Homeಮುಖಪುಟಪಶ್ಚಿಮ ಬಂಗಾಳದ ಪಂಚಾಯತ್ ಚುನಾವಣೆಗಳಲ್ಲಿ ಆಳವಾಗಿ ಬೇರೂರಿರುವ ಹಿಂಸಾಚಾರಕ್ಕೆ ಕಾರಣಗಳೇನು?

ಪಶ್ಚಿಮ ಬಂಗಾಳದ ಪಂಚಾಯತ್ ಚುನಾವಣೆಗಳಲ್ಲಿ ಆಳವಾಗಿ ಬೇರೂರಿರುವ ಹಿಂಸಾಚಾರಕ್ಕೆ ಕಾರಣಗಳೇನು?

- Advertisement -
- Advertisement -

ಪಶ್ಚಿಮ ಬಂಗಾಳ ಪಂಚಾಯತ್ ಚುನಾವಣೆ ಘೋಷಣೆಯಾದಾಗಿನಿಂದ ನಡೆದ ಹಿಂಸಾಚಾರದಲ್ಲಿ 22 ಜನ ಮೃತಪಟ್ಟಿದ್ದಾರೆ. ಹಾಗಾಗಿ ಚುನಾವಣಾ ದಿನ ಸಂಭವಿಸಬಹುದಾದ ಹಿಂಸಾಚಾರ ತಡೆಗಟ್ಟುವ ಉದ್ದೇಶದಿಂದ ಮುಂಜಾಗ್ರತೆಯಾಗಿ 11,000ಕ್ಕೂ ಹೆಚ್ಚು ಜನರನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿತ್ತು. 8,000ಕ್ಕೂ ಹೆಚ್ಚು ಜಾಮೀನುರಹಿತ ವಾರಂಟ್‌ಗಳನ್ನು (NBWs) ಹೊರಡಿಸಲಾಗಿತ್ತು. 20,000ಕ್ಕೂ ಹೆಚ್ಚು ಪರವಾನಗಿ ಪಡೆದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿತ್ತು. 60,000ದಷ್ಟು ಸಿಬ್ಬಂದಿಯಿದ್ದ ಕೇಂದ್ರೀಯ ಅರೆಸೈನಿಕ ಪಡೆಗಳನ್ನು ನಿಯೋಜಿಸಲಾಗಿತ್ತು. ಹಾಗಿದ್ದರೂ ಪೂರ್ಣಪ್ರಮಾಣದಲ್ಲಿ ಹಿಂಸಾಚಾರ ನಿಗ್ರಹಿಸಲು ಸಾಧ್ಯವಾಗಲಿಲ್ಲ. ಚುನಾವಣಾ ಸಂಬಂಧಿತ ಹಿಂಸಾಚಾರದಲ್ಲಿ 20 ಜನ ಜೀವ ಕಳೆದುಕೊಂಡರು. 696 ಬೂತ್‌ಗಳಲ್ಲಿ ಮರುಮತದಾನಕ್ಕೆ ಆದೇಶಿಸಲಾಯಿತು.

ಪಶ್ಚಿಮ ಬಂಗಾಳವು 3,317 ಗ್ರಾಮ ಪಂಚಾಯತ್‌ಗಳನ್ನು ಮತ್ತು 63,283 ಪಂಚಾಯತ್ ಸ್ಥಾನಗಳನ್ನು ಹೊಂದಿದೆ. ಜೂನ್ 9ರಂದು ಪಂಚಾಯತ್ ಚುನಾವಣೆ ಘೋಷಿಸಲಾಯ್ತು. 1,60,000 ಅಭ್ಯರ್ಥಿಗಳು ಕಣದಲ್ಲಿದ್ದರು. ಆದರೆ ಇನ್ನು 60,000 ಅಭ್ಯರ್ಥಿಗಳು ಸಮಯದ ಕೊರತೆ, ಬೆದರಿಕೆಗಳಿಂದ ನಾಮಪತ್ರ ಸಲ್ಲಿಸಲು ಸಾಧ್ಯವಾಗಿಲ್ಲ. ಇದಕ್ಕೆ ಟಿಎಂಸಿ ಸರ್ಕಾರದ ದಬ್ಬಾಳಿಕೆಯ ಕಾರಣ ಎಂದು ಆರೋಪಿಸಲಾಗಿದೆ. ಇವೆಲ್ಲವೂ ಹಿಂಸೆಗೆ ಎಡೆಮಾಡಿಕೊಟ್ಟಿವೆ.

ಬಂಗಾಳದಲ್ಲಿ ಈ ರೀತಿಯ ಚುನಾವಣಾ ಹಿಂಸಾಚಾರಗಳು ಭುಗಿಲೆದ್ದಿರುವುದು ಇದೇ ಮೊದಲಲ್ಲ. 2003ರಲ್ಲಿ ಸಿಪಿಐ(ಎಂ) ಆಡಳಿತದಲ್ಲಿದ್ದಾಗಿನ ಪಂಚಾಯತ್ ಚುನಾವಣಾ ಪ್ರಕ್ರಿಯೆಯಲ್ಲಿ 76 ಜನರು ಹತ್ಯೆಯಾಗಿದ್ದರು. 2013ರಲ್ಲಿ ಮೃತಪಟ್ಟವರ ಸಂಖ್ಯೆ 39 ಆಗಿದ್ದರೆ, 2018ರಲ್ಲಿ 29 ಜನರು ಹತ್ಯೆಯಾಗಿದ್ದರು. ವಿಧಾನಸಭಾ ಚುನಾವಣೆ ಅಥವಾ ಲೋಕಸಭಾ ಚುನಾವಣೆಯಲ್ಲಿ ಈ ಮಟ್ಟದ ಹಿಂಸಾಚಾರ, ಸಾವುನೋವುಗಳು ಕಂಡುಬರುವುದಿಲ್ಲ. ಆದರೆ ಸ್ಥಳೀಯ ಪಂಚಾಯತ್ ಚುನಾವಣೆಗಳಲ್ಲಿ ಮಾತ್ರ ಹಿಂಸಾಚಾರವನ್ನು ಸಂಪೂರ್ಣವಾಗಿ ಅಥವಾ ಗರಿಷ್ಠ ಮಟ್ಟದಲ್ಲಿ ನಿಯಂತ್ರಿಸಲು ಸಾಧ್ಯವಾಗಿಲ್ಲ. ಇದಕ್ಕೆ ಕಾರಣಗಳನ್ನು ಹುಡುಕುತ್ತಾ ಹೊರಟರೆ ಹಲವಾರು ಸಂಕೀರ್ಣ ವಿಚಾರಗಳು ಒಂದಕ್ಕೊಂದು ಹೆಣೆದುಕೊಂಡಿರುವುದು ಕಂಡುಬರುತ್ತದೆ. ಅದನ್ನು ಶೋಧಿಸುವ ಪ್ರಯತ್ನ ಇಲ್ಲಿದೆ.

ಬಂಗಾಳದ ಗ್ರಾಮೀಣ ಜನರ ಹೋರಾಟದ ರಕ್ತಸಿಕ್ತ ಇತಿಹಾಸ

ಪಶ್ಚಿಮ ಬಂಗಾಳದ ಗ್ರಾಮೀಣ ಜನತೆಗೆ ಬಹುದೊಡ್ಡ ಹೋರಾಟದ ಇತಿಹಾಸವಿದೆ. 1902ರಲ್ಲಿ ಶ್ರೀ ಅರವಿಂದರು ಸ್ಥಾಪಿಸಿದ ಅನುಶೀಲನ ಸಮಿತಿ ಸಶಸ್ತ್ರ ಹೋರಾಟದ ಮೂಲಕ ಬ್ರಿಟಿಷರನ್ನು ಹೊರದೂಡಬೇಕೆಂಬ ಆಶಯ ಹೊಂದಿತ್ತು. 1937ರಲ್ಲಿ ಬ್ರಿಟಿಷ್ ರಾಜ್ ಪ್ರಾಂತೀಯ ಸರ್ಕಾರಕ್ಕೆ ಪ್ರಜಾಸತ್ತಾತ್ಮಕ ಮತದಾನವನ್ನು ಪರಿಚಯಿಸಿದ ನಂತರ ಗ್ರಾಮೀಣ ಭಾಗವನ್ನು ನಿಯಂತ್ರಿಸುತ್ತಿದ್ದ ಭೂಮಾಲೀಕರು ಮತ್ತು ಗೇಣಿದಾರರ ನಡುವೆ ಸಂಘರ್ಷ ಏರ್ಪಟ್ಟಿತು. ಕೃಷಕ್ ಸಮಾಜ್ ಪಾರ್ಟಿ ಬಡರೈತರ ಜೊತೆನಿಂತ ನಂತರ ರಾಜಕೀಯ ಮತ್ತಷ್ಟು ಬಿರುಸು ಪಡೆದುಕೊಂಡಿತು.

1946ರ ಸಂದರ್ಭದಲ್ಲಿ ಸಿಪಿಐ ಪಕ್ಷದ ರೈತ ವಿಭಾಗವಾದ ಆಲ್ ಇಂಡಿಯಾ ಕಿಸಾನ್ ಸಭಾ ’ತೇಭಾಗ’ ಹೋರಾಟವನ್ನು ಪ್ರಾರಂಭಿಸಿತ್ತು. ಅಂದರೆ ಭೂಮಾಲೀಕರ ಭೂಮಿಯಲ್ಲಿ ಕೃಷಿ ಮಾಡುತ್ತಿದ್ದ ಗೇಣಿದಾರರು ಬೆಳೆದ ಬೆಳೆಗಳಲ್ಲಿ ಭೂಮಾಲೀಕರಿಗೆ ಅರ್ಧ ನೀಡುವ ಬದಲು ಮೂರನೇ ಒಂದು ಭಾಗ ನೀಡುತ್ತೇವೆ ಎಂದು ಬೇಡಿಕೆಯಿಟ್ಟರು. ಭೂಮಾಲೀಕರು ಇದಕ್ಕೆ ಒಪ್ಪದಿದ್ದಾಗ ಮುಸ್ಲಿಂ ಲೀಗ್ ರೈತ ಗೇಣಿದಾರರ ಪರ ನಿಂತು ಕಾನೂನು ತಂದಿತು. ಭೂಮಾಲೀಕರು ಅದಕ್ಕೂ ಬಗ್ಗದೇ ಗೂಂಡಾ ಪ್ರವೃತ್ತಿ ಪ್ರದರ್ಶಿಸಿದಾಗ ಕಮ್ಯುನಿಸ್ಟ್ ಕಾರ್ಯಕರ್ತರು ಶಸ್ತ್ರಾಸ್ತ್ರ ಹೋರಾಟಕ್ಕೆ ಮುಂದಾಗಿ ಹಿಂಸಾಚಾರದ ಮೂಲಕ ತೇಭಾಗ ಹೋರಾಟವನ್ನು ಮುನ್ನಡೆಸಿ ಕಾಯ್ದೆ ಜಾರಿಗೊಳಿಸಿದರು.

