Homeಅಂಕಣಗಳುಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ತುಮಕೂರು ನಗರ ವಿಧಾನಸಭಾ ಕ್ಷೇತ್ರ: ಬಿಜೆಪಿ ಕಚ್ಚಾಟದ ಲಾಭ ಕಾಂಗ್ರೆಸ್‌ಗೊ,...

ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ತುಮಕೂರು ನಗರ ವಿಧಾನಸಭಾ ಕ್ಷೇತ್ರ: ಬಿಜೆಪಿ ಕಚ್ಚಾಟದ ಲಾಭ ಕಾಂಗ್ರೆಸ್‌ಗೊ, ಜೆಡಿಎಸ್‌ಗೊ?

- Advertisement -
- Advertisement -

ತೆಂಗು ಬೆಳೆಯುವ ಕಲ್ಪತರು ನಾಡು, ಅಕ್ಷರ ದಾಸೋಹ ನೀಡಿದ ಸಿದ್ಧಗಂಗಾ ಸ್ವಾಮೀಜಿಗಳು ನಡೆದಾಡಿದ ಬೀಡು, ಶಿಕ್ಷಣ-ಕೈಗಾರಿಕೆ-ಪ್ರವಾಸಿತಾಣಗಳಿಗೆ ಹೆಸರಾದ ನೆಲೆವೀಡು ತುಮಕೂರು. ಟಿಪ್ಪು ಕಾಲದಲ್ಲಿ ವ್ಯಾಪಾರ ವಹಿವಾಟಿಗೆ ಪ್ರಸಿದ್ಧಿಯಾಗಿತ್ತು ಗುಬ್ಬಿ. ಅಲ್ಲಿನ ವೀರಣ್ಣನವರು ’ಗುಬ್ಬಿ ನಾಟಕ ಕಂಪನಿ’ ಆರಂಭಿಸಿ ಕಲೆ-ರಂಗಭೂಮಿಯನ್ನು ಪ್ರೋತ್ಸಾಹಿಸಿದ್ದರು. ಇತಿಹಾಸ ಪ್ರಸಿದ್ದ ಸಿದ್ಧರ ಬೆಟ್ಟ, ಮಧುಗಿರಿಯ ಬೃಹತ್ ಏಕಶಿಲಾ ಬೆಟ್ಟ ತುಮಕೂರು ಜಿಲ್ಲೆಯಲ್ಲಿವೆ. ಹತ್ತಾರು ಕೆರೆಗಳು, ದೇವಾಲಯಗಳು ಇರುವ ತುಮಕೂರು ಜಿಲ್ಲೆಯು 10 ತಾಲ್ಲೂಕುಗಳನ್ನು ಒಳಗೊಂಡ ರಾಜ್ಯದ ದೊಡ್ಡ ಜಿಲ್ಲೆಗಳಲ್ಲಿ ಒಂದಾಗಿದೆ.

ಸಿದ್ಧಗಂಗಾ ಮಠದ ವತಿಯಿಂದ ನಡೆಯುವ ಶಿಕ್ಷಣ ಸಂಸ್ಥೆಗಳು ತಮ್ಮಲ್ಲಿಗೆ ಬಂದ ಜನರಿಗೆ ಜಾತಿ-ಭೇದವಿಲ್ಲದೆ ಶಿಕ್ಷಣ ನೀಡುವ ಮೂಲಕ ಖ್ಯಾತಿಯಾಗಿವೆ. ಸಿದ್ಧಾರ್ಥ ಶಿಕ್ಷಣ ಸಂಸ್ಥೆಗಳು ಆಧುನಿಕ ಶಿಕ್ಷಣಕ್ಕೆ ಹೆಸರುವಾಸಿಯಾಗಿವೆ. ಗೊರವನಹಳ್ಳಿ, ಹುತ್ರಿದುರ್ಗ, ದೇವರಾಯನದುರ್ಗ, ನಾಮದ ಚಿಲುಮೆ, ಮಂದರಗಿರಿ, ಬೋರನಕಣಿವೆ, ಸಿದ್ಧರಬೆಟ್ಟ ಜಿಲ್ಲೆಯ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಾಗಿವೆ.

