Homeಮುಖಪುಟ’ರತ್ನನ್ ಪ್ರಪಂಚ’ ಭಾವುಕತೆಯ ಬಂಡವಾಳವಷ್ಟೇ ಸಾಕೆ?

’ರತ್ನನ್ ಪ್ರಪಂಚ’ ಭಾವುಕತೆಯ ಬಂಡವಾಳವಷ್ಟೇ ಸಾಕೆ?

- Advertisement -
- Advertisement -

ಇತ್ತೀಚಿಗೆ ಒಟಿಟಿ ವೇದಿಕೆಯೊಂದರಲ್ಲಿ ಬಿಡುಗಡೆಯಾದ ’ರತ್ನನ್ ಪ್ರಪಂಚ’ ಕನ್ನಡ ಸಿನಿಮಾ ಸಾಮಾಜಿಕ ಮಾಧ್ಯಮಗಳಲ್ಲಿ ಪರ-ವಿರೋಧ ವಿಮರ್ಶೆಗಳಿಗೆ ಸಾಕ್ಷಿಯಾಯಿತು. ಕನ್ನಡ ಸಿನಿಮಾಗಳಿಗೆ ವಿಮರ್ಶೆಯ ವಿಚಾರದಲ್ಲಿ ವಿನಾಯಿತಿ ನೀಡಬೇಕು ಎಂಬ ಒಂದು ವಲಯದ ಕೂಗು ಆಗಾಗ ಅನುರಣನಿಸುತ್ತಿರುತ್ತದೆ. ಆದರೆ ಅದಕ್ಕೆ ನೀಡುವ ಕಾರಣಗಳು ಮತ್ತು ಸಮರ್ಥನೆಗಳು ಕನ್ನಡ ಸಿನಿಮಾರಂಗದ ಗುಣಮಟ್ಟದ ಬಗೆಗನ ಕಾಳಜಿಗಿಂತ ನಿರ್ಮಾಪಕರ, ನಿರ್ದೇಶಕರ ಅಥವಾ ತಮ್ಮ ನೆಚ್ಚಿನ ನಟರ ಬಗೆಗಿನ ತೀವ್ರ ಅಭಿಮಾನ ಅಲ್ಲಿ ಕೆಲಸ ಮಾಡಿರುತ್ತದೆ. ಅಭಿಮಾನ ತನ್ನಷ್ಟಕ್ಕೇ ಸಮಸ್ಯಾತ್ಮಕವಲ್ಲವಾದರೂ, ಜಾಗತಿಕವಾಗಿ ಅತ್ಯುತ್ತಮವಾದ ಅಂದರೆ ಜನಸಾಮಾನ್ಯರ ನೋವು ನಲಿವುಗಳನ್ನು, ಸಮಸ್ಯೆಗಳನ್ನು, ಬವಣೆಗಳನ್ನು ಪರಿಣಾಮಕಾರಿಯಾಗಿ ದೃಶ್ಯರೂಪದಲ್ಲಿ ಮೂಡಿಸುತ್ತಿರುವ ಕಂಟೆಂಟ್ ಸುಲಭವಾಗಿ ಎಲ್ಲರಿಗೂ ಸಿಗುತ್ತಿರುವ ಇಂದಿನ ಸಂದರ್ಭದಲ್ಲಿ ಅಭಿಮಾನದ ಪ್ರತಿಷ್ಠೆಯಷ್ಟೇ ಕನ್ನಡ ಚಿತ್ರರಂಗಕ್ಕೆ ಸಾಲದಲ್ಲವೇ? ಕನ್ನಡನಾಡಿನ ಸಮುದಾಯಗಳ ಬದುಕು ಬವಣೆಗಳನ್ನು, ಕರ್ನಾಟಕದ ಜನರ ಕಥೆಗಳನ್ನು, ಸಾಮಾಜಿಕ ಪರಿಸದ ಹಿನ್ನೆಲೆಯಲ್ಲಿ ಪರಿಣಾಮಕಾರಿಯಾಗಿ ಕಟ್ಟಿಕೊಡುವತ್ತ ಸಿನಿಮಾರಂಗ ಬೆಳೆಯುವತ್ತ ಎಲ್ಲರೂ ಚಿಂತಿಸುವುದು ಒಳಿತಲ್ಲವೇ?

