ಕೋರೋನಾ ಸಾಂಕ್ರಾಮಿಕಕ್ಕೆ ತುತ್ತಾಗಿರುವ ಸಂಸದ ಮತ್ತು ಕಾಂಗ್ರೆಸ್ ನಾಯಕ ಶಶಿ ತರೂರ್ ಆಸ್ಪತ್ರೆಯ ಬೆಡ್ ನಿಂದಲೇ ಕೇಂದ್ರ ಸರ್ಕಾರದ ಅಸಮರ್ಪಕ ವ್ಯಾಕ್ಸೀನ್ ನೀತಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಜೊತೆಗೆ ದೇಶದ ಎಲ್ಲರಿಗೂ ಕೇಂದ್ರ ಸರ್ಕಾರ ಉಚಿತ ವ್ಯಾಕ್ಸೀನ್ ನೀಡಲು ಮುಂದಾಗಬೇಕೆಂದು ಆಗ್ರಹಿಸಿದ್ದಾರೆ.
ಶಶಿ ತರೂರ್ ಈ ಸಂಬಂಧ ಆಸ್ಪತ್ರೆಯ ಬೆಡ್ ನಿಂದಲೇ ವಿಡಿಯೋ ಒಂದನ್ನು ಮಾಡಿದ್ದು ಆ ವಿಡಿಯೋದಲ್ಲಿ “ಕೇಂದ್ರ ಸರ್ಕಾರದ ವ್ಯಾಕ್ಸೀನ್ ನೀತಿ ಅಸಮರ್ಪಕವಾಗಿದೆ. ಕೇಂದ್ರ ಸರ್ಕಾರ ತನ್ನ ಭರವಸೆಯಂತೆ 2021 ರ ಡಿಸೆಂಬರ್ ಅಂತ್ಯದ ವೇಳೆಗೆ ಪ್ರತಿಯೊಬ್ಬರಿಗೂ ವ್ಯಾಕ್ಸೀನ್ ನೀಡಲು ಮುಂದಾಗಬೇಕು. ದೇಶದ ಪ್ರತಿಯೊಬ್ಬರಿಗೂ ಉಚಿತವಾಗಿ ವ್ಯಾಕ್ಸೀನ್ ಸಿಗುವಂತಾಗಬೇಕು. ಈ ಸಂಬಂಧ ಸೇವ್ ಇಂಡಿಯಾ ಕ್ಯಾಂಪೇನ್ ಮಾಡುತ್ತಿದ್ದು ಆಂದೋಲನದಲ್ಲಿ ಈ ಮೂಲಕ ತಾವು ಭಾಗಿಯಾಗುವುದಾಗಿ” ಹೇಳಿದ್ದಾರೆ.
My message from my Covid sickbed: #SpeakUpForFreeUniversalVaccination pic.twitter.com/JjKmV5Rk71
— Shashi Tharoor (@ShashiTharoor) June 2, 2021
ಈಗ ದೇಶದಲ್ಲಿ ಉತ್ಪಾದನೆಯಾಗುತ್ತಿರುವ ವ್ಯಾಕ್ಸೀನ್ ಪ್ರಮಾಣದಿಂದ ಡಿಸೆಂಬರ್ ವೇಳೆಗೆ ಪ್ರತಿಯೊಬ್ಬರಿಗೂ ವ್ಯಾಕ್ಸೀನ್ ಸೌಲಭ್ಯವನ್ನು ನೀಡಲು ಸಾಧ್ಯವಿಲ್ಲ. ನರೇಂದ್ರ ಮೋದಿಯವರ ಸರ್ಕಾರ 2021 ರ ಜನವರಿಯಲ್ಲಿ ತನ್ನ ವ್ಯಾಕ್ಸಿನೇಶನ್ ಅಭಿಯಾನವನ್ನು ಆರಂಭಿಸುವಾಗ ಎಲ್ಲರಿಗೂ ಕೇಂದ್ರವೇ ವ್ಯಾಕ್ಸೀನ್ ನೀಡುವುದಾಗಿ ಭರವಸೆ ನೀಡಿತ್ತು. ಈಗ ಅರ್ಧದಷ್ಟು ವ್ಯಾಕ್ಸಿನ್ ಉತ್ಪಾದನೆಯನ್ನು ಸಬ್ಸಿಡಿ ಬೆಲೆಯಲ್ಲಿ ತಾನು ಖರೀದಿಸಿ ಉಳಿದದ್ದನ್ನು ರಾಜ್ಯಗಳಿಗೆ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಬಿಟ್ಟುಕೊಟ್ಟಿದೆ. ಮುಕ್ತ ಮಾರುಕಟ್ಟೆಯಲ್ಲಿ ರಾಜ್ಯ ಸರ್ಕಾರಗಳು ಮತ್ತು ಖಾಸಗಿ ಸಂಸ್ಥೆಗಳು ವ್ಯಾಕ್ಸೀನ್ ಗಾಗಿ ಪೈಪೋಟಿ ನಡೆಸುವಂತಾಗಿದೆ. ಇದರಿಂದ ದೇಶದೆಲ್ಲೆಡೆ ವ್ಯಾಕ್ಸೀನ್ ಗೆ ಕತಕ ಅಭಾವ ಸೃಷ್ಟಿಯಾಗಿದ್ದು ಖಾಸಗಿ ವಲಯವು ದೇಶದ ಉತ್ಪಾದನೆಯ ಬಹುಪಾಲು ವ್ಯಾಕ್ಸೀನ್ ಗಳನ್ನು ಖರೀದಿಸಿ ದುಬಾರಿ ಬೆಲೆಗೆ ಮಾರಿಕೊಳ್ಳಲು ಕೇಂದ್ರವೇ ಅವಕಾಶ ಮಾಡಿಕೊಟ್ಟಿದೆ ಎಂದು ಶಶಿ ತರೂರ್ ಕೇಂದ್ರ ಸರ್ಕಾರದ ವ್ಯಾಕ್ಸೀನ್ ನೀತಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರವು ತನ್ನ ಈ ಅಸಮರ್ಪಕ ವ್ಯಾಕ್ಸೀನ್ ನೀತಿಯನ್ನು ಹಿಂಪಡೆದು ದೇಶದ ಎಲ್ಲರಿಗೂ ವ್ಯಾಕ್ಸೀನ್ ನೀಡುವ ತನ್ನ ಭರವಸೆಗೆ ಬದ್ಧವಾಗಬೇಕು ಎಂದು ಶಶಿ ತರೂರ್ ಆಗ್ರಹಿಸಿದ್ದಾರೆ.
ಕಳೆದ ಕೆಲದಿನಗಳಿಂದ ಕೋವಿಡ್ ಸೋಂಕಿನಿಂದಾಗಿ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗಿರುವ ಶಶಿ ತರೂರ್ ಸದ್ಯ ಆಸ್ಪತ್ರೆಯಲ್ಲಿ ಗುಣಮುಖರಾಗುತ್ತಿದ್ದಾರೆ. ತಾವು ಕೊರೋನಾ ಸೋಂಕಿನಿಂದ ಗಂಭೀರ ಆರೋಗ್ಯ ಸಮಸ್ಯೆಗೆ ತುತ್ತಾಗಿದ್ದು ದೇಶದ ಜನರು ತಾವು ಅನುಭವಿಸಿದ ಆರೋಗ್ಯ ಸಮಸ್ಯೆಯನ್ನು ಎದುರಿಸದಂತಾಗಬೇಕು ಎಂದು ಶಶಿ ತರೂರ್ ಹೇಳಿದ್ದಾರೆ.
ಇದನ್ನೂ ಓದಿ: ಬ್ರಿಟನ್ನಲ್ಲಿ ಕೊರೋನಾ ಇಳಿಮುಖ: ಜೂನ್ 1 ರಂದು ಶೂನ್ಯ ಸಾವಿನ ವರದಿ