ರೈತ ಹೋರಾಟಕ್ಕೆ ವಿಶ್ವದಾದ್ಯಂತ ಸಾವಿರಾರು ಸಂಘಟನೆಗಳು ಬೆಂಬಲ ನೀಡುತ್ತಿದೆ. ದಕ್ಷಿಣ ಭಾರತದ ರೈತರು ಈಗಾಗಲೇ ಸಾವಿರಾರು ಮಂದಿ ದೆಹಲಿಯ ಗಡಿಗಳಿಗೆ ತೆರಳಿ ರೈತ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಈಗ ರೈತರ ಹೋರಾಟಗಳಲ್ಲಿ ಸಕ್ರಿಯವಾಗಿರುವ ದಕ್ಷಿಣ ಭಾರತದ 140ಕ್ಕೂ ಹೆಚ್ಚು ಸಾಮಾಜಿಕ ಹೋರಾಟಗಾರರು ಮತ್ತು ಮುಖಂಡರು ರೈತ ಹೋರಾಟಕ್ಕೆ ಬೆಂಬಲ ನೀಡಲು ತೆರಳುತ್ತಿದ್ದಾರೆ.
ದಕ್ಷಿಣ ಭಾರತದಲ್ಲಿಯೂ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಯುತ್ತಿದ್ದು, ಕರ್ನಾಟಕ, ಆಂಧ್ರ ಪ್ರದೇಶ, ಕೇರಳ, ತಮಿಳುನಾಡು ಮತ್ತು ತೆಲಂಗಾಣದ ಸಾಮಾಜಿಕ ಹೋರಾಟಗಾರರು ಮತ್ತು ಅವರ ತಂಡ ಐಕ್ಯತೆ ಮತ್ತು ಒಗ್ಗಟ್ಟಿನ ಬೆಂಬಲ ನೀಡಲು ಫೆಬ್ರವರಿ 23 ರಂದು ದೆಹಲಿ ಪ್ರತಿಭಟನಾ ಸ್ಥಳಗಳಿಗೆ ತೆರಳುತ್ತಿದೆ.
ಈ ಹೋರಾಟಗಾರರು ಮತ್ತು ತಂಡದಲ್ಲಿ ಕರ್ನಾಟಕದ 64 ಸದಸ್ಯರು, ಆಂಧ್ರ ಪ್ರದೇಶದ ವಿವಿಧ ಸಂಘ ಸಂಸ್ಥೆಗಳಿಂದ 28 ಸದಸ್ಯರು, ತೆಲಂಗಾಣದಿಂದ 30 ಮತ್ತು ತಮಿಳುನಾಡಿನ ಸಂಸ್ಥೆಗಳಿಂದ 8 ಸದಸ್ಯರು ದೆಹಲಿಗೆ ಹೋರಟಿದ್ದಾರೆ. ಫೆಬ್ರವರಿ 23 ರ ನಂತರ ಇನ್ನೂ ಅನೇಕ ಮಂದಿ ಈ ತಂಡವನ್ನು ಸೇರಲಿದ್ದಾರೆ. ಇದರಲ್ಲಿ ಕರ್ನಾಟಕದ ಜನಶಕ್ತಿ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆಯ ಭಾಗವಾಗಲಿದ್ದಾರೆ.
ಇದನ್ನೂ ಓದಿ: ಮದುವೆಗಳಲ್ಲಿಯೂ ರೈತ ಹೋರಾಟಕ್ಕೆ ಬೆಂಬಲ!: ಹರಿಯಾಣ-ಪಂಜಾಬ್ನಲ್ಲಿ ವಿಭಿನ್ನ ಪ್ರತಿರೋಧ
ಕರ್ನಾಟಕ ಜನಶಕ್ತಿ ಕಾರ್ಯಕರ್ತರು ಇಂದು ಬೆಂಗಳೂರಿನಿಂದ ಹೊರಟಿದ್ದು, ಫೆ.23 ರಂದು ದೆಹಲಿ ಸೇರಲಿದ್ದಾರೆ.
ಫೆಬ್ರವರಿ 23 ರಂದು ನಡೆಯಲಿರುವ ಪಗಡಿ ಸಂಭಾಲ್ ದಿನದಂದು ಈ ಹೋರಟಗಾರರ ತಂಡ ಸಿಂಘು ಗಡಿಯನ್ನು ತಲುಪಲಿದೆ. ಫೆಬ್ರವರಿ 24 ರಂದು ಟಿಕ್ರಿ ಬಾರ್ಡರ್, ಫೆಬ್ರವರಿ 25 ರಂದು ಶಹಜಹಾನಪುರ ಗಡಿ ಭಾಗ, ಫೆಬ್ರವರಿ 26 ರಂದು ಗಾಝಿಪುರ್ ಗಡಿಗೆ ಭೇಟಿ ನೀಡಿ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ.
