Homeಕರ್ನಾಟಕಸಾಣೇಹಳ್ಳಿಗೆ ಹೋದಾಗ ಜಂಬಪ್ಪದೇವರು ನೆನಪಾದರು

ಸಾಣೇಹಳ್ಳಿಗೆ ಹೋದಾಗ ಜಂಬಪ್ಪದೇವರು ನೆನಪಾದರು

- Advertisement -
- Advertisement -

ಯಾರೀ ಜಂಬಪ್ಪ ದೇವರು? ಇವರು ಕನ್ನಡ ನಾಡಿನ ಹೆಮ್ಮೆಯ ಧಾರ್ಮಿಕ ಕೇಂದ್ರ ಶ್ರೀ ತರಳಬಾಳು ಜಗದ್ಗುರು ಪರಂಪರೆಯ 11ನೆಯ ಜಗದ್ಗುರುಗಳು. ಅವರೇಕೆ ನೆನಪಾದರು? ಕಾರಣ ಗೊತ್ತಿಲ್ಲ. ಐತಿಹಾಸಿಕ ತರಳಬಾಳು ಪೀಠಕ್ಕೆ ರೋಮಾಂಚಕಾರಿ ಇತಿಹಾಸವಿದೆ.

ಸಿರಿಗೆರೆ ಶ್ರೀ ಪೀಠದ ಇತಿಹಾಸ ಕೆದಕುತ್ತಾ ಹೋದಂತೆ ನಿಗೂಢತೆ ಬಿಚ್ಚಿಕೊಳ್ಳುತ್ತಲೇಹೋಯಿತು. ಬಸವನ ಪಾದದವರೆಗೆ ಅದು ಬೆಳೆಯಿತು. ಬಸವಣ್ಣನವರ ಸಮಕಾಲೀನರಾಗಿದ್ದ ಮರುಳಸಿದ್ಧ ಶರಣರು ಈ ಐತಿಹಾಸಿಕ ಪೀಠದ ಮೂಲ ಪುರುಷರು. ಹುಟ್ಟಿನಿಂದ ಅಸ್ಪೃಶ್ಯರಾಗಿದ್ದ ಇವರು ತಮ್ಮ ಜೀವಮಾನವನ್ನೆಲ್ಲ ಅಂತ್ಯಜರ ಉದ್ಧಾರಕ್ಕಾಗಿ ಮೀಸಲಿಟ್ಟವರು. ಬ್ರಾಹ್ಮಣರೇ ದೇವರೆಂದು ಭಾವಿಸಿದ್ದ ಕಾಲದಲ್ಲಿ ಅಂತ್ಯಜರ ಏಳಿಗೆಗಾಗಿ ವರ್ಗ, ವರ್ಣವ್ಯವಸ್ಥೆಯ ವಿರುದ್ಧ ಹೋರಾಟ ನಡೆಸಿದರು. ಅನುಭಾವದ ವಚನ ನುಡಿದರು. ಶಿವಯೋಗಿ ಸಿದ್ಧರಾಮೇಶ್ವರರ ವಚನದಲ್ಲಿ “ಮರುಳಸಿದ್ಧರು 68 ಸಾವಿರ ವಚನಗಳನ್ನು ಬರೆದಿರುವುದಾಗಿ” ಪ್ರಸ್ತಾಪಿಸಿದ್ದಾರೆ. ಮರುಳಸಿದ್ಧ ಶರಣರ ಪ್ರಸ್ತಾಪ ಹಾವಿನಹಾಳ ಕಲ್ಲಯ್ಯ, ಮೆರೆಮಿಂಡದೇವರು ಮುಂತಾದ ಶರಣರ ವಚನಗಳಲ್ಲಿ ಸಹ ಕಾಣಬಹುದು. ವಿಷಾದದ ಸಂಗತಿ ಎಂದರೆ ಅವರ ಒಂದೇ ಒಂದು ವಚನ ಮಾತ್ರ ಇಂದಿಗೆ ದೊರೆತಿದೆ. ವಚನ ಒಂದೇ ಆದರೂ ಅದು ಅನುಭಾವದ ಆಗರವಾಗಿದೆ. ಈ ಕೆಳಗಿನ ವಚನ ಇಷ್ಟಲಿಂಗದ ನೆಲೆಕಲೆಗಳನ್ನು ತಿಳಿಸುತ್ತದೆ.

ಮರುಳಸಿದ್ದರು

ಆಲಿ ಆಲಯದಲ್ಲಿ ಕರಿಗೊಳಲು,
ಆಲಿಸುವ ಶ್ರವಣವು ಮೇಲಿಪ್ಪ ಆಕಾಶವನಡರಲು,
ಉಲುಹು ನಿರ್ಭೂತಚಿತ್ತ ಸಮಾಧಾನವನನೆಯ್ದಲು,
ಕಾಲ ಕರ್ಮ ಭವಂಗಳ ಗೆಲುವುದಿದೇನು
ಸೋಜಿಗವು ಹೇಳಾ, ರೇವಣ್ಣಪ್ರಭುವೆ.

