ಪಕ್ಷಾಂತರ ಮಾಡಿ ಸರ್ಕಾರ ಬೀಳಿಸಿದ ಅನರ್ಹ ಶಾಸಕರು ಸೋಲಬೇಕು. ಈ ಚುನಾವಣೆಯಲ್ಲಿ ಜನತೆ ನೀಡುವ ತೀರ್ಪು ಬರಿ ಅನರ್ಹ ಶಾಸಕರಿಗಷ್ಟೇ ಅಲ್ಲ ಎಲ್ಲ ರಾಜಕಾರಣಿಗಳಿಗೂ ಒಂದು ಪಾಠವಾಗಬೇಕು. ಹೀಗಾದಾಗ ಮಾತ್ರ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಯಲು ಸಾಧ್ಯ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರಿನಲ್ಲಿ ಪ್ರತಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ನಮ್ಮಂತೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸಹ ಪಕ್ಷಾಂತರಿಗಳನ್ನು ಸೋಲಿಸಕೆಂಬ ಉದ್ದೇಶ ಹೊಂದಿರುವುದು ಸಂತೋಷದ ವಿಚಾರ. ಸ್ವಾರ್ಥ ಸಾಧನೆಗಾಗಿ ಸಂವಿಧಾನದ ನಿಯಮಗಳನ್ನು ಮೀರಿ, ಜನರ ಭಾವನೆಗಳ ಜೊತೆ ಚೆಲ್ಲಾಟವಾಡುವವರಿಗೆ ಪಾಠ ಕಲಿಸಬೇಕು ಎಂಬುದು ನಮ್ಮೆಲ್ಲರ ಸಾಮಾನ್ಯ ಉದ್ದೇಶ. ಸಂವಿಧಾನದಲ್ಲಿ ಪಕ್ಷಾಂತರ ಕಾಯ್ದೆಯನ್ನು ಸೇರಿಸಿರುವ ಉದ್ದೇಶವೇ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಗೊತ್ತಿಲ್ಲ. ಶಾಸಕರು ಮನಸ್ಸಿಗೆ ಬಂದಂತೆ ಪಕ್ಷ ಬದಲಾವಣೆ ಮಾಡುವಂತಿದ್ದರೆ ಜನಾಭಿಪ್ರಾಯಕ್ಕೆ ಬೆಲೆ ಇರುತ್ತದೆಯೇ? ಹಿಂದೆ ಈ ಕಾನೂನು ಜಾರಿಗೆ ತರುವಾಗ ಬಿಜೆಪಿಯವರು ಸಹ ಬೆಂಬಲಿಸಿದ್ದರು ಎಂಬುದನ್ನು ಅವರು ಮರೆತಂತಿದೆ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಎಲ್ಲಾ ಪಕ್ಷಗಳ ನಾಯಕರು ನನ್ನನ್ನೇ ವೈಯಕ್ತಿಕವಾಗಿ ಟಾರ್ಗೆಟ್ ಮಾಡುತ್ತಿದ್ದಾರೆ. ಅವರಿಗೆ ನನ್ನ ಮೇಲೆ ಭಯವೂ ಇರಬಹುದು ಅಥವಾ ನನ್ನನ್ನು ಭಯಪಡಿಸುವ ಉದ್ದೇಶವೂ ಇರಬಹುದು. ಇಂಥದ್ದನ್ನೆಲ್ಲ ನೋಡಿ, ಅನುಭವಿಸಿಯೇ ನಾನು ರಾಜಕಾರಣದಲ್ಲಿ ಇನ್ನೂ ಉಳಿದಿರುವುದು ಎಂದಿದ್ದಾರೆ.
ಶ್ರೀರಾಮುಲು ಕರ್ನಾಟಕದ ಮೋಸ್ಟ್ ಪಾಪ್ಯುಲರ್ ಲೀಡರ್, ಯಾರಿಗೆ ಬೇಕಾದರೂ ಚಾಲೆಂಜ್ ಮಾಡಬಲ್ಲರು, ಯಾರ ಎದುರು ಬೇಕಾದರೂ ತೊಡೆ ತಟ್ಟಬಲ್ಲರು. ನಾನು ಅವರಿಗೆ ಚಾಲೆಂಜ್ ಮಾಡುವಷ್ಟು ಪಾಪ್ಯುಲರ್ ನಾಯಕನಲ್ಲ. ಒಂದು ಬಾರಿ ಸೋಲಿಸಿದ್ದೀನಿ. ಅಷ್ಟು ಸಾಕು ಎಂದು ವ್ಯಂಗ್ಯವಾಡಿದ್ದಾರೆ