ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯಲ್ಲಿ ಅನುಮಾನಸ್ಪದ ರೀತಿಯಲ್ಲಿ 28 ವರ್ಷದ ದಲಿತ ಯುವಕನ ಶವ ಪತ್ತೆಯಾಗಿದ್ದು, ಮೃತ ಸಂಬಂಧಿಕರು ಇದು ಮರ್ಯಾದೆಗೇಡು ಹತ್ಯೆ ಎಂದು ಆರೋಪಿಸಿದಾರೆ. ಆದರೆ, ಪೊಲೀಸರು ಈ ಸಾವನ್ನು ಆತ್ಮಹತ್ಯೆ ಎಂದು ಹೇಳಿದ್ದಾರೆ.
ಮೃತ ಸುರೇಶ್ ಕುಮಾರ್ ಅನ್ಯ ಜಾತಿಯ ಯುವತಿಯನ್ನು ಪ್ರೀತಿಸುತ್ತಿದ್ದ ಕಾರಣ ಇದು ಮರ್ಯಾದಗೇಡು ಹತ್ಯೆ, ಯುವತಿಯ ಸಂಬಂಧಿಕರೇ ಆತನನ್ನು ಕೊಂದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಸುರೇಶ್ ಕುಮಾರ್ ಮೃತದೇಹ ಸ್ವೀಕರಿಸಲು ನಿರಾಕರಿಸಿರುವ ಸಂಬಂಧಿಕರು ಕನ್ಯಾಕುಮಾರಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಮೃತನ ಸಂಬಂಧಿಕರು ಭಾರತೀಯ ದಂಡ ಸಂಹಿತೆ (ಐಪಿಸಿ) 302 (ಕೊಲೆ) ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸುವಂತೆ ಪೊಲೀಸರನ್ನು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಮರ್ಯಾದೆಗೇಡು ಹತ್ಯೆ: ಯುವತಿಯ ಎದುರೇ ಪ್ರಿಯಕರನ ಕೊಲೆ
ಮೃತ ಸುರೇಶ್ ಕುಮಾರ್ ಬಿಕಾಂ ಪದವೀಧರರಾಗಿದ್ದು, ಅವರು ಕನ್ಯಾಕುಮಾರಿ ಜಿಲ್ಲೆಯ ನಾಗರಕೋಯಿಲ್ ಬಳಿಯ ತೋವಲೈ ಪುದೂರಿನ ನಿವಾಸಿಯಾಗಿದ್ದಾರೆ. ಪೇಂಟಿಂಗ್ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದರು. ಕಟ್ಟುಪುತ್ತೂರಿನ ಅನ್ಯ ಜಾತಿಯ ಯುವತಿಯನ್ನು ಪ್ರೀತಿಸುತ್ತಿದ್ದರು. ಯುವಕನ ಮೃತದೇಹ ಯುವತಿ ಮನೆಯಿಂದ ಕೆಲವೇ ಗಜಗಳಷ್ಟು ದೂರದಲ್ಲಿ ಪತ್ತೆಯಾಗಿದೆ.
ಮೃತರ ಸಹೋದರ ಎಸ್. ಸುಮನ್ ಆನಂದ್ ಮಾತನಾಡಿ, ’ಸುರೇಶ್ ಕಳೆದ ಎಂಟು ವರ್ಷಗಳಿಂದ ಕಟ್ಟುಪುತ್ತೂರು ಗ್ರಾಮದ ಯುವತಿಯೊಂದಿಗೆ ಸಂಬಂಧ ಹೊಂದಿದ್ದರು. ಇಬ್ಬರು ಪದವಿಪೂರ್ವ ಕಾಲೇಜಿನ ವ್ಯಾಸಂಗ ಮಾಡುವ ಸಮಯದಲ್ಲಿ ಭೇಟಿಯಾಗಿದ್ದರು” ಎಂದಿದ್ದಾರೆ.