ಇಲ್ಲಿ ಕಾಲ, ಕರ್ಮ, ಭವಂಗಳ ಗೆಲುವುದಿದೇನು ಸೋಜಿಗ ಎನ್ನುವುದು ಗಮನಿಸಬೇಕಾದ ಸಂಗತಿ. ಗೆಲ್ಲಲು ಬೇಕು ಇಷ್ಟಲಿಂಗದಲ್ಲಿ ನಿಷ್ಠೆ. ’ಆಲಿ’ ಎಂದರೆ ಕಣ್ಣು. ’ಆಲಯ’ ಎಂದರೆ ಇಷ್ಟಲಿಂಗ. ಲಿಂಗಭಕ್ತನಾದವನು ಅಂಗೈಯಲ್ಲಿ ಇಷ್ಟಲಿಂಗವನ್ನು ಇರಿಸಿ ಏಕಾಗ್ರದೃಷ್ಟಿಯಿಂದ ಲಿಂಗದ ಅನುಸಂಧಾನ ಮಾಡುತ್ತಿದ್ದರೆ ಬಾಹ್ಯ ಶಬ್ದಗಳೆಲ್ಲ ಅಡಗಿ ಚಿತ್ತದಲ್ಲಿ ಸಮಾಧಾನ ನೆಲೆಗೊಳ್ಳುವುದು. ಅದರಿಂದಾಗಿ ಕಾಲ, ಕರ್ಮ, ಭವಗಳನ್ನು ಗೆಲ್ಲುವುದು ಸುಲಭವಾಗುವುದು. ಇದು ಮರುಳಸಿದ್ಧರ ವಚನದ ಅನುಭಾವ.

ಇವರು ಇಂದಿನ ಬಳ್ಳಾರಿ ಜಿಲ್ಲೆಯ ಉಜ್ಜಯನಿಯಲ್ಲಿ ಸದ್ಧರ್ಮ ಪೀಠ ಸ್ಥಾಪಿಸಿದ್ದರು. ಆ ಪೀಠದ ಮೇಲೆ ತಮ್ಮ ಶಿಷ್ಯ ’ತೆಲುಗುಬಾಳು’ ಸಿದ್ಧಯ್ಯನವರನ್ನು ಕೂರಿಸಿ “ತರಳ ಬಾಳು” ಎಂದು ಆಶೀರ್ವದಿಸಿದರು ಎಂದು ಇತಿಹಾಸ ಹೇಳುತ್ತದೆ.

ಎಚ್ ದೇವೀರಪ್ಪನವರು ಮರುಳಸಿದ್ಧರ ಬಗ್ಗೆ ಬರೆಯುತ್ತ “ಜಾತಿ-ಮತಗಳ ವಿರುದ್ಧವಾಗಿ, ಮಾನವತೆಯ ಸಮತೆಗಾಗಿ, ದೇವರು ಮತ್ತು ಧರ್ಮಗಳ ಸಾರ್ವತ್ರಿಕ ಬಳಕೆಗಾಗಿ ಮರುಳಸಿದ್ಧನು ನಡೆಸಿದ ಹೋರಾಟ ಮಾನವ ಜನಾಂಗದ ಇತಿಹಾಸದಲ್ಲಿಯೇ ಅಪ್ರತಿಮವಾದುದಾಗಿದೆ. ಅಣ್ಣ ಬಸವಣ್ಣನು ಯಜ್ಞಗಳ ಬಗ್ಗೆ ಮತ್ತು ಕುಲಜಾತಿಗಳ ಬಗ್ಗೆ ಹೇಳಿರುವುದನ್ನೆಲ್ಲ ಮರುಳುಸಿದ್ಧನು ಪ್ರಯೋಗದಲ್ಲಿ ತಂದು ’ವಿಶ್ವಬಂಧು’ವೆನಿಸಿದ್ದಾನೆ. ಆದುದರಿಂದಲೇ ಅಣ್ಣ ಬಸವಣ್ಣನು ’ನುಡಿ ನಡೆಗಾರ’ನಾದರೆ, ವಿಶ್ವಬಂಧು ಮರುಳಸಿದ್ಧ ’ನಡೆಗಾರ ಬಸವಪ್ಪ’ ನೆನ್ನಬಹುದು. ಅಣ್ಣ ಬಸವಣ್ಣನ ಸಾಹಿತ್ಯವು ಅಣ್ಣನು ನುಡಿದನೆಂಬುದಕ್ಕೆ ಸಾಕ್ಷಿಯಾಗಿದ್ದರೆ ಮರುಳಸಿದ್ಧನ ಜೀವನ ಇತಿಹಾಸವು ಅಣ್ಣನು ನುಡಿದಂತೆ (ಈತನು) ನಡೆದನು ಎಂಬುದಕ್ಕೆ ಸಾಕ್ಷಿಯಾಗಿದೆ. ಅಥವಾ
ಬಸವಣ್ಣನ ನುಡಿಗಳಿಗೆ ನಡೆಗಳನ್ನು ಪ್ರಯೋಗಿಸಿದವನು ಮರಳುಸಿದ್ಧನಾದುದರಿಂದ ಇವನನ್ನು ’ನಡೆ ಬಸವಣ್ಣ’ನೆಂದು ಕರೆಯಬಹುದು” ಎಂದಿದ್ದಾರೆ. ಬಸವಣ್ಣನ ಸಮಕಾಲೀನರಾಗಿದ್ದ ಮರಳುಸಿದ್ದರು 1210ರ ಸುಮಾರಿಗೆ ಬಯಲಲ್ಲಿ ಬಯಲಾದರು.

