Homeಮುಖಪುಟಸಮಾಜವಾದಿ ಚಿಂತಕ- ’ಗಾಂಧಿ ಕಥನ’ದ ಲೇಖಕ ಡಿ.ಎಸ್ ನಾಗಭೂಷಣ ನೆನಪು

ಸಮಾಜವಾದಿ ಚಿಂತಕ- ’ಗಾಂಧಿ ಕಥನ’ದ ಲೇಖಕ ಡಿ.ಎಸ್ ನಾಗಭೂಷಣ ನೆನಪು

- Advertisement -
- Advertisement -

ನಾಗಭೂಷಣ್ ನನಗೆ ಮೊದಲು ಪರಿಚಯವಾದದ್ದು ಅವರ ಧ್ವನಿಯ ಮುಖಾಂತರ. ಆಗವರು ದಿಲ್ಲಿಯ ಆಕಾಶವಾಣಿಯಲ್ಲಿ ವಾರ್ತೆಗಳನ್ನು ಓದುತ್ತಿದ್ದರು. ಯಾವುದೋ ಅಗಮ್ಯ ಲೋಕದಿಂದ ಬರುವ ಆ ದನಿಗೆ ಕಿವಿಗೊಟ್ಟು ಆಲಿಸುತ್ತ ವಾರ್ತೆಗಳ ವಿಶೇಷತೆಗೆ ತಕ್ಕಂತೆ ನಮಗೆ ಮುಖಭಾವ ಬದಲಾಗುವಂತೆ ಮಾಡುತ್ತಿದ್ದ ಆ ಗಂಭೀರ ಧ್ವನಿ ಅವರದಾಗಿತ್ತು. ಸಾಮಾಜಿಕ ಪರಿವರ್ತನೆಯಲ್ಲಿ ಅಚಲ ನಂಬಿಕೆಯುಳ್ಳವರಾಗಿದ್ದ ಆ ತರುಣ ಲಂಕೇಶ್ ಪತ್ರಿಕೆ ಆರಂಭವಾದ ಕೂಡಲೆ ಆಕಾಶವಾಣಿ ಕೆಲಸಕ್ಕೆ ರಾಜೀನಾಮೆ ಬರೆದು ಕರ್ನಾಟಕಕ್ಕೆ ಬಂದು ಪತ್ರಿಕೆಗೆ ತನಿಖಾ ವರದಿ ಬರೆದರು. ಆ ಕಾಲಕ್ಕೆ ಆ ವರದಿಗಳು ಬಾಂಬಿನಂತಿರುತ್ತಿದ್ದವು. ಕ್ರಮೇಣ ಲಂಕೇಶರ ಜೊತೆ ಏಗುವುದು ಕಷ್ಟ ಅನ್ನಿಸಿತು. ಮತ್ತೆ ಆಕಾಶವಾಣಿಗೆ ಹೋದರು. ಸುದೈವಕ್ಕೆ ಅವರ ರಾಜೀನಾಮೆ ಅಂಗೀಕೃತವಾಗಿರಲಿಲ್ಲ. ಆದ್ದರಿಂದ ನಾಗಭೂಷಣ ಬಚಾವಾದರೆಂದೇ ಹೇಳಬೇಕು. ಅವರು ಕವಿಯತ್ರಿ ಸವಿತಾರನ್ನ ಕೈ ಹಿಡಿದ ಮೇಲೆ ಬರವಣಿಗೆಯ ಜೊತೆಗೆ ಕರ್ನಾಟಕದ ಎಲ್ಲಾ ಚಳವಳಿಗಳಲ್ಲಿ ಭಾಗವಹಿಸುತ್ತಾ, ಮುಖ್ಯವಾಗಿ ರೈತ ಚಳಿವಳಿ, ದಲಿತ ಚಳವಳಿ, ಸಮಾಜವಾದಿ ಆಶಯಗಳ ಪ್ರತಿಪಾದನೆಯಲ್ಲಿ ಸಕ್ರಿಯರಾದರು.

