Homeಸಾಹಿತ್ಯ-ಸಂಸ್ಕೃತಿಕಥೆ’ಪ್ರತೀಕಾರ’: ರಾಜಶೇಖರ್‌ ಅಕ್ಕಿಯವರ ಕಥೆ

’ಪ್ರತೀಕಾರ’: ರಾಜಶೇಖರ್‌ ಅಕ್ಕಿಯವರ ಕಥೆ

- Advertisement -
- Advertisement -

ಅವನು ಮನೆಗೆ ಬಂದ. ಅಂದು ಕಛೇರಿಯಲ್ಲಿ ಅವನ ಕೊನೆಯ ದಿನವಾಗಿತ್ತು. ಕಛೇರಿಯಲ್ಲಿ ಒಂದು ಪುಟ್ಟ ಬೀಳ್ಕೊಡುಗೆಯ ಕಾರ್ಯಕ್ರಮವಷ್ಟೇ ಇತ್ತು. ಮಧ್ಯಾಹ್ನಕ್ಕೇ ಮುಗಿಯುತು. ಹಾಗಾಗಿ ಮೂರು ಗಂಟೆಗೆ ಆತ ಮನೆಯಲ್ಲಿದ್ದ. ಮನೆ ಅಂದರೆ ಮನೆ ಅದು. ಎರಡು 40*60 ಸೈಟುಗಳನ್ನು ಸೇರಿಸಿ ಅದರಲ್ಲಿ ಅರ್ಧ ಮನೆ ಅರ್ಧ ಗಾರ್ಡನ್ನು. ಗಾರ್ಡನ್ನಿನಲ್ಲಿಯ ಪ್ರತಿಯೊಂದು ಗಿಡವನ್ನೂ ಎಚ್ಚರದಿಂದ ಆಯ್ಕೆ ಮಾಡಲಾಗಿತ್ತು. ಆ ಗಿಡಗಳ ಆರೈಕೆಯನ್ನು ಅಷ್ಟೇ ಕಾಳಜಿಯಿಂದ ಮಾಡಲಾಗುತ್ತಿದೆ ಎನ್ನುವುದು ಒಂದು ಸಲ ನೋಡಿದರೆ ಯಾರಿಗಾದರೂ ಗೊತ್ತಾಗಬಹುದಿತ್ತು. ವಾಸುದೇವನ 86 ವರ್ಷದ ತಂದೆಯೇ ಮನೆಯಂಗಳದ ತೋಟವನ್ನು ನೋಡಿಕೊಳ್ಳುತ್ತಿದ್ದರು. ಯಾವ್ಯಾವ ಗಿಡ ಎಲ್ಲಿರಬೇಕು, ಎಷ್ಟು ನೀರು ಹಾಕಬೇಕು, ಎಷ್ಟು ಗೊಬ್ಬರ ಹಾಕಬೇಕು ಎಂದು ಪಕ್ಕಾ ಪ್ಲ್ಯಾನಿಂಗ್‍ದಿಂದಲೇ ಅಷ್ಟು ಸುಂದರವಾದ ತೋಟ ನಿರ್ಮಿಸಿದ್ದರು. ಅದು ಕೇವಲ ಸುಂದರವಾದ ತೋಟವಾಗಿರದೇ, ಅಲ್ಲಿ ಕೊತ್ತಂಬರಿ, ಮೆಣಸಿನಕಾಯಿ, ಕುಂಬಳಕಾಯಿ, ಬದನೇಕಾಯಿ, ತೆಂಗು ಮತ್ತು ಅದರೊಂದಿಗೆ ಪೇರಲಕಾಯಿ, ಸಪೋಟ ಮತ್ತಿತರ ಹಣ್ಣಿನ ಗಿಡಗಳೂ ಇದ್ದವು. ಬೆಳಗ್ಗೆ ಸರಿಯಾಗಿ ಆರು ಗಂಟೆಗೆ ಎದ್ದು ಕೈತೋಟದಲ್ಲಿ ಕೆಲಸ ಮಾಡುವುದನ್ನು ಕಳೆದ 25 ವರ್ಷಗಳಲ್ಲಿ ಒಂದೆರಡು ಸಲ ಮಾತ್ರ ತಪ್ಪಿಸಿರಬಹದು ಆ ಮುದುಕ. ತೋಟದ ಕೆಲಸ ನಿರಂತರವಾಗಿ ಮಾಡುವುದರಿಂದ ತೋಟದ ಜೊತೆಗೆ ತನ್ನ ಆರೋಗ್ಯವನ್ನೂ ಅಷ್ಟೇ ಸಧೃಡವಾಗಿಟ್ಟುಕೊಂಡಿದ್ದ ಆತ.