ಮರುಳಸಿದ್ಧರ ತರವಾಯ ಹತ್ತು ಜಂಗಮ ಪೂಜ್ಯರು ಮಠದ ಪೀಠಕ್ಕೆ ಉತ್ತರಾಧಿಕಾರಿಗಳಾಗಿ, ಜನರಲ್ಲಿ ಧಾರ್ಮಿಕ ಪ್ರಜ್ಞೆಯನ್ನು ನಿರಂತರವಾಗಿ ಬೆಳೆಸಿಕೊಂಡು ಹೋಗಿದ್ದರು. ಹನ್ನೊಂದನೆಯ ಪೀಠಾಧಿಕಾರಿಯಾಗಿದ್ದ ಜಂಬಪ್ಪದೇವರ ಕಾಲದಲ್ಲಿ ಗುರು ವಿರಕ್ತರ ಮಧ್ಯೆ ಅವಿಶ್ವಾಸ ಮತ್ತು ಪಾಳೇಗಾರರ ಆಂತರಿಕ ಯುದ್ಧದಿಂದಾಗಿ ಮಠದಲ್ಲಿ ಬಿರುಕು ಕಾಣಿಸಿಕೊಂಡಿತು. ಮನನೊಂದ ಜಂಬಪ್ಪದೇವರು ಉಜ್ಜಯಿನಿಯನ್ನು ತೊರೆದು ಕ್ರಿ.ಶ 1740ರ ಸುಮಾರಿಗೆ ಸಿರಿಗೆರೆಗೆ ಬಂದು ನೆಲೆಸಿದರು. ಅಲ್ಲೇ ಮಠ ಸ್ಥಾಪಿಸಿ ತಮ್ಮ ಜೀವನದ ಉಳಿದ ದಿನಗಳನ್ನು ಸಿರಿಗೆರೆಯಲ್ಲಿಯೇ ಕಳೆದರು. 1740ರಲ್ಲಿ ಸ್ಥಾಪಿತವಾದ ಸಿರಿಗೆರೆಯ ತರಳಬಾಳು ಮಠಕ್ಕೆ ಜಂಬಪ್ಪ ದೇವರ ಜಂಗಮ ಪರಂಪರೆಯಲ್ಲಿ ಒಂಬತ್ತನೆಯ ಪೀಠಾಧಿಪತಿಗಳಾಗಿ ಬಂದವರು ಶ್ರೀ ಶಿವಕುಮಾರ ಶಿವಾಚಾರ್ಯರು. ಇವರ ಅವಧಿಯಲ್ಲಿ ಮಠದ ಬೆಳವಣಿಗೆ ಲಿಂಗಾಯತ ಮಠಗಳ ಇತಿಹಾಸದಲ್ಲಿಯೇ ಮೊದಲೆಂಬಂತೆ ಹೆಮ್ಮರವಾಯಿತು. ಇವರಿಂದಲೇ
’ತರಳ ಬಾಳು’ ಎಂದು ಆಶೀರ್ವಾದ ಪಡೆದು 21ನೇ ಪೀಠಾಧಿಪತಿಯಾದವರು ಇಂದಿನ ಪೀಠಾಧ್ಯಕ್ಷರಾಗಿರುವ ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಜಿಯವರು.

ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಜಿ

ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ಪೀಠಾಧ್ಯಕ್ಷರಾದ ಅವಧಿಯಲ್ಲಿ ಒಟ್ಟು ನೂರಾರು ಶಾಲಾ ಕಾಲೇಜು, ವಿದ್ಯಾರ್ಥಿ ನಿಲಯಗಳು ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಸ್ಥಾಪಿತವಾಗಿದ್ದು ಅವುಗಳಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳ ಸಂಖ್ಯೆ ಲಕ್ಷಲಕ್ಷ. ಆಗ ಸಾವಿರಾರು ನೌಕರರು ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯಲ್ಲಿದ್ದರು. ಸಂಸ್ಥೆಯ ಪ್ರಸಾದ ನಿಲಯದಲ್ಲಿ ಎಂಟ್ಹತ್ತು ಸಾವಿರ ವಿದ್ಯಾರ್ಥಿಗಳು ನಿತ್ಯ ಉಚಿತ ಪ್ರಸಾದ ಸ್ವೀಕರಿಸುತ್ತಿದ್ದರು. ಹೀಗೆ ಇತಿಹಾಸದ ಪುಟಗಳು ಮನದಲ್ಲಿ ಬಿಚ್ಚಿಕೊಳ್ಳುತ್ತಿರುವಾಗ ನಾನು ಮುಟ್ಟಿದ್ದೇ ಸಾಣೆಹಳ್ಳಿಯನ್ನು. ಉಸ್ಸೆಂದು ಕಾರಿಳಿದಾಗ ಎದುರಿಗೆ ಕಂಡವು ಸಾಣೆಹಳ್ಳಿಯ ವಿದ್ಯಾಸಂಸ್ಥೆಗಳು. ಅಲ್ಲಿ ಸ್ವಾಗತಿಸಿದ್ದು ಮಠದ ವ್ಯವಸ್ಥಾಪಕರು. (ಭಕ್ತರ ಆಶಯ ಪೂರೈಸಲು ಹೋಗಬೇಕಾಗಿದೆಯೆಂದು ಪೂಜ್ಯರು ಹಿಂದಿನ ದಿನ ನನಗೆ ತಿಳಿಸಿದ್ದರು).

