Homeಅಂಕಣಗಳುಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ನಾಗಮಂಗಲ: ರಾಜಕೀಯ ಜಿದ್ದಾಜಿದ್ದಿನಲ್ಲಿ ಚಲುವರಾಯಸ್ವಾಮಿ ಮೇಲುಗೈ

ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ನಾಗಮಂಗಲ: ರಾಜಕೀಯ ಜಿದ್ದಾಜಿದ್ದಿನಲ್ಲಿ ಚಲುವರಾಯಸ್ವಾಮಿ ಮೇಲುಗೈ

- Advertisement -
- Advertisement -

ಹೊಡಿ-ಬಡಿ ರಾಜಕಾರಣಕ್ಕೆ ಕುಖ್ಯಾತಿಯಾದ ನಾಗಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ಇತ್ತೀಚಿನ ದಿನಗಳಲ್ಲಿ ದೇವೇಗೌಡರ ಕುಟುಂಬದ್ದೇ ಪ್ರಾಬಲ್ಯ. ನಾಗಮಂಗಲ ತಾಲ್ಲೂಕಿನ ಜೊತೆಗೆ ಮದ್ದೂರು ತಾಲ್ಲೂಕಿನ ಕೊಪ್ಪ ಜಿ.ಪಂ ಕ್ಷೇತ್ರ ಮತ್ತು ಬೆಸಗರಹಳ್ಳಿ ಜಿ.ಪಂನ ಕೆಲ ಗ್ರಾಮಗಳು ಸಹ ಈ ಕ್ಷೇತ್ರದ ವ್ಯಾಪ್ತಿಗೆ ಬರುತ್ತವೆ. ಅಲ್ಲಿ ಮೂವರು ಘಟಾನುಘಟಿಗಳು ಚುನಾವಣೆ ಎದುರಿಸುತ್ತಿರುವ ಕಾರಣ ಈ ಬಾರಿ ಪೈಪೋಟಿ ಜೋರಾಗಿದೆ. ಮಂಡ್ಯ ಜಿಲ್ಲೆಯಲ್ಲಿ ಒಕ್ಕಲಿಗ ಮತದಾರರು ಅತಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಬಹುತೇಕ ಒಕ್ಕಲಿಗರ ಆರಾಧ್ಯ ಸ್ಥಳ ಆದಿಚುಂಚನಗಿರಿ ನಾಗಮಂಗಲ ತಾಲ್ಲೂಕಿನಲ್ಲಿದೆ. ಜಿಲ್ಲೆಯ ರಾಜಕಾರಣವನ್ನು ಪ್ರಭಾವಿಸಿದ ಮಠ ಅದಾಗಿದೆ. ಅದೆಲ್ಲದರ ನಡುವೆಯೂ ನಾಗಮಂಗಲದಲ್ಲಿ ಒಕ್ಕಲಿಗರ ಹೊರತಾಗಿ ಕುರುಬ ಸಮುದಾಯದ ಇಬ್ಬರು ಶಾಸಕರಾಗಿ ಆಯ್ಕೆಯಾಗಿರುವುದು ವಿಶೇಷ. ಅಂತಹ ನಾಗಮಂಗಲದಲ್ಲಿ ಈ ಬಾರಿಯ ರಾಜಕೀಯ ರಂಗೇರಿದೆ. ಅದನ್ನು ತಿಳಿಯುವ ಮೊದಲು ಕ್ಷೇತ್ರದ ಇತಿಹಾಸವನ್ನೊಮ್ಮೆ ನೋಡೋಣ.

1952ರಲ್ಲಿನ ಮೊದಲ ಚುನಾವಣೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ಎಂ.ಶಂಕರಲಿಂಗೇಗೌಡರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಕಾಂಗ್ರೆಸ್ ಪಕ್ಷದ ಕೆ.ಸಿಂಗಾರಿಗೌಡರನ್ನು ಮಣಿಸಿ ಶಾಸಕರಾದರು. ಆದರೆ ಅವರು ನಿಧನ ಹೊಂದಿದ ಪರಿಣಾಮ 1953ರಲ್ಲಿ ಉಪಚುನಾವಣೆ ಎದುರಾಯಿತು. ಕಾಂಗ್ರೆಸ್‌ನಿಂದ ಕೆ.ಸಿಂಗಾರಿಗೌಡರು ಮತ್ತೆ ಸ್ಪರ್ಧಿಸಿ ಪ್ರಜಾ ಸೋಷಿಯಲಿಸ್ಟ್ ಪಕ್ಷದ ಜಿ.ತಿಮ್ಮೇಗೌಡರನ್ನು ಸೋಲಿಸಿ ಶಾಸಕರಾದರು.