ಅವರು ನೇರವಾಗಿ ಪರಿಚಯವಾದದ್ದು ಕೆಮ್ಮಣ್ಣುಗುಂಡಿಯಲ್ಲಿ ನಡೆದ ದಲಿತ ಅಧ್ಯಯನ ಶಿಬಿರದಲ್ಲಿ. ಲೋಹಿಯಾ, ಗಾಂಧೀಜಿ, ಅಂಬೇಡ್ಕರ್ ಮತ್ತು ಮಾರ್ಕ್ಸ್ ಕುರಿತ ನಾಲ್ಕು ದಿನದ ಚರ್ಚೆಯಲ್ಲಿ ನಾಗಭೂಷಣರ ದೈತ್ಯ ಪ್ರತಿಭೆಯ ಪರಿಚಯವಾಯ್ತು. ಅಲ್ಲಿಗೆ, ಚಂದ್ರಗುತ್ತಿಯಲ್ಲಿ ನಡೆದ ಬೆತ್ತಲೆ ಸೇವೆ ತಡೆದ ದಿಗ್ವಿಜಯದೊಂದಿಗೆ ಪ್ರೊ. ಬಿ.ಕೃಷ್ಣಪ್ಪ, ಕಡಿದಾಳು ಶಾಮಣ್ಣ ಬಂದು ಸೇರಿಕೊಂಡರು. ಅಲ್ಲಿ ನಡೆದ ಸಮಾರೋಪ ಮುಗಿಸಿ ಎಲ್ಲರೂ ತಮ್ಮತಮ್ಮ ದಿಕ್ಕಿಗೆ ಹಾರಿಹೋದರು. ರೈತ ಚಳವಳಿ ಮತ್ತು ದಲಿತ ಚಳವಳಿ ವಿಘಟನೆಗೊಂಡು ಭಾಷಾ ಚಳವಳಿ ಜೀರ್ಣಗೊಂಡ ನಂತರದ ವಿಷಾದಕರ ಸಂದರ್ಭದಲ್ಲಿ ನಾಗಾಭೂಷಣ್ ವಾಲೆಂಟರಿ ರಿಟೈರ್‌ಮೆಂಟ್ ಪಡೆದು ವಿಶ್ರಾಂತ ಜೀವನಕ್ಕೆ ಶಿವಮೊಗ್ಗ ಜಿಲ್ಲೆಯನ್ನೇ ಆರಿಸಿಕೊಂಡಾಗ ನಮಗೆಲ್ಲಾ ಖುಷಿಯಾಯ್ತು. ಆಗ ಭೇಟಿಯಾದ ನಾನು “ನೀವು ಶಿವಮೊಗ್ಗಕ್ಕೆ ಬಂದಿದ್ದು ಬಾಳ ಖುಷಿಯಾಯ್ತು ಸಾರ್” ಎಂದೆ. ಇಲ್ಲೆಲ್ಲಾ ಅವರ ಗತಕಾಲದ ಗೆಳೆಯರಿದ್ದು, ಕೆಲವರು ನಿವೃತ್ತರಾಗಿದ್ದರೆ ಕೆಲವರು ನಿವೃತ್ತಿ ಅಂಚಿನಲ್ಲಿದ್ದರು. ಶಿವಮೊಗ್ಗದ ಹೌಸಿಂಗ್ ಬೋರ್ಡಿನಿಂದ ಮನೆ ಪಡೆದು ಅದನ್ನು ನವೀಕರಿಸಿ ಮೂರನೇ ಮಜಲಿನ ಜೀವನ ಆರಂಭಿಸಿದರು. ಎಂದಿನಂತೆ ಬರವಣಿಗೆಯನ್ನು ಮುಂದುವರೆಸಿದ್ದರು. ಅವರ ’ಗಮನ’ ಕೃತಿ ನಾಡಿನ ವಿದ್ವಾಂಸರ ಮೆಚ್ಚುಗೆಗೆ ಪಾತ್ರರಾಗಿ ಅವರ ಮುಂದಿನ ಕೃತಿಗಳ ಬಗ್ಗೆ ತುಂಬಾ ಭರವಸೆ ಮೂಡಿಸಿದ್ದರು.