ಸಾಣೇಹಳ್ಳಿಯಲ್ಲಿ ಎಂಟುನೂರಕ್ಕಿಂತ ಹೆಚ್ಚು ಬಾಲಕ ಬಾಲಕಿಯರು ಓದುತ್ತಿದ್ದು, ಐದುನೂರ ಐವತ್ತಕ್ಕಿಂತ ಹೆಚ್ಚು ಮಕ್ಕಳು ಗುರುಗಳ ತಾಯ್ತನದಲ್ಲಿ ಕೈತುತ್ತು ಹಾಕಿಸಿಕೊಳ್ಳುತ್ತಿದ್ದಾರೆ. ಎಲ್ಲಿಯೂ ಇರದ ಅಪರೂಪದ ಶಾಲೆ ಸಾಣೇಹಳ್ಳಿಯಲ್ಲಿದೆ. ಅದುವೇ ’ಶ್ರೀ ಶಿವಕುಮಾರ ರಂಗಪ್ರಯೋಗ ಶಾಲೆ’. ಅದನ್ನು ಪ್ರಾರಂಭಿಸಿರುವ ಕಾರಣ ಕೂಡ ಅಪರೂಪದ್ದೇ. ಹಿಂದಿನ ಪೂಜ್ಯರಾದ ಶ್ರೀ ಶಿವಕುಮಾರ ಸ್ವಾಮಿಗಳು ಶುದ್ಧ ಬಸವ ಭಕ್ತರು. ಬಸವ ಸಂದೇಶವನ್ನು ಜನಸಾಮಾನ್ಯರಿಗೆ ತಲುಪಿಸುವ ತುಡಿತ ಅವರದು.

ಅದನ್ನು ತಲುಪಿಸಲು ದೃಶ್ಯ ಮಾಧ್ಯಮವೇ ಸೂಕ್ತ ಎಂದುಕೊಂಡಿದ್ದರು. ತತ್ವಪ್ರಚಾರಕ್ಕಾಗಿ ರಂಗಭೂಮಿಯನ್ನು ಬಳಸಿಕೊಂಡ ಅಪರೂಪದ ಜಗದ್ಗುರುಗಳು ಅವರು. ಅದೇ ಪರಂಪರೆಯನ್ನು ಮುಂದುವರಿಸಿದವರು ಶ್ರೀ ಪಂಡಿತಾರಾಧ್ಯ ಸ್ವಾಮೀಜಿಯವರು ಕೂಡ ತಮ್ಮ ಗುರುಗಳಂತೆ ನಾಟಕ ಬರೆದು, ಕಲಾವಿದರನ್ನು ಆಯ್ಕೆ ಮಾಡಿ, ಆ ನಾಟಕಗಳನ್ನು ನಿರ್ದೇಶಿಸಿದ್ದುಂಟು. ತಮ್ಮ ವಿದ್ಯಾರ್ಥಿ ದೆಸೆಯಲ್ಲಿ ಕೆಲವು ನಾಟಕಗಳಲ್ಲಿ ಚಿಕ್ಕಪುಟ್ಟ ಪಾತ್ರ ನಿರ್ವಹಿಸಿದ್ದರಿಂದ ಕಲಾಸಕ್ತಿ ಹೆಚ್ಚಾಯ್ತು. ತಮ್ಮ ಗುರುಗಳ ಸದಾಶಯವನ್ನು ಅರಿತು ಅದನ್ನು ಕಾರ್ಯಗತಗೊಳಿಸಲು 1987ರಲ್ಲಿ ’ಶ್ರೀ ಶಿವಕುಮಾರ ಕಲಾಸಂಘ’ ಕಟ್ಟಿದರು. ಆರಂಭದಲ್ಲಿ ಟ್ರ್ಯಾಕ್ಟರ್‌ನಲ್ಲೇ ಕಲಾವಿದರನ್ನು ಹಳ್ಳಿಹಳ್ಳಿಗೆ ಕಳಿಸಿ ನಾಟಕ ಪ್ರದರ್ಶನಕ್ಕೆ ಪ್ರೇರಣೆ ನೀಡಿದ್ದರು. 1997ರಲ್ಲಿ ಅಧಿಕೃತವಾಗಿ ’ಶಿವಸಂಚಾರ’ ಹೆಸರಿನಲ್ಲಿ ರಂಗರೆಪರ್ಟರಿ ಪ್ರಾರಂಭವಾಯ್ತು. ವರ್ಷದುದ್ದಕ್ಕೂ 120ಕ್ಕಿಂತ ಹೆಚ್ಚು ಪ್ರಯೋಗಗಳನ್ನು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಪ್ರದರ್ಶಿಸುತ್ತಿದ್ದರು. ಶಿವಕುಮಾರ ಕಲಾಸಂಘ, ಶಿವಸಂಚಾರ, ಶ್ರೀ ಶಿವಕುಮಾರ ರಂಗಪ್ರಯೋಗಶಾಲೆ ಸಾಣೇಹಳ್ಳಿಯಲ್ಲಿ ಅಸ್ತಿತ್ವಕ್ಕೆ ಬಂದವು.