ಕುರುಬ ಸಮುದಾಯದ ಮುಖಂಡನಿಗೆ ಗೆಲುವು

1957ರಲ್ಲಿ ಕುರುಬ ಸಮುದಾಯದ ಟಿ.ಮರಿಯಪ್ಪನವರು ಪಿಎಸ್‌ಪಿ ಪಕ್ಷದಿಂದ ಸ್ಪರ್ಧಿಸಿ ಕಾಂಗ್ರೆಸ್ ಪಕ್ಷದ ಕೆ.ಮರಿಯಪ್ಪನವರನ್ನು ಮಣಿಸುತ್ತಾರೆ. ಆ ಮೂಲಕ ಜಿಲ್ಲೆಯಲ್ಲಿ ಮೀಸಲು ಕ್ಷೇತ್ರವಲ್ಲದ ಕಡೆ ಮೊದಲ ಬಾರಿಗೆ ಒಕ್ಕಲಿಗೇತರ ವ್ಯಕ್ತಿ ಶಾಸಕರೆನಿಸಿಕೊಳ್ಳುತ್ತಾರೆ. 1962ರಲ್ಲಿ ಮಾಜಿ ಶಾಸಕರಾದ ಸಿಂಗಾರಿಗೌಡರು ಕಾಂಗ್ರೆಸ್‌ನಿಂದ ಕಣಕ್ಕಿಳಿಯುತ್ತಾರೆ. ಅವರ ವಿರುದ್ಧ ಅವರ ಸಂಬಂಧಿಯಾದ ಟಿ.ಎನ್ ಮಾದಪ್ಪಗೌಡರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸುತ್ತಾರೆ.

1967ರಲ್ಲಿ ಟಿ.ಎನ್ ಮಾದಪ್ಪಗೌಡರು ಪಕ್ಷೇತರ ಅಭ್ಯರ್ಥಿಯಾಗಿ ಮರು ಆಯ್ಕೆ ಬಯಸಿ ಕಣಕ್ಕಿಳಿಯುತ್ತಾರೆ. ಸಿಂಗಾರಿಗೌಡರು ಕಾಂಗ್ರೆಸ್‌ನಿಂದ ಕಣಕ್ಕಿಳಿದು ಗೆಲುವು ಸಾಧಿಸಿ ಎರಡನೇ ಬಾರಿಗೆ ಶಾಸಕರೆನಿಸಿಕೊಳ್ಳುತ್ತಾರೆ. 1972ರ ಹೊತ್ತಿಗೆ ಟಿ.ಎನ್ ಮಾದಪ್ಪಗೌಡ ಇಂದಿರಾ ಕಾಂಗ್ರೆಸ್ ಪಕ್ಷ ಸೇರಿರುತ್ತಾರೆ. ಅವರು ಸಂಸ್ಥಾ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಎಚ್.ಟಿ ಕೃಷ್ಣಪ್ಪನವರನ್ನು ಸೋಲಿಸಿ ಎರಡನೇ ಬಾರಿಗೆ ಶಾಸಕರಾಗುತ್ತಾರೆ. ಆದರೆ ಆನಾರೋಗ್ಯದಿಂದ ಮಾದಪ್ಪಗೌಡ ನಿಧನರಾಗುತ್ತಾರೆ. ಹಾಗಾಗಿ 1973ರಲ್ಲಿ ಮತ್ತೆ ಉಪ ಚುನಾವಣೆ ಎದುರಾಗುತ್ತದೆ. ಆಗ ಎಚ್.ಟಿ ಕೃಷ್ಣಪ್ಪನವರು ಕಾಂಗ್ರೆಸ್‌ನಿಂದ ಮತ್ತೆ ಸ್ಪರ್ಧಿಸಿ ಚಿಗರಿಗೌಡರನ್ನು ಸೋಲಿಸಿ ಶಾಸಕರಾಗುತ್ತಾರೆ.

ಎಚ್.ಟಿ ಕೃಷ್ಣಪ್ಪ

1978ರಲ್ಲಿ ಕೃಷ್ಣಪ್ಪ ಮರು ಆಯ್ಕೆ ಬಯಸಿ ಕಾಂಗ್ರೆಸ್‌ನಿಂದ ಸ್ಪರ್ಧಿಸುತ್ತಾರೆ. ಅವರ ಎದುರು ಸಿಂಗಾರಿಗೌಡರು ಜನತಾಪಕ್ಷದಿಂದ ಸ್ಪರ್ಧಿಸುತ್ತಾರೆ. ಆದರೆ ಕೃಷ್ಣಪ್ಪನವರು ಗೆದ್ದು ಎರಡನೇ ಬಾರಿಗೆ ಶಾಸಕರಾಗುತ್ತಾರೆ ಮತ್ತು ರೇಷ್ಮೆ ಸಚಿವರಾಗಿ ಕಾರ್ಯನಿರ್ವಹಿಸುತ್ತಾರೆ.

