Homeಬಹುಜನ ಭಾರತಸುಪ್ರೀಂಕೋರ್ಟಿಗೆ ಪತ್ರ ಬರೆದು ಬಿಸಿಮುಟ್ಟಿಸಿದ ಹಿರಿಯ ನ್ಯಾಯವಾದಿಗಳು!

ಸುಪ್ರೀಂಕೋರ್ಟಿಗೆ ಪತ್ರ ಬರೆದು ಬಿಸಿಮುಟ್ಟಿಸಿದ ಹಿರಿಯ ನ್ಯಾಯವಾದಿಗಳು!

- Advertisement -
- Advertisement -

ಆತ್ಮನಿರ್ಭರ ಭಾರತದ ಹೃದಯ ಹಿಂಡುವ ಚಿತ್ರಗಳು ನಾಗರಿಕ ಸಮಾಜದ ಮುಖಕ್ಕೆ ರಾಚುತ್ತಿವೆ. ಭಕ್ತಭಾರತದ ಆತ್ಮಸಾಕ್ಷಿ ಕಡೆಯುಸಿರು ಎಳೆದು ವರ್ಷಗಳೇ ಉರುಳಿವೆ. ದಿನಗಟ್ಟಲೆ ಟ್ರೇನಿನಲ್ಲಿ ಅನ್ನ ನೀರಿಲ್ಲದೆ ಪ್ರಯಾಣ ಮಾಡಿ ಸತ್ತ ತನ್ನ ತಾಯಿಯ ಹೊದಿಕೆಯನ್ನು ಹಿಡಿದೆಳೆದು ಎಚ್ಚರಿಸಲು ಅಮಾಯಕ ಹಸುಳೆ ಪ್ರಯತ್ನಿಸುವ ದೃಶ್ಯಾವಳಿ ಭಕ್ತ ಭಾರತದ ಕಲ್ಲು ಮನಸ್ಸನ್ನು ಕರಗಿಸಲಾರದು. ಅರ್ಥಾತ್ ದೇಶ- ಸಮಾಜ ತೀವ್ರ ಅಪಾಯಕರ ಸ್ಥಿತಿಯಲ್ಲಿವೆ. ಮನಸ್ಸಾಕ್ಷಿಗಳಿಗೆ ಲಕ್ವ ಹೊಡೆದಿದೆ. ಹನ್ನೊಂದರ ಪ್ರಾಯದ ಎಳೆಯ ತನ್ನ ಕುರುಡು ತಾಯಿ ಮತ್ತು ಕುಂಟ ತಂದೆಯನ್ನು ತ್ರಿಚಕ್ರ ಸೈಕಲ್‍ನಲ್ಲಿ ಕೂರಿಸಿ ವಾರಣಾಸಿಯಿಂದ ಬಿಹಾರಕ್ಕೆ ಒಯ್ಯುವ ದೃಶ್ಯವಾಗಲಿ, ಹೆದ್ದಾರಿಯಲ್ಲಿ ಹಸಿದ ವ್ಯಕ್ತಿಯೊಬ್ಬ ವಾಹನಗಳ ಚಕ್ರಗಳಡಿ ಸಿಕ್ಕಿ ನಜ್ಜುಗುಜ್ಜಾಗಿದ್ದ ನಾಯಿಯ ಕಳೇಬರದಿಂದ ಮಾಂಸವನ್ನು ಕಿತ್ತು ತಿನ್ನುವ ನೋಟವಾಗಲಿ, ನಡೆ ನಡೆದು ಎಳೆಯ ಮಕ್ಕಳ ಅಂಗಾಲುಗಳು ಬೊಕ್ಕೆಗಳಾಗಿ ಕಂಗೆಟ್ಟು ಕಣ್ಣುಗಳಲ್ಲಿ ನೀರು ತುಂಬಿಕೊಂಡ ನೋವಾಗಲೀ ಭಕ್ತ ಭಾರತದ ಕಣ್ಣಿಗೆ ಕಾಣುವುದೇ ಇಲ್ಲ. ತನ್ನ ವಿಶ್ವರೂಪವನ್ನು ಕಾಣಲು ಶ್ರೀಕೃಷ್ಣನು ಅರ್ಜುನನಿಗೆ ವಿಶೇಷ ದೃಷ್ಟಿಯನ್ನು ಪ್ರಸಾದಿಸಿದಂತೆ ಭಕ್ತ ಭಾರತಕ್ಕೂ ವಿಶೇಷ ಕಣ್ಣುಗಳನ್ನೂ, ಚಲಿಸುವ ಮನಸ್ಸನ್ನೂ ನೀಡಬೇಕಿದೆ. ಆ ಕಾಲ ಬರುವುದೆಂದೋ ಸದ್ಯಕ್ಕೆ ತಿಳಿಯದು.