“ಯುವತಿಯ ಮನೆಯಲ್ಲಿ ಆಕೆಯ ಮದುವೆಗೆ ತಯಾರಿ ನಡೆಸುತ್ತಿದ್ದ ಕಾರಣ ಸೆಪ್ಟೆಂಬರ್ನಲ್ಲಿ, ನನ್ನ ಸಹೋದರ ಮತ್ತು ಆತನ ಸ್ನೇಹಿತ ಯುವತಿಯ ಕುಟುಂಬವನ್ನು ಭೇಟಿಯಾಗಿ ಮದುವೆಗೆ ಅನುಮತಿ ಕೇಳಲು ಹೋಗಿದ್ದರು. ಆಕೆಯ ಮನೆಯವರು ತಕ್ಷಣ ಪ್ರತಿಕ್ರಿಯಿಸದಿದ್ದರೂ, ಸಮಸ್ಯೆಯನ್ನು ಚರ್ಚಿಸಲು ನಮ್ಮನ್ನು ತಮ್ಮ ಸಮುದಾಯಕ್ಕೆ ಸೇರಿದ ವಕೀಲರ ಮನೆಗೆ ಕರೆದಿದ್ದರು. ಸೆಪ್ಟೆಂಬರ್ 18 ರಂದು ಪ್ರತಿ ಕುಟುಂಬದ ನಾಲ್ವರು ಸದಸ್ಯರು ವಕೀಲರ ಮನೆಯಲ್ಲಿ ಜಮಾಯಿಸಿದ್ದೇವು. ಸಭೆಯಲ್ಲಿ ಮಹಿಳೆಯ ಸಹೋದರರು ಸುರೇಶ್ಗೆ ತಮ್ಮ ಸಹೋದರಿಯೊಂದಿಗಿನ ಸಂಬಂಧವನ್ನು ಕೊನೆಗೊಳಿಸದಿದ್ದರೆ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು” ಎಂದಿದ್ದಾರೆ.
ಇದನ್ನೂ ಓದಿ: ಮಗಳನ್ನೇ ಕೊಂದ ತಂದೆ: ಚಿಕ್ಕಮಗಳೂರಿನಲ್ಲಿ ಕ್ರೂರ ಮರ್ಯಾದಾಗೇಡು ಹತ್ಯೆ
ಸುರೇಶ್ನ ಇನ್ನೊಬ್ಬ ಸಂಬಂಧಿ ರಾಧಿಕಾ ಮಾತನಾಡಿ, “ಆತನ ಸಾವಿಗೆ ಒಂದು ದಿನ ಮೊದಲು, ಯುವತಿಯ ಸಂಬಂಧಿ ಇಬ್ಬರನ್ನೂ ಒಟ್ಟಿಗೆ ಕಂಡರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಭಾನುವಾರ ಬೆಳಿಗ್ಗೆ ಯುವತಿಯ ಸಹೋದರ ಮತ್ತು ಪೊಲೀಸ್ ಅಧಿಕಾರಿ ನಮ್ಮ ಮನೆಗೆ ಭೇಟಿ ನೀಡಿದ್ದರು ಮತ್ತು ಬೂತಪಾಂಡಿ ಪೊಲೀಸ್ ಠಾಣೆಗೆ ತಕ್ಷಣ ಭೇಟಿ ನೀಡುವಂತೆ ಸುರೇಶ್ ಅವರಿಗೆ ತಿಳಿಸಿದ್ದರು” ಎಂದಿದ್ದಾರೆ.