ಇದನ್ನೂ ಓದಿ: ಪಶ್ಚಿಮ ಬಂಗಾಳ: ಬುಗಿಲೆದ್ದ ಪಂಚಾಯ್ತಿ ಚುನಾವಣಾ ಹಿಂಸಾಚಾರ; ಬಾಂಬ್‌ ಸ್ಫೋಟದಲ್ಲಿ ಮಕ್ಕಳಿಗೆ ಗಾಯ

ಸ್ವಾತಂತ್ರ್ಯಾನಂತರ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಭೂಮಾಲೀಕರು ಮತ್ತೆ ಬಲಿತಿದ್ದರು. ರೈತರ ಮೇಲಿನ ದೌರ್ಜನ್ಯಗಳು ಮಿತಿ ಮೀರುತ್ತಿದ್ದಾಗ ನಕ್ಸಲ್ಬರಿ ಹೋರಾಟ ಭುಗಿಲೆದ್ದಿತು. ಚಾರು ಮುಜುಂದಾರ್ ನೇತೃತ್ವದ ನಕ್ಸಲ್ ಚಳವಳಿಯ ಮಿಲಿಟೆಂಟ್ ಗುಂಪು ಹಲವು ಭೂಮಾಲೀಕರನ್ನು ಹತ್ಯೆಗೈದು ಬಡರೈತರಿಗೆ ಭೂಮಿ ಹಂಚಿತು. ಈ ಚಳವಳಿ ವೇಗವಾಗಿ ಬೆಳೆಯಿತು. ಆನಂತರ 1977ರಲ್ಲಿ ಪಶ್ಚಿಮ ಬಂಗಾಳದಲ್ಲಿ ಅಧಿಕಾರ ಹಿಡಿದ ಸಿಪಿಐ(ಎಂ) ಪಕ್ಷವು ಪರಿಣಾಮಕಾರಿಯಾಗಿ ಭೂಸುಧಾರಣೆ ಜಾರಿಗೆ ತಂದು ಉಳುವವರಿಗೆ ಭೂಮಿಯ ಮಾಲೀಕತ್ವ ನೀಡಿತು. ಇದೆಲ್ಲದರ ಪರಿಣಾಮ ಗ್ರಾಮೀಣ ರೈತಾಪಿ ಜನರು ಎಷ್ಟು ಪ್ರಬಲರಾಗಿದ್ದರೆಂದರೆ 2005ರ ನಂತರ ಕೈಗಾರಿಕೆಗಳಿಗಾಗಿ ಬಲವಂತವಾಗಿ ಭೂಮಿ ವಶಪಡಿಸಿಕೊಳ್ಳಲು ಮುಂದಾದ ಸಿಪಿಐ(ಎಂ) ಪಕ್ಷವನ್ನೇ ಧೂಳೀಪಟ ಮಾಡಿಬಿಟ್ಟರು. ಈ ಎಲ್ಲಾ ಐತಿಹಾಸಿಕ ಕಾರಣಗಳಿಂದಾಗಿ ಈ ಗ್ರಾಮೀಣ ಭಾಗದ ಜನರ ಹೊಡಿ-ಬಡಿ ಮಿಲಿಟೆಂಟ್ ಹೋರಾಟಗಳು ಪಂಚಾಯ್ತಿ ಚುನಾವಣೆಗಳಲ್ಲಿಯೂ ಮುಂದುವರಿದಿವೆ.

