“ನಿಜವಾದ ಜನ ಸಾಮಾನ್ಯರ (ಆಮ್ ಆದ್ಮಿ) ಪಕ್ಷವೆಂದರೆ ಕಾಂಗ್ರೆಸ್. ಆಮ್ ಆದ್ಮಿ ಪಕ್ಷ ಹೇಳುವುದಕ್ಕೂ ಮಾಡುವ ಕೆಲಸಕ್ಕೂ ಭೂಮಿ, ಆಕಾಶದಷ್ಟು ಅಂತರವಿದೆ” ಎಂದು ಆಪ್ ಪಕ್ಷಕ್ಕೆ ರಾಜೀನಾಮೆ ನೀಡಿರುವ ಪಂಜಾಬ್ ಶಾಸಕಿ ರೂಪಿಂದರ್ ಕೌರ್ ರೂಬಿ ಹೇಳಿದ್ದಾರೆ.
ಪಂಜಾಬ್ನ ಬಟಿಂಡಾ ಗ್ರಾಮಾಂತರ ಶಾಸಕಿ ರೂಪಿಂದರ್ ಕೌರ್ ರೂಬಿ, ನವೆಂಬರ್ 9 ರಂದು ಆಮ್ ಆದ್ಮಿ ಪಕ್ಷಕ್ಕೆ ರಾಜೀನಾಮೆ ನೀಡಿ, ನವೆಂಬರ್ 10 ರಂದು ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ ಮತ್ತು ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿದು ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದ್ದಾರೆ.
’ಆಮ್ ಆದ್ಮಿ ಪಕ್ಷದ (ಎಎಪಿ) ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ದೆಹಲಿಯಿಂದ ಪಂಜಾಬ್ ಘಟಕವನ್ನು ನಿಯಂತ್ರಿಸುತ್ತಿದ್ದಾರೆ. ಎಎಪಿ ಪಂಜಾಬ್ ಅಧ್ಯಕ್ಷ, ಸಂಗ್ರೂರ್ ಸಂಸದ ಭಗವಂತ್ ಮಾನ್ ಅವರನ್ನು ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಲಿಲ್ಲ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ದೆಹಲಿ ಹೋರಾಟದಲ್ಲಿ ಮೃತಪಟ್ಟ ಹೆಚ್ಚಿನ ರೈತರು 3 ಎಕರೆಗಿಂಲೂ ಕಡಿಮೆ ಜಮೀನು ಹೊಂದಿರುವವರು!
[Live] Press conference at Punjab Bhawan, Chandigarh. https://t.co/0n4vOKWDos
— Charanjit S Channi (@CHARANJITCHANNI) November 10, 2021
ಕಾಂಗ್ರೆಸ್ಗೆ ಸೇರ್ಪಡೆಗೊಂಡ ನಂತರ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ರೂಪಿಂದರ್ ಕೌರ್ ರೂಬಿ, “ಆಮ್ ಆದ್ಮಿ ಪಕ್ಷ ಎಂದು ಎಎಪಿ ಹೇಳಿಕೊಂಡರೂ, ಆಮ್ ಆದ್ಮಿಯ ನಿಜವಾದ ಅಜೆಂಡಾವನ್ನು ಕಾಂಗ್ರೆಸ್ ಅನುಸರಿಸುತ್ತಿದೆ. ಕಳೆದ 50 ದಿನಗಳಲ್ಲಿ ಕಾಂಗ್ರೆಸ್ನ ಸಾಧನೆಯಿಂದ ನಾನು ಪ್ರಭಾವಿತಳಾಗಿದ್ದೇನೆ” ಎಂದಿದ್ದಾರೆ.
“ಪಂಜಾಬ್ ಎಎಪಿ ಘಟಕವನ್ನು ದೆಹಲಿಯಿಂದ ಕೇಜ್ರಿವಾಲ್ ನಿಯಂತ್ರಿಸುತ್ತಿದ್ದಾರೆ. ಭಗವಂತ್ ಮಾನ್ ಅವರನ್ನು ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಬೇಕು ಎಂದು ನಾನು ಒತ್ತಾಯಿಸುತ್ತಿದ್ದೆ. ಆದರೆ ಯಾರೂ ಕೇಳಲಿಲ್ಲ, ಆದ್ದರಿಂದ ನಾನು ಪಕ್ಷವನ್ನು ತೊರೆದು ಕಾಂಗ್ರೆಸ್ ಸೇರಿದ್ದೇನೆ” ಎಂದು ತಿಳಿಸಿದ್ದಾರೆ.
ಶಾಸಕಿ ರೂಪಿಂದರ್ ಕೌರ್ ರೂಬಿಯ ಹೊರತಾಗಿ ಮೂರರಿಂದ ನಾಲ್ಕು ಮಂದಿ ಶಾಸಕರು ಕೂಡ ಮುಂದಿನ ದಿನಗಳಲ್ಲಿ ಎಎಪಿ ತೊರೆದು ಕಾಂಗ್ರೆಸ್ ಸೇರಲು ಸರತಿ ಸಾಲಿನಲ್ಲಿದ್ದಾರೆ ಎಂದು ಮೂಲಗಳು ಹೇಳಿವೆ. ಹೆಚ್ಚಿನ ಶಾಸಕರು ಪಕ್ಷ ತೊರೆದರೆ, ಆಪ್ ಪಂಜಾಬ್ ವಿಧಾನಸಭೆಯಲ್ಲಿ ಪ್ರಮುಖ ವಿರೋಧ ಪಕ್ಷದ ಸ್ಥಾನಮಾನವನ್ನು ಕಳೆದುಕೊಳ್ಳುತ್ತದೆ ಎನ್ನಲಾಗಿದೆ.
2017 ರ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಎಎಪಿ 20 ಸ್ಥಾನಗಳನ್ನು ಗೆದ್ದು ವಿಧಾನಸಭೆಯಲ್ಲಿ ಪ್ರಮುಖ ಪ್ರತಿಪಕ್ಷವಾಯಿತು. ಶಿರೋಮಣಿ ಅಕಾಲಿದಳ (ಎಸ್ಎಡಿ) ಕೇವಲ 15 ಶಾಸಕರೊಂದಿಗೆ ಮೂರನೇ ಸ್ಥಾನದಲ್ಲಿದೆ.
ಇದನ್ನೂ ಓದಿ: ಬಹುಜನ ಭಾರತ; ದೆಹಲಿಯಲ್ಲೊಂದು ಅಜ್ಞಾತ ತಮಿಳ್ಕನ್ನಡಿಗ ಲೋಕ!