1983ರಲ್ಲಿ ಕುರುಬ ಸಮುದಾಯದ ಚಿಗರಿಗೌಡರು ಕಾಂಗ್ರೆಸ್ ಟಿಕೆಟ್ ಸಿಗದಿದ್ದರಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರೆ. ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಎಚ್.ಟಿ ಕೃಷ್ಣಪ್ಪರನ್ನು ಮಣಿಸಿ ಶಾಸಕರಾಗುತ್ತಾರೆ. ಆದರೆ ಅವರು ಸಹ ಅಕಾಲಿಕ ನಿಧನ ಹೊಂದಿದ ಪರಿಣಾಮ 1984ರಲ್ಲಿ ಮತ್ತೆ ನಾಗಮಂಗಲದಲ್ಲಿ ಉಪ ಚುನಾವಣೆ ನಡೆಯುತ್ತದೆ. ಚಿಗರಿಗೌಡರ ಪತ್ನಿ ಕೆಂಪಮ್ಮ ಜನತಾ ಪಕ್ಷದಿಂದ ಸ್ಪರ್ಧಿಸುತ್ತಾರೆ. ಅವರ ವಿರುದ್ಧ ಎಚ್.ಟಿ ಕೃಷ್ಣಪ್ಪನವರು ಸ್ವತಂತ್ರವಾಗಿ ಸ್ಪರ್ಧಿಸಿ ಮೂರನೇ ಗೆಲುವು ಪಡೆಯುತ್ತಾರೆ.

1985ರಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿಯೂ ಎಚ್.ಟಿ ಕೃಷ್ಣಪ್ಪನವರು ಜನತಾ ಪಕ್ಷದಿಂದ ಸ್ಪರ್ಧಿಸಿ, ಕಾಂಗ್ರೆಸ್ ಪಕ್ಷದ ಎಲ್.ಆರ್ ಶಿವರಾಮೇಗೌಡ ಮತ್ತು ಪಕ್ಷೇತರ ಅಭ್ಯರ್ಥಿ ಟಿ.ಎಂ ಚಂದ್ರಶೇಖರ್‌ರವರನ್ನು ಮಣಿಸುತ್ತಾರೆ. ಆ ಮೂಲಕ ನಾಲ್ಕನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗುತ್ತಾರೆ. ಅಲ್ಲದೆ ಆರೋಗ್ಯ, ಅಬಕಾರಿ ಮತ್ತು ವೈದ್ಯಕೀಯ ಶಿಕ್ಷಣದಂತಹ ಮಹತ್ವದ ಖಾತೆಗಳನ್ನು ನಿಭಾಯಿಸುತ್ತಾರೆ.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಕೆ.ಆರ್ ಪೇಟೆ: ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವ ಸಚಿವ ನಾರಾಯಣಗೌಡ ಪಕ್ಷಾಂತರಕ್ಕೆ ಸಜ್ಜು?

1989ರಲ್ಲಿ ಎಲ್.ಆರ್ ಶಿವರಾಮೇಗೌಡರಿಗೆ ಕಾಂಗ್ರೆಟ್ ಟಿಕೆಟ್ ದೊರೆಯುವುದಿಲ್ಲ. ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಕಾಂಗ್ರೆಸ್‌ನ ಟಿ.ಎಂ ಚಂದ್ರಶೇಖರ್ ಮತ್ತು ಜನತಾದಳದ ಹೆಚ್.ಟಿ ಕೃಷ್ಣೇಗೌಡರ ಎದುರು ಭರ್ಜರಿ ಗೆಲುವು ಸಾಧಿಸಿ ವಿಧಾನಸಭೆ ಪ್ರವೇಶಿಸುತ್ತಾರೆ. 1994ರಲ್ಲಿಯೂ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರೆ. ಆ ಸಂದರ್ಭದಲ್ಲಿ ಜನತಾದಳದಿಂದ ಎಚ್.ಟಿ ಕೃಷ್ಣಪ್ಪ, ಕಾಂಗ್ರೆಸ್‌ನಿಂದ ನರಸೇಗೌಡ ಮತ್ತು ಬಿಜೆಪಿಯಿಂದ ಧರಣೇಂದ್ರಬಾಬು ಸ್ಪರ್ಧಿಸುತ್ತಾರೆ. ನಾಲ್ಕೂ ಜನರ ನಡುವಿನ ಕಾಳಗದಲ್ಲಿ ಎಲ್.ಆರ್ ಶಿವರಾಮೇಗೌಡ ಗೆದ್ದು ಬರುತ್ತಾರೆ. ಬಿಜೆಪಿಯ ಧರಣೇಂದ್ರಬಾಬುರವರು 27,768 ಮತಗಳನ್ನು ಪಡೆದು ಎರಡನೇ ಸ್ಥಾನ ಪಡೆಯುತ್ತಾರೆ. ಕ್ಷೇತ್ರದಲ್ಲಿ ಇದುವರೆಗೂ ಬಿಜೆಪಿ ಅತ್ಯಧಿಕ ಮತ ಗಳಿಸಿದ್ದು ಈ ಚುನಾವಣೆಯಲ್ಲಿ ಮಾತ್ರ. ಆಗ ಬಿಜೆಪಿ ಎನ್ನುವುದಕ್ಕಿಂತ ಧರಣೇಂದ್ರಬಾಬುರವರ ವೈಯಕ್ತಿಕ ವರ್ಚಸ್ಸಿಗೆ ಅಷ್ಟು ಮತಗಳು ಬಿದ್ದಿರುತ್ತವೆ.

