Homeಕರ್ನಾಟಕಶಿವಾಜಿನಗರ ಉಪಚುನಾವಣೆ: ಮೈಮರೆತರೆ ಸುಲಭದ ತುತ್ತು 'ಕೈ' ಜಾರಲಿದೆ

ಶಿವಾಜಿನಗರ ಉಪಚುನಾವಣೆ: ಮೈಮರೆತರೆ ಸುಲಭದ ತುತ್ತು ‘ಕೈ’ ಜಾರಲಿದೆ

- Advertisement -
- Advertisement -

ಶಿವಾಜಿನಗರದ ಉಪಚುನಾವಣೆ ಮೇಲ್ನೋಟಕ್ಕೆ ಕಾಣುವಷ್ಟು ಸಲೀಸಾಗಿಲ್ಲ. ರೋಷನ್ ಬೇಗ್ ಪಕ್ಷೇತರ ಅಭ್ಯರ್ಥಿಯಾಗುವ ನಿರ್ಧಾರದಿಂದ ಹಿಂದೆ ಸರಿದಿರೋದ್ರಿಂದ ಕಾಂಗ್ರೆಸ್‍ನ ರಿಜ್ವಾನ್ ಅರ್ಷದ್ ಗೆಲುವು ಸುಲಭವಾಗಿದೆ ಎನ್ನಲಾಗುತ್ತಿದೆ. ಆದರೆ ಕಟ್ಟಾ ಮತ್ತು ನಿರ್ಮಲ್ ಸುರಾನಾರಂತಹ ಟಾಪ್ ಲೆವೆಲ್ ನಾಯಕರನ್ನು ಪಕ್ಕಕ್ಕೆ ಸರಿಸಿ ಮಾಜಿ ಕಾರ್ಪೊರೇಟರ್‍ಗೆ ಬಿಜೆಪಿ ಟಿಕೆಟ್ ನೀಡಿರೋದ್ಯಾಕೆ? ಸ್ವತಃ ರೇವಣ್ಣ ಜೆಡಿಎಸ್ ಸೇರುವಂತೆ ಬಹಿರಂಗ ಆಫರ್ ಕೊಟ್ಟರೂ ರೋಷನ್ ಬೇಗ್ ಮೌನ ವಹಿಸಿದ್ದೇಕೆ? ಎನ್ನುವ ಪ್ರಶ್ನೆಗಳು ಇಲ್ಲಿ ಕುತೂಹಲ ಕೆರಳಿಸುತ್ತವೆ.