ಐತಿಹಾಸಿಕ ರೈತ ಹೋರಾಟದ 100 ನೇ ದಿನ ಈ ತಂಡ ಸಿಂಘು ಪ್ರತಿಭಟನಾ ಸ್ಥಳಕ್ಕೆ ಹಿಂತಿರುಗಿ ಅಲ್ಲಿಂದ ತಮ್ಮ ಸ್ಥಳಗಳಿಗೆ ವಾಪಸ್ ಬರುತ್ತದೆ. ಫೆ. 23 ರಂದು ನಡೆಯುತ್ತಿರುವ ಪಗಡಿ ಸಂಭಾಲ್ ದಿನಕ್ಕೆ ಸಾಕ್ಷಿಯಾಗುತ್ತಿರುವುದಕ್ಕೆ ಮತ್ತು 100 ನೇ ದಿನದ ಹೋರಾಟದಲ್ಲಿ ಪಾಲ್ಗೊಳ್ಳುತ್ತೇವೆ ಎಂದು ತಿಳಿಸಲು ಸಂತೋಷವಾಗುತ್ತಿದೆ ಎಂದು ಈ ಹೋರಾಟಗಾರರು ತಿಳಿಸಿದ್ದಾರೆ.
ಇದನ್ನೂ ಓದಿ: ರೈತ ಹೋರಾಟ: 24 ವರ್ಷದ ಯುವಕ ಬಲ್ಜಿತ್ ಸಿಂಗ್ ಅವಿರೋಧವಾಗಿ ಸರ್ಪಂಚ್ ಆದ ಕಥೆ
ಈ ಸಾಮಾಜಿಕ ಕಾರ್ಯಕರ್ತರ ಅಭಿಯಾನವು ಪ್ರಯಾಣದಿಂದಲೇ ಆರಂಭವಾಗುತ್ತದೆ ಎಂದು ಹೇಳಲಾಗಿದೆ. ಹಗಲಿನ ವೇಳೆಯಲ್ಲಿ ದೀರ್ಘಾವಧಿಯ ನಿಲುಗಡೆ ಇರುವ ಕಡೆಯಲೆಲ್ಲಾ ಘೋಷಣೆಗಳು ಮತ್ತು ಹಾಡುಗಳೊಂದಿಗೆ ಪ್ರತಿರೋಧವನ್ನು ಪ್ರಾರಂಭಿಸಲಿದ್ದಾರೆ.
ರೈತ ನಾಯಕರೊಂದಿಗೆ ಸಾಧ್ಯವಾದಷ್ಟು ಸಂಕ್ಷಿಪ್ತ ಸಂವಹನ ನಡೆಸುತ್ತೇವೆ. ವೇದಿಕೆಗಳಲ್ಲಿ ಸಣ್ಣ ಭಾಷಣಗಳನ್ನು ಮಾಡಲು ತಯಾರು ಮಾಡಿಕೊಳ್ಳಲಾಗಿದೆ. ಇದರ ಜೊತೆಗೆ ಹೋರಾಟದ ಹಾಡುಗಳನ್ನು ಮುಖ್ಯ ವೇದಿಕೆಯ ಹೊರತಾಗಿ ಬೇರೆ ಬೇರೆ ಸ್ಥಳಗಳಲ್ಲಿ ಪ್ರಸ್ತುತ ಪಡಿಸಲು ಈ ತಂಡ ಸಿದ್ಧತೆ ಮಾಡಿಕೊಂಡಿದೆ.
ಒಟ್ಟಾರೆ, ದೇಶದ ರೈತರು ಈ ವಿವಾದಿತ ಕೃಷಿ ಕಾನೂನಿನ ವಿರುದ್ಧ ನಡೆಸುತ್ತಿರುವ ಹೋರಾಟದಲ್ಲಿ ಒಗ್ಗಟ್ಟು ಮತ್ತು ಬೆಂಬಲ ನೀಡುವುದು ಇವರ ಉದ್ದೇಶವಾಗಿದೆ.
https://youtu.be/XVLbUUgKylw
ಇದನ್ನೂ ಓದಿ: ಟೀ ಮಾರುವವನಿಗೆ ಬಡವರ ನೋವಿನ ಅರಿವಿರುತ್ತೆ ಎಂಬ ಭ್ರಮೆಯಲ್ಲಿ ಮತ ನೀಡಿದ್ದೆವು!