Homeಮುಖಪುಟಸಮಾಜವಾದಿ ಚಿಂತಕ- ’ಗಾಂಧಿ ಕಥನ’ದ ಲೇಖಕ ಡಿ.ಎಸ್ ನಾಗಭೂಷಣ ನೆನಪು

ಸಮಾಜವಾದಿ ಚಿಂತಕ- ’ಗಾಂಧಿ ಕಥನ’ದ ಲೇಖಕ ಡಿ.ಎಸ್ ನಾಗಭೂಷಣ ನೆನಪು

- Advertisement -
- Advertisement -

ನಾಗಭೂಷಣ್ ನನಗೆ ಮೊದಲು ಪರಿಚಯವಾದದ್ದು ಅವರ ಧ್ವನಿಯ ಮುಖಾಂತರ. ಆಗವರು ದಿಲ್ಲಿಯ ಆಕಾಶವಾಣಿಯಲ್ಲಿ ವಾರ್ತೆಗಳನ್ನು ಓದುತ್ತಿದ್ದರು. ಯಾವುದೋ ಅಗಮ್ಯ ಲೋಕದಿಂದ ಬರುವ ಆ ದನಿಗೆ ಕಿವಿಗೊಟ್ಟು ಆಲಿಸುತ್ತ ವಾರ್ತೆಗಳ ವಿಶೇಷತೆಗೆ ತಕ್ಕಂತೆ ನಮಗೆ ಮುಖಭಾವ ಬದಲಾಗುವಂತೆ ಮಾಡುತ್ತಿದ್ದ ಆ ಗಂಭೀರ ಧ್ವನಿ ಅವರದಾಗಿತ್ತು. ಸಾಮಾಜಿಕ ಪರಿವರ್ತನೆಯಲ್ಲಿ ಅಚಲ ನಂಬಿಕೆಯುಳ್ಳವರಾಗಿದ್ದ ಆ ತರುಣ ಲಂಕೇಶ್ ಪತ್ರಿಕೆ ಆರಂಭವಾದ ಕೂಡಲೆ ಆಕಾಶವಾಣಿ ಕೆಲಸಕ್ಕೆ ರಾಜೀನಾಮೆ ಬರೆದು ಕರ್ನಾಟಕಕ್ಕೆ ಬಂದು ಪತ್ರಿಕೆಗೆ ತನಿಖಾ ವರದಿ ಬರೆದರು. ಆ ಕಾಲಕ್ಕೆ ಆ ವರದಿಗಳು ಬಾಂಬಿನಂತಿರುತ್ತಿದ್ದವು. ಕ್ರಮೇಣ ಲಂಕೇಶರ ಜೊತೆ ಏಗುವುದು ಕಷ್ಟ ಅನ್ನಿಸಿತು. ಮತ್ತೆ ಆಕಾಶವಾಣಿಗೆ ಹೋದರು. ಸುದೈವಕ್ಕೆ ಅವರ ರಾಜೀನಾಮೆ ಅಂಗೀಕೃತವಾಗಿರಲಿಲ್ಲ. ಆದ್ದರಿಂದ ನಾಗಭೂಷಣ ಬಚಾವಾದರೆಂದೇ ಹೇಳಬೇಕು. ಅವರು ಕವಿಯತ್ರಿ ಸವಿತಾರನ್ನ ಕೈ ಹಿಡಿದ ಮೇಲೆ ಬರವಣಿಗೆಯ ಜೊತೆಗೆ ಕರ್ನಾಟಕದ ಎಲ್ಲಾ ಚಳವಳಿಗಳಲ್ಲಿ ಭಾಗವಹಿಸುತ್ತಾ, ಮುಖ್ಯವಾಗಿ ರೈತ ಚಳಿವಳಿ, ದಲಿತ ಚಳವಳಿ, ಸಮಾಜವಾದಿ ಆಶಯಗಳ ಪ್ರತಿಪಾದನೆಯಲ್ಲಿ ಸಕ್ರಿಯರಾದರು.