ಅದರಲ್ಲೂ ’ಗಮನ’ ಕೃತಿಯಲ್ಲಿ ಅವರು ಮಾಸ್ತಿಯವರ ಸಾಹಿತ್ಯವನ್ನು ವಿಮರ್ಶಿಸಿರುವ ಪರಿಗೆ ವಿಮರ್ಶಾಲೋಕ ಬೆರಗುಗೊಂಡಿತ್ತು. ಆದರೆ, ಜಾತಿಗಳದ್ದೇನೂ ತಪ್ಪಿಲ್ಲ ಅದನ್ನ ಆಚರಿಸಿಕೊಂಡು ಹೋಗುವ ರೀತಿಯಲ್ಲಿ ಕೆಲವು ತಪ್ಪಿರಬಹುದೆಂದು ಹೇಳಿ, ತೇಜಸ್ವಿಯವರಿಂದ ಉಗ್ರವಾಗಿ ಟೀಕಿಸಿಕೊಂಡಿದ್ದ ಮಾಸ್ತಿಯವರ ಮನೋಭಿತ್ತಿಯನ್ನು ನಾಗಭೂಷಣ ಪ್ರಶ್ನೆ ಮಾಡಿರಲಿಲ್ಲ. ಇಂತಹದೊಂದು ಅನುಮಾನ ನಮ್ಮಲ್ಲಿ ಸದಾ ಉಳಿದಿತ್ತು. ಚರ್ಚೆಗೆ ಹೋದರೆ ಹಠಬಿದ್ದು ಜಗಳ ಆಡಿ ಸಂತೋಷದ ಸಂದರ್ಭಗಳನ್ನೇ ಹಾಳುಮಾಡಿಕೊಂಡು ಕೂರುವ ನಾಗಭೂಷಣರ ನಡವಳಿಕೆಗೆ ಹೆದರಿದ ಹಲವು ಮಿತ್ರರು ತೆಪ್ಪಗಾಗುತ್ತಿದ್ದರು. ನಾಗಭೂಷಣ ವಿದ್ವತ್ತಿನಷ್ಟೇ ಜಗಳಗಂಟರು. ಎಲ್ಲಾ ಸಂತೋಷದ ಸಮಯಗಳನ್ನು ಉಡಾಯಿಸಿ ಹೋಗುವ ಸೋಷಿಯಲಿಸ್ಟರ ಮುಖ್ಯಗುಣ ಅಥವಾ ಹುಟ್ಟುಗುಣ ಅದು ಅನ್ನಬಹುದು. ತಾವು ತಿಳಿದುಕೊಂಡ ಸತ್ಯಗಳನ್ನ ವಿನಯದಿಂದ ಪ್ರತಿಪಾದಿಸಿ ಜನಸಮೂಹದ ವಿಶ್ವಾಸ ಗಳಿಸುವಂತಹ ತಾಳ್ಮೆಯನ್ನೇ ಕಾಣದೇ ಕಣ್ಮರೆಯಾದ ಸೋಷಿಯಲಿಸ್ಟರ ದಂಡೇ ಇದೆ ಹಾಗೆ ನೋಡಿದರೆ ಈ ಸೋಷಿಯಲಿಸ್ಟರು ಹೋರಾಡಿದ್ದು ತಮ್ಮ ವಿರುದ್ಧವೇ ಹೊರತು ಇನ್ನಾರ ವಿರುದ್ಧವೂ ಅಲ್ಲ ಎಂಬುದೂ ಸಾಬೀತಾಗಿದೆ.

ನಾಗಭೂಷಣ ಬಹುದೊಡ್ಡ ವಿದ್ವಾಂಸ, ಸಾಹಿತ್ಯ ಮತ್ತು ರಾಜಾಕಾರಣದ ವಿಶ್ಲೇಷಣೆಯಲ್ಲಿ ದೈತ್ಯ ಪ್ರತಿಭೆ. ಆದರೆ ಅವರಿಗೂ ಎಲ್ಲರಂತೆ ಕೆಲವು ಪೂರ್ವಾಗ್ರಹಗಳಿದ್ದವು. ಪೂರ್ವಾಗ್ರಹದ ಒಂದು ಎಳೆಯಿದ್ದರು ಸಾಕು ಪ್ರಶ್ನೆಗಳನ್ನ ಎದುರಿಸಬೇಕಾಗುತ್ತದೆ. ಅದಾಗಲೇ ನಾಗಾಭೂಷಣ್ ಬರೆಯುವಂತಹ ಯಾವ ಪತ್ರಿಕೆಯೂ ಇರಲಿಲ್ಲ. ಇಂದೂಧರ ಹೊನ್ನಾಪುರ ತರುತ್ತಿದ್ದ ಸಂವಾದ ಮಾಸಿಕ ನಾಗಭೂಷಣರ ವಿಚಾರ ವಿಮರ್ಶೆಗೆ ತಕ್ಕ ಪತ್ರಿಕೆಯಾಗಿ ಗೋಚರಿಸಿತ್ತು. ಅದಕ್ಕೆ ಲೇಖನ ಬರೆದರು. ರಹಮತ್ ತರೀಕೆರೆಯಿಂದ ಪ್ರತಿಲೇಖನ ಬಂತು. ಅದನ್ನು