Homeಚಳವಳಿಜಾತಿಪದ್ಧತಿಯ ಕಡುವಿರೋಧಿ, ಹೋರಾಟಗಾರ ಸುಧೀರ್ ಧಾವ್ಳೆ

ಜಾತಿಪದ್ಧತಿಯ ಕಡುವಿರೋಧಿ, ಹೋರಾಟಗಾರ ಸುಧೀರ್ ಧಾವ್ಳೆ

ಒಬ್ಬ ಸಂಘಟಕರಾಗಿ, ಲೇಖಕರಾಗಿ, ಕವಿಯಾಗಿ, ನಾಟಕಕಾರರಾಗಿ, ಸ್ವತಂತ್ರ ಪತ್ರಕರ್ತರಾಗಿ, ಮರಾಠಿ ಪತ್ರಿಕೆಯೊಂದರ ಸಂಪಾದಕರಾಗಿ, ಸುಧೀರ್ ಧಾವ್ಳೆಯವರು ಸಾಮಾಜಿಕ ಅನ್ಯಾಯ ಮತ್ತು ದಲಿತರ ಮೇಲಿನ ದೌರ್ಜನ್ಯಗಳನ್ನು ಸಾರ್ವಜನಿಕ ಚರ್ಚೆಗೆ ತರಲು ಅವಿರತ ಪ್ರಯತ್ನ ಮಾಡಿ, ಪ್ರಜಾಪ್ರಭುತ್ವವವನ್ನು ಒಂದು ಮುಖ್ಯ ಹೋರಾಟದ ಶಕ್ತಿಯಾಗಿ ಪರಿವರ್ತಿಸಲು ದುಡಿದಿದ್ದಾರೆ.

- Advertisement -
- Advertisement -

ಸುಧೀರ್ ಧಾವ್ಳೆ ಅವರ ಹೋರಾಟಗಳ ಬಗೆಗಿನ ಬದ್ಧತೆ, ನ್ಯಾಯದ ಬಗೆಗೆ ಅವರಿಗಿರುವ ಆಳವಾದ ಮೂಲಭೂತ ನಂಬಿಕೆಯ ಮೇಲೆ ನಿಂತಿದೆ. ನಾಗಪುರದ ಅಂಬೇಡ್ಕರ್‌ವಾದಿ ರಾಜಕೀಯ ಚಟುವಟಿಕೆಗಳ ಕೇಂದ್ರವಾಗಿದ್ದ, ಇಂದೋರದಲ್ಲಿ ತನ್ನ ಬಾಲ್ಯ ಜೀವನ ಕಳೆದ ಸುಧೀರ್, ಆರಂಭದಿಂದಲೇ ಮಾನವ ಹಕ್ಕುಗಳು ಮತ್ತು ಘನತೆಯ ಸಂಬಂಧಿ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. 1994ನೇ ಇಸವಿಯವರೆಗೂ ನಾಗಪುರದಲ್ಲಿನ ಜನಪರ ಚಳುವಳಿಗಳಲ್ಲಿ ಭಾಗಿಯಾಗಿದ್ದ ಸುಧೀರ್ ತರುವಾಯ ಕೆಲಸದ ಹುಡುಕಾಟದಲ್ಲಿ ಬಾಂಬೆಗೆ ನೆಲೆ ಬದಲಿಸಿದರು.

