Homeಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆತುಮಕೂರು ಗ್ರಾಮಾಂತರ: ಬಿ.ಸುರೇಶ್‌ಗೌಡ ಮತ್ತು ಡಿ.ಸಿ ಗೌರಿಶಂಕರ್‌ ನಡುವಿನ ಹೊಡಿ ಬಡಿ ಕದನ

ತುಮಕೂರು ಗ್ರಾಮಾಂತರ: ಬಿ.ಸುರೇಶ್‌ಗೌಡ ಮತ್ತು ಡಿ.ಸಿ ಗೌರಿಶಂಕರ್‌ ನಡುವಿನ ಹೊಡಿ ಬಡಿ ಕದನ

ಜೆಡಿಎಸ್ ಮತ್ತು ಬಿಜೆಪಿ ನಡುವೆ ಮಾತ್ರ ನಡೆಯುತ್ತಿದ್ದ ಫೈಟ್‌ಗೆ ಈ ಬಾರಿ ಕಾಂಗ್ರೆಸ್ ಕೂಡ ಎಂಟ್ರಿ ಕೊಟ್ಟಿದೆ.

- Advertisement -
- Advertisement -

ಕೋರ, ಗೂಳೂರು, ಹೆಬ್ಬೂರು, ಬೆಳ್ಳಾವಿ ಕ್ಷೇತ್ರಗಳ ಹೆಸರಿನಲ್ಲಿದ್ದ ಹಲವು ಹೋಬಳಿಗಳನ್ನು ಒಳಗೊಂಡ ತುಮಕೂರು ಗ್ರಾಮಾಂತರ ಕ್ಷೇತ್ರವನ್ನು 2008ರಲ್ಲಿ ನಡೆದ ಕ್ಷೇತ್ರಗಳ ಪುನರ್ ವಿಂಗಡಣೆ ಸಮಯದಲ್ಲಿ ಸೃಷ್ಟಿಸಲಾಯಿತು. ತುಮಕೂರು ನಗರದ ಸುತ್ತಲೂ ಹಬ್ಬಿಕೊಂಡಿರುವ ಸಾಮಾನ್ಯ ವಿಧಾನಸಭಾ ಕ್ಷೇತ್ರ ಇದಾಗಿದೆ.

ರಾಜಕೀಯ ಇತಿಹಾಸ

2008ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಬಿಜೆಪಿಯಿಂದ ಬಿ.ಸುರೇಶ್‌ ಗೌಡರವರು ಸ್ಪರ್ಧಿಸಿದರು. ಜೆಡಿಎಸ್ ಪಕ್ಷದಿಂದ ಎಚ್.ನಿಂಗಪ್ಪ ಕಣಕ್ಕಿಳಿದಿದ್ದರು. ಕಾಂಗ್ರೆಸ್‌ನಿಂದ ಅರೆಕೆರೆ ರುದ್ರೇಶ್ ಅಭ್ಯರ್ಥಿಯಾಗಿದ್ದರು. ಆಗ ಬಿ.ಸುರೇಶ್‌ಗೌಡರವರು 60,904 ಮತಗಳನ್ನು ಪಡೆದು ಸಮೀಪದ ಅಭ್ಯರ್ಥಿ ಜೆಡಿಎಸ್‌ನ ನಿಂಗಪ್ಪರವರ ಎದುರು 28,392 ಮತಗಳ ಬೃಹತ್ ಅಂತರದಿಂದ ಗೆಲುವು ಸಾಧಿಸಿದರು. ನಿಂಗಪ್ಪನವರು 32,512 ಮತಗಳನ್ನು ಪಡೆದರೆ ಕಾಂಗ್ರೆಸ್‌ನ ಅರೆಕೆರೆ ರುದ್ರೇಶ್‌ರವರು 21,642 ಮತಗಳಿಗೆ ಸೀಮಿತಗೊಂಡರು.