ಶಿವಾಜಿನಗರದ ಒಟ್ಟು ಏಳು ಬಿಬಿಎಂಪಿ ವಾರ್ಡುಗಳ ಪೈಕಿ ಐದರಲ್ಲಿ ಕಾಂಗ್ರೆಸ್ ಕಾರ್ಪೊರೇಟರುಗಳು ಗೆದ್ದಿದ್ದರೆ, ಒಂದು ಬಿಜೆಪಿ ಮತ್ತೊಂದು ಪಕ್ಷೇತರ ಅಭ್ಯರ್ಥಿಯ ಪಾಲಾಗಿದೆ. ಹಲಸೂರು ವಾರ್ಡ್‍ನ ಆ ಪಕ್ಷೇತರ ಅಭ್ಯರ್ಥಿ ಮಮತಾರವರ ಪತಿ ಶರವಣನೇ ಈಗ ಬಿಜೆಪಿಯ ಅಭ್ಯರ್ಥಿ. ಅಂದರೆ ಎರಡು ವಾರ್ಡುಗಳಲ್ಲಷ್ಟೇ ಬಿಜೆಪಿ ಪ್ರಾಬಲ್ಯವಿದೆ ಅಂದಹಾಗಾಯ್ತು. ಮುಸ್ಲಿಂ ಪ್ರಾಬಲ್ಯವಿರುವ, ಕ್ರಿಶ್ಚಿಯನ್ನರ ಒಲವು ನಿರ್ಣಾಯಕವೆನಿಸುವ ಈ ಕ್ಷೇತ್ರದಲ್ಲಿ ಕಾಂಗ್ರೆಸ್‍ನ ಗೆಲುವಿನ ಹಾದಿ ಸಲೀಸು ಎಂಬಂತೆ ಗೋಚರಿಸುತ್ತೆ. ಸಾಲದ್ದಕ್ಕೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಈ ವಿಧಾನಸಭಾಕ್ಷೇತ್ರವನ್ನೂ ಒಳಗೊಳ್ಳುವ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‍ನ ಹುರಿಯಾಳಾಗಿದ್ದ ಇದೇ ರಿಜ್ವಾನ್ ಅರ್ಷದ್‍ಗೆ, ಬಿಜೆಪಿಯ ವಿಜೇತ ಅಭ್ಯರ್ಥಿ ಪಿ.ಸಿ.ಮೋಹನ್‍ಗಿಂತ ಸುಮಾರು ಹದಿನೈದು ಸಾವಿರ ಮತಗಳ ಲೀಡ್ ಶಿವಾಜಿನಗರದಿಂದ ಸಿಕ್ಕಿತ್ತು. ಪಿ.ಸಿ.ಮೋಹನ್ ಎಪ್ಪತ್ತು ಸಾವಿರ ಮತಗಳ ಅಂತರದಿಂದ ಗೆದ್ದು ಸಂಸದರಾದರೂ ಬಿಜೆಪಿಗೆ ಇಲ್ಲಿ ಸಿಕ್ಕಿದ್ದು ಕೇವಲ 44,424 ಮತಗಳು ಮಾತ್ರ. ರಿಜ್ವಾನ್‍ಗೆ ಶಿವಾಜಿನಗರದಲ್ಲಿ 59,273 ಮತಗಳು ಲಭಿಸಿದ್ದವು. ಅದೂ, ಅಷ್ಟರಲ್ಲಾಗಲೆ ತನಗೆ ಎಂಪಿ ಟಿಕೆಟ್ ಸಿಗಲಿಲ್ಲವೆಂದು ಸಿಟ್ಟುಗೊಂಡಿದ್ದ ರೋಷನ್ ಬೇಗ್ ಚುನಾವಣಾ ಪ್ರಚಾರದಿಂದ ದೂರ ಉಳಿದಿದ್ದಾಗ್ಯೂ ಕಾಂಗ್ರೆಸ್‍ಗೆ ಇಲ್ಲಿ ಮುನ್ನಡೆ ಸಿಕ್ಕಿತ್ತು. ಈ ಅಂಕಿಅಂಶವೂ ಕಾಂಗ್ರೆಸ್‍ನ ಪರವಾಗಿಯೇ ಇದೆ.

ಹಾಗಿರುವಾಗ, ಸರ್ಕಾರದ ಅಳಿವುಉಳಿವು ನಿರ್ಧರಿಸುವ ಈ ಉಪಚುನಾವಣೆಯಲ್ಲಿ ಬಿಜೆಪಿ ಅನುಭವಿ, ಪ್ರಭಾವಿ ಕಟ್ಟಾ ಮತ್ತು ಸುರಾನಾಗೆ ಟಿಕೇಟ್ ನೀಡದೆ ಹೊಸಮುಖ ಶರವಣಗೆ ಮಣೆ ಹಾಕಿದ್ದೇಕೆ? 1999 ಮತ್ತು 2004ರಲ್ಲಿ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಸತತವಾಗಿ ಇಲ್ಲಿಂದ ಗೆದ್ದು ಶಾಸಕರಾಗಿದ್ದಂತವರು. ಅವರು ಹೆಬ್ಬಾಳದತ್ತ ವಲಸೆ ಹೋದ ಮೇಲೆ ಸುರಾನಾ 2008 ಮತ್ತು 2013ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಸೋತರೂ ರಾಜ್ಯ ಬಿಜೆಪಿಯೊಳಗೆ ಪ್ರಭಾವಿ ವ್ಯಕ್ತಿ. ಸುರಾನಾ ಯಡ್ಯೂರಪ್ಪನವರ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿರುವವರು. ಹಾಗಾಗಿ ಅವರಿಗೆ ಟಿಕೆಟ್ ತಪ್ಪಿರಬಹುದು. ಆದರೆ ಕಟ್ಟಾ ನಾಯ್ಡುಗೆ ಆ ಪ್ರತಿಕೂಲ ವಾತಾವರಣ ಇರಲಿಲ್ಲ. ಹಾಗೆ ನೋಡಿದರೆ ಕಳೆದ 2018ರ ಅಸೆಂಬ್ಲಿ ಎಲೆಕ್ಷನ್‍ನಲ್ಲಿ ಕಾಂಗ್ರೆಸ್‍ನ ರೋಷನ್ ಬೇಗ್ ವಿರುದ್ಧ ಅಖಾಡಕ್ಕಿಳಿದಿದ್ದ ಕಟ್ಟಾ ಭರ್ಜರಿ ಪೈಪೋಟಿಯನ್ನೇ ಕೊಟ್ಟಿದ್ದರು. 2013ರಲ್ಲಿ ಸುರಾನಾ ಸ್ಪರ್ಧಿಸಿದ್ದಾಗ ಕೇವಲ 31.68%ಗೆ ಸೀಮಿತವಾಗಿದ್ದ ಬಿಜೆಪಿ ಮತಗಳಿಕೆಯನ್ನು ಕಟ್ಟಾ ವರ್ಚಸ್ಸು 2018ರಲ್ಲಿ 41.20%ಗೆ ಏರಿಸಿತ್ತು. ಆದಾಗ್ಯೂ ಕಟ್ಟಾಗೆ ಟಿಕೆಟ್ ಕೈತಪ್ಪಿದೆ.