ಮಹಾನಗರ ಪಾಲಿಕೆಯಾದ ನಂತರ ತುಮಕೂರು ಸ್ಮಾರ್ಟ್ ಸಿಟಿ ಯೋಜನೆಗೂ ಆಯ್ಕೆಯಾಗಿದೆ. ನೂರಾರು ಕೋಟಿ ಬಿಡುಗಡೆಯಾದರೂ ಇನ್ನೂ ಸ್ಮಾರ್ಟ್ ಮಾತ್ರ ಆಗಿಲ್ಲ. ಜಿಲ್ಲೆಯ ಹೆಮ್ಮೆಯ ಹೆಚ್‌ಎಂಟಿ ಕೈಗಾರಿಕೆ ಮುಚ್ಚಿಹೋಗಿದೆ. ಅಕ್ರಮ ಗಣಿಗಾರಿಕೆ ನಿರಾತಂಕವಾಗಿದ್ದು, ಗಣಿ ಬಾಧಿತ ಪ್ರದೇಶಗಳಿಗೆ ಪರಿಹಾರಧನ ತಲುಪುತ್ತಲೇ ಇಲ್ಲ. ರೈತರ ಸಮಸ್ಯೆಗಳು ಎಂದಿನಂತೆ ಮುಂದುವರಿದಿವೆ. ವಸತಿ-ನಿವೇಶನ ರಹಿತರ ಕಡೆ ಸರ್ಕಾರವಾಗಲಿ, ಜನಪ್ರತಿನಿಧಿಗಳಾಗಲಿ ತಲೆ ಹಾಕಿಲ್ಲ. ರಸ್ತೆಗಳು ಮತ್ತು ಕುಡಿಯುವ ನೀರು ಅಷ್ಟಕಷ್ಟೆ ಇರುವ ತುಮಕೂರು ಜಿಲ್ಲೆ ಚುನಾವಣೆಗೆ ಹೋಗುತ್ತಿದೆ. ಮೊದಲಿಗೆ ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಚುನಾವಣಾ ಸಮೀಕ್ಷೆ ಇಲ್ಲಿದೆ.

ಅತಿ ಹೆಚ್ಚು ಜನಸಂಖ್ಯೆ ಇರುವ ಕಾರಣದಿಂದ ತುಮಕೂರು ನಗರ ಕ್ಷೇತ್ರದ ಜೊತೆಗೆ ಈ ಹಿಂದೆ ಕೋರ, ಗೂಳೂರು, ಹೆಬ್ಬೂರು, ಬೆಳ್ಳಾವಿ ಕ್ಷೇತ್ರಗಳು ಇದ್ದವು. 1952ರಲ್ಲಿ ಇದ್ದ ಕೋರ ಕ್ಷೇತ್ರವನ್ನು ಕೈಬಿಟ್ಟು 1957ರಲ್ಲಿ ಹೆಬ್ಬೂರು ಕ್ಷೇತ್ರವನ್ನು ಅಸ್ತಿತ್ವಕ್ಕೆ ತರಲಾಯಿತು. 1967ರ ಹೊತ್ತಿಗೆ ಹೆಬ್ಬೂರು ಬದಲಿಗೆ ಗೂಳೂರು ಕ್ಷೇತ್ರ (ಪರಿಶಿಷ್ಟ ಜಾತಿ ಮೀಸಲು) ಅಸ್ತಿತ್ವಕ್ಕೆ ಬಂದಿತು. ಆನಂತರ ಅದನ್ನು ಕೈಬಿಟ್ಟು 1978ರ ವೇಳೆಗೆ ಬೆಳ್ಳಾವಿ ಕ್ಷೇತ್ರ ಅಸ್ತಿತ್ವಕ್ಕೆ ಬಂತು. 2008ರಲ್ಲಿ ನಡೆದ ಕ್ಷೇತ್ರಗಳ ಪುನರ್ ವಿಂಗಡಣೆ ಸಮಯದಲ್ಲಿ ಬೆಳ್ಳಾವಿ ಬದಲಿಗೆ ತುಮಕೂರು ಗ್ರಾಮಾಂತರ ಕ್ಷೇತ್ರವನ್ನು ಸೃಷ್ಟಿಸಲಾಯಿತು. ಈಗ ತುಮಕೂರು ನಗರ ಮತ್ತು ಗ್ರಾಮಾಂತರ ಕ್ಷೇತ್ರಗಳು ಅಸ್ತಿತ್ವ ಉಳಿಸಿಕೊಂಡಿವೆ.

ತುಮಕೂರು ನಗರ ವಿಧಾನಸಭಾ ಕ್ಷೇತ್ರ – ರಾಜಕೀಯ ಇತಿಹಾಸ

ತುಮಕೂರು ನಗರ ವಿಧಾನಸಭಾ ಕ್ಷೇತ್ರ ಆರಂಭದಲ್ಲಿ ಕಾಂಗ್ರೆಸ್ ಪಕ್ಷದ ಭದ್ರ ಕೋಟೆಯಾಗಿತ್ತು. 1952ರಲ್ಲಿ ಕಾಂಗ್ರೆಸ್‌ನ ಎಂ.ವಿ.ರಾಮರಾವ್‌ರವರು ಕಿಸಾನ್ ಮಜ್ದೂರ್ ಪಕ್ಷದ ಟಿ.ಎನ್ ಕೆಂಪಹೊನ್ನಯ್ಯರವರ ವಿರುದ್ಧ ಗೆಲುವು ಸಾಧಿಸಿದ್ದರು. 1957ರಲ್ಲಿ ಪಿಎಸ್‌ಪಿಯ ಜಿ.ಎನ್.ಪುಟ್ಟಣ್ಣನವರು ಹಾಲಿ ಶಾಸಕ ಎಂ.ವಿ ರಾಮರಾವ್ ವಿರುದ್ಧ ಜಯ ಗಳಿಸಿದ್ದರು. 1962ರಲ್ಲಿ ಕಾಂಗ್ರೆಸ್‌ನ ಜಿ.ಸಿ.ಭಗೀರಥಮ್ಮ ಸ್ವತಂತ್ರ ಅಭ್ಯರ್ಥಿ ಟಿ.ಎಸ್ ಮಲ್ಲಿಕಾರ್ಜುನಯ್ಯನವರ ಎದುರು ಗೆಲುವು ಸಾಧಿಸಿ ಕ್ಷೇತ್ರದ ಪ್ರಥಮ ಮಹಿಳಾ ಶಾಸಕಿ ಎನಿಸಿಕೊಂಡರು.