ಕೊರಟಗೆರೆಯಿಂದ ಮೂರು ಬಾರಿ ಆರಿಸಿ ಬಂದಿದ್ದ ಚೆನ್ನಿಗಪ್ಪನವರ ಪುತ್ರ ಡಿ.ಸಿ ಗೌರಿಶಂಕರ್‌ರವರು 2008ರಲ್ಲಿ ಮಧುಗಿರಿ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಆನಂತರ ಆಪರೇಷನ್ ಕಮಲಕ್ಕೆ ಒಳಗಾಗಿದ್ದ ಮತ್ತೆ 2013ರ ಚುನಾವಣೆ ವೇಳೆಗೆ ಜೆಡಿಎಸ್‌ ಸೇರಿ ತುಮಕೂರು ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿಯಾದರು. ಆಗ ಹಾಲಿ ಶಾಸಕ ಬಿ. ಸುರೇಶ್‌ ಗೌಡರವರು ಮರು ಆಯ್ಕೆ ಬಯಸಿ ಬಿಜೆಪಿಯಿಂದ ಕಣಕ್ಕಿಳಿದರು. ಇವರಿಬ್ಬರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತು; 1,572 ಮತಗಳ ಅಂತರದಲ್ಲಿ ಬಿಜೆಪಿಯ ಸುರೇಶ್‌ ಗೌಡರವರು ಮರು ಆಯ್ಕೆಯಾದರು. ಅವರು 55,029 ಮತಗಳನ್ನು ಪಡೆದರೆ ಗೌರಿಶಂಕರ್‌ರವರು 53,457 ಮತಗಳನ್ನು ಪಡೆದರು. ಆ ಚುನಾವಣೆಯಲ್ಲಿ ಕೆಜೆಪಿ ಸೇರಿದ್ದ ಎಚ್.ನಿಂಗಪ್ಪನವರು 22,709 ಮತಗಳನ್ನು ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ಆಡಿಟರ್ ನಾಗರಾಜುರವರು ಕೇವಲ 8,599 ಮತಗಳಿಗೆ ಕುಸಿದರು.

2018ರಲ್ಲಿ ಮತ್ತೆ ಬಿ.ಸುರೇಶ್‌ಗೌಡ ಮತ್ತು ಡಿ.ಸಿ ಗೌರಿಶಂಕರ್‌ ನಡುವೆ ಜಿದ್ದಾಜಿದ್ದಿ ನಡೆಯಿತು. ಬಿಜೆಪಿಯ ಸುರೇಶ್‌ಗೌಡರವರ ಹ್ಯಾಟ್ರಿಕ್ ಗೆಲುವಿಗೆ ತಡೆಯೊಡ್ಡಿದ ಜೆಡಿಎಸ್‌ನ ಗೌರಿಶಂಕರ್‌ರವರು 5,640 ಮತಗಳ ಅಂತರದಲ್ಲಿ ಗೆದ್ದುಬಂದರು. ಗೌರಿಶಂಕರ್ 82,740 ಮತಗಳನ್ನು ಪಡೆದರೆ, ಸುರೇಶ್‌ಗೌಡರು 77,100 ಮತಗಳನ್ನು ಪಡೆದಿದ್ದರು. ಕಾಂಗ್ರೆಸ್ ಅಭ್ಯರ್ಥಿ ರಾಯಸಂದ್ರ ರವಿಕುಮಾರ್ ಕೇವಲ 7,633 ಮತಗಳಿಗೆ ಕುಸಿದರು. ಈ ಚುನಾವಣೆಯಲ್ಲಿ ಅಕ್ರಮ ನಡೆಸಿ, ಬಾಂಡ್ ವಿತರಿಸಿ ಗೌರಿಶಂಕರ್ ಗೆಲುವು ಸಾಧಿಸಿದ್ದಾರೆ ಎಂದು ಸುರೇಶ್‌ಗೌಡರು ಆರೋಪಿಸಿದ್ದರು. ಅಲ್ಲದೆ ಗೌರಿ ಶಂಕರ್‌ರವರ ಶಾಸಕ ಸ್ಥಾನ ಅನರ್ಹಗೊಳಿಸಬೇಕೆಂದು ದೂರು ನೀಡಿದ್ದು, ಕರ್ನಾಟಕ ಹೈಕೋರ್ಟ್ ಈ ಪ್ರಕರಣದ ವಿಚಾರಣೆ ನಡೆಸುತ್ತಿದೆ.

‘ಆರ್‌ಎಸ್‌ಎಸ್‌ನಂಥ ಭ್ರಷ್ಟರು ಮತ್ಯಾರು ಇಲ್ಲ. ಸುಮ್ಮನೇ ದೇಶಪ್ರೇಮ ಅನ್ನುತ್ತಾರೆ. ಆದರೆ ಅವರು ಭಾರೀ ಭ್ರಷ್ಟರು. ನಮ್ಮ ಕರ್ನಾಟಕದ ಆರ್‌ಎಸ್‌ಎಸ್‌ ಮುಖಂಡರನ್ನು ನೋಡಿ ಎಷ್ಟು ಹಣ ಮಾಡಿದ್ದಾರೆ’ ಎಂದಿದ್ದ ಸುರೇಶ್‌ಗೌಡರ ಹೇಳಿಕೆ ವಿವಾದಕ್ಕೆ ಎಡೆಮಾಡಿಕೊಟ್ಟಿತ್ತು. ಯಡಿಯೂರಪ್ಪನವರನ್ನು ಹೊಗಳಿದ್ದ ಅವರು 2018ರಲ್ಲಿ ಸೋತ ನಂತರ ಕ್ಷೇತ್ರದಲ್ಲಿದ್ದು ಮುಂದಿನ ಚುನಾವಣೆಗೆ ತಯಾರಿ ನಡೆಸಿದ್ದಾರೆ.