ಮಠದ ಚರ-ಸ್ಥಿರ ಆಸ್ತಿಯೊಂದಿಗೆ ರಂಗಭೂಮಿಯೂ ಶ್ರೀಗಳ ಪಾಲಿಗೆ ಬಳುವಳಿಯಾಗಿ ಬಂದಿತಂತೆ. ಆಗ ಶ್ರೀಗಳ ನೆರವಿಗೆ ಬಂದವರೆ ಕರ್ನಾಟಕದ ಷೇಕ್ಸ್‌ಪಿಯರ್ ಸಿಜಿಕೆ. ಮಠದೊಂದಿಗೆ ಅವರ ಒಡನಾಟ ಎಲ್ಲಿಯವರೆಗೆ ಬೆಳೆಯಿತೆಂದರೆ ಸಿಜಿಕೆ ಇಂದು ಸಾಣೇಹಳ್ಳಿಯ ಶ್ರೀ ಶಿವಕುಮಾರ ಬಯಲು ರಂಗಮಂದಿರದ ಪಕ್ಕದಲ್ಲೇ ಶಾಶ್ವತವಾಗಿ ಮಣ್ಣಲ್ಲಿ ಮಣ್ಣಾಗಿದ್ದಾರೆ. ಸಾಣೇಹಳ್ಳಿ ಮಠ ಇಂದು ಕಲಾಕಾರರನ್ನು ಉತ್ಪತ್ತಿ ಮಾಡುವ ಮಹಾಶಾಲೆಯಾಗಿ ಮಾರ್ಪಟ್ಟಿದೆ. ರಂಗಶಾಲೆಯಲ್ಲಿ ಶಿಕ್ಷಣ ಪಡೆದು ಶಿವಸಂಚಾರಕ್ಕೆ ಬರುವ ಕಲಾವಿದರಿಗೆ ಗುರುಗಳು ಊಟ-ವಸತಿಯೊಂದಿಗೆ ಎಂಟು ಸಾವಿರ ಗೌರವಧನ ನೀಡುವರು. ಇದಕ್ಕಾಗಿ ಶ್ರೀಮಠದಿಂದ ಪ್ರತಿವರ್ಷ 50 ಲಕ್ಷಕ್ಕಿಂತ ಹೆಚ್ಚು ಹಣ ವಿನಿಯೋಗವಾಗುತ್ತದೆ ಎನ್ನುತ್ತಾರೆ ಮುಗುಳುನಗುತ್ತ, ಪೂಜ್ಯ ಶ್ರೀ ಪಂಡಿತಾರಾಧ್ಯ ಸ್ವಾಮಿಗಳು.

ಪಂಡಿತಾರಾಧ್ಯ ಸ್ವಾಮೀಜಿ

ದೇಶ ವಿದೇಶ ಸುತ್ತಿದ ನನಗೆ ಸಾಣೇಹಳ್ಳಿಯ ನಾಟ್ಯ ಶಾಲೆ ನೋಡಿ ಹುಬ್ಬೇರಿಸುವಂತಾಯ್ತು. ಯುರೋಪ್, ಅಮೆರಿಕಾ ದೇಶಗಳಿಗೆ ಕಡಿಮೆ ಇಲ್ಲದಂತೆ ತಲೆ ಎತ್ತಿ ನಿಂತಿದೆ ಸಾಣೆಹಳ್ಳಿಯ ನಾಟ್ಯಶಾಲೆ. ಅಲ್ಲಿ ಏಳನೂರ ಆಸನಗಳನ್ನು ಹೊಂದಿದ ಹವಾನಿಯಂತ್ರಿತ ಆಡಿಟೋರಿಯಂ ಇದೆ. ಅದರ ಪಕ್ಕದಲ್ಲೇ ನಾಲ್ಕು ಸಾವಿರ ಪ್ರೇಕ್ಷಕರು ಕುಳಿತು ನಾಟಕ ನೋಡುವ ’ಶ್ರೀ ಶಿವಕುಮಾರ ಬಯಲು ರಂಗಮಂದಿರ’ ಇದೆ. ಏನೋ ಅದ್ಭುತವಾದುದನ್ನು ನೋಡಿದವನಂತೆ ಅವುಗಳ ಫೋಟೋ ತಗೆಯಲು ಪ್ರಾರಂಭಿಸಿದೆ. ಆಗ ಕಂಡ ಅಲ್ಲೊಬ್ಬ ಕಾಯಕಯೋಗಿ; ರಂಗಮಂದಿರವನ್ನು ಸ್ವಚ್ಛಗೊಳಿಸುತ್ತಿದ್ದ ಮಠದ ಸಹಾಯಕ. ಅಂದು ಅವನು ನನ್ನ ಹೀರೋ ಆಗಿಬಿಟ್ಟ. ಸ್ವಚ್ಛತೆಗೆ ಹಾಗೂ ಕಲೆಗೆ ನಾವು ಯಾವ ದೇಶಕ್ಕೂ ಕಡಿಮೆ ಇಲ್ಲ ಎಂಬಂತೆ ಬೀಗುತ್ತಿದ್ದ. ಅವನಿಗೆ ಸೆಲ್ಯೂಟ್ ಹೊಡೆದು ಮುಂದೆ ಸಾಗಿದೆ.