ಪ್ರಕಟಿಸಿದ ಇಂದೂಧರರ ಮೇಲೆ ಸಿಟ್ಟಾದರು ನಾಗಭೂಷಣ. ಬೇರೆ ಪತ್ರಿಕೆ ತೆಗೆಯಲು ತಯಾರಾದರು. ಆಗ ಶಿವಮೊಗ್ಗದ ಬಹುಮತದ ಹಾಲಪ್ಪನವರು ಬಹುಮತ ಎಂಬ ಪತ್ರಿಕೆ ತರುತ್ತಿದ್ದರು. ಜಮೀನಿನಲ್ಲಿ ಬೆಳೆ ಬಂದಾಗ ಅದನ್ನು ಮಾರಿ ಪ್ರಕಟಿಸುತ್ತಿದ್ದರಿಂದ, ಭೂಮಿಯ ಬೆಳೆ ನೆಚ್ಚಿದ ಪತ್ರಿಕೆಯಾಗಿತ್ತದು! ಹಾಲಪ್ಪ ನಾಗಭೂಷಣರ ಗೆಳೆಯರಾಗಿದ್ದರು. ಎಲ್ಲಿ ತಮ್ಮ ಪತ್ರಿಕೆಯನ್ನ ಹಠಮಾರಿ ಸಿದ್ಧಾಂತಗಳಿಂದ ಹಾಳುಮಾಡುತ್ತಾರೋ ಎಂದು ನಾಗಭೂಷಣರಿಗೆ ಅವರು ಕೊಡಲೊಪ್ಪಲಿಲ್ಲ. ಇದರಿಂದ ಕೆರಳಿದ ನಾಗಭೂಷಣ ’ಹೊಸ ಮನುಷ್ಯ’ ಎಂಬ ನಿರಾಭರಣ ಸುಂದರಿಯಂತಹ ಪತ್ರಿಕೆ ತಂದೇಬಿಟ್ಟರು. ಚಂದಾದಾರರನ್ನೇ ನೆಚ್ಚಿದ ಆ ಪತ್ರಿಕೆಯನ್ನು ಹತ್ತು ವರ್ಷ ಮಾಸಿಕವಾಗಿ ತಂದರು. ಈ ಮನುಷ್ಯ ಸಂಗ್ರಹಯೋಗ್ಯವಾಗಿ ನಾಗಭೂಷಣರ ನೆನಪಾಗಿ ಉಳಿದಿದೆ.

ನಿಜವಾದ ಸೋಷಿಯಲಿಸ್ಟರು ಸರಕಾರಕ್ಕೆ ಯಾವತ್ತು ವಿರೋಧ ಪಕ್ಷವಾಗಿ ಕೆಲಸ ಮಾಡುತ್ತಾರೆ. ನಾಗಭೂಷಣ ಕಾಂಗ್ರೆಸ್ ಸರಕಾರಕ್ಕೆ ಸರಿಯಾದ ವಿರೋಧ ಪಕ್ಷವಾಗಿ ತುಂಬ ನಿಷ್ಠುರವಾಗಿಯೇ ಕೆಲಸ ಮಾಡಿದರು. ಕಾಂಗ್ರೆಸ್ ಕೊಟ್ಟ ರಾಜ್ಯೋತ್ಸವ ಪ್ರಶಸ್ತಿಯನ್ನು ಮೊದಲು ಒಪ್ಪಿಕೊಂಡು, ನಂತರ ನಿರಾಕರಿಸಿದರು. ಇದಕ್ಕೆ ಅವರು ಕೊಟ್ಟ ಕಾರಣಗಳಿಗಿಂತ, ಮೊದಲೇ ನಿರಾಕರಿಸಬಹುದಿತ್ತು ಎಂಬುದು ಗೆಳೆಯರ-ವಿದ್ವಾಂಸರ ಅಭಿಪ್ರಾಯವಾಗಿತ್ತು. ಅವರು ಕಾಂಗ್ರೆಸ್ ಸರ್ಕಾರವನ್ನ ಟೀಕಿಸಿದಂತೆ, ಯಡಿಯೂರಪ್ಪ, ಕುಮಾರಸ್ವಾಮಿ ಮತ್ತು ಮೋದಿ ಸರಕಾರವನ್ನು ಟೀಕಿಸಲಿಲ್ಲ. ಬರುಬರುತ್ತ ಆ ಕಾಂಗ್ರೆಸ್‌ಗೆ ಸರಿಯಾದ ಉತ್ತರಕೊಡಲು ನಮ್ಮ ನಾಗಭೂಷಣರೇ ಸರಿ ಎಂದು ಆರೆಸ್ಸೆಸಿಗರು ಮಾತನಾಡಿಕೊಳ್ಳುವಂತಾಯ್ತು. ಮೋದಿ ಸರ್ಕಾರದ ಕೃಷಿಕಾಯ್ದೆ ಪ್ರತಿಭಟನೆಗೆ ಐದುನೂರು ಜನ ರೈತರು ಬಲಿಯಾದರು. ಈ ಬಗ್ಗೆ ನಾಗಭೂಷಣ ಏನೂ ಬರೆಯದೆ ರೈತ ಮುಖಂಡರಿಂದಲೇ ಲೇಖನ ಆಹ್ವಾನಿಸಿದರು. ತಮ್ಮ ಮನೆಬಾಗಿಲಲ್ಲೆ ರೈತರ ಸಭೆ ನಡೆದು ಟಿಕಾಯತ್ ಬಂದಾಗ ಏನೂ ಬರೆಯಲಿಲ್ಲ. ನನಗೆ ಸಿಟ್ಟು ಬಂದು ನಾಗಭೂಷಣನದ್ದು ಹೊಸ ಮನುಷ್ಯ ಅಲ್ಲ ವೃಣ ಮನುಷ್ಯ, ಆತ ಬಿಜೆಪಿ ಪರ ಇದ್ದಾನೆ ಎಂದು ಟೀಕಿಸಿದೆ. ಇದಕ್ಕೆ ಕಾರಣ ಆತ ಗೌರಿ ಲಂಕೇಶ್ ಬಗ್ಗೆ ಏನೂ ಬರೆದಿರಲಿಲ್ಲ, ಸಂತಾಪ ಸೂಚಕವನ್ನು ಹಾಕಿರಲಿಲ್ಲ ಎನ್ನುವುದಾಗಿತ್ತು. ಬದಲಿಗೆ ರಾಮಜೋಯಿಸನೆಂಬ ಮೀಸಲಾತಿ ವಿರೋಧಿಯ ಸಾವಿಗೆ ಸಂತಾಪ ಬರೆದಿದ್ದರು. ಇದನ್ನು ಕೇಳಿಸಿಕೊಂಡವನೊಬ್ಬ ನನ್ನ ಟೀಕೆಯನ್ನು ಅವರಿಗೆ ಹೇಳಿದ್ದ. ಇದರ ಅರಿವಿರದ ನಾನು ’ಹೊಸಮನುಷ್ಯದ ಚಂದಾ ಕೊಡಲು ಮನೆಗೆ ಹೋದೆ. ಹೋದಕೂಡಲೇ “ಏನ್ರೀ ನೀವು ನನ್ನನ್ನ ಬಿಜೆಪಿ ಏಜೆಂಟ್ ಅನ್ನಂಗೆ ಮಾತಾಡಿದ್ದೀರಿ. ರಾಘವೇಂದ್ರ ಪಾಟೀಲ್ ಹೇಳಿದ” ಎಂದು ರೇಗಿದರು. ಮನೆಗೆ ಬಂದವನೊಡನೆ ಜಗಳಕ್ಕೆ ಬೀಳುವುದು ಸುಲಭದ ಮಾತಲ್ಲ. ಆದರೂ ಅಂತಹ ಶಕ್ತಿ ನಾಗಭೂಷಣರಿಗಿತ್ತು. ನಾನು ನಿರಾಕರಿಸಲಿಲ್ಲ. “ಯಾಕಂಗಂದೆ ಅಂದ್ರೆ ಸಾರ್, ನೀವು ರಫೇಲ್ ಹಗರಣದ ಬಗ್ಗೆ ಬರೀತಾ ತ್ವರಿತವಾಗಿ ಈ ಒಪ್ಪಂದವನ್ನು ಮುಗಿಸಿದ್ದಾರೆಯೇ ಹೊರತು, ಇದರಿಂದ ಮೋದಿಗೆ ಯಾವುದೇ ಸ್ವಹಿತಾಸಕ್ತಿಯಿಲ್ಲ ಅಂತ ಬರೆದಿದ್ದೀರಿ” ಅಂದೆ. “ನಾನು ಬರೆದಿದ್ದೀನಾ” ಅಂದ್ರು. “ಹೌದು ಸಾರ್ ಸಂಪಾದಕೀಯನೇ ಬರೆದಿದ್ದೀರಿ” ಅಂದೆ. ಕೂಡಲೇ, ಸವಿತಾ ಅವರಿಗೆ ಹುಡುಕಲು ಹೇಳಿದರು. ನಾನು “ಹುಡುಕಬೇಡಿ ಮೇಡಂ, ನಾನೇ ಕಳಿಸ್ತೀನಿ” ಎಂದೆ. ಏಕೆಂದರೆ ನಾಗಭೂಷಣರಿಗೆ ಏನೇ ಹೇಳೀದರು ಅದನ್ನು ಹುಡುಕುವ ಜವಾಬ್ದಾರಿ ಸವಿತಾ ಮೇಲೆ ಬೀಳುತ್ತಿತ್ತು. “ಅಲ್ಲ ಸಾರ್ ಕ್ಯಾರವಾನ್ ಪತ್ರಿಕೆ ರಫೇಲ್ ಹಗರಣ ಬಗ್ಗೆ ಮೂವತ್ತು ಪೇಜ್ ಬರೆದಿದೆ. ನೀವು ಹಿಂಗೆ ಬರಿತಿರಿ” ಎಂದೆ. ನಾಗಭೂಷಣ್ ಒಳಗಣ್ಣಾದರು. ಸವಿತಾ ಕೊಟ್ಟ ಕಾಫಿ ಕುಡಿದು, ಪತ್ರಿಕೆ ಚಂದಾಕೊಟ್ಟು ಬಂದೆ.

