Homeಮುಖಪುಟಪಶ್ಚಿಮ ಬಂಗಾಳದ ಪಂಚಾಯತ್ ಚುನಾವಣೆಗಳಲ್ಲಿ ಆಳವಾಗಿ ಬೇರೂರಿರುವ ಹಿಂಸಾಚಾರಕ್ಕೆ ಕಾರಣಗಳೇನು?

ಪಶ್ಚಿಮ ಬಂಗಾಳದ ಪಂಚಾಯತ್ ಚುನಾವಣೆಗಳಲ್ಲಿ ಆಳವಾಗಿ ಬೇರೂರಿರುವ ಹಿಂಸಾಚಾರಕ್ಕೆ ಕಾರಣಗಳೇನು?

- Advertisement -
- Advertisement -

ಪಶ್ಚಿಮ ಬಂಗಾಳ ಪಂಚಾಯತ್ ಚುನಾವಣೆ ಘೋಷಣೆಯಾದಾಗಿನಿಂದ ನಡೆದ ಹಿಂಸಾಚಾರದಲ್ಲಿ 22 ಜನ ಮೃತಪಟ್ಟಿದ್ದಾರೆ. ಹಾಗಾಗಿ ಚುನಾವಣಾ ದಿನ ಸಂಭವಿಸಬಹುದಾದ ಹಿಂಸಾಚಾರ ತಡೆಗಟ್ಟುವ ಉದ್ದೇಶದಿಂದ ಮುಂಜಾಗ್ರತೆಯಾಗಿ 11,000ಕ್ಕೂ ಹೆಚ್ಚು ಜನರನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿತ್ತು. 8,000ಕ್ಕೂ ಹೆಚ್ಚು ಜಾಮೀನುರಹಿತ ವಾರಂಟ್‌ಗಳನ್ನು (NBWs) ಹೊರಡಿಸಲಾಗಿತ್ತು. 20,000ಕ್ಕೂ ಹೆಚ್ಚು ಪರವಾನಗಿ ಪಡೆದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿತ್ತು. 60,000ದಷ್ಟು ಸಿಬ್ಬಂದಿಯಿದ್ದ ಕೇಂದ್ರೀಯ ಅರೆಸೈನಿಕ ಪಡೆಗಳನ್ನು ನಿಯೋಜಿಸಲಾಗಿತ್ತು. ಹಾಗಿದ್ದರೂ ಪೂರ್ಣಪ್ರಮಾಣದಲ್ಲಿ ಹಿಂಸಾಚಾರ ನಿಗ್ರಹಿಸಲು ಸಾಧ್ಯವಾಗಲಿಲ್ಲ. ಚುನಾವಣಾ ಸಂಬಂಧಿತ ಹಿಂಸಾಚಾರದಲ್ಲಿ 20 ಜನ ಜೀವ ಕಳೆದುಕೊಂಡರು. 696 ಬೂತ್‌ಗಳಲ್ಲಿ ಮರುಮತದಾನಕ್ಕೆ ಆದೇಶಿಸಲಾಯಿತು.

ಪಶ್ಚಿಮ ಬಂಗಾಳವು 3,317 ಗ್ರಾಮ ಪಂಚಾಯತ್‌ಗಳನ್ನು ಮತ್ತು 63,283 ಪಂಚಾಯತ್ ಸ್ಥಾನಗಳನ್ನು ಹೊಂದಿದೆ. ಜೂನ್ 9ರಂದು ಪಂಚಾಯತ್ ಚುನಾವಣೆ ಘೋಷಿಸಲಾಯ್ತು. 1,60,000 ಅಭ್ಯರ್ಥಿಗಳು ಕಣದಲ್ಲಿದ್ದರು. ಆದರೆ ಇನ್ನು 60,000 ಅಭ್ಯರ್ಥಿಗಳು ಸಮಯದ ಕೊರತೆ, ಬೆದರಿಕೆಗಳಿಂದ ನಾಮಪತ್ರ ಸಲ್ಲಿಸಲು ಸಾಧ್ಯವಾಗಿಲ್ಲ. ಇದಕ್ಕೆ ಟಿಎಂಸಿ ಸರ್ಕಾರದ ದಬ್ಬಾಳಿಕೆಯ ಕಾರಣ ಎಂದು ಆರೋಪಿಸಲಾಗಿದೆ. ಇವೆಲ್ಲವೂ ಹಿಂಸೆಗೆ ಎಡೆಮಾಡಿಕೊಟ್ಟಿವೆ.

ಬಂಗಾಳದಲ್ಲಿ ಈ ರೀತಿಯ ಚುನಾವಣಾ ಹಿಂಸಾಚಾರಗಳು ಭುಗಿಲೆದ್ದಿರುವುದು ಇದೇ ಮೊದಲಲ್ಲ. 2003ರಲ್ಲಿ ಸಿಪಿಐ(ಎಂ) ಆಡಳಿತದಲ್ಲಿದ್ದಾಗಿನ ಪಂಚಾಯತ್ ಚುನಾವಣಾ ಪ್ರಕ್ರಿಯೆಯಲ್ಲಿ 76 ಜನರು ಹತ್ಯೆಯಾಗಿದ್ದರು. 2013ರಲ್ಲಿ ಮೃತಪಟ್ಟವರ ಸಂಖ್ಯೆ 39 ಆಗಿದ್ದರೆ, 2018ರಲ್ಲಿ 29 ಜನರು ಹತ್ಯೆಯಾಗಿದ್ದರು. ವಿಧಾನಸಭಾ ಚುನಾವಣೆ ಅಥವಾ ಲೋಕಸಭಾ ಚುನಾವಣೆಯಲ್ಲಿ ಈ ಮಟ್ಟದ ಹಿಂಸಾಚಾರ, ಸಾವುನೋವುಗಳು ಕಂಡುಬರುವುದಿಲ್ಲ. ಆದರೆ ಸ್ಥಳೀಯ ಪಂಚಾಯತ್ ಚುನಾವಣೆಗಳಲ್ಲಿ ಮಾತ್ರ ಹಿಂಸಾಚಾರವನ್ನು ಸಂಪೂರ್ಣವಾಗಿ ಅಥವಾ ಗರಿಷ್ಠ ಮಟ್ಟದಲ್ಲಿ ನಿಯಂತ್ರಿಸಲು ಸಾಧ್ಯವಾಗಿಲ್ಲ. ಇದಕ್ಕೆ ಕಾರಣಗಳನ್ನು ಹುಡುಕುತ್ತಾ ಹೊರಟರೆ ಹಲವಾರು ಸಂಕೀರ್ಣ ವಿಚಾರಗಳು ಒಂದಕ್ಕೊಂದು ಹೆಣೆದುಕೊಂಡಿರುವುದು ಕಂಡುಬರುತ್ತದೆ. ಅದನ್ನು ಶೋಧಿಸುವ ಪ್ರಯತ್ನ ಇಲ್ಲಿದೆ.

ಬಂಗಾಳದ ಗ್ರಾಮೀಣ ಜನರ ಹೋರಾಟದ ರಕ್ತಸಿಕ್ತ ಇತಿಹಾಸ

ಪಶ್ಚಿಮ ಬಂಗಾಳದ ಗ್ರಾಮೀಣ ಜನತೆಗೆ ಬಹುದೊಡ್ಡ ಹೋರಾಟದ ಇತಿಹಾಸವಿದೆ. 1902ರಲ್ಲಿ ಶ್ರೀ ಅರವಿಂದರು ಸ್ಥಾಪಿಸಿದ ಅನುಶೀಲನ ಸಮಿತಿ ಸಶಸ್ತ್ರ ಹೋರಾಟದ ಮೂಲಕ ಬ್ರಿಟಿಷರನ್ನು ಹೊರದೂಡಬೇಕೆಂಬ ಆಶಯ ಹೊಂದಿತ್ತು. 1937ರಲ್ಲಿ ಬ್ರಿಟಿಷ್ ರಾಜ್ ಪ್ರಾಂತೀಯ ಸರ್ಕಾರಕ್ಕೆ ಪ್ರಜಾಸತ್ತಾತ್ಮಕ ಮತದಾನವನ್ನು ಪರಿಚಯಿಸಿದ ನಂತರ ಗ್ರಾಮೀಣ ಭಾಗವನ್ನು ನಿಯಂತ್ರಿಸುತ್ತಿದ್ದ ಭೂಮಾಲೀಕರು ಮತ್ತು ಗೇಣಿದಾರರ ನಡುವೆ ಸಂಘರ್ಷ ಏರ್ಪಟ್ಟಿತು. ಕೃಷಕ್ ಸಮಾಜ್ ಪಾರ್ಟಿ ಬಡರೈತರ ಜೊತೆನಿಂತ ನಂತರ ರಾಜಕೀಯ ಮತ್ತಷ್ಟು ಬಿರುಸು ಪಡೆದುಕೊಂಡಿತು.