ಅವರನ್ನು ಎಲ್ಲರೂ ತೋಂಟದವರು ಎಂದು ಕರೆಯುತ್ತಿದ್ದರು. ಮೂಲತಃ ಅವರಿಗೆ ಉತ್ತರಕರ್ನಾಟಕದಲ್ಲಿ ಎಲ್ಲರಿಗೂ ಇರುವಂತೆ ಅಡ್ಡ ಹೆಸರು ಇರಲಿಲ್ಲ. ಕೇವಲ ಒಂದು ತಲೆಮಾರಿನ ಹಿಂದೆಯಿಂದ ಈ ತೋಂಟದವರು ಎನ್ನುವುದು ಅವರೆಲ್ಲರ ಹೆಸರಿನ ಜೊತೆಗೆ ಅಂಟಿಕೊಂಡಿತ್ತು. ವಾಸುದೇವ ಮೂರು ಮಕ್ಕಳಲ್ಲಿ ಮೊದಲನೆಯವನು. ಹಾಗಾಗಿ ಹೆಚ್ಚಿನ ಜವಾಬ್ದಾರಿ ಹೊಂದಿದವ. ತನ್ನ ಜೀವನವನ್ನೂ ತನ್ನ ತಂದೆಯ ಜೀವನದಷ್ಟೇ ಅಚ್ಚುಕಟ್ಟಾಗಿ ಕಳೆದವನು. ತಂದೆ ಸರಕಾರಿ ನೌಕರರಾಗಿದ್ದವನು. ತಾಯಿ ಗೃಹಿಣಿ. ಜಗತ್ತಿನ ಎಲ್ಲಾ ವಿಷಯಗಳ ಬಗ್ಗೆ ಜ್ಞಾನ ಹೊಂದಿದ್ದ ತಂದೆಯು ಮಕ್ಕಳಿಗೆಲ್ಲಾ ಮಾರ್ಗದರ್ಶಕರಾಗಿದ್ದರು. ವಾಸುದೇವ ಹಿರಿಯವನಾಗಿದ್ದರಿಂದ ತನ್ನ ವಿದ್ಯಾಭ್ಯಾಸದಲ್ಲೂ ಹೆಚ್ಚಿನ ರಿಸ್ಕ್ ತೆಗೆದುಕೊಳ್ಳಲು ಆಗಲಿಲ್ಲ. ತನಗೆ ಇಷ್ಟ ಇಲ್ಲದಿದ್ದರೂ ಎಸ್‍ಎಸ್‍ಎಲ್‍ಸಿ ಮುಗಿದ ನಂತರ ಕಾಮರ್ಸ್ ಆಯ್ಕೆ ಮಾಡಿಕೊಂಡ. ಮುಂಚೆಯಿಂದಲೂ ಶಾಲೆಯಲ್ಲಿ ಕೊಟ್ಟ ಹೋಮ್‍ವರ್ಕ್ ಸರಿಯಾಗಿ ಮಾಡಿ ರೂಢಿಯಿತ್ತಾದರಿಂದ ಸುಲಭವಾಗಿ ಪ್ರತಿ ಪರೀಕ್ಷೆಯಲ್ಲೂ ಒಳ್ಳೆಯ ಮಾರ್ಕ್ಸ್‌ ಪಡೆದೇ ಪಾಸಾದ. ಕಾಲೇಜಿನಲ್ಲಿದ್ದಾಗ ಬೇರೇನಾದರೂ ಮಾಡಬೇಕು ಎನ್ನುವ ತುಡಿತವಿದ್ದರೂ, ತಾನು ಕಟ್ಟಿದ ಬ್ಯಾಂಕಿಂಗ್ ಪರೀಕ್ಷೆಯಲ್ಲಿ ಒಳ್ಳೆಯ ಮಾರ್ಕ್ಸ್‌ ಪಡೆದು ಪಾಸ್ ಆಗಿದ್ದರಿಂದ ಒಂದು ಸೆಕ್ಯೂರ್ ನೌಕರಿಯನ್ನು ನಿರಾಕರಿಸುವಷ್ಟು ಧೈರ್ಯ ಅವನಿಗಿರಲಿಲ್ಲ. ಅದರೊಂದಿಗೆ ಅಪ್ಪನ ಮಾರ್ಗದರ್ಶನವೂ ಕೆಲಸ ಮಾಡಿದ್ದರಿಂದ ಒಂದು ಒಳ್ಳೇ ಸುಖಿ ಜೀವನವನ್ನು ಕಟ್ಟಿಕೊಳ್ಳುವುದಕ್ಕೆ ಬ್ಯಾಂಕಿನ ಕೆಲಸ ಉತ್ತಮ ಆಗಿತ್ತು. ಹಾಗೇ ಮಾಡಿದ.