1995ನೇ ಇಸವಿಯಿಂದ, ಸುಧೀರ್ ಧಾವ್ಳೆ ಯವರು ತಮ್ಮ ಜೀವನವನ್ನು ದಲಿತರ ಮತ್ತು ಇನ್ನಿತರ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳ ವಿರುದ್ಧ ಹೋರಾಡಲು ಮುಡುಪಿಟ್ಟರು. ಅವರು ಬೀದಿ ಹೋರಾಟಗಳಲ್ಲಿ ಮತ್ತು ಕೋರ್ಟ್‌ಗಳಲ್ಲಿನ ಹೋರಾಟಗಳೆರಡರಲ್ಲೂ ಸಕ್ರಿಯವಾಗಿ ಪಾಲ್ಗೊಂಡಿದ್ದರು ಮತ್ತು ಘಾಟ್ಕೋಪರ್ ರಮಾಬಾಯಿ ನಗರದಲ್ಲಿ ಜರುಗಿದ ದಲಿತ ಹತ್ಯಾಕಾಂಡದಂತಹ ದಲಿತರ ಮೇಲಿನ ದೌರ್ಜನ್ಯಗಳ ವಿರುದ್ಧ ಹೋರಾಡಿದ್ದರು. ಆ ಘಟನೆಯಲ್ಲಿ ಅಂಬೇಡ್ಕರ್ ಪ್ರತಿಮೆಯ ವಿರೂಪಗೊಳಿಸದ್ದನ್ನು ವಿರೋಧಿಸಿ ಪ್ರತಿಭಟನೆಯಲ್ಲಿ ನಿರತರಾಗಿದ್ದ 10 ಮಂದಿ ದಲಿತರನ್ನು ಪೊಲೀಸರು ಗುಂಡು ಹಾರಿಸಿ ಕೊಂದಿದ್ದರು.

ಹಾಗೆಯೇ ಖೈರ್ಲಾಂಜಿ ಹೋರಾಟ (2006ರ ದಲಿತ ಕುಟುಂಬ ಒಂದರ ಮಾರಣಹೋಮ), 2008ರ ಅಹಮದಾಬಾದ್ ಜಿಲ್ಲೆಯ ಬಾಬನ್ ಮಿಸಲ್ ಕೊಲೆ, 2008ರ ಮರಾಟ್‌ವಾಡದಲ್ಲಾದ ಸಾಹೇಬರಾವ್ ಜೊಂಧಲೆ ಅವರ ಘೋರ ಕೊಲೆ, ಬೀಡ್ ಜಿಲ್ಲೆಯಲ್ಲಿ 2009ರಲ್ಲಾದ ಸದಾಶಿವ್ ಸಾಲ್ವೆಯವರ ಕೊಲೆ, ನಾಗ್ಪುರದಲ್ಲಿ 2009ರಲ್ಲಾದ ಮನೋರಮಾ ಕಾಂಬ್ಳೆ ಗ್ಯಾಂಗ್ ರೇಪ್ ಮತ್ತು ಕೊಲೆ ಪ್ರಕರಣ, 2009ರಲ್ಲಿ ಔರಂಗಾಬಾದ ಬಳಿಯ ಪಾಲ್ಗಾಂವ್ ನಲ್ಲಿ ಕೊಲೆಯಾದ ರೋಹಿದಾಸ್ ತೂಪೆ, ಮತ್ತು ಮಹಾರಾಷ್ಟ್ರದಲ್ಲಿ ಇನ್ನು ಹತ್ತು ಹಲವು ದಲಿತರ ಕೊಲೆ ಮತ್ತು ದೌರ್ಜನ್ಯದ ಕೇಸ್‌ಗಳ ವಿರುದ್ಧದ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.