ಜಿ.ಸಿ. ಭಗೀರಥಮ್ಮ

1967ರಲ್ಲಿ ಪಿಎಸ್‌ಪಿಯ ಬಿ.ಪಿ.ಗಂಗಾಧರ್ ಭಗೀರಥಮ್ಮರವರನ್ನು ಸೋಲಿಸಿ ಶಾಸಕರಾದರು. ಕ್ಷೇತ್ರ ಮರು ವಿಂಗಡಣೆಯಾದಂತೆ ತುಮಕೂರು ನಗರದಲ್ಲಿ ಮುಸ್ಲಿಂ ಸಮುದಾಯದ ಮತಗಳು ಗಣನೀಯವಾದವು. ಹಾಗಾಗಿ 1972ರಲ್ಲಿ ಕಾಂಗ್ರೆಸ್ ಪಕ್ಷವು ಮುಸ್ಲಿಂ ಸಮುದಾಯದ ಕೆ. ಅಬ್ದುಲ್ ಸುಭಾನ್‌ರವರಿಗೆ ಟಿಕೆಟ್ ನೀಡಿತು. ಅವರು ಭಾರತೀಯ ಜನಸಂಘ ಪಕ್ಷದಿಂದ ಸ್ಪರ್ಧಿಸಿದ್ದ ಟಿ.ಎಸ್ ಮಲ್ಲಿಕಾರ್ಜುನಯ್ಯನವರನ್ನು ಮಣಿಸಿ ಮೊದಲ ಅಲ್ಪಸಂಖ್ಯಾತ ಶಾಸಕರಾದರು. 1978ರಲ್ಲಿ ಕಾಂಗ್ರೆಸ್ ಮತ್ತು ಜನತಾಪಕ್ಷ ಎರಡೂ ಸಹ ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದವು. ಕಾಂಗ್ರೆಸ್‌ನ ನಜೀರ್ ಅಹ್ಮದ್ ಜನತಾ ಪಕ್ಷದ ಮೊಹಮ್ಮದ್ ಗೈಬನ್ ಖಾನ್‌ರವರ ಎದುರು ಗೆದ್ದರು.

1983ರಲ್ಲಿ ಕಾಂಗ್ರೆಸ್ ಪಕ್ಷವು ಎಸ್.ಶಫಿ ಅಹಮದ್‌ರವರಿಗೆ ಟಿಕೆಟ್ ನೀಡಿತು. ಅವರ ವಿರುದ್ಧ ಜನತಾ ಪಕ್ಷದ ಲಕ್ಷ್ಮಿ ನರಸಿಂಹಯ್ಯನವರು ಗೆಲುವು ಸಾಧಿಸಿದರು. ಅಲ್ಲಿಯವರೆಗೂ ಪ್ರತಿ ಬಾರಿಯೂ ಹೊಸ ಮುಖಗಳು ತುಮಕೂರಿನ ಶಾಸಕರಾಗಿದ್ದರೆ ಹೊರತು ಯಾರೊಬ್ಬರೂ ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಲು ಸಾಧ್ಯವಾಗಿರಲಿಲ್ಲ. ಆದರೆ ಆ ಸಂಪ್ರದಾಯಕ್ಕೆ ಲಕ್ಷ್ಮಿ ನರಸಿಂಹಯ್ಯನವರು ತಿಲಾಂಜಲಿ ಹಾಡಿದರು. ಅವರು 1985ರಲ್ಲಿಯೂ ಸಹ ಕಾಂಗ್ರೆಸ್‌ನ ಅಲಿಯ ಬೇಗಂ ವಿರುದ್ಧ ಗೆಲುವು ಸಾಧಿಸುವ ಮೂಲಕ ಸತತ ಎರಡನೇ ಬಾರಿಗೆ ಶಾಸಕರೆನಿಸಿಕೊಂಡರು.