ತಮ್ಮ ಆ ದಿನಗಳಲ್ಲೇ ಇಂಜಿನೀಯರಿಂಗ್ ಮಾಡಿ ಮುಗಿಸಿ, ಒಂದೊಳ್ಳೆ ಹುಡುಗಿ ನೋಡಿ ಮದುವೆ ಮಾಡಿಕೊಂಡು, ಕೆಲ ವರ್ಷ ಬೆಂಗಳೂರಿನಲ್ಲಿ ಕೆಲಸ ಮಾಡಿ ವಿದೇಶಕ್ಕೆ ಹೋದ. ಊರಿನಲ್ಲಿ ಇಂತಹ ದೊಡ್ಡ ಮನೆ ಕಟ್ಟಲು ಯಥೇಚ್ಚವಾಗಿ ದುಡ್ಡು ಕಳುಹಿಸಿದ. ತನ್ನ ಮಡದಿ, ಮಕ್ಕಳೊಂದಿಗೆ ಎರಡು ಮೂರು ವರ್ಷಕ್ಕೊಮ್ಮೆ ಊರಿಗೆ ಬಂದು ಹೋಗುತ್ತಿದ್ದ. ಫಾರಿನ್ನಿನಲ್ಲಿ ಇರುವ ಇತರರು ತಮ್ಮ ತಂದೆತಾಯಿಯವರೊಂದಿಗೆ ಪ್ರತಿದಿನ ಅಂತರಜಾಲದ ಮುಖಾಂತರ ಸಂಪರ್ಕ ಇಟ್ಟುಕೊಳ್ಳದಿದ್ದರೂ, ತಿಂಗಳಿಗೆ ಕೇವಲ ಒಂದೆರಡು ಸಲ ಮಾತ್ರ ಕರೆ ಮಾಡಿ ಮಾತನಾಡಿಸಿದರೂ, ಊರಿಗೆ ಬಂದಾಗ ಅತ್ಯಂತ ಪ್ರೀತಿಪೂರ್ವಕವಾಗಿ ಎಲ್ಲರೊಂದಿಗೆ ವ್ಯವಹರಿಸುತ್ತಿದ್ದ.

ತಂಗಿಯೂ ಓದಿನಲ್ಲಿ ಮುಂದಿದ್ದಳು. ಡಿಗ್ರಿ ಮುಗಿಸಿ, ಬಿಎಡ್ ಮಾಡಿದ ಅವಳಿಗೆ ಸರಕಾರಿ ಶಾಲೆಯ ಶಿಕ್ಷಕಿಯ ಕೆಲಸ ಸಿಗಲು ಬಹಳ ತಡವಾಗಲಿಲ್ಲ. ಅಷ್ಟರಲ್ಲಿ ಒಬ್ಬ ಒಳ್ಳೆಯ ಹುಡುಗನನ್ನು ನೋಡಿ ಮದುವೆ ಮಾಡಿಸಿದರು. ಹುಡುಗ ಬೆಂಗಳೂರಿನಲ್ಲಿ ಒಳ್ಳೆಯ ಕೆಲಸ ಮಾಡುತ್ತಿದ್ದರಿಂದ, ಇವಳು ತನ್ನ ಕೆಲಸಕ್ಕೆ ರಾಜೀನಾಮೆ ನೀಡಿ ಅವನೊಂದಿಗೆ ಸೇರಿಕೊಳ್ಳಬೇಕಾಯುತು. ಎರಡು ಮಕ್ಕಳಾದ ಮೇಲೆ, ಖಾಸಗಿ ಶಾಲೆಗಳು ಎಲ್ಲಾಕಡೆ ಹಬ್ಬಿದಾಗ ಮತ್ತೇ ಕೆಲಸಕ್ಕೆ ಹಾಜರಾದಳು. ಅವಳದ್ದೂ ಸುಖಿ ಸಂಸಾರ.

ಒಟ್ಟಿನಲ್ಲಿ ಅಂತ್ಯಂತ ಗೌರವಯುತವಾದ, ಆರ್ಥಿಕವಾಗಿ ಸಾಕಷ್ಟು ಗಟ್ಟಿಯಾಗಿರುವ ಕುಟುಂಬ ತೋಂಟದವರದಾಗಿತ್ತು. ವಾಸುದೇವನ ತಾಯಿಯೂ ಈ ನೆಮ್ಮದಿಗೆ ಸಾಕಷ್ಟು ದುಡಿದವಳು. ಗಂಡ ಹೇಳಿದ್ದನ್ನು ಚಾಚೂತಪ್ಪದೇ ಪಾಲಿಸಿ, ಮನೆಯಲ್ಲಿ ಯಾವುದೇ ಕಲಹಗಳು ಆಗದಂತೆ ಮಕ್ಕಳನ್ನು, ಮೊಮ್ಮಕ್ಕಳನ್ನು ತನಗೆ ಸಾಧ್ಯವಾಗುವಷ್ಟು ದಿನ ನೋಡಿಕೊಂಡಳು. ವಾಸುದೇವನ ತಂದೆ ಕೆಲಸದಿಂದ ರಿಟೈರ್ ಆದ ನಂತರ, ವಾಸುದೇವನ ಹತ್ತಿರವೇ ಬಂದು ನೆಲಸಿದ. ಆಗಲೇ ಒಂದೊಳ್ಳೇ ಮನೆ ಕಟ್ಟಬೇಕು ಎಂಬ ಯೋಚನೆ ಗಟ್ಟಿಯಾಗಿ, ಒಂದೇ ವರ್ಷದಲ್ಲಿ ಸೈಟು ಖರೀದಿಸಿ, ಮಾರನೇ ವರ್ಷದಲ್ಲಿ ಸುಂದರವಾದ ಮನೆ ಕಟ್ಟಿಸಿ, ತನ್ನ ಯೋಜನೆಯನ್ನು ಕಾರ್ಯಗತಗೊಳಿಸಿದರು.