MAID

ಇತ್ತೀಚೆಗೆ ಒಟಿಟಿ ವೇದಿಕೆಯೊಂದರಲ್ಲಿ ’ಮೇಯ್ಡ್’ (MAID) ಎಂಬ ಒಂದು ಇಂಗ್ಲಿಷ್ ವೆಬ್ ಸೀರೀಸ್ ಜನಪ್ರಿಯವಾಗಿದೆ. ಅಲೆಕ್ಸ್ ಎಂಬಾಕೆ ತನ್ನ ಅಬ್ಯೂಸಿವ್ ಗಂಡನನ್ನು ತೊರೆದು ದೂರಬಂದು, ಅಸಮಾನತೆಯ ವ್ಯವಸ್ಥೆಯ ಸಮಾಜದಲ್ಲಿ ಮನೆಕೆಲಸದಾಕೆಯಾಗಿ ಬದುಕು ಕಟ್ಟಿಕೊಳ್ಳುವ ಪ್ರಕ್ರಿಯೆಯಲ್ಲಿ, ತನ್ನ ತಾಯಿಯ, ತನ್ನ ತಂದೆಯ ಮತ್ತು ತನ್ನ ಪತಿಯ ಜೊತೆಗಿನ ಸಂಬಂಧಗಳನ್ನು ಶೋಧಿಸಿಕೊಳ್ಳುವ ಕಥಾಹಂದರ ಹೊಂದಿರುವ ಈ ಸೀರಿಸ್ ಪುರುಷಾಧಿಪತ್ಯದ ವಿರುದ್ಧ ಸೆಟೆದು ನಿಲ್ಲುತ್ತದೆ. ಈ ಪಯಣದಲ್ಲಿ ಅಲೆಕ್ಸ್ ಪಾತ್ರವನ್ನು ಅನನ್ಯವಾಗಿ ಕಟ್ಟಿಕೊಡಲಾಗಿದೆ. ಪುಟ್ಟ ಮಗಳನ್ನು ಎತ್ತುಕೊಂಡು ತನ್ನ ಗಂಡನಿಂದ ದೂರ ಬಂದು ಮನೆಗೆಲಸದಾಕೆಯ ಕೆಲಸ ಹುಡುಕಿಕೊಂಡಿರುವ ಅಲೆಕ್ಸ್‌ಗೆ ವಸತಿಯ ಸಮಸ್ಯೆ ಆಗಾಗ ಕಾಡುತ್ತದೆ. ತಾಯಿಗೆ ಕೂಡ ಸರಿಯಾದ ನೆಲೆ ಇಲ್ಲ. ಚಿಕ್ಕ ವಯಸ್ಸಿನಲ್ಲಿಯೇ ದೂರವಾಗಿದ್ದ ಅಪ್ಪನ ಬಳಿ ಸಣ್ಣ ಅವಧಿಗೆ ಆಶ್ರಯ ಪಡೆದಿರುತ್ತಾಳೆ. ಒಮ್ಮೆ ಮನೆಯೊಂದನ್ನು ಸ್ವಚ್ಛ ಮಾಡಲೆಂದು ಹೋಗಿರುವಾಗ ಅಟ್ಟದಂತಹ ಒಂದು ಗೂಡಿನ ಒಳಹೊಕ್ಕಾಗ, ಅದರ ಚಿಕ್ಕ ಬಾಗಿಲು ಆಕಸ್ಮಿಕವಾಗಿ ಮುಚ್ಚಿಕೊಂಡು ಕತ್ತಲಾಗುತ್ತದೆ. ಹೊರಗೆ ಬರಲಾರದೆ ಭಯಭೀತಿಯಿಂದ ಬೆವರುತ್ತಾಳೆ. ಹೇಗೋ ಹೊರಬಂದ ಮೇಲೆ, ಮರೆತಿದ್ದ ತನ್ನ ಬಾಲ್ಯದ ನೆನಪು ಮರುಕಳಿಸುತ್ತದೆ. ತನ್ನ ಬಾಲ್ಯದಲ್ಲಿ ತಂದೆ ತನ್ನ ತಾಯಿಯನ್ನು ಹೊಡೆಯುವ ಸಮಯದಲ್ಲಿ, ಅಲ್ಮೇರದಲ್ಲಿ ಹುದುಗಿ ಬಚ್ಚಿಟ್ಟುಕೊಳ್ಳುವ ಕರಾಳ ನೆನಪದು. ತಕ್ಷಣ ತನ್ನ ತಂದೆಯ ಮನೆಗೆ ತೆರಳಿ, ಮಗಳನ್ನು ಕರೆದುಕೊಂಡು ಆ ಮನೆಯನ್ನೂ ತೊರೆಯುತ್ತಾಳೆ. ಅಲೆಕ್ಸ್‌ಳ ಹೋರಾಟ ಮುಂದುವರೆಯುತ್ತದೆ..

’ರತ್ನನ್ ಪ್ರಪಂಚ’ ಚಿತ್ರದ ಚರ್ಚೆಯೊಂದಿಗೆ ಮೇಯ್ಡ್ ವೆಬ್ ಸೀರಿಸ್ ಎಳೆದುಕೊಂಡು ಬಂದದ್ದಕ್ಕೆ ಕಾರಣವಿದೆ. ಕಥೆಯ ತಿರುವುಗಳನ್ನು ನಿರೂಪಿಸುವಾಗ ಅದು ವೀಕ್ಷಕನನ್ನು ಚಿಂತನೆಗೆ ಹಚ್ಚುವಂತೆ ಮಾಡಿ, ಅವನನ್ನು ’ಇದು ಹೇಗೆ ಸಾಧ್ಯ’ ಎಂಬ ಸಂದೇಹಕ್ಕೆ ಒಳಪಡಿಸುವುದಕ್ಕಿಂತಲೂ, ಕಥೆಯ ಮುಂದುವರಿಕೆಯನ್ನು ಸಕಾರಣವಾಗಿ ಕನ್ವಿನ್ಸ್ ಮಾಡುವಂತಿರಬೇಕು. ’ಮೇಯ್ಡ್’ನಲ್ಲಿ ಅದು ಸಿದ್ಧಿಸಿರುವುದು ಸುಲಭವಾಗಿ ನಮಗೆ ಕಾಣಸಿಗುತ್ತದೆ. ಅದನ್ನು ಜಾಗತಿಕವಾಗಿ ಎಲ್ಲ ಒಳ್ಳೆಯ ಕಥೆಗಾರರೂ-ನಿರ್ದೇಶಕರೂ ಮಾಡಲು ಪ್ರಯತ್ನಿಸುತ್ತಾರೆ.