ಆರ್ಥಿಕತೆಯಲ್ಲಿ ಪಂಚಾಯ್ತಿಗಳಿಗೆ ಹೆಚ್ಚಿನ ಅಧಿಕಾರ

ಪಶ್ಚಿಮ ಬಂಗಾಳದ 70% ಭಾಗ ಗ್ರಾಮೀಣ ಪ್ರದೇಶವಾಗಿದೆ. ಅವುಗಳ ಆರ್ಥಿಕತೆ ಮೇಲೆ ಗ್ರಾಮ ಪಂಚಾಯ್ತಿಗಳು ಬಿಗಿ ಹಿಡಿತ ಹೊಂದಿವೆ. ಸಿಪಿಐ(ಎಂ) ಪಕ್ಷವು ಅಧಿಕಾರಕ್ಕೆ ಬರುತ್ತಲೇ 1978ರಲ್ಲಿ ಪಂಚಾಯತ್ ರಾಜ್ ಕಾಯ್ದೆಯನ್ನು ಬಲಪಡಿಸಿ ಗ್ರಾಮ ಪಂಚಾಯ್ತಿಗಳಿಗೆ ಹೆಚ್ಚಿನ ಅಧಿಕಾರ ಮತ್ತು ಅನುದಾನ ನೀಡಿತು. ಅಧಿಕಾರ ವಿಕೇಂದ್ರಿಕರಣದಲ್ಲಿ ದೇಶದಲ್ಲಿಯೇ ಕೇರಳ ಮೊದಲ ಸ್ಥಾನದಲ್ಲಿದ್ದರೆ, ಪಶ್ಚಿಮ ಬಂಗಾಳ ಎರಡನೇ ಸ್ಥಾನದಲ್ಲಿದೆ. ಗ್ರಾಮಪಂಚಾಯ್ತಿಗಳ ಮೂಲಕ ಹಲವಾರು ಯೋಜನೆಗಳು ಫಲಾನುಭವಿಗಳಿಗೆ ತಲುಪುವುದರಿಂದ, ಪಂಚಾಯ್ತಿ ಸದಸ್ಯರಾಗಲು, ಅಧಿಕಾರ ಹಿಡಿಯಲು ಪೈಪೋಟಿ ಹೆಚ್ಚಿತು. ಅಲ್ಲಿನ ಸಂಪನ್ಮೂಲಗಳ ಮೇಲಿನ ನಿಯಂತ್ರಣ ಮುಂದುವರೆದಂತೆ ಸಿಪಿಎಂನಂತಹ ಕೇಡರ್ ಆಧರಿತ ಪಕ್ಷಗಳು ಗ್ರಾಮ ಪಂಚಾಯ್ತಿಗಳ ಮೇಲೆ ಸಂಪೂರ್ಣ ಅಧಿಪತ್ಯ ಸಾಧಿಸಿದ್ದವು. ಕೆಲವೊಮ್ಮೆ ಚುನಾಯಿತ ಪ್ರತಿನಿಧಿಗಳಿಗಿಂತ ಪಕ್ಷದ ಸ್ಥಳೀಯ ಘಟಕಗಳು ಅಧಿಕಾರ ಚಲಾಯಿಸುತ್ತಿದ್ದವು.

ಆದರೆ 2011ರಲ್ಲಿ ಎಡಪಕ್ಷಗಳ ಕುಸಿತ ಮತ್ತು ಟಿಎಂಸಿಯ ಏಳಿಗೆ ಏಕಕಾಲದಲ್ಲಾಯಿತು. ಮಮತಾ ಬ್ಯಾನರ್ಜಿಯವರು ತಮ್ಮ ವರ್ಚಸ್ಸಿನಿಂದ ರಾಜ್ಯ ಅಧಿಕಾರದ ಚುಕ್ಕಾಣಿ ಹಿಡಿದರು. ಆದರೆ ಅವರಿಗೆ ಗ್ರಾಮೀಣ ಮಟ್ಟದಲ್ಲಿ ಸದೃಢ ಸಂಘಟನಾ ರಚನೆಗಳಾಗಲಿ, ಕಾರ್ಯಕರ್ತರ ಬೇಸ್ ಆಗಲಿ ಇರಲಿಲ್ಲ. ಅದಕ್ಕಾಗಿ ಪೈಪೋಟಿ ಮತ್ತು ರಕ್ತಪಾತ ಮುಂದುವರಿಯಿತು.

ಜಾತಿ ಧರ್ಮಕ್ಕಿಂತ ಪಕ್ಷಕ್ಕೆ ಹೆಚ್ಚಿನ ಆದ್ಯತೆ

ಪಶ್ಚಿಮ ಬಂಗಾಳದಲ್ಲಿ ಪಕ್ಷಗಳ ನಡುವಿನ ವೈರತ್ವ ಅನಾದಿಕಾಲದಿಂದಲೂ ಬೆಳೆದುಬಂದಿದೆ. 70ರ ದಶಕದ ನಂತರ ಸಿಪಿಎಂ ಮತ್ತು ಕಾಂಗ್ರೆಸ್ ನಡುವೆ ಹಗೆತನವಿದ್ದರೆ 2000ನೇ ಇಸವಿಯ ನಂತರ ಸಿಪಿಎಂ, ಕಾಂಗ್ರೆಸ್ ಮತ್ತು ಟಿಎಂಸಿ ನಡುವೆ ತ್ರಿಕೋನ ವೈರತ್ವ ಶುರುವಾಯಿತು. 2014ರ ನಂತರ ಬಿಜೆಪಿ ಸಹ ಬೇರುಬಿಟ್ಟಮೇಲೆ ನಾಲ್ಕು ಪಕ್ಷಗಳ ನಡುವೆ ಚತುಷ್ಕೋನ ವೈರತ್ವ, ಟೀಕೆ, ಜಿದ್ದಾಜಿದ್ದಿ ಜೋರಾಗಿದೆ. ಹಾಗಾಗಿ ಅಲ್ಲಿನ ಕಾರ್ಯಕರ್ತರು ಸಹ ಜಾತಿ, ಧರ್ಮಕ್ಕಿಂತ ಪಕ್ಷನಿಷ್ಠೆಗೆ ಹೆಚ್ಚಿನ ಬೆಲೆ ಕೊಡುತ್ತಾರೆ. ಬಹುತೇಕ ಎಲ್ಲರೂ ಸೈದ್ಧಾಂತಿಕ ಬದ್ಧತೆಯ ಹೆಸರಿನಲ್ಲಿ ಹಿಂಸಾಚಾರವನ್ನು ಸಮರ್ಥಿಸಿಕೊಂಡಿದ್ದಾರೆ. ಪಂಚಾಯ್ತಿ ಚುನಾವಣೆಗಳಲ್ಲಿ ಮತಗಳ ಸಂಖ್ಯೆ ಕಡಿಮೆ ಇರುವುದರಿಂದ ಮತದಾರರು ಒಲೈಕೆಗೆ ಮಣಿಯದಿದ್ದರೆ ಬೆದರಿಕೆ ಮೂಲಕ ಅಥವಾ ರಿಗ್ಗಿಂಗ್ ಮೂಲಕ ಅಧಿಕಾರಕ್ಕೇರಲು ಎಲ್ಲಾ ಪಕ್ಷಗಳು ಯತ್ನಿಸುತ್ತಿರುವುದು ಹಿಂಸಾಚಾರಕ್ಕೆ ಕಾರಣವಾಗುತ್ತಿವೆ.