ಈ ನಡುವೆ ವಿಶೇಷವೊಂದು ಜರುಗಿದೆ. ವಲಸೆ ಕಾರ್ಮಿಕ ಕೋಟಿಯ ಕಷ್ಟ ಪರಂಪರೆಯನ್ನು ಕಡೆಗಣಿಸಿದ್ದ ಸುಪ್ರೀಮ್ ಕೋರ್ಟಿಗೆ ಬಿಸಿ ಮುಟ್ಟಿಸುವ ಪತ್ರವೊಂದನ್ನು ದೇಶದ ಹಿರಿಯ ನ್ಯಾಯವಾದಿಗಳು ಬರೆದಿದ್ದಾರೆ. ಅದನ್ನೊಮ್ಮೆ ಓದಿಕೊಳ್ಳೋಣ.

ಪ್ರಿಯ ನ್ಯಾಯಮೂರ್ತಿಗಳೇ,

ಭಾರತೀಯ ನಾಗರಿಕರಾಗಿ ಮತ್ತು ಹಿರಿಯ ನ್ಯಾಯವಾದಿಗಳಾಗಿ ಅತೀವ ವ್ಯಥೆ ಮತ್ತು ದಿಗಿಲಿನಿಂದ ನಿಮಗೆ ಈ ಪತ್ರ ಬರೆಯುತ್ತಿದ್ದೇವೆ.

ಈ ದೇಶದ ನಾಗರಿಕರ ಅದರಲ್ಲೂ ವಿಶೇಷವಾಗಿ ಬಡತನದ ರೇಖೆಯ ಮತ್ತು ಅದರ ಕೆಳಗೆ ಕನಿಷ್ಠ ಕೂಲಿ ಪಡೆದು ಹೊಟ್ಟೆ ಹೊರೆಯುವ ಮತ್ತು ಹೀಗೆ ಹೊಟ್ಟೆ ಹೊರೆಯುವುದೂ ಕಷ್ಟಕರವಾಗಿ ಪರಿಣಮಿಸಿರುವ ಅಸಂಖ್ಯಾತ ಜನಸಮೂಹಗಳ ಮೂಲಭೂತ ಹಕ್ಕುಗಳ ರಕ್ಷಣೆಯಲ್ಲಿ ಸುಪ್ರೀಂಕೋರ್ಟಿನ ಸಾಂವಿಧಾನಿಕ ಪಾತ್ರ ಅತ್ಯಂತ ಪ್ರಮುಖ.

ಸರ್ಕಾರಿ ಆದೇಶದ ಮೇರೆಗೆ ಕಳೆದ ಮಾರ್ಚ್ 24ರಿಂದ ಇಡೀ ದೇಶ ಮತ್ತು ಅದರ ಆರ್ಥಿಕ ವ್ಯವಸ್ಥೆಗೆ ಬೀಗ ಬಿದ್ದಿರುವ ಇಂದಿನ ಬಿಕ್ಕಟ್ಟಿನ ಸ್ಥಿತಿಯಲ್ಲಿ ಸುಪ್ರೀಂಕೋರ್ಟ್ ಪಾತ್ರ ಮತ್ತು ಕರ್ತವ್ಯ ಅಪಾರ ಪ್ರಾಮುಖ್ಯತೆ ಗಳಿಸಿಕೊಳ್ಳುತ್ತದೆ. ದೇಶದ ಶೇ.75ಕ್ಕೂ ಹೆಚ್ಚು ಶ್ರಮಜೀವಿಗಳು ಅಸಂಘಟಿತ ವಲಯದಲ್ಲಿರುವವರು. ಆರ್ಥಿಕ ಚಟುವಟಿಕೆಯ ಸ್ಥಗಿತವು ಅವರ ಹೊಟ್ಟೆಪಾಡುಗಳ ಮೇಲೆ ತಕ್ಷಣದ ಪರಿಣಾಮ ಬೀರುತ್ತದೆ.