2002ರಲ್ಲಿ, ಗುಜರಾತ್‌ನಲ್ಲಾದ ಸಾಮೂಹಿಕ ಹತ್ಯಾಕಾಂಡದ ನಂತರದ ದಿನಗಳಲ್ಲಿ, ವಿದ್ರೋಹಿ ಎನ್ನುವ ಮರಾಠಿ ಪತ್ರಿಕೆಯೊಂದನ್ನು ಪ್ರಾರಂಭಿಸಿದರು. ನಾಲ್ಕು ಪುಟಗಳ ಪತ್ರಿಕೆಯಾಗಿ ಶುರುವಾಗಿ ನಂತರ ಕೆಲವು ತಿಂಗಳುಗಳ ನಂತರ ಎಂಟು ಪುಟಗಳ ಪತ್ರಿಕೆಯಾಗಿ ಮಾರ್ಪಾಡಾಯಿತು. ಕೆಲವೇ ವರ್ಷಗಳಲ್ಲಿ ಒಂದು ಪೂರ್ಣ ಪ್ರಮಾಣದ ಪತ್ರಿಕೆಯ ಸ್ವರೂಪ ಪಡೆದು ತಿಂಗಳಿಗೆ ಎರಡು ಬಾರಿ ಮುದ್ರಣ ಹೊಂದತ್ತಾ, ರಾಷ್ಟದಲ್ಲಿ ಜರುಗುವ ಪ್ರಚಲಿತ ವಿದ್ಯಮಾನಗಳ ಬಗ್ಗೆ ಮಾತನಾಡಲು ಶುರುಮಾಡಿತು. ಈಗಲೂ ದಲಿತರ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಮಾನವಹಕ್ಕುಗಳ ಉಲ್ಲಂಘನೆಯ ಬಗ್ಗೆ ದಲಿತರ ದನಿಯಾಗಿ ಹೋರಾಟ ಮುಂದುವರೆಸಿ, ಸತ್ಯಶೋಧನ ವರದಿಗಳನ್ನು ಮತ್ತು ಮೌಲ್ಯಯುತ ಸಾಹಿತ್ಯವನ್ನು ಪ್ರಕಟಿಸುವ ಪತ್ರಿಕೆಯಾಗಿ ಮುಂದುವರೆದಿದೆ.

ಇದನ್ನೂ ಓದಿ: ಎಷ್ಟೋ ಆದಿವಾಸಿ ಕುಟುಂಬಗಳ ಪ್ರೀತಿಯ ಪುತ್ರ ಮಹೇಶ್ ರಾವುತ್ ಬಂಧನ ನ್ಯಾಯವೇ?

2006ರ ಖೈರ್ಲಾಂಜಿ ಹತ್ಯಾಕಾಂಡದ ನಂತರ, ಬಹುತೇಕ ಅಂಬೇಡ್ಕರ್‌ವಾದಿಗಳು, ಎಡ ಮತ್ತು ಇತರ ಪ್ರಗತಿಪರ ಸಂಘಟನೆಗಳು, ತಮ್ಮ ಹೋರಾಟದ ಸ್ವರೂಪಗಳನ್ನು ಒಗ್ಗೂಡಿಸಿಕೊಂಡು, ಜಾತಿ ವಿನಾಶದ ಪ್ರತಿರೋಧದ ಮೂಲಕ, ಧೀರ್ಘಕಾಲದ ಗುರಿಗಳನ್ನು ಹೊಂದಿರುವ ರಾಜಕೀಯ ಚಳುವಳಿ ಮಾಡುವ ನಿರ್ಧಾರಕ್ಕೆ ಬಂದವು. ಈ ಹೊಸ ಆಶಯದೊಂದಿಗೆ, ಮುಂಬೈನ ಚೈತನ್ಯ ಭೂಮಿಯಲ್ಲಿ ಡಿಸೆಂಬರ್ 6, 2007ರಂದು “Republican Panthers Jaatiya Antachi Chalwal” (ಜಾತಿ ವಿನಾಶ ರಿಪಬ್ಲಿಕನ್ ಪ್ಯಾಂಥರ್ಸ್ ಅಂದೋಲನ) ಸಂಘಟನೆ ಚಾಲನೆಗೆ ಬಂದಿತು.