1946ರ ಸಂದರ್ಭದಲ್ಲಿ ಸಿಪಿಐ ಪಕ್ಷದ ರೈತ ವಿಭಾಗವಾದ ಆಲ್ ಇಂಡಿಯಾ ಕಿಸಾನ್ ಸಭಾ ’ತೇಭಾಗ’ ಹೋರಾಟವನ್ನು ಪ್ರಾರಂಭಿಸಿತ್ತು. ಅಂದರೆ ಭೂಮಾಲೀಕರ ಭೂಮಿಯಲ್ಲಿ ಕೃಷಿ ಮಾಡುತ್ತಿದ್ದ ಗೇಣಿದಾರರು ಬೆಳೆದ ಬೆಳೆಗಳಲ್ಲಿ ಭೂಮಾಲೀಕರಿಗೆ ಅರ್ಧ ನೀಡುವ ಬದಲು ಮೂರನೇ ಒಂದು ಭಾಗ ನೀಡುತ್ತೇವೆ ಎಂದು ಬೇಡಿಕೆಯಿಟ್ಟರು. ಭೂಮಾಲೀಕರು ಇದಕ್ಕೆ ಒಪ್ಪದಿದ್ದಾಗ ಮುಸ್ಲಿಂ ಲೀಗ್ ರೈತ ಗೇಣಿದಾರರ ಪರ ನಿಂತು ಕಾನೂನು ತಂದಿತು. ಭೂಮಾಲೀಕರು ಅದಕ್ಕೂ ಬಗ್ಗದೇ ಗೂಂಡಾ ಪ್ರವೃತ್ತಿ ಪ್ರದರ್ಶಿಸಿದಾಗ ಕಮ್ಯುನಿಸ್ಟ್ ಕಾರ್ಯಕರ್ತರು ಶಸ್ತ್ರಾಸ್ತ್ರ ಹೋರಾಟಕ್ಕೆ ಮುಂದಾಗಿ ಹಿಂಸಾಚಾರದ ಮೂಲಕ ತೇಭಾಗ ಹೋರಾಟವನ್ನು ಮುನ್ನಡೆಸಿ ಕಾಯ್ದೆ ಜಾರಿಗೊಳಿಸಿದರು.

ಇದನ್ನೂ ಓದಿ: ಪಶ್ಚಿಮ ಬಂಗಾಳ: ಬುಗಿಲೆದ್ದ ಪಂಚಾಯ್ತಿ ಚುನಾವಣಾ ಹಿಂಸಾಚಾರ; ಬಾಂಬ್‌ ಸ್ಫೋಟದಲ್ಲಿ ಮಕ್ಕಳಿಗೆ ಗಾಯ

ಸ್ವಾತಂತ್ರ್ಯಾನಂತರ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಭೂಮಾಲೀಕರು ಮತ್ತೆ ಬಲಿತಿದ್ದರು. ರೈತರ ಮೇಲಿನ ದೌರ್ಜನ್ಯಗಳು ಮಿತಿ ಮೀರುತ್ತಿದ್ದಾಗ ನಕ್ಸಲ್ಬರಿ ಹೋರಾಟ ಭುಗಿಲೆದ್ದಿತು. ಚಾರು ಮುಜುಂದಾರ್ ನೇತೃತ್ವದ ನಕ್ಸಲ್ ಚಳವಳಿಯ ಮಿಲಿಟೆಂಟ್ ಗುಂಪು ಹಲವು ಭೂಮಾಲೀಕರನ್ನು ಹತ್ಯೆಗೈದು ಬಡರೈತರಿಗೆ ಭೂಮಿ ಹಂಚಿತು. ಈ ಚಳವಳಿ ವೇಗವಾಗಿ ಬೆಳೆಯಿತು. ಆನಂತರ 1977ರಲ್ಲಿ ಪಶ್ಚಿಮ ಬಂಗಾಳದಲ್ಲಿ ಅಧಿಕಾರ ಹಿಡಿದ ಸಿಪಿಐ(ಎಂ) ಪಕ್ಷವು ಪರಿಣಾಮಕಾರಿಯಾಗಿ ಭೂಸುಧಾರಣೆ ಜಾರಿಗೆ ತಂದು ಉಳುವವರಿಗೆ ಭೂಮಿಯ ಮಾಲೀಕತ್ವ ನೀಡಿತು. ಇದೆಲ್ಲದರ ಪರಿಣಾಮ ಗ್ರಾಮೀಣ ರೈತಾಪಿ ಜನರು ಎಷ್ಟು ಪ್ರಬಲರಾಗಿದ್ದರೆಂದರೆ 2005ರ ನಂತರ ಕೈಗಾರಿಕೆಗಳಿಗಾಗಿ ಬಲವಂತವಾಗಿ ಭೂಮಿ ವಶಪಡಿಸಿಕೊಳ್ಳಲು ಮುಂದಾದ ಸಿಪಿಐ(ಎಂ) ಪಕ್ಷವನ್ನೇ ಧೂಳೀಪಟ ಮಾಡಿಬಿಟ್ಟರು. ಈ ಎಲ್ಲಾ ಐತಿಹಾಸಿಕ ಕಾರಣಗಳಿಂದಾಗಿ ಈ ಗ್ರಾಮೀಣ ಭಾಗದ ಜನರ ಹೊಡಿ-ಬಡಿ ಮಿಲಿಟೆಂಟ್ ಹೋರಾಟಗಳು ಪಂಚಾಯ್ತಿ ಚುನಾವಣೆಗಳಲ್ಲಿಯೂ ಮುಂದುವರಿದಿವೆ.