ಇದರ ಹಿಂದೆ ಬಿಜೆಪಿಯ ಒಂದಷ್ಟು ಲೆಕ್ಕಾಚಾರಗಳಿವೆ. ಯಡ್ಯೂರಪ್ಪನವರ ಹಠಕ್ಕೆ ಕಟ್ಟುಬಿದ್ದು ಅನರ್ಹ ಶಾಸಕರಿಗೆಲ್ಲ ಟಿಕೆಟ್ ಖಾತ್ರಿ ಮಾಡಿದಂತೆ, ರೋಷನ್ ಬೇಗ್‍ಗೂ ಅಭಯ ನೀಡಲು ಬಿಜೆಪಿಗೆ ಎರಡು ತೊಡಕುಗಳಿದ್ದವು. ಮೊದಲನೆಯದು ಆತ ಮುಸ್ಲಿಂ ವ್ಯಕ್ತಿ. ಎರಡನೆಯದು, ರೋಷನ್ ಬೇಗ್ ಹೆಸರು ಐಎಂಎ ಬಹುಕೋಟಿ ಹಗರಣದಲ್ಲಿ ತಳುಕು ಹಾಕಿಕೊಂಡದ್ದು. ಧರ್ಮದ ಹೆಸರಲ್ಲಿ ಮುಸ್ಲಿಮರನ್ನೇ ಗುರಿಯಾಗಿಸಿಕೊಂಡು ಮನ್ಸೂರ್ ಖಾನ್ ಮುಂಡಾಯಿಸಿದ ಈ ಹಗರಣದಿಂದ ಬಚಾವಾಗುವ ಸಲುವಾಗಿಯೇ ರೋಷನ್ ಬೇಗ್ ರಾಜೀನಾಮೆ ನೀಡಿ ಬಿಜೆಪಿಯತ್ತ ಸರಿದದ್ದು ಎಂಬ ಆಪಾದನೆ ಇದೆ. ಇದೇ ಕಾರಣಕ್ಕೆ ಸಂತ್ರಸ್ತ ಮುಸ್ಲಿಮರ ಸಿಟ್ಟಿಗೂ ಬೇಗ್ ಗುರಿಯಾಗಬೇಕಾಗಿ ಬಂದಿದೆ. ಅವರನ್ನು ಕಣಕ್ಕಿಳಿಸಿದರೂ ಗೆಲ್ಲುವ ಛಾನ್ಸು ತೀರಾ ಕಮ್ಮಿ ಅನ್ನೋದು ಬಿಜೆಪಿಗೆ ಮನದಟ್ಟಾಗಿತ್ತು.