ಇದನ್ನೂ ಓದಿ: ಪಶ್ಚಿಮ ಬಂಗಾಳ ಪಂಚಾಯತ್ ಚುನಾವಣೆ ವೇಳೆ ಹಿಂಸಾಚಾರ: 9 ಜನರ ಸಾವು

ಇನ್ನೊಂದೆಡೆ ಸರ್ಕಾರದ ಯೋಜನೆಗಳು, ಸೌಲಭ್ಯಗಳೂ ಕೂಡ ಪಕ್ಷದ ಆಧಾರದಲ್ಲಿಯೇ ಹಂಚಿಕೆಯಾಗುತ್ತವೆ. ನೇರ ಹಣ ವರ್ಗಾವಣೆ ಇದ್ದರೂ ಯಾರು ಫಲಾನುಭವಿಗಳಾಗಬೇಕೆಬುದನ್ನು ಗ್ರಾಮ ಪಂಚಾಯ್ತಿಗಳೇ ನಿರ್ಧಾರ ಮಾಡುತ್ತವೆ. ಹಾಗಾಗಿ ಆ ಯೋಜನೆಗಳನ್ನು ತಮ್ಮದೇ ಪಕ್ಷದ ಕಾರ್ಯಕರ್ತರು ಮತ್ತು ಸದಸ್ಯರಿಗೆ ನೀಡುವ ಮೂಲಕ ಅವರನ್ನು ಶಾಶ್ವತ ವೋಟ್ ಬ್ಯಾಂಕ್ ಆಗಿ ಮಾಡಿಕೊಳ್ಳುವ ಕೆಲಸಗಳು ನಡೆದಿವೆ. ಇದು ಉಳಿದ ಪಕ್ಷಗಳಲ್ಲಿ ಅಸಮಾಧಾನ ಉಂಟಾಗಿ ಅಧಿಕಾರ ಹಿಡಿಯಲು ಎಂತಹ ಹಿಂಸೆಗೂ ಮುಂದಾಗುವ ಪ್ರವೃತ್ತಿಗಳು ಕಂಡುಬಂದಿವೆ.

2018ರ ಹಿಂದಿನ ಪಂಚಾಯತ್ ಚುನಾವಣೆಯಲ್ಲಿ, ಶೇ.34 ರಷ್ಟು ಸ್ಥಾನಗಳಲ್ಲಿ ಟಿಎಂಸಿಯಿಂದ ಕಣಕ್ಕಿಳಿದ ಅಭ್ಯರ್ಥಿಗಳು ಅವಿರೋಧವಾಗಿ ಗೆದ್ದಿದ್ದರು. ಅಂದರೆ ಅವರ ವಿರುದ್ಧ ಉಳಿದ ಪಕ್ಷಗಳು ನಾಮಪತ್ರವನ್ನೇ ಸಲ್ಲಿಸಿರಲಿಲ್ಲ. ಟಿಎಂಸಿ ಕಾರ್ಯಕರ್ತರ ಬೆದರಿಕೆಯೇ ಅದಕ್ಕೆ ಕಾರಣ ಎಂದು ವಿರೋಧ ಪಕ್ಷಗಳು ಆರೋಪಿಸಿದ್ದವು.

ವಿಧಾನಸಭೆ, ಲೋಕಸಭಾ ಚುನಾವಣೆಗಳಿಗೆ ಬುನಾದಿ

ಗ್ರಾಮ ಪಂಚಾಯ್ತಿಗಳಲ್ಲಿ ಅಂದರೆ ಬೂತ್‌ಮಟ್ಟದಲ್ಲಿ ಹಿಡಿತ ಹೊಂದುವುದು ವಿಧಾನಸಭೆ, ಲೋಕಸಭಾ ಚುನಾವಣೆಗಳಿಗೆ ಬುನಾದಿ ಎಂಬುದನ್ನು ಅಲ್ಲಿನ ಪಕ್ಷಗಳು ಅರ್ಥ ಮಾಡಿಕೊಂಡಿವೆ. 5.6 ಕೋಟಿ ಮತದಾರರು ಗ್ರಾಮೀಣ ಭಾಗದಲ್ಲಿರುವುದರಿಂದ ಅವರನ್ನು ಓಲೈಸಿಕೊಳ್ಳಲು ಪಂಚಾಯ್ತಿ ಚುನಾವಣೆಗಳು ಎಲ್ಲಾ ಪಕ್ಷಗಳಿಗೂ ಮುಖ್ಯವಾಗಿಚೆ. ಅದಕ್ಕಾಗಿ ಯಾವ ದಾರಿಯಾದರೂ ಸೈ ಅನ್ನುತ್ತಾರೆ.