ಸುರೇಶ್ ಅವರ ಬಳಿ ಯುವತಿಯ ಗುರುತಿನ ಚೀಟಿ ಸೇರಿದಂತೆ ದಾಖಲೆಗಳು ಇದ್ದವು. ಅದನ್ನು ಪೊಲೀಸರಿಗೆ ಹಸ್ತಾಂತರಿಸಲು ಮನೆಯಿಂದ ಹೋಗಿದ್ದರು. ಸಂಜೆಯಾದರೂ ಸುರೇಶ್ ಹಿಂತಿರುಗದ ಕಾರಣ, ನಾವು ಅವನನ್ನು ಹುಡುಕುತ್ತಾ ಪೊಲೀಸ್ ಠಾಣೆಗೆ ಹೋದೆವು, ಆದರೆ, ಪೊಲೀಸರು ಅವರು ಬಂದಿಲ್ಲ ಎಂದು ಹೇಳಿದರು. ನಂತರ, ನಾವು ಯುವತಿಯ ಮನೆಗೆ ಭೇಟಿ ನೀಡಲು ನಿರ್ಧರಿಸಿದ್ದೇವು. ಆದರೆ ಆಕೆಯ ಮನೆಗೆ ಕೆಲವು ಗಜಗಳಷ್ಟು ಮೊದಲೇ ನಾವು ಸುರೇಶನ ಬೈಕ್ ಸಿಕ್ಕಿತು. ಹತ್ತಿರದ ಜಮೀನಿನಲ್ಲಿ ಆತ ಜೀವನ್ಮರಣ ಹೋರಾಟ ನಡೆಸುತ್ತಿದ್ದರು. ಕೂಡಲೇ ಖಾಸಗಿ ಆಸ್ಪತ್ರೆಗಳಿಗೆ ಕರೆದೊಯ್ದರೂ ಚಿಕಿತ್ಸೆ ನೀಡಲು ನಿರಾಕರಿಸಿದರು. ಆದ್ದರಿಂದ, ನಾವು ಅವರನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದೆವು, ಅಲ್ಲಿ ವೈದ್ಯರು ಸುರೇಶ್ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದರು” ಎಂದು ವಿವರವನ್ನು ಬಿಚ್ಚಿಟ್ಟಿದ್ದಾರೆ.
ಸುರೇಶ್ ಸಾವು ಮತ್ತು ನನ್ನ ಮೇಲಿನ ಹಲ್ಲೆಯ ಬಗ್ಗೆ ನಾವು ಪೊಲೀಸರಿಗೆ ದೂರು ನೀಡಿದ್ದೇವೆ. ಆದರೆ ಪೊಲೀಸರು ಎರಡೂ ದೂರುಗಳ ಮೇಲೆ ಎಫ್ಐಆರ್ ದಾಖಲಿಸಲು ನಿರಾಕರಿಸಿದ್ದಾರೆ. ತನ್ನ ಸಹೋದರನ ದೇಹದ ವಿವಿಧ ಭಾಗಗಳಲ್ಲಿ ಗಾಯಗಳು ಕಂಡುಬಂದರೂ ಸಹ, ಅವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಹೇಳುತ್ತಿದ್ದಾರೆ ಎಂದು ಯುವಕನ ಕುಟುಂಬಸ್ಥರು ಆರೋಪಿಸಿದ್ದಾರೆ.
ಕನ್ಯಾಕುಮಾರಿ ಎಸ್ಪಿ ವಿ ಬದ್ರಿ ನಾರಾಯಣನ್, “ಕುಟುಂಬ ಸದಸ್ಯರ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ವಿಷ ಸೇವಿಸಿ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ನಮಗೆ ತಿಳಿಸಿದ್ದಾರೆ. ಹಾಗಾಗಿ ಐಪಿಸಿ ಸೆಕ್ಷನ್ 174 (ಅಸ್ವಾಭಾವಿಕ ಸಾವು) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದೇವೆ. ಆದರೆ, ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ. ತನಿಖೆಯ ಫಲಿತಾಂಶದ ಆಧಾರದ ಮೇಲೆ, ವಿಭಾಗಗಳನ್ನು ಬದಲಾಯಿಸಬಹುದು” ಎಂದಿದ್ದಾರೆ.
ಇದನ್ನೂ ಓದಿ: ಬರಗೂರು ಮರ್ಯಾದೆಗೇಡು ಹತ್ಯೆ ಪ್ರಕರಣ; ದುಡಿಮೆ ಬಡತನ ಕೊಟ್ಟಿತು, ಜಾತಿ ಕೊಲೆ ಮಾಡಿಸಿತು