒಕ್ಕೂಟಗಳ ಸಮನ್ವಯ ಸಮಿತಿ ರಚಿಸಲಾಗಿದೆ. ಇದರಲ್ಲಿ ವಿ.ಎಂ.ಸಿಂಗ್, ಬಲ್ಬೀರ್ ಸಿಂಗ್ ರಾಜೇವಾಲ್, ಗುರ್ನಮ್ ಸಿಂಗ್, ರಾಜು ಶೆಟ್ಟಿ ಮತ್ತು ಯೋಗೇಂದ್ರ ಯಾದವ್ ಸೇರಿದ್ದು ಎರಡು ಹೋರಾಟಗಳನ್ನು ಸಂಘಟಿಸುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.
ನವೆಂಬರ್ 5 ರಂದು ದೇಶಾದ್ಯಂತ ಹಲವು ರೈತ ಸಂಘಟನೆಗಳು ಹೆದ್ದಾರಿಗಳನ್ನು ಬಂದ್ ಮಾಡಿ ಪ್ರತಿರೋಧ ತೋರುವುದಲ್ಲದೇ ಕೇಂದ್ರ ಸರ್ಕಾರದ ಸರ್ಕಾರಿ ಕಚೇರಿಗಳು, ಬಿಜೆಪಿ ಹಾಗೂ ಅದರ ಮಿತ್ರ ಪಕ್ಷಗಳ ಕಚೇರಿಗಳು ಮತ್ತು ಕಾರ್ಪೊರೇಟ್ ಕಚೇರಿಗಳ ಮುಂದೆ ಪ್ರತಿಭಟನೆ ನಡೆಸಲಿದ್ದಾರೆ.
ನವೆಂಬರ್ 26-27 ರಂದು ದೇಶಾದ್ಯಂತದ ರೈತರು ದೆಹಲಿಗೆ ಹೊರಟು ವ್ಯಾಪಕ ಪ್ರತಿರೋಧ ತೋರಲು ಮುಂದಾಗಿದ್ದಾರೆ. ಕಳೆದ ಎರಡು ವರ್ಷಗಳ ಹಿಂದೆಯು ಸಹ ದೊಡ್ಡ ಮಟ್ಟದಲ್ಲಿ ರೈತರು ದೆಹಲಿ ಚಲೋ ನಡೆಸಿ ಗಮನ ಸೆಳೆದಿದ್ದರು.
ಇದನ್ನೂ ಓದಿ: ಪ್ರಧಾನಿ ಮೋದಿ, ಅಂಬಾನಿ, ಅದಾನಿ ಪ್ರತಿಮೆ ಸುಟ್ಟು ಕೃಷಿ ಮಸೂದೆಗಳಿಗೆ ರೈತರ ವಿರೋಧ!