ಈ ಹಿಂಸಾಚಾರಗಳಿಂದ ಯಾರಿಗೆ ಲಾಭ?

ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದ ಪಕ್ಷಗಳಿಗೆ ಈ ಹಿಂಸಾಚಾರದಿಂದ ಲಾಭವಿದೆ, ಹಾಗಾಗಿ ಹಿಂಸೆಗೆ ಪ್ರಚೋದನೆ ನೀಡುತ್ತಾರೆ ಎಂದು ಮೇಲ್ನೋಟಕ್ಕೆ ಅನಿಸುತ್ತದೆ. ಕಾಂಗ್ರೆಸ್ ವಿರುದ್ಧ ಎಡಪಕ್ಷಗಳು, ವಿರೋಧ ಪಕ್ಷಗಳ ವಿರುದ್ಧ ಟಿಎಂಸಿ ಹಿಂಸೆಗೆ ಪ್ರಚೋದನೆ ನೀಡುತ್ತಿವೆ ಎನಿಸಬಹುದು. ಆದರೆ ಈ ಗ್ರಾಮೀಣ ಹಿಂಸಾಚಾರಗಳನ್ನು ನಿಯಂತ್ರಿಸುವ ಶಕ್ತಿ ಕೋಲ್ಕತ್ತದಲ್ಲಿ ಅಧಿಕಾರ ಹಿಡಿದವರಿಗೂ ಸಾಧ್ಯವಾಗುತ್ತಿಲ್ಲ ಎನ್ನುವ ಮಾತಿನಲ್ಲಿ ಅರ್ಥವಿದೆ. ಈಗಾಗಲೇ ಸಿಂಗೂರು ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಸಿಪಿಐ(ಎಂ) ಈ ಪಾಠ ಕಲಿತಿದೆ.

ಇನ್ನು ಈ ವರ್ಷದ ಹಿಂಸಾಚಾರದಿಂದ ಹತ್ಯೆಯಾದವರಲ್ಲಿ ಹೆಚ್ಚಿನ ಜನ ಆಳುವ ಟಿಎಂಸಿ ಪಕ್ಷಕ್ಕೆ ಸೇರಿದ್ದಾರೆ. 2003ರಲ್ಲಿಯೂ ಆಡಳಿತಾರೂಢ ಸಿಪಿಐ(ಎಂ) ಪಕ್ಷದ ಹೆಚ್ಚಿನ ಕಾರ್ಯಕರ್ತರು ಕೊಲೆಯಾಗಿದ್ದರು. ಇದಕ್ಕೆ ಮುಖ್ಯ ಕಾರಣ ಪಕ್ಷದ ಸ್ಥಳೀಯ ಘಟಕಗಳಲ್ಲಿನ ಬಣ ರಾಜಕೀಯವಾಗಿದೆ. ಟಿಕೆಟ್ ಸಿಗದವರು ಬಂಡಾಯವಾಗಿ ಸ್ಪರ್ಧಿಸಲು ಮುಂದಾಗುವುದು, ಪಕ್ಷದೊಳಗೆ ಬಣ ರಚಿಸುವುದು ಇಲ್ಲವೇ ಎದುರಾಳಿ ಪಕ್ಷ ಸೇರಲು ಮುಂದಾಗುವುದು, ಅದಕ್ಕೆ ಉಳಿದವರು ವಿರೋಧ ವ್ಯಕ್ತಪಡಿಸುವುದು ಇವೆಲ್ಲವೂ ಹಿಂಸಾಚಾರಕ್ಕೆ ಕಾರಣವಾಗುತ್ತಿವೆ. ಅಂದರೆ ಈ ವ್ಯವಸ್ಥೆಯ ಭಾಗವಾದವರು, ಅದರಿಂದ ಲಾಭ ಪಡೆದವರು ಅದು ಬದಲಾಗದಂತೆ ನೋಡಿಕೊಳ್ಳಲು ಮುಂದಾಗುತ್ತಾರೆ. ವಂಚಿತರಾದವರು ಅದನ್ನು ಪಡೆಯಲು ಶತಾಯಗತಾಯ ಯತ್ನಿಸುತ್ತಾರೆ. ಹಾಗಾಗಿ ಹಿಂಸಾಚಾರ ಉಲ್ಭಣವಾಗುತ್ತದೆ.