ಅಂದಾಜು ಜಾತಿವಾರು ಮತಗಳು

ಒಟ್ಟು ಮತಗಳು: 2,10,000; ಒಕ್ಕಲಿಗರು: 60,000; ಲಿಂಗಾಯಿತ: 40,000; ಪ.ಜಾ: 37,000; ಮುಸ್ಲಿಂ: 21,000; ಪ.ಪಂ: 15,000; ಕುರುಬ: 10,000; ಇತರೆ: 27,000

ಹಾಲಿ ಪರಿಸ್ಥಿತಿ

ಎರಡನೇ ಬಾರಿಗೆ ಶಾಸಕರಾಗಿರುವ ಗೌರಿಶಂಕರ್‌ರವರು ಕಾಂಗ್ರೆಸ್ – ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಎಂಎಸ್‌ಐಎಲ್ ನಿಗಮದ ಅಧ್ಯಕ್ಷರಾಗಿದ್ದರು. ಆನಂತರ ಸುರೇಶ್‌ಗೌಡರೊಂದಿಗಿನ ಜಗಳದಲ್ಲಿಯೇ ಹೆಚ್ಚು ಚರ್ಚೆಯಲ್ಲಿದ್ದಾರೆ.

ತುಮಕೂರಿನ ರಾಜಕೀಯ ರೌಡಿಸಂ ಇದ್ದ ಹಾಗೆ ಇರುತ್ತದೆ. ಇಲ್ಲಿ ಬಿ.ಸುರೇಶ್ ಗೌಡ ಮತ್ತು ಗೌರಿಶಂಕರ್‌ ಒಬ್ಬರಿಗೊಬ್ಬರು ಕುಸ್ತಿ ಆಡುವ ರೀತಿ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡುತ್ತಿರುತ್ತಾರೆ. ತನ್ನ ಕೊಲೆಗೆ ಶಾಸಕ ಗೌರಿ ಶಂಕರ್ ಸುಪಾರಿ ಕೊಟ್ಟಿದ್ದಾರೆ ಎಂದು ಇತ್ತೀಚೆಗೆ ಸುರೇಶ್‌ಗೌಡರು ಆರೋಪಿಸಿ ಪೊಲೀಸ್ ದೂರು ನೀಡಿದ್ದು ಹಾಲಿ ಶಾಸಕರ ಮೇಲೆ ಎಫ್‌ಐಆರ್ ಕೂಡ ದಾಖಲಾಗಿದೆ.

ಇನ್ನೊಂದೆಡೆ ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿರುವ ಗೌರಿಶಂಕರ್ ಸುರೇಶ್‌ಗೌಡರಿಂದ ತಮ್ಮ ಜೀವಕ್ಕೆ ಅಪಾಯವಿದೆ ಎಂದು ಪ್ರತಿ ದೂರು ನೀಡಿದ್ದಾರೆ. ಇವರಿಬ್ಬರ ಜಗಳ ಈ ರೀತಿ ಇದ್ದರೆ ಅವರ ಕಾರ್ಯಕರ್ತರೂ ಕಡಿಮೆಯೇನಿಲ್ಲ. ಪ್ರತಿ ಊರಿನಲ್ಲಿ ಗೌರಿಶಂಕರ್ ಮತ್ತು ಸುರೇಶ್‌ಗೌಡರ ಬಣಗಳಿದ್ದು ಪರಸ್ಪರ ಹೊಡೆದಾಡಿರುವ ಘಟನೆಗಳು ವರಿದಿಯಾಗಿವೆ. ಇದು ಅಪಾಯಕಾರಿ ಮಟ್ಟ ತಲುಪಿರುವುದರಿಂದ ಬೇರೆ ಯಾವುದೇ ಅಭ್ಯರ್ಥಿಗಳು ಇಲ್ಲಿ ಬೆಳೆಯಲು ಸಾಧ್ಯವಾಗಿಲ್ಲ ಎಂದು ವಿಶ್ಲೇಷಿಸಲಾಗುತ್ತದೆ.