ವಾಸುದೇವನ ದಕ್ಷತೆ ಕಾರ್ಯಕ್ಷಮತೆಯಿಂದಾಗಿ, ಬಹುಬೇಗ ಬಡ್ತಿ ಪಡೆಯುತ್ತ ರೀಟೈರ್ ಆಗುವ ಹೊತ್ತಿಗೆ ಆ ಬ್ಯಾಂಕಿನ ಝೋನಲ್ ಮ್ಯಾನೇಜರ್ ಆಗಿದ್ದ. ತನಗೆ ಸಲ್ಲತ್ತಿದ್ದ ಗೌರವ, ಇತರರು ತನ್ನನ್ನು ನೋಡಿ ಹೆದರಿಕೆಯಿಂದ ನಡೆದುಕೊಳ್ಳುತ್ತಿದ್ದು ಒಂದು ರೀತಿಯ ಖುಷಿ ನೀಡಿತ್ತು ವಾಸುದೇವನಿಗೆ. ತೋಂಟದ ಸಾಹೇಬರು ಎಂದರೆ, ಸದಾ ಹಸನ್ಮುಖನಾಗಿದ್ದು, ಕೆಲಸದಲ್ಲಿ ತೊಡಗಿದ ವ್ಯಕ್ತಿ, ಜನರನ್ನು ಅಷ್ಟಾಗಿ ಹಚ್ಚುಕೊಳ್ಳಲ್ಲ, ಆದರೆ ತುಂಬಾ ಒಳ್ಳೇ ವ್ಯಕ್ತಿ ಎಂದು ಜನರು ಆಡಿಕೊಳ್ಳುವುದು ವಾಸುದೇವನಿಗೆ ಗೊತ್ತಿತ್ತು. ಮದುವೆ ಆಗಿ ಮನೆಗೆ ಕಾಲಿಟ್ಟ ಹೆಂಡತಿಯನ್ನು ಯಾವಾಗಲೂ ಪ್ರೀತಿಯಿಂದಲೇ ನೋಡಿಕೊಂಡ. ಅವಳಿಗೆ ಯಾವುದೇ ತೊಂದರೆಯಾಗಬಾರದು ಎನ್ನುವಂತೆ ನಡೆದುಕೊಳ್ಳುತ್ತಿದ್ದ. ಅವಳೂ ತನ್ನ ಪತಿನಿಷ್ಠೆಯನ್ನು ಪಾಲಿಸಿದಳು ಎಂದು ತೋರುತ್ತಿತ್ತು. ರಿಟೈರ್ ಆಗುವುದಕ್ಕೆ ಮುಂಚೆಯೇ ಮಕ್ಕಳಿಬ್ಬರೂ ಬೆಂಗಳೂರಿನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಒಟ್ಟಿನಲ್ಲಿ ಸುಖಿ ಸಂಸಾರ. ಅವನ ಹೆಂಡತಿ ಬೆಂಗಳೂರಿನಲ್ಲಿದ್ದ ಹಿರಿಯ ಮಗನ ಹತ್ತಿರ ಹೋಗಿ ಇರುವ ಇಚ್ಛೆ ವ್ಯಕ್ತಪಡಿಸಿದಾಗ ವಾಸುದೇವ ಖುಷಿಯಿಂದಲೇ ಒಪ್ಪಿಕೊಂಡ. ತನ್ನ ರಿಟೈರ್‍ಮೆಂಟ್‍ನ ದಿನ ಸಮೀಪವಾದಂತೆ ವಾಸುದೇವ ಅಂತರ್ಮುಖಿಯಾಗತೊಡಗಿದ್ದ. ಮುಂಚೆಯೇನೂ ಅವನು ಅಷ್ಟಾಗಿ ಬಹಿರ್ಮುಖಿಯಾಗಿರಲಿಲ್ಲ. ಆದರೆ, ರಿಟೈರ್‍ಮೆಂಟ್‍ಗೆ ಸರಿಯಾಗಿ ಒಂದು ವರ್ಷ ಇರುವಂತೆ ಏನೋ ಯೋಚನೆ ಮಾಡುವಂತೆ ತೋರುತ್ತಿದ್ದ. ಮನೆಗೆ ಬಂದು ಕೈಕಾಲು ತೊಳೆದುಕೊಂಡು ಸುಮ್ಮನೇ ಕುಳಿತುಕೊಳ್ಳುತ್ತಿದ್ದ. ಇದು ಸುಮಾರು ಒಂದು ತಿಂಗಳು ನಡೆಯಿತು. ಆಮೇಲೆ ಧೀಡೀರನೆ ತನ್ನ ಈ ಹೊಸ ಚಾಳಿಯನ್ನು ಬದಲಾಯಿಸಿಕೊಂಡ. ಮುಂಚಿನಂತಾದ, ಮೊದಲೆಷ್ಟು ಮಾತನಾಡುತ್ತಿದ್ದನೋ, ಅಷ್ಟು ಮಾತನಾಡಿದ. ಮನೆಯ ವ್ಯವಹಾರಗಳಲ್ಲಿ ಆದಷ್ಟು ಆಸಕ್ತಿ ತೋರಿದ.