’ರತ್ನನ್ ಪ್ರಪಂಚ’ ಸಿನಿಮಾ ಕಟ್ಟುವಿಕೆಯಲ್ಲಿ ಪ್ರೇಕ್ಷಕನಿಗೆ ಆ ಕಟ್ಟುವಿಕೆ ಹೆಚ್ಚು ಕನ್ವಿನ್ಸ್ ಆಗುವುದಕ್ಕಿಂತಲೂ ಕಥೆಯಿಂದ ಕಳಿಚಿಕೊಂಡಂತಹ ಕೊಂಡಿಗಳೇ ಕೊನೆಯವರೆಗೂ ಕಾಡುತ್ತವೆ. ತನ್ನ ತಾಯಿ ಸರೋಜಾಳ (ಉಮಾಶ್ರೀ) ಜೊತೆಗೆ ಯಾವಾಗಲೂ ಕಚ್ಚಾಡುವ ಮಗ ರತ್ನಾಕರ (ಧನಂಜಯ್). ಇದು ಏಕೆ ಹೀಗೆ ಕಟ್ಟಲಾಗಿದೆ ಎಂಬುದು ಕೂಡ ಸರಿಯಾಗಿ ಮನವರಿಕೆಯಾಗುವುದೇ ಇಲ್ಲ! ಇನ್ನು ಆಕೆ ತನ್ನ ಹೆತ್ತ ತಾಯಿಯಲ್ಲ ಎಂದು ರತ್ನಾಕರ ತಿಳಿಯುವ ಸನ್ನಿವೇಶವನ್ನೇ ಗಮನಿಸಿ. ಕಳೆದುಹೋದ ನಾಯಿಯ ಬಗ್ಗೆ ಜಾಹೀರಾತು ನೀಡಲು ಹೋದ ಪತ್ರಿಕೆಯೊಂದರ ಕಚೇರಿಯಲ್ಲಿ, ಪರಿಚಯಳಾದ ಒಬ್ಬ ಪತ್ರಕರ್ತೆ, ತನ್ನ ಸಂಪಾದಕ ಹೇಳಿದ ಮಾತಿನ ಬೆನ್ನುಬಿದ್ದು ರತ್ನಾಕರನ ನಿಜ ತಾಯಿಯ ಬಗ್ಗೆ ಪತ್ತೆ ಹಚ್ಚಿ ಆತನಿಗೆ ಹೇಳುತ್ತಾಳೆ! ಸರಿ, ’ಅಪನಂಬಿಕೆಯನ್ನು ತೊಡೆದುಹಾಕುವ’ ದೃಶ್ಯಮಾಧ್ಯಮದ ಥಿಯರಿಯ ಪ್ರಕಾರವೇ ಮುಂದುವರೆದರೆ, ತನ್ನ ಹೆತ್ತತಾಯಿಯನ್ನು ಹುಡುಕುವ ಪ್ರಯತ್ನದಲ್ಲಿ ಪ್ರಯಾಣ ಬೆಳೆಸುವ ರತ್ನಾಕರನ ಮುಂದಿನ ಕಥೆ ಘನವಾದದ್ದೇನನ್ನಾದರೂ ಪ್ರೇಕ್ಷಕನಿಗೆ ದಾಟಿಸುತ್ತದೆಯೇ ಎಂದರೆ ಅಲ್ಲಿಯೂ ನಿರಾಸೆಯೇ ಕಟ್ಟಿಟ್ಟಬುತ್ತಿ. ಅತಿಭಾವುಕ ಸನ್ನಿವೇಶಗಳನ್ನು ಪ್ರೇಕ್ಷಕನ ಮೇಲೆ ಹೇರಿ ಭಾರವಾಗಿಸುವ ಹೆಚ್ಚುಗಾರಿಕೆಯಷ್ಟೇ ಸಿನಿಮಾದಲ್ಲಿ ಸಿದ್ಧಿಸಿರುವುದು. ಜೊತೆಗೆ ಕಥೆಗೆ ಪೂರಕವಲ್ಲದ ಸಂಭಾಷಣೆಗಳನ್ನು ಅಬ್ಬರದಲ್ಲಿ ತುಂಬಿರುವುದು..