ಶಿವಾಜಿನಗರ ಮುಸ್ಲಿಂ ಪ್ರಾಬಲ್ಯವಿರುವ ಕ್ಷೇತ್ರ ಅನ್ನೋದು ಎಷ್ಟು ಸತ್ಯವೋ, ಇಲ್ಲಿ ತಮಿಳಿಗರ ಮತಗಳೂ ಗಣನೀಯ ಸಂಖ್ಯೆಯಲ್ಲಿವೆ ಅನ್ನೋದೂ ಅಷ್ಟೇ ಸತ್ಯ. ಶಿವಾಜಿನಗರ, ಭಾರತಿನಗರ, ರಾಮಸ್ವಾಮಿ ಪಾಳ್ಯ, ಹಲಸೂರು, ಸಂಪಂಗಿರಾಮನಗರದಲ್ಲಿ ತಮಿಳರ ಮತಗಳೂ ಸಾಕಷ್ಟಿವೆ. ರೋಷನ್ ಬೇಗ್ ಗೆದ್ದು ಬರುತ್ತಿದ್ದುದು ಮುಸ್ಲಿಂ ಮತಗಳ ಜೊತೆಗೆ ತಮಿಳು ಮತಗಳೂ ಸೇರಿಕೊಳ್ಳುತ್ತಿದ್ದುದರಿಂದ. ಕಟ್ಟಾ ಕ್ಷೇತ್ರ ತೊರೆದ ನಂತರ ಅವೂ ಒಂದು ರೀತಿಯಲ್ಲಿ ಕಾಂಗ್ರೆಸ್‍ನ ಪಾರಂಪರಿಕ ಮತಗಳಂತಾಗಿವೆ. ಅವುಗಳನ್ನು ಕಾಂಗ್ರೆಸ್‍ನಿಂದ ವಿಮುಖಗೊಳಿಸದ ಹೊರತು ಇಲ್ಲಿ ಗೆಲ್ಲೋದು ಕಷ್ಟ ಅನ್ನೋದನ್ನು 2018ರ ವಿಧಾನಸಭೆ ಮತ್ತು 2019ರ ಲೋಕಸಭೆ ಫಲಿತಾಂಶಗಳು ಬಿಜೆಪಿಗೆ ಮನವರಿಕೆ ಮಾಡಿಕೊಟ್ಟಿದ್ದವು. ಆರೆಸೆಸ್ ಕಾರ್ಯಕರ್ತ ರುದ್ರೇಶ್ ಹತ್ಯೆಯನ್ನು ಮುಂದಿಟ್ಟುಕೊಂಡು ದೊಡ್ಡ ಕೋಮು ಧ್ರುವೀಕರಣ ಸೃಷ್ಟಿಸಿದರೂ 2018ರಲ್ಲಿ ಬಿಜೆಪಿ ಗೆಲ್ಲಲಾಗದಿದ್ದಕ್ಕೆ ತಮಿಳು ಮತಗಳು ಕಾಂಗ್ರೆಸ್‍ಗೆ ಗಟ್ಟಿಯಾಗಿ ಕಚ್ಚಿಕೊಂಡಿದ್ದೇ ಕಾರಣ. ಆ ತಮಿಳು ಓಟುಗಳ ಮೇಲೆ ಕಣ್ಣಿಟ್ಟೇ ತಮಿಳಿಗ ಎಂ.ಶರವಣನನ್ನು ಬಿಜೆಪಿ ಅಭ್ಯರ್ಥಿಯಾಗಿ ಅಖಾಡಕ್ಕಿಳಿಸಿದೆ.

ಜೆಡಿಎಸ್ ಕೂಡಾ ಮುಸ್ಲಿಂ ಅಭ್ಯರ್ಥಿ ತನ್ವೀರ್ ಅಹ್ಮದ್‍ರನ್ನು ಕಣಕ್ಕಿಳಿಸಿರೋದ್ರಿಂದ ಮುಸ್ಲಿಂ ಮತಗಳು ಸಹಜವಾಗಿಯೇ ಛಿದ್ರವಾಗುತ್ತವೆ. ಐಎಂಎ ವಂಚನೆಯ ಕಾರಣಕ್ಕೆ ಒಂದಷ್ಟು ಮುಸ್ಲಿಮರು ಬೇಗ್ ಜೊತೆಗೆ ಇಡಿಯಾಗಿ ಕಾಂಗ್ರೆಸಿನ ವಿರುದ್ಧವೂ ಸಿಟ್ಟಾಗಿದ್ದಾರೆ. ಅವರು ಜೆಡಿಎಸ್‍ಗೆ ಮತ ಹಾಕಬಹುದು. ಆಗ ಸಹಜವಾಗಿಯೇ ಕಾಂಗ್ರೆಸಿನ ಮತಗಳಿಕೆ ಕುಸಿಯುತ್ತೆ. ಇಪ್ಪತ್ತೈದರಿಂದ ಮೂವತ್ತು ಸಾವಿರಗಳಷ್ಟಿರುವ ತಮ್ಮ ಸಾಂಪ್ರದಾಯಿಕ ಬಿಜೆಪಿ ಮತಗಳ ಜೊತೆಗೆ ತಮಿಳು ಮತಗಳು ಒಲಿದರೆ ಗೆಲುವು ಗ್ಯಾರಂಟಿ ಅನ್ನೋದು ಬಿಜೆಪಿಯ ಲೆಕ್ಕಾಚಾರ.
ಒಂದು ಮೂಲದ ಪ್ರಕಾರ, ಯಡ್ಯೂರಪ್ಪನ ಮೂಲಕ ಟಿಕೆಟು ಪಡೆಯಲು ಕೊನೇವರೆಗೂ ಯತ್ನಿಸಿದ ರೋಷನ್ ಬೇಗ್, ತನಗೆ ಸಿಗದಿದ್ದರು ತನ್ನ ಪ್ರತಿಸ್ಪರ್ಧಿಗಳಾದ ಕಟ್ಟಾ ಅಥವಾ ಸುರಾನಾ ಪಾಲಾಗಲಿದ್ದ ಟಿಕೆಟ್ ತಪ್ಪಿಸಲು, ತನ್ನ ಆಪ್ತ ಶರವಣ್‍ಗೆ ಟಿಕೆಟ್ ಕೊಡಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. 2015ರ ಬಿಬಿಎಂಪಿ ಚುನಾವಣೆಯಲ್ಲಿ ಹಲಸೂರು ವಾರ್ಡ್‍ನಿಂದ ತನ್ನ ಹೆಂಡತಿಗೆ ಶರವಣ ಬಿಜೆಪಿ ಟಿಕೇಟ್ ಕೇಳಿದ್ದರು. ಆದರೆ ಬಿಜೆಪಿ ಬೇರೊಬ್ಬರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿತು. ಇದರಿಂದ ಸಿಟ್ಟಿಗೆದ್ದ ಶರವಣ ಮಡದಿಯನ್ನು ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲಿಸಿ ಗೆಲ್ಲಿಸಿಕೊಂಡಿದ್ದರು. ಈ ಅವಧಿಯಲ್ಲಿ ಬಿಜೆಪಿ ಜೊತೆ ಕೊಂಚ ಮುನಿಸಿಕೊಂಡಿದ್ದ ಶರವಣ, ಬೇಗ್ ಜೊತೆ ಒಡನಾಟ ಸಾಧಿಸಿಕೊಂಡದ್ದು ದಿಟ.