ಅವರು ನೇರವಾಗಿ ಪರಿಚಯವಾದದ್ದು ಕೆಮ್ಮಣ್ಣುಗುಂಡಿಯಲ್ಲಿ ನಡೆದ ದಲಿತ ಅಧ್ಯಯನ ಶಿಬಿರದಲ್ಲಿ. ಲೋಹಿಯಾ, ಗಾಂಧೀಜಿ, ಅಂಬೇಡ್ಕರ್ ಮತ್ತು ಮಾರ್ಕ್ಸ್ ಕುರಿತ ನಾಲ್ಕು ದಿನದ ಚರ್ಚೆಯಲ್ಲಿ ನಾಗಭೂಷಣರ ದೈತ್ಯ ಪ್ರತಿಭೆಯ ಪರಿಚಯವಾಯ್ತು. ಅಲ್ಲಿಗೆ, ಚಂದ್ರಗುತ್ತಿಯಲ್ಲಿ ನಡೆದ ಬೆತ್ತಲೆ ಸೇವೆ ತಡೆದ ದಿಗ್ವಿಜಯದೊಂದಿಗೆ ಪ್ರೊ. ಬಿ.ಕೃಷ್ಣಪ್ಪ, ಕಡಿದಾಳು ಶಾಮಣ್ಣ ಬಂದು ಸೇರಿಕೊಂಡರು. ಅಲ್ಲಿ ನಡೆದ ಸಮಾರೋಪ ಮುಗಿಸಿ ಎಲ್ಲರೂ ತಮ್ಮತಮ್ಮ ದಿಕ್ಕಿಗೆ ಹಾರಿಹೋದರು. ರೈತ ಚಳವಳಿ ಮತ್ತು ದಲಿತ ಚಳವಳಿ ವಿಘಟನೆಗೊಂಡು ಭಾಷಾ ಚಳವಳಿ ಜೀರ್ಣಗೊಂಡ ನಂತರದ ವಿಷಾದಕರ ಸಂದರ್ಭದಲ್ಲಿ ನಾಗಾಭೂಷಣ್ ವಾಲೆಂಟರಿ ರಿಟೈರ್‌ಮೆಂಟ್ ಪಡೆದು ವಿಶ್ರಾಂತ ಜೀವನಕ್ಕೆ ಶಿವಮೊಗ್ಗ ಜಿಲ್ಲೆಯನ್ನೇ ಆರಿಸಿಕೊಂಡಾಗ ನಮಗೆಲ್ಲಾ ಖುಷಿಯಾಯ್ತು. ಆಗ ಭೇಟಿಯಾದ ನಾನು “ನೀವು ಶಿವಮೊಗ್ಗಕ್ಕೆ ಬಂದಿದ್ದು ಬಾಳ ಖುಷಿಯಾಯ್ತು ಸಾರ್” ಎಂದೆ. ಇಲ್ಲೆಲ್ಲಾ ಅವರ ಗತಕಾಲದ ಗೆಳೆಯರಿದ್ದು, ಕೆಲವರು ನಿವೃತ್ತರಾಗಿದ್ದರೆ ಕೆಲವರು ನಿವೃತ್ತಿ ಅಂಚಿನಲ್ಲಿದ್ದರು. ಶಿವಮೊಗ್ಗದ ಹೌಸಿಂಗ್ ಬೋರ್ಡಿನಿಂದ ಮನೆ ಪಡೆದು ಅದನ್ನು ನವೀಕರಿಸಿ ಮೂರನೇ ಮಜಲಿನ ಜೀವನ ಆರಂಭಿಸಿದರು. ಎಂದಿನಂತೆ ಬರವಣಿಗೆಯನ್ನು ಮುಂದುವರೆಸಿದ್ದರು. ಅವರ ’ಗಮನ’ ಕೃತಿ ನಾಡಿನ ವಿದ್ವಾಂಸರ ಮೆಚ್ಚುಗೆಗೆ ಪಾತ್ರರಾಗಿ ಅವರ ಮುಂದಿನ ಕೃತಿಗಳ ಬಗ್ಗೆ ತುಂಬಾ ಭರವಸೆ ಮೂಡಿಸಿದ್ದರು.