ಚಿಕ್ಕಂದಿನಲ್ಲಿ ಬಡತನದ ಕಾರಣಕ್ಕಾಗಿ ತನ್ನ ಮೂರೂ ಮಕ್ಕಳನ್ನು ಮೂರು ವಿಭಿನ್ನ ಕುಟುಂಬಗಳಿಗೆ ದತ್ತುಕೊಟ್ಟಿರುವ ತಾಯಿ. ಇಲ್ಲೂ ಸಾಮಾಜಿಕ ಪರಿಸರವನ್ನು ಕಟ್ಟಿಕೊಡುವ ಅಗತ್ಯ ನಿರ್ದೇಶಕರಿಗೆ ಕಂಡುಬಂದಂತಿಲ್ಲ. ಬಡತನದ ಕಾರಣ ಹೇಳಿಬಿಟ್ಟರೆ ಸಾಕು! ಆಕೆ ಮೂರೂ ವಿಭಿನ್ನ ಸಮುದಾಯದವರಿಗೆ
ಮಕ್ಕಳನ್ನು ದತ್ತುಕೊಟ್ಟಿದ್ದಾಳೆ, ಹಾಗಾಗಿ ಸೋದರ-ಸೋದರಿಯರು ವಿಭಿನ್ನ ಧರ್ಮೀಯರಾಗಿ, ಸಮುದಾಯದವರಾಗಿ ತಮ್ಮ ಸಾಕಿದವರ ಬಳಿ, ತಾವು ಜೊತೆಯಾದವರ ಬಳಿ ಅಕ್ಕರೆಯಿಂದ ಇದ್ದಾರೆ ಎಂಬ ಉದಾತ್ತ ಆಶಯವನ್ನು ತ್ರಾಸದಾಯಕವಾಗಿ ನಿರೂಪಿಸಲು ನಿರ್ದೇಶಕ ಶ್ರಮಿಸಿದ್ದಾರೆ.

ಈ ನಿರೂಪಣೆಯಲ್ಲಿ ರತ್ನಾಕರನ ಪಾತ್ರವನ್ನು ಗಮನಿಸಿ. ತನ್ನ ನಿಜ ತಾಯಿಯ ಬಗ್ಗೆ ತಿಳಿಯುವ ಮೊದಲೇ, ಆತನ ಸಿಟ್ಟಿನ-ಹುಚ್ಚಾಟದ ವರ್ತನೆಗೆ ಗಟ್ಟಿ ಕಾರಣಗಳನ್ನು ನಿರ್ದೇಶಕ ಕಟ್ಟಿಕೊಡುವುದಿಲ್ಲ. ತನ್ನ ಹೆತ್ತ ತಾಯಿಯ ಶೋಧಕ್ಕೆ ಜತೆಯಾಗುವ ಪತ್ರಕರ್ತೆಯ ಜೊತೆಗೆ ವರ್ತಿಸುವಾಗ ವಿಜೃಂಭಿಸುವ ’ಮಿಸೋಜಿನಿ’ಗೆ ಸರಿಯಾದ ಪ್ರತಿರೋಧವನ್ನೇ ಸಿನಿಮಾದಲ್ಲಿ ಕಟ್ಟಿಕೊಡುವುದಿಲ್ಲ. ರತ್ನಾಕರನ ತಾಯಿಯ ಪಾತ್ರದ್ದೂ ಇಂತಹ ಮಿಸೋಜಿನಿಯ ಅತಿರೇಕದ ಸಂಭಾಷಣೆಯನ್ನು ಹೊತ್ತು ಮೆರೆದಿದೆ. ಮಗನಿಗೆ ಹೆಣ್ಣು ಹುಡುಕಲು ಹೋಗುವ ಸನ್ನಿವೇಶವನ್ನು ಕಟ್ಟಿಕೊಟ್ಟಿರುವ ರೀತಿ, ತನ್ನ ಸೊಸೆಯನ್ನು ಹಂಗಿಸುವ ರೀತಿ ಇವೆಲ್ಲಾ ಹಾಸ್ಯದ ಹೆಸರಿನಲ್ಲಿ ಅಭಿರುಚಿಹೀನತೆಯನ್ನು ಮೆರೆಸಿವೆ.

ಇನ್ನು ರತ್ನಾಕರ ತನ್ನ ಸಹೋದರಿಯನ್ನು ಹುಡುಕಿ ಜಮ್ಮುಕಾಶ್ಮೀರಕ್ಕೆ ತೆರಳುವುದು, ಅಲ್ಲಿ ಇನ್ನೊಬ್ಬ ಸಹೋದರನ ಬಗ್ಗೆ ತಿಳಿದು ಉತ್ತರ ಕರ್ನಾಟಕಕ್ಕೆ ತೆರಳುವುದು ಹೀಗೆ ಕಥೆಯ ಜಾಡು ಬೆಳೆಯುತ್ತದೆಯೇ ಹೊರತು ಎಲ್ಲೂ ಹೃದಯಕ್ಕೆ ಇಳಿಯುವುದಿಲ್ಲ. ರತ್ನಾಕರನ ಈ ವೈಯಕ್ತಿಕ ಬಿಕ್ಕಟ್ಟಿನಲ್ಲಿ ಸಮಾಜದ ಆಗುಹೋಗುಗಳು, ವ್ಯವಸ್ಥೆಯ ರೂಪಗಳು ಯಾವುವೂ ಪ್ರತಿಧ್ವನಿಸುವುದಿಲ್ಲ. ತನ್ನ ಹೆತ್ತ ತಾಯಿಗಿಂತ ಸಾಕಿ ಸಲಹಿದ ತಾಯಿ ಸರೋಜಾಳ ಮೇಲೆ ಪ್ರೀತಿ ಮುಖ್ಯ ಎಂದು ಬದಲಾಗುವ ರತ್ನಾಕರನ ಪಯಣದಲ್ಲಿ ಪ್ರೇಕ್ಷಕನನ್ನು ಸಹಪಯಣಿಗನನ್ನಾಗಿಸುವ ಶಕ್ತಿಯನ್ನು ಸಿನಿಮಾ ಹೊಂದಿದೆಯೇ ಎಂಬ ಪ್ರಶ್ನೆಗೆ ನಿರಾಸೆಯೇ ಉತ್ತರ! ಬಿಂಬಿಸಿರುವ ಅಬ್ಬರಕ್ಕೆ ಬದಲಾಗಿ, ಕಟ್ಟಿಕೊಡಬೇಕೆಂದುಕೊಂಡಿರುವ ಆಶಯಕ್ಕೆ ಬದಲಾಗಿ ಸಂಬಂಧಗಳ ಸೂಕ್ಷ್ಮಗಳನ್ನು ಅವಲೋಕಿಸಲು ಪ್ರಯತ್ನಿಸಿದ್ದರೆ ಸಿನಿಮಾ ತುಸುವಾದರೂ ಗಟ್ಟಿಯಾಗಿ ಮೂಡಿರುತ್ತಿತ್ತು.

