ತಾವು ಎದುರಿಸುತ್ತಿರುವ ಹಲವು ಸಮಸ್ಯೆಗಳನ್ನು ಎತ್ತಿ ಹಿಡಿದು ಬಿಬಿಎಂಪಿ ಪೌರಕಾರ್ಮಿಕರು ಎಐಸಿಸಿಟಿಯು ನೇತೃತ್ವದ ‘ಬಿಬಿಎಂಪಿ ಪೌರಕಾರ್ಮಿಕರ ಸಂಘ’ದ ಅಡಿಯಲ್ಲಿ ಬೆಂಗಳೂರಿನಲ್ಲಿ ಬುಧವಾರ ಪ್ರತಿಭಟನೆ ನಡೆಸಿದ್ದಾರೆ. ಪೌರ ಕಾರ್ಮಿಕರ ಈ ಧರಣಿಯು ಅಕ್ಟೋಬರ್ 9 ರಂದು ಪ್ರಾರಂಭವಾಗಿದ್ದು, ಇಂದಿನ ಮೂರನೆ ಹಂತದ ಜಾಥಾವೂ ಬಿಬಿಎಂಪಿ ವಲಯ ಕಚೇರಿಯಲ್ಲಿ ಮುಕ್ತಾಯಗೊಂಡಿತು. ನೂರಾರು ಪೌರಕಾರ್ಮಿಕರು ತಮ್ಮ ಹಕ್ಕುಗಳಿಗೆ ಒತ್ತಾಯಿಸಿ ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.
ಪೌರಕಾರ್ಮಿಕರಾಗಿ ದುಡಿಯುತ್ತಿರುವ ಚಾಲಕರು, ಸಹಾಯಕರು ಸೇರಿದಂತೆ ಎಲ್ಲ ಪೌರಕಾರ್ಮಿಕರ ಕೆಲಸವನ್ನು ಖಾಯಂಗೊಳಿಸಲು, ಕನಿಷ್ಠ ವೇತನವನ್ನು ಹೆಚ್ಚಳ ಮಾಡಲು, ಉಚಿತ ವಸತಿ ಮತ್ತು ಶಿಕ್ಷಣದ ವ್ಯವಸ್ಥೆಯನ್ನು ಕಲ್ಪಿಸಲು ಮತ್ತು ಇತರೆ ಸಾಮಾಜಿಕ-ಆರ್ಥಿಕ ಹಕ್ಕೊತ್ತಾಯಗಳನ್ನು ಪೌರಕಾರ್ಮಿಕರು ಸರ್ಕಾರದ ಮುಂದಿಟ್ಟಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಪೌರಕಾರ್ಮಿಕರ ಘನತೆಯ ಬದುಕು, ಗೌರವ, ವಸತಿ, ಶಿಕ್ಷಣಕ್ಕಾಗಿ 15 ದಿನಗಳ ಜಾಥಾ
“ಅಂಗಡಿಯವರು, ಮನೆಯವರು ಮತ್ತು ಬಿಬಿಎಂಪಿ ಅಧಿಕಾರಿಗಳು ತಮ್ಮೊಂದಿಗೆ ಗೌರವದಿಂದ ಮಾತನಾಡಬೇಕು. ಬಹುತೇಕ ಪೌರಕಾರ್ಮಿಕರು ಮಹಿಳೆಯರಾಗಿದ್ದು ಮತ್ತು ದಲಿತ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಅವರನ್ನು ಕೀಳಾಗಿ ಪರಿಗಣಿಸುವುದು ಸಹಜವಾಗಿ ಬಿಟ್ಟಿದೆ” ಎಂದು ಪೌರಕಾರ್ಮಿಕರು ಪ್ರತಿಭಟನೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಪೌರಕಾರ್ಮಿಕರು ಸಮಾಜಕ್ಕೆ ಬಹುಮುಖ್ಯ ಸೇವೆಯನ್ನು ಒದಗಿಸುತ್ತಿದ್ದರೂ, ಲೈಂಗಿಕ ಕಿರುಕುಳ ಮತ್ತು ಜಾತಿ ದೌರ್ಜನ್ಯ ತಪ್ಪಿದ್ದಲ್ಲ. ಮತ್ತೊಂದೆಡೆಗೆ ಕುಡಿಯುವ ನೀರು, ಶೌಚಾಲಯ, ಸುರಕ್ಷತಾ ಸಲಕರಣೆ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸದೆ ಘನತೆಯುತ್ತ ಕೆಲಸದ ವಾತಾವರಣವನ್ನು ಕಲ್ಪಿಸಲು ಬಿಬಿಎಂಪಿ ವಿಫಲವಾಗಿದೆ” ಎಂದು ಹೇಳಿದ್ದಾರೆ.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಪೌರಕಾರ್ಮಿಕರ ಕಾಳಜಿಗಳು ಮತ್ತು ಬೇಡಿಕೆಗಳಿಗೆ ಪರಿಹಾರ ನೀಡುವುದಾಗಿ ಬಿಬಿಎಂಪಿ ಪೂರ್ವ ವಲಯದ ಜಂಟಿ ಆಯುಕ್ತರಾದ ಶಿಲ್ಪಾ ಅವರು ಆಶ್ವಾಸನೆಯನ್ನು ನೀಡಿದ್ದಾರೆ. ಕೊರೊನಾ ಸಾಂಕ್ರಾಮಿಕಕ್ಕೆ ಬಲಿಯಾದ ಪೌರಕಾರ್ಮಿಕರ ಕುಟುಂಬದವರಿಗೆ ಪರಿಹಾರವನ್ನು ಈ ಕೂಡಲೇ ನೀಡಲಾಗುವುದು ಮತ್ತು ಪೌರಕಾರ್ಮಿಕರ ಇತರ ಬೇಡಿಕೆಗಳನ್ನು ಈಡೇರಿಸಲಾಗುವುದು” ಎಂದು ಅವರು ತಿಳಿಸಿದ್ದಾರೆ.
ಪೌರ ಕಾರ್ಮಿಕರ ಈ ಜಾಥಾವೂ ಅಕ್ಟೋಬರ್ 9, 2021 ರಂದು ಪ್ರಾರಂಭವಾಗಿತ್ತು. ಈಗಾಗಲೇ ಮಹದೇವಪುರ, ಆರ್.ಆರ್. ನಗರ ಮತ್ತು ಪೂರ್ವ ವಲಯದಲ್ಲಿ ಜಾಥಾ ನಡೆದಿದೆ. ಬೆಂಗಳೂರಿನಲ್ಲಿರುವ ಇತರ ಪೌರಕಾರ್ಮಿಕರನ್ನು ತಲುಪುವ ಪ್ರಯತ್ನವಾಗಿ ಈ ಜಾಥಾವನ್ನು ನಡೆಸಲಾಗುತ್ತಿದೆ.
ಇದನ್ನೂ ಓದಿ: ‘ಹಸಿ ಕಸ – ಒಣ ಕಸ ಬೇರ್ಪಡಿಸಿ ಕೊಡಿ’ ಎಂದ ಪೌರ ಕಾರ್ಮಿಕನ ಮೇಲೆ ಹಲ್ಲೆ: ಇಬ್ಬರ ಬಂಧನ