ಅಂದು ಅವನ ರಿಟೈರ್‍ಮೆಂಟಿನ ದಿನ. ಮೂವ್ವತ್ತೇಳು ವರ್ಷ ಒಂದು ಕಡೆ ಕೆಲಸ ಮಾಡಿದ ವಾಸುದೇವನಿಗೆ ನಿವೃತ್ತಿ ಎನ್ನುವುದು ಅವನ ಸುತ್ತಮುತ್ತ ಇರುವವರಿಗೆ ಅರಗಿಸಿಕೊಳ್ಳುವುದು ಕಷ್ಟವಾಗುತ್ತಿತ್ತು. ದೈಹಿಕವಾಗಿ, ಮಾನಸಿಕವಾಗಿ ಯಾವುದೇ ದೃಷ್ಟಿಯಲ್ಲೂ ನಿವೃತ್ತಿ ಹೊಂದುವವರ ತರಹ ಕಾಣುತ್ತಿದ್ದಿಲ್ಲ. ಇನ್ನೂ ಒಂದಿಪ್ಪತ್ತು ವರ್ಷ ಕೆಲಸ ಮಾಡಬಹದು ಎಂಬುವಂತಿದ್ದ. ಅಂದು ಕಛೇರಿಯಲ್ಲಿ ಬೀಳ್ಕೊಡುಗೆ ಸಮಾರಂಭವಿತ್ತು, ಕೊನೆಯ ದಿನ ಮಾಡಲು ಯಾವ ಕೆಲಸವೂ ಇರಲಿಲ್ಲ. ಒಂದು ಕಡೆ ಮಾತ್ರ ಸೈನ್ ಮಾಡಬೇಕಿತ್ತು. ಸೈನ್ ಮಾಡಿ ತನ್ನ ಕೇಬಿನ್‍ನಲ್ಲಿ ಕುಳಿತಿದ್ದಾಗ ಇತರ ಸಿಬ್ಬಂದಿಗಳು ಕರೆದು ಕಛೇರಿಯ ಹಾಲ್‍ಗೆ ಕರೆದೊಯ್ದರು. ಒಂದಿಷ್ಟು ಸ್ವೀಟು, ಖಾರ, ಕೋಲ್ಡ್ರಿಂಕನ್ನು ಅರೇಂಜ್ ಮಾಡಲಾಗಿತ್ತು. ಕೆಲವರು ಥ್ಯಾಂಕ್ಸ್ ಹೇಳಿದರೆ, ಕೆಲವರು ಅವರ ಕಾಲೆಳೆದು ತಮಾಷೆ ಮಾಡಿದರು. ವಾಸುದೇವನೂ ಅವರು ತನ್ನ ಕಾಲೆಳದದ್ದನ್ನು ಪ್ರೋತ್ಸಾಹಿಸಿ, ತಾನೂ ಎಷ್ಟು ತಮಾಷೆ ಮಾಡಬಹದೋ ಅಷ್ಟು ಮಾಡಿ ಎಲ್ಲರನ್ನೂ ನಗಿಸಿದ. ಸಿಬ್ಬಂದಿ ಕೊಟ್ಟ ಕೆಲವು ಸ್ವೀಟ್‍ಗಳ ಬಾಕ್ಸ್‌ಅನ್ನು ತೆಗೆದುಕೊಂಡು ಮನೆಗೆ ತೆರಳಿದ. ದಾರಿಯಲ್ಲಿ ತನಗಿಷ್ಟವಾದ ಇನ್ನಷ್ಟು ಸ್ವೀಟ್‍ಗಳನ್ನೂ, ಸ್ವಲ್ಪ ತಿಂಡಿಯನ್ನೂ ಬೇಕರಿಯಿಂದ ಖರೀದಿಸಿ ಮನೆಗೆ ಮುಟ್ಟಿದಾಗ ಐದು ಗಂಟೆಯಾಗಿತ್ತು.