1989ರಲ್ಲಿ ಜನತಾ ಪಕ್ಷದ ಲಕ್ಷ್ಮಿ ನರಸಿಂಹಯ್ಯನವರು ಕಾಂಗ್ರೆಸ್ ಅಭ್ಯರ್ಥಿ ಎಸ್.ಶಫಿ ಅಹಮದ್ ಎದುರು ಸೋಲುಕಂಡರು. 1994ರ ನಂತರ ತುಮಕೂರು ನಗರ ಕ್ಷೇತ್ರ ಬಿಜೆಪಿ ವಶವಾಯಿತು. ಆ ಚುನಾವಣೆಯಲ್ಲಿ ಸಂಘಪರಿವಾರದ ಹಿನ್ನಲೆಯ ಬಿಜೆಪಿ ಅಭ್ಯರ್ಥಿ ಸೊಗಡು ಶಿವಣ್ಣ ಕಾಂಗ್ರೆಸ್‌ನ ಎಸ್.ಶಫಿ ಅಹಮದ್‌ರನ್ನು ಸೋಲಿಸಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ನಂತರ 1999 ಮತ್ತು 2004ರಲ್ಲಿಯೂ ಸಹ ಕಾಂಗ್ರೆಸ್‌ನ ಎಸ್.ಶಫಿ ಅಹಮದ್‌ರ ಎದುರು ಗೆದ್ದು ಹ್ಯಾಟ್ರಿಕ್ ಸಾಧಿಸಿದರು. 2007ರಲ್ಲಿ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ತೋಟಗಾರಿಕೆ ಇಲಾಖೆ ಸಚಿವರಾಗಿದ್ದರು. ಅಲ್ಲದೆ 2008ರಲ್ಲಿ ಕಾಂಗ್ರೆಸ್‌ನ ಡಾ. ರಫಿಕ್ ಅಹ್ಮದ್ ವಿರುದ್ಧ ಕೇವಲ 1,949 ಮತಗಳ ಅಂತರದಿಂದ ಗೆದ್ದು ಸತತ ನಾಲ್ಕನೇ ಬಾರಿಗೆ ಶಾಸಕರೆನಿಸಿಕೊಂಡರು. ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾಗ ಪರಿಸರ ಖಾತೆ ಸಚಿವರಾಗಿದ್ದರು.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ನಾಗಮಂಗಲ: ರಾಜಕೀಯ ಜಿದ್ದಾಜಿದ್ದಿನಲ್ಲಿ ಚಲುವರಾಯಸ್ವಾಮಿ ಮೇಲುಗೈ

2013ರ ಚುನಾವಣೆ ವೇಳೆಗೆ ಬಿಜೆಪಿ ಇಬ್ಭಾಗವಾಗಿತ್ತು. ಬಿಜೆಪಿಯಿಂದ ಸೊಗಡು ಶಿವಣ್ಣ ಸ್ಪರ್ಧಿಸಿದರೆ, ಯಡಿಯೂರಪ್ಪನವರ ಕೆಜೆಪಿಯಿಂದ ಇಂಜಿನಿಯರ್ ಜಿ.ಬಿ.ಜ್ಯೋತಿ ಗಣೇಶ್ ಕಣಕ್ಕಿಳಿದಿದ್ದರು. ಇವರಿಬ್ಬರ ನಡುವಿನ ಮತ ವಿಭಜನೆಯ ಲಾಭ ಪಡೆದ ಕಾಂಗ್ರೆಸ್‌ನ ಡಾ. ರಫಿಕ್ ಅಹ್ಮದ್ ಕೇವಲ 3,608 ಮತಗಳಿಂದ ಗೆದ್ದು ಬಿಜೆಪಿ ನಾಗಾಲೋಟಕ್ಕೆ ಬ್ರೇಕ್ ಹಾಕಿದ್ದರು. ಡಾ. ರಫಿಕ್ ಅಹ್ಮದ್ 43,681 ಮತಗಳನ್ನು ಪಡೆದರೆ, ಕೆಜೆಪಿಯ ಜಿ.ಬಿ.ಜ್ಯೋತಿಗಣೇಶ್ 40,073 ಮತಗಳನ್ನು ಗಳಿಸಿ ಪೈಪೋಟಿ ನೀಡಿದ್ದರು. ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಎನ್. ಗೋವಿಂದರಾಜುರವರು 38,322 ಮತಗಳನ್ನು ಪಡೆದರೆ, ಬಿಜೆಪಿಯ ಸೊಗಡು ಶಿವಣ್ಣ ಕೇವಲ 13,159 ಮತಗಳಿಗೆ ಕುಸಿದು ಮುಖಭಂಗ ಅನುಭವಿಸಿದ್ದರು.