ಕೋಟಿಗಳ ಸಂಖ್ಯೆಗಳಲ್ಲಿರುವ ಈ ಶ್ರಮಿಕ ವರ್ಗ ಮುಖ್ಯವಾಗಿ ವಲಸೆ ಕಾರ್ಮಿಕ ಸ್ವರೂಪದ್ದು. ಮಾರ್ಚ್ 24ರಂದು ಲಾಕ್‍ಡೌನ್ ಘೋಷಿಸಿದಾಗ ಇವರ ಪಡಿಪಾಟಲನ್ನು ಲೆಕ್ಕಕ್ಕೇ ಇಟ್ಟುಕೊಳ್ಳಲಿಲ್ಲ. ಕೇವಲ ನಾಲ್ಕು ತಾಸುಗಳ ಕಾಲಾವಧಿಯಲ್ಲಿ ಲಾಕ್‍ಡೌನ್ ಸಾರಲಾಯಿತು. ಈ ಕೋಟ್ಯಂತರ ಕಾರ್ಮಿಕರಿಗೆ ತಮ್ಮ ಊರುಗಳಿಗೆ ತೆರಳುವ ಅವಕಾಶವನ್ನೇ ನೀಡಲಿಲ್ಲ. ಬೇರೆ ದಾರಿಯೇ ಇಲ್ಲದೆ ಹಸಿವು ಹತಾಶೆಗಳಿಂದ ನಡೆಯತೊಡಗಿದ ಇವರನ್ನು ಸರ್ಕಾರಗಳು ತಡೆಯುವ ಪ್ರಯತ್ನ ಮಾಡಿದವು.

ಕಳೆದ ಮಾರ್ಚ್ ತಿಂಗಳಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂಕೋರ್ಟ್ ವಿಫಲವಾದ ಕಾರಣ ಲಕ್ಷೋಪಲಕ್ಷ ಕಾರ್ಮಿಕರು ತಮ್ಮ ಸಣ್ಣಪುಟ್ಟ ಇಕ್ಕಟ್ಟಿನ ಖೋಲಿಗಳಲ್ಲೋ, ರಸ್ತೆಬದಿಯ ಕಾಲುದಾರಿಗಳಲ್ಲೋ ಉದ್ಯೋಗವಿಲ್ಲದೆ, ಒಪ್ಪೊತ್ತಿನ ಊಟಕ್ಕೂ ದಾರಿಯಲ್ಲದೆ ದಿನ ದೂಡುವಂತಾಯಿತು. ಆಗ ಕೋವಿಡ್ ಕೇಸುಗಳ ಸಂಖ್ಯೆ ಕೆಲವೇ ನೂರರಷ್ಟಿತ್ತು. ಅವರನ್ನು ಮರಳಲು ಬಿಡದೆ ಕಟ್ಟಿ ಹಾಕಿದ ಈ ಬಲಾತ್ಕಾರವು ಈ ಬಡಪಾಯಿಗಳನ್ನು ಕೋವಿಡ್ ಮಹಾಮಾರಿಯ ಸೋಂಕಿನ ಅಪಾಯಕ್ಕೆ ನೇರವಾಗಿ ನೂಕಿದಂತಾಗಿತ್ತು.