ಸಂಜೆ ಚಾ ಕುಡಿಯಲು ಎಲ್ಲರೂ ಸೇರಿದರು. ದೊಡ್ಡ ಲಿವಿಂಗ್ ರೂಮಿನಲ್ಲಿ ಕುಳಿತು ಮನೆಯನ್ನೊಮ್ಮೆ ನೋಡಿದ ವಾಸುದೇವ. ಗೋಡೆಗಳ ಮೇಲೆ ಕಲಾಕೃತಿಗಳ ಎರಡು ದೊಡ್ಡ ಫೋಟೋಗಳು, ಆಫ್ ವೈಟ್ ಎನ್ನಬಹುದಾದ ಬಣ್ಣದ ಗೋಡೆ. ಒಂದೂವರೆ ಲಕ್ಷ ಕೊಟ್ಟು ತರಿಸಿದ ಸೋಫಾ, ನಿನ್ನೆ ತಾನೆ ತಂದಂತಿತ್ತು. ಅಲ್ಲಲ್ಲಿ ತನ್ನ ಮಕ್ಕಳ ಫೋಟೋಗಳನ್ನು ಫ್ರೇಮ್ ಹಾಕಿ ಇಡಲಾಗಿತ್ತು. ಕೆಲವು ಪ್ಯಾಮಿಲಿ ಫೋಟೋಗಳಲ್ಲಿ ತನ್ನ ಹೆಂಡತಿಯೂ ಕಾಣಿಸುತ್ತಿದ್ದಳು. ಮನೆಯ ಯಾವ ಮೂಲೆಯನ್ನು ನೋಡಿದರೂ ಸ್ವಚ್ಛತೆ, ಅಚ್ಚುಕಟ್ಟುತನ, ಎಲ್ಲಾ ವಸ್ತುಗಳಲ್ಲಿ ಅತ್ಯುತ್ತಮ ಟೇಸ್ಟ್ ಎದ್ದು ಕಾಣುತ್ತಿತ್ತು. ಅಪ್ಪ ಇಷ್ಟೊಂದು ಟೇಸ್ಟ್ ಹೇಗೆ ಎಲ್ಲಿಂದ ರೂಢಿಸಿಕೊಂಡ ಎನ್ನುವ ಪ್ರಶ್ನೆ ಎಂದೂ ಮೂಡಿರಲಿಲ್ಲ ವಾಸುದೇವನ ತಲೆಯಲ್ಲಿ. ಅಪ್ಪ ಎಲ್ಲವನ್ನೂ ಪಡೆದೇ ಬಂದಿದ್ದ. ಅವನಿಗೆ ಎಲ್ಲವೂ ಗೊತ್ತಿತ್ತು, ಅಡುಗೆಯ ವಿಷಯವಿರಲಿ, ಯಾವ ಕಾರು ಖರೀದಿಸಬೇಕು ಎಂಬುದಿರಲಿ, ಎಲ್ಲಿ ಯಾವ ಕಾಲೇಜು, ಯಾವ ಕೋರ್ಸು ಚೆನ್ನಾಗಿರುತ್ತೆ ಎನ್ನುವುದನ್ನೂ ಸೇರಿ ಜೀವನ ನಿರ್ವಹಣೆ ಹೇಗಿರಬೇಕು ಎನ್ನವುದೆಲ್ಲವೂ ಅಪ್ಪನಿಗೆ ಚೆನ್ನಾಗಿ ತಿಳಿದಿತ್ತು. ಸುಮ್ಮನೇ ಮಾತನಾಡಿ ತೋರಿಸಿದ್ದಿಲ್ಲ ಇವನ್ನು ಆತ, ಸಾಧಿಸಿ, ತನ್ನ ಮತ್ತು ತನ್ನ ಎಲ್ಲಾ ಬಳಗದವರ ಜೀವನವನ್ನು ಕಟ್ಟಿ ಬೆಳೆಸಿ ಅದನ್ನು ಸಾಧಿಸಿ ತೋರಿಸಿದ್ದ. ಸಣ್ಣ ಕಪ್ಪಿನಲ್ಲಿ ಚಾ ಕುಡಿಯುತ್ತಿದ್ದ ಅಪ್ಪನನ್ನು ಒಂದೆರಡು ಕ್ಷಣ ನೋಡಿದ ವಾಸುದೇವ. ಅಮ್ಮನೂ ಬಂದು ಕುಳಿತಳು. ವಾಸುದೇವ ಅಮ್ಮನನ್ನು ತದೇಕಚಿತ್ತದಿಂದ ನೋಡಿದ. ಹೇಗಿದ್ದಳು ಹೇಗಾದಳು ಎನಿಸಿತು. ಅವಳು ಜಗಳವಾಡಿದ್ದು, ಅತ್ತಿದ್ದನ್ನು ನೆನಪಿಸಲು ಪ್ರಯತ್ನಿಸಿದ, ನೆನಪಾಗಲಿಲ್ಲ.