ನಂತರ ನನ್ನ ಕಣ್ಣಿಗೆ ಕಂಡದ್ದು ’ಸಿಜಿಕೆ ರೆಕಾರ್ಡಿಂಗ್ ರೂಮ್’. ’ಒಳ ಬನ್ನಿ’ ಎಂದು ಆಹ್ವಾನ ನೀಡಿದರು ಅದರ ಮೇಲ್ವಿಚಾರಕ ರಾಜು. ಒಳಗೆ ಕಾಲಿಟ್ಟಾಗ ತೆರೆದುಕೊಂಡವು ಎರಡೆರಡು ದೈತ್ಯ ಬಾಗಿಲುಗಳು. ಹವಾನಿಯಂತ್ರಿತ ಕೋಣೆಯ ಒಳವಿನ್ಯಾಸ ನನ್ನನ್ನು ದಂಗು ಬಡಿಸಿತು. ಅಲ್ಲಿದ್ದ ಅತ್ಯಾಧುನಿಕ ಸಲಕರಣೆಗಳು ’ನನ್ನನ್ನು ಉಪಯೋಗಿಸಿ’ ಎಂದು ಅಹ್ವಾನ ನೀಡುತ್ತಿದ್ದವು. ಇತ್ತೀಚಿಗೆ ನಾನೂ ಒಂದು ಮೀಡಿಯಾ ಹೌಸ್‌ನಲ್ಲಿ ತೊಡಗಿಸಿಕೊಂಡಿದ್ದೇನೆ. ನಮ್ಮ ಸ್ಟುಡಿಯೋಗಿಂತ ನಿಮ್ಮ ಸ್ಟುಡಿಯೋ ಅತ್ಯಂತ ಸುಸಜ್ಜಿತ ಎನ್ನುವ ಮಾತನ್ನು ಹೇಳದೆ ಇರಲಾಗಲಿಲ್ಲ.

ಮಠದಲ್ಲಿರುವ ರಸ್ತೆಯ ಮಣ್ಣು ಭಕ್ತರ ಕಾಲಿಗೆ ಸೋಂಕದಿರಲಿ ಎಂದು ಮಠದ ಆವರಣದಲ್ಲೆಲ್ಲ ಕಲ್ಲು ಹಾಸಿಗೆ ಹಾಕಿಸುತ್ತಿದ್ದಾರೆ ಶಿಸ್ತಿನ ಧರ್ಮಾಧಿಕಾರಿ ಪಂಡಿತಾರಾಧ್ಯ ಶ್ರೀಗಳು. ಹತ್ತಾರು ಎಕರೆಯ ಮಠದ ಆವರಣ ಸಾವಿರಾರು ಮಕ್ಕಳ ಕಲರವದಲ್ಲಿಯೂ ಶಾಂತವಾಗಿತ್ತು. ನಮ್ಮತ್ತಲೂ ನೋಡಿ ಆನಂದಪಡಿ ಎನ್ನುತ್ತಿದ್ದವು ಮಠದಲ್ಲಿಯ ಹೂ-ಬಳ್ಳಿಗಳು. ಅವುಗಳೊಂದಿಗೆ ಪೈಪೋಟಿಗಿಳಿದಿದ್ದವು ಹಣ್ಣಿನ ಮರಗಳು.

’ಮಧ್ಯಾಹ್ನ ಮೂರು ಗಂಟೆಯಾಯ್ತು, ಇನ್ನೇನು ಗುರುಗಳು ಆಗಮಿಸಬಹುದು. ಪ್ರಸಾದ ಮಾಡೋಣ’ ಎಂದರು ಮಠದ ವ್ಯವಸ್ಥಾಪಕರು. ಇಲ್ಲಿರುವ ರಂಗದೇಗುಲಗಳನ್ನು ನೋಡಿ ಹೊಟ್ಟೆ ತುಂಬಿದೆ ಎಂದೆ. ಬಲವಂತಪಡಿಸಿದರು ವ್ಯವಸ್ಥಾಪಕರು. ಊಟದ ತಟ್ಟೆಯಲ್ಲಿಯ ಎರಡು ಚಪಾತಿಗಳು ಒಡಲ ಸೇರಿದ್ದವು. ’ಸರ್ ಅನ್ನ ಉಣ್ಣಲೇಬೇಕು, ಸಾರು ಚನ್ನಾಗಿದೆ’ ಎಂದಾಗ ’ಬೇಡ’ ಎನ್ನಲಾಗಲಿಲ್ಲ.