ಸರ್ಕಾರದ ಹೇಳಿಕೆಯು ವಾಸ್ತವ ಸ್ಥಿತಿಗತಿಗಳಿಗೆ ವ್ಯತಿರಿಕ್ತವಾಗಿತ್ತು. ಶೇ.90ರಷ್ಟು ವಲಸೆ ಕೆಲಸಗಾರರಿಗೆ ಸರ್ಕಾರಿ ಪಡಿತರ ಸಿಗಲಿಲ್ಲವೆಂದೂ, ಆಹಾರದ ತೀವ್ರ ಕೊರತೆಗೆ ತುತ್ತಾಗಿದ್ದಾರೆಂದೂ ಹಲವು ವರದಿಗಳು ಹೇಳಿದವು.

ಮಾರ್ಚ್ ತಿಂಗಳಿನಲ್ಲಿ ಸುಪ್ರೀಂಕೋರ್ಟು ಮಧ್ಯಪ್ರವೇಶಿಸಲು ವಿಫಲವಾದ ನಂತರ ಲಕ್ಷೋಪಲಕ್ಷ ಕಾರ್ಮಿಕರ ಮಹಾವಲಸೆ ಮೊದಲಾಯಿತು. ಆ ಹೊತ್ತಿಗೆ ಕೋವಿಡ್ ಸೋಂಕಿತರ ಸಂಖ್ಯೆ 50 ಸಾವಿರ ದಾಟಿತ್ತು. ಈ ಕಾರ್ಮಿಕರೂ ಸೋಂಕಿಗೆ ತುತ್ತಾದರು. ಈ ಹಂತದಲ್ಲೂ ಇವರ ಸಂಚಾರವನ್ನು ಸರ್ಕಾರ ಪ್ರತಿಬಂಧಿಸಿತ್ತು. ನಡೆದು ಹೋಗುವ ಬಡಪಾಯಿಗಳನ್ನೂ ತಡೆದು ಥಳಿಸಿದವು ಪೊಲೀಸರ ಲಾಠಿಗಳು. ಬೀದಿಗೆ ಬಿದ್ದಿದ್ದವರನ್ನು ಬಗೆ ಬಗೆಯಾಗಿ ಅವಮಾನಿಸಲಾಯಿತು. ತರುವಾಯ ಬಸ್ಸುಗಳು ಮತ್ತು ಟ್ರೇನುಗಳಲ್ಲಿ ಅವರ ಸಂಚಾರಕ್ಕೆ ಅನುಮತಿ ನೀಡಲಾಯಿತು. ವೈದ್ಯಕೀಯ ಪ್ರಮಾಣಪತ್ರ ತರಬೇಕೆಂಬ ಅಸಾಧ್ಯ ಷರತ್ತನ್ನು ಈ ಬಡಪಾಯಿಗಳಿಗೆ ವಿಧಿಸಲಾಯಿತು. ರಸ್ತೆ ಮಾರ್ಗವಾಗಿ ಸಾಗಾಟದ ಏರ್ಪಾಡು ಮಾಡಿದಾಗಲೂ ಅವರವರ ರಾಜ್ಯಗಳ ಸರಹದ್ದುಗಳಲ್ಲೇ ಅವರನ್ನು ಇಳಿಸಲಾಯಿತು. ರಾಜ್ಯ ಸರ್ಕಾರಗಳು ಇವರನ್ನು ಬರಮಾಡಿಕೊಳ್ಳಲು ತಯಾರಿರಲಿಲ್ಲ. ಈ ಬಡಪಾಯಿಗಳ ಹಕ್ಕುಗಳಿಗೆ ಅರ್ಥವೇ ಇಲ್ಲವಾಯಿತು.

ಲಾಕ್‍ಡೌನ್- 2ರಲ್ಲೂ ಈ ಲಕ್ಷ ಲಕ್ಷ ನಿರ್ಗತಿಕರ ಇರವನ್ನೇ ಗುರುತಿಸಲಿಲ್ಲ ಕೇಂದ್ರ ಸರ್ಕಾರ. ಇನ್ನು ಅವರ ಬವಣೆಯನ್ನು ನಿವಾರಿಸುವುದು ದೂರವೇ ಉಳಿಯಿತು.