ಅಪ್ಪ ಚಾ ಮುಗಿಸಿ, ಸಂಜೆಯ ವಾಕ್‍ಗೆ ಹೊರಡಲು ಎದ್ದ. ‘ಇವೊಂದಿಷ್ಟು ಪೇಪರ್ಸ್ ನೋಡಿಕೊಳ್ಳಿ’ ಎಂದ ವಾಸುದೇವ ಅಪ್ಪನಿಗೆ. ‘ಇರಲಿ, ಆಮೇಲೆ ನೋಡಕೊತೀನಿ’ ಅಂದಾಗ ‘ಒಂದೆರಡು ನಿಮಿಷ ಮಾತಾಡಬೇಕು, ಕೂತ್ಕೊಳ್ಳಿ’ ಎಂದ ವಾಸುದೇವ. ಮಗ ಹೀಗೆ ಕೂತ್ಕೊಳ್ಳಿ ಎಂದು ಎಂದೂ ಆರ್ಡರ್ ಮಾಡಿದ್ದಿಲ್ಲ. ಅಪ್ಪನಿಗೆ ಏನು ಹೇಳಬೇಕೆಂಬುದು ತೋಚದೇ ಕುಳಿತುಕೊಂಡ. ರಿಟೈರ್‍ಮೆಂಟ್ ಬೆನೆಫಿಟ್‍ನ ಕೆಲವು ಪೇಪರ್‌ಗಳನ್ನು ತೋರಿಸಿದ, ಕೆಲವು ಸೇವಿಂಗ್ ಸ್ಕೀಮ್‍ಗಳ ಪೇಪರ್‌ಗಳನ್ನು ತೋರಿಸಿದ. ಅಪ್ಪ ನೋಡಿ ಮಂದಹಾಸ ಬೀರಿದ. ‘ರಿಟೈರ್ ಆದೆ ಇವತ್ತು.’ ಎಂದು ಎಲ್ಲರಿಗೂ ಗೊತ್ತಿರುವ ವಿಷಯವನ್ನು ಹೇಳಿದ. ಅಪ್ಪ ಎಲ್ಲಾ ಪೇಪರ್‌ಗಳನ್ನು ಕೂಲಂಕುಷವಾಗಿ ಪರಿಶೀಲಿಸಿ, ಮತ್ತೇ ಏಳಲು ಅನುವಾದ. ‘ಓಂದಿಷ್ಟು ಮಾತಡಬೇಕಿತ್ತು’. ಅಪ್ಪ ಮಗನ ಕಡೆ ನೋಡಿದ. ‘ಅರವತ್ತು ವರ್ಷ ಆಯಿತು ನಂಗೆ, ಇವತ್ತು ರಿಟೈರ್ ಆದೆ ಕೆಲಸದಿಂದ’ ವಾಸುದೇವ ಮತ್ತೇ ಹೇಳಿದ. ಅಪ್ಪ ನಕ್ಕ. ‘ಏನು ಹೇಳು’ ಅಂದಾಗ ವಾಸುದೇವ ಸುಮ್ಮನೇ ಕೂತ. ರಿಟೈರ್ ಆದಮೇಲೂ ಏನೆಲ್ಲ ಮಾಡಬಹುದು’ ಎಂದು ಮತ್ತೇನೋ ಹೇಳಲು ಹೋದಾಗ ವಾಸುದೇವ ಅಪ್ಪನ ಮಾತನ್ನು ಕತ್ತರಿಸಿ, ‘ಗೊತ್ತು, ಅದರ ಬಗ್ಗೆನೇ ಮಾತಾಡೋದಿತ್ತು’. ‘ಹೇಳಪ್ಪ..’ ಎಂದ ಅಪ್ಪ. ‘ಈಗ ನಿಮಗೆ ಹೇಳಕ್ಕೆ ಆಗಲ್ಲ, ತಡೀರಿ, ನನ್ನ ಮಾತು ಮೊದಲು ಮುಗಸ್ತೀನಿ’. ಅಪ್ಪ ನಡುವೆ ಬಾಯಿ ಹಾಕಬೇಕೆಂದರೆ ಸುಮ್ಮನಾದ. ‘ಇಷ್ಟು ದಿವಸ ನಾನು ಎಲ್ಲಾ ಸರಿಯಾಗೇ ಮಾಡಿದೀನಿ, ಈಗ ಮುಂದೆನೂ ಏನು ಮಾಡಿದರೂ ಕರೆಕ್ಟಾಗಿ ಮಾಡ್ತೀನಿ ಅಂತ ನನಗೆ ವಿಶ್ವಾಸ ಇದೆ, ನಿಮಗೂ ಅಷ್ಟು ವಿಶ್ವಾಸ ನನ್ನ ಬಗ್ಗೆ ಬಂದಿರಬೇಕು’.

ಅಪ್ಪ ಸುಮ್ಮನೇ ಕೂತ. ‘ಅಷ್ಟು ವಿಶ್ವಾಸ ಇದೆಯೋ ಇಲ್ವೋ?’ ಎಂದು ಕೇಳಿದಾಗ ಸಂದರ್ಭದ ಗಂಭೀರತೆಯನ್ನು ಅರ್ಥಮಾಡಿಕೊಂಡು, ‘ಓ ಖಂಡಿತಾ, ಸಂಪೂರ್ಣ ವಿಶ್ವಾಸವಿದೆ, ನನಗೆ ನಿಮ್ಮಮ್ಮಂಗೆ’ ಎಂದ. ‘ಥ್ಯಾಂಕ್ಯೂ, ಈಗ ಏನೋ ಒಂದು ಚಿಕ್ಕ ಕೆಲಸ ಮಾಡಲು ಹೊರಟಿದ್ದೇನೆ, ನಿಮ್ಮ ಒಪ್ಪಿಗೆ ಬೇಕು. ಏನು ಕೆಲಸ ಅಂತ ಆಮೇಲೆ ಹೇಳ್ತೀನಿ, ಈಗ ಕೇಳಬೇಡಿ’. ಅಪ್ಪ ಸುಧಾರಿಸಿಕೊಂಡು, ‘ಏನಪ್ಪ?’ ಎಂದಾಗ ವಾಸುದೇವ ನಕ್ಕು ವಾತಾವರಣವನ್ನು ತಿಳಿಯಾಗಿಸಿದ.