ಸುಧೀರ್ ಧಾವ್ಳೆ, ಈ ಸಂಘಟನೆಯ ಸಂಸ್ಥಾಪಕ ಸದಸ್ಯರಲ್ಲೊಬ್ಬರಾಗಿದ್ದರು. ತಮ್ಮ ಹಲವು ವರ್ಷಗಳ ಕಾಲದ ರಾಜಕೀಯ ಬೌದ್ಧಿಕ ಪರಿಜ್ಞಾನದ ಸಹಾಯದಿಂದ, ಜಾತಿ ವಿನಾಶವನ್ನು ಕೇಂದ್ರದಲ್ಲಿ ಇಟ್ಟುಕೊಂಡು ರಿಪಬ್ಲಿಕನ್ ಪ್ಯಾಂಥರ್ಸ್ ಸಂಘಟನೆಗೆ ಬೇಕಾದ ತಾತ್ವಿಕ ಸ್ವರೂಪವನ್ನು ತಂದುಕೊಟ್ಟರು. ಒಂದು ಸಾಂಸ್ಕೃತಿಕ ಸಂಘಟನೆಯಾಗಿ, ತಮ್ಮ ಕ್ರಾಂತಿಕಾರಿ ಸಂಗೀತ, ಬೀದಿ ನಾಟಕಗಳನ್ನು ಸ್ಲಂಗಳಿಗೆ, ಕಾರ್ಮಿಕ ಸಂಘಟನೆಗಳಿಗೆ, ಶಾಲೆಗಳಿಗೆ, ಹಲವು ಪ್ರತಿಭಟನೆಗಳಿಗೆ ಕೊಂಡೊಯ್ದು, ಹಿಂದೂ ಜಾತಿ ಪದ್ಧತಿಯ ದೌರ್ಜನ್ಯಗಳನ್ನು ಜನರಿಗೆ ತಲಪುವಂತೆ ಮಾಡಿದರು .

2011ರಲ್ಲಿ, ಮಹಾರಾಷ್ಟ್ರ ಪೊಲೀಸ್ ಧಾವ್ಳೆಯವರನ್ನು ದೇಶದ್ರೋಹದ ಆರೋಪದ ಮತ್ತು ಆತಂಕವಾದಿ ಸಂಘಟನೆಯ ಸದಸ್ಯ ಮತ್ತು ಅವರಿಗೆ ಸಹಕಾರ ನೀಡುತ್ತಿರುವ ಅರೋಪಗಳನ್ನು ಹೊರಿಸಿ ಬಂಧಿಸಿದರು. 2014ರ ಮೇ ತಿಂಗಳಲ್ಲಿ, 40 ತಿಂಗಳು ಜೈಲಿನಲ್ಲಿ ಸೆರೆವಾಸ ಅನುಭವಿಸದ ನಂತರ, ಮಹಾರಾಷ್ಟ್ರದ ಗೊಂಡಿ ಜಿಲ್ಲೆಯ ಯುಎಪಿಎ ವಿಶೇಷ ನ್ಯಾಯಾಲಯದ ಮುಖ್ಯನ್ಯಾಯಾಧೀಶರಾದ ಆರ್ ಜಿ ಅಸ್ಮರ್, ಧಾವ್ಳೆ ಮತ್ತು ಇನ್ನಿತರ 8 ಮಂದಿಯನ್ನು ಎಲ್ಲಾ ಆರೋಪಗಳಿಂದ ದೋಷಮುಕ್ತಗೊಳಿಸಿ ನಿರಪರಾಧಿ ಎಂದು ತೀರ್ಪು ನೀಡಿದರು. ಬಹಳ ಖಾರವಾಗಿ ಪ್ರತಿಕ್ರಿಯಿಸಿದ್ದ ಕೋರ್ಟಿನ ತೀರ್ಪು, ರಾಜ್ಯ ಪೊಲೀಸ್ ತನಿಖೆಯ ಮೇಲೆ ಟೀಕಾ ಪ್ರಹಾರ ಮಾಡಿ ಅಸಮಧಾನ ಸೂಚಿಸಿತ್ತು.