ವಲಸೆ ಕಾರ್ಮಿಕರ ಕಣ್ಣೀರು ಒರೆಸುವ ಅವಕಾಶವನ್ನು 2020ರ ಮೇ 15ರಂದು ಇನ್ನೊಮ್ಮೆ ಕಳೆದುಕೊಂಡಿತು. ಹೆದ್ದಾರಿಗಳು, ರೈಲುದಾರಿಗಳಲ್ಲಿ ಸಾವಿರಾರು ಕಿ.ಮೀ. ಉದ್ದಕ್ಕೆ ದುಃಖ ಹಸಿವು ವ್ಯಥೆ ವಿಷಾದ ಹಾಗೂ ತಬ್ಬಲಿ ಭಾವಗಳ ನದಿಗಳಂತೆ ಹರಿಯತೊಡಗಿದ್ದರು ವಲಸೆ ಕಾರ್ಮಿಕರು. ಅವರನ್ನು ಗುರುತಿಸಿ ಅನ್ನ- ನೀರು-ನೆರಳು ಹಾಗೂ ಉಚಿತ ಪಯಣವನ್ನು ಏರ್ಪಡಿಸುವಂತೆ ದೇಶದ ಎಲ್ಲ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಬೇಕೆಂಬ ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿತು. ಅರ್ಜಿಯ ಗುಣಗಳನ್ನು ಪರಿಗಣಿಸಲೂ ಇಲ್ಲ.

ಸರ್ಕಾರದ ಪರವಾಗಿ ಮಂಡಿಸಲಾಗುವ ಹೇಳಿಕೆಗಳಿಗೆ ನ್ಯಾಯಾಲಯ ನೀಡುತ್ತಿರುವ ಸಾಂಸ್ಥಿಕ ಗೌರವ- ಮಾನ್ಯತೆ-ಮನ್ನಣೆ ಮತ್ತು ಈ ಅಗಾಧ ಮಾನವೀಯ ಬಿಕ್ಕಟ್ಟಿನ ಕುರಿತು ನ್ಯಾಯಾಲಯ ತೋರಿರುವ ನಿರ್ಲಕ್ಷ್ಯವನ್ನು ತಕ್ಷಣವೇ ಸರಿಪಡಿಸಬೇಕು. ಇಲ್ಲದೆ ಹೋದರೆ ಲಕ್ಷೋಪಲಕ್ಷ ಹಸಿದ ನಿರ್ಗತಿಕ ವಲಸಿಗರ ಸಂಬಂಧ ತಾನು ವಹಿಸಬೇಕಿರುವ ಸಾಂವಿಧಾನಿಕ ಪಾತ್ರ ಮತ್ತು ಕರ್ತವ್ಯಗಳಿಂದ ನ್ಯಾಯಾಲಯ ಕೈ ತೊಳೆದುಕೊಂಡಂತೆಯೇ ಸರಿ.

ವಿಶೇಷವಾಗಿ ಕೋವಿಡ್-19 ಮಹಾಮಾರಿಯ ಪ್ರಸಕ್ತ ಸನ್ನಿವೇಶದಲ್ಲಿ ಭಾರತೀಯ ಜನತಂತ್ರದ ಉಳಿವು ಮತ್ತು ಕಾನೂನಿನ ಪಾರಮ್ಯವು ಸುಪ್ರೀಂಕೋರ್ಟನ್ನೇ ಅವಲಂಬಿಸಿದೆ. ಪ್ರಭುತ್ವದ ಕ್ರಿಯೆಯ ನಾಗರಿಕರ ಮೂಲಭೂತ ಹಕ್ಕುಗಳನ್ನು ಆಪೋಶನ ತೆಗೆದುಕೊಳ್ಳದಂತೆ ಕಾವಲು ನಿಲ್ಲುವ ತನ್ನ ಸಾಂವಿಧಾನಿಕ ಕರ್ತವ್ಯವನ್ನು ಅದು ಸಕ್ರಿಯವಾಗಿ ನಿಭಾಯಿಸಬೇಕಿದೆ.