ಅದರಲ್ಲೂ ’ಗಮನ’ ಕೃತಿಯಲ್ಲಿ ಅವರು ಮಾಸ್ತಿಯವರ ಸಾಹಿತ್ಯವನ್ನು ವಿಮರ್ಶಿಸಿರುವ ಪರಿಗೆ ವಿಮರ್ಶಾಲೋಕ ಬೆರಗುಗೊಂಡಿತ್ತು. ಆದರೆ, ಜಾತಿಗಳದ್ದೇನೂ ತಪ್ಪಿಲ್ಲ ಅದನ್ನ ಆಚರಿಸಿಕೊಂಡು ಹೋಗುವ ರೀತಿಯಲ್ಲಿ ಕೆಲವು ತಪ್ಪಿರಬಹುದೆಂದು ಹೇಳಿ, ತೇಜಸ್ವಿಯವರಿಂದ ಉಗ್ರವಾಗಿ ಟೀಕಿಸಿಕೊಂಡಿದ್ದ ಮಾಸ್ತಿಯವರ ಮನೋಭಿತ್ತಿಯನ್ನು ನಾಗಭೂಷಣ ಪ್ರಶ್ನೆ ಮಾಡಿರಲಿಲ್ಲ. ಇಂತಹದೊಂದು ಅನುಮಾನ ನಮ್ಮಲ್ಲಿ ಸದಾ ಉಳಿದಿತ್ತು. ಚರ್ಚೆಗೆ ಹೋದರೆ ಹಠಬಿದ್ದು ಜಗಳ ಆಡಿ ಸಂತೋಷದ ಸಂದರ್ಭಗಳನ್ನೇ ಹಾಳುಮಾಡಿಕೊಂಡು ಕೂರುವ ನಾಗಭೂಷಣರ ನಡವಳಿಕೆಗೆ ಹೆದರಿದ ಹಲವು ಮಿತ್ರರು ತೆಪ್ಪಗಾಗುತ್ತಿದ್ದರು. ನಾಗಭೂಷಣ ವಿದ್ವತ್ತಿನಷ್ಟೇ ಜಗಳಗಂಟರು. ಎಲ್ಲಾ ಸಂತೋಷದ ಸಮಯಗಳನ್ನು ಉಡಾಯಿಸಿ ಹೋಗುವ ಸೋಷಿಯಲಿಸ್ಟರ ಮುಖ್ಯಗುಣ ಅಥವಾ ಹುಟ್ಟುಗುಣ ಅದು ಅನ್ನಬಹುದು. ತಾವು ತಿಳಿದುಕೊಂಡ ಸತ್ಯಗಳನ್ನ ವಿನಯದಿಂದ ಪ್ರತಿಪಾದಿಸಿ ಜನಸಮೂಹದ ವಿಶ್ವಾಸ ಗಳಿಸುವಂತಹ ತಾಳ್ಮೆಯನ್ನೇ ಕಾಣದೇ ಕಣ್ಮರೆಯಾದ ಸೋಷಿಯಲಿಸ್ಟರ ದಂಡೇ ಇದೆ ಹಾಗೆ ನೋಡಿದರೆ ಈ ಸೋಷಿಯಲಿಸ್ಟರು ಹೋರಾಡಿದ್ದು ತಮ್ಮ ವಿರುದ್ಧವೇ ಹೊರತು ಇನ್ನಾರ ವಿರುದ್ಧವೂ ಅಲ್ಲ ಎಂಬುದೂ ಸಾಬೀತಾಗಿದೆ.

ನಾಗಭೂಷಣ ಬಹುದೊಡ್ಡ ವಿದ್ವಾಂಸ, ಸಾಹಿತ್ಯ ಮತ್ತು ರಾಜಾಕಾರಣದ ವಿಶ್ಲೇಷಣೆಯಲ್ಲಿ ದೈತ್ಯ ಪ್ರತಿಭೆ. ಆದರೆ ಅವರಿಗೂ ಎಲ್ಲರಂತೆ ಕೆಲವು ಪೂರ್ವಾಗ್ರಹಗಳಿದ್ದವು. ಪೂರ್ವಾಗ್ರಹದ ಒಂದು ಎಳೆಯಿದ್ದರು ಸಾಕು ಪ್ರಶ್ನೆಗಳನ್ನ ಎದುರಿಸಬೇಕಾಗುತ್ತದೆ. ಅದಾಗಲೇ ನಾಗಾಭೂಷಣ್ ಬರೆಯುವಂತಹ ಯಾವ ಪತ್ರಿಕೆಯೂ ಇರಲಿಲ್ಲ. ಇಂದೂಧರ ಹೊನ್ನಾಪುರ ತರುತ್ತಿದ್ದ ಸಂವಾದ ಮಾಸಿಕ ನಾಗಭೂಷಣರ ವಿಚಾರ ವಿಮರ್ಶೆಗೆ ತಕ್ಕ ಪತ್ರಿಕೆಯಾಗಿ ಗೋಚರಿಸಿತ್ತು. ಅದಕ್ಕೆ ಲೇಖನ ಬರೆದರು. ರಹಮತ್ ತರೀಕೆರೆಯಿಂದ ಪ್ರತಿಲೇಖನ ಬಂತು. ಅದನ್ನು