ಟಿಕೇಟ್, ಶಾಸಕ ಸ್ಥಾನ, ಮಂತ್ರಿಗಿರಿಗಿಂತ ಹೆಚ್ಚಾಗಿ ಐಎಂಎ ಕುಣಿಕೆಯಿಂದ ತನ್ನ ತಲೆ ಉಳಿದರೆ ಸಾಕು ಎಂಬಂತಿರುವ ರೋಷನ್‍ಗೆ ಮೊದಲಿಂದಲೂ ರಿಜ್ವಾನ್ ಕಂಡರೆ ಅಷ್ಟಕ್ಕಷ್ಟೇ. ಮುಂದೊಂದು ದಿನ ತನ್ನ ಮುಸ್ಲಿಂ ಲೀಡರಿಕೆಗೆ ಈ ಹುಡುಗ ಕಂಟಕವಾಗುತ್ತಾನೆಂಬ ಅಳುಕು ಬೇಗ್‍ರದ್ದು. ಹಾಗಾಗಿ ಅಭ್ಯರ್ಥಿಯಾಗದೆ ಹೋದರು ಬೇಗ್, ಬಿಜೆಪಿಯ ಶರವಣಗೆ ನೆರವಾಗುವ ಸಾಧ್ಯತೆ ದಟ್ಟವಾಗಿದೆ. ನಾಮಪತ್ರ ಸಲ್ಲಿಕೆಯ ನಂತರ ಬೇಗ್ ಹೋಗಿ ಯಡ್ಯೂರಪ್ಪರನ್ನು ಭೇಟಿಯಾಗಿ ಬಂದಿರೋದೆ ಇದಕ್ಕೆ ಸಾಕ್ಷಿ. ಗುಪ್ತವಾಗಿ ಬಿಜೆಪಿ ಪರ ಕೆಲಸ ಮಾಡುವುದಕ್ಕೆಂದೇ ಜೆಡಿಎಸ್ ಸ್ಪರ್ಧಿಸುವ ಆಫರ್ ಕೊಟ್ಟರೂ ರೋಷನ್ ಬೇಗ್ ಗಪ್‍ಚುಪ್ ಆದರಾ……?

ಮೇಲ್ನೋಟಕ್ಕೆ ಡಮ್ಮಿ ಕ್ಯಾಂಡಿಡೇಟಿನಂತೆ ಕಾಣುವ ಬಿಜೆಪಿಯ ಶರವಣ ಸ್ಪರ್ಧೆಯನ್ನು ಲಘುವಾಗಿ ಪರಿಗಣಿಸಿ ಕಾಂಗ್ರೆಸ್ ಮೈಮರೆಯದಿದ್ದರೆ ರಿಜ್ವಾನ್ ಇಲ್ಲಿ ಗೆಲುವಿನ ನಗೆ ಬೀರಬಹುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...