‘ಏನೋ ಒಂದು, ನೀವು ಹೇಳಿದ್ರಲ್ಲ ನನ್ನ ಮೇಲೆ ವಿಶ್ವಾಸ ಇದೆ ಅಂತಾ.., ಈಗ ಹೇಳಿ’. ಆಗ ಅಪ್ಪ, ‘ಖಂಡಿತ ವಿಶ್ವಾಸ ಇದೆ, ಏನೋ ಒಂದು ಕುತೂಹಲ ಇರುತ್ತಲ್ಲ ಅದಕ್ಕೆ ಕೇಳಿದೆ, ನೀ ಏನು ಮಾಡಿದರೂ ನಮ್ಮ ಬೆಂಬಲ ಇರುತ್ತೆ’. ವಾಸುದೇವ ಇಷ್ಟಕ್ಕೆ ಬಗ್ಗುವ ಹಾಗೆ ಕಾಣಲಿಲ್ಲ. ‘ಸುಮ್ನೇ ಹೇಳ್ತಿದೀರೋ ಏನು?’ ಎಂದ. ‘ಸುಳ್ಳು ಯಾಕೆ ಹೇಳಲಿ ವಾಸು?’. ‘ಪ್ರಶ್ನೆ ಅದಲ್ಲ, ನೀವು ಮನಃಪೂರ್ವಕವಾಗಿ ಹೇಳಬೇಕು, ಅಷ್ಟೇ, ನನಗೂ ಖುಷಿಯಾಗುತ್ತೆ. ನಿಮಗ್ಗೊತ್ತು ನಾನೇನು ಹೇಳ್ತಿದೀನಿ ಅಂತ’ ಎಂದು ವಾಸುದೇವ ಸ್ಪಷ್ಟಪಡಿಸಿದ. ಆಗ ಅಪ್ಪ ನಿಜಕ್ಕೂ ‘ಆಯ್ತು, ನೀನು ಪ್ರೂವ್ ಮಾಡಿದೀಯ, ವಿಶ್ವಾಸ ಇದೆ ನಿನ್ನ ಮೇಲೆ, ಏನು ಮಾಡ್ತೀಯೋ ಮಾಡು’ ಎಂದು ಹೇಳಿದ.

ಅವನ ಮಾತಿನ ಪ್ರಾಮಾಣಿಕತೆ ಎದ್ದುಕಾಣುತ್ತಿತ್ತು. ವಾಸುದೇವ ಖುಷಿಯಾದ. ಎದ್ದು, ಚಾ ಕಪ್ಪುಗಳನ್ನು ಅಡುಗೆಮನೆಗೆ ತೆಗೆದುಕೊಂಡು ಹೋದ. ಅಮ್ಮ ಕುಳಿತೇ ಇದ್ದಳು. ಅಪ್ಪ ಮಗ ಮಾತನಾಡುವಾಗ ನಡುವೆ ಬಾಯಿ ಹಾಕಬಾರದು ಎಂಬುದು ಅವಳಿಗೆ ಗೊತ್ತಿತ್ತು. ಕಪ್ಪುಗಳನ್ನು ಒಳಗೆ ಇಟ್ಟು ಅಮ್ಮನ ಎದುರಿಗೆ ಕುಳಿತುಕೊಂಡ. ನಕ್ಕು ಒಂದಿಷ್ಟು ಮಾತನಾಡಿಸಿದ. ‘ಇವತ್ತು ರಾತ್ರಿ ಊಟ ಮೇಲೇನೇ ಮಾಡ್ತೀನಿ, ತಟ್ಟೆ ಹಚ್ಚಿ ಕೊಟ್ಟುಬಿಡು’ ಎಂದ. ಅಮ್ಮ ಹ್ಮೂಗಿಟ್ಟಿದಳು. ರಾತ್ರಿ ಸುಮಾರು ಎಂಟು ಗಂಟೆಗೆ ವಾಸುದೇವ ತಟ್ಟೆಯಲ್ಲಿ ಒಂದಿಷ್ಟು ಊಟ ಬಡಿಸಿಕೊಂಡು, ಫಸ್ರ್ಟ್ ಫ್ಲೋರಿನಲಿದ್ದ ತನ್ನ ಕೋಣೆಗೆ ಊಟದ ತಟ್ಟೆ ತೆಗೆದುಕೊಂಡು ಹೋದ.

ಮಾರನೇ ದಿನ, ನಿವೃತ್ತಿ ಜೀವನದ ಮೊದಲ ದಿನ. ವಾಸುದೇವ ಎಂದಿನಂತೆ ಎದ್ದು ಕೆಳಗೆ ಬರಲಿಲ್ಲ. ಹನ್ನೊಂದಾದರೂ ಬರಲಿಲ್ಲ ಎಂದು ಅಪ್ಪ ಮೇಲೆ ಹೋಗಿ ನೋಡಿದ. ವಾಸುದೇವ ನೇಣು ಹಾಕಿಕೊಂಡು ಸತ್ತು ಅನೇಕ ಗಂಟೆಗಳಾಗಿದ್ದವು. ಊಟದ ತಟ್ಟೆ ಹಾಗೇ ಇತ್ತು. ಏನಾದರೂ ಸ್ಯೂಸೈಡ್ ನೋಟ್ ಬಿಟ್ಟಿರಬಹದು ಎಂದು ಅಪ್ಪ ಮನೆಯಲ್ಲ ಜಾಲಾಡಿದ, ಯಾವ ಕುರುಹೂ ಸಿಗಲಿಲ್ಲ.

(ಲೇಖಕರು ರಂಗನಿರ್ದೇಶಕರು ಹಾಗೂ ಸಾಮಾಜಿಕ ಕಾರ್ಯಕರ್ತರು)

*****


ಇದನ್ನೂ ಓದಿ: ಕಪಿಲ ಪಿ ಹುಮನಾಬಾದೆಯವರ ಕಥೆ ’ಬಿದಿರು’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...