ರತ್ನಾಕರನ ಪಯಣದಲ್ಲಿ ಜತೆಯಾಗುವ ಮಯೂರಿಯದ್ದೂ (ರೆಬಾ ಮೊನಿಕಾ ಜಾನ್) ಹೆಚ್ಚುಕಮ್ಮಿ ಇದೇ ರೀತಿಯ ಕಥೆ. ಬಾಲ್ಯದಲ್ಲಿಯೇ ತಂದೆತಾಯಿ ಆಕೆಯನ್ನು ತೊರೆದಿರುವುದರಿಂದ ಟ್ರಾನ್ಸ್‌ಜೆಂಡರ್ ಒಬ್ಬರು ಸಾಕಿ ಬೆಳೆಸಿದ್ದಾರೆ. ಈ ವಿಷಯ ಆಕೆಯನ್ನು ವರಿಸುವಬೇಕಾಗಿರುವವನಿಗೆ ಅಪಥ್ಯ. ಈ ಪಯಣದಲ್ಲಿ ತನ್ನ ಫಿಯಾನ್ಸಿಯನ್ನು ತೊರೆಯುವ ಧೈರ್ಯವನ್ನು ಮಯೂರಿ ಮಾಡುತ್ತಾಳೆ. ಇಲ್ಲೂ ಉದಾತ್ತವಾದ ಆಶಯಗಳನ್ನು ನಿರ್ದೇಶಕ ಇಟ್ಟುಕೊಂಡಿದ್ದರೂ, ಅದನ್ನು ಸಿನಿಮ್ಯಾಟಿಕ್ ರೂಪದಲ್ಲಿ ಕಟ್ಟಿಕೊಡಲು ಪ್ರಯತ್ನಿಸದೆ ಅದನ್ನು ತುರುಕಿದಂತೆ ಪ್ರೇಕ್ಷಕನಿಗೆ ಭಾಸವಾಗುತ್ತದೆ.

ಆದರೆ, ರತ್ನಾಕರನ ಸಹೋದರ ಉಡಾಳನ ಪಾತ್ರವನ್ನು ವಿಜೃಂಭಿಸುವಾಗ ನಿರ್ದೇಶಕ ಉದಾರವಾಗಿ ಅದಕ್ಕೆ ಸ್ಪೇಸ್ ಕೊಡುತ್ತಾರೆ. ಉಡಾಳ ಕುಡುಕನೊಬ್ಬನನ್ನು ಬೆದರಿಸುವ ಅತಿ ಕೆಟ್ಟ ರೀತಿಯ ಸಂಭಾಷಣೆಯಿಂದ ಹಿಡಿದು, ಅದರಿಂದ ಆ ಕುಡುಕ ಸರಿಹೋಗಿ ಧನ್ಯವಾದಗಳನ್ನು ಅರ್ಪಿಸುವವರೆಗೂ ಅದಕ್ಕೆ ವಿಪುಲ ಅವಕಾಶವಿದೆ. ಹೀಗೆ ಹೆಚ್ಚು ಪುರುಷಕೇಂದ್ರಿತ ಪಾತ್ರಗಳ ವಿಜೃಂಭಣೆಯ ಎಂದಿನ ಭಾರತೀಯ ಸಿನಿಮಾಗಳ ಸಾಮಾನ್ಯ ಧಾಟಿಯನ್ನು ಈ ಚಿತ್ರವೂ ಮುಂದುವರೆಸಿದೆ. ಹಾಗೆಯೇ ಮುಸ್ಲಿಂ ಪಾತ್ರಗಳು ಕನ್ನಡ ಮಾತನಾಡುವ ಬಗೆಗೆ ಕನ್ನಡ ಸಿನಿಮಾಗಳಲ್ಲಿ ಇರುವ ಪೂರ್ವಗ್ರಹವೂ ಇಲ್ಲಿ ಮುಂದುವರೆದಿದೆ.

