ಅಕ್ಟೋಬರ್ 3 ರಂದು ಲೋಕಾರ್ಪಣೆಗೊಂಡ ಹಿಮಾಚಲಪ್ರದೇಶದ ರೋಹ್ಟಂಗ್ನ ಅಟಲ್ ಸುರಂಗದಲ್ಲಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಹೆಸರಿದ್ದ ಫಲಕವನ್ನ ತೆಗೆದುಹಾಕಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಹಿಮಾಚಲ ಪ್ರದೇಶದ ಕಾಂಗ್ರೆಸ್ ಮುಖಂಡರು ಶ್ರೀಮತಿ ಸೋನಿಯಾ ಗಾಂಧಿಯವರ ಹೆಸರನ್ನು ಹೊಂದಿರುವ ಅಡಿಪಾಯ ಫಲಕವನ್ನು ಅದರ ಉದ್ಘಾಟನೆಗೆ ಮುನ್ನ ಸುರಂಗದಿಂದ ತೆಗೆದುಹಾಕಲಾಗಿದೆ ಎಂದು ಆರೋಪಿಸಿದ್ದಾರೆ. ಈ ಘಟನೆ ವಿರುದ್ಧ ಹಿಮಾಚಲ ಪ್ರದೇಶದ ಕಾಂಗ್ರೆಸ್ ಮುಖಂಡರು ಪ್ರತಿಭಟನೆಯ ಎಚ್ಚರಿಕೆ ನೀಡಿ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಅವರಿಗೆ ಪತ್ರ ಬರೆದಿದ್ದಾರೆ.
ಮನಾಲಿಯನ್ನು ಲಾಹೌಲ್-ಸ್ಪಿತಿ ಕಣಿವೆಯೊಂದಿಗೆ ಸಂಪರ್ಕಿಸುವ ಮತ್ತು ಲಡಾಖ್ನ ಲೇಹ್ಗೆ ಪ್ರಯಾಣದ ಸಮಯವನ್ನು ಐದು ಗಂಟೆಗಳವರೆಗೆ ಕಡಿಮೆ ಮಾಡುವ ಮಹತ್ವದ ಅಟಲ್ ಸುರಂಗವನ್ನು ಪ್ರಧಾನಿ ನರೇಂದ್ರ ಮೋದಿ ಅ.3ರಂದು ಉದ್ಘಾಟಿಸಿದರು.
ಇದನ್ನೂ ಓದಿ: ಫ್ಯಾಕ್ಟ್ಚೆಕ್: ಕೇಂದ್ರ ಸರ್ಕಾರವನ್ನು ತೀವ್ರವಾಗಿ ಟೀಕಿಸುತ್ತಿರುವ ಈ ಮಹಿಳೆ ವಾಜಪೇಯಿಯವರ ಸೊಸೆ ಅಲ್ಲ
ಆದರೆ 2010ರ ಜುಲೈ 28ರಂದು ಈ ಸುರಂಗಕ್ಕೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅಡಿಗಲ್ಲು ಹಾಕಿದ್ದರು. ಈ ವೇಳೆ ಸೋನಿಯಾ ಅವರ ಹೆಸರಿದ್ದ ಫಲಕವನ್ನ ಇಲ್ಲಿ ಹಾಕಲಾಗಿತ್ತು. ಆದರೆ ಸುರಂಗ ಉದ್ಘಾಟನೆಗೂ ಮುನ್ನ ಫಲಕವನ್ನ ತೆಗೆದುಹಾಕಲಾಗಿದೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ.
ಈ ಕುರಿತು ಹಿಮಾಚಲಪ್ರದೇಶದ ಕಾಂಗ್ರೆಸ್ ಅಧ್ಯಕ್ಷ ಕುಲ್ದೀಪ್ ಸಿಂಗ್ ರಾಥೋಡ್, ಹಿಮಾಚಲಪ್ರದೇಶದ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಅವರಿಗೆ ಪತ್ರ ಬರೆದು, ಫಲಕ ತೆಗೆದುಹಾಕಿದ್ದರ ವಿರುದ್ಧ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಕಾಣೆಯಾಗಿರುವ ಅಡಿಪಾಯದ ಫಲಕವನ್ನ ಪುನಃ ಸ್ಥಾಪನೆ ಮಾಡದಿದ್ದರೆ, ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಕಾಂಗ್ರೆಸ್ ಪ್ರತಿಭಟನೆ ನಡೆಸಲಿದೆ. “ಇದು ಪ್ರಜಾಪ್ರಭುತ್ವ ವಿರೋಧಿ, ಅಸಾಂಪ್ರದಾಯಿಕ ಮತ್ತು ಕಾನೂನುಬಾಹಿರ ಹೆಜ್ಜೆಯಾಗಿದೆ” ಎಂದು ಪತ್ರದಲ್ಲಿ ಬರೆದಿದ್ದಾರೆ.
ಅಡಿಪಾಯದ ಫಲಕ ಕಾಣೆಯಾಗಿರುವ ಬಗ್ಗೆ ತನಿಖೆ ಮಾಡುವಂತೆ ಪಕ್ಷದ ಮುಖಂಡರಾದ ಗಿಯಾಲ್ಚನ್ ಠಾಕೂರ್ ಹಾಗೂ ಹರಿಚಂದ್ ಶರ್ಮಾ ಕೀಲಾಂಗ್ ಹಾಗೂ ಮನಾಲಿಯಲ್ಲಿ ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ.
ಹಿಮಾಚಲದಲ್ಲಿ ರೋಹ್ಟಾಂಗ್ನಲ್ಲಿ ಸುರಂಗ ನಿರ್ಮಿಸುವ ನಿರ್ಧಾರವನ್ನು ಅಟಲ್ ಬಿಹಾರಿ ವಾಜಪೇಯಿ ಪ್ರಧಾನ ಮಂತ್ರಿಯಾಗಿದ್ದಾಗ 2000ರ ಜೂನ್ 3 ರಂದು ತೆಗೆದುಕೊಳ್ಳಲಾಗಿತ್ತು. ಮಾಜಿ ಪ್ರಧಾನಿ ನೀಡಿದ ಕೊಡುಗೆಯನ್ನು ಗೌರವಿಸಲು ರೋಹ್ಟಾಂಗ್ ಸುರಂಗವನ್ನು ಅಟಲ್ ಸುರಂಗ ಎಂದು ಹೆಸರಿಸಲು ಕೇಂದ್ರ ಸಚಿವ ಸಂಪುಟ 2019 ರಲ್ಲಿ ನಿರ್ಧರಿಸಿತ್ತು.