ಬಿಜೆಪಿಯಿಂದ ಮಾಜಿ ಶಾಸಕ ಬಿ.ಸುರೇಶ್‌ಗೌಡರವರಿಗೆ ಟಿಕೆಟ್ ಖಚಿತವಾಗಿದೆ. ಅವರು ತನ್ನ ಆಡಳಿತಾವಧಿಯಲ್ಲಿ ಆದ ಕೆಲಸಗಳನ್ನು ನೋಡಿ ಮತ ಕೊಡಿ ಎನ್ನುತ್ತಿದ್ದಾರೆ.

ಕಾಂಗ್ರೆಸ್‌ನಿಂದ ಮಾಜಿ ಶಾಸಕರಾದ ಎಚ್.ನಿಂಗಪ್ಪರವರಿಗೆ ಟಿಕೆಟ್ ಪಕ್ಕಾ ಎನ್ನಲಾಗುತ್ತಿದೆ. ಜೆಡಿಎಸ್‌ನಲ್ಲಿ ಟಿಕೆಟ್‌ ಸಿಗುವುದಿಲ್ಲ ಎಂದು ತಿಳಿಯುತ್ತಲೇ ಅವರು ಕಾಂಗ್ರೆಸ್ ಸೇರಿದ್ದಾರೆ. ಹಲವು ಸೋಲುಗಳನ್ನು ಕಂಡಿರುವ ಅವರು ಮತ್ತೊಂದು ಪ್ರಯತ್ನ ನಡೆಸುತ್ತಿದ್ದಾರೆ. ಇನ್ನು ಕೆಪಿಸಿಸಿ ಕಾನೂನು ವಿಭಾಗದ ಸೂರ್ಯ ಮುಕುಂದ್‌ರಾಜ್ ಮತ್ತು ಶ್ರೀನಿವಾಸ್‌ರವರು ಸಹ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.

ಎಚ್.ನಿಂಗಪ್ಪ

ಜೆಡಿಎಸ್‌ನಿಂದ ಗೌರಿಶಂಕರ್‌ರವರಿಗೆ ಟಿಕೆಟ್ ಘೋಷಣೆಯಾಗಿದೆ. ಆದರೆ ಅವರ ಮೇಲಿರುವ ಚುನಾವಣಾ ಅಕ್ರಮ ಪ್ರಕರಣದ ತೀರ್ಪು ಯಾವಾಗ ಹೊರಬೀಳಲಿದೆ ಎಂಬುದು ಗೊತ್ತಿಲ್ಲ. ಅವರ ಪರವಾಗಿ ತೀರ್ಪು ಬಂದಲ್ಲಿ ನಿರಾಂತರವಾಗಿ ಚುನಾವಣೆ ಎದುರಿಸಬಹುದು. ಒಂದು ಪಕ್ಷ ತೀರ್ಪು ವಿರುದ್ಧವಾಗಿ, ಅವರು ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎಂದಾದರೆ ಸಂಕಷ್ಟಕ್ಕೆ ಸಿಲುಕಿಕೊಳ್ಳಲಿದ್ದಾರೆ. ಆಗ ಅವರು ಮತ್ತೆ ಸುಪ್ರೀಂ ಕೋರ್ಟ್ ಕದ ತಟ್ಟಬೇಕಿರುತ್ತದೆ.

ಒಟ್ಟಾರೆಯಾಗಿ ಹೇಳುವುದಾದರೆ ಜೆಡಿಎಸ್ ಮತ್ತು ಬಿಜೆಪಿ ನಡುವೆ ಮಾತ್ರ ನಡೆಯುತ್ತಿದ್ದ ಫೈಟ್‌ಗೆ ಈ ಬಾರಿ ಕಾಂಗ್ರೆಸ್ ಕೂಡ ಎಂಟ್ರಿ ಕೊಟ್ಟಿದೆ. ಮೇಲ್ನೋಟಕ್ಕೆ ತ್ರಿಕೋನ ಸ್ಪರ್ಧೆ ಎನಿಸಿದರೂ ಈಗಲೂ ನೇರಾ ನೇರ ಪೈಪೋಟಿ ಇರುವುದು ಜೆಡಿಎಸ್ ಮತ್ತು ಬಿಜೆಪಿ ನಡುವೆ ಮಾತ್ರ. ಯಾರೇ ಗೆದ್ದರೂ ಅಂತರ ಬಹಳ ಕಡಿಮೆ ಇರಲಿದೆ.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ತುಮಕೂರು ನಗರ ವಿಧಾನಸಭಾ ಕ್ಷೇತ್ರ: ಬಿಜೆಪಿ ಕಚ್ಚಾಟದ ಲಾಭ ಕಾಂಗ್ರೆಸ್‌ಗೊ, ಜೆಡಿಎಸ್‌ಗೊ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...