ಯಾವುದೇ ಕಥೆಯನ್ನು ಹೇಳುವಾಗ ಸುತ್ತಲಿನ ಪರಿಸರ ಅದಕ್ಕೆ ಹೇಗೆ ಕಾರಣ ಮತ್ತು ವ್ಯವಸ್ಥೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಒಳಗೊಳ್ಳುವುದು ಸಶಕ್ತ ಕಥಾನಿರೂಪಣೆಯ ಬಗೆ. ತಂತ್ರಜ್ಞಾನ, ಸಿನಿಮಾ ಬಗೆಗಿನ ಚಿಂತನೆ ಹೆಚ್ಚೆಚ್ಚು ಬೆಳೆದಂತೆ ಇದನ್ನು ದೃಶ್ಯ ಮಾಧ್ಯಮದಲ್ಲಿಯೂ ಸುಲಭವಾಗಿ ಒಳಗೊಳ್ಳಬಹುದಾಗಿದೆ. ಈ ನಿಟ್ಟಿನಲ್ಲಿ ಕಥೆಯನ್ನು ಕಟ್ಟಿಕೊಡುವಾಗ ಸೃಷ್ಟಿಸುವ ಪರಿಸರ, ಘರ್ಷಣೆಯನ್ನು ನಿರೂಪಿಸಲು ಬೇಕಾದ ಗಟ್ಟಿ ಕಾರಣಗಳು, ಅದನ್ನು ಬಗೆಹರಿಸಲು ಉಪಯೋಗಿಸುವ ತಂತ್ರ ಇವುಗಳ ಬಗ್ಗೆ ಕನ್ನಡದ ನಿರ್ದೇಶಕರು ಇನ್ನೂ ಗಂಭೀರವಾಗಿ ಚಿಂತಿಸುವುದು ಒಟ್ಟಾರೆ ಕನ್ನಡ ಸಿನಿಮಾರಂಗದ ದೃಷ್ಟಿಯಿಂದ ಒಳಿತು. ತಾಯಿ-ಮಕ್ಕಳ ಸಂಬಂಧದ ರಮಣೀಯ ಭಾವುಕತೆ ಎಂದೆಂದಿಗೂ ಸರಕಾಗುತ್ತದೆ ಎಂಬ ದೃಷ್ಟಿಕೋನದಿಂದ ಹೊರಬಂದು ಇನ್ನೂ ಆಳದ ಗ್ರಹಿಕೆಗೆ, ವಿಶಾಲವಾದ ಅವಲೋಕನಕ್ಕೆ ಮುಂದಾಗುವ ದಿನ ಕನ್ನಡ ಚಿತ್ರರಂಗಕ್ಕೆ ಶೀಘ್ರಬರಲಿ!


ಇದನ್ನೂ ಓದಿ: ಸರ್ದಾರ್ ಉಧಮ್ ಸಿನಿಮಾ; ಪ್ರಭುತ್ವದ ಹಿಂಸೆಗೆ ಪ್ರತಿಯಾಗಿ ಕ್ರಾಂತಿಕಾರಿ ಮಾರ್ಗ ತುಳಿದ ಯುವಕನ ಕಥೆ

ಇದನ್ನೂ ಒದಿ: ತಸ್ವೀರ್ ದಕ್ಷಿಣ ಏಷ್ಯಾ ಚಿತ್ರೋತ್ಸವ: ಅತ್ಯುತ್ತಮ LGBTQI+ ಚಿತ್ರ ಪ್ರಶಸ್ತಿ ಪಡೆದ ಕನ್ನಡದ ‘ನಾನು ಲೇಡಿಸ್’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಬಿಜೆಪಿ ಕಾರ್ಯಕರ್ತೆಯನ್ನು ವಿವಸ್ತ್ರಗೊಳಿಸಿರುವುದಾಗಿ ಆರೋಪ: ಆಕೆ ತನ್ನನ್ನು ತಾನು ವಿವಸ್ತ್ರಗೊಳಿಸಿಕೊಂಡಿದ್ದಾಳೆ ಎಂದ ಪೊಲೀಸ್ ಕಮಿಷನರ್

ಹುಬ್ಬಳ್ಳಿ: ಪೊಲೀಸ್ ವ್ಯಾನ್ ಒಳಗೆ ಪೂರ್ಣ ಬಟ್ಟೆಯಿಲ್ಲದೆ ಮಹಿಳೆಯೊಬ್ಬರ ವಿಡಿಯೋ ವೈರಲ್ ಆದ ನಂತರ, ಬಿಜೆಪಿ ನಾಯಕರು ಪೊಲೀಸರು ಅವಳನ್ನು ಬಂಧಿಸುವಾಗ ಆಕೆಯ ಬಟ್ಟೆಗಳನ್ನು ಬಿಚ್ಚಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಜನವರಿ 5...