ಈ ಚುನಾವಣೆಯಲ್ಲಿಯೂ ಸಹ ಅದು ಪ್ರತಿಧ್ವನಿಸಿದೆ. ಚುನಾವಣೆಗೂ ಮೊದಲು ಟಿಎಂಸಿ ಹೈಕಮಾಂಡ್ ಸ್ಥಳೀಯ ಮಟ್ಟದಲ್ಲಿ ಟಿಕೆಟ್‌ಗಾಗಿನ ಗುಂಪುಗಾರಿಕೆ ನಿಯಂತ್ರಿಸಲು ಎಚ್ಚರಿಕೆ ನೀಡಿತ್ತು. ಸಂದರ್ಶನವೊಂದರಲ್ಲಿ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಟಿಕೆಟ್‌ವಂಚಿತ ಬಂಡಾಯ ಅಭ್ಯರ್ಥಿಗಳಿಗೆ, “ನಿಮ್ಮ ಪಂಚಾಯತ್‌ಗಳಿಗೆ ನಮ್ಮ ಸರ್ಕಾರ ಹಣ ನೀಡುತ್ತದೆ. ಹಾಗಾಗಿ ಅಧಿಕೃತ ಟಿಎಂಸಿ ಅಭ್ಯರ್ಥಿಗಳನ್ನು ಸೋಲಿಸುವ ಮೂಲಕ ಪಂಚಾಯತ್‌ಅನ್ನು ಗೆಲ್ಲುವುದರಿಂದ ನಿಮಗೆ ಅಂತಹ ಪ್ರಯೋಜನವಾಗುವುದಿಲ್ಲ” ಎಂದು ಬೆದರಿಕೆಯೊಡ್ಡಿದ್ದರು. ಆದರೂ ಟಿಎಂಸಿಯಲ್ಲಿ ಗುಂಪುಗಾರಿಕೆ ಮುಂದುವರಿಯಿತು. ಬಂಡಾಯ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಅಂದರೆ ಕೋಲ್ಕತ್ತಾದಲ್ಲಿ ಕುಳಿತು ಗ್ರಾಮೀಣ ಪ್ರದೇಶಗಳನ್ನು ನಿಭಾಯಿಸುವುದು ಅಷ್ಟು ಸುಲಭವಲ್ಲ ಎಂಬುದನ್ನು ಇದು ತೋರಿಸುತ್ತದೆ.

ಇನ್ನು 60,000ಕ್ಕೂ ಸಿಬ್ಬಂದಿಗಳು ಇದ್ದ ಹೆಚ್ಚು ಕೇಂದ್ರೀಯ ಪಡೆಗಳನ್ನು ನಿಯೋಜಿಸಿದ್ದರೂ ಸಹ ಹಿಂಸಾಚಾರ ತಡೆಗಟ್ಟಲು ಸಾಧ್ಯವಾಗಿಲ್ಲ. ಅಂದರೆ ರೂಢಿಗತವಾಗಿ ಬಂದಿರುವ ಮಿಲಿಟೆಂಟ್ ಹೋರಾಟದ ಮನೋಭಾವ, ಕೆಲವು ಕಡೆಯಲ್ಲಿ ರೈತರ ಪ್ರಾಬಲ್ಯ ಹಿಂಸಾಚಾರಕ್ಕೆ ಬಹುಪಾಲು ಕಾರಣವಾಗಿದೆ. ಒಟ್ಟಾರೆ ವಿರೋಧಾಭಾಸಗಳಿಂದ ಕೂಡಿರುವ ಈ ಪಂಚಾಯ್ತಿ ಚುನಾವಣೆಗಳಲ್ಲಿ ಜನರ ಭಾಗವಹಿಸುವಿಕೆ ಮಾತ್ರ ಅತ್ಯಧಿಕವಾಗಿರುತ್ತದೆ. ಈ ಬಾರಿ ಪಶ್ಚಿಮ ಬಂಗಾಳದಲ್ಲಿ 81% ಮತದಾನವಾಗಿರುವುದೇ ಅದಕ್ಕೆ ಸಾಕ್ಷಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತ್ರಿಪುರಾದಲ್ಲಿ ಕೋಮು ಹಿಂಸಾಚಾರ : ಮಸೀದಿ, ಮನೆಗಳಿಗೆ ಹಾನಿ ; ನಿಷೇಧಾಜ್ಞೆ ಜಾರಿ

ಸ್ಥಳೀಯ ದೇವಾಲಯೊಂದಕ್ಕೆ ಚಂದಾ ಸಂಗ್ರಹಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಕನಿಷ್ಠ ಐದರಿಂದ ಆರು ಜನರು ಗಾಯಗೊಂಡು ಮನೆಗಳು, ಮರದ ಅಂಗಡಿ ಮತ್ತು ಮಸೀದಿಗೆ ಹಾನಿಯಾದ ನಂತರ, ಜನವರಿ 10ರ...

ಭದ್ರತಾ ಕಾರಣ ನೀಡಿ ಸ್ಮಾರ್ಟ್‌ಫೋನ್ ತಯಾರಕರು ಮೂಲ ಕೋಡ್ ನೀಡುವಂತೆ ಒತ್ತಾಯಿಸಲು ಕೇಂದ್ರದ ಪ್ರಸ್ತಾಪ

ನವದೆಹಲಿ: ಸ್ಮಾರ್ಟ್‌ಫೋನ್ ತಯಾರಕರು ಸರ್ಕಾರದೊಂದಿಗೆ ಮೂಲ ಕೋಡ್ ಹಂಚಿಕೊಳ್ಳುವುದು ಮತ್ತು ಭದ್ರತಾ ಕ್ರಮಗಳ ಭಾಗವಾಗಿ ಹಲವಾರು ಸಾಫ್ಟ್‌ವೇರ್ ಬದಲಾವಣೆಗಳನ್ನು ಮಾಡುವುದು ಕಡ್ಡಾಯಗೊಳಿಸಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ, ಇದು ಆಪಲ್ ಮತ್ತು...