ಊಟ ಮುಗಿಯುತ್ತಿದ್ದಂತೆ ಪೂಜ್ಯರ ಕರೆ ಬಂತು. ಅವರ ಜೊತೆ ನನ್ನ ಸಂತೋಷ ಹಂಚಿಕೊಳ್ಳುತ್ತಿದ್ದಂತೆ ಭಕ್ತರು ದರ್ಶನಕ್ಕೆ ಬರುತ್ತಲೇ ಇದ್ದರು. ನಾನು ಮಠ ನೋಡಲು, ಗುರುಗಳ ದರ್ಶನ ಪಡೆಯಲು ಬಂದಿದ್ದೆ, ಎರಡು ಸಿಕ್ಕಿದ್ದವು. “ನಾನು ಬೆಂಗಳೂರಿಗೆ ಹೊರಡುತ್ತೇನೆ. ಮತ್ತೊಮ್ಮೆ ಬರುತ್ತೇನೆ” ಆಶೀರ್ವದಿಸಿ ಎಂದೆ. ಮಠದಿಂದ ಹೊರ ಬಂದೆ, ಮನಸ್ಸು ಉಲ್ಲಸಿತವಾಗಿತ್ತು. “ಹೊರಡೋಣವೆ” ಎಂದೆ ನನ್ನ ಸಾರಥಿಗೆ.

ಜಿ ಬಿ ಪಾಟೀಲ

ಜಿ ಬಿ ಪಾಟೀಲ
ಬಸವನ ಬಾಗೇವಾಡಿಯ ಜಿ.ಬಿ.ಪಾಟೀಲ್ ಅವರು ಬೆಂಗಳೂರಿನಲ್ಲಿ ಯಶಸ್ವಿ ಉದ್ಯಮಿಯಾಗಿದ್ದೂ, ಸಾಮಾಜಿಕ ಹಾಗೂ ರಾಜಕೀಯ ಸಂಗತಿಗಳಲ್ಲಿ ನಿರಂತರ ಆಸಕ್ತಿ ಹೊಂದಿದ್ದವರು. ಸದ್ಯ ಜಾಗತಿಕ ಲಿಂಗಾಯಿತ ಮಹಾಸಭಾದ ಪ್ರಧಾನ ಕಾರ್ಯದರ್ಶಿಯಾಗಿ ಸಕ್ರಿಯರಾಗಿದ್ದಾರೆ.


ಇದನ್ನೂ ಓದಿ: ಓಶೋ ಕಂಡಂತೆ ವಿವೇಕಾನಂದರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ನಿಮ್ಮನ್ನು ನಂಬಿ ಬಂದ ನಕ್ಸಲ್ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ’: ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಂತಿಗಾಗಿ ನಾಗರೀಕ ವೇದಿಕೆ

ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು...

ಕೋಗಿಲು ಮನೆಗಳ ನೆಲಸಮ : ಪ್ರತಿಭಟಿಸಿದ ಹೋರಾಟಗಾರರ ಮೇಲೆ ಎಫ್‌ಐಆರ್

ಕೋಗಿಲು ಬಡಾವಣೆಯಲ್ಲಿ ಬಡವರ ಮನೆಗಳ ನೆಲಸಮ ವೇಳೆ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಹೋರಾಟಗಾರರ ವಿರುದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜನಪರ ವೇದಿಕೆಯ ಮುಖಂಡರಾದ ಗೌರಮ್ಮ ಮತ್ತು ಮನೋಹರ್,...

17 ವರ್ಷದ ಮಹಿಳಾ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಮಾನತು

ಫರಿದಾಬಾದ್‌ನ ಹೋಟೆಲ್‌ನಲ್ಲಿ 17 ವರ್ಷದ ರಾಷ್ಟ್ರಮಟ್ಟದ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ ನಂತರ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ಅವರನ್ನು...

ಸುಪ್ರೀಂ ಕೋರ್ಟ್‌ನಿಂದ ಜಾಮೀನು : ಗುಲ್ಫಿಶಾ ಫಾತಿಮಾ ಸೇರಿದಂತೆ ನಾಲ್ವರು ಜೈಲಿನಿಂದ ಬಿಡುಗಡೆ

ಈಶಾನ್ಯ ದೆಹಲಿಯ 2020ರ ಗಲಭೆ ಪಿತೂರಿ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರು ವಿದ್ಯಾರ್ಥಿ ಹೋರಾಟಗಾರರು ಬುಧವಾರ (ಜ.7) ಜೈಲಿನಿಂದ ಹೊರ ಬಂದಿದ್ದಾರೆ. ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಮ್...

ಖ್ಯಾತ ಪರಿಸರ ವಿಜ್ಞಾನಿ ಮಾಧವ ಗಾಡ್ಗೀಳ್ ನಿಧನ

ಖ್ಯಾತ ಪರಿಸರ ವಿಜ್ಞಾನಿ ಮಾಧವ ಗಾಡ್ಗೀಳ್ (82 ವರ್ಷ) ಅವರು ಬುಧವಾರ (ಜನವರಿ 7, 2026) ತಡರಾತ್ರಿ ಪುಣೆಯಲ್ಲಿರುವ ತಮ್ಮ ಮನೆಯಲ್ಲಿ ಅಲ್ಪಕಾಲದ ಅನಾರೋಗ್ಯದ ನಂತರ ನಿಧನರಾದರು. ಈ ಕುರಿತು ಗಾಡ್ಗೀಳ್ ಅವರ...