ಬಿಜೆಪಿಯೊಂದಿಗೆ ಕೈಜೋಡಿಸಿದ ಗೌಡರೊಂದಿಗಿನ ಸಂಬಂಧ ಕಡಿದುಕೊಳ್ಳಲು ನಿರ್ಧರಿಸಿದ ಕೇರಳ ಜೆಡಿಎಸ್; ಹೊಸ ಪಕ್ಷದೊಂದಿಗೆ ವಿಲೀನ

ಜನತಾ ದಳ (ಜಾತ್ಯತೀತ) ದ ಕೇರಳ ಘಟಕವು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ನೇತೃತ್ವದ ರಾಷ್ಟ್ರೀಯ ನಾಯಕತ್ವದೊಂದಿಗೆ ಸಂಬಂಧವನ್ನು ಕಡಿದುಕೊಂಡು ಹೊಸ ರಾಜಕೀಯ ಪಕ್ಷದೊಂದಿಗೆ ವಿಲೀನಗೊಳ್ಳಲು ನಿರ್ಧರಿಸಿದೆ. ಈ ನಿರ್ಧಾರದ ಕುರಿತು ಶೀಘ್ರದಲ್ಲೇ ಅಧಿಕೃತ...

‘ಚೀನಾ, ರಷ್ಯಾ, ಕ್ಯೂಬಾ, ಇರಾನ್‌ಗಳನ್ನು ಹೊರಗಿಡಿ’: ವೆನೆಜುವೆಲಾಗೆ ಟ್ರಂಪ್ ತಂಡದ ಹೊಸ ತೈಲ ಎಚ್ಚರಿಕೆ

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ವೆನೆಜುವೆಲಾದ ಮಧ್ಯಂತರ ಅಧ್ಯಕ್ಷ ಡೆಲ್ಸಿ ರೊಡ್ರಿಗಸ್ ನೇತೃತ್ವದ ಹೊಸ ಆಡಳಿತಕ್ಕೆ ಚೀನಾ, ರಷ್ಯಾ, ಇರಾನ್ ಮತ್ತು ಕ್ಯೂಬಾ ಜೊತೆಗಿನ ಆರ್ಥಿಕ ಸಂಬಂಧಗಳನ್ನು "ಕಿತ್ತುಹಾಕಬೇಕು" ಮತ್ತು "ಕಡಿತಗೊಳಿಸಬೇಕು" ಎಂದು...

ದೆಹಲಿ ಫೈಜ್-ಎ-ಇಲಾಹಿ ಮಸೀದಿ ಬಳಿ ತೆರವು ಕಾರ್ಯಾಚರಣೆಗೆ ಸ್ಥಳೀಯರಿಂದ ವಿರೋಧ, ಉದ್ವಿಗ್ನತೆ; ಅಶ್ರುವಾಯು ಪ್ರಯೋಗ, 10 ಜನರ ಬಂಧನ

ದೆಹಲಿಯ ತುರ್ಕಮನ್ ಗೇಟ್-ರಾಮ್ಲೀಲಾ ಮೈದಾನ ಪ್ರದೇಶದಲ್ಲಿರುವ ಶತಮಾನಗಳಷ್ಟು ಹಳೆಯದಾದ ಫೈಜ್-ಎ-ಇಲಾಹಿ ಮಸೀದಿಯ ಬಳಿ ಬುಧವಾರ ಮುಂಜಾನೆ ನಡೆದ ತೆರವು ಕಾರ್ಯಾಚರಣೆಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದು, ಆ ನಂತರ ಸ್ಥಳದಲ್ಲಿ ಉದ್ವಿಗ್ನತೆ ಉಂಟಾಗಿದೆ, ಇದು...

ಮೋದಿ, ಶಾ ವಿರುದ್ಧ ಘೋಷಣೆ ಆರೋಪ: ತನ್ನದೇ ವಿದ್ಯಾರ್ಥಿಗಳ ವಿರುದ್ಧ ಎಫ್ಐಆರ್ ದಾಖಲಿಸಲು ಮನವಿ ಮಾಡಿದ ಜೆಎನ್‌ಯು ಆಡಳಿತ ಮಂಡಳಿ

ಸೋಮವಾರ ರಾತ್ರಿ ವಿದ್ಯಾರ್ಥಿಗಳ ಗುಂಪೊಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಘೋಷಣೆಗಳನ್ನು ಕೂಗಿದ್ದು, ಆ ಘೋಷಣೆಗಳು "ಪ್ರಚೋದನಕಾರಿ, ಪ್ರಚೋದನಕಾರಿ ಮತ್ತು ಗೌರವಾನ್ವಿತ ಸುಪ್ರೀಂ ಕೋರ್ಟ್‌ನ...

ಶಬರಿಮಲೆ ಚಿನ್ನ ಕಳವು ಪ್ರಕರಣ: ಎಸ್‌ಐಟಿ ತನಿಖೆ ಪಕ್ಷಪಾತದಿಂದ ಕೂಡಿದೆ ಎಂಬ ವಿಪಕ್ಷಗಳ ಆರೋಪ ತಿರಸ್ಕರಿಸಿದ ಕೇರಳ ಹೈಕೋರ್ಟ್

ಶಬರಿಮಲೆ ಚಿನ್ನ ಕಳ್ಳತನ ಪ್ರಕರಣದ ತನಿಖೆಯು ಪಕ್ಷಪಾತದಿಂದ ಕೂಡಿದೆ ಅಥವಾ ಸರ್ಕಾರದ ಒತ್ತಡದಲ್ಲಿದೆ ಎಂಬ ವಿರೋಧ ಪಕ್ಷದ ಆರೋಪಗಳನ್ನು ತಿರಸ್ಕರಿಸಿರುವ ಕೇರಳ ಹೈಕೋರ್ಟ್, ಪ್ರಸ್ತುತ ನಡೆಯುತ್ತಿರುವ ವಿಶೇಷ ತನಿಖಾ ತಂಡದ (ಎಸ್‌ಐಟಿ) ತನಿಖೆಯ...

ಆರ್‌ಎಸ್‌ಎಸ್ ಕುರಿತ ಹೇಳಿಕೆ: ಪ್ರಿಯಾಂಕ್ ಖರ್ಗೆ, ದಿನೇಶ್ ಗುಂಡೂರಾವ್, ನಲಪಾಡ್‌ಗೆ ಕೋರ್ಟ್ ನೋಟಿಸ್

ಬೆಂಗಳೂರು: ಆರ್‌ಎಸ್‌ಎಸ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಮಾನನಷ್ಟ ಮೊಕದ್ದಮೆಯಲ್ಲಿ ಸಚಿವರಾದ ಪ್ರಿಯಾಂಕ್ ಖರ್ಗೆ, ದಿನೇಶ್ ಗುಂಡೂರಾವ್ ಮತ್ತು ಯುವ ಕಾಂಗ್ರೆಸ್ ನಾಯಕ ಮೊಹಮ್ಮದ್ ಹ್ಯಾರಿಸ್ ನಲಪಾಡ್ ಅವರಿಗೆ ಸಂಸದ/ಶಾಸಕರ...

‘ನಾನು ಹಿಂದೂ ಅಲ್ಲ, ಮನುಷ್ಯ’: ಎಸ್‌ಪಿ ನಾಯಕ ಶಿವರಾಜ್ ಸಿಂಗ್ ಯಾದವ್ ಹೇಳಿಕೆ ತಿರುಚಿ ವಿವಾದ ಸೃಷ್ಟಿಸಿದ ಬಿಜೆಪಿ ಬೆಂಬಲಿಗರು

ಸಮಾಜವಾದಿ ಪಕ್ಷದ ನಾಯಕ, ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಆಪ್ತ ಸಹಾಯಕ ಹಾಗೂ ಉತ್ತರ ಪ್ರದೇಶದ ಫಿರೋಜಾಬಾದ್‌ನ ಸಮಾಜವಾದಿ ಪಕ್ಷದ ಜಿಲ್ಲಾಧ್ಯಕ್ಷ ಶಿವರಾಜ್ ಸಿಂಗ್ ಯಾದವ್ ‘ನಾನು ಹಿಂದೂ ಅಲ್ಲ, ನಾನು...

ಛತ್ತೀಸ್‌ಗಢ : ಎಂಟು ಮಂದಿ ಬಂಗಾಳಿ ಮುಸ್ಲಿಂ ವಲಸೆ ಕಾರ್ಮಿಕರ ಮೇಲೆ ಬಜರಂಗದಳ ಕಾರ್ಯಕರ್ತರಿಂದ ಹಲ್ಲೆ; ವರದಿ

ಛತ್ತೀಸ್‌ಗಢದ ರಾಯ್‌ಪುರದಲ್ಲಿ ಭಾನುವಾರ (ಜ.4) ಬಜರಂಗದಳ ಕಾರ್ಯಕರ್ತರು ಎಂಟು ಮಂದಿ ಬಂಗಾಳಿ ಮಾತನಾಡುವ ಮುಸ್ಲಿಂ ವಲಸೆ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದ್ದು, ಒಬ್ಬ ಕಾರ್ಮಿಕ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ರಾಯ್‌ಪುರ ಜಿಲ್ಲೆಯ ಕಟೋವಾಲಿ...

‘ಉಮರ್ ಮತ್ತು ಶಾರ್ಜಿಲ್ ಜಾಮೀನು ನಿರಾಕರಣೆ’: ಶಾಸಕಾಂಗ, ನ್ಯಾಯಾಂಗದ ಕಾರ್ಯವೈಖರಿಯಲ್ಲಿನ ವೈರುಧ್ಯಗಳಿಗೆ ಉದಾಹರಣೆ: ಶ್ರೀಪಾದ್ ಭಟ್

ಇಂಡಿಯನ್ ಎಕ್ಸ್ಪ್ರೆಸ್ ನಲ್ಲಿನ ವರದಿಯ ಪ್ರಕಾರ ಈ ಪ್ರಕರಣದ ವಿಚಾರಣೆಯಲ್ಲಿರುವ ಮುಖ್ಯ ಪ್ರಶ್ನೆ: ಬಂಧನವಾಗಿ ಐದು ವರ್ಷಗಳಾದರೂ ಸಹ ಇನ್ನೂ ವಿಚಾರಣೆ ಆರಂಭವಾಗಿಲ್ಲ. ದೀರ್ಘಕಾಲದ ಜೈಲುವಾಸವನ್ನು ಭಯೋತ್ಪಾದಕ ವಿರೋಧಿ ಕಾನೂನಿನ ಅಡಿಯಲ್ಲಿ ಸಮರ್ಥಿಸಬಹುದೇ?...