ದಾಳಿ ನಡೆಸಿದರೆ ನಮ್ಮ ನೇರ ಗುರಿಯಾಗುತ್ತೀರಿ : ಅಮೆರಿಕ, ಇಸ್ರೇಲ್‌ಗೆ ಎಚ್ಚರಿಕೆ ನೀಡಿದ ಇರಾನ್

ಇರಾನ್‌ನಲ್ಲಿ ನಡೆಯುತ್ತಿರುವ ಆಡಳಿತ ವಿರೋಧಿ ದಂಗೆಯಲ್ಲಿ ಸಾವುಗಳು ಹೆಚ್ಚಾದರೆ ಅಮೆರಿಕ ಮಧ್ಯಪ್ರವೇಶಿಸಲಿದೆ ಎಂದಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಇರಾನ್‌ ತಿರುಗೇಟು ನೀಡಿದೆ. ಇರಾನ್‌ನ ಸಂಸತ್ತಿನ ಅಧ್ಯಕ್ಷ ಮೊಹಮ್ಮದ್ ಬಾಗರ್ ಖಲೀಬಾಫ್ "ಅಮೆರಿಕ ಇರಾನ್ ಮೇಲೆ...

ಕೇಂದ್ರ ಸರ್ಕಾರದ ಎಚ್ಜರಿಕೆ ನಂತರ 3,500 ಪೋಸ್ಟ್‌ಗಳ ನಿರ್ಬಂಧ, 600 ಖಾತೆಗಳನ್ನು ಅಳಿಸಿದ ಎಕ್ಸ್ ಪ್ಲಾಟ್ ಫಾರ್ಮ್

ಮಹಿಳೆಯರನ್ನು ಗುರಿಯಾಗಿಸಿಕೊಂಡು AI- ರಚಿತವಾದ ಅಶ್ಲೀಲ ವಿಡಿಯೋಗಳ ವಿಷಯವನ್ನು ಕೇಂದ್ರವು ಗಮನಕ್ಕೆ ತಂದ ಕಠಿಣ ಕಾನೂನು ಜಾರಿಗೊಳಿಸುವಿಕೆಗೆ ಪ್ರತಿಜ್ಞೆ ಮಾಡಿದ ನಂತರ X 3,500 ಪೋಸ್ಟ್‌ಗಳು ಮತ್ತು 600 ಖಾತೆಗಳನ್ನು ಅಳಿಸಿಹಾಕಿದೆ.   ಅಶ್ಲೀಲ ವಿಷಯಗಳ...

ಮಾನವ ತಲೆಬುರುಡೆ, ಹುಲಿಚರ್ಮದಂತಹ ಕಸ್ಟಮೈಸ್ ಚರ್ಮ ಸೇರಿದಂತೆ ಹಲವು ಅನುಮಾನಾಸ್ಪದ ವಸ್ತುಗಳ ಮಾರಾಟ: ಮಾಂತ್ರಿಕನ ಬಂಧನ

ಬೆಂಗಳೂರು ವಲಯ ಘಟಕದ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಉತ್ತರ ಬೆಂಗಳೂರಿನ ಭೂಪ್ಸಂದ್ರದ 39 ವರ್ಷದ ವ್ಯಕ್ತಿಯನ್ನು ವನ್ಯಜೀವಿ (ರಕ್ಷಣಾ) ಕಾಯ್ದೆ, 1972 ರ ಅಡಿಯಲ್ಲಿ ಬಂಧಿಸಿದೆ. "ಜನವರಿ 9 ರಂದು ನಡೆದ ಕಾರ್ಯಾಚರಣೆಯಲ್ಲಿ...

ದಲಿತ ಮಹಿಳೆಯನ್ನು ಕೊಂದು ಮಗಳ ಅಪಹರಣ : ಆರೋಪಿಯ ಬಂಧನ

ಉತ್ತರ ಪ್ರದೇಶದ ಮೀರತ್‌ನಲ್ಲಿ ದಲಿತ ಮಹಿಳೆಯನ್ನು ಕೊಂದು, ಆಕೆಯ ಮಗಳನ್ನು ಅಪಹರಿಸಿದ ಆರೋಪಿಯನ್ನು ಪೊಲೀಸರು ಶನಿವಾರ (ಜ.10) ಬಂಧಿಸಿದ್ದಾರೆ. ಬಂಧಿತನನ್ನು 22 ವರ್ಷದ ಪರಾಸ್ ಸೋಮ್ (ಪರಾಸ್ ಠಾಕೂರ್) ಎಂದು ಗುರುತಿಸಲಾಗಿದೆ. ರಜಪೂತ ಸಮುದಾಯದ...

‘ಮುಂಬೈ ಮಹಾರಾಷ್ಟ್ರ ನಗರವಲ್ಲ’: ಅಣ್ಣಾಮಲೈ ಹೇಳಿಕೆಗೆ ಶಿವಸೇನೆಯಿಂದ ತೀವ್ರ ಆಕ್ರೋಶ

ಮುಂಬೈ: ಐಪಿಎಸ್ ಅಧಿಕಾರಿಯಿಂದ ರಾಜಕಾರಣಿಯಾಗಿ ಬದಲಾದ ಕೆ.ಅಣ್ಣಾಮಲೈ ಅವರು "ಬಾಂಬೆ ಮಹಾರಾಷ್ಟ್ರ ನಗರವಲ್ಲ, ಅಂತರರಾಷ್ಟ್ರೀಯ ನಗರ" ಎಂದು ಹೇಳಿದ್ದು, ಇದು ಮುಂಬೈನಲ್ಲಿ ವಿವಾದ ಸೃಷ್ಟಿಸಿದೆ.  ಇದಕ್ಕೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)...

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...