ನಂತರ ಶಾಮಣ್ಣನವರ ಬಗ್ಗೆ ಅಭಿನಂದನಾ ಗ್ರಂಥ ತರುವಾಗ ನನ್ನನ್ನು ಸೇರಿಸಿಕೊಂಡಿದ್ದರು. ಎಂ.ಬಿ ನಟರಾಜ್, ನಾನು ಮತ್ತು ನಾಗಭೂಷಣ್ ನೇತೃತ್ವದಲ್ಲಿ ಗ್ರಂಥ ಹೊರಬರುವಾಗ ಅದಕ್ಕೆ ಎಸ್.ಎಲ್ ಭೈರಪ್ಪನವರ ಅಭಿಪ್ರಾಯ ಸೇರಿಸುವ ಪ್ರಸ್ತಾಪವನ್ನು ನಾಗಭೂಷಣ್ ಮುಂದಿಟ್ಟರು. ಪ್ರಕಾಶಕಿ ಅಕ್ಷತಾ ಈ ಬಗ್ಗೆ ನನ್ನನ್ನ ಕೇಳಿದರು. “ಅಲ್ಲವ್ವಾ, ಭೈರಪ್ಪನ ಸಾಹಿತ್ಯಕ್ಕೂ, ಶಾಮಣ್ಣನ ಬದುಕಿಗೂ ಏನಾದರೂ ಸಂಬಂಧವಿದೆಯಾ. ಒಂದೆರಡು ಮೂರು ಕೃತಿಬಿಟ್ಟರೆ ಆತ ಬರೆದುದೆಲ್ಲಾ ರಾಷ್ಟ್ರೋತ್ಥಾನ ಸಾಹಿತ್ಯ-ಸಿದ್ಧಾಂತಕ್ಕೆ ಅಂದೆ”. ಆದರೆ ನಾಗಭೂಷಣರ ಹಠವೇ ಗೆದ್ದು, ಭೈರಪ್ಪನ ಅಭಿಪ್ರಾಯ ತುರುಕಲಾಯ್ತು.

ಶಿವಮೊಗ್ಗದಲ್ಲಿ ನಡೆದ ದಕ್ಷಿಣಾಯನ ಕಾರ್ಯಕ್ರಮವನ್ನೂ ಅವರು ಕಟುವಾಗಿ ಟೀಕಿಸಿದ್ದರು. ಬೆಂಗಳೂರಲ್ಲಿ ನಡೆದ ರಾಷ್ಟ್ರಮಟ್ಟದ ಅಂಬೇಡ್ಕರ್ ಸೆಮಿನಾರುಗಳ ಬಗ್ಗೆ ಕೂತಲ್ಲೇ ಚಾಡಿಮಾತು ಕೇಳಿ ಟೀಕಿಸಿ ಬರೆದಿದ್ದರು. ಟೀಕೆಗೆ ಜಗಳಕ್ಕೆ ಬಗ್ಗಿಹೋದ ಮನಸ್ಸುಗಳಿಗೆ ಸಕಾರಾತ್ಮಕವಾದದ್ದು ಕಾಣುವುದೇ ಇಲ್ಲ. ಟೀಕಿಸಿದ ನಂತರವೇ ತಮ್ಮ ಅಸಹನೆಯನ್ನು ಶಮನಗೊಳಿಸಿಕೊಳ್ಳುವ ಸ್ಥಿತಿ ತಲುಪಿದ್ದರೇನೋ! ವ್ಯಕ್ತಿಗಳಲ್ಲಿನ ಅಭಿಪ್ರಾಯ ಭೇದಗಳು ಜಗಳಗಳಾಗಿ ಸಂವಾದ-ಸಂವಹನಗಳಲ್ಲಿ ಸಾಂತ್ವನ ಕಾಣುವ ವಾತಾವರಣ ನಾಗಭೂಷಣರ ಆವರಣದಲ್ಲಿ ಸುಳಿಯಲೇ ಇಲ್ಲ. ಮುನಿಸಿಕೊಂಡು ದಿಕ್ಕೆಟ್ಟು ಹೋದ ಉದಾಹರಣೆಗಳು ಹೇರಳವಾಗಿವೆ.