ಇಂದಿಗೂ ಈ ಹೊತ್ತಿಗೂ ವಲಸೆ ಕಾರ್ಮಿಕರ ಸಂಕಟ ಮುಂದುವರೆದಿದೆ. ಲಕ್ಷಾಂತರ ಜನ ರೇಲ್ವೆ ನಿಲ್ದಾಣಗಳು ಮತ್ತು ರಾಜ್ಯಗಳ ಸರಹದ್ದುಗಳಲ್ಲಿ ಸಿಕ್ಕಿಬಿದ್ದಿದ್ದಾರೆ. ಇವರಿಗೆ ಅನ್ನ ನೀರು ನೆರಳು ಹಾಗೂ ಪ್ರಯಾಣ ವ್ಯವಸ್ಥೆಯನ್ನು ಉಚಿತವಾಗಿ ಕಲ್ಪಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡುವಂತೆ ನಾವು ಸುಪ್ರೀಂಕೋರ್ಟನ್ನು ಆಗ್ರಹಪಡಿಸುತ್ತೇವೆ. ಅನ್ಯಾಯ ಎಲ್ಲಿಯೇ ಜರುಗಿದರೂ ಅದು ನ್ಯಾಯಕ್ಕೆ ಎಲ್ಲೆಡೆಯೂ ಗಂಡಾಂತರವೇ ಎಂಬ ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್ ಅವರ ಮಾತನ್ನು ಇಲ್ಲಿ ನೆನಪಿಸಬಯಸುತ್ತೇವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೋರ್ಟ್ ರಾಜಕೀಯ ಅಖಾಡ ಅಲ್ಲ: ಸಿಎಂ ವಿಜಯ್ ವಿರುದ್ಧ ಅರ್ಜಿ ಸಲ್ಲಿಸಿದ್ದ ಡಿಎಂಕೆಗೆ ಸುಪ್ರೀಂ ತರಾಟೆ

ತಮಿಳುನಾಡಿನ ಕರೂರ್ ದುರಂತದಲ್ಲಿ ಮೃತಪಟ್ಟವರ ಕುಟುಂಬಸ್ಥರನ್ನು ಭೇಟಿ ಮಾಡದಂತೆ ಮುಖ್ಯಮಂತ್ರಿ ವಿಜಯ್ ಅವರಿಗೆ ನಿರ್ಬಂಧ ಹೇರಬೇಕೆಂದು ಕೋರಿ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಜಾಗೊಳಿಸಿದೆ. ಜನರಿಂದ...

ಸುರಂಗ ರಸ್ತೆ ಕಾಮಗಾರಿ ವೇಳೆ ವಯನಾಡಿನಲ್ಲಿ ಭೂಕುಸಿತ: ಜನರು ಜೀವ ಉಳಿಸಿಕೊಳ್ಳಲು ಓಡಿದ ಭಯಾನಕ ದೃಶ್ಯ ಸೆರೆ

ಕೇರಳದ ವಯನಾಡ್ ಜಿಲ್ಲೆಯ ಮೇಪ್ಪಾಡಿಯಲ್ಲಿ ಮಂಗಳವಾರ (ಇಂದು) ಭೀಕರ ಭೂಕುಸಿತ ಸಂಭವಿಸಿದ್ದು, ಕನಿಷ್ಠ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ಏಳು ಜನರು ಗಾಯಗೊಂಡಿದ್ದಾರೆ. ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಜನರನ್ನು ರಕ್ಷಿಸಲು ಕಾರ್ಯಾಚರಣೆ ಮುಂದುವರಿದಿದ್ದು, ಈ...