ಪ್ರಕಟಿಸಿದ ಇಂದೂಧರರ ಮೇಲೆ ಸಿಟ್ಟಾದರು ನಾಗಭೂಷಣ. ಬೇರೆ ಪತ್ರಿಕೆ ತೆಗೆಯಲು ತಯಾರಾದರು. ಆಗ ಶಿವಮೊಗ್ಗದ ಬಹುಮತದ ಹಾಲಪ್ಪನವರು ಬಹುಮತ ಎಂಬ ಪತ್ರಿಕೆ ತರುತ್ತಿದ್ದರು. ಜಮೀನಿನಲ್ಲಿ ಬೆಳೆ ಬಂದಾಗ ಅದನ್ನು ಮಾರಿ ಪ್ರಕಟಿಸುತ್ತಿದ್ದರಿಂದ, ಭೂಮಿಯ ಬೆಳೆ ನೆಚ್ಚಿದ ಪತ್ರಿಕೆಯಾಗಿತ್ತದು! ಹಾಲಪ್ಪ ನಾಗಭೂಷಣರ ಗೆಳೆಯರಾಗಿದ್ದರು. ಎಲ್ಲಿ ತಮ್ಮ ಪತ್ರಿಕೆಯನ್ನ ಹಠಮಾರಿ ಸಿದ್ಧಾಂತಗಳಿಂದ ಹಾಳುಮಾಡುತ್ತಾರೋ ಎಂದು ನಾಗಭೂಷಣರಿಗೆ ಅವರು ಕೊಡಲೊಪ್ಪಲಿಲ್ಲ. ಇದರಿಂದ ಕೆರಳಿದ ನಾಗಭೂಷಣ ’ಹೊಸ ಮನುಷ್ಯ’ ಎಂಬ ನಿರಾಭರಣ ಸುಂದರಿಯಂತಹ ಪತ್ರಿಕೆ ತಂದೇಬಿಟ್ಟರು. ಚಂದಾದಾರರನ್ನೇ ನೆಚ್ಚಿದ ಆ ಪತ್ರಿಕೆಯನ್ನು ಹತ್ತು ವರ್ಷ ಮಾಸಿಕವಾಗಿ ತಂದರು. ಈ ಮನುಷ್ಯ ಸಂಗ್ರಹಯೋಗ್ಯವಾಗಿ ನಾಗಭೂಷಣರ ನೆನಪಾಗಿ ಉಳಿದಿದೆ.

ನಿಜವಾದ ಸೋಷಿಯಲಿಸ್ಟರು ಸರಕಾರಕ್ಕೆ ಯಾವತ್ತು ವಿರೋಧ ಪಕ್ಷವಾಗಿ ಕೆಲಸ ಮಾಡುತ್ತಾರೆ. ನಾಗಭೂಷಣ ಕಾಂಗ್ರೆಸ್ ಸರಕಾರಕ್ಕೆ ಸರಿಯಾದ ವಿರೋಧ ಪಕ್ಷವಾಗಿ ತುಂಬ ನಿಷ್ಠುರವಾಗಿಯೇ ಕೆಲಸ ಮಾಡಿದರು. ಕಾಂಗ್ರೆಸ್ ಕೊಟ್ಟ ರಾಜ್ಯೋತ್ಸವ ಪ್ರಶಸ್ತಿಯನ್ನು ಮೊದಲು ಒಪ್ಪಿಕೊಂಡು, ನಂತರ ನಿರಾಕರಿಸಿದರು. ಇದಕ್ಕೆ ಅವರು ಕೊಟ್ಟ ಕಾರಣಗಳಿಗಿಂತ, ಮೊದಲೇ ನಿರಾಕರಿಸಬಹುದಿತ್ತು ಎಂಬುದು ಗೆಳೆಯರ-ವಿದ್ವಾಂಸರ ಅಭಿಪ್ರಾಯವಾಗಿತ್ತು. ಅವರು ಕಾಂಗ್ರೆಸ್ ಸರ್ಕಾರವನ್ನ ಟೀಕಿಸಿದಂತೆ, ಯಡಿಯೂರಪ್ಪ, ಕುಮಾರಸ್ವಾಮಿ ಮತ್ತು ಮೋದಿ ಸರಕಾರವನ್ನು ಟೀಕಿಸಲಿಲ್ಲ. ಬರುಬರುತ್ತ ಆ ಕಾಂಗ್ರೆಸ್‌ಗೆ ಸರಿಯಾದ ಉತ್ತರಕೊಡಲು ನಮ್ಮ ನಾಗಭೂಷಣರೇ ಸರಿ ಎಂದು ಆರೆಸ್ಸೆಸಿಗರು ಮಾತನಾಡಿಕೊಳ್ಳುವಂತಾಯ್ತು. ಮೋದಿ ಸರ್ಕಾರದ ಕೃಷಿಕಾಯ್ದೆ ಪ್ರತಿಭಟನೆಗೆ ಐದುನೂರು ಜನ ರೈತರು ಬಲಿಯಾದರು. ಈ ಬಗ್ಗೆ ನಾಗಭೂಷಣ ಏನೂ ಬರೆಯದೆ ರೈತ ಮುಖಂಡರಿಂದಲೇ ಲೇಖನ ಆಹ್ವಾನಿಸಿದರು. ತಮ್ಮ ಮನೆಬಾಗಿಲಲ್ಲೆ ರೈತರ ಸಭೆ ನಡೆದು ಟಿಕಾಯತ್ ಬಂದಾಗ ಏನೂ ಬರೆಯಲಿಲ್ಲ. ನನಗೆ ಸಿಟ್ಟು ಬಂದು ನಾಗಭೂಷಣನದ್ದು ಹೊಸ ಮನುಷ್ಯ ಅಲ್ಲ ವೃಣ ಮನುಷ್ಯ, ಆತ ಬಿಜೆಪಿ ಪರ ಇದ್ದಾನೆ ಎಂದು ಟೀಕಿಸಿದೆ. ಇದಕ್ಕೆ ಕಾರಣ ಆತ ಗೌರಿ ಲಂಕೇಶ್ ಬಗ್ಗೆ ಏನೂ ಬರೆದಿರಲಿಲ್ಲ, ಸಂತಾಪ ಸೂಚಕವನ್ನು ಹಾಕಿರಲಿಲ್ಲ ಎನ್ನುವುದಾಗಿತ್ತು. ಬದಲಿಗೆ ರಾಮಜೋಯಿಸನೆಂಬ ಮೀಸಲಾತಿ ವಿರೋಧಿಯ ಸಾವಿಗೆ ಸಂತಾಪ ಬರೆದಿದ್ದರು. ಇದನ್ನು ಕೇಳಿಸಿಕೊಂಡವನೊಬ್ಬ ನನ್ನ ಟೀಕೆಯನ್ನು ಅವರಿಗೆ ಹೇಳಿದ್ದ. ಇದರ ಅರಿವಿರದ ನಾನು ’ಹೊಸಮನುಷ್ಯದ ಚಂದಾ ಕೊಡಲು ಮನೆಗೆ ಹೋದೆ. ಹೋದಕೂಡಲೇ “ಏನ್ರೀ ನೀವು ನನ್ನನ್ನ ಬಿಜೆಪಿ ಏಜೆಂಟ್ ಅನ್ನಂಗೆ ಮಾತಾಡಿದ್ದೀರಿ. ರಾಘವೇಂದ್ರ ಪಾಟೀಲ್ ಹೇಳಿದ” ಎಂದು ರೇಗಿದರು. ಮನೆಗೆ ಬಂದವನೊಡನೆ ಜಗಳಕ್ಕೆ ಬೀಳುವುದು ಸುಲಭದ ಮಾತಲ್ಲ. ಆದರೂ ಅಂತಹ ಶಕ್ತಿ ನಾಗಭೂಷಣರಿಗಿತ್ತು. ನಾನು ನಿರಾಕರಿಸಲಿಲ್ಲ. “ಯಾಕಂಗಂದೆ ಅಂದ್ರೆ ಸಾರ್, ನೀವು ರಫೇಲ್ ಹಗರಣದ ಬಗ್ಗೆ ಬರೀತಾ ತ್ವರಿತವಾಗಿ ಈ ಒಪ್ಪಂದವನ್ನು ಮುಗಿಸಿದ್ದಾರೆಯೇ ಹೊರತು, ಇದರಿಂದ ಮೋದಿಗೆ ಯಾವುದೇ ಸ್ವಹಿತಾಸಕ್ತಿಯಿಲ್ಲ ಅಂತ ಬರೆದಿದ್ದೀರಿ” ಅಂದೆ. “ನಾನು ಬರೆದಿದ್ದೀನಾ” ಅಂದ್ರು. “ಹೌದು ಸಾರ್ ಸಂಪಾದಕೀಯನೇ ಬರೆದಿದ್ದೀರಿ” ಅಂದೆ. ಕೂಡಲೇ, ಸವಿತಾ ಅವರಿಗೆ ಹುಡುಕಲು ಹೇಳಿದರು. ನಾನು “ಹುಡುಕಬೇಡಿ ಮೇಡಂ, ನಾನೇ ಕಳಿಸ್ತೀನಿ” ಎಂದೆ. ಏಕೆಂದರೆ ನಾಗಭೂಷಣರಿಗೆ ಏನೇ ಹೇಳೀದರು ಅದನ್ನು ಹುಡುಕುವ ಜವಾಬ್ದಾರಿ ಸವಿತಾ ಮೇಲೆ ಬೀಳುತ್ತಿತ್ತು. “ಅಲ್ಲ ಸಾರ್ ಕ್ಯಾರವಾನ್ ಪತ್ರಿಕೆ ರಫೇಲ್ ಹಗರಣ ಬಗ್ಗೆ ಮೂವತ್ತು ಪೇಜ್ ಬರೆದಿದೆ. ನೀವು ಹಿಂಗೆ ಬರಿತಿರಿ” ಎಂದೆ. ನಾಗಭೂಷಣ್ ಒಳಗಣ್ಣಾದರು. ಸವಿತಾ ಕೊಟ್ಟ ಕಾಫಿ ಕುಡಿದು, ಪತ್ರಿಕೆ ಚಂದಾಕೊಟ್ಟು ಬಂದೆ.

ನಂತರ ಶಾಮಣ್ಣನವರ ಬಗ್ಗೆ ಅಭಿನಂದನಾ ಗ್ರಂಥ ತರುವಾಗ ನನ್ನನ್ನು ಸೇರಿಸಿಕೊಂಡಿದ್ದರು. ಎಂ.ಬಿ ನಟರಾಜ್, ನಾನು ಮತ್ತು ನಾಗಭೂಷಣ್ ನೇತೃತ್ವದಲ್ಲಿ ಗ್ರಂಥ ಹೊರಬರುವಾಗ ಅದಕ್ಕೆ ಎಸ್.ಎಲ್ ಭೈರಪ್ಪನವರ ಅಭಿಪ್ರಾಯ ಸೇರಿಸುವ ಪ್ರಸ್ತಾಪವನ್ನು ನಾಗಭೂಷಣ್ ಮುಂದಿಟ್ಟರು. ಪ್ರಕಾಶಕಿ ಅಕ್ಷತಾ ಈ ಬಗ್ಗೆ ನನ್ನನ್ನ ಕೇಳಿದರು. “ಅಲ್ಲವ್ವಾ, ಭೈರಪ್ಪನ ಸಾಹಿತ್ಯಕ್ಕೂ, ಶಾಮಣ್ಣನ ಬದುಕಿಗೂ ಏನಾದರೂ ಸಂಬಂಧವಿದೆಯಾ. ಒಂದೆರಡು ಮೂರು ಕೃತಿಬಿಟ್ಟರೆ ಆತ ಬರೆದುದೆಲ್ಲಾ ರಾಷ್ಟ್ರೋತ್ಥಾನ ಸಾಹಿತ್ಯ-ಸಿದ್ಧಾಂತಕ್ಕೆ ಅಂದೆ”. ಆದರೆ ನಾಗಭೂಷಣರ ಹಠವೇ ಗೆದ್ದು, ಭೈರಪ್ಪನ ಅಭಿಪ್ರಾಯ ತುರುಕಲಾಯ್ತು.

ಶಿವಮೊಗ್ಗದಲ್ಲಿ ನಡೆದ ದಕ್ಷಿಣಾಯನ ಕಾರ್ಯಕ್ರಮವನ್ನೂ ಅವರು ಕಟುವಾಗಿ ಟೀಕಿಸಿದ್ದರು. ಬೆಂಗಳೂರಲ್ಲಿ ನಡೆದ ರಾಷ್ಟ್ರಮಟ್ಟದ ಅಂಬೇಡ್ಕರ್ ಸೆಮಿನಾರುಗಳ ಬಗ್ಗೆ ಕೂತಲ್ಲೇ ಚಾಡಿಮಾತು ಕೇಳಿ ಟೀಕಿಸಿ ಬರೆದಿದ್ದರು. ಟೀಕೆಗೆ ಜಗಳಕ್ಕೆ ಬಗ್ಗಿಹೋದ ಮನಸ್ಸುಗಳಿಗೆ ಸಕಾರಾತ್ಮಕವಾದದ್ದು ಕಾಣುವುದೇ ಇಲ್ಲ. ಟೀಕಿಸಿದ ನಂತರವೇ ತಮ್ಮ ಅಸಹನೆಯನ್ನು ಶಮನಗೊಳಿಸಿಕೊಳ್ಳುವ ಸ್ಥಿತಿ ತಲುಪಿದ್ದರೇನೋ! ವ್ಯಕ್ತಿಗಳಲ್ಲಿನ ಅಭಿಪ್ರಾಯ ಭೇದಗಳು ಜಗಳಗಳಾಗಿ ಸಂವಾದ-ಸಂವಹನಗಳಲ್ಲಿ ಸಾಂತ್ವನ ಕಾಣುವ ವಾತಾವರಣ ನಾಗಭೂಷಣರ ಆವರಣದಲ್ಲಿ ಸುಳಿಯಲೇ ಇಲ್ಲ. ಮುನಿಸಿಕೊಂಡು ದಿಕ್ಕೆಟ್ಟು ಹೋದ ಉದಾಹರಣೆಗಳು ಹೇರಳವಾಗಿವೆ.

ಅವರು ’ಹೊಸ ಮನುಷ್ಯ’ ಸಂಚಿಕೆಗಳ ತಮ್ಮ ಬರವಣಿಗೆಯಲ್ಲಿ ನಮಗೆಲ್ಲಾ ಮೂಡಿಸಿದ್ದ ಅಸಹನೆ ಮತ್ತು ಸಿಟ್ಟುಗಳೆಲ್ಲಾ ಕರಗಿಹೋದದ್ದು ಅವರು ’ಗಾಂಧಿ ಕಥನ’ ಬರೆದು ಪ್ರಕಟಿಸಿದ ಮೇಲೆ. ಆವರೆಗೂ ನಾವೂ ಗಾಂಧಿ ಭಕ್ತರಿಂದ ರಚನೆಯಾದ ಗಾಂಧಿಯವರ ಜೀವನಚಿತ್ರಗಳನ್ನು ಓದಿದ್ದಕ್ಕೂ ನಾಗಭೂಷಣರ ಗಾಂಧಿಕಥನ ಓದಿದ್ದಕ್ಕೂ ಅಜಗಜಾಂತರ ವ್ಯತ್ಯಾಸವಿತ್ತು. ನಮಗೆ ಗಾಂಧಿ ಇಡಿಯಾಗಿ ಸಿಕ್ಕಿದ್ದು ನಾಗಭೂಷಣರಿಂದಲೇ. ಅದೂ ಗಾಂಧಿ ಕೊಂದವರನ್ನು ಆರಾಧಿಸುವವರ ಕೈಗೆ ಸಿಕ್ಕಿ ಈ ದೇಶ ನರಳುತ್ತಿರುವಾಗ ಹೊರಬಂದ ಗಾಂಧಿಕಥನ ಬಿಡುವಿಲ್ಲದ ಮರುಮುದ್ರಣ ಕಂಡಿತು. ಹಾಗೆ ನೋಡಿದರೆ ಗಾಂಧೀಜಿಯ ಮುಂದುವರಿಕೆಯಾಗಿ ಸಮಾಜವಾದಿಗಳು ನಮಗೆ ದಾರಿದೀಪವಾಗಬೇಕಿತ್ತು. ಆದರೆ ಸಮಾಜವಾದಿಗಳು ಯಾದವೀ ಕಲಹದಲ್ಲಿ ಮುಳುಗಿಹೋದರೆ ಕಾಂಗ್ರೆಸ್ಸಿಗರು ಗಾಂಧಿ ಎಂತಹ ಜನರನ್ನ ಸೃಷ್ಟಿಸಿ ಹೋಗಿದ್ದಾನಲ್ಲಪ್ಪ ಎನ್ನುವಂತೆ ಮಾಡಿದರು. ನಾಗಭೂಷಣರ ಕಾಂಗ್ರೆಸ್ ವಿರೋಧ ಲೋಹಿಯಾ ಕಾಲದ್ದು. ಆದರೀಗ ಪರಿಸ್ಥಿತಿ ಬದಲಾಗಿದೆ. ಅದಕ್ಕಿಂತಲೂ ದೊಡ್ಡ ಕೆಡುಕು ದೇಶವನ್ನು ಬಾಧಿಸುತ್ತಿದೆ. ನಾಗಭೂಷಣ್‌ಗೆ ದಲಿತರು ಮತ್ತು ಮುಸ್ಲಿಮರ ಬಗ್ಗೆ ಕೆಲವು ಪೂರ್ವಾಗ್ರಹಗಳಿದ್ದವು. ಅದಕ್ಕೆ ಸಕಾರಣಕೊಟ್ಟು ವಾದಿಸುತ್ತಿದ್ದರು.

ಅಂಬೇಡ್ಕರ್ ಬಗ್ಗೆಯೂ ನಾಗಭೂಷಣ್ ಚಿಂತನೆ ಗೊಂದಲಮಯವಾಗಿತ್ತು. ಗಾಂಧಿ ಕಥನದಲ್ಲಿ ಅಂಬೇಡ್ಕರನ್ನು ಉದ್ದೇಶಪೂರ್ವಕವಾಗಿ ಬದಿಗೆ ಸರಿಸಿದ್ದಾರೆಂದು ದಲಿತರು ದೂರುವುದರಲ್ಲಿ ನಿಜಾಂಶವಿದೆ. ಅವರು ಶಿವಮೊಗ್ಗಕ್ಕೆ ಬಂದಾಗ ಗೆಳೆಯರ ಮನೆಗಳಲ್ಲಿ ಸೇರುತ್ತ ಹರಟೆಯೊಂದಿಗೆ ನಮ್ಮ ಕಾಲದ ಹಾಡುಗಳನ್ನು ಹೇಳುತ್ತ ಖುಷಿಪಡುತ್ತಿದ್ದ ಕಾಲವೊಂದಿತ್ತು. ಮತೀಯವಾದಿಗಳು ದೇಶದ ಅಧಿಕಾರ ಹಿಡಿದ ಮೇಲೆ ಆ ದಿನಗಳು ಕಾಣೆಯಾದವು. ಇಡೀ ದೇಶವೇ ಕ್ಷೋಭೆಗೊಂಡಾಗ ನಮ್ಮ ಮಾತು ಹಾಡು ಜಾನಪದಕ್ಕೆ ಬದಲಾಗಿ ಜಗಳಗಳು ಕಾಣಿಸಿಕೊಂಡವು. ಮನೆಯಲ್ಲೊಬ್ಬನಿಗೆ ತಲೆಕೆಟ್ರೆ ಇಡೀ ಮನೆಯ ಸಂಭ್ರಮವೇ ಹಾಳಾಗುವಂತೆ ರಾಜ್ಯ ದೇಶವೆಲ್ಲಾ ಕ್ಷೋಬೆಗೆ ತುತ್ತಾಗಿರುವ ಈ ಸಮಯದಲ್ಲಿ ನಾಗಭೂಷಣರ ನಿರ್ಗಮನ ಇಚ್ಛಾಮರಣದಂತೆ ಕಾಣುತ್ತಿದೆ. ಆ ಪ್ರಶಾಂತ ಮುಖಭಾವವೇ ಅದನ್ನ ಹೇಳುತ್ತಿತ್ತು. ಇನ್ನು ನಾಗಭೂಷಣರ ಜತೆಯಾಗಿ ಸವಿತಾ ನಾಗಭೂಷಣ ಅವರನ್ನು ಕಾಪಾಡಿದ ರೀತಿಗೆ ಅವರನ್ನು ಒಬ್ಬ ಅಸಾಮಾನ್ಯ ಮಹಿಳೆ ಅನ್ನುವುದಕ್ಕಿಂತ ತಾಯಿ ಹೃದಯಿ ಅನ್ನಬಹುದು.

ಬಿ. ಚಂದ್ರೇಗೌಡ

ಬಿ. ಚಂದ್ರೇಗೌಡ
ಲಂಕೇಶ್‌ರ ಪತ್ರಿಕೆಯಲ್ಲಿ ಬಯಲುಸೀಮೆಯ ಕಟ್ಟೆ ಪುರಾಣದ ಮೂಲಕ ಕನ್ನಡಿಗರೆಲ್ಲರ ಗಮನಕ್ಕೆ ಬಂದ ಚಂದ್ರೇಗೌಡರು, ನಾಟಕಕಾರರು, ನಟರಷ್ಟೇ ಅಲ್ಲ ವಿಶಿಷ್ಟ ರಾಜಕೀಯ ನೋಟವುಳ್ಳವರೂ ಸಹಾ.
ಕರ್ನಾಟಕದ ಸಾಂಸ್ಕೃತಿಕ ಹಾಗೂ ರಾಜಕೀಯ ಇತಿಹಾಸದ ಆಗುಹೋಗುಗಳು ಅವರಲ್ಲಿ ದಾಖಲಾಗಿರುವ ಬಗೆಯೂ ವಿಶಿಷ್ಟವೇ..


ಇದನ್ನೂ ಓದಿ: ಎರಡೂವರೆ ಸಾವಿರ ಕೋಟಿ ಹುಣಸಿ ಪಿಕ್ಕ ಅನಕೊಂಡಿರೇನ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...