ಚಲುವರಾಯಸ್ವಾಮಿ ರಂಗಪ್ರವೇಶ

1999ರ ಚುನಾವಣೆ ವೇಳೆಗೆ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿ ಎಲ್.ಆರ್ ಶಿವರಾಮೇಗೌಡರು ಕಾಂಗ್ರೆಸ್ ಪಕ್ಷ ಸೇರಿ ಸ್ಪರ್ಧಿಸುತ್ತಾರೆ. ಆದರೆ ಜೆಡಿಎಸ್ ಪಕ್ಷದಿಂದ ಕಣಕ್ಕಿಳಿದ ಚಲುವರಾಯಸ್ವಾಮಿಯವರು ತಮ್ಮ ಮೊದಲ ಯತ್ನದಲ್ಲಿಯೇ ಜಯ ಸಾಧಿಸುತ್ತಾರೆ. 2004ರಲ್ಲಿಯೂ ಸಹ ಇವರಿಬ್ಬರ ನಡುವೆ ಕಾದಾಟ ನಡೆಯುತ್ತದೆ. ಜೆಡಿಎಸ್‌ನ ಚಲುವರಾಯಸ್ವಾಮಿಯವರು ಮತ್ತೆ ಗೆಲುವು ಸಾಧಿಸಿ, ಆರೋಗ್ಯ ಇಲಾಖೆ ಮತ್ತು ಸಾರಿಗೆ ಸಚಿವರಾಗಿ ಕಾರ್ಯನಿರ್ವಹಿಸುತ್ತಾರೆ.

2008ರ ಚುನಾವಣೆ ವೇಳೆಗೆ ಚಲುವರಾಯಸ್ವಾಮಿಯವರು ಮೂರನೇ ಬಾರಿಗೆ ಸ್ಪರ್ಧಿಸುತ್ತಾರೆ. ಆಗ ಕಾಂಗ್ರೆಸ್ ಪಕ್ಷವು ಕೆ.ಸುರೇಶ್‌ಗೌಡರಿಗೆ ಟಿಕೆಟ್ ನೀಡುತ್ತದೆ. ಅವರು 69,259 ಮತಗಳನ್ನು ಪಡೆಯುವ ಮೂಲಕ 5,493 ಮತಗಳ ಅಂತರದಿಂದ ಚಲುವರಾಯಸ್ವಾಮಿಯವರನ್ನು (63,766 ಮತಗಳು) ಮಣಿಸಿ ಶಾಸಕರಾಗುತ್ತಾರೆ. ಸೋತ ಚಲುವರಾಯಸ್ವಾಮಿಯವರು 2009ರಲ್ಲಿ ನಡೆಯುವ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಂಬರೀಶ್‌ರನ್ನು ಮಣಿಸಿ ಸಂಸದರಾಗುತ್ತಾರೆ.

2013ರಲ್ಲಿ ಮತ್ತೆ ಜೆಡಿಎಸ್‌ನ ಚಲುವರಾಯಸ್ವಾಮಿ ಮತ್ತು ಕಾಂಗ್ರೆಸ್‌ನ ಸುರೇಶ್‌ಗೌಡರ ನಡುವೆ ಹಣಾಹಣಿ ನಡೆಯುತ್ತದೆ. ಚಲುವರಾಯಸ್ವಾಮಿಯವರು 89,203 ಮತಗಳನ್ನು ಪಡೆದು, 20,363 ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ. ಸುರೇಶ್‌ಗೌಡರಿಗೆ 38,840 ಮತಗಳು ಲಭಿಸುತ್ತವೆ. ಚಲುವರಾಯಸ್ವಾಮಿಯವರಿಂದ ತೆರವಾದ ಸಂಸತ್ ಸ್ಥಾನಕ್ಕೆ ಚಿತ್ರನಟಿ ರಮ್ಯಾರವರು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸುತ್ತಾರೆ.