ಅಪರಾಧದ ಸ್ವರೂಪ ಏನೇ ಇರಲಿ, ತ್ವರಿತ ವಿಚಾರಣೆಯ ಹಕ್ಕು ಅನ್ವಯಿಸುತ್ತದೆ: ಸುಪ್ರೀಂ ಕೋರ್ಟ್

ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ತ್ವರಿತ ವಿಚಾರಣೆಯ ಹಕ್ಕು ಅಪರಾಧದ ಗಂಭೀರತೆ ಅಥವಾ ಸ್ವರೂಪವನ್ನು ಲೆಕ್ಕಿಸದೆ ಅನ್ವಯಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಪುನರುಚ್ಚರಿಸಿದೆ. 2002 ರ ಹಣ ವರ್ಗಾವಣೆ ತಡೆ ಕಾಯ್ದೆಯ...

ಬಾಂಗ್ಲಾದೇಶ: ಗುಂಪು ದಾಳಿಯಿಂದ ತಪ್ಪಿಸಿಕೊಳ್ಳಲು ಕಾಲುವೆಗೆ ಹಾರಿದ ಹಿಂದೂ ವ್ಯಕ್ತಿ ಸಾವು

ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ವಿರುದ್ಧ ಹಿಂಸಾಚಾರ ಸುದ್ದಿಗಳು ನಿರಂತರವಾಗಿ ವರದಿಯಾಗುತ್ತಿರುವ ನಡುವೆಯೇ, ನೌಗಾಂವ್ ಜಿಲ್ಲೆಯ ಮೊಹದೇವ್‌ಪುರ ಉಪಜಿಲ್ಲಾದಲ್ಲಿ ದರೋಡೆ ಆರೋಪ ಹೊರಿಸಿದ ಗುಂಪಿನಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ 25 ವರ್ಷದ ಹಿಂದೂ ವ್ಯಕ್ತಿ ಕಾಲುವೆಗೆ ಹಾರಿ...

ಹೋರಾಟಗಾರ್ತಿ ಕಾಮ್ರೇಡ್ ಪದ್ಮಕ್ಕ ಶ್ರದ್ಧಾಂಜಲಿ ಸಭೆ

ಬೆಂಗಳೂರಿನ ಆಶೀರ್ವಾದ್ ಸೆಂಟರ್ ನಲ್ಲಿ ಶ್ರದ್ಧಾಂಜಲಿ ಸಭೆ ಆಯೋಜಿಸಲಾಗಿತ್ತು. ಪದ್ಮಾರವರ ಕುಟುಂಬ, ಸಹ ಹೋರಾಟಗಾರು, ಚಿಂತಕರು, ಸಾಹಿತಿಗಳು ಪಾಲ್ಗೊಂಡಿದ್ದರು. ಸಭೆಯಲ್ಲಿ ಪದ್ಮಾರವರ ಜೊತೆಗಿನ ಒಡನಾಟವನ್ನು ನೆನೆಯಲಾಯಿತು. ಡಿಸೆಂಬರ್ 25 ರಂದು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ...

‘ನಾಯಿಗಳ ಮನಸ್ಸನ್ನು ಯಾರೂ ಓದಲು ಸಾಧ್ಯವಿಲ್ಲ’: ರಸ್ತೆಗಳು, ನಾಯಿಗಳಿಂದ ಮುಕ್ತವಾಗಿರಬೇಕು: ಸುಪ್ರೀಂ ಕೋರ್ಟ್

ನವದೆಹಲಿ: ನಾಯಿ ಕಚ್ಚುವ ಮನಸ್ಥಿತಿಯಲ್ಲಿರುವಾಗ ಅದರ ಮನಸ್ಸನ್ನು ಯಾರೂ ಓದಲು ಸಾಧ್ಯವಿಲ್ಲವಾದ್ದರಿಂದ, ರಸ್ತೆಗಳು ಅಥವಾ ಬೀದಿಗಳು ನಾಯಿಗಳಿಂದ ಮುಕ್ತವಾಗುವಂತೆ ನೋಡಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ.  ಬೀದಿ ನಾಯಿಗಳಿಗೆ ಸಂಬಂಧಿಸಿದ ಸ್ವಯಂಪ್ರೇರಿತ ಪ್ರಕರಣವನ್ನು...

‘ಮಜಾ ನಾ ಕರಾಯಾ ತೋ..ಪೈಸೆ ವಾಪಸ್’: ಭಾರತಕ್ಕೆ ನೇರ ಬೆದರಿಕೆ ಹಾಕಿದ ಪಾಕಿಸ್ತಾನ ಸೇನಾಧಿಕಾರಿ ಅಹ್ಮದ್ ಷರೀಫ್ ಚೌಧರಿ

ಪಾಕಿಸ್ತಾನದ ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ (ISPR) ನ ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್ ಅಹ್ಮದ್ ಷರೀಫ್ ಚೌಧರಿ, ಕಾಬೂಲ್ ಜೊತೆಗಿನ ಇಸ್ಲಾಮಾಬಾದ್‌ನ ನಡೆಯುತ್ತಿರುವ ಸಂಘರ್ಷದೊಂದಿಗೆ ಭಾರತವನ್ನು ಜೋಡಿಸುವ ಮೂಲಕ ಮತ್ತೊಮ್ಮೆ ವಿವಾದವನ್ನು ಹುಟ್ಟುಹಾಕಿದ್ದಾರೆ.  ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ...