Homeಬಹುಜನ ಭಾರತಸುಪ್ರೀಂಕೋರ್ಟಿಗೆ ಪತ್ರ ಬರೆದು ಬಿಸಿಮುಟ್ಟಿಸಿದ ಹಿರಿಯ ನ್ಯಾಯವಾದಿಗಳು!

ಸುಪ್ರೀಂಕೋರ್ಟಿಗೆ ಪತ್ರ ಬರೆದು ಬಿಸಿಮುಟ್ಟಿಸಿದ ಹಿರಿಯ ನ್ಯಾಯವಾದಿಗಳು!

- Advertisement -
- Advertisement -

ಆತ್ಮನಿರ್ಭರ ಭಾರತದ ಹೃದಯ ಹಿಂಡುವ ಚಿತ್ರಗಳು ನಾಗರಿಕ ಸಮಾಜದ ಮುಖಕ್ಕೆ ರಾಚುತ್ತಿವೆ. ಭಕ್ತಭಾರತದ ಆತ್ಮಸಾಕ್ಷಿ ಕಡೆಯುಸಿರು ಎಳೆದು ವರ್ಷಗಳೇ ಉರುಳಿವೆ. ದಿನಗಟ್ಟಲೆ ಟ್ರೇನಿನಲ್ಲಿ ಅನ್ನ ನೀರಿಲ್ಲದೆ ಪ್ರಯಾಣ ಮಾಡಿ ಸತ್ತ ತನ್ನ ತಾಯಿಯ ಹೊದಿಕೆಯನ್ನು ಹಿಡಿದೆಳೆದು ಎಚ್ಚರಿಸಲು ಅಮಾಯಕ ಹಸುಳೆ ಪ್ರಯತ್ನಿಸುವ ದೃಶ್ಯಾವಳಿ ಭಕ್ತ ಭಾರತದ ಕಲ್ಲು ಮನಸ್ಸನ್ನು ಕರಗಿಸಲಾರದು. ಅರ್ಥಾತ್ ದೇಶ- ಸಮಾಜ ತೀವ್ರ ಅಪಾಯಕರ ಸ್ಥಿತಿಯಲ್ಲಿವೆ. ಮನಸ್ಸಾಕ್ಷಿಗಳಿಗೆ ಲಕ್ವ ಹೊಡೆದಿದೆ. ಹನ್ನೊಂದರ ಪ್ರಾಯದ ಎಳೆಯ ತನ್ನ ಕುರುಡು ತಾಯಿ ಮತ್ತು ಕುಂಟ ತಂದೆಯನ್ನು ತ್ರಿಚಕ್ರ ಸೈಕಲ್‍ನಲ್ಲಿ ಕೂರಿಸಿ ವಾರಣಾಸಿಯಿಂದ ಬಿಹಾರಕ್ಕೆ ಒಯ್ಯುವ ದೃಶ್ಯವಾಗಲಿ, ಹೆದ್ದಾರಿಯಲ್ಲಿ ಹಸಿದ ವ್ಯಕ್ತಿಯೊಬ್ಬ ವಾಹನಗಳ ಚಕ್ರಗಳಡಿ ಸಿಕ್ಕಿ ನಜ್ಜುಗುಜ್ಜಾಗಿದ್ದ ನಾಯಿಯ ಕಳೇಬರದಿಂದ ಮಾಂಸವನ್ನು ಕಿತ್ತು ತಿನ್ನುವ ನೋಟವಾಗಲಿ, ನಡೆ ನಡೆದು ಎಳೆಯ ಮಕ್ಕಳ ಅಂಗಾಲುಗಳು ಬೊಕ್ಕೆಗಳಾಗಿ ಕಂಗೆಟ್ಟು ಕಣ್ಣುಗಳಲ್ಲಿ ನೀರು ತುಂಬಿಕೊಂಡ ನೋವಾಗಲೀ ಭಕ್ತ ಭಾರತದ ಕಣ್ಣಿಗೆ ಕಾಣುವುದೇ ಇಲ್ಲ. ತನ್ನ ವಿಶ್ವರೂಪವನ್ನು ಕಾಣಲು ಶ್ರೀಕೃಷ್ಣನು ಅರ್ಜುನನಿಗೆ ವಿಶೇಷ ದೃಷ್ಟಿಯನ್ನು ಪ್ರಸಾದಿಸಿದಂತೆ ಭಕ್ತ ಭಾರತಕ್ಕೂ ವಿಶೇಷ ಕಣ್ಣುಗಳನ್ನೂ, ಚಲಿಸುವ ಮನಸ್ಸನ್ನೂ ನೀಡಬೇಕಿದೆ. ಆ ಕಾಲ ಬರುವುದೆಂದೋ ಸದ್ಯಕ್ಕೆ ತಿಳಿಯದು.

ಈ ನಡುವೆ ವಿಶೇಷವೊಂದು ಜರುಗಿದೆ. ವಲಸೆ ಕಾರ್ಮಿಕ ಕೋಟಿಯ ಕಷ್ಟ ಪರಂಪರೆಯನ್ನು ಕಡೆಗಣಿಸಿದ್ದ ಸುಪ್ರೀಮ್ ಕೋರ್ಟಿಗೆ ಬಿಸಿ ಮುಟ್ಟಿಸುವ ಪತ್ರವೊಂದನ್ನು ದೇಶದ ಹಿರಿಯ ನ್ಯಾಯವಾದಿಗಳು ಬರೆದಿದ್ದಾರೆ. ಅದನ್ನೊಮ್ಮೆ ಓದಿಕೊಳ್ಳೋಣ.

ಪ್ರಿಯ ನ್ಯಾಯಮೂರ್ತಿಗಳೇ,

ಭಾರತೀಯ ನಾಗರಿಕರಾಗಿ ಮತ್ತು ಹಿರಿಯ ನ್ಯಾಯವಾದಿಗಳಾಗಿ ಅತೀವ ವ್ಯಥೆ ಮತ್ತು ದಿಗಿಲಿನಿಂದ ನಿಮಗೆ ಈ ಪತ್ರ ಬರೆಯುತ್ತಿದ್ದೇವೆ.

ಈ ದೇಶದ ನಾಗರಿಕರ ಅದರಲ್ಲೂ ವಿಶೇಷವಾಗಿ ಬಡತನದ ರೇಖೆಯ ಮತ್ತು ಅದರ ಕೆಳಗೆ ಕನಿಷ್ಠ ಕೂಲಿ ಪಡೆದು ಹೊಟ್ಟೆ ಹೊರೆಯುವ ಮತ್ತು ಹೀಗೆ ಹೊಟ್ಟೆ ಹೊರೆಯುವುದೂ ಕಷ್ಟಕರವಾಗಿ ಪರಿಣಮಿಸಿರುವ ಅಸಂಖ್ಯಾತ ಜನಸಮೂಹಗಳ ಮೂಲಭೂತ ಹಕ್ಕುಗಳ ರಕ್ಷಣೆಯಲ್ಲಿ ಸುಪ್ರೀಂಕೋರ್ಟಿನ ಸಾಂವಿಧಾನಿಕ ಪಾತ್ರ ಅತ್ಯಂತ ಪ್ರಮುಖ.

ಸರ್ಕಾರಿ ಆದೇಶದ ಮೇರೆಗೆ ಕಳೆದ ಮಾರ್ಚ್ 24ರಿಂದ ಇಡೀ ದೇಶ ಮತ್ತು ಅದರ ಆರ್ಥಿಕ ವ್ಯವಸ್ಥೆಗೆ ಬೀಗ ಬಿದ್ದಿರುವ ಇಂದಿನ ಬಿಕ್ಕಟ್ಟಿನ ಸ್ಥಿತಿಯಲ್ಲಿ ಸುಪ್ರೀಂಕೋರ್ಟ್ ಪಾತ್ರ ಮತ್ತು ಕರ್ತವ್ಯ ಅಪಾರ ಪ್ರಾಮುಖ್ಯತೆ ಗಳಿಸಿಕೊಳ್ಳುತ್ತದೆ. ದೇಶದ ಶೇ.75ಕ್ಕೂ ಹೆಚ್ಚು ಶ್ರಮಜೀವಿಗಳು ಅಸಂಘಟಿತ ವಲಯದಲ್ಲಿರುವವರು. ಆರ್ಥಿಕ ಚಟುವಟಿಕೆಯ ಸ್ಥಗಿತವು ಅವರ ಹೊಟ್ಟೆಪಾಡುಗಳ ಮೇಲೆ ತಕ್ಷಣದ ಪರಿಣಾಮ ಬೀರುತ್ತದೆ.

ಕೋಟಿಗಳ ಸಂಖ್ಯೆಗಳಲ್ಲಿರುವ ಈ ಶ್ರಮಿಕ ವರ್ಗ ಮುಖ್ಯವಾಗಿ ವಲಸೆ ಕಾರ್ಮಿಕ ಸ್ವರೂಪದ್ದು. ಮಾರ್ಚ್ 24ರಂದು ಲಾಕ್‍ಡೌನ್ ಘೋಷಿಸಿದಾಗ ಇವರ ಪಡಿಪಾಟಲನ್ನು ಲೆಕ್ಕಕ್ಕೇ ಇಟ್ಟುಕೊಳ್ಳಲಿಲ್ಲ. ಕೇವಲ ನಾಲ್ಕು ತಾಸುಗಳ ಕಾಲಾವಧಿಯಲ್ಲಿ ಲಾಕ್‍ಡೌನ್ ಸಾರಲಾಯಿತು. ಈ ಕೋಟ್ಯಂತರ ಕಾರ್ಮಿಕರಿಗೆ ತಮ್ಮ ಊರುಗಳಿಗೆ ತೆರಳುವ ಅವಕಾಶವನ್ನೇ ನೀಡಲಿಲ್ಲ. ಬೇರೆ ದಾರಿಯೇ ಇಲ್ಲದೆ ಹಸಿವು ಹತಾಶೆಗಳಿಂದ ನಡೆಯತೊಡಗಿದ ಇವರನ್ನು ಸರ್ಕಾರಗಳು ತಡೆಯುವ ಪ್ರಯತ್ನ ಮಾಡಿದವು.

ಕಳೆದ ಮಾರ್ಚ್ ತಿಂಗಳಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂಕೋರ್ಟ್ ವಿಫಲವಾದ ಕಾರಣ ಲಕ್ಷೋಪಲಕ್ಷ ಕಾರ್ಮಿಕರು ತಮ್ಮ ಸಣ್ಣಪುಟ್ಟ ಇಕ್ಕಟ್ಟಿನ ಖೋಲಿಗಳಲ್ಲೋ, ರಸ್ತೆಬದಿಯ ಕಾಲುದಾರಿಗಳಲ್ಲೋ ಉದ್ಯೋಗವಿಲ್ಲದೆ, ಒಪ್ಪೊತ್ತಿನ ಊಟಕ್ಕೂ ದಾರಿಯಲ್ಲದೆ ದಿನ ದೂಡುವಂತಾಯಿತು. ಆಗ ಕೋವಿಡ್ ಕೇಸುಗಳ ಸಂಖ್ಯೆ ಕೆಲವೇ ನೂರರಷ್ಟಿತ್ತು. ಅವರನ್ನು ಮರಳಲು ಬಿಡದೆ ಕಟ್ಟಿ ಹಾಕಿದ ಈ ಬಲಾತ್ಕಾರವು ಈ ಬಡಪಾಯಿಗಳನ್ನು ಕೋವಿಡ್ ಮಹಾಮಾರಿಯ ಸೋಂಕಿನ ಅಪಾಯಕ್ಕೆ ನೇರವಾಗಿ ನೂಕಿದಂತಾಗಿತ್ತು.

ಸರ್ಕಾರದ ಹೇಳಿಕೆಯು ವಾಸ್ತವ ಸ್ಥಿತಿಗತಿಗಳಿಗೆ ವ್ಯತಿರಿಕ್ತವಾಗಿತ್ತು. ಶೇ.90ರಷ್ಟು ವಲಸೆ ಕೆಲಸಗಾರರಿಗೆ ಸರ್ಕಾರಿ ಪಡಿತರ ಸಿಗಲಿಲ್ಲವೆಂದೂ, ಆಹಾರದ ತೀವ್ರ ಕೊರತೆಗೆ ತುತ್ತಾಗಿದ್ದಾರೆಂದೂ ಹಲವು ವರದಿಗಳು ಹೇಳಿದವು.

ಮಾರ್ಚ್ ತಿಂಗಳಿನಲ್ಲಿ ಸುಪ್ರೀಂಕೋರ್ಟು ಮಧ್ಯಪ್ರವೇಶಿಸಲು ವಿಫಲವಾದ ನಂತರ ಲಕ್ಷೋಪಲಕ್ಷ ಕಾರ್ಮಿಕರ ಮಹಾವಲಸೆ ಮೊದಲಾಯಿತು. ಆ ಹೊತ್ತಿಗೆ ಕೋವಿಡ್ ಸೋಂಕಿತರ ಸಂಖ್ಯೆ 50 ಸಾವಿರ ದಾಟಿತ್ತು. ಈ ಕಾರ್ಮಿಕರೂ ಸೋಂಕಿಗೆ ತುತ್ತಾದರು. ಈ ಹಂತದಲ್ಲೂ ಇವರ ಸಂಚಾರವನ್ನು ಸರ್ಕಾರ ಪ್ರತಿಬಂಧಿಸಿತ್ತು. ನಡೆದು ಹೋಗುವ ಬಡಪಾಯಿಗಳನ್ನೂ ತಡೆದು ಥಳಿಸಿದವು ಪೊಲೀಸರ ಲಾಠಿಗಳು. ಬೀದಿಗೆ ಬಿದ್ದಿದ್ದವರನ್ನು ಬಗೆ ಬಗೆಯಾಗಿ ಅವಮಾನಿಸಲಾಯಿತು. ತರುವಾಯ ಬಸ್ಸುಗಳು ಮತ್ತು ಟ್ರೇನುಗಳಲ್ಲಿ ಅವರ ಸಂಚಾರಕ್ಕೆ ಅನುಮತಿ ನೀಡಲಾಯಿತು. ವೈದ್ಯಕೀಯ ಪ್ರಮಾಣಪತ್ರ ತರಬೇಕೆಂಬ ಅಸಾಧ್ಯ ಷರತ್ತನ್ನು ಈ ಬಡಪಾಯಿಗಳಿಗೆ ವಿಧಿಸಲಾಯಿತು. ರಸ್ತೆ ಮಾರ್ಗವಾಗಿ ಸಾಗಾಟದ ಏರ್ಪಾಡು ಮಾಡಿದಾಗಲೂ ಅವರವರ ರಾಜ್ಯಗಳ ಸರಹದ್ದುಗಳಲ್ಲೇ ಅವರನ್ನು ಇಳಿಸಲಾಯಿತು. ರಾಜ್ಯ ಸರ್ಕಾರಗಳು ಇವರನ್ನು ಬರಮಾಡಿಕೊಳ್ಳಲು ತಯಾರಿರಲಿಲ್ಲ. ಈ ಬಡಪಾಯಿಗಳ ಹಕ್ಕುಗಳಿಗೆ ಅರ್ಥವೇ ಇಲ್ಲವಾಯಿತು.

ಲಾಕ್‍ಡೌನ್- 2ರಲ್ಲೂ ಈ ಲಕ್ಷ ಲಕ್ಷ ನಿರ್ಗತಿಕರ ಇರವನ್ನೇ ಗುರುತಿಸಲಿಲ್ಲ ಕೇಂದ್ರ ಸರ್ಕಾರ. ಇನ್ನು ಅವರ ಬವಣೆಯನ್ನು ನಿವಾರಿಸುವುದು ದೂರವೇ ಉಳಿಯಿತು.

ವಲಸೆ ಕಾರ್ಮಿಕರ ಕಣ್ಣೀರು ಒರೆಸುವ ಅವಕಾಶವನ್ನು 2020ರ ಮೇ 15ರಂದು ಇನ್ನೊಮ್ಮೆ ಕಳೆದುಕೊಂಡಿತು. ಹೆದ್ದಾರಿಗಳು, ರೈಲುದಾರಿಗಳಲ್ಲಿ ಸಾವಿರಾರು ಕಿ.ಮೀ. ಉದ್ದಕ್ಕೆ ದುಃಖ ಹಸಿವು ವ್ಯಥೆ ವಿಷಾದ ಹಾಗೂ ತಬ್ಬಲಿ ಭಾವಗಳ ನದಿಗಳಂತೆ ಹರಿಯತೊಡಗಿದ್ದರು ವಲಸೆ ಕಾರ್ಮಿಕರು. ಅವರನ್ನು ಗುರುತಿಸಿ ಅನ್ನ- ನೀರು-ನೆರಳು ಹಾಗೂ ಉಚಿತ ಪಯಣವನ್ನು ಏರ್ಪಡಿಸುವಂತೆ ದೇಶದ ಎಲ್ಲ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಬೇಕೆಂಬ ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿತು. ಅರ್ಜಿಯ ಗುಣಗಳನ್ನು ಪರಿಗಣಿಸಲೂ ಇಲ್ಲ.

ಸರ್ಕಾರದ ಪರವಾಗಿ ಮಂಡಿಸಲಾಗುವ ಹೇಳಿಕೆಗಳಿಗೆ ನ್ಯಾಯಾಲಯ ನೀಡುತ್ತಿರುವ ಸಾಂಸ್ಥಿಕ ಗೌರವ- ಮಾನ್ಯತೆ-ಮನ್ನಣೆ ಮತ್ತು ಈ ಅಗಾಧ ಮಾನವೀಯ ಬಿಕ್ಕಟ್ಟಿನ ಕುರಿತು ನ್ಯಾಯಾಲಯ ತೋರಿರುವ ನಿರ್ಲಕ್ಷ್ಯವನ್ನು ತಕ್ಷಣವೇ ಸರಿಪಡಿಸಬೇಕು. ಇಲ್ಲದೆ ಹೋದರೆ ಲಕ್ಷೋಪಲಕ್ಷ ಹಸಿದ ನಿರ್ಗತಿಕ ವಲಸಿಗರ ಸಂಬಂಧ ತಾನು ವಹಿಸಬೇಕಿರುವ ಸಾಂವಿಧಾನಿಕ ಪಾತ್ರ ಮತ್ತು ಕರ್ತವ್ಯಗಳಿಂದ ನ್ಯಾಯಾಲಯ ಕೈ ತೊಳೆದುಕೊಂಡಂತೆಯೇ ಸರಿ.

ವಿಶೇಷವಾಗಿ ಕೋವಿಡ್-19 ಮಹಾಮಾರಿಯ ಪ್ರಸಕ್ತ ಸನ್ನಿವೇಶದಲ್ಲಿ ಭಾರತೀಯ ಜನತಂತ್ರದ ಉಳಿವು ಮತ್ತು ಕಾನೂನಿನ ಪಾರಮ್ಯವು ಸುಪ್ರೀಂಕೋರ್ಟನ್ನೇ ಅವಲಂಬಿಸಿದೆ. ಪ್ರಭುತ್ವದ ಕ್ರಿಯೆಯ ನಾಗರಿಕರ ಮೂಲಭೂತ ಹಕ್ಕುಗಳನ್ನು ಆಪೋಶನ ತೆಗೆದುಕೊಳ್ಳದಂತೆ ಕಾವಲು ನಿಲ್ಲುವ ತನ್ನ ಸಾಂವಿಧಾನಿಕ ಕರ್ತವ್ಯವನ್ನು ಅದು ಸಕ್ರಿಯವಾಗಿ ನಿಭಾಯಿಸಬೇಕಿದೆ.

ಇಂದಿಗೂ ಈ ಹೊತ್ತಿಗೂ ವಲಸೆ ಕಾರ್ಮಿಕರ ಸಂಕಟ ಮುಂದುವರೆದಿದೆ. ಲಕ್ಷಾಂತರ ಜನ ರೇಲ್ವೆ ನಿಲ್ದಾಣಗಳು ಮತ್ತು ರಾಜ್ಯಗಳ ಸರಹದ್ದುಗಳಲ್ಲಿ ಸಿಕ್ಕಿಬಿದ್ದಿದ್ದಾರೆ. ಇವರಿಗೆ ಅನ್ನ ನೀರು ನೆರಳು ಹಾಗೂ ಪ್ರಯಾಣ ವ್ಯವಸ್ಥೆಯನ್ನು ಉಚಿತವಾಗಿ ಕಲ್ಪಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡುವಂತೆ ನಾವು ಸುಪ್ರೀಂಕೋರ್ಟನ್ನು ಆಗ್ರಹಪಡಿಸುತ್ತೇವೆ. ಅನ್ಯಾಯ ಎಲ್ಲಿಯೇ ಜರುಗಿದರೂ ಅದು ನ್ಯಾಯಕ್ಕೆ ಎಲ್ಲೆಡೆಯೂ ಗಂಡಾಂತರವೇ ಎಂಬ ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್ ಅವರ ಮಾತನ್ನು ಇಲ್ಲಿ ನೆನಪಿಸಬಯಸುತ್ತೇವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐದು ರಾಜ್ಯಗಳ ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟ; ಬಂಗಾಳದಲ್ಲಿ ಮಾತ್ರ ಎರಡು ಹಂತದ ಮತದಾನ

ಅಸ್ಸಾಂ, ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ಮತ್ತು ಪುದುಚೇರಿ ವಿಧಾನಸಭಾ ಚುನಾವಣೆಗಳ ವೇಳಾಪಟ್ಟಿಯನ್ನು ಭಾರತೀಯ ಚುನಾವಣಾ ಆಯೋಗದ (ಇಸಿಐ) ಮುಖ್ಯಸ್ಥರಾದ ಜ್ಞಾನೇಶ್ ಕುಮಾರ್ ಪ್ರಕಟಿಸಿದರು. ದೆಹಲಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯ...

ಫ್ಲಿಪ್‌ಕಾರ್ಟ್‌ನಿಂದ 1 ರೂ.ಗೆ ಹಾಲು ಮಾರಾಟ; ಪ್ರಧಾನಿ ಮೋದಿ ಮಧ್ಯಸ್ಥಿಕೆಗೆ ಬಮುಲ್‌ ಆಗ್ರಹ

ಫ್ಲಿಪ್‌ಕಾರ್ಟ್‌ ಸಂಸ್ಥೆಯು ಆನ್‌ಲೈನ್‌ ಮೂಲಕ 1 ರೂ.ಗೆ ಲೀಟರ್‌ ಹಾಲನ್ನು ಮಾರಾಟ ಮಾಡಿರುವುದು ಭಾರಿ ಜನಾಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ, ಬೆಂಗಳೂರು ನಗರ, ಗ್ರಾಮೀಣ ಮತ್ತು ರಾಮನಗರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ...

“ಮಕ್ಕಳ ಹಂತಕನನ್ನು ಹುಡುಕಿ ಹತ್ಯೆ ಮಾಡುತ್ತೇವೆ” : ನೆತನ್ಯಾಹು ಸುರಕ್ಷಿತವಾಗಿದ್ದಾರೆ ಎಂಬ ಇಸ್ರೇಲ್ ಸ್ಪಷ್ಟನೆ ಬೆನ್ನಲ್ಲೆ ಐಆರ್‌ಜಿಸಿ ಹೇಳಿಕೆ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಹುಡುಕಿ ಹತ್ಯೆ ಮಾಡುತ್ತೇವೆ ಎಂದು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ಹೇಳಿರುವುದಾಗಿ ವರದಿಯಾಗಿದೆ. ನೆತನ್ಯಾಹು ಅವರ ಹತ್ಯೆಯ ವದಂತಿಗಳನ್ನು ಇಸ್ರೇಲ್ ನಿರಾಕರಿಸಿದ ಬೆನ್ನಲ್ಲೇ, ಐಆರ್‌ಜಿಸಿ ಈ...

ಮಹಾರಾಷ್ಟ್ರ| ಇಫ್ತಾರ್ ಕೂಟಕ್ಕೆ ಸೇರಿದ್ದ ಮುಸ್ಲಿಮರ ಮೇಲೆ ಹಿಂದುತ್ವವಾದಿ ಗುಂಪಿನಿಂದ ದಾಳಿ

ರಂಜಾನ್‌ ಮಾಸದ ಉಪವಾಸ ಮುರಿಯಲು ನೆರೆದಿದ್ದ ಜನರ ಮೇಲೆ ಅಪರಿಚಿತ ವ್ಯಕ್ತಿಗಳ ಗುಂಪೊಂದು ದಾಳಿ ನಡೆಸಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಇಫ್ತಾರ್ ಕೂಟಕ್ಕೆ ಸಿದ್ಧತೆ ನಡೆಸುತ್ತಿದ್ದಾಗ, ಸುಮಾರು 100 ಕ್ಕೂ ಹೆಚ್ಚು...

ಆಸ್ಕರ್‌ ಅಂತಿಮ ಪಟ್ಟಿಗೆ ಆಯ್ಕೆಯಾದ ‘ದಿ ವಾಯ್ಸ್ ಆಫ್ ಹಿಂದ್ ರಜಬ್’

ಗಾಝಾದ ಆರು ವರ್ಷದ ಬಾಲಕಿ ಹಿಂದ್ ರಜಬ್‌ ಮತ್ತು ಆಕೆಯ ಸಂಬಂಧಿಕರನ್ನು ಇಸ್ರೇಲಿ ಸೈನಿಕರು ಭೀಕರವಾಗಿ ಹತ್ಯೆ ಮಾಡಿದ ಕಥೆಯನ್ನು ಹೇಳುವ 'ದಿ ವಾಯ್ಸ್ ಆಫ್ ಹಿಂದ್ ರಜಬ್' ಚಲನಚಿತ್ರವು 2026ರ ಆಸ್ಕರ್...

ಉತ್ತರ ಪ್ರದೇಶ| ದಲಿತ ಕುಟುಂಬದ ಮದುವೆ ಮನೆಯಲ್ಲಿ ಸವರ್ಣಿಯರಿಂದ ಹಲ್ಲೆ; ಬಂದೂಕಿನಿಂದ ಬೆದರಿಕೆ

ಮಾರ್ಚ್ 10 ರಂದು ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯ ಟಿಕುನಿಯಾ ಪೊಲೀಸ್ ಠಾಣೆ ಪ್ರದೇಶದಲ್ಲಿ ಜಾತಿ ಆಧಾರಿತ ಹಿಂಸಾಚಾರದ ತೀವ್ರ ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ. 24 ಗಂಟೆಗಳ ಒಳಗೆ ಎಫ್‌ಐಆರ್...

’70 ಲಕ್ಷ ಬಂಗಾಳಿ ಮುಸ್ಲಿಮರನ್ನು ಹೊರದಬ್ಬಲು ಸಾಧ್ಯವಿಲ್ಲ..ಅವರೇ ದೇಶ ಬಿಡುವಂತಹ ಪರಿಸ್ಥಿತಿ ಸೃಷ್ಟಿಸುತ್ತೇವೆ’: ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ

ಸುಮಾರು 70 ಲಕ್ಷ 'ಬಂಗಾಳಿ ಮುಸ್ಲಿಮರ'ನ್ನು ಭಾರತದಿಂದ ಹೊರಹಾಕುವುದು 'ಮಾನವೀಯವಾಗಿ ಸಾಧ್ಯವಿಲ್ಲ'. ಹಾಗಾಗಿ, ಅವರಾಗಿಯೇ ದೇಶ ತೊರೆಯುವಂತಹ ಪರಿಸ್ಥಿತಿಯನ್ನು ನಾವು ಸೃಷ್ಟಿಸುತ್ತೇವೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ. ಈ...

ಮೋದಿಯವರ ವಿದೇಶಾಂಗ ನೀತಿ ಸಂಪೂರ್ಣವಾಗಿ ದಿಕ್ಕು ತಪ್ಪಿದೆ, ನಗೆಪಾಟಲಿಗೆ ಈಡಾಗಿದೆ, ಅನೈತಿಕತೆಯಿಂದ ಕೂಡಿದೆ. ಇದು ಜಗಜ್ಜಾಹೀರಾಗಿದೆ – ಶ್ರೀಪಾದ್‌ ಭಟ್

ತಮ್ಮ ಸ್ಥಳೀಯ ಮತಬ್ಯಾಂಕ್ ರಾಜಕಾರಣದ ಜೊತೆಗೆ ವಿದೇಶಿ ನೀತಿಯನ್ನು ತಳುಕು ಹಾಕುವುದು. ಉದಾಹರಣೆಗೆ ಅಮೆರಿಕ-ಇಸ್ರೇಲ್ ಜಂಟಿಯಾಗಿ ನಡೆಸುತ್ತಿರುವ ಇರಾನ್ ಮೇಲಿನ ಯುದ್ಧದ ಸಮಯದಲ್ಲಿ ಮೋದಿ ನೇತೃತ್ವದ ಸರ್ಕಾರವು ತಾನು ಇರಾನ್ ಪರ ನಿಲುವು ತಾಳಿದರೆ...

ದೆಹಲಿ ಪೊಲೀಸರಿಂದ 10 ಮಂದಿ ಹೋರಾಟಗಾರರ ಅಪಹರಣ ಆರೋಪ : ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿ

ಸಿವಿಲ್ ಸೊಸೈಟಿಯ ಹತ್ತು ಮಂದಿ ಹೋರಾಟಗಾರರನ್ನು ದೆಹಲಿ ಪೊಲೀಸರು ಅಪಹರಿಸಿದ್ದಾರೆ ಅಥವಾ ಅಕ್ರಮವಾಗಿ ಬಂಧಿಸಿದ್ದಾರೆ ಎಂದು ಮಾನವ ಹಕ್ಕುಗಳ ಗುಂಪುಗಳು ಆರೋಪಿಸಿವೆ. ಹತ್ತು ಮಂದಿಯನ್ನು ದೆಹಲಿ ಪೊಲೀಸರು ಮತ್ತು ಇತರ ರಾಜ್ಯಗಳ ಏಜೆನ್ಸಿಗಳು ಅಪಹರಿಸಿವೆ...

ಗುಜರಾತ್‌: 34 ಜಿಲ್ಲೆಗಳ ಪೈಕಿ 20 ಜಿಲ್ಲೆಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ: ವಿಧಾನಸಭೆಗೆ ಮಾಹಿತಿ ನೀಡಿದ ಸರ್ಕಾರ

ಗಾಂಧಿನಗರ: ರಾಜ್ಯದ 34 ಜಿಲ್ಲೆಗಳ ಪೈಕಿ 20 ಜಿಲ್ಲೆಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಮತ್ತು ಪರಿಸ್ಥಿತಿಯನ್ನು ಸುಧಾರಿಸಲು ವಿವಿಧ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಗುಜರಾತ್ ಸರ್ಕಾರ ಶನಿವಾರ ವಿಧಾನಸಭೆಗೆ...