ಆರ್ಥಿಕತೆಯಲ್ಲಿ ಪಂಚಾಯ್ತಿಗಳಿಗೆ ಹೆಚ್ಚಿನ ಅಧಿಕಾರ

ಪಶ್ಚಿಮ ಬಂಗಾಳದ 70% ಭಾಗ ಗ್ರಾಮೀಣ ಪ್ರದೇಶವಾಗಿದೆ. ಅವುಗಳ ಆರ್ಥಿಕತೆ ಮೇಲೆ ಗ್ರಾಮ ಪಂಚಾಯ್ತಿಗಳು ಬಿಗಿ ಹಿಡಿತ ಹೊಂದಿವೆ. ಸಿಪಿಐ(ಎಂ) ಪಕ್ಷವು ಅಧಿಕಾರಕ್ಕೆ ಬರುತ್ತಲೇ 1978ರಲ್ಲಿ ಪಂಚಾಯತ್ ರಾಜ್ ಕಾಯ್ದೆಯನ್ನು ಬಲಪಡಿಸಿ ಗ್ರಾಮ ಪಂಚಾಯ್ತಿಗಳಿಗೆ ಹೆಚ್ಚಿನ ಅಧಿಕಾರ ಮತ್ತು ಅನುದಾನ ನೀಡಿತು. ಅಧಿಕಾರ ವಿಕೇಂದ್ರಿಕರಣದಲ್ಲಿ ದೇಶದಲ್ಲಿಯೇ ಕೇರಳ ಮೊದಲ ಸ್ಥಾನದಲ್ಲಿದ್ದರೆ, ಪಶ್ಚಿಮ ಬಂಗಾಳ ಎರಡನೇ ಸ್ಥಾನದಲ್ಲಿದೆ. ಗ್ರಾಮಪಂಚಾಯ್ತಿಗಳ ಮೂಲಕ ಹಲವಾರು ಯೋಜನೆಗಳು ಫಲಾನುಭವಿಗಳಿಗೆ ತಲುಪುವುದರಿಂದ, ಪಂಚಾಯ್ತಿ ಸದಸ್ಯರಾಗಲು, ಅಧಿಕಾರ ಹಿಡಿಯಲು ಪೈಪೋಟಿ ಹೆಚ್ಚಿತು. ಅಲ್ಲಿನ ಸಂಪನ್ಮೂಲಗಳ ಮೇಲಿನ ನಿಯಂತ್ರಣ ಮುಂದುವರೆದಂತೆ ಸಿಪಿಎಂನಂತಹ ಕೇಡರ್ ಆಧರಿತ ಪಕ್ಷಗಳು ಗ್ರಾಮ ಪಂಚಾಯ್ತಿಗಳ ಮೇಲೆ ಸಂಪೂರ್ಣ ಅಧಿಪತ್ಯ ಸಾಧಿಸಿದ್ದವು. ಕೆಲವೊಮ್ಮೆ ಚುನಾಯಿತ ಪ್ರತಿನಿಧಿಗಳಿಗಿಂತ ಪಕ್ಷದ ಸ್ಥಳೀಯ ಘಟಕಗಳು ಅಧಿಕಾರ ಚಲಾಯಿಸುತ್ತಿದ್ದವು.

ಆದರೆ 2011ರಲ್ಲಿ ಎಡಪಕ್ಷಗಳ ಕುಸಿತ ಮತ್ತು ಟಿಎಂಸಿಯ ಏಳಿಗೆ ಏಕಕಾಲದಲ್ಲಾಯಿತು. ಮಮತಾ ಬ್ಯಾನರ್ಜಿಯವರು ತಮ್ಮ ವರ್ಚಸ್ಸಿನಿಂದ ರಾಜ್ಯ ಅಧಿಕಾರದ ಚುಕ್ಕಾಣಿ ಹಿಡಿದರು. ಆದರೆ ಅವರಿಗೆ ಗ್ರಾಮೀಣ ಮಟ್ಟದಲ್ಲಿ ಸದೃಢ ಸಂಘಟನಾ ರಚನೆಗಳಾಗಲಿ, ಕಾರ್ಯಕರ್ತರ ಬೇಸ್ ಆಗಲಿ ಇರಲಿಲ್ಲ. ಅದಕ್ಕಾಗಿ ಪೈಪೋಟಿ ಮತ್ತು ರಕ್ತಪಾತ ಮುಂದುವರಿಯಿತು.

ಜಾತಿ ಧರ್ಮಕ್ಕಿಂತ ಪಕ್ಷಕ್ಕೆ ಹೆಚ್ಚಿನ ಆದ್ಯತೆ

ಪಶ್ಚಿಮ ಬಂಗಾಳದಲ್ಲಿ ಪಕ್ಷಗಳ ನಡುವಿನ ವೈರತ್ವ ಅನಾದಿಕಾಲದಿಂದಲೂ ಬೆಳೆದುಬಂದಿದೆ. 70ರ ದಶಕದ ನಂತರ ಸಿಪಿಎಂ ಮತ್ತು ಕಾಂಗ್ರೆಸ್ ನಡುವೆ ಹಗೆತನವಿದ್ದರೆ 2000ನೇ ಇಸವಿಯ ನಂತರ ಸಿಪಿಎಂ, ಕಾಂಗ್ರೆಸ್ ಮತ್ತು ಟಿಎಂಸಿ ನಡುವೆ ತ್ರಿಕೋನ ವೈರತ್ವ ಶುರುವಾಯಿತು. 2014ರ ನಂತರ ಬಿಜೆಪಿ ಸಹ ಬೇರುಬಿಟ್ಟಮೇಲೆ ನಾಲ್ಕು ಪಕ್ಷಗಳ ನಡುವೆ ಚತುಷ್ಕೋನ ವೈರತ್ವ, ಟೀಕೆ, ಜಿದ್ದಾಜಿದ್ದಿ ಜೋರಾಗಿದೆ. ಹಾಗಾಗಿ ಅಲ್ಲಿನ ಕಾರ್ಯಕರ್ತರು ಸಹ ಜಾತಿ, ಧರ್ಮಕ್ಕಿಂತ ಪಕ್ಷನಿಷ್ಠೆಗೆ ಹೆಚ್ಚಿನ ಬೆಲೆ ಕೊಡುತ್ತಾರೆ. ಬಹುತೇಕ ಎಲ್ಲರೂ ಸೈದ್ಧಾಂತಿಕ ಬದ್ಧತೆಯ ಹೆಸರಿನಲ್ಲಿ ಹಿಂಸಾಚಾರವನ್ನು ಸಮರ್ಥಿಸಿಕೊಂಡಿದ್ದಾರೆ. ಪಂಚಾಯ್ತಿ ಚುನಾವಣೆಗಳಲ್ಲಿ ಮತಗಳ ಸಂಖ್ಯೆ ಕಡಿಮೆ ಇರುವುದರಿಂದ ಮತದಾರರು ಒಲೈಕೆಗೆ ಮಣಿಯದಿದ್ದರೆ ಬೆದರಿಕೆ ಮೂಲಕ ಅಥವಾ ರಿಗ್ಗಿಂಗ್ ಮೂಲಕ ಅಧಿಕಾರಕ್ಕೇರಲು ಎಲ್ಲಾ ಪಕ್ಷಗಳು ಯತ್ನಿಸುತ್ತಿರುವುದು ಹಿಂಸಾಚಾರಕ್ಕೆ ಕಾರಣವಾಗುತ್ತಿವೆ.

ಇದನ್ನೂ ಓದಿ: ಪಶ್ಚಿಮ ಬಂಗಾಳ ಪಂಚಾಯತ್ ಚುನಾವಣೆ ವೇಳೆ ಹಿಂಸಾಚಾರ: 9 ಜನರ ಸಾವು

ಇನ್ನೊಂದೆಡೆ ಸರ್ಕಾರದ ಯೋಜನೆಗಳು, ಸೌಲಭ್ಯಗಳೂ ಕೂಡ ಪಕ್ಷದ ಆಧಾರದಲ್ಲಿಯೇ ಹಂಚಿಕೆಯಾಗುತ್ತವೆ. ನೇರ ಹಣ ವರ್ಗಾವಣೆ ಇದ್ದರೂ ಯಾರು ಫಲಾನುಭವಿಗಳಾಗಬೇಕೆಬುದನ್ನು ಗ್ರಾಮ ಪಂಚಾಯ್ತಿಗಳೇ ನಿರ್ಧಾರ ಮಾಡುತ್ತವೆ. ಹಾಗಾಗಿ ಆ ಯೋಜನೆಗಳನ್ನು ತಮ್ಮದೇ ಪಕ್ಷದ ಕಾರ್ಯಕರ್ತರು ಮತ್ತು ಸದಸ್ಯರಿಗೆ ನೀಡುವ ಮೂಲಕ ಅವರನ್ನು ಶಾಶ್ವತ ವೋಟ್ ಬ್ಯಾಂಕ್ ಆಗಿ ಮಾಡಿಕೊಳ್ಳುವ ಕೆಲಸಗಳು ನಡೆದಿವೆ. ಇದು ಉಳಿದ ಪಕ್ಷಗಳಲ್ಲಿ ಅಸಮಾಧಾನ ಉಂಟಾಗಿ ಅಧಿಕಾರ ಹಿಡಿಯಲು ಎಂತಹ ಹಿಂಸೆಗೂ ಮುಂದಾಗುವ ಪ್ರವೃತ್ತಿಗಳು ಕಂಡುಬಂದಿವೆ.

2018ರ ಹಿಂದಿನ ಪಂಚಾಯತ್ ಚುನಾವಣೆಯಲ್ಲಿ, ಶೇ.34 ರಷ್ಟು ಸ್ಥಾನಗಳಲ್ಲಿ ಟಿಎಂಸಿಯಿಂದ ಕಣಕ್ಕಿಳಿದ ಅಭ್ಯರ್ಥಿಗಳು ಅವಿರೋಧವಾಗಿ ಗೆದ್ದಿದ್ದರು. ಅಂದರೆ ಅವರ ವಿರುದ್ಧ ಉಳಿದ ಪಕ್ಷಗಳು ನಾಮಪತ್ರವನ್ನೇ ಸಲ್ಲಿಸಿರಲಿಲ್ಲ. ಟಿಎಂಸಿ ಕಾರ್ಯಕರ್ತರ ಬೆದರಿಕೆಯೇ ಅದಕ್ಕೆ ಕಾರಣ ಎಂದು ವಿರೋಧ ಪಕ್ಷಗಳು ಆರೋಪಿಸಿದ್ದವು.

ವಿಧಾನಸಭೆ, ಲೋಕಸಭಾ ಚುನಾವಣೆಗಳಿಗೆ ಬುನಾದಿ

ಗ್ರಾಮ ಪಂಚಾಯ್ತಿಗಳಲ್ಲಿ ಅಂದರೆ ಬೂತ್‌ಮಟ್ಟದಲ್ಲಿ ಹಿಡಿತ ಹೊಂದುವುದು ವಿಧಾನಸಭೆ, ಲೋಕಸಭಾ ಚುನಾವಣೆಗಳಿಗೆ ಬುನಾದಿ ಎಂಬುದನ್ನು ಅಲ್ಲಿನ ಪಕ್ಷಗಳು ಅರ್ಥ ಮಾಡಿಕೊಂಡಿವೆ. 5.6 ಕೋಟಿ ಮತದಾರರು ಗ್ರಾಮೀಣ ಭಾಗದಲ್ಲಿರುವುದರಿಂದ ಅವರನ್ನು ಓಲೈಸಿಕೊಳ್ಳಲು ಪಂಚಾಯ್ತಿ ಚುನಾವಣೆಗಳು ಎಲ್ಲಾ ಪಕ್ಷಗಳಿಗೂ ಮುಖ್ಯವಾಗಿಚೆ. ಅದಕ್ಕಾಗಿ ಯಾವ ದಾರಿಯಾದರೂ ಸೈ ಅನ್ನುತ್ತಾರೆ.

ಈ ಹಿಂಸಾಚಾರಗಳಿಂದ ಯಾರಿಗೆ ಲಾಭ?

ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದ ಪಕ್ಷಗಳಿಗೆ ಈ ಹಿಂಸಾಚಾರದಿಂದ ಲಾಭವಿದೆ, ಹಾಗಾಗಿ ಹಿಂಸೆಗೆ ಪ್ರಚೋದನೆ ನೀಡುತ್ತಾರೆ ಎಂದು ಮೇಲ್ನೋಟಕ್ಕೆ ಅನಿಸುತ್ತದೆ. ಕಾಂಗ್ರೆಸ್ ವಿರುದ್ಧ ಎಡಪಕ್ಷಗಳು, ವಿರೋಧ ಪಕ್ಷಗಳ ವಿರುದ್ಧ ಟಿಎಂಸಿ ಹಿಂಸೆಗೆ ಪ್ರಚೋದನೆ ನೀಡುತ್ತಿವೆ ಎನಿಸಬಹುದು. ಆದರೆ ಈ ಗ್ರಾಮೀಣ ಹಿಂಸಾಚಾರಗಳನ್ನು ನಿಯಂತ್ರಿಸುವ ಶಕ್ತಿ ಕೋಲ್ಕತ್ತದಲ್ಲಿ ಅಧಿಕಾರ ಹಿಡಿದವರಿಗೂ ಸಾಧ್ಯವಾಗುತ್ತಿಲ್ಲ ಎನ್ನುವ ಮಾತಿನಲ್ಲಿ ಅರ್ಥವಿದೆ. ಈಗಾಗಲೇ ಸಿಂಗೂರು ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಸಿಪಿಐ(ಎಂ) ಈ ಪಾಠ ಕಲಿತಿದೆ.

ಇನ್ನು ಈ ವರ್ಷದ ಹಿಂಸಾಚಾರದಿಂದ ಹತ್ಯೆಯಾದವರಲ್ಲಿ ಹೆಚ್ಚಿನ ಜನ ಆಳುವ ಟಿಎಂಸಿ ಪಕ್ಷಕ್ಕೆ ಸೇರಿದ್ದಾರೆ. 2003ರಲ್ಲಿಯೂ ಆಡಳಿತಾರೂಢ ಸಿಪಿಐ(ಎಂ) ಪಕ್ಷದ ಹೆಚ್ಚಿನ ಕಾರ್ಯಕರ್ತರು ಕೊಲೆಯಾಗಿದ್ದರು. ಇದಕ್ಕೆ ಮುಖ್ಯ ಕಾರಣ ಪಕ್ಷದ ಸ್ಥಳೀಯ ಘಟಕಗಳಲ್ಲಿನ ಬಣ ರಾಜಕೀಯವಾಗಿದೆ. ಟಿಕೆಟ್ ಸಿಗದವರು ಬಂಡಾಯವಾಗಿ ಸ್ಪರ್ಧಿಸಲು ಮುಂದಾಗುವುದು, ಪಕ್ಷದೊಳಗೆ ಬಣ ರಚಿಸುವುದು ಇಲ್ಲವೇ ಎದುರಾಳಿ ಪಕ್ಷ ಸೇರಲು ಮುಂದಾಗುವುದು, ಅದಕ್ಕೆ ಉಳಿದವರು ವಿರೋಧ ವ್ಯಕ್ತಪಡಿಸುವುದು ಇವೆಲ್ಲವೂ ಹಿಂಸಾಚಾರಕ್ಕೆ ಕಾರಣವಾಗುತ್ತಿವೆ. ಅಂದರೆ ಈ ವ್ಯವಸ್ಥೆಯ ಭಾಗವಾದವರು, ಅದರಿಂದ ಲಾಭ ಪಡೆದವರು ಅದು ಬದಲಾಗದಂತೆ ನೋಡಿಕೊಳ್ಳಲು ಮುಂದಾಗುತ್ತಾರೆ. ವಂಚಿತರಾದವರು ಅದನ್ನು ಪಡೆಯಲು ಶತಾಯಗತಾಯ ಯತ್ನಿಸುತ್ತಾರೆ. ಹಾಗಾಗಿ ಹಿಂಸಾಚಾರ ಉಲ್ಭಣವಾಗುತ್ತದೆ.

ಈ ಚುನಾವಣೆಯಲ್ಲಿಯೂ ಸಹ ಅದು ಪ್ರತಿಧ್ವನಿಸಿದೆ. ಚುನಾವಣೆಗೂ ಮೊದಲು ಟಿಎಂಸಿ ಹೈಕಮಾಂಡ್ ಸ್ಥಳೀಯ ಮಟ್ಟದಲ್ಲಿ ಟಿಕೆಟ್‌ಗಾಗಿನ ಗುಂಪುಗಾರಿಕೆ ನಿಯಂತ್ರಿಸಲು ಎಚ್ಚರಿಕೆ ನೀಡಿತ್ತು. ಸಂದರ್ಶನವೊಂದರಲ್ಲಿ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಟಿಕೆಟ್‌ವಂಚಿತ ಬಂಡಾಯ ಅಭ್ಯರ್ಥಿಗಳಿಗೆ, “ನಿಮ್ಮ ಪಂಚಾಯತ್‌ಗಳಿಗೆ ನಮ್ಮ ಸರ್ಕಾರ ಹಣ ನೀಡುತ್ತದೆ. ಹಾಗಾಗಿ ಅಧಿಕೃತ ಟಿಎಂಸಿ ಅಭ್ಯರ್ಥಿಗಳನ್ನು ಸೋಲಿಸುವ ಮೂಲಕ ಪಂಚಾಯತ್‌ಅನ್ನು ಗೆಲ್ಲುವುದರಿಂದ ನಿಮಗೆ ಅಂತಹ ಪ್ರಯೋಜನವಾಗುವುದಿಲ್ಲ” ಎಂದು ಬೆದರಿಕೆಯೊಡ್ಡಿದ್ದರು. ಆದರೂ ಟಿಎಂಸಿಯಲ್ಲಿ ಗುಂಪುಗಾರಿಕೆ ಮುಂದುವರಿಯಿತು. ಬಂಡಾಯ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಅಂದರೆ ಕೋಲ್ಕತ್ತಾದಲ್ಲಿ ಕುಳಿತು ಗ್ರಾಮೀಣ ಪ್ರದೇಶಗಳನ್ನು ನಿಭಾಯಿಸುವುದು ಅಷ್ಟು ಸುಲಭವಲ್ಲ ಎಂಬುದನ್ನು ಇದು ತೋರಿಸುತ್ತದೆ.

ಇನ್ನು 60,000ಕ್ಕೂ ಸಿಬ್ಬಂದಿಗಳು ಇದ್ದ ಹೆಚ್ಚು ಕೇಂದ್ರೀಯ ಪಡೆಗಳನ್ನು ನಿಯೋಜಿಸಿದ್ದರೂ ಸಹ ಹಿಂಸಾಚಾರ ತಡೆಗಟ್ಟಲು ಸಾಧ್ಯವಾಗಿಲ್ಲ. ಅಂದರೆ ರೂಢಿಗತವಾಗಿ ಬಂದಿರುವ ಮಿಲಿಟೆಂಟ್ ಹೋರಾಟದ ಮನೋಭಾವ, ಕೆಲವು ಕಡೆಯಲ್ಲಿ ರೈತರ ಪ್ರಾಬಲ್ಯ ಹಿಂಸಾಚಾರಕ್ಕೆ ಬಹುಪಾಲು ಕಾರಣವಾಗಿದೆ. ಒಟ್ಟಾರೆ ವಿರೋಧಾಭಾಸಗಳಿಂದ ಕೂಡಿರುವ ಈ ಪಂಚಾಯ್ತಿ ಚುನಾವಣೆಗಳಲ್ಲಿ ಜನರ ಭಾಗವಹಿಸುವಿಕೆ ಮಾತ್ರ ಅತ್ಯಧಿಕವಾಗಿರುತ್ತದೆ. ಈ ಬಾರಿ ಪಶ್ಚಿಮ ಬಂಗಾಳದಲ್ಲಿ 81% ಮತದಾನವಾಗಿರುವುದೇ ಅದಕ್ಕೆ ಸಾಕ್ಷಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...