ಅವರು ’ಹೊಸ ಮನುಷ್ಯ’ ಸಂಚಿಕೆಗಳ ತಮ್ಮ ಬರವಣಿಗೆಯಲ್ಲಿ ನಮಗೆಲ್ಲಾ ಮೂಡಿಸಿದ್ದ ಅಸಹನೆ ಮತ್ತು ಸಿಟ್ಟುಗಳೆಲ್ಲಾ ಕರಗಿಹೋದದ್ದು ಅವರು ’ಗಾಂಧಿ ಕಥನ’ ಬರೆದು ಪ್ರಕಟಿಸಿದ ಮೇಲೆ. ಆವರೆಗೂ ನಾವೂ ಗಾಂಧಿ ಭಕ್ತರಿಂದ ರಚನೆಯಾದ ಗಾಂಧಿಯವರ ಜೀವನಚಿತ್ರಗಳನ್ನು ಓದಿದ್ದಕ್ಕೂ ನಾಗಭೂಷಣರ ಗಾಂಧಿಕಥನ ಓದಿದ್ದಕ್ಕೂ ಅಜಗಜಾಂತರ ವ್ಯತ್ಯಾಸವಿತ್ತು. ನಮಗೆ ಗಾಂಧಿ ಇಡಿಯಾಗಿ ಸಿಕ್ಕಿದ್ದು ನಾಗಭೂಷಣರಿಂದಲೇ. ಅದೂ ಗಾಂಧಿ ಕೊಂದವರನ್ನು ಆರಾಧಿಸುವವರ ಕೈಗೆ ಸಿಕ್ಕಿ ಈ ದೇಶ ನರಳುತ್ತಿರುವಾಗ ಹೊರಬಂದ ಗಾಂಧಿಕಥನ ಬಿಡುವಿಲ್ಲದ ಮರುಮುದ್ರಣ ಕಂಡಿತು. ಹಾಗೆ ನೋಡಿದರೆ ಗಾಂಧೀಜಿಯ ಮುಂದುವರಿಕೆಯಾಗಿ ಸಮಾಜವಾದಿಗಳು ನಮಗೆ ದಾರಿದೀಪವಾಗಬೇಕಿತ್ತು. ಆದರೆ ಸಮಾಜವಾದಿಗಳು ಯಾದವೀ ಕಲಹದಲ್ಲಿ ಮುಳುಗಿಹೋದರೆ ಕಾಂಗ್ರೆಸ್ಸಿಗರು ಗಾಂಧಿ ಎಂತಹ ಜನರನ್ನ ಸೃಷ್ಟಿಸಿ ಹೋಗಿದ್ದಾನಲ್ಲಪ್ಪ ಎನ್ನುವಂತೆ ಮಾಡಿದರು. ನಾಗಭೂಷಣರ ಕಾಂಗ್ರೆಸ್ ವಿರೋಧ ಲೋಹಿಯಾ ಕಾಲದ್ದು. ಆದರೀಗ ಪರಿಸ್ಥಿತಿ ಬದಲಾಗಿದೆ. ಅದಕ್ಕಿಂತಲೂ ದೊಡ್ಡ ಕೆಡುಕು ದೇಶವನ್ನು ಬಾಧಿಸುತ್ತಿದೆ. ನಾಗಭೂಷಣ್‌ಗೆ ದಲಿತರು ಮತ್ತು ಮುಸ್ಲಿಮರ ಬಗ್ಗೆ ಕೆಲವು ಪೂರ್ವಾಗ್ರಹಗಳಿದ್ದವು. ಅದಕ್ಕೆ ಸಕಾರಣಕೊಟ್ಟು ವಾದಿಸುತ್ತಿದ್ದರು.