ಎಲ್.ಆರ್ ಶಿವರಾಮೇಗೌಡ

2018ರ ವೇಳೆಗೆ ದೇವೇಗೌಡರ ಕುಟುಂಬವು ಪಕ್ಷಪಾತ ಮಾಡುತ್ತಿದೆ ಎಂದು ಆರೋಪಿಸಿ ಚಲುವರಾಯಸ್ವಾಮಿಯವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುತ್ತಾರೆ. ಹಾಗಾಗಿ ಕಾಂಗ್ರೆಸ್‌ನಲ್ಲಿದ್ದ ಸುರೇಶ್‌ಗೌಡರು ಜೆಡಿಎಸ್ ಸೇರುತ್ತಾರೆ. ಇವರಿಬ್ಬರ ನಡುವೆ ಮತ್ತೆ ಸ್ಪರ್ಧೆ ನಡೆಯುತ್ತದೆ. ಆದರೆ ಚಲುವರಾಯಸ್ವಾಮಿ ದೇವೇಗೌಡರಿಗೆ ದ್ರೋಹ ಮಾಡಿದರು ಎಂಬ ಆರೋಪ, ಕುಮಾರಸ್ವಾಮಿ ಸಿಎಂ ಆಗುತ್ತಾರೆ ಎಂಬ ಒಕ್ಕಲಿಗರ ಅಲೆಯಲ್ಲಿ ಜೆಡಿಎಸ್‌ನ ಸುರೇಶ್‌ಗೌಡರು 47,667 ಮತಗಳ ಬೃಹತ್ ಅಂತರದಿಂದ ಗೆದ್ದುಬರುತ್ತಾರೆ. ಅವರು 1,12,396 ಮತಗಳನ್ನು ಪಡೆದರೆ ಚಲುವರಾಯಸ್ವಾಮಿ ಕೇವಲ 64,729 ಮತಗಳಿಗೆ ಕುಸಿಯುತ್ತಾರೆ. ಬಿಜೆಪಿಯ ಪಾರ್ಥಸಾರಥಿ ಗೌಡ ಕೇವಲ 1,915 ಮತಗಳಿಗೆ ಸೀಮಿತರಾಗುತ್ತಾರೆ.

ಅಂದಾಜು ಜಾತಿವಾರು ಮತಗಳು

ಅಂದಾಜು 2,23,000 ಒಟ್ಟು ಮತಗಳಿರುವ ನಾಗಮಂಗಲದಲ್ಲಿ ಜಿಲ್ಲೆಯ ಎಲ್ಲಾ ಕ್ಷೇತ್ರಗಳಂತೆ ಇಲ್ಲಿಯೂ ಒಕ್ಕಲಿಗ ಮತಗಳೆ ಅಧಿಕ ಸಂಖ್ಯೆಯಲ್ಲಿವೆ. ಪರಿಶಿಷ್ಟ ಜಾತಿ ಮತ್ತು ಕುರುಬ ಸಮುದಾಯದ ಮತಗಳು ನಿರ್ಣಾಯಕವಾಗಿವೆ. ಮುಸ್ಲಿಂ ಮತಗಳು ಸಹ ಗಣನೀಯ ಸಂಖ್ಯೆಯಲ್ಲಿವೆ.

ಒಕ್ಕಲಿಗರು: 1,00,000; ಪರಿಶಿಷ್ಟ ಜಾತಿ: 34,000; ಮುಸ್ಲಿಂ: 20,000; ಕುರುಬ: 18,000; ಲಿಂಗಾಯಿತ: 10,000; ಒಬಿಸಿ ಮತ್ತು ಇತರರು: 40,000

ಹಾಲಿ ಪರಿಸ್ಥಿತಿ

ಹಾಲಿ ಶಾಸಕರಾದ ಕೆ.ಸುರೇಶ್ ಗೌಡರವರು ನಿರೀಕ್ಷಿತ ಮಟ್ಟದಲ್ಲಿ ನಾಗಮಂಗಲದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ ಎಂಬ ಆರೋಪಗಳು ಕೇಳಿಬರುತ್ತವೆ. ನಿರೀಕ್ಷಿತ ಮಟ್ಟದಲ್ಲಿ ರಸ್ತೆಗಳನ್ನು ಅಭಿವೃದ್ಧಿಪಡಿಸಿಲ್ಲ, ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಿಲ್ಲ ಎಂಬ ದೂರುಗಳಿವೆ. ಹಿಂದಿನ ಚಲುವರಾಯಸ್ವಾಮಿಯವರ ಆಡಳಿತದಲ್ಲಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ದಿ ಕೆಲಸಗಳಾಗಿದ್ದವು. ಆದರೆ ಈಗಿನ ಶಾಸಕರು ಕೆಲಸವನ್ನು ಮಾಡಿಲ್ಲ, ಕೈಗೂ ಸಿಗುವುದಿಲ್ಲ ಎಂದು ಜನ ದೂರುತ್ತಾರೆ. ಶಾಸಕರ ಮೇಲಿನ ಆಡಳಿತ ವಿರೋಧಿ ಅಲೆ ಎದ್ದು ಕಾಣುತ್ತಿದೆ. ಇಂತಹ ಸಮಯದಲ್ಲಿ ಜೆಡಿಎಸ್ ಪಕ್ಷವು ಸುರೇಶ್‌ಗೌಡರಿಗೆ ಮತ್ತೆ ಟಿಕೆಟ್ ಘೋಷಿಸಿದೆ.