ವಿದ್ರೋಹಿ ಪತ್ರಿಕೆಯನ್ನು ಶುರು ಮಾಡಿದ್ದುದೇ, ವ್ಯವಸ್ಥೆಯ ಕೆಂಗಣ್ಣಿಗೆ ಗುರಿಯಾಗಿ ಧಾವ್ಳೆಯವರನ್ನು ಬಂಧಿಸಲು ಕಾರಣವಾಗಿತ್ತು ಎಂಬುದು ಎಲ್ಲರ ನಂಬಿಕೆ. ಬಿಡುಗಡೆಯ ನಂತರ ಸುಧೀರ್‌ರವರು ಪತ್ರಿಕೆಯ ಪ್ರಸಾರವನ್ನು ಇನ್ನಷ್ಟು ಹೆಚ್ಚಿಸುವುದರ ಜತೆಗೆ, ಹಲವಾರು ಚಳುವಳಿಗಳು, ಪ್ರತಿಭಟನೆಗಳನ್ನು ಸಾಮಾಜಿಕ ಸಮಸ್ಯೆಗಳ ಮೇಲೆ ಹಮ್ಮಿಕೊಂಡರು. ಜಾತಿ ದೌರ್ಜನ್ಯಗಳ ಮೇಲೆ ಹೋರಾಡುವ ಹಲವಾರು ಸಂಘಟನೆಗಳ ಒಕ್ಕೂಟಗಳಾದ, ಜಾತಿ ಅತ್ಯಾಚಾರ್ ವಿರೋಧಿ ಕೃತಿ ಸಮಿತಿ (ಜಾತಿ ದೌರ್ಜನ್ಯ ವಿರೋಧಿ ಕಾರ್ಯ ಸಮಿತಿ), ಸಾಮಾಜಿಕ ನ್ಯಾಯಕ್ಕಾಗಿ ಜಂಟಿ ಸಮಿತಿ, ಭೀಮ್ ಕೋರೆಗಾಂವ್ ಶೌರ್ಯ ದಿನ್ ಪ್ರೇರಣಾ ಅಭಿಯಾನ, ಮುಂತಾದವುಗಳ ಜತೆ ಕೈಜೋಡಿಸಿ ಸಕ್ರಿಯವಾಗಿ ಮುನ್ನಡೆಸಿದ್ದರು. ಸಾಂದರ್ಭಿಕವಾಗಿ, ಇವರ ಜೊತೆಗೆ ಸದ್ಯದ ಭೀಮ್ ಕೋರೆಗಾಂವ್ ಪ್ರಕರಣದ ಸಹ ಆರೋಪಿ ವಕೀಲ ಸುರೇಂದ್ರ ಗಾಡ್ಲಿಂಗ್, 2011 ರ ಪ್ರಕರಣದಲ್ಲಿ ಧಾವ್ಳೆ ಅವರನ್ನು ಪ್ರತಿನಿಧಿಸಿದ್ದರು.

ಸುಧೀರ್ ತಮ್ಮ ನೆಲಮಟ್ಟದ ಹೋರಾಟ ರಾಜಕೀಯ ಅನುಭವಗಳನ್ನು ಮತ್ತು ತಿಳಿವಳಿಕೆಯನ್ನು ಬರಹಕ್ಕಿಳಿಸಿದರು. ಕೇವಲ ವಿದ್ರೋಹಿ ಪತ್ರಿಕೆಯ ಮೂಲಕ ಮಾತ್ರವಲ್ಲದೆ, ಹಲವಾರು ಸಾಮಾಜಿಕ -ರಾಜಕೀಯ ವಿಚಾರಗಳ ಮೇಲೆ ಅವರು ಬರೆದ ಮತ್ತು ಸಂಪಾದಿಸಿದ ಹಲವು ಪುಸ್ತಕಗಳಲ್ಲಿ ಕೂಡ ಅವರು ಇದನ್ನು ಸಾಧಿಸಿದ್ದಾರೆ. ತಾವು ಜೈಲಿನಲ್ಲಿದ್ದ ದಿನಗಳಲ್ಲಿಯೂ, ಮೂರು ಪುಸ್ತಕಗಳನ್ನು ಬರೆದಿದ್ದಾರೆ. ಜನಸಮೂಹದ ನೋವು ಮತ್ತು ಸಂಘರ್ಷಗಳ ಸಮ್ಮಿಲನ ಅವರ ಲೇಖನಗಳ ಜೀವಾಳ.