ಒಟಿಟಿಗೆ ಬಂದ ಎರಡೇ ದಿನಕ್ಕೆ ದಿಲ್ಜಿತ್ ದೋಸಾಂಜ್ ನಟನೆಯ ‘ಸಟ್ಲಜ್’ ಸಿನಿಮಾ ಔಟ್! ಜೀ5 ವಿರುದ್ಧ ಆಕ್ರೋಶ, ಕಾನೂನು ಹೋರಾಟದ ಭರವಸೆ

ತೀವ್ರ ವಿವಾದ ಹಾಗೂ ಸೆನ್ಸಾರ್ ಮಂಡಳಿಯ ಕತ್ತರಿ ಪ್ರಯೋಗದ ನಡುವೆಯೂ ಕೊನೆಗೂ ಒಟಿಟಿ ಪರದೆಯ ಮೇಲೆ ಬಿಡುಗಡೆಯಾಗಿದ್ದ ಖ್ಯಾತ ನಟ ದಿಲ್ಜಿತ್ ದೋಸಾಂಜ್ ಅಭಿನಯದ 'ಸಟ್ಲಜ್' (ಮೂಲ ಶೀರ್ಷಿಕೆ: ಪಂಜಾಬ್ 95) ಚಿತ್ರವನ್ನು...

ಫೇಕ್ ಮದುವೆ ಜಾಲಕ್ಕೆ ಬಿದ್ದ ಫೇಮಸ್ ಗೋರಕ್ಷಕ ‘ಬಿಟ್ಟು ಬಜರಂಗಿ’

ಹರಿಯಾಣದಲ್ಲಿ "ಲವ್ ಜಿಹಾದ್" ಮತ್ತು ಅಂತರ್ಧರ್ಮೀಯ ವಿವಾಹಗಳ ವಿರುದ್ಧ ನಿರಂತರವಾಗಿ ಹೋರಾಡುತ್ತಾ, ತನ್ನದೇ ಆದ ಸಾರ್ವಜನಿಕ ಪ್ರಭಾವ ಬೆಳೆಸಿಕೊಂಡಿದ್ದ ರಾಜ್ ಕುಮಾರ್ ಅಲಿಯಾಸ್ ಬಿಟ್ಟು ಬಜರಂಗಿಗೆ ತನಗೆ ಇಂತಹದ್ದೊಂದು ಪರಿಸ್ಥಿತಿ ಎದುರಾಗಬಹುದು ಎಂಬ...

ಕರ್ನಾಟಕದ ಎಸ್‌ಐಆರ್ ಪ್ರಕ್ರಿಯೆಯಲ್ಲಿ ‘ಸಾಮೂಹಿಕ ಅಕ್ರಮ’ ಆರೋಪ: ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಿದ ಎನ್‌ಡಿಎ ನಿಯೋಗ

ಬೆಂಗಳೂರು: ಕರ್ನಾಟಕದಲ್ಲಿ ಸದ್ಯ ಚಾಲ್ತಿಯಲ್ಲಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಭಾರಿ ಪ್ರಮಾಣದ ಸಾಂಸ್ಥಿಕ ಅಕ್ರಮಗಳು ನಡೆಯುತ್ತಿವೆ ಎಂದು ಆರೋಪಿಸಿ, ರಾಜ್ಯದ ಪ್ರಮುಖ ವಿರೋಧ ಪಕ್ಷಗಳಾದ ಬಿಜೆಪಿ ಮತ್ತು...

SIR: ಮತದಾರರ ಹಕ್ಕು ರಕ್ಷಣೆಗೆ ಕಣಕ್ಕಿಳಿದ ‘ನಾಗರಿಕ ಮತ ಕಾವಲು ಸಮಿತಿ’

ರಾಜ್ಯದ ಶೋಷಿತ, ಹಿಂದುಳಿದ ಮತ್ತು ಅಂಚಿನಲ್ಲಿರುವ ಸಮುದಾಯಗಳ ಮತದಾನದ ಹಕ್ಕಿಗೆ ಯಾವುದೇ ಚ್ಯುತಿ ಬಾರದಂತೆ ತಡೆಯಲು ಬೂತ್ ಮಟ್ಟದಿಂದ ಹಿಡಿದು ರಾಜ್ಯ ಮಟ್ಟದವರೆಗೆ ‘ನಾಗರಿಕ ಮತ ಕಾವಲು ಸಮಿತಿ’ಯನ್ನು ಅಸ್ತಿತ್ವಕ್ಕೆ ತರಲಾಗಿದೆ. ಎಸ್‌ಐಆರ್...