ಮತ್ತೆ ಅಸೆಂಬ್ಲಿ ಕಣಕ್ಕೆ ಶಿವರಾಮೇಗೌಡ

ಎಲ್.ಆರ್ ಶಿವರಾಮೇಗೌಡರು 1989 ಮತ್ತು 1994ರಲ್ಲಿ ಎರಡು ಬಾರಿ ಸತತವಾಗಿ ಶಾಸಕರಾಗಿ ಆಯ್ಕೆಯಾಗಿದ್ದರು. ತದನಂತರದ ಚುನಾವಣೆಗಳಲ್ಲಿ ಸೋತಿದ್ದರು. ಆದರೆ 2018ರಲ್ಲಿ ಸಿ.ಎಸ್ ಪುಟ್ಟರಾಜುರವರು ಶಾಸಕರಾದ ಕಾರಣಕ್ಕೆ ತೆರವಾದ ಮಂಡ್ಯ ಸಂಸತ್ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಎಲ್.ಆರ್ ಶಿವರಾಮೇಗೌಡರು ಜೆಡಿಎಸ್ ಪಕ್ಷದಿಂದ ಕಣಕ್ಕಿಳಿದು ಗೆಲುವು ಸಾಧಿಸುತ್ತಾರೆ. ಆದರೆ 2019ರ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಅವರಿಗೆ ಜೆಡಿಎಸ್ ಟಿಕೆಟ್ ಸಿಗುವುದಿಲ್ಲ. ಆನಂತರ ಅವರು ಜಿ.ಮಾದೇಗೌಡರ ವಿರುದ್ಧ ಲಘುವಾಗಿ ಮಾತನಾಡಿದ ಕಾರಣ ಜೆಡಿಎಸ್ ಅವರನ್ನು ಉಚ್ಚಾಟಿಸುತ್ತದೆ. ಇದರಿಂದ ಕುಪಿತಗೊಂಡಿರುವ ಅವರು ಈ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಜೆಡಿಎಸ್ ಪಕ್ಷದ ಸುರೇಶ್ ಗೌಡರನ್ನು ಸೋಲಿಸಲು ಪಣ ತೊಟ್ಟಿದ್ದಾರೆ. ಅದಕ್ಕೆ ಅವರ ಮಗ ಕೂಡ ಸಾಥ್ ನೀಡುತ್ತಿದ್ದು ಚುನಾವಣಾ ಪ್ರಚಾರಗಳಲ್ಲಿ ಭಾಗಿಯಾಗುತ್ತಿದ್ದಾರೆ.

ಗೆಲ್ಲಲೇಬೇಕಾದ ಒತ್ತಡದಲ್ಲಿ ಚಲುವರಾಯಸ್ವಾಮಿ

ಮಾಜಿ ಸಚಿವ ಚಲುವರಾಯಸ್ವಾಮಿಯವರು ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದು ಗೆಲ್ಲಲೇಬೇಕೆಂಬ ಹಠಕ್ಕೆ ಬಿದ್ದಿದ್ದಾರೆ. ಆಯುರ್ವೇದಿಕ್ ಕಾಲೇಜು ಸ್ಥಾಪನೆ, ಮಾರ್ಕೋನಹಳ್ಳಿ ಡ್ಯಾಂನಿಂದ ಕುಡಿಯುವ ನೀರು ತಂದಿದ್ದು, ನಾಗಮಂಗಲಕ್ಕೆ ಆರ್‌ಟಿಓ ಕಚೇರಿ ತಂದಿದ್ದು ಸೇರಿ ತಾನು ಶಾಸಕ-ಸಚಿವನಾಗಿದ್ದಾಗ ಮಾಡಿದ ಕೆಲಸಗಳನ್ನು ಮುಂದಿಟ್ಟುಕೊಂಡು ಚುನಾವಣಾ ತಯಾರಿ ನಡೆಸಿದ್ದಾರೆ. ಪ್ರತಿ ಗ್ರಾಮಗಳಲ್ಲಿಯೂ ಕಾಂಗ್ರೆಸ್ ಪಕ್ಷ ಸೇರ್ಪಡೆ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ರಣತಂತ್ರ ಹೆಣೆಯುತ್ತಿದ್ದಾರೆ. ಮಂಡ್ಯ ಜಿಲ್ಲೆಯ ಪ್ರಭಾವಿ ನಾಯಕರಾಗಿರುವ ಅವರಿಗೆ ಕಾಂಗ್ರೆಸ್‌ನಲ್ಲಿ ಯಾವುದೇ ಪೈಪೋಟಿ ಇಲ್ಲ. ಹಾಗಾಗಿ ಅವರೊಬ್ಬರೆ ಟಿಕೆಟ್‌ಗಾಗಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದು ಟಿಕೆಟ್ ಅವರಿಗೆ ಪಕ್ಕಾ ಆಗಲಿದೆ. ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಬೆಳೆಸುವ ಜವಾಬ್ದಾರಿ ಹೊತ್ತಿರುವ ಅವರಿಗೆ ಗೆಲ್ಲಬೇಕಿರುವ ಒತ್ತಡವಿದೆ. ಹಾಗಾಗಿ ಅವರಿಗೆ ಇದು ಪ್ರತಿಷ್ಠೆಯ ಚುನಾವಣೆಯಾಗಿದೆ.