ಸುಧೀರ್ ತಮ್ಮ ಹಲವಾರು ಸಂಗಾತಿಗಳೊಂದಿಗೆ ದಲಿತ, ಮರಾಠ ಮತ್ತು ಮುಸ್ಲಿಂ ನಾಯಕರನ್ನು ಒಂದು ಸಮಾನ ವೇದಿಕೆಯಲ್ಲಿ ಒಗ್ಗೂಡಿಸಿ, ಸಮಾಜದ ವಿವಿಧ ದುರ್ಬಲ ಸಮುದಾಯಗಳ ಮೇಲಿನ ಪ್ರಭುತ್ವದ ದೌರ್ಜನ್ಯವನ್ನು ಚರ್ಚಿಸಲು ಭೀಮ ಕೋರೆಗಾಂವ್ ಘಟನೆಯ 200ನೇ ವರ್ಷದ ಸಂಸ್ಮರಣೆಯ ದಿನದಂದು, ಎಲ್ಗಾರ್ ಪರಿಷದ್ ಸಭೆಯನ್ನು ಡಿಸೆಂಬರ್ 31, 2017ರಲ್ಲಿ ಕರೆನೀಡಿದ್ದರು.

ಒಬ್ಬ ಸಂಘಟಕರಾಗಿ, ಲೇಖಕರಾಗಿ, ಕವಿಯಾಗಿ, ನಾಟಕಕಾರರಾಗಿ, ಸ್ವತಂತ್ರ ಪತ್ರಕರ್ತರಾಗಿ, ಮರಾಠಿ ಪತ್ರಿಕೆಯೊಂದರ ಸಂಪಾದಕರಾಗಿ, ಸುಧೀರ್ ಧಾವ್ಳೆಯವರು ಸಾಮಾಜಿಕ ಅನ್ಯಾಯ ಮತ್ತು ದಲಿತರ ಮೇಲಿನ ದೌರ್ಜನ್ಯಗಳನ್ನು ಸಾರ್ವಜನಿಕ ಚರ್ಚೆಗೆ ತರಲು ಅವಿರತ ಪ್ರಯತ್ನ ಮಾಡಿ, ಪ್ರಜಾಪ್ರಭುತ್ವವವನ್ನು ಒಂದು ಮುಖ್ಯ ಹೋರಾಟದ ಶಕ್ತಿಯಾಗಿ ಪರಿವರ್ತಿಸಲು ದುಡಿದಿದ್ದಾರೆ.

ಸುಧೀರ್‌ರವರ ಮಾತುಗಳು ತಮ್ಮ ಕ್ರಿಯಾಶೀಲತೆಯಿಂದ, ಧೃಡತೆಯಿಂದ ಶಿಲೆಯನ್ನೂ ಚಲಿಸುವ ಹಾಗೆ ಮಾಡಬಲ್ಲವು. ಸುಧೀರ್ ಪ್ರತಿ ಚಳುವಳಿಯೂ ಹೇಗೆ “ಅನನ್ಯ”ವಾಗಿರಬೇಕು ಎಂದು ವಿವರಿಸುತ್ತಾರೆ. ನಮ್ಮದೇ ಅನನ್ಯ ಕ್ರಾಂತಿಗಾಗಿ …

“ಇದು ಯಾವ ಸೀಮೆಯ ನಗರ?

ನೀವು ಯಾವ ಸೀಮೆಯ ಜನರು?

ಒಂದು ಅನ್ಯಾಯವಾದಾಗ ಆ ನಗರದಲ್ಲಿ ದಂಗೆಯಾಗಬೇಕು.

ಹಾಗೇನಾದರೂ ದಂಗೆಯಾಗದಿದ್ದರೆ,

ಆ ನಗರ ಉರಿದು ಬೆಳಗಾಗುವಷ್ಟರಲ್ಲಿ ಬೂಧಿಯಾಗುವುದೇ ಉತ್ತಮ …”

 

ಕೃಪೆ: ಮುಂಬೈ ರೈಸಸ್ ಟು ಸೇವ್ ಡೆಮಾಕ್ರಸಿ

ಅನುವಾದ: ಮಂಜುನಾಥ ಚಾರ್ವಾಕ


ಇದನ್ನೂ ಓದಿ: ಕಾಶ್ಮೀರದ ಪ್ರಜಾಸತ್ತಾತ್ಮಕ ಹೋರಾಟಕ್ಕೆ ಪ್ರೇರೇಪಣೆಯ ಗೌತಮ್ ನೌಲಾಖ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...