ಮೋಹನ್‌ಲಾಲ್ ‘ದಂತ’ ಕಥೆ: ಅರಣ್ಯ ಇಲಾಖೆ ಮುಂದೆ 10 ಆನೆ ದಂತ, 13 ಮೂರ್ತಿಗಳ ಅಚ್ಚರಿಯ ಘೋಷಣೆ!

ನಟ ಮೋಹನ್‌ಲಾಲ್ ಅವರು ತಾವೇ ಕಾನೂನುಬಾಹಿರವಾಗಿ ವನ್ಯಜೀವಿ ವಸ್ತುಗಳನ್ನು ಹೊಂದಿರುವ ಆರೋಪದ ಮೇಲೆ ವಿಚಾರಣೆ ಎದುರಿಸುತ್ತಿದ್ದರೂ, ತಮ್ಮ ಬಳಿ 10 ಆನೆ ದಂತಗಳು ಮತ್ತು 13 ದಂತದ ಮೂರ್ತಿಗಳು ಇರುವುದಾಗಿ ಕೇರಳ ಅರಣ್ಯ...

ಅಯೋಧ್ಯೆ ರಾಮಮಂದಿರ ಹಗರಣ: ‘ಕದ್ದ ಹಣ’ ಹಂಚಿಕೆಯ ಮೊಬೈಲ್ ಚಾಟ್‌ಗಳು ಬಹಿರಂಗ; ತೀವ್ರಗೊಂಡ ತನಿಖೆ

ಲಕ್ನೋ: ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ನಿಧಿ ದುರುಪಯೋಗ ಮತ್ತು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ಯಂತ ಸ್ಫೋಟಕ ಮಾಹಿತಿ ಹೊರಬಿದ್ದಿದ್ದು, ತನಿಖೆ ತೀವ್ರಗೊಂಡಿದೆ. ಪ್ರಕರಣದ ಪ್ರಮುಖ ಆರೋಪಿಗಳ ಮೊಬೈಲ್ ಫೋನ್‌ಗಳ...

ಅಪ್ರಾಪ್ತ ಬಾಲಕಿಯ ಅತ್ಯಾಚಾರ-ಕೊಲೆ ಆರೋಪ : ಪ. ಬಂಗಾಳದ ಬಾರುಯಿಪುರದಲ್ಲಿ ಹಿಂಸಾಚಾರ ; ಶಂಕಿತ ಆರೋಪಿಯ ಗುಂಪು ಹತ್ಯೆ

ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಬಾರುಯಿಪುರದಲ್ಲಿ ಶನಿವಾರ (ಜು.4) ಮಧ್ಯಾಹ್ನದಿಂದ ನಾಪತ್ತೆಯಾಗಿದ್ದ ಅಪ್ರಾಪ್ತ ಬಾಲಕಿಯೊಬ್ಬಳ ಶವ ಭಾನುವಾರ (ಜು.5) ಬೆಳಿಗ್ಗೆ ಕೆರೆಯಲ್ಲಿ ಪತ್ತೆಯಾಗಿದ್ದು, ಆ ಬಳಿಕ ಅಲ್ಲಿ ತೀವ್ರ ಹಿಂಸಾತ್ಮಕ...

SIR ಬಳಿಕ ಒಡಿಶಾದ ಕರಡು ಮತದಾರರ ಪಟ್ಟಿ ಪ್ರಕಟ : 20 ಲಕ್ಷ ಹೆಸರುಗಳು ಡಿಲೀಟ್

ವಿಶೇಷ ತೀವ್ರ ಪರಿಷ್ಕರಣೆಯ (ಎಸ್‌ಐಆರ್) ಗಣತಿ ಹಂತದ ಬಳಿಕ ಚುನಾವಣಾ ಆಯೋಗ ಭಾನುವಾರ (ಜು.5) ಒಡಿಶಾದ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿದ್ದು, ಇದರಲ್ಲಿ 20 ಲಕ್ಷಕ್ಕೂ ಹೆಚ್ಚು ಜನರ ಹೆಸರುಗಳನ್ನು ಮತದಾರರ ಪಟ್ಟಿಯಿಂದ...