ಬಿಜೆಪಿಯಿಂದ ಫೈಟರ್ ರವಿ ಕಣಕ್ಕೆ

ಹಾಲಿ ಮತ್ತು ಮಾಜಿ ರೌಡಿಗಳು ಸಾಲುಸಾಲಾಗಿ ಬಿಜೆಪಿ ಸೇರುತ್ತಿದ್ದಾರೆ. ಅದರ ಭಾಗವಾಗಿ ಫೈಟರ್ ರವಿ (ಮಲ್ಲಿಕಾರ್ಜುನ) ಬಿಜೆಪಿ ಸೇರಿದ್ದು ನಾಗಮಂಗಲದ ಬಿಜೆಪಿ ಅಭ್ಯರ್ಥಿಯಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಸಮಾಜಸೇವೆ ಹೆಸರಿನಲ್ಲಿ ಈಗಾಗಲೇ ಸಾಕಷ್ಟು ಹಣ ಹರಿಸಿರುವ ಅವರು, ಒಂದಷ್ಟು ಯುವಕರನ್ನು ಜೊತೆಗಿಟ್ಟುಕೊಂಡು ಕ್ಷೇತ್ರ ಸುತ್ತುತ್ತಿದ್ದಾರೆ. ಈ ಹಿಂದೆ ಸುರೇಶ್ ಗೌಡರ ಜೊತೆಗಿದ್ದು ಚುನಾವಣೆಗಳಲ್ಲಿ ತನು-ಮನ-ಧನ ಸಹಾಯ ಮಾಡಿದ್ದರು. ಫೈಟರ್ ರವಿ ಈಗ ಅವರಿಂದ ದೂರವಾಗಿದ್ದಾರೆ. ಸುರೇಶ್ ಗೌಡರು ತನಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸುತ್ತ, ಈ ಚುನಾವಣೆಯಲ್ಲಿ ತಾನು ಸೋತರೂ ಸರಿಯೇ, ಆದರೆ ಸುರೇಶ್ ಗೌಡರು ಗೆಲ್ಲಬಾರದು ಎಂದು ಪ್ರತಿಜ್ಞೆ ಮಾಡಿದ್ದಾರೆ.

ಫೈಟರ್ ರವಿ

ಅನಿಕೇತನ್ ಗೌಡ ಎಂಬ ಯುವ ಮುಖಂಡ ಪಕ್ಷೇತರರಾಗಿ ಚುನಾವಣೆಗೆ ನಿಲ್ಲುವ ಸೂಚನೆ ನೀಡಿದ್ದರು. ಆದರೆ ಮದಗಜಗಳ ಕಾಳಗದಲ್ಲಿ ತಾನು ಪೈಪೋಟಿ ಕೊಡುವುದು ಕಷ್ಟ ಎಂಬ ಅರಿವುಂಟಾಗಿ ಹಿಂದೆ ಸರಿದಿದ್ದಾರೆ. ಇನ್ನು ಕೆಆರ್‌ಎಸ್ ಪಕ್ಷದಿಂದ ರಮೇಶ್‌ಗೌಡರು ಕಣಕ್ಕಿಳಿಯುವ ಸಾಧ್ಯತೆಯಿದೆ.

2023ರಲ್ಲಿ ಗೆಲುವಿನ ಸಾಧ್ಯತೆ ಯಾರಿಗೆ?

ಕಳೆದ ಚುನಾವಣೆಯಲ್ಲಿ ಎಚ್‌ಡಿಕೆ ಸಿಎಂ ಆಗುತ್ತಾರೆ ಎಂಬ ಅಲೆ ಇತ್ತು. ದೇವೇಗೌಡರು ಚಲುವರಾಯಸ್ವಾಮಿ ವಿರುದ್ಧ ಹರಿಹಾಯ್ದಿದ್ದರು. ಇದೆಲ್ಲದರ ಪರಿಣಾಮ ಜೆಡಿಎಸ್‌ನ ಸುರೇಶ್‌ಗೌಡರು ಭಾರೀ ದೊಡ್ಡ ಅಂತರದಲ್ಲಿ ಗೆದ್ದಿದ್ದರು. ಆದರೆ ಸದ್ಯ ಆಡಳಿತ ವಿರೋಧಿ ಅಲೆ ಅವರನ್ನು ಕಾಡುತ್ತಿದೆ. ಅಲ್ಲದೆ ಅಂದು ಅವರೊಟ್ಟಿಗೆ ಇದ್ದ ಶಿವರಾಮೇಗೌಡ ಮತ್ತು ಫೈಟರ್ ರವಿ ಸದ್ಯ ಅವರ ವಿರುದ್ಧವೇ ತಿರುಗಿಬಿದ್ದಿದ್ದಾರೆ. ಜೆಡಿಎಸ್ ಮುಖಂಡರಾದ ಅಪ್ಪಾಜಿಗೌಡರು ದೂರವಾಗಿದ್ದಾರೆ. ಇದರಿಂದ ಸುರೇಶ್ ಗೌಡರು ಕಂಗಾಲಾಗಿದ್ದಾರೆ. ಮತ್ತೊಮ್ಮೆ ದೇವೇಗೌಡರ ಕುಟುಂಬವೆ ತನ್ನನ್ನು ಕಾಪಾಡುತ್ತದೆ ಎಂದು ನಂಬಿದ್ದಾರೆ.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಮೇಲುಕೋಟೆಯಲ್ಲಿ ಸಿ.ಎಸ್ ಪುಟ್ಟರಾಜು ವರ್ಸಸ್ ದರ್ಶನ್ ಪುಟ್ಟಣ್ಣಯ್ಯ ನಡುವೆ ಫೈಟ್: ಅದೃಷ್ಟದ ಅದಲುಬದಲು ಸಾಧ್ಯವೇ?

ಇನ್ನೊಂದೆಡೆ ಚಲುವರಾಯಸ್ವಾಮಿಯವರು ಗೆಲುವಿನ ಭರವಸೆಯಲ್ಲಿದ್ದಾರೆ. ಕಳೆದ ಚುನಾವಣೆಯ ಸೋಲಿನ ಅನುಕಂಪ, ಈ ಹಿಂದೆ ಮಾಡಿರುವ ಅಭಿವೃದ್ಧಿ ಕೆಲಸಗಳು, ಸಿದ್ದರಾಮಯ್ಯನವರ ಪರವಾಗಿ ಕ್ಷೇತ್ರದಲ್ಲಿರುವ ಅಲೆಯನ್ನು ನಂಬಿಕೊಂಡು ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದಾರೆ. ಇನ್ನು ಕಣಕ್ಕೆ ಎಲ್.ಆರ್ ಶಿವರಾಮೇಗೌಡರು ಮತ್ತು ಫೈಟರ್ ರವಿ ಎಂಟ್ರಿ ಕೊಟ್ಟಿರುವುದು ಚಲುವರಾಯಸ್ವಾಮಿಯವರಿಗೆ ವರವಾಗಿ ಪರಿಣಮಿಸಿದೆ. ಏಕೆಂದರೆ ಅವರಿಬ್ಬರೂ ಸಹ ಕಾಂಗ್ರೆಸ್‌ಗಿಂತ ಹೆಚ್ಚಾಗಿ ಜೆಡಿಎಸ್ ಮತಗಳನ್ನು ಸೆಳೆದುಕೊಳ್ಳಲಿದ್ದಾರೆ. ಹಾಗಾಗಿ ಮತ ವಿಭಜನೆಯಾಗಿ ತನ್ನ ಗುರಿ ಸುಲಭವಾಗಲಿದೆ ಎಂಬುದು ಅವರ ಲೆಕ್ಕಾಚಾರ.

ಶಿವರಾಮೇಗೌಡರು ಕೆಲ ದಿನಗಳ ಹಿಂದೆ ಡಿ.ಕೆ ಶಿವಕುಮಾರ್ ಜೊತೆ ಕಾಣಿಸಿಕೊಂಡಿದ್ದರು. ಅಲ್ಲದೆ ಜೆಡಿಎಸ್ ವಿರುದ್ಧ ಕಿಡಿಕಾರುತ್ತಿದ್ದಾರೆ. ಬಿಜೆಪಿ ಟಿಕೆಟ್ ಕೊಟ್ಟರೆ ಅಲ್ಲಿಂದಲೂ ಸ್ಪರ್ಧಿಸಲು ಸಿದ್ಧ ಎನ್ನುತ್ತಿದ್ದಾರೆ. ಇನ್ನು ಫೈಟರ್ ರವಿಯಂತೂ ಸುರೇಶ್ ಗೌಡರನ್ನು ಸೋಲಿಸಿ ಪಾಠ ಕಲಿಸುವ ಉಮೇದಿನಲ್ಲಿದ್ದಾರೆ. ಇದಿಷ್ಟು ಚಲುವರಾಯಸ್ವಾಮಿಯವರು ಸದ್ಯದ ಮಟ್ಟಿಗೆ ಮೇಲುಗೈ ಸಾಧಿಸಿರುವುದನ್ನು ಸೂಚಿಸುತ್ತದೆ. ಆದರೆ ಚುನಾವಣೆ ಹತ್ತಿರವಾದಂತೆ ದೇವೇಗೌಡರು ಯಾವ ದಾಳ ಉರುಳಿಸುತ್ತಾರೆ ಎಂದು ಕಾದು ನೋಡಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...