ತಮಿಳುನಾಡಿನಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ಭಾರತೀಯ ಹವಾಮಾನ ಇಲಾಖೆಯು ಗುರುವಾರ ಚೆನ್ನೈ, ತಿರುವಳ್ಳೂರು, ಕಲ್ಲಕುರಿಚಿ, ಸೇಲಂ, ವೆಲ್ಲೂರು, ತಿರುಪತ್ತೂರು, ರಾಣಿಪೇಟ್ ಮತ್ತು ತಿರುವಣ್ಣಾಮಲೈ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಿದೆ.
ನೈಋತ್ಯ ಬಂಗಾಳಕೊಲ್ಲಿಯಲ್ಲಿನ ವಾಯುಭಾರ ಕುಸಿತದಿಂದ ಈ 8 ಜಿಲ್ಲೆಗಳಲ್ಲಿ ಕೆಲವೆಡೆ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮುಂದಿನ ಎರಡು ದಿನಗಳಲ್ಲಿ ನಗರದಲ್ಲಿ 250 ಮಿಲಿ ಮೀಟರ್ಗಿಂತಲೂ ಹೆಚ್ಚು ಮಳೆ ಬೀಳಬಹುದು ಎಂದು ಚೆನ್ನೈ ಕಾರ್ಪೊರೇಷನ್ ಕಮಿಷನರ್ ಗಗನ್ದೀಪ್ ಎಸ್ ಬೇಡಿ ಎಎನ್ಐಗೆ ತಿಳಿಸಿದ್ದಾರೆ.
“ನಾವು ಪರಿಸ್ಥಿತಿ ನಿಭಾಯಿಸಲು ಹಲವು ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಸಂಭವನೀಯ ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ನಾಗರಿಕ ಸಂಸ್ಥೆಯು ನಗರದ ವಿವಿಧ ಭಾಗಗಳಲ್ಲಿ 46 ದೋಣಿಗಳನ್ನು ನಿಲ್ಲಿಸಿದೆ. 200 ವೈದ್ಯಕೀಯ ಶಿಬಿರಗಳನ್ನು ಸಹ ಸ್ಥಾಪಿಸಲಾಗಿದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ತಮಿಳುನಾಡಿನಲ್ಲಿ ತೀವ್ರ ಮಳೆಗೆ ಐವರ ಸಾವು: ನ.11ರವರೆಗೆ ರೆಡ್ ಅಲರ್ಟ್ ಘೋಷಣೆ
Tamil Nadu | Streets severely waterlogged in Kodambakkam and Ashok Nagar areas of Chennai due to heavy rainfall pic.twitter.com/WGxyC45T1B
— ANI (@ANI) November 11, 2021
ತಮಿಳುನಾಡಿನ ಕೃಷ್ಣಗಿರಿ, ಧರ್ಮಪುರಿ, ಈರೋಡ್, ಪೆರಂಬಲೂರು, ಅರಿಯಲೂರ್, ಮೈಲಾಡುತುರೈ, ಕಡಲೂರು, ವಿಲ್ಲುಪುರಂ, ಚೆಂಗಲ್ಪಟ್ಟು ಮತ್ತು ಕಾಂಚೀಪುರಂ ಜಿಲ್ಲೆಗಳಲ್ಲಿ ಶುಕ್ರವಾರ ಬೆಳಿಗ್ಗೆ 8.30 ರವರೆಗೆ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ಈ ಜಿಲ್ಲೆಗಳಲ್ಲಿ 115.6 ಮಿಲಿಮೀಟರ್ಗಳಿಂದ 204.4 ಮಿಲಿಮೀಟರ್ಗಳ ನಡುವೆ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ.
’ರಾಜ್ಯ ಸರ್ಕಾರವು ಮುಂದಿನ ಎರಡು ದಿನಗಳಲ್ಲಿ ಮಳೆಯ ಪರಿಣಾಮವನ್ನು ನಿರ್ಣಯಿಸಲಿದ್ದು. ಆರ್ಥಿಕ ನೆರವು ಪಡೆಯಲು ಕೇಂದ್ರ ಸರ್ಕಾರವನ್ನು ಸಂಪರ್ಕಿಸಲಾಗುತ್ತದೆ’ ಎಂದು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರನ್ನು ಉಲ್ಲೇಖಿಸಿ ದಿ ಹಿಂದೂ ವರದಿ ಮಾಡಿದೆ.
ತಮಿಳುನಾಡಿನ 90 ಪ್ರಮುಖ ಜಲಾಶಯಗಳಲ್ಲಿ 53 ಜಲಾಶಯಗಳು ಬುಧವಾರದ ವೇಳೆಗೆ 76% ಸಂಗ್ರಹವನ್ನು ದಾಟಿವೆ ಎಂದು ಪಿಟಿಐ ವರದಿ ಮಾಡಿದೆ. 14,138 ಕೆರೆಗಳ ಪೈಕಿ 9,153 ಕೆರೆಗಳಲ್ಲಿ ನೀರಿನ ಸಂಗ್ರಹಣೆ ಶೇ 50 ರಷ್ಟು ದಾಟಿದೆ. 3,691 ಕೆರೆಗಳು ಶೇ 100 ರಷ್ಟು ಭರ್ತಿಯಾಗಿವೆ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ: ಕನ್ಯಾಕುಮಾರಿಯಲ್ಲಿ ದಲಿತ ಯುವಕನ ಅನುಮಾನಸ್ಪದ ಸಾವು: ಮರ್ಯಾದೆಗೇಡು ಹತ್ಯೆ ಆರೋಪ