ಅಂಬೇಡ್ಕರ್ ಬಗ್ಗೆಯೂ ನಾಗಭೂಷಣ್ ಚಿಂತನೆ ಗೊಂದಲಮಯವಾಗಿತ್ತು. ಗಾಂಧಿ ಕಥನದಲ್ಲಿ ಅಂಬೇಡ್ಕರನ್ನು ಉದ್ದೇಶಪೂರ್ವಕವಾಗಿ ಬದಿಗೆ ಸರಿಸಿದ್ದಾರೆಂದು ದಲಿತರು ದೂರುವುದರಲ್ಲಿ ನಿಜಾಂಶವಿದೆ. ಅವರು ಶಿವಮೊಗ್ಗಕ್ಕೆ ಬಂದಾಗ ಗೆಳೆಯರ ಮನೆಗಳಲ್ಲಿ ಸೇರುತ್ತ ಹರಟೆಯೊಂದಿಗೆ ನಮ್ಮ ಕಾಲದ ಹಾಡುಗಳನ್ನು ಹೇಳುತ್ತ ಖುಷಿಪಡುತ್ತಿದ್ದ ಕಾಲವೊಂದಿತ್ತು. ಮತೀಯವಾದಿಗಳು ದೇಶದ ಅಧಿಕಾರ ಹಿಡಿದ ಮೇಲೆ ಆ ದಿನಗಳು ಕಾಣೆಯಾದವು. ಇಡೀ ದೇಶವೇ ಕ್ಷೋಭೆಗೊಂಡಾಗ ನಮ್ಮ ಮಾತು ಹಾಡು ಜಾನಪದಕ್ಕೆ ಬದಲಾಗಿ ಜಗಳಗಳು ಕಾಣಿಸಿಕೊಂಡವು. ಮನೆಯಲ್ಲೊಬ್ಬನಿಗೆ ತಲೆಕೆಟ್ರೆ ಇಡೀ ಮನೆಯ ಸಂಭ್ರಮವೇ ಹಾಳಾಗುವಂತೆ ರಾಜ್ಯ ದೇಶವೆಲ್ಲಾ ಕ್ಷೋಬೆಗೆ ತುತ್ತಾಗಿರುವ ಈ ಸಮಯದಲ್ಲಿ ನಾಗಭೂಷಣರ ನಿರ್ಗಮನ ಇಚ್ಛಾಮರಣದಂತೆ ಕಾಣುತ್ತಿದೆ. ಆ ಪ್ರಶಾಂತ ಮುಖಭಾವವೇ ಅದನ್ನ ಹೇಳುತ್ತಿತ್ತು. ಇನ್ನು ನಾಗಭೂಷಣರ ಜತೆಯಾಗಿ ಸವಿತಾ ನಾಗಭೂಷಣ ಅವರನ್ನು ಕಾಪಾಡಿದ ರೀತಿಗೆ ಅವರನ್ನು ಒಬ್ಬ ಅಸಾಮಾನ್ಯ ಮಹಿಳೆ ಅನ್ನುವುದಕ್ಕಿಂತ ತಾಯಿ ಹೃದಯಿ ಅನ್ನಬಹುದು.

ಬಿ. ಚಂದ್ರೇಗೌಡ

ಬಿ. ಚಂದ್ರೇಗೌಡ
ಲಂಕೇಶ್‌ರ ಪತ್ರಿಕೆಯಲ್ಲಿ ಬಯಲುಸೀಮೆಯ ಕಟ್ಟೆ ಪುರಾಣದ ಮೂಲಕ ಕನ್ನಡಿಗರೆಲ್ಲರ ಗಮನಕ್ಕೆ ಬಂದ ಚಂದ್ರೇಗೌಡರು, ನಾಟಕಕಾರರು, ನಟರಷ್ಟೇ ಅಲ್ಲ ವಿಶಿಷ್ಟ ರಾಜಕೀಯ ನೋಟವುಳ್ಳವರೂ ಸಹಾ.
ಕರ್ನಾಟಕದ ಸಾಂಸ್ಕೃತಿಕ ಹಾಗೂ ರಾಜಕೀಯ ಇತಿಹಾಸದ ಆಗುಹೋಗುಗಳು ಅವರಲ್ಲಿ ದಾಖಲಾಗಿರುವ ಬಗೆಯೂ ವಿಶಿಷ್ಟವೇ..


ಇದನ್ನೂ ಓದಿ: ಎರಡೂವರೆ ಸಾವಿರ ಕೋಟಿ ಹುಣಸಿ ಪಿಕ್ಕ ಅನಕೊಂಡಿರೇನ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...