2018ರ ವೇಳೆಗೆ ಬಿಜೆಪಿಯೊಂದಿಗೆ ಕೆಜೆಪಿ ವಿಲೀನಗೊಂಡಿತ್ತು. ಆಗ ಸೊಗಡು ಶಿವಣ್ಣನವರಿಗೆ ಟಿಕೆಟ್ ನಿರಾಕರಿಸಿದ್ದರಿಂದ ಯಡಿಯೂರಪ್ಪ ಬಣದ ಜಿ.ಬಿ.ಜ್ಯೋತಿಗಣೇಶ್ ಬಿಜೆಪಿ ಅಭ್ಯರ್ಥಿಯಾದರು. ಕಾಂಗ್ರೆಸ್‌ನಿಂದ ಹಾಲಿ ಶಾಸಕ ಡಾ. ರಫಿಕ್ ಅಹ್ಮದ್ ಮತ್ತು ಜೆಡಿಎಸ್‌ನಿಂದ ಎನ್. ಗೋವಿಂದರಾಜು ಸ್ಪರ್ಧಿಸಿದ್ದರು. ಮೂರು ಜನರ ತ್ರಿಕೋನ ಹಣಾಹಣಿಯಲ್ಲಿ ಬಿಜೆಪಿಯ ಜ್ಯೋತಿ ಗಣೇಶ್ 5,293 ಮತಗಳ ಅಂತರದಿಂದ ಗೆದ್ದು ಬಂದರು. ಅವರು 60,421 ಮತಗಳನ್ನು ಪಡೆದರೆ ಜೆಡಿಎಸ್‌ನ ಗೋವಿಂದರಾಜುರವರು 55,128 ಮತಗಳನ್ನು ಪಡೆದರು. ಕಾಂಗ್ರೆಸ್‌ನ ರಫೀಕ್ ಅಹಮದ್ 51,219 ಮತಗಳನ್ನು ಪಡೆದ ಮೂರನೇ ಸ್ಥಾನಕ್ಕೆ ನೂಕಲ್ಪಟ್ಟರು.

ಅಂದಾಜು ಜಾತಿವಾರು ಮತಗಳು

ಒಟ್ಟು ಮತಗಳು: 2,65,000; ಮುಸ್ಲಿಂ: 60,000; ಲಿಂಗಾಯಿತ: 50,000; ಪರಿಶಿಷ್ಟ ಜಾತಿ: 40,000; ಒಕ್ಕಲಿಗ: 40,000; ಕುರುಬ: 15,000; ಎಸ್‌ಟಿ: 11,000; ಗೊಲ್ಲರು: 8,000; ಇತರೆ: 41,000

ಹಾಲಿ ಪರಿಸ್ಥಿತಿ

ಮೊದಲ ಬಾರಿಗೆ ಶಾಸಕರಾದ ಜ್ಯೋತಿ ಗಣೇಶ್ ತುಮಕೂರಿನಲ್ಲಿ ಮಹಾತ್ಮಗಾಂಧಿ ಕ್ರೀಡಾಂಗಣ, ಡಿಜಿಟಲ್ ಲೈಬ್ರರಿ, ಅಮಾನಿ ಕೆರೆ ಅಭಿವೃದ್ಧಿ, ಕಾಲೇಜು ಕಟ್ಟಡ ಮತ್ತು ಸ್ಮಾರ್ಟ್ ಸಿಟಿ ಯೋಜನೆಗಳ ಅನುಷ್ಠಾನ ಮಾಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಜನರೊಟ್ಟಿಗೆ ಉತ್ತಮ ಬಾಂಧವ್ಯ ಸಹ ಹೊಂದಿದ್ದಾರೆ ಎನ್ನಲಾಗಿದೆ. ಆದರೆ ಸ್ಮಾರ್ಟ್ ಸಿಟಿ ಯೋಜನೆಗಳಲ್ಲಿ ಸಾಕಷ್ಟು ಹಣ ಮಾಡಿದ್ದಾರೆ, ಪ್ರತಿ ಕಾಮಗಾರಿಗಳಲ್ಲಿ ಕಮಿಷನ್ ತೆಗೆದುಕೊಳ್ಳುತ್ತಾರೆ ಎಂಬ ಆರೋಪ ಸಹ ಅವರ ಮೇಲಿದೆ. ಕಾಂಗ್ರೆಸ್ ಕಾರ್ಯಕರ್ತರು ಜ್ಯೋತಿಗಣೇಶ್ ವಿರುದ್ಧ ಪೆಎಂಎಲ್‌ಎ ಪ್ರತಿಭಟನೆ ಸಹ ನಡೆಸಿ ಬಂಧನಕ್ಕೊಳಗಾಗಿದ್ದರು.

ಸೊಗಡು ಶಿವಣ್ಣ

ಜ್ಯೋತಿಗಣೇಶ್‌ರವರ ತಂದೆ ಜಿ.ಎಸ್ ಬಸವರಾಜುರವರು ಕಾಂಗ್ರೆಸ್‌ನಿಂದ ಬಂದವರಾಗಿದ್ದು ಬಿಜೆಪಿಯಿಂದ 2019ರ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರನ್ನು ಮಣಿಸಿ ಸಂಸದರಾಗಿದ್ದಾರೆ. ಅಪ್ಪ ಮಗ ಇಬ್ಬರೂ ಯಡಿಯೂರಪ್ಪ ಬಣದಲ್ಲಿ ಗುರುತಿಸಿಕೊಂಡಿದ್ದಾರೆ. ಹಾಗಾಗಿ ಈ ಬಾರಿ ಜ್ಯೋತಿಗಣೇಶ್‌ರವರಿಗೆ ಬಿಜೆಪಿ ಟಿಕೆಟ್ ಸಿಗುವುದು ಡೌಟ್ ಎಂಬ ಮಾತುಗಳು ಕೇಳಿಬರುತ್ತಿವೆ. ಹಾಗಾಗಿ ಕೆಲದಿನಗಳ ಹಿಂದೆ ಅವರು ಕಾಂಗ್ರೆಸ್ ಸೇರುತ್ತಾರೆ ಎಂಬ ಊಹಾಪೋಹಗಳಿದ್ದವು. ಸದ್ಯ ಬಿಜೆಪಿಯ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿರುವ ಅವರು ಈಗಾಗಲೇ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ.

ಬಿಜೆಪಿಯಲ್ಲಿ ಟಿಕೆಟ್‌ಗಾಗಿ ಗುದ್ದಾಟ

ಲಿಂಗಾಯತ ಸಮುದಾಯದ ಹಾಲಿ ಶಾಸಕ ಜ್ಯೋತಿಗಣೇಶ್ ಮರು ಆಯ್ಕೆ ಬಯಸಿ ಬಿಜೆಪಿ ಟಿಕೆಟ್ ಬೇಕೆಂದು ಕೇಳಿದ್ದಾರೆ. ಆದರೆ ಹಲವು ಹಾಲಿ ಶಾಸಕರಿಗೆ ಬಿಜೆಪಿ ಈ ಬಾರಿ ಖೊಕ್ ನೀಡುತ್ತದೆ ಎಂಬ ಸುದ್ದಿ ಬೆನ್ನಲ್ಲೆ ಮಾಜಿ ಸಚಿವ, ಮಾಜಿ ಶಾಸಕ ಲಿಂಗಾಯತ ಸಮುದಾಯದ ಸೊಗಡು ಶಿವಣ್ಣ ಬಿಜೆಪಿ ಟಿಕೆಟ್‌ಗಾಗಿ ಕಸರತ್ತು ನಡೆಸುತ್ತಿದ್ದಾರೆ. 2018ರಲ್ಲಿ ಪಕ್ಷದ ವರಿಷ್ಠರ ಮಾತಿಗೆ ಬೆಲೆ ಕೊಟ್ಟು ಸ್ಪರ್ಧಿಸಲಿಲ್ಲ. ಆದರೆ ಈ ಬಾರಿ ಸ್ಪರ್ಧಿಸಿಯೇ ತೀರುತ್ತೇನೆ ಎಂದು ಪಣ ತೊಟ್ಟಿದ್ದಾರೆ. ಶಿವಣ್ಣನವರ ಹಿಂದೆ ಆರ್‌ಎಸ್‌ಎಸ್ ಇದ್ದು, ಅವರು ಈಗಾಗಲೇ ವೋಟು ಕೊಡಿ, ನೋಟು ಕೊಡಿ ಎಂದು ಜೋಳಿಗೆ ಹಿಡಿದು ಪ್ರಚಾರ ಆರಂಭಿಸಿದ್ದಾರೆ.

ಉಳಿದಂತೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಹೆಬ್ಬಾಕ ರವಿ ಮತ್ತು ವೈಶ್ಯ ಸಮುದಾಯದ ಎನ್.ಎಸ್ ಜಯಕುಮಾರ್ ಸಹ ಬಿಜೆಪಿ ಟಿಕೆಟ್ ಕೇಳುತ್ತಿದ್ದಾರೆ. ಆದರೆ ಇವರಿಬ್ಬರಿಗೂ ಟಿಕೆಟ್ ಸಿಗುವ ಸಾಧ್ಯತೆ ಕಡಿಮೆಯಿದೆ.

ಜೆಡಿಎಸ್

ಜೆಡಿಎಸ್ ಪಕ್ಷವು ಕಳೆದ ಚುನಾವಣೆಯಲ್ಲಿ ಸೋಲು ಕಂಡಿದ್ದ ಒಕ್ಕಲಿಗ ಸಮುದಾಯದ ಎನ್ ಗೋವಿಂದರಾಜುರವರಿಗೆ ಟಿಕೆಟ್ ಘೋಷಿಸಿದೆ. ಅವರು ಈ ಹಿಂದೆಯೆಲ್ಲ ಟ್ಯಾಂಕರ್ ಮೂಲಕ ಕುಡಿಯುವ ನೀರು ಒದಗಿಸುವ ಮೂಲಕ ಜನಮನ್ನಣೆ ಗಳಿಸಿದ್ದರು. ಆದರೆ ಸತತ ಎರಡು ಚುನಾವಣೆಗಳಲ್ಲಿ ಸೋತ ನಂತರ ಬೇಸರಗೊಂಡು ನೀರು ಕೊಡುವುದನ್ನು ನಿಲ್ಲಿಸಿದ್ದರು. ಈಗ ಚುನಾವಣೆ ಸಮಯದಲ್ಲಿ ಅವರು ಸಕ್ರಿಯರಾಗಿದ್ದಾರೆ. ಈ ಬಾರಿ ಎಂಎಲ್‌ಎ ಆಗಲೇಬೇಕೆಂದು ಕೆಲಸ ಮಾಡುತ್ತಿದ್ದಾರೆ.

ಕಾಂಗ್ರೆಸ್

ತುಮಕೂರಿನಲ್ಲಿ ಕಾಂಗ್ರೆಸ್ ಪಕ್ಷವು ಕಳೆದ 11 ಚುನಾವಣೆಗಳಲ್ಲಿ ಸತತವಾಗಿ ಮುಸ್ಲಿಂ ಸಮುದಾಯದ ಅಭ್ಯರ್ಥಿಗಳಿಗೆ ಟಿಕೆಟ್ ನೀಡುತ್ತಾ ಬಂದಿದೆ. ನಾಲ್ಕು ಬಾರಿ ಗೆದ್ದು, ಏಳು ಬಾರಿ ಸೋತರೂ ಮುಸ್ಲಿಮರಿಗೆ ಟಿಕೆಟ್ ನೀಡುವ ಪರಿಪಾಠ ಮುಂದುವರಿಸಿದೆ. ಈ ಬಾರಿಯೂ ಸಹ ಮೂವರು ಮುಸ್ಲಿಂ ಸಮುದಾಯದ ಟಿಕೆಟ್ ಆಕಾಂಕ್ಷಿಗಳು ಕಾಂಗ್ರೆಸ್ ಟಿಕೆಟ್ ಕೇಳುತ್ತಿದ್ದಾರೆ. ಕಳೆದ ಬಾರಿ ಸೋತಿರುವ ಡಾ.ರಫೀಕ್ ಅಹ್ಮದ್ ಇನ್ನೊಂದು ಅವಕಾಶ ಕೇಳುತ್ತಿದ್ದಾರೆ. ಅವರಿಗೆ ಮಾಜಿ ಶಾಸಕ ಶಫಿ ಅಹ್ಮದ್‌ರವರು ಬೆಂಬಲ ನೀಡಿದ್ದಾರೆ.

ಅಟ್ಟಿಕಾ ಬಾಬು

ಇನ್ನು ಕಾಂಗ್ರೆಸ್ ಮುಖಂಡ ಇಕ್ಬಾಲ್ ಅಹಮದ್ ಕೂಡ ಟಿಕೆಟ್‌ಗಾಗಿ ಸರ್ವ ಪ್ರಯತ್ನ ಮಾಡುತ್ತಿದ್ದಾರೆ. ಕೋವಿಡ್ ಸಂದರ್ಭದಲ್ಲಿ ತನ್ನ ಮನೆಯನ್ನೆ ಕೋವಿಡ್ ಸೆಂಟರ್ ಆಗಿ ಪರಿವರ್ತಿಸಿ ಗಮನ ಸೆಳೆದಿದ್ದ ಅವರು ತನಗೆ ಮಾಜಿ ಶಾಸಕ ಶಫಿ ಅಹ್ಮದ್ ಕಾಂಗ್ರೆಸ್ ಟಿಕೆಟ್ ಕೊಡಿಸುವ ಭರವಸೆ ನೀಡಿದ್ದರು ಎಂದು ಹೇಳಿಕೊಂಡು ಪ್ರಚಾರ ಆರಂಭಿಸಿದ್ದಾರೆ.

ಅಟ್ಟಿಕಾ ಗೋಲ್ಡ್ ಕಂಪನಿಯ ಮಾಲೀಕರಾದ ಅಟ್ಟಿಕಾ ಬಾಬುರವರು ಕಾಂಗ್ರೆಸ್ ಟಿಕೆಟ್ ಬೇಕೆಂದು ಮನವಿ ಮಾಡಿದ್ದಾರೆ. ಇತ್ತೀಚೆಗೆ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿರುವ ಅವರು ಸಮಾಜ ಸೇವೆ ಹೆಸರಿನಲ್ಲಿ ಸಾಕಷ್ಟು ದುಡ್ಡು ಖರ್ಚು ಮಾಡುತ್ತಾ ಕ್ಷೇತ್ರದಲ್ಲಿ ಓಡಾಡುತ್ತಿದ್ದಾರೆ.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಕೆ.ಆರ್ ಪೇಟೆ: ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವ ಸಚಿವ ನಾರಾಯಣಗೌಡ ಪಕ್ಷಾಂತರಕ್ಕೆ ಸಜ್ಜು?

ಇನ್ನು ತುಮಕೂರು ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷರಾಗಿರುವ ಲಿಂಗಾಯತ ಸಮುದಾಯದ ಶಶಿ ಹುಲಿಕುಂಟೆಯವರು ಸಹ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಇತ್ತೀಚೆಗೆ ಹಾಲಿ ಶಾಸಕ ಜ್ಯೋತಿಗಣೇಶ್ ಸ್ಮಾರ್ಟ್ ಸಿಟಿ ಕಾಮಗಾರಿಗಳಲ್ಲಿ ಕಮಿಷನ್ ಪಡೆಯುತ್ತಿದ್ದಾರೆ ಎಂದು ಆರೋಪಿಸಿ ಪೆಎಂಎಲ್‌ಎ ಪೋಸ್ಟರ್‌ಗಳನ್ನು ಅಂಟಿಸಿ ಬಂಧನಕ್ಕೊಳಗಾಗಿದ್ದ ಅವರು, ಆಡಳಿತ ಪಕ್ಷವನ್ನು ತೀವ್ರ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

2023ರ ಸಾಧ್ಯಾಸಾಧ್ಯತೆ

ಕಾಂಗ್ರೆಸ್‌ನಲ್ಲಿ ಹಲವು ಟಿಕೆಟ್ ಆಕಾಂಕ್ಷಿಗಳಿದ್ದರೂ ಒಂದು ವೇಳೆ ಟಿಕೆಟ್ ಸಿಗದಿದ್ದರೆ ಅವರ್‍ಯಾರೂ ಬಂಡಾಯವೇಳುವ ಸಾಧ್ಯತೆ ಕಂಡು ಬರುತ್ತಿಲ್ಲ. ಘೋಷಿತ ಅಭ್ಯರ್ಥಿಗೆ ಬೆಂಬಲಿಸುವುದಾಗಿ ಹೇಳಿಕೆ ನೀಡುತ್ತಿದ್ದಾರೆ. ಅದೇ ರೀತಿ ಜೆಡಿಎಸ್‌ನಲ್ಲಿಯೂ ಸಹ ಗೋವಿಂದರಾಜುರವರಿಗೆ ಯಾವುದೇ ಬಂಡಾಯ ಮತ್ತು ಒಳೇಟಿನ ಭೀತಿ ಇಲ್ಲ. ಆದರೆ ಬಿಜೆಪಿಗೆ ಮಾತ್ರ ಟಿಕೆಟ್ ಹಂಚಿಕೆ ಕಗ್ಗಂಟಾಗಿ ಉಳಿದುಕೊಂಡಿದೆ. ಜ್ಯೋತಿ ಗಣೇಶ್ ಮತ್ತು ಸೊಗಡು ಶಿವಣ್ಣ ಇಬ್ಬರೂ ಹಠ ಹಿಡಿದಿದ್ದು, ಟಿಕೆಟ್ ವಂಚಿತರು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆಯೇ ಹೆಚ್ಚಾಗಿದೆ. ಜ್ಯೋತಿ ಗಣೇಶ್ ಕಾಂಗ್ರೆಸ್ ಸೇರುವ ಅವಕಾಶವನ್ನು ಇನ್ನೂ ಉಳಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಈ ಬಾರಿ ಬಿಜೆಪಿಯಲ್ಲಿ ಉಂಟಾಗುವ ಬಂಡಾಯದ ಲಾಭ 2013ರಂತೆ ಕಾಂಗ್ರೆಸ್‌ಗೆ ದೊರಕಲಿದೆಯೊ ಅಥವಾ ಜೆಡಿಎಸ್ ಪಡೆದೆಕೊಳ್ಳಲಿದೆಯೊ ಕಾದು ನೋಡಬೇಕಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಮೇಥಿ ಕಾಂಗ್ರೆಸ್ ಕಚೇರಿ ಮೇಲೆ ದಾಳಿ, ಕಾರ್ಯಕರ್ತನಿಗೆ ಹಲ್ಲೆ: ಬಿಜೆಪಿ ಮುಖಂಡರು ಸೇರಿ 10...

0
ಉತ್ತರ ಪ್ರದೇಶದ ಅಮೇಥಿಯಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿ ಮೇಲೆ ಭಾನುವಾರ (ಮೇ 5) ಮಧ್ಯರಾತ್ರಿ ಅಪರಿಚಿತ ದುಷ್ಕರ್ಮಿಗಳ ಗುಂಪೊಂದು ದಾಳಿ ಮಾಡಿದೆ. ಪಕ್ಷದ ಕಚೇರಿಯ ಹೊರಗೆ ನಿಲ್ಲಿಸಿದ್ದ ಹಲವು ವಾಹನಗಳನ್ನು ಧ್ವಂಸಗೊಳಿಸಿದ ದುಷ್ಕರ್ಮಿಗಳು,...